Homeಅಂಕಣಗಳುಒಳಗಣ ಹೆಣ್ಣಿನ ಮೊಳಕೆ; ಮಂಜಮ್ಮ ಜೋಗತಿ ಅವರ ಆತ್ಮಕಥನ ’ನಡುವೆ ಸುಳಿವ ಹೆಣ್ಣು’ವಿನಿಂದ ಆಯ್ದ ಅಧ್ಯಾಯ

ಒಳಗಣ ಹೆಣ್ಣಿನ ಮೊಳಕೆ; ಮಂಜಮ್ಮ ಜೋಗತಿ ಅವರ ಆತ್ಮಕಥನ ’ನಡುವೆ ಸುಳಿವ ಹೆಣ್ಣು’ವಿನಿಂದ ಆಯ್ದ ಅಧ್ಯಾಯ

- Advertisement -
- Advertisement -

(ಮಂಜಮ್ಮ ಜೋಗತಿ ಅವರ ಆತ್ಮಕಥನ ’ನಡುವೆ ಸುಳಿವ ಹೆಣ್ಣು’ವಿನಿಂದ ಆಯ್ದ ಅಧ್ಯಾಯ)

ಆರು ಏಳನೆ ಕ್ಲಾಸಿನತನಕ ನನಗೆ ಗಂಡು ಹೆಣ್ಣು ಅನ್ನೋ ಸ್ವಭಾವ ಇರ್‍ತಿರ್‍ಲಿಲ್ಲ. ಎಲ್ರು ಒಟ್ಟಿಗೆ ಹೋಗ್ತಿದ್ವಿ, ಒಟ್ಟಿಗೆ ಬರ್‍ತಿದ್ವಿ. ನಾನು ಮೊದ್ಲಿಂದನೂ ಸ್ವಲ್ಪ ಹೆಣ್ಣು ಹುಡಿಗೇರ ಜತೆನೆ ಜಾಸ್ತಿ ಇರ್‍ತಿದ್ದೆ. ನಮ್ಮಮ್ಮ ಹುಡುಗರು ಇದ್ದಾಗಲೇ ನಮ್ಮ ಕೂಡ ಮುಸುರೆ ತಿಕ್ಸೋದು, ಸೆಗಣೀಲೆ ನೆಲ ಸಾರಿಸೋದು ಮಾಡಿಸ್ತಿತ್ತು. ಹಾಂಗಾಗಿ ನಮ್ಮ ಮನೇಲಿ ಹೆಣ್ಣು ಹುಡುಗ್ರು ಗಂಡು ಹುಡುಗ್ರು ಅಂತ ಭೇದ ಕಡಿಮೆ ಇತ್ತು.

