Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ಕಾವ್ಯದ ಗೆರೆಯ ಮೇಲೆ ನಡೆದುಬಂದ ಪಾತ್ರಗಳು!

ಪುಸ್ತಕ ಪರಿಚಯ: ಕಾವ್ಯದ ಗೆರೆಯ ಮೇಲೆ ನಡೆದುಬಂದ ಪಾತ್ರಗಳು!

- Advertisement -
- Advertisement -

ನಾನು ಬಹಳ ವರ್ಷಗಳ ಹಿಂದೆ ಬರೆದ ಒಂದು ಕಥೆ, ಒಂದು ನಡುರಾತ್ರಿ ನನ್ನ ಮನೆ ಬಾಗಿಲನ್ನು ದಢದಢ ಬಡಿದು ನನ್ನನ್ನು ಅಲುಗಾಡಿಸಿ ಎಚ್ಚರಿಸುತ್ತದೆ ಮತ್ತು ಕೂಗುತ್ತದೆ. ’ಇದು ಮಲಗೋ ಸಮಯ ಅಲ್ಲ, ನನ್ನನ್ನು ನೀನು ಮರೆಯಲು ಸಾಧ್ಯವಿಲ್ಲ. ಇನ್ನೂ ಬರೆಯುವುದು ಬಾಕಿ ಇದೆ!’ ಆ ದನಿಯಿಂದ ಉತ್ಸುಕನಾದ ನಾನು ಕಾದಂಬರಿ ಬರೆಯುವುದಕ್ಕೆ ಕೂತೆ. ಈ ರೀತಿಯಲ್ಲಿ ನನ್ನ ಸಣ್ಣ ಕತೆಗಳು ಮತ್ತು ಕಾದಂಬರಿಗಳು ನನ್ನೊಂದಿಗೆ ಬಹಳ ಸಹಜವಾಗಿ, ಸಾವಯವ ರೀತಿಯಲ್ಲಿ ಬೆಸೆದುಕೊಳ್ಳುತ್ತವೆ ಇವು ಹರುಕಿ ಮುರಾಕಮಿ ಅವರ ಈ ಮಾತುಗಳು.

ಜ ನಾ ತೇಜಶ್ರೀ ಅವರ ’ಬೆಳ್ಳಿಮೈ ಹುಳ’ ಕತೆಗಳನ್ನು ಓದುವಾಗ ಅನುಭವಕ್ಕೆ ಬರುವುದೇ ಕತೆಗಾರ ಮತ್ತು ಕತೆಗಳ ನಡುವಿನ ಸಾವಯವ ಬಂಧ. ಯಾವ ಸೃಜನಶೀಲ ಅಭಿವ್ಯಕ್ತಿಯಲ್ಲು ಇರಬೇಕಾದ, ಇದ್ದೇ ಇರುವ ದ್ರವ್ಯ ಇದು. ಆದರೆ ಅದು ಸಹಜವೂ, ನಿಷ್ಠವೂ ಆಗಿದೆ ಎಂಬ ಅನುಭವಕ್ಕೆ ಬರುವುದು ಅವು ಎಷ್ಟು ಭಾವನಿಷ್ಠವಾಗಿವೆ ಎಂಬುದರಿಂದಲೇ ಎನ್ನಿಸುತ್ತದೆ.

ಕವಿಯಾಗಿ ಸೂಕ್ಷ್ಮವಾದ, ತೀವ್ರತೆಯ ಭಾವಲೋಕವನ್ನು ಕಟೆದ ಕವಿ ತೇಜಶ್ರೀ. ಕಥಾ ಲೋಕದಲ್ಲಿ ಅವರ ಪ್ರಯೋಗ ಹೇಗಿರಬಹುದು ಎಂಬ ಕುತೂಹಲದಿಂದ ಓದಲಾರಂಭಿಸಿದವನಿಗೆ ಪ್ರತಿಮೆ, ರೂಪಕ ಲೋಕವೂ, ಕಾವ್ಯದ ಕೋಮಲತೆಯೂ, ಮುಗ್ದತೆಯೂ, ನವಿರೂ ನಿಮಗೆ ಹಸಿರು ಬದಿಯಲ್ಲಿ ಹಾದು ಹೋಗುವಾಗ ಆಗುವ ತಂಪಿನ ಅನುಭವದಂತೆ ದಾಟುತ್ತದೆ.

