Homeಅಂಕಣಗಳುಕರ್ನಾಟಕದ ಗೃಹ ಸಚಿವರಾಗಿದ್ದ ಸಿ.ಎಂ ಪೂಣಚ್ಚರವರು ಮತ್ತು ಅವರ ಪೂರ್ಣಿಮಾ ಎಸ್ಟೇಟ್

ಕರ್ನಾಟಕದ ಗೃಹ ಸಚಿವರಾಗಿದ್ದ ಸಿ.ಎಂ ಪೂಣಚ್ಚರವರು ಮತ್ತು ಅವರ ಪೂರ್ಣಿಮಾ ಎಸ್ಟೇಟ್

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -4

ಪೂಣಚ್ಚನವರಿಗೆ ತಮ್ಮ ಮಕ್ಕಳು ಯಾರಾದರೂ ಸಕಲೇಶಪುರದ ತೋಟದಲ್ಲಿ ನೆಲೆಸಲಿ ಎಂದು ಆಸೆಯಿತ್ತು. ಗಂಡು ಮಕ್ಕಳು ಹೇಗೂ ಕೊಡಗಿನಲ್ಲಿಯೇ ನೆಲೆ ನಿಂತರು. ಹಿರಿಯ ಮಗಳು ವಿಜಯಾ ಮತ್ತು ಅಳಿಯ ಬ್ರಿಗೇಡಿಯರ್ ಕೆ.ಎಂ.ಮುತ್ತಣ್ಣ ಅವರಿಗೆ ಕೊಡಗಿನಲ್ಲಿ ಪಿತ್ರಾರ್ಜಿತ ತೋಟವಿತ್ತು. ಆದ್ದರಿಂದ ಕಿರಿಯ ಮಗಳು ಕಾವೇರಿ ನಂಬೀಶನ್ ಇಲ್ಲಿ ಆಸ್ಪತ್ರೆಯೊಂದನ್ನು ಸ್ಥಾಪಿಸಲು ಪ್ರಯತ್ನಿಸಿ, ಅವರು ಮೊದಲು ಯೋಚಿಸಿದಂತೆ ಸ್ಥಳ ದೊರೆಯದೆ ಅವರೂ ಕೊಡಗಿನಲ್ಲಿಯೇ ಆಸ್ಪತ್ರೆ ಪ್ರಾರಂಭಿಸಿದ್ದರಿಂದ ಪೂಣಚ್ಚನವರು ಇಲ್ಲಿ ತೋಟವನ್ನು ಇಟ್ಟುಕೊಂಡು ಮಾಡುವುದೇನು ಎಂಬ ತೀರ್ಮಾನಕ್ಕೆ ಬಂದರು. ಆ ವೇಳೆಯಲ್ಲಿ ರವೀಂದ್ರನಾಥರು ಕೂಡಾ ಗಣಪಯ್ಯನವರ ಕಾಲದಿಂದ ಹಾರ್ಲೆ ಮ್ಯಾನೇಜ್ ಮೆಂಟಿನಲ್ಲಿದ್ದ ಕೆಲವು ತೋಟಗಳನ್ನು ಬಿಟ್ಟುಕೊಟ್ಟಿದ್ದರು.

ಪೂರ್ಣಿಮಾ ಎಸ್ಟೇಟ್

ಈ ಎಲ್ಲ ಕಾರಣಗಳಿಂದ ಪೂಣಚ್ಚನವರೂ ತಮ್ಮ ಪೂರ್ಣಿಮಾ ಎಸ್ಟೇಟನ್ನು ಮಾರಾಟ ಮಾಡಲು  ನಿರ್ಧರಿಸಿದರು. 1989ರಲ್ಲಿ ಪೂರ್ಣಿಮಾ ಎಸ್ಟೇಟ್ ಪಕ್ಕದಲ್ಲಿಯೇ ಇದ್ದ ರಕ್ಷಿದಿಯ ಜಾನ್ ಲೋಬೋರವರ ಕುಟುಂಬವರ್ಗದವರಿಗೆ ಮಾರಾಟ ಮಾಡಿದರು. ಈಗ ಆ ತೋಟ ಅವರಲ್ಲಿಯೇ ಇದೆ.

