Homeಕರ್ನಾಟಕಇದು ಕೆ.ಎಲ್.‌ ಅಶೋಕ್‌ರವರ ವೈಯಕ್ತಿಕ ಸಮಸ್ಯೆ ಅಲ್ಲ. ಸುಮ್ಮನಿದ್ದರೆ ನಾಳೆ ಎಲ್ಲರಿಗೂ ಹೀಗಾಗುವುದರಲ್ಲಿ ಸಂಶಯವಿಲ್ಲ.

ಇದು ಕೆ.ಎಲ್.‌ ಅಶೋಕ್‌ರವರ ವೈಯಕ್ತಿಕ ಸಮಸ್ಯೆ ಅಲ್ಲ. ಸುಮ್ಮನಿದ್ದರೆ ನಾಳೆ ಎಲ್ಲರಿಗೂ ಹೀಗಾಗುವುದರಲ್ಲಿ ಸಂಶಯವಿಲ್ಲ.

ಕೊಪ್ಪ ಪೊಲೀಸ್‌ ಠಾಣೆಯ ಪೇದೆ ರಮೇಶ್‌, ಈ ಹಿಂದೆ ಇನ್ನೂ ಕೆಲವರಿಗೆ ಇದೇ ರೀತಿ ಅವಮಾನಿಸಿರುವುದು ಬೆಳಕಿಗೆ ಬಂದಿದ್ದು, ಉಪನ್ಯಾಸಕರೊಬ್ಬರು ಮಾತಾಡಿರುವ ಆಡಿಯೋ ವೈರಲ್‌ ಆಗಿದೆ.

- Advertisement -
- Advertisement -

ಕೋಮು ಸೌಹಾರ್ದ ಚಳವಳಿಯ ಮುಂಚೂಣಿ ಸಂಘಟಕ ಕೆ.ಎಲ್. ಅಶೋಕ್‌ ಅವರಿಗೆ ಸಂಬಂಧಿಸಿದ ಒಂದು ಸುದ್ದಿ ಮೂರು ದಿನಗಳಿಂದ ಸದ್ದು ಮಾಡಿದೆ. ಅವರು ಕುಟುಂಬದ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಕ್ಕೆ ಹೋಗಿದ್ದಾಗ ನೋ ಪಾರ್ಕಿಂಗ್‌ ಜಾಗದಲ್ಲಿ ಕಾರನ್ನು ನಿಲ್ಲಿಸಿಕೊಂಡಿದ್ದ (ಪಾರ್ಕಿಂಗ್‌ ಮಾಡಿ ಹೋಗಿಬಿಟ್ಟಿರಲಿಲ್ಲ) ಕಾರಣಕ್ಕೆ ಅವರಿಗೆ ಕಿರುಕುಳ ಕೊಟ್ಟಿರುವ ಪ್ರಕರಣವದು. ಅವರ ವಯಸ್ಸಾದ ಅತ್ತೆ ಮತ್ತು ಪುಟ್ಟ ಮಗಳಿನ ಎದುರಿಗೆ ಘಟನೆ ನಡೆದಿದೆ.


ಅಶೋಕ್‌ ಅವರ ತಂದೆಯ ಕಾರಿನಲ್ಲಿ ಹೋಗಿದ್ದಾಗ ಈ ಘಟನೆ ನಡೆಯಿತೆಂದು ಕೇಳಿ ಆ ಕಾರಣಕ್ಕೂ ಆಶ್ಚರ್ಯವೆನಿಸಿತು. ಏಕೆಂದರೆ ಪೊಲೀಸ್‌ ಪೇದೆಗಳು ಸಾಮಾನ್ಯವಾಗಿ ಕಾರಿನಲ್ಲಿ ಕುಳಿತವರ ಮೇಲೆ – ಅದರಲ್ಲೂ ಕೊಪ್ಪದಂತಹ ಪುಟ್ಟ ಪಟ್ಟಣದಲ್ಲಿ – ಜೋರು ಮಾಡುವುದು ಕಡಿಮೆ. ನಮ್ಮ ಇಡೀ ಪೊಲೀಸ್‌ ವ್ಯವಸ್ಥೆಯು ಬಡವರನ್ನು ನಡೆಸಿಕೊಳ್ಳುವ ರೀತಿ ಬೇರೆ, ಜೋರಿದ್ದವರನ್ನು ನಡೆಸಿಕೊಳ್ಳುವ ರೀತಿ ಬೇರೆ. ಅಂದರೆ ಇಲ್ಲಿ ಉದ್ದೇಶಪೂರ್ವಕವಾದುದೇನೋ ನಡೆದಿದೆ ಎಂಬುದು ಸ್ಪಷ್ಟ.