ಎಂಟು ಕತೆಗಳು ವಿವರಗಳಲ್ಲಿ ಆವರಿಸದೆ, ಮನುಷ್ಯ ಲೋಕದ ಸೂಕ್ಷ್ಮಗಳನ್ನು ಕವಿತೆಯಂತೆಯೇ ಧಾವಂತವಿಲ್ಲದ ಮನೋಲೋಕದ ವ್ಯವಹಾರಗಳಂತೆ ದಾಟಿಸುತ್ತವೆ. ಇಲ್ಲಿನ ಕತೆಗಳಲ್ಲಿ ಕ್ರೌರ್ಯವೂ ಇದೆ, ಮುಗ್ಧತೆಯೂ ಇದೆ. ನೋವೂ ಇದೆ. ಎಲ್ಲವನ್ನೂ ಸೈರಿಸಿಕೊಳ್ಳುವ ನಿರ್ಲಿಪ್ತತೆಯೂ ಇದೆ.

ಎಲ್ಲಕ್ಕಿಂತ ಹೆಚ್ಚಾಗಿ ವಿಸ್ಮಯ ಉಂಟು ಮಾಡುವುದು ಪ್ರತಿ ಕತೆಯಲ್ಲೂ ಕಾಣಿಸಿಕೊಳ್ಳುವ ಶಕ್ತಿ. ಜೀವ ಲೋಕ-ಮನುಷ್ಯ ಹೊರತಾದ ಜೀವಲೋಕ ಮತ್ತು ಅದು ಮನುಷ್ಯನೊಂದಿಗೆ ಬೆರೆತ ಬಗೆಯೇ ನಮ್ಮ ಮನಸ್ಸನ್ನು ಹೆಚ್ಚು ತಟ್ಟುತ್ತದೆ.

ಬೆಳ್ಳಿಮೈ ಹುಳ

ಬೆಳ್ಳಿಮೈ ಹುಳು ಎಂಬ ಶೀರ್ಷಿಕೆಯ ಕಥೆಯಲ್ಲಿ ಬರುವ ಪುಸ್ತಕ ಹುಳು, ಕರ್ಫ್ಯೂ ಕತೆಯಲ್ಲಿ ಬರುವ ಬೆಕ್ಕು, ಕುದಿಬಂದುವಿನಲ್ಲಿರುವ ಇಲಿ, ಏರೊಪ್ಲೇನ್ ಚಿಟ್ಟೆ ಕತೆಯಲ್ಲಿರುವ ಏರೊಪ್ಲೇನ್ ಚಿಟ್ಟೆ, ಸಿಲ್ಕಿ ಎಂಬ ನಾಯಿಗಳು ಮನುಷ್ಯನನ್ನು ಇನ್ನಷ್ಟು ಮಾನವೀಯವಾಗಿಸುವ ಅಂಶಗಳಾಗಿವೆ.

ಮತ್ತೆ ಇಲ್ಲಿನ ಸ್ತ್ರೀಲೋಕ ಮನೆಯ ಯಾವುದೋ ಜೀವದ ಕಾವು ತಾಕಿದಂತೆ ಹತ್ತಿರವಾಗುತ್ತವೆ. ಆಗ್ನೆಸ್ ಇರಬಹುದು, ಅವ್ವಕ್ಕ, ಸರಸ, ಜಾನಕಿ ಎಲ್ಲರೂ ಅವಡುಗಚ್ಚಿ ಸುಮ್ಮನಿದ್ದರೂ, ಈ ಮೌನ, ಸೈರಣೆಯೊಳಗೆ ಒಂದು ಬಿಡುಗಡೆಯ ಹಂಬಲವೂ ತೀವ್ರವಾಗಿರುತ್ತದೆ ಮತ್ತು ಅದನ್ನೇ ಧ್ಯಾನಿಸುತ್ತವೆ ಕೂಡ.