ತೋಟ ಮಾರುವ ನಿರ್ಧಾರವೇನು ಪೂಣಚ್ಚನವರಿಗೆ ಸಂತಸದ ವಿಚಾರವಾಗಿರಲಿಲ್ಲ. ಅವರಿಗೆ ಗಣಪಯ್ಯನವರ ಸ್ನೇಹದಿಂದಾಗಿ ಸಕಲೇಶಪುರವೂ ತಮ್ಮ ಕೊಡಗಿನಷ್ಟೇ ಪ್ರಿಯವಾದ ಸ್ಥಳವಾಗಿತ್ತು. ತೋಟ ಮಾರಾಟವಾಗಿ ಹಸ್ತಾಂತರಿಸುವ ದಿನ ತೋಟದ ಎಲ್ಲ ಕಾರ್ಮಿಕರಿಗೂ ಒಂದಷ್ಟು ಕೊಡುಗೆ ಮತ್ತು ನೆನಪಿನ ಕಾಣಿಕೆಗಳನ್ನು ಕೊಟ್ಟರು. ಮತ್ತು ಕಾನೂನಾತ್ಮಕವಾಗಿ ಅವರು ಕೊಡಬೇಕಿದ್ದ ಎಲ್ಲ ಹಣವನ್ನೂ ಕೆಲಸಗಾರರಿಗೆ ನೀಡಿದರು. ಕೊನೆಯಲ್ಲಿ ನಿಮ್ಮೆಲ್ಲರಿಗೆ ನಾನು ಕೃತಜ್ಞ ಎಂದು ಹೇಳಿ ದುಖಃ ತಡೆಯಲಾಗದೆ ಕಣ್ಣೀರುಗರೆದರು. ಅಷ್ಟು ವರ್ಷಗಳ ಕಾಲ ಒಂದು ಕುಟುಂಬದಂತೆ ಬದುಕಿದ ಎಲ್ಲ ಕೆಲಸಗಾರರಿಗೂ ಇದು ಬಹಳ ನೋವಿನ ದಿನವಾಗಿತ್ತು.

ಪೂರ್ಣಿಮಾ ಎಸ್ಟೇಟ್ ಮಾರಾಟಮಾಡಿದ ಹಣದಲ್ಲಿ ಪೂಣಚ್ಚನವರು ಸಕಲೇಶಪುರದ ರೋಟರಿ ಶಾಲೆಗೆ ಐದು ಲಕ್ಷ ರೂಪಾಯಿಗಳ ಕೊಡುಗೆಯನ್ನು ನೀಡಿದರು. ಆ ಹಣವನ್ನು ಬಳಸಿಕೊಂಡು ಕಟ್ಟಿದ ಕಟ್ಟಡವನ್ನು ಸಿ.ಎಂ.ಪೂಣಚ್ಚ ಬ್ಲಾಕ್ ಎಂದು ಕರೆಯಲಾಗಿದೆ.

ಪೂಣಚ್ಚ ಬ್ಲಾಕ್

ನಾನೂ ಸೇರಿದಂತೆ ಎಲ್ಲ ಕೆಲಸಗಾರರಿಗೆ ಮುಂದೇನು ಎಂಬ ಪ್ರಶ್ನೆಯಿತ್ತು. ಅಪ್ಪ ಕೆಲಸದಿಂದ ನಿವೃತ್ತರಾಗಿದ್ದರು. ಮನೆಯ ಎಲ್ಲ ಜವಾಬ್ದಾರಿ ನನ್ನ ಮೇಲಿತ್ತು. ನಾನು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರದಿಂದ ಸ್ವಲ್ಪ ದೂರದಲ್ಲೇ ಮನೆಯೊಂದನ್ನು ಕಟ್ಟಿಕೊಳ್ಳುತ್ತಿದ್ದೆ. ಅದನ್ನು ಅವಸರದಲ್ಲಿ ಒಂದಿಷ್ಟು ವಾಸಕ್ಕೆ ಆಗುವಷ್ಟು ವ್ಯವಸ್ಥೆ ಮಾಡಿಕೊಂಡೆ. ನಾನು ಇಷ್ಟಪಟ್ಟಿದ್ದರೆ ಪೂರ್ಣಿಮಾ ಎಸ್ಟೇಟಿನಲ್ಲಿಯೇ ಕೆಲಸದಲ್ಲಿ ಮುಂದುವರೆಯಬಹುದಿತ್ತು. ಹೊಸ ಮಾಲಿಕರು ಅದರ ಪ್ರಸ್ತಾಪವನ್ನೂ ಮಾಡಿದ್ದರು. ಆದರೆ ನನಗೆ ಸ್ವತಂತ್ರವಾಗಿ ಬದುಕಲು ಇದೊಂದು ಅವಕಾಶ ಎಂದುಕೊಂಡು ನಾನು ಅವರ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ.