ಸ್ಕೂಲಲ್ಲಿ ನಾಟಕಗಳನ್ನ ಮಾಡ್ತಿದ್ರು. ಆರನೆ ಕ್ಲಾಸು ಓದೋಕಾದ್ರೆ ತಿರುನೀಲಕಂಠ ಅನ್ನೋ ನಾಟಕ ಆಡಿದ್ರು. ಈ ನಾಟಕದಲ್ಲಿ ನಾನು ಪರಮಾತ್ಮನ ಪಾತ್ರ ಮಾಡಿದ್ದೆ. ಅದು ಒಂದೇ ಸೀನಿತ್ತು. ಅದರ ಕಥೆ ಸ್ವಲ್ಪ ನೆಪ್ಪಿದೆ. ನೀಲಕಂಠ ವೇಶ್ಯೆ ಮನೆ ಮುಂದೆ ಬರುವ ಹೊತ್ತಿಗೆ ಸರಿಯಾಗಿ ವೇಶ್ಯೆ ಆಕಸ್ಮಾತ್ ಮುಸುರೆ ನೀರು ಚೆಲ್ಲುತ್ತಾಳೆ. ಅದು ನೀಲಕಂಠನ ಮೈಮೇಲೆ ಬಿದ್ದು ಬಟ್ಟೆಯೆಲ್ಲಾ ಒದ್ದೆಯಾಗುತ್ತೆ, ಇದನ್ನು ನೋಡಿ ಅಯ್ಯೋ ತಪ್ಪಾಯ್ತು ಎಂದು ನೀಲಕಂಠನಲ್ಲಿ ಕ್ಷಮೆ ಕೇಳುತ್ತಾಳೆ. ಘಟಿಸಿದ ತಪ್ಪಿಗಾಗಿ ನೀಲಕಂಠನನ್ನು ಒಳಗೆ ಕರೆದು ಬಟ್ಟೆ ತೊಳೆದು, ಬೇರೆ ಬಟ್ಟೆ ಕೊಟ್ಟು ಸ್ನಾನ ಮಾಡಿಸಿ, ಗಂಧಲೇಪನ ಮಾಡಿ ಕಾಲಿಗೆ ಬಿದ್ದು ಕಳಿಸಿರುತ್ತಾಳೆ. ಇದನ್ನು ನೋಡಿದ ಹೆಂಡತಿ ನೀನು ಸೂಳೆ ಮನೆಗೆ ಹೋಗಿದ್ದಿಯ ಎಂದು ಜಗಳ ಮಾಡ್ತಾಳೆ. ಈ ಜಗಳದಿಂದಾಗಿ ಶಿವನ ಮೇಲೆ ಪ್ರಮಾಣ ಮಾಡಿ ಗಂಡ ಹೆಂಡತಿ ಬೇರೆ ಬೇರೆಯಾಗ್ತಾರೆ. ಈ ನಾಟಕದಲ್ಲಿ ನನ್ನ ಪಾತ್ರ ಮುಗಿದ ಮೇಲೆ ನಾನು ಮೊದಲ ಬಾರಿಗೆ ಹೆಣ್ಣಿನ ಡ್ರೆಸ್ ಹಾಕೊಂಡು ಡಾನ್ಸ್ ಮಾಡಿದ್ದೆ. ಕಾಪಾಡು ಶ್ರಿ ಸತ್ಯನಾರಾಯಣ ಅನ್ನೋ ಹಾಡು ಹಾಕಿದ್ರು.

ಆಗ ಹಳ್ಳಿ ನಾಟಕಗಳಲ್ಲಿ ಹೆಣ್ಣು ಮಕ್ಕಳು ಪಾತ್ರ ಮಾಡ್ತಿರ್‍ಲಿಲ್ಲ. ಗಂಡುಮಕ್ಕಳೆ ಮೀಸೆ ಬೋಳಿಸಿಕೊಂಡು ಸೀರೆ ಉಟ್ಟು ಹೆಣ್ಣು ಪಾತ್ರ ಮಾಡ್ತಿದ್ದರು. ಆಗ ಸಂಗ್ಯಾಬಾಳ್ಯ ನಾಟಕದ ಪ್ರಚಾರ ಹೆಚ್ಚಾಗಿತ್ತು. ಕುರುಕ್ಷೇತ್ರ ನಾಟಕದಲ್ಲಿ ನಮ್ಮ ಅಯ್ಯ ದ್ರೋಣಾಚಾರ್ಯರ ಪಾತ್ರ ಮಾಡಿದ್ದರು. ನಾನು ಆಗ ಹುಡುಗೀರ ಜತೆ ಹೆಣ್ಣುವೇಷದಲ್ಲಿ ಸಖಿ ಪಾತ್ರ ಮಾಡಿದ್ದೆ. ಆಗ ಹೆಣ್ಣುಡುಗಿಯರು ಜಾಸ್ತಿ ಶಾಲೆಗೆ ಬರ್‍ತಿರ್‍ಲಿಲ್ಲ. ಹಂಗಾಗಿ ನನ್ನ ತಂಗಿಯರು ಕೂಡ ಓದಲಿಲ್ಲ. ಸರಿಯಾಗಿ ಶಾಲೆಗೆ ಬರುತ್ತಿರಲಿಲ್ಲ. ಶಾಲೆಗೆ ಅಂತ ಬಂದು ಚಕ್ಕರ್ ಹೊಡೆದು ಎಲ್ಲೆಲ್ಲೋ ಸುತ್ತುತ್ತಿದ್ರು. ಶಾಲೆಗಂತ ಬಂದು ಕಬ್ಬಿನ ಪ್ಯಾಕ್ಟ್ರಿಗೆ ಹೋಗಿ, ಶಾಲೆ ಬಿಡೋ ಟೈಮಿಗೆ ಮನಿಗೆ ಬರ್‍ತಿದ್ರು. ನನ್ನ ದೊಡ್ಡ ತಂಗಿ ಸಾಲಿಗೆ ಕಳ್ಸಿದ್ರೆ ಲಾರಿ ಬಾಯಿಗೆ ಬೀಳ್ತೀನಿ ಅಂತಿದ್ಲು. ಹಂಗಾಗಿ ಅವರು ಓದ್ಲೇ ಇಲ್ಲ, ವಿದ್ಯೆನೂ ಅತ್ಲಿಲ್ಲ.