ಇದನ್ನೂ ಓದಿ: ಕೆ.ಎಲ್‌.ಅಶೋಕ್‌ರನ್ನು ಅಕಾರಣವಾಗಿ ನಿಂದಿಸಿದ ಕೊಪ್ಪ ಪೊಲೀಸ್‌ 

ಈ ಕಾರಣದಿಂದ ಇದಕ್ಕೊಂದು ಮಹತ್ವ ಬಂದಿದೆ. ಅಶೋಕ್‌ ಅದೇ ಪ್ರದೇಶದ, ಸಾಕಷ್ಟು ಜನರಿಗೆ ಪರಿಚಿತವಾಗಿರುವ ವ್ಯಕ್ತಿ. ಅವರ ಮದುವೆ ಸಾಂಪ್ರದಾಯಿಕವಾದ ರೀತಿಯಲ್ಲಿ ನಡೆಯಲಿಲ್ಲವೆಂದು ಸ್ಥಳೀಯವಾಗಿ ಕೆಂಗಣ್ಣಿಗೆ ಗುರಿಯಾದದ್ದರಿಂದ ಹಿಡಿದು, ಕೋಮುವಾದಿಗಳ ವಿರುದ್ಧ ನಿರಂತರವಾಗಿ ದನಿಯೆತ್ತಿದ್ದವರೆಗೆ ಆ ಪ್ರದೇಶದಲ್ಲೂ ಕೆಲಸ ಮಾಡಿದವರು. ಪೊಲೀಸ್‌ ಇಲಾಖೆಯಲ್ಲಿ ತಳಮಟ್ಟದಲ್ಲಿರುವ ಹಲವರು ಕೋಮುವಾದಿ ಮನಸ್ಥಿತಿ ಬೆಳೆಸಿಕೊಂಡಿದ್ದರೆ ಆಶ್ಚರ್ಯವಲ್ಲವಾದರೂ, ಅದನ್ನು ಅವರು ಸಾರ್ವಜನಿಕವಾಗಿ ಒಂದಷ್ಟು ಪ್ರಸಿದ್ಧರಾಗಿರುವ ವ್ಯಕ್ತಿಗಳ ಮೇಲೆ ತೋರಿಸುವುದಿಲ್ಲ. ಆದರೆ ಕುಟುಂಬ ಸಮೇತ ಖಾಸಗಿ ಕೆಲಸಕ್ಕೆ ಹೋಗಿದ್ದ ಸಾರ್ವಜನಿಕ ವ್ಯಕ್ತಿಯೊಬ್ಬರನ್ನು ಕ್ಷುಲ್ಲಕ ಕಾರಣ ಹಿಡಿದು ಅವಮಾನಿಸುವುದು, ಟಾರ್ಗೆಟ್‌ ಮಾಡುವುದು, ಇನ್ನೂ ಮುಂದಕ್ಕೆ ಹೋಗಿ ಕೇಸನ್ನೂ ದಾಖಲಿಸುವುದನ್ನು ಮಾಡುವ ಅಧಿಕಾರ ತಮಗಿದೆ ಎಂದು ಪೊಲೀಸರು ಭಾವಿಸಿದರೆ ಅಲ್ಲಿಗೆ ಬೀದಿಗಳಲ್ಲಿ ಸರ್ಕಾರೀ ಹಿಟ್ಲರ್‌ಗಿರಿ ಜಾರಿಯಾದಂತೆಯೇ. ಮುಂದಿನ ದಿನಗಳಲ್ಲಿ ಆಡಳಿತ ಪಕ್ಷದ ವಿರುದ್ಧ ಮಾತಾಡುವವರು ಅಂಗಡಿಗೆ ಹೋದಾಗಲೂ ಇಂಥದ್ದು ನಡೆಯಬಹುದು ಎಂದಾಗಿಬಿಡುತ್ತದೆ.