ಕಾರ್ಮಿಕರಲ್ಲಿ ಹಲವರಿಗೆ ಈ ಹಿಂದೆಯೇ ನಾವು ಅಲ್ಲಲ್ಲಿ ಸ್ವಂತ ಮನೆ ಮಾಡಿಸಿಕೊಟ್ಟಿದ್ದೆವು. ಅವರು ಅಲ್ಲಿ ವಾಸಕ್ಕೆ ಹೋಗಿ ಅವರ ಇಷ್ಟಬಂದಲ್ಲಿಗೆ ಕೆಲಸಕ್ಕೆ ಹೋಗಬಹುದಿತ್ತು. ಆದರೆ ಆ ರೀತಿ ಸ್ವಂತ ಮನೆ ಇಲ್ಲದವರೂ ಕೆಲವರಿದ್ದರು. ಅವರು ಏನು ಮಾಡುವುದೆಂದು ಇಕ್ಕಟ್ಟಿನಲ್ಲಿದ್ದರು.

ನಾನು ಬೇರೆ ಹಲವು ಯೋಜನೆಗಳಲ್ಲಿ ಇದ್ದೆ. ಹಾಸನದಲ್ಲಿ ಹೊಸ ಪತ್ರಿಕೆಯೊಂದು ಪ್ರಾರಂಭವಾಗುವುದರಲ್ಲಿತ್ತು. ನನಗೆ ಅಲ್ಲಿ ಕೆಲಸಮಾಡಲು ಆಹ್ವಾನವಿತ್ತು. ಆದರೆ ಅದು ಕೂಡಾ ನಿಗದಿತ ಸಮಯಕ್ಕೆ ಪ್ರಾರಂಭವಾಗದೆ ಮುಂದೆ ಹೋಗುತ್ತ ಇತ್ತು. ಹೆಚ್ಚು ಸಮಯ ಕೆಲಸವಿಲ್ಲದೆ ಕೂರಲು ನನಗೆ ಮನೆಯ ಪರಿಸ್ಥಿತಿ ಕಷ್ಟವಿತ್ತು. ಅಷ್ಟರಲ್ಲಿ ಒಂದು ದಿನ ರವೀಂದ್ರನಾಥರು “ದೇವಾಲಕೆರೆಯಲ್ಲಿನ ಆಶೀರ್ವಾದ್ ಎಸ್ಟೇಟ್ ಅನ್ನು ನೋಡಿಕೊ, ಅಲ್ಲಿ ಸರಿಯಾಗಿ ಯಾವುದೂ ನಡೆಯುತ್ತ ಇಲ್ಲ, ಅಲ್ಲಿ ಹಲವು ತೊಂದರೆಗಳವೆ, ನಿನಗೆ ಅದು ಹೇಗೂ ಸಾಕಷ್ಟು ಗೆಳೆಯರಿರುವ ಊರು” ಎಂದರು.