ಈ ಅರ್ಥದಲ್ಲಿ ಏರೊಪ್ಲೇನ್ ಚಿಟ್ಟೆ ಕತೆ ಧ್ವನಿಸುವುದೇ ಇದೇ ಹೆಣ್ಣು ಜೀವಗಳ ಎದೆಯ ಮಾತನ್ನು ಎನ್ನಿಸದೇ ಇರದು. “ನಮಗೆ ಸ್ವಾತಂತ್ರ್ಯವಿಲ್ಲದ ಈ ಪ್ರಪಂಚದಲ್ಲಿ ನಾವು ಬದುಕಿದ್ದೇನು ಪ್ರಯೋಜನ ಹೇಳಿ? ನಮ್ಮ ಸಂತೋಷವನ್ನು ಪರಿಗಣಿಸದ ಮನುಷ್ಯನ ಜೊತೆಗೆ ನಮಗಿನ್ಯಾವ ಕೆಲಸ?” ಎಂಬ ಮಾತು ಎಲ್ಲ ಹೆಣ್ಣಿನ ಒಳಮನಸ್ಸಿನ ಕುದಿ ಎಂದು ವ್ಯಾಖ್ಯಾನಿಸಬಹುದು.

ಘೋಷಣೆಯ ಧ್ವನಿಯ ಸ್ತ್ರೀವಾದಿ ಚಿಂತನೆಯ ಚೌಕಟ್ಟಿನಲ್ಲಿ ನೋಡುವ ಒಣ ಬೌದ್ಧಿಕತೆಯ ಭಾರವಿಲ್ಲದ, ಮನುಷ್ಯ ಸಹಜ, ಮುಕ್ತತೆಯ ಧ್ಯಾನವನ್ನು ಓದುಗನಿಗೆ ದಾಟಿಸುತ್ತವೆ.

ಕವಿಯೊಬ್ಬರ ಕತೆಗಳಲ್ಲಿ ನಿರೀಕ್ಷಿಸಲಾಗುವ ಭಾವಲೋಕ ಇಲ್ಲಿ ದಟ್ಟವಾಗಿದೆ. ಆದರೆ ಅಷ್ಟೇ ತೀವ್ರವಾದ ಮನೋಲೋಕದ ಹೊಯ್ದಾಟಗಳು ತಟ್ಟುತ್ತವೆ. ತಾಜಾ ಎನಿಸುವ ಈ ಓದಿನ ಅನುಭವ ಬೆಳ್ಳಿ ಮೈ ಹುಳು ನೋಡಿದ ಪುಳಕ, ರೋಮಾಂಚನದಂತೇ ಇರಬಹುದು

ಕಥೆಗಾರನೊಬ್ಬ ಕಥೆ ಓದೋಣ!

ಜಗತ್ತಿಗೆ ವಿಶಿಷ್ಟ ಕಥಾ ಜಗತ್ತನ್ನು ಕೊಟ್ಟ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಸ್. ತನ್ನ ಅಜ್ಜಿ ಹೇಳುತ್ತಿದ್ದ ಕತೆಗಳನ್ನು ಕೇಳುತ್ತಾ ನಾನೊಬ್ಬ ಕತೆಗಾರನಾದೆ ಎಂದು ಹೇಳಿಕೊಂಡಿದ್ದ ಮಾರ್ಕೆಸ್ ಎಂದಿಗೂ ಸಂಭ್ರಮಿಸು ವಂತಹ ಕಾದಂಬರಿ ಗಳನ್ನು ಕೊಟ್ಟರು. ಮಾಂತ್ರಿಕ ವಾಸ್ತವತೆಯನ್ನು ತೆರೆದಿಟ್ಟವರು. ಕನ್ನಡಕ್ಕೆ ಅವರ ಕೆಲವು ಕಾದಂಬರಿಗಳು ಕತೆಗಳು ಅನುವಾದಗೊಂಡಿವೆ.

ಬದುಕಿರುವುದೇ ಕಥೆ ಹೇಳಲಿಕ್ಕೆ

ಈಗ ಸರದಿ, ಮಾರ್ಕೆಸ್ ಆತ್ಮಕತೆಯದ್ದು. ವರದಿಗಾರನಾಗಿ ವೃತ್ತಿ ಆರಂಭಿಸಿದ್ದ ಮಾರ್ಕೆಸ್ ವೃತ್ತಿ ಅನುಭವ ಮತ್ತು ಬರವಣಿಗೆಯ ಮೇಲಿನ ಪ್ರೀತಿಗಳ ಮೂಲಕ ಕಂಡುಕೊಂಡ ಹೊಸ ಲೋಕ ಮತ್ತು ಅನುಭೂತಿಯನ್ನು ಓದುಗರಿಗೂ ಹಂಚಿದ ಕೃತಿ ಅದು. ಅಂತಹ ಮಾರ್ಕೆಸ್ ಬದುಕನ್ನು ಅರಿಯುವುದು ನಿಜಕ್ಕೂ ಅತೀವ ಕುತೂಹಲದ ಸಂಗತಿ.