ನಮ್ಮಣ್ಣನಿಗೆ ಬಾರಿ ಸಿಟ್ಟು. ಒಂದ್ಸಲ ಹಾಸ್ಟೆಲಿನಿಂದ ಮನೆಗೆ ಬಂದಾಗ ಊಟಕ್ಕೆ ಕುಂತಿದ್ದ. ಆಗ ನೀರು ಕೊಡು ಮಂಜು ಅಂದ. ನಾನು ಕೊಡ್ಲಿಲ್ಲ. ಮತ್ತೆ ಕೇಳಿದ ‘ಹೋಗೊ ಮಿಂಡ್ರಿಗುಡ್ತಾನ ನಾ ಕೊಡೊದಿಲ್ಲ ಅಂದೆ. ಆಗ ‘ನೋಡು ಎದ್ದು ಬಂದ್ರ ಜೀವ ತೆಗದುಬಿಡ್ತಿನಿ’ ಅಂತ ಗದರಿಸಿದ. ನಾನು ಹೆದರಿ ನೀರು ಕೊಡೋಕೆ ಅಂತ ಚೆಂಬು ತೊಗೊಂಡು ದೊಡ್ಡ ಗುಡಾಣದಾಗ ನೀರು ತುಂಬ್ತಿದ್ದೆ, ಅಣ್ಣ ಬಂದೋನೆ ತಲೆ ಹಿಡ್ಕಂಡು ಆ ಗುಡಾಣದಾಗ ತುರುಕಿ ಇನ್ನೊಂದ್ಸಲ ಅಂತೀಯ ಅಂತ ಅದುಮಿಬಿಟ್ಟಿದ್ದ. ನನಗೆ ಉಸಿರುಕಟ್ಟಿದಂತಾಗಿ ಕಿರುಚಾಡಿದ್ದೆ. ಆವಾಗ ನನ್ನ ಹಲ್ಲು ಮುರಿದಿತ್ತು. ನಾನು ನೋವಿನಿಂದಾಗಿ ವಿಲವಿಲಾಂತ ಒದ್ದಾಡಿದ್ದೆ. ಈಗ್ಲೂ ಆ ಗುರುತು ಹಂಗೆ ಇದೆ. ಅವತ್ತೆ ಕಡೆ ನಾನು ಇವತ್ತಿಗೂ ಯಾರನ್ನೂ ಬೈಯೋದಿಲ್ಲ. ಅದ್ರಲ್ಲೂ ‘ಮಿಂಡ್ರಿಗುಡ್ತಾನ’ ಅನ್ನೋ ಬೈಗುಳ ಮಾತ್ರ ಅಪ್ಪಿತಪ್ಪಿ ಬರಲ್ಲ.