ಸಕಲೇಶಪುರ ರೋಟರಿ ಶಾಲೆ 98 ರಲ್ಲಿ

ನಾನು ಸದ್ಯಕ್ಕೆ ಒಂದು ಉದ್ಯೋಗವಾಯಿತೆಂದು ಒಪ್ಪಿಕೊಂಡೆ. ನಮ್ಮ ಪುಟ್ಟ ಮನೆಗೆ ವಾಸಕ್ಕೆ ಬಂದೆವು. ಇಲ್ಲಿ ವಿದ್ಯುತ್, ನೀರು ಇತ್ಯಾದಿ ಯಾವ ವ್ಯವಸ್ಥೆಯೂ ಇರಲಿಲ್ಲ. ಅಂತೂ ಇರಲೊಂದು ಸೂರಿತ್ತು. ಫರ್ಲಾಂಗ್ ದೂರದಲ್ಲೊಂದು ಬೋರ್ ವೆಲ್ ಇತ್ತು.

ನಾನು ದೇವಾಲಕೆರೆ ತೋಟದ ಉಸ್ತುವಾರಿ ವಹಿಸಿಕೊಂಡದ್ದು ತಿಳಿದ ಕೂಡಲೇ ಪೂರ್ಣಿಮಾ ಎಸ್ಟೇಟಿನಲ್ಲಿ ಕೆಲಸಮಾಡುತ್ತಿದ್ದ ಸ್ವಂತ ಮನೆಯಿಲ್ಲದ ಹಲವರು ತಾವೂ ದೇವಾಲಕೆರೆಗೆ ಬರುತ್ತೇವೆಂದು ಅಲ್ಲಿಗೆ ಬಂದರು. ಇದರಿಂದಾಗಿ ನನಗೆ ಅಲ್ಲಿ ಕೂಡಾ ಒಂದು ಒಳ್ಳೆಯ ಕೆಲಸಗಾರರ ತಂಡವನ್ನು ಕಟ್ಟಲು ಸಾಧ್ಯವಾಯಿತು.

ಅಲ್ಲಿ ಜಮೀನಿನ ದಾಖಲೆಗಳನ್ನು ಸರಿಪಡಿಸುವುದರಿಂದ ಹಿಡಿದು, ಕಳ್ಳತನ ಇತ್ಯಾದಿ ಹಲವಾರು ನಾನಾ ರೀತಿಯ ಸಮಸ್ಯೆಗಳಿದ್ದವು. ಎಲ್ಲವನ್ನೂ ಒಂದೊಂದಾಗಿ ಬಗೆಹರಿಸಿಕೊಳ್ಳುತ್ತ ತೋಟವನ್ನು ಅಭಿವೃದ್ಧಿ ಮಾಡಬೇಕಿತ್ತು. ಮುಂದಿನ ಆರು ವರ್ಷಗಳಲ್ಲಿ ಅದು ಒಂದು ಅತ್ಯುತ್ತಮ ತೋಟವಾಯಿತು. ಇದಕ್ಕೆ ನನ್ನೊಂದಿಗಿದ್ದ ಮೇಸ್ತ್ರಿ, ಕೆಲಸಗಾರರು ಮತ್ತು ಅಲ್ಲಿ ಸುತ್ತ ಇದ್ದಂತಹ ನನ್ನ ಶಾಲಾ ಸಹಪಾಠಿ ಗೆಳೆಯರ ಬೆಂಬಲ ಕಾರಣವಾಯಿತು. ಇದೆಲ್ಲದರ ಜೊತೆಯಲ್ಲಿ ಗಣಪಯ್ಯನವರ ಕಾಲದಲ್ಲಿ ಜನತಾ ಪಕ್ಷದಲ್ಲಿದ್ದು ನಂತರ ಕಾಂಗ್ರೆಸ್ ಪಕ್ಷ ಸೇರಿದ್ದ ಡಿ.ಎಸ್. ಲೋಕೇಶ ಗೌಡರ ಸಹಕಾರ ಮುಖ್ಯವಾಗಿತ್ತು. ರಾಜಕಾರಣದಲ್ಲಿ ಸೋತಿದ್ದರೂ ಲೋಕೇಶಗೌಡರು ಸಾಮಾಜಿಕ ಕಳಕಳಿಯನ್ನು ಕಳೆದುಕೊಂಡಿರಲಿಲ್ಲ. ಅನುಭವದ ಜೊತೆಯಲ್ಲಿ ಸಾಹಿತ್ಯ, ರಾಜಕಾರಣ ಎಂದು ತುಂಬ ಓದಿಕೊಂಡಿದ್ದ ಅವರು ಹಲವಾರು ಯುವಕರಿಗೆ ಮಾರ್ಗದರ್ಶಕರಾಗಿದ್ದರು. ದೇವಾಲಕೆರೆಯ ಬಸ್ ಸ್ಟಾಪಿನ ಪಕ್ಕದ ಭಟ್ಟರ ಹೋಟೆಲ್ ಅಡ್ಡಾದಲ್ಲಿ ನಾವು ಪದೇ ಪದೇ ಭೇಟಿಯಾಗುತ್ತಿದ್ದೆವು. ಪ್ರತಿ ಬಾರಿಯೂ ಅವರಲ್ಲಿ ಹೊಸತೊಂದು ವಿಷಯವಿರುತ್ತಿತ್ತು.