ಕಥೆಯನ್ನು ಹೇಳುವುದಕ್ಕೆಂದೇ ಬದುಕಿದೆ ಎಂದು ಹೇಳಿಕೊಂಡು ಆತ್ಮಕತೆಯನ್ನು ಓದುಗರ ಕೈಗೆ ಅವರು ಇತ್ತಿದ್ದರು. ಅದೇ ಕೃತಿ ಈಗ ’ಬದುಕಿರುವುದೇ ಕಥೆ ಹೇಳಲಿಕ್ಕೆ’ ಎಂಬ ಹೆಸರಿನಲ್ಲಿ ಬಂದಿದೆ.

ಈ ಕೃತಿಯಲ್ಲಿ, ಮನೆಯನ್ನು ತಾನು ಬಾಲ್ಯದಲ್ಲಿ ತೊರೆದುದ್ದನ್ನೂ, ಅದರಲ್ಲಿಯೇ ತನ್ನ ಕಲ್ಪನೆಯ ಮಕಾಂಡೋ ಅಡಗಿದ್ದು, ಅದು ತಮ್ಮ ಭವಿಷ್ಯದ ಕಥನ ಸಾಹಿತ್ಯಕ್ಕೆ ಅನುಭವದ ಅಡಿಗಲ್ಲಾಗುವುದನ್ನು ಕಾಣಬಹುದಾಗಿದೆ. ಇಲ್ಲಿ ಮಾರ್ಕೆಸ್‌ರನ್ನು ಅದ್ಭುತ ಕತೆಗಾರರನನ್ನಾಗಿ ಪರಿವರ್ತಿಸಿದ ಶಕ್ತಿಗಳೂ ಇವೆ. ಟಿ ಎಸ್ ರಘುನಾಥ್ ಈ ಬೃಹತ್ ಆತ್ಮಕತೆಯನ್ನು ಕನ್ನಡಕ್ಕೆ ತಂದಿದ್ದಾರೆ. ಸೃಷ್ಟಿ ಪ್ರಕಾಶನ ಕೃತಿಯನ್ನು ಹೊರತಂದಿದೆ.

ಸಾಹಿತ್ಯಲೋಕವನ್ನು ಕಾಡುವ ‘ಪ್ಲೇಗ್

ಪ್ಲೇಗ್

ಅಸಂಗತತೆಯನ್ನು ಈತನ ಹಾಗೆ ಕಟ್ಟಿಕೊಟ್ಟ ಮತ್ತೊಬ್ಬ ಬರಹಗಾರನಿರಬಹುದೆ ಎಂದು ಬೆರಗುಹುಟ್ಟಿಸುತ್ತಾನೆ ಕಮೂ. ಈತನ ’ಪ್ಲೇಗ್ ಕಾದಂಬರಿ ಬಹು ಮನ್ನಣೆ ಪಡೆದ ಕೃತಿ. ಸ್ವತಃ ಕಮೂ, “ಪ್ಲೇಗ್ ಎನ್ನುವ ರೂಪಕದ ಮೂಲಕ, ನಾವೆಲ್ಲರೂ ಅನುಭವಿಸಿದ ಉಸಿರು ಕಟ್ಟಿಸುವ ಭಾವಸ್ಥಿತಿಯನ್ನು, ನಾವು ಬದುಕಿದ್ದ ಭಯ ಹಾಗೂ ದಿಕ್ಕೆಟ್ಟ ವಾತಾವರಣವನ್ನು ಕಟ್ಟಿಕೊಡಬೇಕು ಎನ್ನುವುದು ನನ್ನ ಅಪೇಕ್ಷೆ. ಅದರ ಜೊತೆಜೊತೆಯಲ್ಲಿಯೇ ನನ್ನ ಈ ವ್ಯಾಖ್ಯಾನವನ್ನು ಮನುಷ್ಯ ಜೀವನದ ಸಹಜ ಸ್ಥಿತಿಗೂ ವಿಸ್ತರಿಸಲು ನಾನು ಇಷ್ಟಪಡುತ್ತೇನೆ. ಈ ಬರವಣಿಗೆಯು ಯುದ್ಧ ಕಾಲದಲ್ಲಿ ಚಿಂತನೆ, ಮೌನ ಮತ್ತು ನೈತಿಕ ಯಾತನೆಗಳನ್ನು ಹಂಚಿಕೊಳ್ಳುವ ಎಲ್ಲ ಜನರ ಪಡಿಪಾಟಲುಗಳಿಗೆ ಒಡ್ಡಿದ ಪ್ರತಿಮೆಯಾಗಿದೆ” ಎನ್ನುತ್ತಾನೆ.

