“ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ದೇಣಿಗೆ ನೀಡಲು ನಿರಾಕರಿಸಿದ್ದಕ್ಕೆ ನನಗೆ ಬೆದರಿಕೆ ಹಾಕಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಮ ಮಂದಿರದ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಸ್ವಯಂಸೇವಕರು ಹಣ ನೀಡುವವರ ಮನೆಗಳನ್ನು ಗುರುತು ಹಾಕಿಕೊಳ್ಳುತ್ತಿದ್ದಾರೆ. ಇಂತಹವುಗಳಿಗೆ ಅಧಿಕಾರ ನೀಡಿದವರು ಯಾರು? ಹಣದ ಖರ್ಚು-ವೆಚ್ಚದ ಬಗ್ಗೆ ಪಾರದರ್ಶಕತೆಯಿರಬೇಕು” ಎಂದು ಹೇಳಿದ್ದಾರೆ.
“ಬೀದಿಯಲ್ಲಿ ಅಡ್ಡಾಡುವ ಜನರು ರಾಮ ಮಂದಿರದ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ನಾನೂ ಒಬ್ಬ ಬಲಿಪಶು. ಒಬ್ಬ ಮಹಿಳೆ ಸೇರಿದಂತೆ ಮೂವರು ಕೆಲವು ದಿನಗಳ ಹಿಂದೆ ನನ್ನ ಮನೆಗೆ ಭೇಟಿ ನೀಡಿ ರಾಮ ಮಂದಿರದ ನಿಧಿಗೆ ದೇಣಿಗೆ ನೀಡಬೇಕೆಂದು ಒತ್ತಾಯಿಸಿದರು. ನಾನು ನಿರಾಕರಿಸಿದಾಗ ನನಗೆ ಬೆದರಿಕೆ ಹಾಕಿದರು. ರಾಷ್ಟ್ರೀಯ ಕಾಳಜಿಯ ವಿಷಯಕ್ಕೆ ನೀವು ಯಾಕೆ ಹಣ ನೀಡಲು ನಿರಾಕರಿಸುತ್ತಿದ್ದೀರಿ ಎಂದು ಅವರು ನನ್ನನ್ನು ಪ್ರಶ್ನಿಸಿದರು. ಈ ಜನರು ಯಾರು? ಹಣವನ್ನು ಸಂಗ್ರಹಿಸಲು ಮತ್ತು ಜನರನ್ನು ಬೆದರಿಸಲು ಇವರಿಗೆ ಅಧಿಕಾರ ನೀಡಿದವರು ಯಾರು?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ರಾಮನ ಹೆಸರನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಆರೋಪಿಸಿದ್ದಾರೆ.
“ನಾನು ಪಾರದರ್ಶಕತೆಯನ್ನಷ್ಟೆ ಕೇಳಿದ್ದೇನೆ. ಇದು ರಾಮನನ್ನು ಅಗೌರವಗೊಳಿಸಲ್ಲ ಅಥವಾ ಅವಮಾನಿಸಲ್ಲ. ನಿಮ್ಮ ಧಾರ್ಮಿಕ ಭ್ರಷ್ಟಾಚಾರಕ್ಕಾಗಿ ನೀವು ರಾಮನನ್ನು ದುರುಪಯೋಗಪಡಿಸಿಕೊಂಡಿದ್ದೀರಿ. 1989 ರಿಂದ ನಿಮ್ಮ ರಾಜಕೀಯ ಲಾಭಕ್ಕಾಗಿ ರಾಮನ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ರಾಮ ದೇವಾಲಯದ ನಿರ್ಮಾಣದ ವಿರುದ್ಧ ನಾನೇಕೆ ಮಾತಾಡಲಿ. ಆದರೆ ಈ ಹಣವನ್ನು ಸಂಗ್ರಹಿಸಲು ಎಲ್ಲರಿಗೂ ಅಧಿಕಾರ ನೀಡಿದವರು ಯಾರು? ಪಾರದರ್ಶಕತೆ ಎಲ್ಲಿದೆ? ಇದು ಪ್ರತಿ ಹಳ್ಳಿಗಳಲ್ಲಿಯೂ ನಡೆಯುತ್ತಿದೆ. ಬೀದಿಯಲ್ಲಿ ಅಡ್ಡಾಡುವವರೆಲ್ಲ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದಾರೆ” ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದ ಆಕ್ರೋಶ: ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