HomeಮುಖಪುಟExplainer: ಹಲಾಲ್ ಹಾಗೆಂದರೇನು?

Explainer: ಹಲಾಲ್ ಹಾಗೆಂದರೇನು?

ವಾಸ್ತವದಲ್ಲಿ ಪ್ರಾಣಿಯನ್ನು ಕೊಯ್ಯುವ ಇಸ್ಲಾಮೀ ವಿಧಾನದ ಹೆಸರು ದ್ಸಬಹ್ ಎಂದಾಗಿದೆ. ಹಾಗಾದರೆ ಹಲಾಲ್ ಎಂದರೇನು? ಇಲ್ಲಿ ಓದಿ

- Advertisement -
- Advertisement -

ಪ್ರಸ್ತುತ ಭಾರತದಲ್ಲಿ ಮುಸ್ಲಿಮರ ವಿರುದ್ಧದ ಅಸಹನೆಯ ಭಾಗವಾಗಿ ಮುಸ್ಲಿಮರು ಮಾಂಸಾಹಾರಕ್ಕಾಗಿ ಪ್ರಾಣಿಯನ್ನು ಕೊಯ್ಯುವಾಗ ಅನುಸರಿಸುವ ವಿಧಿವಿಧಾನವನ್ನೂ ಕಟುವಾಗಿ ವಿರೋಧಿಸುವ ಒಂದು ಟ್ರೆಂಡ್ ಚಲಾವಣೆಯಲ್ಲಿದೆ. ಭಾರತದಲ್ಲಿ ಕೇರಳ ರಾಜ್ಯವನ್ನು ಹೆಚ್ಚು ಶಿಕ್ಷಿತರ ನಾಡೆಂದು ಪರಿಗಣಿಸಲಾಗುತ್ತದೆ. ಅಲ್ಲಿ ಒಂದು ಮಟ್ಟಿಗೆ ನೆಲೆಸಿರುವ ಕೂಡು ಸಂಸ್ಕೃತಿಯ ಕಾರಣದಿಂದಲೂ, ಕೋಮುವಾದಿ ರಾಜಕೀಯದ ಬೆಳೆ ತೆಗೆಯಲು ಬಲಪಂಥೀಯ ಪ್ರತಿಗಾಮಿ ಶಕ್ತಿಗಳಿಗೆ ಸಾಧ್ಯವಾಗುತ್ತಿಲ್ಲ.

ಕೇರಳದಲ್ಲಿ ಇಂದಿಗೂ ಬ್ರಾಹ್ಮಣೇತರ ಹಿಂದೂಗಳಲ್ಲಿ ಬಹುತೇಕರು ದನದ ಮಾಂಸವನ್ನು ಸೇವಿಸುತ್ತಾರೆ. ಅಲ್ಲಿ ಅದನ್ನು ಕಡಿಮೆ ಬೆಲೆಗೆ ಲಭ್ಯವಿರುವ ಪೌಷ್ಟಿಕಾಂಶದ ಆಹಾರ ಎಂದಷ್ಟೇ ನೋಡಲಾಗುತ್ತದೆ. ಅಲ್ಲಿ ಈವರೆಗೂ ಗೋ ಪಾಲಿಟಿಕ್ಸ್‌ಗೆ ದೊಡ್ಡ ಮನ್ನಣೆ ಸಿಕ್ಕಿಲ್ಲ. ಅಂತಹ ಕೇರಳದಲ್ಲೂ ಇಂದು ಹಲಾಲ್ ಮಾಂಸದ ಹೋಟೆಲ್‌ಗಳನ್ನು ಬಹಿಷ್ಕರಿಸುವ ಹುನ್ನಾರಕ್ಕೆ ಬಲಪಂಥೀಯ ಶಕ್ತಿಗಳು ಕೈ ಹಾಕಿವೆ. ಹಲಾಲ್ ಮಾಂಸವನ್ನು ಬಹಿಷ್ಕರಿಸಬೇಕು ಎನ್ನುವ ಬಹುತೇಕರಿಗೆ ಹಲಾಲ್ ಎಂಬ ಶಬ್ದದ ಡೆಫಿನಿಶನ್ ಕೂಡಾ ಗೊತ್ತಿಲ್ಲ. ಇಲ್ಲಿ, ಹಲಾಲ್ ಎಂದರೇನು ಎಂದು ಸಂಕ್ಷಿಪ್ತವಾಗಿ ವಿವರಿಸುತ್ತೇನೆ.

