Homeಕರ್ನಾಟಕಆಹಾರ ಸಂಸ್ಕೃತಿ: ‘ಪರಕೀಯ’ವು ಸ್ವಕೀಯವಾಗುವ ಪರಿ

ಆಹಾರ ಸಂಸ್ಕೃತಿ: ‘ಪರಕೀಯ’ವು ಸ್ವಕೀಯವಾಗುವ ಪರಿ

- Advertisement -
- Advertisement -

“ನೂರಕ್ಕೆ ತೊಂಬತ್ತು ಪಾಲು ಭಾರತ ಭೂಮಾತೆ ಈಯ್ದ ಕಾಯಿಪಲ್ಯಗಳನ್ನೂ ಗಡ್ಡೆಗೆಣಸುಗಳನ್ನೂ ಹಣ್ಣುಹಂಪಲುಗಳನ್ನೂ ತಿಂದು ತೃಪ್ತಿಪಟ್ಟುಕೊಂಡಿದ್ದ ನಮ್ಮ ಹೊಟ್ಟೆಯೊಳಕ್ಕೆ, ಹದಿನಾರನೆಯ ಶತಮಾನದಿಂದ ಈಚೆಗೆ ಕಡಲಾಚೆಯಿಂದ ಕಾಲಿಟ್ಟ ಸಸ್ಯಜನ್ಯ ತಿನಿಸುಗಳು ಒದಗಿಬಂದವು. ಅವುಗಳಿಗೆ ನಮ್ಮ ನಾಲಿಗೆ ಲೊಟಗೆ ಹೊಡೆಯಿತು. ಹೊಟ್ಟೆ ತಾಳಹಾಕಿತು. ಹೀಗೆ ಬಂದ 50-100 ವರ್ಷಗಳೊಳಗಾಗಿ ಆಮದು ಸಸ್ಯಗಳ ಫಲವೇ ನಮ್ಮ ದೈನಂದಿನ ಉಣಿಸು ತಿನಿಸುಗಳಲ್ಲಿ ಮೇಲುಗೈಯಾಯಿತು. ಭಾರತೀಯ ಮಡಲಿನಲ್ಲಿ ಬೇರುಬಿಟ್ಟಿತು, ಬೆಳೆಯಿತು, ಸಾಗುವಳಿಗೆ ಒಗ್ಗಿತು, ಮಡಿಲ ವಿಸ್ತಾರದ ಬಹುಭಾಗವನ್ನು ಆಕ್ರಮಿಸಿಕೊಂಡಿತು. ಅದುವರೆಗೂ ನಮ್ಮ ಹೊಟ್ಟೆಪಾಡನ್ನು ನಿರ್ವಹಿಸಿಕೊಂಡು ಬಂದಿದ್ದ ಕಾಯಿಪಲ್ಯ ಹಣ್ಣು ಹಂಪಲುಗಳು ತೆರೆಯ ಹಿಂದೆ ಸರಿದವು. ‘ಸೀಮೆ’ ಆಹಾರವಸ್ತುಗಳು ಬಹಿರಂಗಕ್ಕೆ ಇಳಿದವು”

ಸಸ್ಯವಿಜ್ಞಾನಿ ಬಿಜಿಎಲ್. ಸ್ವಾಮಿಯವರ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಪುಸ್ತಕ ಶುರುವಾಗುವುದು ಹೀಗೆ. ಪುಸ್ತಕದಲ್ಲಿ ಟೊಮೊಟೊ, ಆಲೂಗಡ್ಡೆ, ಮುಸುಕಿನ ಜೋಳ, ಸೀತಾಫಲ, ನೆಲಗಡಲೆ, ಪಪ್ಪಾಯಿ, ತಿಂಗಳಹುರುಳಿ, ಸಪೋಟ, ಗೋಡಂಬಿ, ಸೀಮೆಬದನೆ, ಮರಗೆಣಸು, ಅನಾನಸು, ಸೀಬೆ ಮೊದಲಾದವು ಹೇಗೆ ಯಾವಾಗ ಬಂದವು ಎಂಬುದರ ವಿವರಣೆಯಿದೆ. ಜತೆಗೆ ಇವು ಹೇಗೆ ಭಾರತೀಯ ಅಡುಗೆ ಪದ್ಧತಿಯಲ್ಲೂ ಧಾರ್ಮಿಕ ಆಚರಣೆಗಳಲ್ಲೂ ಪ್ರವೇಶಿಸಿ ತಮ್ಮ ಪರಕೀಯತೆ ಕಳೆದುಕೊಂಡಿವೆ ಎಂಬ ಚಿತ್ರಣವೂ ಇದೆ.

