ಫೇಕ್ ನ್ಯೂಸ್ ಎಂಬುವುದು ಸಮಾಜದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಅವುಗಳ ನಿಯಂತ್ರಣ ಬಹುಕಷ್ಟವಾಗಿದೆ. ಇಂತಹ ಸಮಯದಲ್ಲಿ ಕೋಲ್ಕತ್ತ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಿರುವುದನ್ನು ಹಲವರು ಶ್ಲಾಘಿಸಿದ್ದಾರೆ.
ಟ್ವಿಟ್ಟರ್ನಲ್ಲಿ 20 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ, ಫೇಕ್ ನ್ಯೂಸ್ ಹರಡುವುದಕ್ಕಾಗಿ ಕುಖ್ಯಾತಿ ಗಳಿಸಿದ್ದ ಮಧು ಪೂರ್ಣಿಮ ಕಿಶ್ವರ್ ಎಂಬ ಬಲಪಂಥೀಯ ಒಲವುಳ್ಳ ಮಹಿಳೆಯ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಕೋಲ್ಕತ್ತ ಪೊಲೀಸರು ಮುಂದಾಗಿದ್ದಾರೆ.
ತಲೆಗೆ ಸ್ಕಲ್ ಟೋಪಿ ಮತ್ತು ‘ಸ್ಟಾಪ್ ಕಿಲ್ಲಿಂಗ್ ರೋಹಿಂಗ್ಯಾ ಮುಸ್ಲಿಂ’ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನಾ ರ್ಯಾಲಿ ನಡೆಸುತ್ತಿರುವ ಜನರ ವಿಡಿಯೋವನ್ನು ಮಧು ಪೂರ್ಣಿಮ ಕಿಶ್ವರ್ ಎಂಬ ಮಹಿಳೆ ‘ಕೋಲ್ಕತ್ತದಲ್ಲಿ’ ಎಂಬ ಶೀರ್ಷಿಕೆಯೊಂದಿಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
#FakeNewsAlert
A video clip from Bangladesh is being falsely claimed to be from Kolkata. Legal action initiated. pic.twitter.com/FcL1LP12Ln— Kolkata Police (@KolkataPolice) November 9, 2020
ಆದರೆ ಆ ವೀಡಿಯೊವು ಸೆಪ್ಟೆಂಬರ್ 2017 ರದ್ದಾಗಿದ್ದು ಬಾಂಗ್ಲಾದೇಶದ್ದಾಗಿದೆ. ಅಲ್ಲಿನ ಇಸ್ಲಾಮಿಕ್ ಸಂಘಟನೆಯು ಮ್ಯಾನ್ಮಾರ್ ರಾಯಭಾರ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಿದ ವಿಡಿಯೋವಾಗಿದೆ ಎಂದು ಈ ಹಿಂದೆಯೇ ನಾನುಗೌರಿ.ಕಾಂ ಫ್ಯಾಕ್ಟ್ಚೆಕ್ ನಡೆಸಿತ್ತು. ಆದರೆ ಪಶ್ಚಿಮ ಬಂಗಾಳ ಸರ್ಕಾರ ಮುಸ್ಲಿಂ ತುಷ್ಟೀಕರಣ ನಡೆಸುತ್ತಿದೆ ಎಂಬ ಕೆಟ್ಟ ಅಭಿಪ್ರಾಯ ಮೂಡಿಸುವುದಕ್ಕಾಗಿ ಕೋಲ್ಕತ್ತಾದ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದ್ನನೂ ಓದಿ: ಫ್ಯಾಕ್ಟ್ಚೆಕ್: ’ಇಸ್ಲಾಂ ಜಿಂದಾಬಾದ್’ ಎಂದು ಕೂಗಿದ ಈ ರ್ಯಾಲಿ ಕೊಲ್ಕತ್ತಾದ್ದಲ್ಲ, ಬಾಂಗ್ಲಾದೇಶದ್ದು
ಆ ವಿಡಿಯೋವನ್ನು ಈ ವರದಿ ಬರೆಯುವ ವೇಳೆಗೆ ಮೂರು ಸಾವಿರ ಮಂದಿ ಲೈಕ್ ಮಾಡಿದ್ದು, ಎರಡೂವರೆ ಸಾವಿರ ಜನ ಷೇರ್ ಮಾಡಿದ್ದಾರೆ. ಇದನ್ನು ಗಮನಿಸಿದ ಕೋಲ್ಕತ್ತ ಪೊಲೀಸ್ನ ‘ಫೇಕ್ ನ್ಯೂಸ್ ಅಲರ್ಟ್’ ತಂಡ “ಬಾಂಗ್ಲಾದೇಶದ ವೀಡಿಯೊ ಕ್ಲಿಪ್ ಅನ್ನು ಕೋಲ್ಕತ್ತಾದವರು ಎಂದು ತಪ್ಪಾಗಿ ಹೇಳಲಾಗುತ್ತಿದೆ. ಕಾನೂನು ಕ್ರಮ ಪ್ರಾರಂಭಿಸಲಾಗಿದೆ.” ಎಂದು ಟ್ವೀಟ್ ಮಾಡಿದೆ.
