ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ರಾಕೇಶ್ ರಂಜನ್ ಮತ್ತು ಪ್ರೇಮ್ ಕುಮಾರ್ ವಿಜಯನ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ನೀಡುತ್ತಿರುವ ಕಿರುಕುಳವನ್ನು ಜೆಎನ್ಯು ಮತ್ತು ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಖಂಡಿಸಿದ್ದಾರೆ.
2018ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾಲೇಜಿನ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಾದ ರಂಜನ್ ಮತ್ತು ಪ್ರೇಮ್ ಕುಮಾರ್ ವಿಜಯನ್ ಅವರನ್ನು ತನಿಖಾ ಸಂಸ್ಥೆಯು ಶುಕ್ರವಾರ ಪ್ರಶ್ನಿಸಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ 12 ಜನ ಮಾನವ ಹಕ್ಕುಗಳ ಹೋರಾಟಗಾರರನ್ನು ಭಯೋತ್ಪಾದನೆಯ ಆರೋಪದಡಿ ಬಂಧಿಸಲಾಗಿದೆ. ಅವರಲ್ಲಿ ದೆಹಲಿ ವಿಶ್ವವಿದ್ಯಾಲಯದ ಮತ್ತೊಬ್ಬ ಸಹಾಯಕ ಪ್ರಾಧ್ಯಾಪಕ ಹನಿ ಬಾಬು ಎಂ.ಟಿ. ಅವರೂ ಸೇರಿದ್ದಾರೆ.
ರಂಜನ್ ಜೆಎನ್ಯುನ ಆರ್ಥಿಕ ಅಧ್ಯಯನ ಮತ್ತು ಯೋಜನಾ ಕೇಂದ್ರದಿಂದ ಬಂದವರಾಗಿದ್ದು, ತಮ್ಮ ಎಂಎ ಮತ್ತು ಎಂಫಿಲ್ ಪದವಿಯನ್ನು ಇಲ್ಲಿಂದಲೇ ಪಡೆದಿದ್ದರು. ಈಗ ಪಿಎಚ್ಡಿ ಮಾಡುತ್ತಿದ್ದಾರೆ. ಪ್ರಸ್ತುತ ತಾನು ಪದವಿ ಪಡೆದಿದ್ದ ದೆಹಲಿ ವಿವಿಯಲ್ಲಿಯೇ ಭೋಧಕರಾಗಿದ್ದಾರೆ. ಅಲ್ಲಿ ಅಮಿತ್ ಭದುರಿ, ಜಯತಿ ಘೋಷ್ ಮತ್ತು ಪ್ರಭಾತ್ ಪಟ್ನಾಯಕ್ ಸಹ ಇದ್ದಾರೆ.
ಭೀಮಾ ಕೋರೆಗಾಂವ್ ಘಟನೆಗೆ ಸಂಬಂಧಿಸಿದ ಸುಳ್ಳು ಆರೋಪಗಳ ಮೇಲೆ ಹಲವಾರು ವ್ಯಕ್ತಿಗಳನ್ನು ಹಿಂಸಿಸಲಾಗುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ. ಆಘಾತಕಾರಿ ಸಂಗತಿಯೆಂದರೆ ರಾಕೇಶ್ ರಂಜನ್ ಅವರಂತೆಯೇ ಇನ್ನೂ ಯಾರಾದರೂ ಇದೇ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೇನೋ’ ಎಂದು ವಿದ್ಯಾರ್ಥಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅವರು ಗಂಭೀರ ಶಿಕ್ಷಕರು ಮಾತ್ರವಲ್ಲ, ಯಾವುದೇ ಹಿಂಸಾಚಾರದಲ್ಲಿ ಭಾಗಿಯಾಗಲೂ ಅವರು ಒಪ್ಪುವುದಿಲ್ಲ. ಇಂತಹ ಮುಗ್ಧ ವ್ಯಕ್ತಿಗಳ ಮೇಲಿನ ಈ ಕಿರುಕುಳ ತಕ್ಷಣವೇ ಕೊನೆಗೊಳ್ಳಬೇಕು ಎಂದು ನಾವು ಬಲವಾಗಿ ಪ್ರತಿಪಾದಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಂತಹ ಕೃತ್ಯಗಳು ನಮ್ಮ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ, ನಾಗರಿಕ ಸ್ವಾತಂತ್ರ್ಯಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿರುವ ಅವರು, ಸಾಂವಿಧಾನಿಕ ಕ್ರಮವನ್ನು ಕುಗ್ಗಿಸುವ ಹಾಗೂ ಶಿಕ್ಷಣ ತಜ್ಞರು ಮತ್ತು ಕಾರ್ಯಕರ್ತರ ಮೇಲಿನ ಉದ್ದೇಶಪೂರ್ವಕ ಕಿರುಕುಳವನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಷಯದಲ್ಲಿ ರಾಕೇಶ್ ರಂಜನ್ ವಿರುದ್ಧ ತನಿಖಾ ಸಂಸ್ಥೆಯು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ವಿದ್ಯಾರ್ಥಿ ಪ್ರಾಧ್ಯಾಪಕರು ಒತ್ತಾಯಿಸಿದ್ದಾರೆ.
ರಂಜನ್, ವಿಜಯನ್ ಮತ್ತು ಹನಿ ಬಾಬು ಅವರು, ನಿಷೇಧಿತ ಸಿಪಿಐ ಮಾವೋವಾದಿಗಳೊಂದಿಗಿನ ಸಂಪರ್ಕಕ್ಕಾಗಿ ನಾಗ್ಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ದೆಹಲಿ ವಿವಿಯ ರಾಜಕೀಯ ವಿಜ್ಞಾನದ ಮಾಜಿ ಸಹಾಯಕ ಪ್ರಾಧ್ಯಾಪಕ ಜಿ.ಎನ್ ಸಾಯಿಬಾಬ ಅವರ ರಕ್ಷಣಾ ಮತ್ತು ಬಿಡುಗಡೆ ಸಮಿತಿಯ ಭಾಗವಾಗಿದ್ದಾರೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ದೆಹಲಿ ಪ್ರಾಧ್ಯಾಪಕನ ಬಂಧನ
ಪ್ರಗತಿಪರ ಚಿಂತಕರು ಮತ್ತು ಪ್ರಾಧ್ಯಾಪಕರನ್ನು ಜೈಲಿಗೆ ತಳ್ಳುತ್ತಿರುವ ಆಡಳಿತಾರೂಢರ ವಿರುದ್ಧ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದನಿ ಎತ್ತಬೇಕು.