ಆದರೆ ಪರಕೀಯವನ್ನು ಸ್ವಕೀಯಗೊಳಿಸುವ ಈ ಪ್ರಕ್ರಿಯೆ, ಹಣ್ಣು ತರಕಾರಿಗಳಿಗೆ ಸೀಮಿತವಾಗದು. ಭಾಷೆ ಬಟ್ಟೆ ಯಂತ್ರ ಸಾಹಿತ್ಯ ರಾಜಕಾರಣ, ಒಟ್ಟಾರೆ ಸಂಸ್ಕೃತಿಗೇ ಅನ್ವಯವಾಗುತ್ತದೆ. ಸಂಸ್ಕೃತಿ ಎನ್ನುವುದು ಭಾಷೆ ಸಾಹಿತ್ಯ ಧರ್ಮ ರಾಜಕಾರಣ ಸಮಾಜಗಳನ್ನೆಲ್ಲ ಒಳಗೊಳ್ಳುವ ವಿಶಾಲ ಹರಹಿನ ಪರಿಕಲ್ಪನೆಯಾಗಿ ಬಳಕೆಯಾಗುತ್ತಿದೆ. ಇದನ್ನು ಪ್ರದೇಶ ವಿಶಿಷ್ಟವಾದ ಆಹಾರಪದ್ಧತಿ ಉಡುಗೆತೊಡುಗೆ ಹಬ್ಬ ಜಾತ್ರೆ ಆಚರಣೆಗಳೆಂಬ ಸೀಮಿತ ಅರ್ಥದಲ್ಲಿಟ್ಟು ಹೇಳುವುದಾದರೆ, ದೈನಿಕ ಜೀವನದಲ್ಲಿರುವ ವಸ್ತುಗಳ ಮೂಲದ ಬಗ್ಗೆ ತಲೆಕೆಡಿಸಿಕೊಳ್ಳದೆ, ಅದು ಉಪಯುಕ್ತವಾಗಿದ್ದರೆ ಒಳಗೊಂಡು ಬದುಕುವ ನಿಲುವನ್ನು ಭಾರತದ ಸಂಸ್ಕೃತಿಗಳು ಪ್ರಕಟಿಸುತ್ತ ಬಂದಿವ. ಬ್ರಿಟಿಷರು ಬಂದಾಗ ನಮ್ಮ ಜನ ಪಂಚೆಯ ಮೇಲೆ ಯೂರೋಪಿಯನ್ ಕೋಟನ್ನು ಹಾಕುವುದಕ್ಕೆ ಆರಂಭಿಸಿದರು. ಒಂದು ಕಾಲಕ್ಕೆ ಪಂಜಾಬಿ ಮಹಿಳೆಯರು ಮಾತ್ರ ತೊಡುತ್ತಿದ್ದ ಪೈಜಾಮ-ಸಲ್ವಾರ್ ಕಮೀಜ್ ತನ್ನ ಉಪಯುಕ್ತತೆಯ ದೆಸೆಯಿಂದ ಅಖಿಲ ಭಾರತೀಯವಾಗಿದೆ. ಶಾಲಾ ಕಾಲೇಜುಗಳಲ್ಲಿ ಪ್ಯಾಂಟು-ಶರಟು, ಸಹಜವಾಗಿ ನೆಲೆಸಿದೆ. ಪಾಶ್ಚಿಮಾತ್ಯ ವಿಜ್ಞಾನ ತಂತ್ರಜ್ಞಾನ ಇಂಗ್ಲೀಷ್ ಮೊದಲಾದ ವಿಷಯದಲ್ಲೂ ಈ ಉಪಯುಕ್ತವಾದವು ಕೆಲಸ ಮಾಡುತ್ತದೆ. ಆದರೆ ಹೀಗೆ ಸ್ವೀಕರಿಸುವ ಗುಣವುಳ್ಳ ಸಮಾಜವು ತನ್ನ ವೈವಿಧ್ಯಗಳನ್ನು ತರತಮದ ಜತೆಯೇ ಸಂಭಾಳಿಸುತ್ತದ.