ಒಂದು ಕಾಲದಲ್ಲಿ ವಿಶ್ವವನ್ನೇ ಭೀತಗೊಳಿಸಿದ ಮಹಾ ಸಾಂಕ್ರಾಮಿಕ ರೋಗವನ್ನು ರೂಪಕವಾಗಿಸುತ್ತಾ, ಮನುಷ್ಯ ಮನುಷ್ಯನ ನಡುವಿನ ಸಂಬಂಧ, ಬದುಕಿನ ಬಗ್ಗೆ ಈ ಕಾದಂಬರಿಯಲ್ಲಿ ಬಿಚ್ಚಿಡುತ್ತಾನೆ. ತೀವ್ರವಾಗಿ ಅಲುಗಾಡಿಸಿಡುವ ಚಿತ್ರಣ ಪ್ಲೇಗ್‌ನ ಶ್ರೇಷ್ಠತೆಯನ್ನು ಎತ್ತಿಹಿಡಿಯುತ್ತದೆ.

ಪಿ ಲಂಕೇಶ್ ಈ ಕೃತಿಯ ಬಗ್ಗೆ ಹೇಳುತ್ತಾ, ’ದೇವರ ಬಗ್ಗೆ ಅತಿ ಗೌರವವಿಲ್ಲದ, ಮನುಷ್ಯ ಬದುಕಿನಿಂದ ಅತಿ ಅಪೇಕ್ಷೆ ಇಲ್ಲದ, ಸಾವಿನ ಬಗ್ಗೆ ಆತುರವಿಲ್ಲದ, ಕರುಣೆ ಪ್ರೀತಿ ತುಂಬಿದ ಡಾಕ್ಟರ್ ಪಾತ್ರವನ್ನು ಸೃಷ್ಟಿಸುವುದರ ಮೂಲಕ, ಆಲ್ಜೀರಿಯಾದ ಆ ಪ್ಲೇಗ್ ನಗರದ ನರನಾಡಿಗಳನ್ನು ಬಿಡದೆ ವರ್ಣಿಸುವ ಮೂಲಕ, ಕಾಮು ನಾವು ಜೀವನ ನಡೆಸಬೇಕಾದ ಶೈಲಿಯನ್ನು ದಾಖಲೆ ಮಾಡಿದ್ದಾನೆ” ಎನ್ನುತ್ತಾರೆ. ಖ್ಯಾತ ವಿಮರ್ಶಕರು, ಕನ್ನಡಕ್ಕೆ ಮಹತ್ವದ ಕೃತಿಗಳನ್ನು ಅನುವಾದಿಸಿದ ಎಚ್ ಎಸ್ ರಾಘವೇಂದ್ರ ರಾವ್ ಈ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಮೈಸೂರಿನ ಚಿಂತನ ಚಿತ್ತಾರ ಈ ಕೃತಿಯನ್ನು ಪ್ರಕಟಿಸಿದೆ.