ಹಲಾಲ್ ಮತ್ತು ಹರಾಂ ಎನ್ನುವುದು ಇಸ್ಲಾಮೀ ಕರ್ಮಶಾಸ್ತ್ರದಲ್ಲಿ ಬಹಳ ಮಾನ್ಯತೆಯಿರುವ ಪದಗಳು. ಹಲಾಲ್ ಎಂದರೆ ಸಮ್ಮತ ಎಂದೂ, ಹರಾಂ ಎಂದರೆ ನಿಷಿದ್ಧವೆಂದೂ ಬಹಳ ಸರಳವಾದ ಅರ್ಥವಿದೆ. ಆದರೆ ಇಂದು ನಮ್ಮ ದೇಶದಲ್ಲಿ ಕೇವಲ ಮಾಂಸಕ್ಕಾಗಿ ಪ್ರಾಣಿಯನ್ನು ಕೊಯ್ಯುವ ವಿಧಾನವೊಂದನ್ನಷ್ಟೇ ಹಲಾಲ್ ಎಂದು ಬಹುತೇಕರು ಬಗೆದಿದ್ದಾರೆ. ವಾಸ್ತವದಲ್ಲಿ ಪ್ರಾಣಿಯನ್ನು ಕೊಯ್ಯುವ ಇಸ್ಲಾಮೀ ವಿಧಾನದ ಹೆಸರು ದ್ಸಬಹ್ ಎಂದಾಗಿದೆ. ಮುಸ್ಲಿಮರಿಗೆ ಹಲಾಲ್ ಮತ್ತು ಹರಾಂ ಆದ ನೂರಾರು ವಿಚಾರಗಳನ್ನು ಖುರ್‌ಆನ್ ಮತ್ತು ಪ್ರವಾದಿ ವಚನಗಳಲ್ಲಿ ಕಲಿಸಲಾಗಿದೆ.

ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸುತ್ತೇನೆ

ಇಸ್ಲಾಮಿನ ಹರಾಂ ಪದ್ಧತಿ ಎಷ್ಟು ಸರಳವೆಂದು ಅರ್ಥೈಸಲು ಬಸವಣ್ಣರ ಪ್ರಸಿದ್ಧ ವಚನವೊಂದನ್ನು ನಾವಿಲ್ಲಿ ನೋಡಬಹುದು. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ… ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ”. ಬಸವಣ್ಣ ಬೋಧಿಸಿದ ಇವೆಲ್ಲವೂ ಇಸ್ಲಾಮಿನಲ್ಲಿ ಅಕ್ಷರಶಃ ಹಾಗೆಯೇ ಇದೆ. ಆದರೆ ಇಸ್ಲಾಮಿನಲ್ಲಿ ಕದಿಯುವುದು, ಕೊಲ್ಲುವುದು, ಸುಳ್ಳು ಹೇಳುವುದು, ತನ್ನ ತಾನು ದೊಡ್ಡವನೆಂದು ಅಹಂಕಾರ ಮೆರೆಯುವುದು, ಪರರನ್ನು ನಿಂದಿಸುವುದು ಇವಿಷ್ಟು ಮಾತ್ರವಲ್ಲದೇ ಇನ್ನಷ್ಟು ಹರಾಂಗಳಿವೆ. ವ್ಯಭಿಚಾರ, ಮದ್ಯಪಾನ, ವಂಚನೆ, ಇತರರ ಸ್ವತ್ತನ್ನು ಲಪಟಾಯಿಸುವುದು, ಪರದೂಷಣೆಗೈಯುವುದು, ಬಡ್ಡಿ, ಸರಕುಗಳನ್ನು ಶೇಖರಿಸಿಟ್ಟು ಕೃತಕ ಅಭಾವ ಸೃಷ್ಟಿಸಿ ಹೆಚ್ಚುವರಿ ಲಾಭ ಪಡೆಯುವುದು, ತೂಕದಲ್ಲಿ ವಂಚನೆಗೈಯುವುದು, ದುಡಿದವನ ವೇತನ ನೀಡದೇ ಸತಾಯಿಸುವುದು, ಜನರ ಹಕ್ಕುಗಳನ್ನು ಕಸಿಯುವುದು, ಮನುಷ್ಯರಲ್ಲಿ ಮೇಲು ಕೀಳೆಂದು ತಾರತಮ್ಯ ಮಾಡುವುದು, ಸತ್ಯವನ್ನು ಅಡಗಿಸಿಡುವುದು ಇವೆಲ್ಲವೂ ಹರಾಂ ಅರ್ಥಾತ್ ನಿಷಿದ್ಧ ಕಾರ್ಯಗಳು ಮಾತ್ರವಲ್ಲದೇ ಶಿಕ್ಷಾರ್ಹ ಅಪರಾಧವೂ ಹೌದು.