ಬೆಳಕಿಗೆ ಬಂದ ಪೇದೆ ರಮೇಶ್‌ರ ಇನ್ನೊಂದು ಪ್ರಕರಣ

ನಿರ್ದಿಷ್ಟವಾಗಿ ಈ ಪ್ರಕರಣಕ್ಕೆ ಬರುವುದಾದರೆ ರಮೇಶ್‌ ಎನ್ನುವ ಕೊಪ್ಪ ಠಾಣೆಯ ಪೇದೆಗೆ ಜನಸಾಮಾನ್ಯರ ಮೇಲೆ ಹರಿಹಾಯುವ ಮನೋಭಾವವಿರುವುದು ಹೊಸದೇನಲ್ಲ ಎಂಬುದಕ್ಕೆ ಇನ್ನೊಂದು ಸಾಕ್ಷ್ಯ ದೊರಕಿದೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಉಪನ್ಯಾಸಕರೊಬ್ಬರ ಮೇಲೆ ಹರಿಹಾಯ್ದು ಅವಮಾನಿಸಿರುವ ಕುರಿತು ಅವರು ಒಂದು ಆಡಿಯೋವನ್ನು ಕಳಿಸಿದ್ದು, ಕೊಪ್ಪ ಭಾಗದಲ್ಲಿ ವೈರಲ್‌ ಆಗಿದೆ. ಇಂಟೆಲಿಜೆನ್ಸ್‌ ಇಲಾಖೆಯಲ್ಲಿ ಕೆಲಸ ಮಾಡುವವರಲ್ಲಿ ಎರಡು ರೀತಿಯವರು ಇರುತ್ತಾರೆ. ಒಂದು, ಸಾರ್ವಜನಿಕ ಜೀವನದಲ್ಲಿರುವ ಎಲ್ಲರ ಜೊತೆಗೂ ಚೆನ್ನಾಗಿದ್ದು, ಮಾಹಿತಿ ಸಂಗ್ರಹಿಸಿ ಇಲಾಖೆಗೆ ನೀಡುವುದು. ಎರಡು, ಜನಪರ ಹೋರಾಟಗಾರರನ್ನು ತರಲೆಗಳೆಂದು ಬಗೆದು ಅವರ ವಿರುದ್ಧ ವೈಯಕ್ತಿಕ ಜಿದ್ದನ್ನು ಸಾಧಿಸುವ ರೀತಿಯಲ್ಲಿ ನಿರಂತರ ಕಿರುಕುಳ ನೀಡುವುದು. ಬಹುಕಾಲ ಗುಪ್ತಚರ ಇಲಾಖೆಯ ಭಾಗವಾಗಿದ್ದ ಈ ರಮೇಶ್‌ ಎರಡನೇ ಬಗೆಯವರಾಗಿರುವುದು ಸ್ಪಷ್ಟವಾಗಿದೆ.

ಕೆ.ಎಲ್ ಅಶೋಕ್ ರವರನ್ನು ನಿಂದಿಸಿದ್ದ ಕೊಪ್ಪ ಪೊಲೀಸ್‌ ಠಾಣೆಯ ಪೇದೆ ರಮೇಶ್‌, ಈ ಹಿಂದೆ ಇನ್ನೂ ಕೆಲವರಿಗೆ ಇದೇ ರೀತಿ ಅವಮಾನಿಸಿರುವುದು ಬೆಳಕಿಗೆ ಬಂದಿದ್ದು, ಉಪನ್ಯಾಸಕರೊಬ್ಬರು ಮಾತಾಡಿರುವ ಆಡಿಯೋ ವೈರಲ್‌ ಇಲ್ಲಿದೆ ಕೇಳಿ.