ಆಗ ನಾವು ಕೊಳೆಬಟ್ಟೆಗಳನ್ನು ತೊಳೆಯಲೆಂದು ಗಂಟು ಕಟ್ಟಿಕೊಂಡು ಶಾಲೆಗೆ ಹೋಗ್ತಿದ್ವಿ. ಕ್ಲಾಸ್‌ರೂಮಿನಲ್ಲೆ ಒಂದು ಮೂಲೆಯಲ್ಲಿ ಆ ಗಂಟನ್ನು ಇಡ್ತಾ ಇದ್ವಿ. ಮಧ್ಯಾನ ಊಟಕ್ಕೆ ಬಿಟ್ಟಾಗ ಶಾಲೆ ಹಿಂದೆ ಇದ್ದ ಹಳ್ಳಕ್ಕೆ ಹೋಗಿ, ತಂದ ಬುತ್ತಿ ಊಟ ಮಾಡಿ, ಬಟ್ಟೆ ತೊಳೆದು, ಶಾಲೆ ಹಿಂದಿನ ಗಿಡಗಳಿಗೆ ಒಣಗಲು ಹಾಕ್ತಿದ್ವಿ. ಮಧ್ಯಾನದ ನಂತರ ಇಂಟರವೆಲ್ ಬಿಟ್ಟಾಗ ಒಣಗಿದ ಬಟ್ಟೆಗಳನ್ನು ಮಡಿಚ್ಕಂಡು ಗಂಟು ಕಟ್ಟಿ ಮತ್ತೆ ಕ್ಲಾಸ್‌ರೂಮಲ್ಲಿ ಇಟ್ಕೋತಿದ್ವಿ. ಸಂಜೆ ಶಾಲೆ ಬಿಟ್ಟಾಗ ತಂಗಿಯರ ಜತೆ ಗಂಟು ಹೊತ್ಕಂಡು ಮನೆಗೆ ಬರ್‍ತಿದ್ದೆ. ಮತ್ತೆ ಮನೇಲಿ ನೀರು-ಪಾರು ತಂದಾಕಿ ಊರಾಗ ಟೂಷನ್‌ಗೆ ಹೋಗ್ತಿದ್ವಿ.

ಒಂದ್ಸಲ ಟೂರ್‌ಗೆ ಹೋಗೋಕೆ ಮನೇಲಿ ದುಡ್ಡು ಕೊಡ್ಲಿಲ್ಲ, ನನಿಗೆ ಟೂರ್ ಹೋಗಬೇಕು ಅನ್ನೋದು ಬಾಳ ಆಸೆ. ಹೆಂಗಾದ್ರೂ ಮಾಡಿ ನಾನೆ ದುಡ್ಡು ದುಡುಕೊಂಡು ಟೂರ್ ಹೋಗ್ಬೇಕು ಅಂತ, ಪ್ಯಾಕ್ಟ್ರಿಗೆ ಬಕಾಸು ಹೊರಾಕ ಹೋಗ್ತಿದ್ವಿ. ಮಿಷನ್ನಿನಲ್ಲಿ ರಸ ತೆಗೆದ ಕಬ್ಬು ಇಪ್ಪಿಯ ಹಾಗೆ ಪುಡಿಪುಡಿಯಾಗಿ ಬೀಳ್ತಿತ್ತು. ಹಾಗೆ ಬಿದ್ದ ಇಪ್ಪಿಗೆ ನೀರು ಮಿಕ್ಸ್ ಮಾಡ್ತಿದ್ರು. ಅದನ್ನೆ ಬಕಾಸು ಅಂತಿದ್ರು. ನಾವು ಅದನ್ನ ತಗಂಡೋಗಿ ಮಿಷನ್‌ಗೆ ಹಾಕ್ತಿದ್ವಿ. ಅದು ಇಟಂಗಿ ತರ ಬಾಕ್ಸ್ ಬಾಕ್ಸ್ ಆಗಿ ಹೊರಗಡೆ ಬರ್‍ತಿತ್ತು. ಅದೇನೋ ಪೇಪರ್ ಮಾಡೋಕೆ ಹೋಗ್ತಿತ್ತಂತೆ. ರಾತ್ರಿ ಎಂಟು ಗಂಟೆಗೆ ಹೋಗಿ ಬೆಳಗಿನ ಜಾವ ನಾಲಕ್ ಗಂಟೆಗೆ ಬರ್‍ತಿದ್ವಿ. ಅದಕ್ಕ ಆರು ರೂಪಾಯಿನೋ ಏಳು ರೂಪಾಯಿನೋ ಕೊಡ್ತಿದ್ರು.