ಅದನ್ನು ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಷೇರ್ ಮಾಡಿ “ಪೊಲೀಸರಿಂದ ಅದ್ಭುತ ಕೆಲಸ. ಈ ನಕಲಿ ಸುದ್ದಿ ಮತ್ತು ದ್ವೇಷದ ಸುದ್ದಿ ಹರಡುವವರಿಗೆ ಶಿಕ್ಷೆಯಾಗಬೇಕು. ಈ ಮಹಿಳೆ ಸರಣಿ ಅಪರಾಧಿಯಾಗಿದ್ದಾಳೆ” ಎಂದು ಟ್ವೀಟ್ ಮಾಡಿದ್ದಾರೆ.
ಆ ಮಹಿಳೆಯು ಈ ಹಿಂದೆಯೂ ನೂರಾರು ಸುಳ್ಳು ಸುದ್ದಿಗಳನ್ನು ಹರಡಿ ಸಿಕ್ಕಿಬಿದ್ದಿದ್ದರು. ಆದರೆ ಈಗ ಕೋಲ್ಕತ್ತ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವುದು ಹೇಗೆ?
ಸುದ್ದಿ ಮೂಲ ಪರೀಕ್ಷಿಸಿ. ಸಂದೇಶವನ್ನು ಬಿಟ್ಟು ಅದರ ಮೂಲದ ಬಗ್ಗೆ ಹುಡುಕಿ. ಯಾರು ಇದನ್ನು ನಿಮಗೆ ಕಳುಹಿಸಿದ್ದಾರೆ ಅವರು ಕೇವಲ ಸ್ನೇಹಿತರೇ, ಯಾವುದೋ ಗುಂಪಿನ ಸದಸ್ಯರೇ, ನಂಬಿಕಸ್ಥರೇ ತಿಳಿಯಿರಿ.
ಸುದ್ದಿಯಾಗಿದ್ದರೆ ಗೂಗಲ್ನಲ್ಲಿ ಹುಡುಕಿ. ಅದಕ್ಕೆ ಸಂಬಂಧಿಸಿದ ಬೇರೆ ಲಿಂಕ್ಗಳತ್ತ ಕಣ್ಣಾಡಿಸಿ. ಚಿತ್ರವಾಗಿದ್ದರೆ ರಿವರ್ಸ್ ಇಮೇಜ್ ಸರ್ಚ್ ಮಾಡಿ. ವಿಡಿಯೋವಾಗಿದ್ದರು ಸಹ ಅದರ ದಿನಾಂಕ ಮತ್ತು ಮೂಲವನ್ನು ಪತ್ತೆ ಹಚ್ಚಿ. ಜಾಲತಾಣದ ಉದ್ದೇಶವೇನು, ಅವರ ಸಂಪರ್ಕ ವಿಳಾಸ ದೂರವಾಣಿ ಸಂಖ್ಯೆ ಇದೆಯೇ ನೋಡಿ.
ಕೇವಲ ಸುದ್ದಿಯ ತಲೆಬರಹ ಓದಬೇಡಿ. ಅವು ರೋಚಕವಾಗಿರುತ್ತವೆ. ಇಡೀ ಸುದ್ದಿ ಓದಿ ನೋಡಿ. ಅದು ಸುಳ್ಳಾಗಿದ್ದರೆ ಮೂಲಾಜಿಲ್ಲದೇ ತಿಳಿಸಿ, ಸಾಧ್ಯವಾದರೆ ದೂರು ನೀಡಿ.
ಸುದ್ದಿಯ ಲೇಖಕರ/ಪ್ರಕಾಶಕರ ಬಗ್ಗೆ ಸ್ವಲ್ಪ ಹುಡುಕಿ, ಅವರು ಪೂರ್ವಗ್ರಹಪೀಡಿತರಾಗಿರಬಹುದು. ಹಾಗಿದ್ದಲ್ಲಿ ಎಚ್ಚರವಹಿಸಿ.