ನಮ್ಮ ಮನೆಯಿಂದ ದೇವಾಲಕೆರೆಯ ತೋಟಕ್ಕೆ ಸುಮಾರು ಇಪ್ಪತ್ತೈದು ಕಿ.ಮಿ.ದೂರವಿತ್ತು. ಅಲ್ಲದೆ ನಾಲ್ಕು ಕಿ.ಮಿ. ಕಚ್ಚಾ ರಸ್ತೆಯಲ್ಲಿ ಕಡಿದಾದ ಗುಡ್ಡ ಹತ್ತಿ ಇಳಿದು ಸಾಗಬೇಕಿತ್ತು. ಆದ್ದರಿಂದ ಪ್ರತಿದಿನ ಸೈಕಲಿನಲ್ಲಿ ಹೋಗಲು ಸಾಧ್ಯವಿರಲಿಲ್ಲ. ಬ್ಯಾಂಕಿನಲ್ಲಿ ಸಾಲ ಪಡೆದು ಬೈಕೊಂದನ್ನು ಕೊಂಡುಕೊಂಡೆ.

ಸೈಕಲ್ಲಿನಲ್ಲಿ ಕುಳಿತು ಹೆಲಿಕಾಪ್ಟರ್ ಸವಾರಿ ಮಾಡುತ್ತಿದ್ದ ನನಗೀಗ ಸೂಪರ್ ಸಾನಿಕ್ ಜೆಟ್ ಸಿಕ್ಕಿದಂತಾಗಿತ್ತು. ಪೂರ್ಣಿಮಾ ಎಸ್ಟೇಟಿನ ಮಾರಾಟದಿಂದಾಗಿ ನಮ್ಮ ನಾಟಕ ತಂಡ ಹರಿದು ಹಂಚಿಹೋಗಿತ್ತು. ಅದನ್ನು ಮತ್ತೆ ಕಟ್ಟಬೇಕಿತ್ತು. ಜೊತೆಯಲ್ಲಿ ತೋಟದ ಕೆಲಸ, ಇತರ ಸಂಘಟನಾತ್ಮಕ ಕಾರ್ಯಗಳು, ಸ್ಥಳೀಯ ರಾಜಕಾರಣ, ಹೋರಾಟಗಳು, ಸಾಕ್ಷರತಾ ಆಂದೋಲನ, ಇತರ ಸುತ್ತಾಟಗಳು ಎಲ್ಲದಕ್ಕೂ ಅನುಕೂಲವಾಯಿತು.

ಪೂರ್ಣಿಮಾ ಎಸ್ಟೇಟ್ ಮಾರಾಟವಾಗಿ ಒಂದು ವರ್ಷವಾಗುವಷ್ಟರಲ್ಲೇ ಅಂದರೆ 1990ರಲ್ಲಿ ಪೂಣಚ್ಚನವರು ತೀರಿಕೊಂಡರು. ಅಲ್ಲಿಗೆ ಕೊಡಗು ಸಕಲೇಶಪುರಗಳ ಕಾಫಿ ವಲಯದ ಇನ್ನೊಂದು ಸಾಂಸ್ಕೃತಿಕ ಕೊಂಡಿಯೂ ಕಳಚಿದಂತಾಯಿತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ನಮ್ಮ ರಾತ್ರಿ ಶಾಲೆ ಮತ್ತು ನಾಟಕ ತಂಡದ ಬೆಳವಣಿಗೆ: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...