ಈ ಮುಕ್ತ ಸ್ವೀಕರಣ ಧೋರಣೆಯನ್ನು ಭಾರತದ ಆಹಾರ ಸಂಸ್ಕೃತಿ ಚೆನ್ನಾಗಿ ಪ್ರಕಟಿಸುತ್ತ ಬಂದಿದೆ. ಸಂಪ್ರದಾಯಸ್ಥ ಸಮಾಜಗಳಲ್ಲಿ ಆಹಾರವು ಮಡಿಮೈಲಿಗೆ ಅಸ್ಪೃಶ್ಯತೆ ನಿಷೇಧಗಳ ಉಪಕರಣ. ಏನನ್ನು, ಯಾರ ಜತೆ, ಯಾವಾಗ, ಯಾರು ತಯಾರಿಸಿದ್ದನ್ನು ತಿನ್ನಬಾರದು ಎಂಬ ವಿಧಿನಿಷೇಧಗಳ ಜಗತ್ತಿದು. ಆದರೆ ಇಲ್ಲಿಯೇ ಅತಿಹೆಚ್ಚು ವೈವಿಧ್ಯಗಳು ಏರ್ಪಟ್ಟಿವೆ. ಸ್ವೀಕರಣಗಳು ಸಂಭವಿಸಿವೆ. ಬಿರಿಯಾನಿ ಪಲಾವ್ ಕಬಾಬ್ ಕುರ್ಮ ಮೊದಲಾದ ಮಾಂಸಾಹಾರಿ ತಿನಿಸುಗಳು ಮಧ್ಯ ಏಶಿಯಾದಿಂದ ಬಂದವು. ಬ್ರೆಡ್-ಚೀಸ್, ಇಟಲಿಯ ರೊಟ್ಟಿ ಪಾಶ್ಚಾತ್ಯ ದೇಶಗಳವು. ನ್ಯೂಡಲ್ಸ್ ಮಂಚೂರಿಗಳು ಚೀನಾದವು.

ಆಹಾರದ ವೈವಿಧ್ಯದ ವಿಷಯದಲ್ಲಿ ಕರ್ನಾಟಕವೂ ಹೊರತಾಗಿಲ್ಲ. ಇಲ್ಲಿ ವರ್ಷದ ಮುನ್ನೂರ ಅರವತ್ತು ದಿನವೂ ಪುನರಾವರ್ತನೆ ಇಲ್ಲದೆ ಸಾರು ಮಾಡಬಲ್ಲ ಮನೆಗಳಿವೆ. ಒಂದು ಸಾವಿರಕ್ಕೂ ಮಿಕ್ಕಿ ಸಾರಿನ ಪ್ರಭೇದಗಳಿವೆ. ಒಂದೇ ಆಹಾರವು ಪ್ರದೇಶವಾರು ಮಾತ್ರವಲ್ಲದೆ, ಜಾತಿ ಮತ್ತು ಧಾರ್ಮಿಕ ಸಮುದಾಯಗಳ ಹಿನ್ನೆಲೆಯಲ್ಲೂ ಬೇರೆಯಾಗುತ್ತದೆ. ಕೋಳಿಸಾರನ್ನು ದಲಿತರು ಒಕ್ಕಲಿಗರು ಮೈಸೂರಿನವರು ಕರಾವಳಿಯವರು ಮುಸ್ಲಿಮರು ಆದಿವಾಸಿಗಳು ತಯಾರಿಸುವ ರೀತಿಯಲ್ಲಿ ಬೇರೆಯೇ ರುಚಿ ಪರಿಮಳ ಇರುತ್ತದೆ.