ಸುದ್ದಿಗೆ ಏನಾದರೂ ಬೆಂಬಲಿಸುವಂತಹ ಮೂಲದ ಲಿಂಕ್ ಇದ್ದರೆ ಅದನ್ನು ಜಾಲಿಸಿ ನೋಡಿ. ಪೂರಕವಾಗಿದೆಯೇ ಇಲ್ಲವೇ ಎಂದು. ಎಷ್ಟೋ ಬಾರಿ ಅಂತಹ ಜಾಲತಾಣವೇ ಇರುವುದಿಲ್ಲ.
ಕೇವಲ ಒರ್ವ ದೊಡ್ಡ ವ್ಯಕ್ತಿಯ ಭಾವಚಿತ್ರವಿದೆ ಮತ್ತು ಅದರೊಂದಿಗೆ ಏನೋ ಹೇಳಿಕೆ ಇದೆ ಎಂದ ಮಾತ್ರಕ್ಕೆ ಅದು ನಿಜವಾಗುವುದಿಲ್ಲ. ಚಾಣಕ್ಯ, ನಾಟ್ರಡ್ಯಾಮಸ್, ಚರ್ಚಿಲ್, ಮೆಕಾಲೆ ಮುಂತಾದವರ ಭಾವಚಿತ್ರದ ಜೊತೆ ಏನೇನೋ ಸಂದೇಶಗಳು ಹರಿದಾಡುತ್ತಿವೆ.
ಸುದ್ದಿಯ, ವಿಡಿಯೋಗಳ ದಿನಾಂಕ ನೋಡಿ. ಹಳೆಯ ಸುದ್ದಿಗಳು ಹೊಸ ತಲೆಬರಹದೊಂದಿಗೆ ಮತ್ತೆ ಮತ್ತೆ ಕಾಣಸಿಗುತ್ತವೆ.
ಸುದ್ದಿಯೋ ಕೇವಲ ತಮಾಷೆಯೋ ಸರಿಯಾಗಿ ನೋಡಿ. ಕೆಲವರು ವಿಡಂಬನೆ ಮಾಡಿರುತ್ತಾರೆ ಹಾಗಾಗಿ ನಿಧಾನವಾಗಿ ಗಮನಿಸಿ. ಏಪ್ರಿಲ್ 1ರ ಸಂದೇಶಗಳು ವರ್ಷವಿಡೀ ಸುತ್ತುತ್ತಿರುತ್ತವೆ.
ನಿಮ್ಮ ಸ್ವಂತ ಪೂರ್ವನಿರ್ಧಾರಿತ ನಂಬಿಕೆಗಳು ಸುಳ್ಳನ್ನೇ ನಿಜ ಎಂದು ನಂಬುವಂತೆ ಮಾಡಬಹುದು. ಅದನ್ನು ಸರಿಪಡಿಸಿಕೊಳ್ಳಿ. ಮರುಪಶೀಲಿಸುವುದನ್ನು ಮರೆಯಬೇಡಿ. ಸಾಮಾನ್ಯ ಜ್ಞಾನ ಬಳಸಿ.
ತಜ್ಞರನ್ನು ಸಂಪರ್ಕಿಸಿ. ಸಂದೇಶ ನಿಜವೋ ಸುಳ್ಳೋ ಎಂದು ಸಂದೇಹವಿದ್ದಲ್ಲಿ ಅದನ್ನು ಮುಂದಕ್ಕೆ ಪಸರಿಸದೇ ಅದನ್ನು ನಂಬಿಕಸ್ಥ ಸತ್ಯಾಸತ್ಯತೆ ಪರಿಶೀಲಿಸುವ ಜಾಲತಾಣಗಳಿಗೆ ಕಳುಹಿಸಿ (ಆಲ್ಟ್-ನ್ಯೂಸ್, ಬೂಮ್ಲೈವ್, ಕ್ವಿಂಟ್ ವೆಬ್ಖೂಫ್, ಫ್ಯಾಕ್ಟ್-ಚೆಕರ್, ಎಸ್.ಎಂ.ಹೋಕ್ಸ್ ಸ್ಲೇಯರ್ ಇತ್ಯಾದಿ). ಸತ್ಯವನ್ನು ಬೆಂಬಲಿಸುವ ಜಾಲತಾಣಗಳನ್ನು ಬೆಂಬಲಿಸಿ.
ಸುಳ್ಳು ಸುದ್ದಿ/ಅಪಪ್ರಚಾರ ಪಸರಿಸಬೇಡಿ. ಇದರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ.
ಇದನ್ನೂ ಓದಿ: Fact check: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಹರಡಿದ 16 ಸುಳ್ಳು ಸುದ್ದಿಗಳು