ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ. ಅವರಿಗೆ ವೈದ್ಯಕೀಯ ನೆರವು ನೀಡುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ. ರೈತ ನಾಯಕ ದಲ್ಲೆವಾಲ್
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ರಜಾಕಾಲದ ಪೀಠವು, ಪಂಜಾಬ್ ಸರ್ಕಾರಕ್ಕೆ ದಲ್ಲೆವಾಲ್ ಅವರಿಗೆ ವೈದ್ಯಕೀಯ ನೆರವು ನೀಡುವ ಕುರಿತು ಸುಪ್ರಿಂಕೋರ್ಟ್ನ ಆದೇಶವನ್ನು ಪಾಲಿಸದಿದ್ದಕ್ಕಾಗಿ ಅದರ ಮುಖ್ಯ ಕಾರ್ಯದರ್ಶಿ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
”ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಕಠಿಣವಾಗಿ ನಿಭಾಯಿಸಬೇಕಾಗುತ್ತದೆ. ಯಾರಾದಾದರೂ ಪ್ರಾಣಕ್ಕೆ ಕುತ್ತು ಬಂದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ವೈದ್ಯಕೀಯ ನೆರವು ನೀಡಬೇಕಿದೆ. ಆದರೆ ನೀವು ಅದನ್ನು ಅನುಸರಿಸುತ್ತಿಲ್ಲ” ಎಂದು ಪೀಠ ಹೇಳಿದೆ. ಶನಿವಾರದೊಳಗೆ ಅನುಸರಣೆ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ಈ ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆ ನಡೆಸಲಿದೆ. ರೈತ ನಾಯಕ ದಲ್ಲೆವಾಲ್
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತರಿ ಸೇರಿದಂತೆ ರೈತರ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ದಲ್ಲೆವಾಲ್ ನವೆಂಬರ್ 26 ರಿಂದ ದೆಹಲಿಯ ಖಾನೌರಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದಾರೆ.
ದಲ್ಲೆವಾಲ್ ಅವರು ನಡೆಸುತ್ತಿರುವ ಉಪವಾಸ 31 ನೇ ದಿನಕ್ಕೆ ಕಾಲಿಟ್ಟಿದ್ದು, ರೈತರ ಮುಷ್ಕರವು ಫೆಬ್ರವರಿ 13 ರಿಂದ ಹರಿಯಾಣ ಪೊಲೀಸರೊಂದಿಗೆ ನಡೆದ ಘರ್ಷಣೆಯೊಂದಿಗೆ ಪ್ರಾರಂಭವಾಗಿತ್ತು. ಈ ವೇಳೆ 500 ಕ್ಕೂ ಹೆಚ್ಚು ರೈತರಿಗೆ ಗಾಯಗಳಾಗಿದ್ದು 34 ಜನರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ದಲ್ಲೆವಾಲ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರ ಕೀಟೋನ್ ಮಟ್ಟಗಳು ಸಾಮಾನ್ಯಕ್ಕಿಂತ 25 ಪಟ್ಟು ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರು ಸುಮಾರು 15 ಕೆಜಿ ತೂಕವನ್ನು ಕಳೆದುಕೊಂಡಿದ್ದು, ಹಠಾತ್ ಹೃದಯ ಸ್ತಂಭನ ಅಥವಾ ಬಹು ಅಂಗಾಂಗ ವೈಫಲ್ಯದ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಅವರ ಹದಗೆಟ್ಟ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಎಪಿ ನಾಯಕರು ಗುರುವಾರ ಅವರನ್ನು ಭೇಟಿಯಾಗಿ ಬೆಂಬಲ ವ್ಯಕ್ತಪಡಿಸಿದ್ದರು.
“ದಲ್ಲೆವಾಲ್ ಈ ಚಳವಳಿಯ ಪ್ರೇರಕ ಶಕ್ತಿ. ಅವರ ಹೋರಾಟ ಸರಿಯಿದ್ದು, ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಆದಾಗ್ಯೂ, ಅವರು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಲು ಬಯಸಿದರೆ ಕನಿಷ್ಠ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ನಾವು ಅವರನ್ನು ಒತ್ತಾಯಿಸಿದ್ದೇವೆ” ಎಂದು ದೆಹಲಿ ಸಚಿವ ಅರೋರಾ ಹೇಳಿದ್ದಾರೆ.
ಇದನ್ನೂ ಓದಿ: ಬ್ರಹ್ಮಪುತ್ರ ನದಿಗೆ ವಿಶ್ವದ ಅತಿದೊಡ್ಡ ಅಣೆಕಟ್ಟು ಕಟ್ಟಲು ಮುಂದಾದ ಚೀನಾ; ಭಾರತ, ಬಾಂಗ್ಲಾದೇಶದಲ್ಲಿ ಆತಂಕ
ಬ್ರಹ್ಮಪುತ್ರ ನದಿಗೆ ವಿಶ್ವದ ಅತಿದೊಡ್ಡ ಅಣೆಕಟ್ಟು ಕಟ್ಟಲು ಮುಂದಾದ ಚೀನಾ; ಭಾರತ, ಬಾಂಗ್ಲಾದೇಶದಲ್ಲಿ ಆತಂಕ