ಅಂಡರ್ ಕವರ್ (ಮೈ ಜರ್ನಿ ಇಂಟು ದ ಡಾರ್ಕ್‌ನೆಸ್ ಆಫ್ ಹಿಂದುತ್ವ) – ಆಶಿಶ್ ಕೇತನ್

ಅಂಡರ್ ಕವರ್

ಪತ್ರಕರ್ತ ಆಶಿಶ್ ಕೇತನ್ ಹಿಂದುತ್ವ ಕಾರ್ಯಕರ್ತರಿಂದ ಸ್ವತಃ ಬೆದರಿಕೆಗೆ ಒಳಗಾದವರು. ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಹಿಂಸಾಚಾರದ ಕಥೆಗಳನ್ನು ಪ್ರತ್ಯಕ್ಷವಾಗಿ ಕೇಳಿ ದಾಖಲಿಸಲು, 2004 ಮತ್ತು 2007ನೇ ಇಸವಿಯಲ್ಲಿ ಹಿಂದುತ್ವ ಕಾರ್ಯಕರ್ತನ ಮಾರುವೇಷದಲ್ಲಿ ಗುಜರಾತ್‌ಗೆ ತೆರಳಿ ಹಲವರ ಸಂದರ್ಶನ ಮಾಡಿ, ಬಚ್ಚಿಟ್ಟ ಕ್ಯಾಮರಾ ಮೂಲಕ ರೆಕಾರ್ಡ್ ಮಾಡಿ ಹಿಂಸೆಯ ಹಿಂದಿನ ವಾಸ್ತವತೆಯನ್ನು ದಾಖಲಿಸಿದರು. ಧರ್ಮದ ಹೆಸರಿನಲ್ಲಿ ನಡೆದ ಹಿಂಸೆ ಮತ್ತು ದೌರ್ಜನ್ಯದ ವಾಸ್ತವಗಳನ್ನು ಹಿಡಿದಿಡುತ್ತವೆ ಈ ಪುಸ್ತಕದ ಅಧ್ಯಾಯಗಳು.

ಅಂದಿನ ಗುಜರಾತ್ ಸರ್ಕಾರದ ಪ್ರಮುಖ ವ್ಯಕ್ತಿಗಳು ಯುವತಿಯೊಬ್ಬಳನ್ನು ಹಿಂಬಾಲಿಸಿ ಆಕೆಯ ಫೋನ್ ಕದ್ದಾಲಿಸಿದ ಕಥೆ, ಗುಲ್ಬರ್ಗ್ ಬೆಸ್ಟ್ ಬೇಕರಿ ನರಮೇಧ, ಇಂತಹ ಪ್ರಮುಖ ಘಟನೆಗಳ ಹಿಂದೆ ಕೆಲಸ ಮಾಡಿದವರ ಬಗ್ಗೆ ರಹಸ್ಯ ತನಿಖೆ ಮಾಡಿದವರು ಆಶಿಶ್. ಇವರ ತನಿಖಾ ಬರಹಗಳು ಮಾಯಾ ಕೊಡ್ನಾನಿ ಅಂತಹವರಿಗೆ ಶಿಕ್ಷೆ ನೀಡಲು ಸಹಕಾರಿಯಾಗಿತ್ತು.

ಪತ್ರಿಕೋದ್ಯಮ ಮಾಡಬೇಕಾದ ಕೆಲಸವನ್ನು ತಿಳಿಯಲು ಎಲ್ಲರೂ ಈ ಪುಸ್ತಕವನ್ನು ಅಗತ್ಯವಾಗಿ ಓದಬೇಕಿದೆ.

ಕಾನ್ಸೀಕ್ವೆನ್ಸಸ್ ಆಫ್ ಕ್ಯಾಪಿಟಲಿಸಂ ನೋಮ್ ಚಾಮ್‌ಸ್ಕಿ ಮತ್ತು ಮರ್‍ವ್ ವಾಟರ್‌ಸ್ಟೋನ್

ನೋಮ್ ಚಾಮ್‌ಸ್ಕಿ ಮತ್ತು ಮರ್‍ವ್ ವಾಟರ್‌ಸ್ಟೋನ್

ಅಮೆರಿಕ ಯುದ್ಧ ನೀತಿಗಳನ್ನು ಹಲವು ದಶಕಗಳಿಂದ ವಿರೋಧಿಸಿಕೊಂಡು ಬಂದಿರುವ ಚಿಂತಕ ನೋಮ್ ಚಾಮ್‌ಸ್ಕಿ. ಪ್ರಭುತ್ವಗಳು ತಮ್ಮ ನೀತಿಗಳನ್ನು ಸಮರ್ಥಿಸಿಕೊಳ್ಳಲು ಮತ್ತು ಅದರ ವ್ಯಾಪಕ ಪ್ರಚಾರಕ್ಕಾಗಿ ಹೇಗೆ ಸಮ್ಮತಿಯನ್ನು ಉತ್ಪಾದಿಸುತ್ತವೆ ಎಂಬುದನ್ನು ತಮ್ಮ ಸಂಶೋಧನೆ ಮತ್ತು ಅಧ್ಯಯನದ ಮೂಲಕ ವಿವರಿಸಿದ ಪುಸ್ತಕ ’ಮ್ಯಾನುಫ್ಯಾಕ್ಚರಿಂಗ್ ಕನ್ಸೆಂಟ್. ಎಡ್ವರ್ಡ್ ಎಸ್ ಹರ್ಮನ್ ಅವರೊಂದಿಗೆ ಕೂಡಿ ಬರೆದ ಈ ಪುಸ್ತಕ ಇಂದಿಗೂ ಮಾಸ್ ಮೀಡಿಯಾಗಳನ್ನು ಅರ್ಥ ಮಾಡಿಕೊಳ್ಳಲು ಸಹಕಾರಿ. ಭಾಷಾತಜ್ಞರಾಗಿ ಕೂಡ ನೋಮ್ ಅವರ ಹಲವು ಚಿಂತನೆಗಳು ಜತ್ತಿನಾದ್ಯಂತ ಹೊಸ ತಿಳಿವಳಿಕೆಗೆ ಸಹಕರಿಸಿವೆ.