ಭಾರತದ ಸಾಂಪ್ರದಾಯಿಕ ಆಹಾರ ತಯಾರಿಕೆಯ ಸಾಮಗ್ರಿಗಳು ಜಗತ್ತಿನ ನಾನಾ ಭಾಗಗಳಿಂದ ಆಗಮಿಸುತ್ತವೆ. ಕೇಸರಿ ಕಾಶ್ಮೀರದಿಂದ, ಇಂಗು ಆಫ್ಘಾನಿಸ್ಥಾನದಿಂದ, ಗರಂ ಮಸಾಲೆ ಘಟ್ಟಪ್ರದೇಶದಿಂದ, ಬೆಳ್ಳುಳ್ಳಿ ಪಾಕಿಸ್ತಾನದಿಂದ, ತಾಳೆಯೆಣ್ಣೆ ಮಲೇಶಿಯಾದಿಂದ, ಬದಾಮಿ ಅಮೆರಿಕದಿಂದ, ಖರ್ಜೂರ ಅರಬಸ್ಥಾನದಿಂದ. ದಕ್ಷಿಣ ಕರ್ನಾಟಕದ ಜನಪ್ರಿಯ ಆಹಾರ ಮುದ್ದೆಗೆ ಬೇಕಾದ್ದು ಬಂದಿದ್ದು ಆಫ್ರಿಕಾದಿಂದ. ನಮ್ಮ ಆಹಾರ ಸಂಸ್ಕೃತಿಯಲ್ಲಿ ಬಳಕೆಯಾಗುವ ಪದಾರ್ಥಗಳ ಖಂಡಾಂತರ ಮೂಲವು ಗುರುತಿಸಲು ಕಷ್ಟವಾಗುವಂತೆ ಮಿಲನ ಏರ್ಪಟ್ಟಿದೆ.

ಕರ್ನಾಟಕದ ಆಹಾರ ಬಹುತ್ವದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಗಳ ಪಾಲು ಸಮಸಮನಾಗಿದೆ. ರೊಟ್ಟಿಗಳಲ್ಲಿ ಹಾಸನ ಸೀಮೆಯ ಬಳೇರೊಟ್ಟಿ, ಕರಾವಳಿ ಕೋರಿರೊಟ್ಟಿ, ತಾಳಿಪಟ್ಟು, ತಂದೂರಿ, ರುಮಾಲಿ ರೋಟಿ, ರಾಜಸ್ಥಾನದ ಫುಲ್ಕ ಮತ್ತು ಕೆಂಡದ ರೊಟ್ಟಿ, ಚಳ್ಳಕೆರೆ ಭಾಗದ ಹಬೆಚಪಾತಿ. ಅನ್ನಗಳಲ್ಲಿ ಚಿತ್ರಾನ್ನ ಹುಳಿಯನ್ನ ಪುಳಿಯೊಗರೆ ಮೊಸರನ್ನ ಮೆಂತ್ಯಬಾತ್ ಟೊಮೊಟೊಬಾತ್, ವಾಂಗಿಬಾತ್; ಜನಪ್ರಿಯ ಸಂಸ್ಕೃತಿಯ ಭಾಗವಾಗಿರುವ ಮಾಂಸಾಹಾರದಲ್ಲೂ ಬಹಳ ವೈವಿಧ್ಯಗಳಿವ. ಮಂಡ್ಯ ಸೀಮೆಯಲ್ಲಿ ಬೀಗರೂಟವು ಖ್ಯಾತವಾಗಿರುವುದು ಮಾಂಸದ ಅಡುಗೆಗಳಿಂದ. ಉರುಸು ಮಾರಿಹಬ್ಬ ಜನಪ್ರಿಯವಾಗಿರುವುದು ಮಾಂಸ ಭಕ್ಷ್ಯಗಳಿಂದ.