ಈ ರೀತಿ ಕೆಲಸ ಮಾಡೋದನ್ನು ಒಂದ್ಸಲ ಮೇಷ್ಟ್ರು ಬಸವರಾಜಪ್ಪ ಅಂತ ನನ್ನನ್ನ ನೋಡಿದ್ರು. ಅವರು ‘ಏನಲೇ ಶೆಟ್ಟಿ ಇಲ್ಲೇನು ಮಾಡ್ತಿ’ ಅಂದ್ರು. ಆಗ ನಾನು ತಡವರಿಸ್ತಾ ‘ಟೂರ್‌ಗೆ ಮನೇಲಿ ದುಡ್ಡು ಕೊಡ್ಲಿಲ್ಲ ಸಾ.. ಅದಕ್ಕೆ ಬಕಾಸು ಹೊರಾಕ ಬಂದೀನಿ’ ಅಂದಿದ್ದೆ. ಆಗ ಮೇಷ್ಟ್ರು ನಮ್ಮಪ್ಪನ ಹತ್ರ ಹೋಗಿ ‘ಶೆಟ್ರೆ ಮಕ್ಕಳನ್ನ ಹಂಗ ರಾತ್ರಿ ನಿದ್ದಿಗೆಡಸ್ಬಾರದು ಬೆಳಿಯೋ ಮಕ್ಕಳು, ನಿಮಗೆ ಗೊತ್ತಾಗಲ್ಲೇನು?’ ಅಂತ ಬೈದಾರ. ಆಗ ನಮ್ಮಪ್ಪ ನನ್ನ ಹತ್ರ ಬಂದು ‘ಮಂಜು ಮೇಷ್ಟ್ರು ಬೈದ್ರು ಇನ್‌ಮ್ಯಾಲೆ ಪ್ಯಾಕ್ಟ್ರಿಗೆ ರಾತ್ರಿ ಕೆಲಸಕ್ಕೆ ಬರಬ್ಯಾಡ’ ಅಂದ್ರು. ಅಷ್ಟೊತ್ತಿಗೆ ಬಕಾಸು ಹೊತ್ತು ಎಪ್ಪತ್ತು ರೂಪಾಯಿ ಕೂಡಿಸಿದ್ದೆ. ಅದೆ ಹಣ ತೊಗೊಂಡು ಟೂರಿಗೆ ಹೋದೆ.

ನಾವು ಆರು ಏಳನೆ ಕ್ಲಾಸು ಓದೋವಾಗ ಹುಡುಗರ ಸಂಖ್ಯೆ ಜಾಸ್ತಿ ಇತ್ತು. ಒಬ್ಬ ಮುಸ್ಲಿಂ ಟೀಚರ್ ಇದ್ರು. ಅವರು ಪ್ಯಾಕ್ಟರಿ ಮ್ಯಾನೇಜರ್ ಒಬ್ರನ್ನು ಪ್ರೀತಿಸ್ತಿದ್ರು. ಆಗ ನಮಿಗೆ ಲವ್ವು ಗಿವ್ವು ಅಂತವೆಲ್ಲಾ ಗೊತ್ತಾಗ್ತಿರ್‍ಲಿಲ್ಲ. ಆಯಮ್ಮ ಮ್ಯಾನೇಜರ್‌ಗೆ ಕೊಡೋಕೆ ನಮ್ಮ ಕೈಗೆ ಒಂದು ಚೀಟಿ ಕೊಟ್ಟು ಕಳಿಸ್ತಿದ್ರು. ಅದನ್ನು ನಾವು ಕೊಡ್ತಿದ್ವಿ. ಬೆಳಿಗ್ಗೆ ಮ್ಯಾನೇಜರ್ ಒಂದು ಚೀಟಿ ಕೊಡ್ತಿದ್ದರು ಅದನ್ನ ತೊಗೊಂಡೋಗಿ ಟೀಚರ್‌ಗೆ ಕೊಡ್ತಿದ್ವಿ. ಒಂದು ದಿನನಾದ್ರು ಆ ಚೀಟಿಗಳನ್ನ ಓದ್ಲಿಲ್ಲ. ಆಯಮ್ಮ ದಾವಣಗೆರೆಯಿಂದ ಬರುವಾಗ ಮುಸಲ್ಮಾನರ ತಾಳಿ ಕಟ್ಟಿಕೊಳ್ಳತಿದ್ಲು, ಕುಕ್ಕವಾಡಕ್ಕ ಬಂದ ತಕ್ಷಣ ಹಿಂದೂ ತರ ತಾಳಿ ಕಟ್ಟಿಕೊಳ್ತಿದು. ಹಂಗ್ಯಾಕ ಮಾಡ್ತಿದ್ರೋ ಗೊತ್ತಾಗ್ತಿರ್‍ಲಿಲ್ಲ.