ಒಂದು ಪ್ರವಾದಿ ವಚನ ಇಂತಿದೆ. “ಓರ್ವ ಮನುಷ್ಯ ಸೇವಿಸುವ ಆಹಾರದಲ್ಲಿ ಅತ್ಯಂತ ಶ್ರೇಷ್ಠ ಆಹಾರ ಸ್ವಯಂ ದುಡಿದ ಆಹಾರ..” ಎಂದು. ಇಷ್ಟಕ್ಕೇ ಮುಗಿಯುವುದಿಲ್ಲ. ಮನುಷ್ಯನೊಬ್ಬ ತಾನು ತಿನ್ನುವ ಆಹಾರ ನ್ಯಾಯಯುತವಾದ ಮಾರ್ಗದಲ್ಲಿ ಸಂಪಾದಿಸಿದ್ದರೆ ಅದು ಮಾತ್ರ ಆತನಿಗೆ ಹಲಾಲ್. ಇಸ್ಲಾಮ್ ಈ ವಿಚಾರದಲ್ಲಿ ಎಷ್ಟು ಕಠಿಣವಾಗಿದೆಯೆಂದರೆ ನೀವು ನಿಮ್ಮ ಮನೆಯ ಸಾಕುಪ್ರಾಣಿಗೆ ತಿನ್ನಿಸುವ ಆಹಾರವೂ ಕೂಡಾ ನ್ಯಾಯಯುತ ಸಂಪಾದನೆಯಿಂದ ಪಡೆದಿರಬೇಕು. (ಅವಾಗಿಯೇ ಸ್ವಯಂ ಮೇಯುವಾಗ ಇದು ಅನ್ವಯವಾಗುವುದಿಲ್ಲ).

ಇಸ್ಲಾಮ್ ಆರಂಭ ಕಾಲದಲ್ಲಿ ಭಾರತದಲ್ಲಿ ವೇಗವಾಗಿ ಪಸರಿಸಲು ಅತೀ ಮುಖ್ಯ ಕಾರಣ ಇಸ್ಲಾಮಿನ ನ್ಯಾಯ ಪದ್ಧತಿಯಾಗಿದೆ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಸಾವಿರದ ನಾಲ್ಕುನೂರು ವರ್ಷಗಳ ಹಿಂದೆ ಇಸ್ಲಾಮೀ ಧರ್ಮ ಪ್ರಚಾರಕರಾದ ಮಾಲಿಕ್ ಬಿನ್ ದೀನಾರ್ ಎಂಬವರು ಮೊಟ್ಟಮೊದಲು ಇಸ್ಲಾಮಿನ ಸಂದೇಶದೊಂದಿಗೆ ಕೇರಳದ ತ್ರಿಶ್ಯೂರ್ ಜಿಲ್ಲೆಯ ಕಡಲತೀರಕ್ಕೆ ಆಗಮಿಸಿದರು. ಆಗ ಅಸ್ಪೃಶ್ಯತೆ ಎಂಬುವುದು ಅತೀ ಸಾಮಾನ್ಯವಾಗಿತ್ತು. ಇಸ್ಲಾಮೀ ಧರ್ಮಪ್ರಚಾರಕರ ಸ್ವಭಾವವು ಶೋಷಿತ ಸಮುದಾಯಗಳನ್ನು ಬಹುವಾಗಿ ಸೆಳೆದಿತ್ತು. ಒಮ್ಮೆ ಮಾಲಿಕ್ ಬಿನ್ ದೀನಾರ್ ಮತ್ತು ಸಂಗಡಿಗರ ಬಳಿಗೆ ಶೋಷಿತ ಸಮುದಾಯದ ಕೂಲಿ ಕಾರ್ಮಿಕನೋರ್ವ ಒಂದು ಎಳನೀರಿನೊಂದಿಗೆ ಬಂದು “ಇದು ನಿಮಗೆ ಉಡುಗೊರೆಯಾಗಿ ನಾನು ತಂದಿರುವೆ. ಇದನ್ನು ನೀವು ಸ್ವೀಕರಿಸಬೇಕು” ಎನ್ನುತ್ತಾನೆ. ಆಗ ಮಾಲಿಕ್ ಬಿನ್ ದೀನಾರ್ ಆತನನ್ನು ವಿಚಾರಿಸುತ್ತಾರೆ “ಇದನ್ನು ನೀನು ಎಲ್ಲಿಂದ ತಂದಿರುವೆ..?”