Posted by Naanu Gauri on Thursday, September 10, 2020

ಪೊಲೀಸ್‌ ಇಲಾಖೆಯೇ ನೆರವು ಕೇಳಿ, ಎನ್ನೆಸ್ಸೆಸ್‌ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಕೆಲಸ ಮಾಡಿಸಿ ನಂತರ ಸದರಿ ಉಪನ್ಯಾಸಕರನ್ನು ಕೆಟ್ಟದಾಗಿ ನಡೆಸಿಕೊಂಡಿದೆ. ಅದಕ್ಕೆ ಬೇರಾರಿಗಿಂತ ಇದೇ ಪೇದೆ ರಮೇಶ್‌ ಕಾರಣರಾಗಿದ್ದಾರೆ. ಅಂದರೆ ಪೊಲೀಸ್‌ ಇಲಾಖೆಯ ಕುರಿತು ಸಾರ್ವಜನಿಕ ವಲಯದಲ್ಲಿರುವ ಭಾವನೆಯನ್ನು ಪುಷ್ಟೀಕರಿಸುವ ರೀತಿಯಲ್ಲಿ ಅವರು ನಡೆದುಕೊಂಡಿದ್ದಾರೆ.

ಇಂತಹ ಪ್ರಕರಣ ತಡೆಯಲು ಏನು ಮಾಡಬೇಕು?

ಈ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳು ಮುಖ್ಯವಾಗುತ್ತವೆ. ಸಮಾಜದಲ್ಲಿನ ಕ್ರೌರ್ಯ, ಅಪರಾಧ ಹಾಗೂ ದೌರ್ಜನ್ಯಕಾರಿ ಮನೋಭಾವವು ಪುನರುತ್ಪತ್ತಿಯಾಗಬಾರದೆಂದರೆ, ಅದಕ್ಕೆ ತಕ್ಕುನಾದ ಸಮಾಜದ ನಿರ್ಮಾಣವಾಗಬೇಕು. ಆದರೆ, ಇವೆಲ್ಲವನ್ನೂ ತಡೆಯಲು ನಿಯೋಜಿತವಾಗಿರುವ ಪೊಲೀಸ್‌ ಇಲಾಖೆಯು ಕ್ರೌರ್ಯ ಹಾಗೂ ದೌರ್ಜನ್ಯಗಳನ್ನೇ ಬಳಸಿದರೆ, ದೀರ್ಘಕಾಲದಲ್ಲಿ ಇವನ್ನು ತಡೆಯುವುದು ಸಾಧ್ಯವೇ ಇಲ್ಲ. ಅದರಲ್ಲೂ ಇಂತಹ ದಬ್ಬಾಳಿಕೆಗೆ ಒಳಗಾಗುವುದು ಸಮಾಜದ ದುರ್ಬಲ ಸಮುದಾಯದ ಮೇಲೆಯೇ ಹೆಚ್ಚಾಗಿರುತ್ತದೆ. ಹಾಗಾಗಿ ಇದರ ಮೇಲೆ ಇಡೀ ಸಮಾಜ ಹಾಗೂ ನಿರ್ದಿಷ್ಟವಾಗಿ ಪೊಲೀಸ್‌ ಇಲಾಖೆಯು ಗಮನ ಹರಿಸುವ ಅಗತ್ಯವಿದೆ. ಅದರಲ್ಲೂ, ರಮೇಶ್‌ರಂತಹ ರೂಢಿಗತ ಅಪರಾಧಿ (Habitual offender)ಯ ಮೇಲೆ ಕ್ರಮ ತೆಗೆದುಕೊಳ್ಳುವ ಮೂಲಕ ಆರಂಭಿಸಬೇಕಿದೆ.