ಸಾಮಾನ್ಯವಾಗಿ ಉತ್ತರ ಕರ್ನಾಟಕವು ಜೋಳದ, ಕರಾವಳಿ-ಮಲೆಸೀಮೆಗಳು ಅಕ್ಕಿಯ, ದಕ್ಷಿಣ ಕರ್ನಾಟಕವು ರಾಗಿಯ ಕೇಂದ್ರದಲ್ಲಿ ತಮ್ಮ ಆಹಾರ ಸಂಸ್ಕೃತಿ ರೂಪಿಸಿಕೊಂಡಿವೆ. ಆದರೆ ಈ ಸಂಸ್ಕೃತಿಗಳು ಅಂತರ್‌ಪ್ರಾಂತೀಯ ಚಲನೆಯನ್ನೂ ಪಡೆದುಕೊಂಡಿವೆ. ಉಡುಪಿ ಹೋಟೆಲುಗಳ ದೆಸೆಯಿಂದ ದಕ್ಷಿಣ ಕರ್ನಾಟಕಕ್ಕೆ ಸೀಮಿತವಾದ ಇಡ್ಲಿ ದೋಸೆಗಳು ಅಖಿಲ ಕರ್ನಾಟಕವಾಗಿವೆ. ಕೆಲವು ಊರುಗಳು ಒಂದೊಂದು ವಿಶಿಷ್ಟ ಆಹಾರಕ್ಕೆ ಹೆಸರಾಗಿವೆ. ಕ್ಯಾತ್ಸಂದ್ರದ ತಟ್ಟೆಇಡ್ಲಿ, ದಾವಣಗೆರೆಯ ಬೆಣ್ಣೆದೋಸೆ, ಗೋಕಾಕದ ಕರದಂಟು, ಬೆಳಗಾವಿಯ ಕುಂದಾ, ಮಂಗಳೂರಿನ ನೀರ್‌ದೋಸೆ ಇತ್ಯಾದಿ. ಕೆಲವು ಆಹಾರಗಳಿಗೆ ಕೆಲವು ಹೋಟೆಲುಗಳು ಪ್ರಸಿದ್ಧವಾಗಿವೆ- ಮೈಲಾರಿ ಹೋಟೆಲಿನ ದೋಸೆ, ಕುಂದಾಪುರದ ಶೆಟ್ಟಿ ಮತ್ತು ಮಂಗಳೂರಿನ ನಾರಾಯಣ ಹೋಟೆಲಿನ ಮೀನೂಟ, ಧಾರವಾಡದ ಪ್ರಭು ಖಾನಾವಳಿಯ ರೊಟ್ಟಿ, ಬಿಡದಿಯ ರೇಣುಕಾ ಹೋಟೆಲಿನ ತಟ್ಟೆಯಿಡ್ಲಿ, ಶಿವಾಜಿನಗರದ ಬಿರಿಯಾನಿ, ಬಾಬುರಾಯನಕೊಪ್ಪಲಿನ ತಲೆಕಾಲು ಬೋಟಿಸಾರು, ಗಾಂಧಿಬಜಾರಿನ ವಿದ್ಯಾರ್ಥಿಭವನದ ಮಸಾಲೆದೋಸೆ, ಎಂಟಿಆರ್‌ನ ತಿಂಡಿಗಳು ಹೀಗೆ. ಈಚೆಗೆ ಅಡುಗೆಯ ಯೂಟೂಬ್ ಚಾನಲ್ಲುಗಳೂ ಪಾಕತಜ್ಞರೂ ಜನಪ್ರಿಯ ಆಗಿರುವುದುಂಟು. ಮುಖ್ಯವಾಗಿ ಮೀನು-ಮಾಂಸದ ಅಡುಗೆಗಳು ಹಿಂಜರಿಕೆ ಕಳೆದುಕೊಂಡಿವೆ. ಒಂದು ಪ್ರದೇಶದ ಆಹಾರವು ಅಡುಗೆಪುಸ್ತಕದ ನೆರವಿಲ್ಲದೆಯೇ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ವಲಸೆಹೋಗುತ್ತಿದೆ. ಸಾಂಸ್ಕೃತಿಕ ಬಹುತ್ವದ ದೃಷ್ಟಿಯಿಂದ ಆಹಾರವು ಉಡುಪು ಭಾಷೆಗಳಿಗಿಂತ ಹೆಚ್ಚು ಸಂಚಲನಕಾರಿ.