“ನಾನು ದುಡಿಯುವ ತೋಟದಿಂದ..”

“ತೋಟದ ಮಾಲೀಕನ ಅನುಮತಿ ಪಡೆದಿರುವೆಯಾ..?”

“ಅನುಮತಿ ಯಾಕೆ..?”

“ಯಾರದೇ ಸ್ವತ್ತನ್ನು ಅವರ ಅನುಮತಿಯ ಹೊರತಾಗಿ ಪಡೆಯುವುದು ನಮಗೆ ನಿಷಿದ್ಧ (ಹರಾಂ)”.
ಆತ ಆ ಎಳನೀರನ್ನು ಹಿಡ್ಕೊಂಡು ಓಡೋಡಿ ಹೋಗಿ ತನ್ನ ತೋಟದ ಮಾಲೀಕನ ಅನುಮತಿ ಪಡಕೊಂಡು ಬಂದು “ಈಗಲಾದರೂ ಸ್ವೀಕರಿಸಿ” ಎನ್ನುತ್ತಾನೆ.

“ಸ್ವೀಕರಿಸುತ್ತೇವೆ.. ಆದರೆ ಇನ್ನೂ ಒಂದು ಷರತ್ತಿದೆ. ಇದನ್ನು ನಾವು ಒಡೆದು ಎಲ್ಲರೂ ಹಂಚಿ ಕುಡಿಯೋಣ. ಆದರೆ ಮೊದಲು ನೀನಿದನ್ನು ನಿನ್ನ ತುಟಿಗೆ ತಾಗಿಸಿ ಕುಡಿಯಬೇಕು. ಆ ಬಳಿಕ ನಾವೆಲ್ಲರೂ ತುಟಿಗೆ ತಾಗಿಸಿ ಕುಡಿಯುತ್ತೇವೆ”.

“ಅರೆ.. ನಾನು ತುಟಿ ತಾಗಿಸಿದ್ದನ್ನು ನೀವು ಕುಡಿಯುವುದೇ..?”

“ಹೌದು..”

“ನಾನು ಕೆಳಜಾತಿಯವನಲ್ಲವೇ..?”

“ಈ ಮೇಲುಕೀಳನ್ನು ತೊಲಗಿಸಲೆಂದೇ ನಾವು ಬಂದಿರುವುದು..”

ಕೊನೆಗೆ ಆತ ತುಟಿ ತಾಗಿಸಿ ಕುಡಿದ ಬಳಿಕ ಎಲ್ಲರೂ ತುಟಿ ತಾಗಿಸಿ ಸ್ವಲ್ಪ ಸ್ವಲ್ಪ ಕುಡಿಯುತ್ತಾರೆ. ಈ ಘಟನೆಯಿಂದ ಆನಂದತುಂದಿಲನಾದ ಆತ ಇಸ್ಲಾಮ್ ಧರ್ಮ ಸ್ವೀಕರಿಸುತ್ತಾನೆ.