ಈಗ ಅರಿಜೋನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮರ್‍ವ್ ವಾಟರ್‌ಸ್ಟೋನ್ ಮತ್ತು ನೋಮ್ ಚಾಮ್‌ಸ್ಕಿ ಕೂಡಿ ಅದೇ ವಿಶ್ವವಿದ್ಯಾಲಯಲ್ಲಿ ನಡೆಸುವ ಒಂದು ಕೋರ್ಸ್‌ನಲ್ಲಿ ನೀಡಿದ ಉಪನ್ಯಾಸಗಳ ಗುಚ್ಛವೇ ’ಕಾನ್ಸೀಕ್ವೆನ್ಸಸ್ ಆಫ್ ಕ್ಯಾಪಿಟಲಿಸಂ’. ಕೋವಿಡ್-19 ಸದ್ಯದ ಬಂಡವಾಳಶಾಹಿ ಜಗತ್ತಿನ ಕ್ರೌರ್ಯ ಮತ್ತು ನ್ಯೂನತೆಗಳಿಗೆ ಕನ್ನಡಿ ಹಿಡಿಯಿತು. ಹುಳುಕುಗಳನ್ನು ಎತ್ತಿ ತೋರಿಸಿತು. ಇದು ಬಿಕ್ಕಟ್ಟು ಎಷ್ಟೋ ಅಷ್ಟೇ ಅವಕಾಶವನ್ನು ಸೃಷ್ಟಿಸಿದ್ದು, ಜನರ ಮುಂದಿನ ಕೆಲಸಗಳು ಬದಲಾವಣೆಗೆ ಮುನ್ನುಡಿ ಆಗಬಲ್ಲುವೇ ಎಂಬುದನ್ನು ಪ್ರಸಕ್ತ ಪುಸ್ತಕ ಶೋಧಿಸುತ್ತದೆ. ರಾಜಕಾರಣ ಜನಜೀವನದ ಮೇಲೆ ಎಷ್ಟು ಪ್ರಭಾವ ಬೀರುತ್ತದೆ? ಅದು ಜನರ ’ಸಾಮಾನ್ಯ ಜ್ಞಾನವನ್ನು’ ಎಷ್ಟು ಪ್ರಭಾವಿಸುತ್ತದೆ ಮತ್ತು ಬದಲಿಸುತ್ತದೆ ಎಂಬುದರಿಂದ ಪ್ರಾರಂಭವಾಗುವ ಈ ಪುಸ್ತಕ ನಿಯೋಲಿಬರಲಿಸಂನಿಂದ ಆದ ಅಪಾಯಗಳು, ಚಾಲ್ತಿಯಲ್ಲಿರುವ ಪ್ರತಿರೋಧಗಳು, ಸಾಮಾಜಿಕ ಬದಲಾವಣೆಗಳು ಮುಂತಾದ ವಿಷಯಗಳನ್ನು ಚರ್ಚಿಸುತ್ತದೆ.


ಇದನ್ನೂ ಓದಿ: ಹಿಂದು ರಾಷ್ಟ್ರವೆಂಬುದೇ ಭ್ರಮೆ; ಆಕಾರ್ ಪಟೇಲ್ ಅವರ ’ಅವರ್ ಹಿಂದು ರಾಷ್ಟ್ರ’ ಪುಸ್ತಕ ಪರಿಚಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...