ನಾನು ಏಳನೇ ಕ್ಲಾಸು ಓದಬೇಕಾದ್ರೆ ಹೆಣ್ತನದ ಲಕ್ಷಣಗಳು ಬರೋಕೆ ಶುರುವಾಯ್ತು. ಊರಲ್ಲಿ ಎರಡು ಮೂರು ಸಲ ಹೆಣ್ಣುವೇಷ ಹಾಕಿ ನಾಟಕ ಮಾಡಿದೆ. ಆಗ ಎಲ್ಲರೂ ಮಂಜು ಸೇಮ್ ಹೆಣ್ಣು ಮಗಳು ಕಂಡಂಗ ಕಾಣ್ತಾನೆ ಅಂತ ಹೇಳ್ತಿದ್ರು. ಬಸವರಾಜಪ್ಪ ಮೇಷ್ಟ್ರು ಒಂದ್ಸಲ ನಾಟಕ ಮಾಡಿಸಿದ್ರು ಆ ನಾಟಕದಲ್ಲಿ ನಾನು ಹೆಣ್ಣುಡುಗಿ ಪಾತ್ರ ಮಾಡಿದ್ದೆ. ಆಗ ಅವರು ನನ್ನ ಹೆಸರು ಬಿಟ್ಟು ಬೆಂಗಳೂರು ಲತ ಅನ್ನೋ ಹೆಸರಲ್ಲಿ ಅನೋನ್ಸ್ ಮಾಡ್ತಿದ್ರು. ಆವಾಗಿನಿಂದ ಹೆಣ್ಣಮಕ್ಕಳ ಲಕ್ಷಣಗಳು ಕಾಣಿಸಿಕೊಳ್ಳಕೆ ಶುರುವಾದ್ವು. ಆ ದಿನ ಬೆಂಗಳೂರು ಲತಾ ಅಂತ ಕರೆಸಿಕೊಂಡದ್ದು, ಹೆಣ್ಣಿನ ಹಾಗೆ ಬಳುಕಿ ಡಾನ್ಸ್ ಮಾಡಿ ಜನರಿಂದ ಮೆಚ್ಚುಗೆಪಡೆದದ್ದಕ್ಕೆ ಮನಸಾರೆ ಖುಷಿ ಪಟ್ಟಿದ್ದೆ.