ಇನ್ನು ಮುಸ್ಲಿಮರಿಗೆ ಹಲಾಲ್ ಮತ್ತು ಹರಾಂಗಳು ಕೆಲವು ಪ್ರತಿಕೂಲ ಸಂದರ್ಭಗಳಲ್ಲಿ ಬದಲಾಗುತ್ತವೆ. ಮುಸ್ಲಿಮರಿಗೆ ಹಂದಿ ಮಾಂಸ ಮತ್ತು ಮದ್ಯ ಹರಾಂ. ಆದರೆ ತಿನ್ನಲು ಹಂದಿ ಮಾಂಸ ಮತ್ತು ಕುಡಿಯಲು ಮದ್ಯದ ಹೊರತಾಗಿ ಏನೂ ಇಲ್ಲದೇ ಹಸಿವಿನಿಂದ ಪ್ರಾಣ ಹೋಗುವ ಸಂದರ್ಭವಿದ್ದರೆ ಹಂದಿ ಮಾಂಸ ಮತ್ತು ಮದ್ಯ ಕೂಡಾ ಹಲಾಲ್ ಆಗುತ್ತದೆ.

ಇಸ್ಲಾಮಿನ ಪೂರ್ವಿಕ ಮಹಾತ್ಮರು ಹಲಾಲ್ ಆದ ಆಹಾರದ ಬಗ್ಗೆ ಅದೆಷ್ಟು ಸೂಕ್ಷ್ಮತೆ ವಹಿಸುತ್ತಿದ್ದರೆಂದರೆ ಯಾವುದಾದರೂ ಊರಲ್ಲಿ ಮಾಂಸದ ಪ್ರಾಣಿಯೊಂದು ಕಳವಾಗಿದೆಯೆಂಬ ಸುದ್ದಿ ಸಿಕ್ಕರೆ ಮುಂದೆ ಅದು ಅದರ ಮಾಲೀಕನ ಕೈ ಸೇರಿದ್ದು ಖಚಿತವಾಗುವವರೆಗೆ ಅವರು ಯಾವುದೇ ಮಾಂಸವನ್ನು ಸೇವಿಸುತ್ತಿರಲಿಲ್ಲ. ಕೆಲವು ಮಹಾತ್ಮರಂತೂ ಅಂತಹ ಕಳವಿನ ಘಟನೆ ಸಂಭವಿಸಿದಂದಿನಿಂದ ಜೀವನಪೂರ್ತಿ ಮಾಂಸಾಹಾರ ತ್ಯಜಿಸಿದ ಧಾರಾಳ ಉದಾಹರಣೆಗಳನ್ನು ಇಸ್ಲಾಮೀ ಚರಿತ್ರೆಯ ಪುಟಗಳಲ್ಲಿ ಪಾಠವಾಗಿ ಬೋಧಿಸಲಾಗುತ್ತಿದೆ. ಇಂತಹ ಬೋಧನೆಗಳು ಮದ್ರಸಾಗಳಲ್ಲಿ ಪಠ್ಯವಾಗಿ ಇವೆ. ಇದರ ಉದ್ದೇಶ ಯಾರಿಂದಲೋ ಅನ್ಯಾಯವಾಗಿ ಪಡೆದ ಸ್ವತ್ತು ಅಪ್ಪಿತಪ್ಪಿಯೂ ನಮ್ಮ ಉದರ ಸೇರದಿರಲಿ ಎಂದಾಗಿದೆ.

ಆದರೆ ನಮ್ಮ ದೇಶದ ಬಲಪಂಥೀಯ ಪ್ರತಿಗಾಮಿ ಶಕ್ತಿಗಳು ತಮ್ಮ ಅಜ್ಞಾನದಿಂದ ಹಲಾಲ್ ಮತ್ತು ಹರಾಂನ ವ್ಯಾಖ್ಯೆಗಳನ್ನು ಸಂಕುಚಿತಗೊಳಿಸಿಬಿಟ್ಟಿದ್ದಾರೆ.

ಇಸ್ಲಾಮಿನಲ್ಲಿ ಮಾಂಸದ ಪ್ರಾಣಿಗಳನ್ನು ಕೊಯ್ಯುವ ವಿಧಾನಕ್ಕೆ ಹಲಾಲ್ ಎಂಬ ಪದ ಬಳಕೆಯೇ ಇಲ್ಲ. ದ್ಸಬಹ್ ಮಾಡುವ ವಿಧಾನ ಮಾಂಸದ ಪ್ರಾಣಿಯ ಕತ್ತಿನ ಮುಂಭಾಗಕ್ಕೆ ಹರಿತವಾದ ಚೂರಿ ಹಾಕಿ ಅತೀ ಮುಖ್ಯವಾದ ಮೂರು ನಾಳಗಳನ್ನು ಕತ್ತರಿಸುವುದು.

