ಭೀಮಾ ಕೋರೆಗಾಂವ್ ಎಲ್ಗರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಮಹಿಳೆ ಸೇರಿದಂತೆ ಮೂವರನ್ನು NIA ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರುಗಳು ಸಿಪಿಐ (ಮಾವೋವಾದಿ) ಸಂಘಟನೆಯವರು ಎಂಬುದು ಅವರ ಆರೋಪವಾಗಿದೆ.
ಸಾಗರ್ ತತ್ಯಾರಾಮ್ ಗೂರ್ಖೆ (32) ಮತ್ತು ರಮೇಶ್ ಮುರ್ಲಿಧರ್ ಗೈಚೋರ್ (36) ಅವರನ್ನು ಸೋಮವಾರ ಬಂಧಿಸಲಾಗಿದ್ದು, ಜ್ಯೋತಿ ರಘೋಬಾ ಜಗ್ತಾಪ್ (33) ಅವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು NIA ವಕ್ತಾರರು ತಿಳಿಸಿದ್ದಾರೆ. ಇವರೆಲ್ಲರೂ ಪುಣೆಯ ನಿವಾಸಿಗಳು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಸಿಪಿಐ (ಮಾವೋವಾದಿ)ಯ ಸಂಘಟನೆಯಾದ ಕಬೀರ್ ಕಲಾ ಮಂಚ್ ಸದಸ್ಯರಾಗಿದ್ದಾರೆ ಎಂದು ಅಧಿಕಾರಿ ಆರೋಪಿಸಿದ್ದಾರೆ.
ಡಿಸೆಂಬರ್ 31, 2017 ರಂದು ಪುಣೆಯ ಶನಿವಾರವಾಡದಲ್ಲಿ ಕಬೀರ್ ಕಲಾ ಮಂಚ್ ಆಯೋಜಿಸಿದ್ದ ಎಲ್ಗರ್ ಪರಿಷತ್ ಕಾರ್ಯಕ್ರಮಕ್ಕೆ ಈ ಪ್ರಕರಣವು ಸಂಬಂಧಿಸಿದೆ. ಅಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಯಿತು, ವಿವಿಧ ಜಾತಿ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿ, ಜನರ ಜೀವನ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ರಾಜ್ಯವ್ಯಾಪಿ ಆಂದೋಲನ ನಡೆಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ ಎನ್ಐಎಗೆ ವರ್ಗಾವಣೆ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ..
ಈ ಪ್ರಕರಣದಲ್ಲಿ ಪುಣೆ ಪೊಲೀಸರು ಕ್ರಮವಾಗಿ ನವೆಂಬರ್ 15, 2018 ಮತ್ತು ಫೆಬ್ರವರಿ 21, 2019 ರಂದು ಚಾರ್ಜ್ಶೀಟ್ ಮತ್ತು ಪೂರಕ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಎಫ್ಐಆರ್ನಲ್ಲಿ ಗೋರ್ಖೆ, ಗೈಚೋರ್ ಮತ್ತು ಜಗ್ತಾಪ್ ಹೆಸರಿಸಲಾಗಿದೆ. ಈ ವರ್ಷದ ಜನವರಿ 24 ರಂದು NIA ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಆನಂದ್ ತೆಲ್ತುಂಬ್ಡೆ ಮತ್ತು ಗೌತಮ್ ನವಲಖಾ ಅವರನ್ನು ಏಪ್ರಿಲ್ 14 ರಂದು ಬಂಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದಲ್ಲದೆ, ಉತ್ತರ ಪ್ರದೇಶದ ಗೌತಮ್ ಬುದ್ಧನಗರದ ನಿವಾಸಿ ಮತ್ತು ದೆಹಲಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹನಿಬಾಬು ಮುಸಲಿಯಾವೀರ್ತಿಲ್ ತರೈಲ್ (54) ಅವರನ್ನು ಜುಲೈ 28 ರಂದು ಬಂಧಿಸಲಾಯಿತು.
ಗೋರ್ಖೆ, ಗೈಚೋರ್ ಮತ್ತು ಜಗ್ತಾಪ್ ಅವರು ನಕ್ಸಲ್ ಚಟುವಟಿಕೆಗಳು ಮತ್ತು ಮಾವೋವಾದಿ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದಾರೆ ಮತ್ತು ಬಂಧಿತ ಇತರ ಆರೋಪಿಗಳೊಂದಿಗೆ ಸಹ-ಸಂಚುಕೋರರು ಎಂದು NIA ಅಧಿಕಾರಿ ಹೇಳಿದ್ದಾರೆ.
ಬಂಧಿತ ಮೂವರು ಆರೋಪಿಗಳನ್ನು ಮುಂಬೈನ ವಿಶೇಷ NIA ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಅವರನ್ನು ನಾಲ್ಕು ದಿನಗಳ NIA ಕಸ್ಟಡಿಗೆ ಕಳುಹಿಸಲಾಗಿದೆ. ಇದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಹಲವಾರು ಚಿಂತಕರು, ವಿದ್ವಾಂಸರು ಮತ್ತು ಹೋರಾಟಗಾರರನ್ನು ಇದೇ ಕೇಸಿನಲ್ಲಿ ಬಂಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಸದರಿ ಪ್ರಕರಣದಲ್ಲಿ ಸಂಘಪರಿವಾರದ ಸಂಘಟನೆಯೊಂದು ಗಲಭೆಗೆ ಕರೆ ನೀಡಿ, ಭೀಮಾ ಕೊರೆಗಾಂವ್ನಲ್ಲಿ ಕೊರೆಗಾಂವ್ ವೀರರನ್ನು ಸ್ಮರಿಸಿ ವಾಪಸ್ಸು ಬರುತ್ತಿರುವವರ ಮೇಲೆ ಹಿಂಸಾಚಾರ ನಡೆದಿತ್ತು. ಆದರೆ, ಅದರ ಕೆಲವು ದಿನಗಳ ನಂತರ ಹಲ್ಲೆಗೊಳಗಾದ ಸಂಘಟನೆಯೇ ಹಿಂಸೆಗೆ ಕಾರಣವೆಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.
ಇದೆಲ್ಲಾ ನಡೆದಾಗ ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಸರ್ಕಾರವೇ ಅಧಿಕಾರಲ್ಲಿತ್ತು. ಅಲ್ಲಿಂದ ಮುಂದೆ, ಇದ್ದಕ್ಕಿದ್ದಂತೆ ಈ ಹಿಂಸಾಚಾರಕ್ಕೆ (ಈಗ ಬಂಧಿತವಾಗಿರುವ) ವಿದ್ವಾಂಸರು ಕಾರಣವೆಂದು ಇನ್ನೊಂದು ಪ್ರಕರಣ ದಾಖಲಿಸಿ ಬಂಧನಗಳು ಆರಂಭವಾದವು. ದೇಶದ ಮತ್ತು ಅಂತರ್ರಾಷ್ಟ್ರೀಯ ಮಟ್ಟದ ಹಲವಾರು ಚಿಂತಕರು ಈ ಬಂಧನಗಳನ್ನು ಖಂಡಿಸಿದ್ದರು. ಈಗ ಅದರ ಮುಂದುವರಿಕೆಯಾಗಿ ಈ ಬಂಧನಗಳು ನಡೆದಿವೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್; ಪ್ರಾಧ್ಯಾಪಕರ ಮೇಲಿನ NIA ಕಿರುಕುಳಕ್ಕೆ ವಿದ್ಯಾರ್ಥಿಗಳ ಖಂಡನೆ