ಆಹಾರ ಬಹುತ್ವಕ್ಕೂ ಮೇಲ್ವರ್ಗದ ವಿಲಾಸಿ ಅಭಿರುಚಿ, ಆರೋಗ್ಯ, ಜನವಲಸೆಗಳಿಗೂ ವಿಶಿಷ್ಟ ಸಂಬಂಧವಿದೆ. ಬೆಂಗಳೂರು ಕಾಸ್ಮೊಪಾಲಿಟನ್ ನಗರವಾಗಿ ಬೆಳೆದ ಬಳಿಕ, ಜಾಗತಿಕ ವರ್ಗಾವಣೆಯಿರುವ ಕಂಪನಿಗಳಲ್ಲಿ ದುಡಿವವರು ವಲಸೆ ಬಂದಿದ್ದಾರೆ. ಇಲ್ಲಿ ಗುಜರಾತಿ ಬಂಗಾಳಿ ರಾಜಸ್ಥಾನಿ ಕೇರಳ; ಚೀನೀ ಜಪಾನಿ ಥಾಯಿ ಇಟಾಲಿಯನ್ ಟರ್ಕಿಶ್ ಅರೇಬಿಯನ್ ಆಹಾರಗಳು ಲಭ್ಯವಿವೆ. ವಿಶ್ವಾತ್ಮಕ ಮತ್ತು ಸ್ಥಳೀಯ ಆಹಾರಗಳೆರಡೂ ಒಂದೇ ಹೋಟೆಲಿನಲ್ಲಿ ಉಣ್ಣಬಹುದು. ಇವನ್ನು ಒಂದೇ ಟೇಬಲಿನಲ್ಲಿ ಕೂತು ತರಿಸಿಕೊಂಡು ಜನ ತಿನ್ನುವರು. ಈ ಸಹನಶೀಲ ಬಹುತ್ವದ ಹಿಂದೆ ಉಚ್ಚವರ್ಗದ ಜೀವನಕ್ರಮದ ಸ್ವಾತಂತ್ರ್ಯವೂ ಇದೆ. ಉತ್ತರ ಕರ್ನಾಟಕದ ರೊಟ್ಟಿಯೂಟ, ಕರಾವಳಿಯ ಮೀನೂಟ, ದಕ್ಷಿಣ ಕರ್ನಾಟಕದ ಮುದ್ದೆ-ಉಪ್ಸಾರು, ಕೊಡಗಿನ ಪಂದಿಕರಿ ಸಿಗುತ್ತವೆ. ಹೋಟೆಲುಗಳು ಬೇರೆಬೇರೆ ಭಾಗಕ್ಕೆ ಅಡುಗೆಯವರನ್ನು ಕಳಿಸಿ ಬಂಗುಡೆ ಮಸಾಲೆ ವಗ್ಗಾಣಿ ಮಿರ್ಚಿ ಜೋಳದರೊಟ್ಟಿ ಬಿರಿಯಾನಿ ಮಾಡುವ ತರಬೇತಿ ಕೊಡಿಸಿವೆ. ಬಡಿಸಲು ದೇಶೀ ಉಡುಪು ಧರಿಸಿದ ಹಲವು ಭಾಷೆಯನ್ನಾಡುವ ಮಾಣಿಗಳು. ಊಟ ಮಾಡುವಾಗ ಕಾಣುವಂತೆ ನಾಡಿನ ವಿಭಿನ್ನ ಪ್ರದೇಶದ ರಂಗಭೂಮಿ ಕ್ರೀಡೆ ನೃತ್ಯ ಜಾತ್ರೆಗಳ ಪಟಗಳನ್ನು ಹಾಕಿ ಸ್ಥಳೀಯ ಪರಂಪರೆಯ ಭಾವ ಬರುವಂತೆ ಮಾಡಲಾಗಿದೆ.