1. ಮುಖ್ಯ ರಕ್ತನಾಳ
2. ಶ್ವಾಸ ನಾಳ
3. ಅನ್ನ ನಾಳ

ಆದರೆ ಕುತ್ತಿಗೆಯಲ್ಲಿರುವ ಬೆನ್ನು ಹುರಿಯನ್ನು ದ್ಸಬಹ್ ಮಾಡುವಾಗ ಕತ್ತರಿಸಬಾರದು. ಯಾಕೆಂದರೆ ಬೆನ್ನು ಹುರಿಯನ್ನು ಕತ್ತರಿಸಿದ ಕೂಡಲೇ ಪ್ರಾಣಿ ನಿಶ್ಚಲವಾಗುತ್ತದೆ. ಪ್ರಾಣಿಯು ಕೂಡಲೇ ನಿಶ್ಚಲವಾದರೆ ಅದರ ದೇಹದಲ್ಲಿನ ರಕ್ತವು ರಭಸದಿಂದ ಹೊರಹರಿದು ಹೋಗಲು ಸಾಧ್ಯವಾಗುವುದಿಲ್ಲ. ದ್ಸಬಹ್ ಮಾಡುವಾಗ ಬಹಳ ಮುಖ್ಯವಾಗಿ ರಕ್ತನಾಳ ಮತ್ತು ಶ್ವಾಸನಾಳವನ್ನು ಸಂಪೂರ್ಣವಾಗಿ ಕತ್ತರಿಸಬೇಕು. ಹಾಗೆ ಮಾಡುವುದರಿಂದ ಪ್ರಾಣಿಯ ದೇಹದ ರಕ್ತವು ರಭಸವಾಗಿ ಹರಿದು ಹೋಗುತ್ತದೆ. ಯಾವುದೇ ಪ್ರಾಣಿಯು ತನ್ನ ಪ್ರಾಣ ಹೋಗುವ ಹೊತ್ತಿಗೆ ಇದ್ದ ಬದ್ದ ಶಕ್ತಿಯನ್ನೆಲ್ಲಾ ಬಳಸಿ ಬದುಕುಳಿಯುವ ಯತ್ನ ಮಾಡುತ್ತದೆ. ಆಗ ಅದು ತನ್ನ ಗರಿಷ್ಟ ಶಕ್ತಿಯನ್ನು ಬಳಸಿ ಕೊಸರಾಡುವಾಗ ದೇಹದ ರಕ್ತನಾಳಗಳಲ್ಲಿ ಸಂಚರಿಸುವ ರಕ್ತವೆಲ್ಲಾ ರಭಸವಾಗಿ ಕಡಿದು ಹೋದ ಕುತ್ತಿಗೆಯ ರಕ್ತನಾಳದತ್ತ ಚಲಿಸಿ ಹೊರ ಹರಿದು ಹೋಗುತ್ತದೆ. ಈಗೇನು ಕುರಿಯ ರಕ್ತದ ಫ್ರೈ ಎಂದು ಚರ್ಚೆ ನಡೆಯುತ್ತಿದೆಯೋ ವಾಸ್ತವದಲ್ಲಿ ಮುಸ್ಲಿಮರು ಯಾವುದೇ ಪ್ರಾಣಿಯ ರಕ್ತವನ್ನು ಸೇವಿಸುವಂತಿಲ್ಲ. ರಕ್ತವನ್ನು ಸಂಪೂರ್ಣವಾಗಿ ತೊಳೆದು ತೆಗೆದ ಬಳಿಕವೇ ಮಾಂಸವನ್ನು ಬಳಸತಕ್ಕದ್ದು. ಆಹಾರ ವೈವಿಧ್ಯತೆ ಮತ್ತು ನಿಷಿದ್ಧಗಳು ಹಲವು ಸಮುದಾಯಗಳಲ್ಲಿ ಇರುವಂತೆಯೇ ಮುಸ್ಲಿಂ ಸಮುದಾಯದಲ್ಲಿಯೂ ಇವೆ.