ಎರಡನೆಯದಾಗಿ, ಚುನಾವಣೆಯಲ್ಲಿ ಗೆದ್ದು ಬರುವ ಪಕ್ಷದ ಅಣತಿಗೆ ತಕ್ಕಂತೆ ಪೊಲೀಸರು ಸೈದ್ಧಾಂತಿಕ, ರಾಜಕೀಯ ವಿರೋಧಿಗಳನ್ನು ಮತ್ತು ಹೋರಾಟಗಾರರನ್ನು ಗುರಿ ಮಾಡುವುದನ್ನು ತಪ್ಪಿಸಬೇಕು. ಅದಕ್ಕಾಗಿ ಪೊಲೀಸರು ಪ್ರತಿಯೊಂದು ಪ್ರಕರಣವನ್ನು ನಿಭಾಯಿಸಬೇಕಾದ ರೀತಿಯ ಕುರಿತು ಕಟ್ಟುನಿಟ್ಟಾದ ಪ್ರೋಟೋಕಾಲ್‌ ಹಾಗೂ ನಿಯಮಾವಳಿಗಳನ್ನು ರೂಪಿಸಬೇಕು. ನಿರ್ದಿಷ್ಟವಾಗಿ ಈ ಪ್ರಕರಣದಲ್ಲಿ ಕೆ.ಎಲ್‌. ಅಶೋಕ್‌ ಅವರು ದೀರ್ಘಕಾಲದಿಂದ ಮಲೆನಾಡಿನಲ್ಲಿ ಬಲಪಂಥೀಯ ಸಂಘಟನೆಗಳು ಹಾಗೂ ಕೋಮುದ್ವೇಷದ ವಿರುದ್ಧ ಕೆಲಸ ಮಾಡುತ್ತಾ ಬಂದವರಾಗಿರುವುದರಿಂದ, ಆಡಳಿತಪಕ್ಷದ ಪ್ರಭಾವದ ವಾಸನೆ ಎದ್ದು ಹೊಡೆಯುತ್ತಿದೆ.

ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಈ ವಿಚಾರದಲ್ಲಿ ಪ್ರತಿಭಟನೆಗಳು ನಡೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ಸಂಘಟನೆಗಳು ಹಾಗೂ ನಾಯಕರುಗಳು ಕೊಪ್ಪ ಚಲೋ ಕಾರ್ಯಕ್ರಮವನ್ನು ಸಂಘಟಿಸಲು ಯೋಜಿಸಿದ್ದಾರೆ. ಈ ಸಂದರ್ಭವನ್ನು ಪೊಲೀಸರು ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಳ್ಳದೇ, ತಮ್ಮ ಇಲಾಖೆಯಲ್ಲಿರುವ ʼಸಾಮಾಜಿಕ ಸಮಸ್ಯೆʼಯನ್ನು ಬಗೆಹರಿಸುವ ಅವಕಾಶವನ್ನಾಗಿ ತೆಗೆದುಕೊಂಡರೆ ಎಲ್ಲರೂ ಗೆದ್ದಂತೆ. ಇಲ್ಲದಿದ್ದರೆ ಒಂದೆಡೆ ಸಾಮಾಜಿಕ ಹೋರಾಟಗಾರರೊಬ್ಬರಿಗಾದ ಅವಮಾನವನ್ನು ಸಾಮಾಜಿಕ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಸಂಘಟನೆಗಳು ಮುಂದಕ್ಕೆ ತರುತ್ತವೆ; ಪೊಲೀಸ್‌ ಇಲಾಖೆಯು ಜಿದ್ದಿನಿಂದ ಸಮಸ್ಯೆಯನ್ನು ಹೆಚ್ಚು ಮಾಡಿಕೊಂಡೇ ಹೋಗುತ್ತಿರುತ್ತಾರೆ. ಹಾಗಾಗದಂತೆ ಇಲಾಖೆಯ ಉನ್ನತ ಅಧಿಕಾರಿಗಳು ನೋಡಿಕೊಳ್ಳಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...