PC : Prajavani

ಒಂದ್ಸಲ ನಮ್ಮೂರಲ್ಲಿ ನಾಟಕದ ಕಂಪನಿ ಹಾಕಿದ್ರು. ಒಂದು ಟೇಬಲ್ಲಿನ ಮೇಲೆ ಒಬ್ಬಾತ ‘ಅತ್ತ ಇತ್ತ ನೋಡಿ ಬಂದೆ ಅವನು ಸಿಗಲಿಲ್ಲ’ ಅನ್ನೋ ರಿಕಾರ್ಡಿಗೆ ಡಾನ್ಸ್ ಮಾಡ್ತಿದ್ದ. ಅದನ್ನ ನೋಡಿ ಅದರಂಗ ನಾನು ಡಾನ್ಸ್ ಮಾಡ್ಬೇಕು ಅನ್ನೋ ಆಸೆ ಆಗ್ತಿತ್ತು. ನನಗೆ ಉದ್ದಕ್ಕ ಜಡೆ ಹಾಕ್ಕೊಂಡು, ಲಂಗ ಚೋಲಿ ಹಾಕ್ಕೊಂಡು ಡಾನ್ಸ್ ಮಾಡಬೇಕಂತ ಒಳಗಿಂದ ಆಸೆ ಉಕ್ಕಿ ಬರ್‍ತಿತ್ತು. ಆದರೆ ಮನೇಲಿ ಮಾಡಂಗಿರ್‍ಲಿಲ್ಲ. ಹಾಗೆ ಮಾಡಿದ್ರೆ ಹೆಂಗ್ಸು ಮಾಡಿದಂಗೆ ಮಾಡ್ತಿಯಲ್ಲೋ ಅಂತ ಬೈಯಿತಿದ್ರು. ಅಯ್ಯ ಒಡಿಯಾದು ಬೈಯಾದು ಮಾಡ್ತಿದ್ರು. ನಮ್ಮ ಮನೇಲಿ ಯಾರು ಇಲ್ದಾಗ ಹೆಣ್ಣುಮಕ್ಳ ಡ್ರೆಸ್ ಹಾಕ್ತಿದ್ದೆ. ಬರ್‍ತಾಬರ್‍ತಾ ಗಂಡು ಹುಡುಗರ ಜೊತೆ ಆಟ ಆಡೋದನ್ನು ಬಿಟ್ಟೆ. ಅವರನ್ನ ಮಾತಾಡ್ಸೋಕೆ ಒಂಥರಾ ನಾಚಿಕೆ ಸ್ವಭಾವ ಬರ್‍ತಿತ್ತು. ಹೆಣ್ಣ ಮಕ್ಕಳ ಜತೆನೂ ಜಾಸ್ತಿ ಹೋಗ್ತಿರ್‍ಲಿಲ್ಲ. ಯಾವಾಗ್ಲೂ ಒಬ್ಬನೇ ಇರ್‍ತಿದ್ದೆ. ಒಂಟಿಯಾಗಿರೋದು ಒಂದು ರೀತಿ ಖುಷಿ ಕೊಡ್ತಿತ್ತು. ಹಾಗಾಗಿ ನನ್ನ ಪಾಡಿಗೆ ನಾನು ಇರೋದೆ ಹೆಚ್ಚಾಯ್ತು.

ನನಗೆ ಏಳು ಎಂಟನೇ ಕ್ಲಾಸಿನ್ಯಾಗ ಪಿಡುಸು ಬಂದಂಗ ಬರ್‍ತಿತ್ತು. ಕೈ ಸೊಟ್ಟಾಗೋದು, ನಾಲಿಗಿ ಕಡಕಳ್ಳಾದು, ಬಾಯಾಗ ಬುರುಗು ಬರೋದು ಈ ತರವೆಲ್ಲಾ ಆಗ್ತಿತ್ತು. ಅಂಗಾದಾಗ ಪಿಡ್ಸು ಬರ್‍ತಾತಿ ಅಂತ ಆಸ್ಪತ್ರೆಗೆ ಹೋಗಿ ಚಕಪ್ ಮಾಡಿಸ್ತಿದ್ರು. ಡಾಕ್ಟರನ್ನ ಕೇಳಿದ್ರೆ ಏನೂ ಇಲ್ಲ ಅಂತಿದ್ರು. ಮೂರು ತಿಂಗಳಿಗೊಮ್ಮೆ ಹಿಂಗಾಗ್ತಿತ್ತು. ಆಗ ಜೋತಿಷಿಗಳನ್ನು ಕೇಳಿಸಿ ನೋಡಿದ್ರೆ ದೇವರ ಒಲುಮೆ ಕಾಟ ಐತಿ ಅಂತ ಹೇಳ್ತಿದ್ರು. ಇದನ್ನು ಕೇಳಿದ ಅಯ್ಯಂಗೆ ಅಮ್ಮಂಗೆ ಸೇರಿಕಿ ಬರ್‍ತಿರ್‍ಲಿಲ್ಲ. ಯಾವ ದೇವ್ರು ಇಲ್ಲ ದಿಂಡ್ರು ಇಲ್ಲ. ಇವನು ಬೇಕಂತನೆ ಆ ರೀತಿ ಮಾಡ್ತಾನೆ. ಮುಂದೆ ಸರಿ ಹೋಗ್ತಾನೆ ಬಿಡು ಅಂತ ಆ ವಿಷ್ಯನ ಅಲ್ಲಿಗೆ ಬಿಡ್ತಿದ್ರು.