ಮುಸ್ಲಿಮೇತರರೂ ಪ್ರಾಣಿಯನ್ನು ಕೊಯ್ಯುತ್ತಾರಲ್ವಾ ಎಂಬ ಪ್ರಶ್ನೆ ಈಗ ಉದ್ಭವಿಸಬಹುದು. ಆದರೆ ಮುಸ್ಲಿಮೇತರರಿಗೆ ಕೊಯ್ಯಲು ಇಂತಹ ವಿಧಿ ವಿಧಾನಗಳೇನೂ ಇಲ್ಲ. ಅಂತೆಯೇ ರಕ್ತನಾಳಗಳ ಮೂಲಕ ಪರಿಚಲಿಸುವ ರಕ್ತವು ಸಂಪೂರ್ಣವಾಗಿ ಹರಿದು ಹೊರಹೋಗಬೇಕೆಂಬ ವಿಧಿಗಳೇನೂ ಮುಸ್ಲಿಮೇತರರು ಪ್ರಾಣಿಗಳನ್ನು ಕಡಿಯುವಾಗ ಪರಿಗಣನೆಗೆ ಬರುವುದಿಲ್ಲ. ಸಾಮಾನ್ಯವಾಗಿ ಮುಸ್ಲಿಮೇತರರು ಪ್ರಾಣಿಯ ಕುತ್ತಿಗೆಯ ಹಿಂಭಾಗದಿಂದ ಕಡಿಯುತ್ತಾರೆ. ಹಾಗೆ ಕಡಿಯುವುದರಿಂದ ಮೊದಲು ಕತ್ತರಿಸಲ್ಪಡುವುದು ಪ್ರಾಣಿಯ ಬೆನ್ನು ಹುರಿ. ಬೆನ್ನು ಹುರಿ ತುಂಡಾದ ಕೂಡಲೇ ಪ್ರಾಣಿ ನಿಶ್ಚಲವಾಗುತ್ತದೆ. ಹಾಗೆ ಕೂಡಲೇ ಪ್ರಾಣಿ ನಿಶ್ಚಲವಾದರೆ ಅದರ ದೇಹದ ರಕ್ತವು ರಭಸವಾಗಿ ಹೊರಹರಿದು ಹೋಗುವುದಿಲ್ಲ. ನಿಧಾನಕ್ಕೆ ಅಲ್ಪ ಸ್ವಲ್ಪ ರಕ್ತ ಹರಿದು ಹೋದರೆ ಕೆಲ ಹೊತ್ತಲ್ಲೇ ಪ್ರಾಣಿಯ ದೇಹದಲ್ಲಿ ಉಳಿದ ರಕ್ತವು ಹೆಪ್ಪುಗಟ್ಟುತ್ತದೆ. ಹಾಗಿರುವಾಗ ರಕ್ತವೂ ಆಹಾರದೊಂದಿಗೆ ನಮ್ಮ ಉದರ ಸೇರುತ್ತದೆ. ಇಸ್ಲಾಮೀ ಕರ್ಮಶಾಸ್ತ್ರದ ಪ್ರಕಾರ ರಕ್ತವನ್ನು ಸಂಪೂರ್ಣವಾಗಿ ತೊಳೆದು ತೆಗೆಯದೇ ಪ್ರಾಣಿಯ ಮಾಂಸವನ್ನು ಸೇವಿಸುವಂತಿಲ್ಲ. ಆದುದರಿಂದ ಮುಸ್ಲಿಮರು ಪ್ರಾಣಿಯ ಕತ್ತಿನ ಮುಂಭಾಗದಿಂದಲೇ ಕತ್ತರಿಸುತ್ತಾರೆ.

