ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆಂಬಲವಾಗಿ ಇಂದು ರಾಜ್ಯದಲ್ಲಿಯೂ ರೈಲ್ ರೋಕೋ ಚಳವಳಿ ನಡೆಯಿತು. ರಾಜ್ಯದ ಬೆಂಗಳೂರು, ರಾಯಚೂರು, ದಾವಣಗೆರೆ, ಬಂಗಾರಪೇಟೆ, ತುಮಕೂರು, ಬೆಳಗಾವಿ, ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರೈಲು ತಡೆ ಪ್ರತಿಭಟನೆ ನಡೆಸಲಾಗಿದೆ.
ರೈತ ಹೋರಾಟದ ಮುಂದಾಳತ್ಮ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚ್ ಫೆಬ್ರವರಿ 10 ರಂದು ಪತ್ರಿಕಾ ಹೇಳಿಕೆಯಲ್ಲಿ ಫೆಬ್ರವರಿ 18 ರಂದು ದೇಶಾದ್ಯಂತ ರೈಲ್ ರೊಕೋ ಚಳವಳಿ ನಡೆಸಲು ಕರೆ ನೀಡಿತ್ತು. ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ರೈಲು ತಡೆ ನಡೆಸಲು ತಿಳಿಸಲಾಗಿತ್ತು. ರೈತ ಮುಖಂಡರ ಕರೆಗೆ ರಾಜ್ಯದ ರೈತ ಸಂಘಟನೆಗಳು ಬೆಂಬಲ ನೀಡಿ ರೈಲು ತಡೆ ನಡೆಸಿ, ಕೃಷಿ ಕಾನೂನುಗಳನ್ನು ಹಿಂಪಡೆಯಲು ಆಗ್ರಹಿಸಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ 12 ಗಂಟೆಯಿಂದ ರೈಲು ತಡೆ ಚಳವಳಿ ನಡೆಸಲಾಯಿತು. ರೈಲ್ ರೋಕೋಗೆ ಪೊಲೀಸರು ಅನುಮತಿ ನೀಡದಿದ್ದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡ ಕುರುಬರೂರು ಶಾಂತಕುಮಾರ್, ದೇಶಾದ್ಯಂತ ರೈಲು ತಡೆಗೆ ರಾಷ್ಟ್ರೀಯ ಸಂಘಟನೆಗಳು ಕರೆ ನೀಡಿರುವಾಗ ಪೊಲೀಸರ ಅನುಮತಿ ಏಕೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ನೀಡಲು ನಿರಾಕರಿಸಿದ್ದಕ್ಕೆ ಬೆದರಿಕೆ: ಕುಮಾರಸ್ವಾಮಿ ಆರೋಪ
ರೈಲು ತಡೆ ಚಳುವಳಿ ಭಾಗವಾಗಿ, ರಾಯಚೂರಿನಲ್ಲಿ AIUTUC ಮತ್ತು AIKKMS ಸಂಘಟನೆಯ RKS( ರೈತ ಕೃಷಿ ಕಾರ್ಮಿಕ ಸಂಘಟನೆ) ಸದಸ್ಯರು ಬೆಳಗ್ಗೆ 10 ಗಂಟೆಯಿಂದ ರೈಲು ತಡೆ ನಡೆಸಲು ರೈಲು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಹೋರಾಟಗಾರರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.
ಇತ್ತ ತುಮಕೂರಿನಲ್ಲಿಯೂ AIKKMS ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ವಿಜಯಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ದಾವಣಗೆರೆ ಜಿಲ್ಲೆಗಳಲ್ಲೂ ರೈಲು ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: ಮದುವೆಗಳಲ್ಲಿಯೂ ರೈತ ಹೋರಾಟಕ್ಕೆ ಬೆಂಬಲ!: ಹರಿಯಾಣ-ಪಂಜಾಬ್ನಲ್ಲಿ ವಿಭಿನ್ನ ಪ್ರತಿರೋಧ
ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ರೈಲ್ ರೋಕೋಗೆ ರಾಜ್ಯದಲ್ಲಿಯೂ ಭಾರಿ ಬೆಂಬಲ ವ್ಯಕ್ತವಾಗಿದೆ. ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಆರಂಭವಾದರೆ, ಮತ್ತೆ ಕೆಲವು ಕಡೆ 12 ಗಂಟೆಗೆ ಚಳವಳಿ ಆರಂಭವಾಗಿತ್ತು.
ಒಟ್ಟಾರೆ, ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಕಳೆದ 85 ದಿನಗಳಿಂದ ನಡೆಯುತ್ತಿರುವ ರೈತ ಹೋರಾಟಕ್ಕೆ ರಾಜ್ಯದ ರೈತರು ಸಾಥ್ ನೀಡುತ್ತಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದ ಆಕ್ರೋಶ: ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ
ಸಾಥ್(ಹಿಂದಿ)…ಬೆಂಬಲ(ಕ),(ಜೊತೆಗೂಡು)