ಅಯೋಧ್ಯೆ ದೇಣಿಗೆ ಹಗರಣ: ಕೇವಲ 45 ದಿನಗಳಲ್ಲಿ 70 ಬಾರಿ ಕಳ್ಳತನ, SIT ವರದಿ

ಅಯೋಧ್ಯೆಯ ರಾಮಮಂದಿರಕ್ಕೆ ಬಂದ ಸಾರ್ವಜನಿಕರ ದೇಣಿಗೆ ದುರುಪಯೋಗದ ಆರೋಪದ ಕುರಿತು ವಿಶೇಷ ತನಿಖಾ ತಂಡ (SIT) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಕೇವಲ 45 ದಿನಗಳಲ್ಲಿ ಸುಮಾರು 70 ಸಂಶಯಾಸ್ಪದ ಕಳ್ಳತನಗಳು ನಡೆದಿರುವುದಕ್ಕೆ ಪ್ರಾಥಮಿಕ...

ಬರುಯಿಪುರ ಅತ್ಯಾಚಾರ-ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಎನ್‌ಕೌಂಟರ್; ‘ನನ್ನ ಮಗನ ಶವ ನನಗೆ ಬೇಡ’ ಎಂದ ಹೆತ್ತ ತಾಯಿ!

ಬರುಯಿಪುರ/ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕ್ರೂರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮೊಂಡೋಲ್ ಬುಧವಾರ...

ವಯನಾಡ್ ಭೂಕುಸಿತ: ಕಾಣೆಯಾದ ಐವರಿಗಾಗಿ ಮುಂದುವರೆದ ಹುಡುಕಾಟ

ಬೆಟ್ಟದ ಜಿಲ್ಲೆಯ ವಯನಾಡ್‌ನಲ್ಲಿ ನಡೆಯುತ್ತಿರುವ ಸುರಂಗ ರಸ್ತೆ ನಿರ್ಮಾಣ ಸ್ಥಳದಲ್ಲಿ ಭೂಕುಸಿತ ಸಂಭವಿಸಿ ಮೂರು ಜೀವಗಳು ಬಲಿಯಾದ ಒಂದು ದಿನದ ನಂತರ, ಕಾಣೆಯಾಗಿರುವ ಐವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ವಯನಾಡ್...

ನನ್ನನ್ನು ಕೊಂಡುಕೊಳ್ಳಲು ಯಾರ ಕೈಲೂ ಸಾಧ್ಯವಿಲ್ಲ: ಮಹುವಾ ಮೋಯಿತ್ರಾ ವಿಶೇಷ ಸಂದರ್ಶನ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಯಭೇರಿ ಬಾರಿಸಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಧೂಳೀಪಟವಾಗಿದೆ. ಚುನಾವಣಾ ಸೋಲಿನ ನಂತರ ಸಾಲು...

ಕೋರ್ಟ್ ರಾಜಕೀಯ ಅಖಾಡ ಅಲ್ಲ: ಸಿಎಂ ವಿಜಯ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಡಿಎಂಕೆಗೆ ಸುಪ್ರೀಂ ತರಾಟೆ

ತಮಿಳುನಾಡಿನ ಕರೂರ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದಂತೆ ಮುಖ್ಯಮಂತ್ರಿ ವಿಜಯ್ ಅವರಿಗೆ ನಿರ್ಬಂಧ ಹೇರಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಜನರಿಂದ...

ಸುರಂಗ ರಸ್ತೆ ಕಾಮಗಾರಿ ವೇಳೆ ವಯನಾಡಿನಲ್ಲಿ ಭೂಕುಸಿತ: ಜನರು ಜೀವ ಉಳಿಸಿಕೊಳ್ಳಲು ಓಡಿದ ಭಯಾನಕ ದೃಶ್ಯ ಸೆರೆ

ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿಯಲ್ಲಿ ಮಂಗಳವಾರ (ಇಂದು) ಭೀಕರ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದ್ದು, ಈ...