ದಿನದಿಂದ ದಿನಕ್ಕೆ ಮನೆ ಕೆಲಸ ಮಾಡೋದು, ಪೂಜೆ ಮಾಡೋದ್ರಲ್ಲಿ ನನಗೆ ಹೆಚ್ಚು ಆಸಕ್ತಿ ಬೆಳೀತು. ನಾನು ಪೂಜೆ ಮಾಡೋಕೆ ಶುರು ಮಾಡಿದೆ. ಆವಾಗಿನಿಂದ ನಮ್ಮಮ್ಮ ಪೂಜೆ ಮಾಡೋದನ್ನೆ ಬಿಡ್ತು. ನಾನು ಅಮ್ಮನಿಗಿಂತ ಅಚ್ಚುಕಟ್ಟಾಗಿ ಪೂಜೆ ಮಾಡ್ತಿದ್ದೆ. ನಮ್ಮನೇಲಿ ಚೌಡಮ್ಮ, ಈರಣ್ಣ, ವೆಂಕಟೇಶ್ವರಸ್ವಾಮಿ ನಮ್ಮ ಕುಲದೇವತೆ ಕನ್ನಿಕಾ ಪರಮೇಶ್ವರಿ ಚಿತ್ರಪಟಗಳಿದ್ವು. ನಮ್ಮಮ್ಮನಿಗೆ ಚೌಡಮ್ಮನ ಒಲುಮೆಯಾಗಿತ್ತು. ಕುಕ್ಕವಾಡದ ಮನೇಲಿ ಅಡ್ಡಗೋಡೆ ಮೇಲೆ ಮಗುವಿಗೆ ಹಾಲು ಕುಡಿಸುವ ರೀತಿ ಐದು ಲಿಂಗಗಳು, ಏಳು ಅಡಿ ಸರ್ಪದ ಆಕಾರದಲ್ಲಿ ಹುತ್ತದ ಆಕಾರ ಒಡಮೂಡಿತ್ತು. ಒಂದು ದೊಡ್ಡಾವು ನಮ್ಮ ಮನೆಗೆ ಬಂದೊಗ್ತಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ದೇವಿಯ ಒಲುಮೆ ಮೊದಲಿನಿಂದಲೂ ಇತ್ತು. ಅದೇ ದೇವಿನೆ ನನಗೂ ಒಲುಮೆಯಾಗಿದೆ ಅಂತ ಊರಲ್ಲಿ ಜನ ಮಾತಾಡಿಕೊಳ್ತಾ ಇದ್ರು.

(ಈ ಪುಸ್ತಕವನ್ನು ಪಲ್ಲವ ಪ್ರಕಾಶನ ಪ್ರಕಟಿಸಿದ್ದು, ಅರುಣ್ ನಿರೂಪಿಸಿದ್ದಾರೆ)

ಅರುಣ್ ಜೋಳದಕೂಡ್ಲಿಗಿ

ಅರುಣ್ ಜೋಳದಕೂಡ್ಲಿಗಿ
ಬಳ್ಳಾರಿ ಜಿಲ್ಲೆಯ ಜೋಳದಕೂಡ್ಲಿಗಿಯವರು. ಸದ್ಯಕ್ಕೆ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ. ನೆರಳು ಮಾತನಾಡುವ ಹೊತ್ತು, ಸಂಡೂರು ಭೂಹೋರಾಟ, ಅವ್ವನ ಅಂಗನವಾಡಿ, ಕನ್ನಡ ಜಾನಪದ ತಾತ್ವಿಕ ನೆಲೆಗಳು ಪ್ರಮುಖ ಕೃತಿಗಳು


ಇದನ್ನೂ ಓದಿ: ಪುಸ್ತಕ ಪರಿಚಯ: ಕಾವ್ಯದ ಗೆರೆಯ ಮೇಲೆ ನಡೆದುಬಂದ ಪಾತ್ರಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...