ಈ ವಿಧಾನದಲ್ಲಿ ಕತ್ತರಿಸಿದ ಪ್ರಾಣಿಯ ಮಾಂಸ ಮಾತ್ರ ಮುಸ್ಲಿಮರಿಗೆ ತಿನ್ನಲು ಹಲಾಲ್ ಅರ್ಥಾತ್ ಸಮ್ಮತಾರ್ಹ. ಇನ್ನು ಮುಸ್ಲಿಮರು ಪ್ರಾಣಿಯನ್ನು ಕೊಯ್ಯುವಾಗ ಅಲ್ಲಾಹನ ನಾಮ ಉಚ್ಚರಿಸುತ್ತಾರೆನ್ನುವುದೂ ಹಲವರ ಅಸಹನೆಗೆ ಕಾರಣ. ವಾಸ್ತವದಲ್ಲಿ ಮುಸ್ಲಿಮರು ಬಿಸ್ಮಿಲ್ಲಾಹಿ ರ್ರ್‍ಅಹ್ಮಾನಿ ರ್ರ್‍ಅಹೀಂ ಎಂದು ಅಲ್ಲಾಹನ ನಾಮ ಉಚ್ಚರಿಸುವುದು ಕೇವಲ ಪ್ರಾಣಿಯನ್ನು ಕೊಯ್ಯುವಾಗ ಮಾತ್ರವಲ್ಲ. ಮುಸ್ಲಿಮರು ತಿನ್ನಲಾರಂಭಿಸುವಾಗ, ಕುಡಿಯಲಾರಂಭಿಸುವಾಗ, ಮನೆಯಿಂದ ಹೊರಗೆ ಕಾಲಿಡುವಾಗ, ಮನೆಯೊಳಕ್ಕೆ ಪ್ರವೇಶಿಸುವಾಗ, ವಾಹನವೇರುವಾಗ, ವ್ಯಾಪಾರ ಆರಂಭಿಸುವಾಗ, ಯಾರಿಗಾದರೂ ಏನನ್ನಾದರೂ ಕೊಡುವಾಗ, ದುಡಿಮೆ ಆರಂಭಿಸುವಾಗ ಹೀಗೆ ಎಲ್ಲಾ ಕಾರ್ಯಗಳ ಆರಂಭದಲ್ಲೂ ಅಲ್ಲಾಹನ ನಾಮ ಉಚ್ಚರಿಸುತ್ತಾರೆ. ಮುಸ್ಲಿಮರು ಅವರ ವಿಶ್ವಾಸ ಪ್ರಕಾರ ಅಲ್ಲಾಹನ ನಾಮ ಉಚ್ಚರಿಸುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಅವರು ಅವರ ಆರಾಧ್ಯನ ನಾಮ ಉಚ್ಚರಿಸುವುದರ ಬಗೆಗೆ ಯಾಕೆ ಇಷ್ಟು ತೀವ್ರ ವಿರೋಧ..? ಈ ಹಲಾಲ್ ಮಾಡಬಾರದು ಎನ್ನುವುದರ ಹಿಂದಿನ ಉದ್ದೇಶ ಅಸಹನೆಯೇ ಹೊರತು ಬೇರೇನಲ್ಲ.

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ ₹50 ₹100 ₹500 ₹1000 Others


ಇದನ್ನೂ ಓದಿ: ಮಾಂಸಾಹಾರಿ ಸಮುದಾಯಗಳ ರಾಕ್ಶಸೀಕರಣ ನಿಲ್ಲಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

  2. ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ, ಈಗಲಾದರೂ ಜನ ಅರ್ಥ ಮಾಡಿಕೋ ಬೇಕು .
    ಸಮಾಜದಲ್ಲಿ ಎಲ್ಲರೂ ಸಹ ಬಾಳ್ವೆ ಯಿಂದ ಓಬ್ಬರನ್ನೊಬ್ರು ಅರ್ಥಮಾಡಿಕೊಂಡು ಬದುಕುವುದನ್ನು ನಾವು ಕಲಿಯಬೇಕು .

  3. ಇಲ್ಲಿನ ಪ್ರತಿಯೊಬ್ಬರೂ ಅಣ್ಣತಮ್ಮಂದಿರೆ, ಒಂದೇ ತಾಯಿಯ ಮಕ್ಕಳು, ವಿನಾ ಕಾರಣ ವಿಷವನ್ನು ಬಿತ್ತಿ, ದ್ವೇಷವನ್ನು ಹರುಡುತ್ತಿರುವ ಸ್ವಾರ್ಥಿಗಳು ಸತ್ಯವನ್ನು ತಿಳಿಯಬೇಕು.

    ವಿಷಯ ಸ್ಪಷ್ಟವಾಗಿ ಮೂಡಿದೆ.
    ಮಾನವ ಧರ್ಮವೇ ಶ್ರೇಷ್ಠ.
    ಎಲ್ಲರಿಗೂ ಇದರ ಅರಿವಾಗಬೇಕು.

    ಜೈ ಭಾರತ್, ಜೈಭೀಮ್

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...