ಆಹಾರ ಬಹುತ್ವ ಮತ್ತು ದೇಶೀಯತೆಯು ಈಗ ಅನಾರೋಗ್ಯದಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆಯಿಂದಲೂ ಏರ್ಪಡುತ್ತಿದೆ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಬಂದ ಅಣೆಕಟ್ಟು, ಹಸಿರುಕ್ರಾಂತಿ, ಯಾಂತ್ರೀಕೃತ ಕೃಷಿ, ಜಂಕ್‌ಫುಡ್ಡಿನ ಜನಪ್ರಿಯತೆಗಳು, ಬೆಳೆ ಮತ್ತು ಆಹಾರ ಪದ್ಧತಿಯಲ್ಲಿದ್ದ ಪಾರಂಪರಿಕ ಬಹುತ್ವ ಮತ್ತು ದೇಶೀಯತೆಯನ್ನು ವಿಚಲಿತಗೊಳಿಸಿದವು. ಈಗಲೂ ಡ್ಯಾಮಿನ ಹಿಂದು-ಮುಂದಿನ ಬೆಳೆ ಮತ್ತು ಆಹಾರ ಪದ್ಧತಿಗಳ ವ್ಯತ್ಯಾಸ ಗಮನಿಸಬಹುದು. ಡ್ಯಾಮಿನ ಹಿಂದೆ ಕಾಲುವೆ ನೀರು ಹರಿಯದ ಜಾಗಗಳಲ್ಲಿ ಮಳೆಯಾಸರೆಯ ಹತ್ತಾರು ಬೆಳೆಯನ್ನು ಬೆಳೆವ ಹೊಲಗಳಿದ್ದರೆ, ಡ್ಯಾಮಿನ ಮುಂದೆ ಕಾಲುವೆ ನೀರಿನಿಂದ ಗದ್ದೆಗಳಲ್ಲಿ ಕೇವಲ ಭತ್ತ ಬಾಳೆ ಕಬ್ಬು. ಈ ಬೆಳೆಪದ್ಧತಿ ಮತ್ತು ಆಹಾರಗಳ ಏಕರೂಪಿಕರಣವು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕಿತು. ಸಮಾಜ ಏಕರೂಪಿಯಾದ ಕೃತಕ ಆಹಾರದಿಂದ ಬಹುತ್ವದ ಸಹಜ ಆಹಾರಕ್ಕೆ ಹಿಂದಿರುಗಲು ಆರಂಭಿಸಿತು. ಸಹಜಕೃಷಿ ಸಾವಯವ ಕೃಷಿಗಳು ಜನಪ್ರಿಯ ಆದವು. ಭತ್ತದ ಬೆಳೆಯ ಸಾರ್ವತ್ರಿಕತೆಯಿಂದ ಬಡವರ ಧಾನ್ಯಗಳೆಂದು ತಿರಸ್ಕೃತವಾಗಿದ್ದ ರಾಗಿ ಜೋಳ ನವಣೆ ಬರಗ ಕೊರಲೆ ಸಾವೆಗಳಿಗೂ ಅವುಗಳ ಆಹಾರಕ್ಕೂ ಹೊಸ ಮಾರುಕಟ್ಟೆ ಸೃಷ್ಟಿಯಾಯಿತು. ಹೋಟೆಲುಗಳಲ್ಲಿ ಸಿರಿಧಾನ್ಯದ ಆಹಾರ ಲಭ್ಯವಾಗತೊಡಗಿತು. ಈ ಬಹುತ್ವವು ಬಿಕ್ಕಟ್ಟನ್ನು ಎದುರಿಸುತ್ತ ಅಸ್ತಿತ್ವ ಉಳಿಸಿಕೊಳ್ಳುವುದರ ಭಾಗವಾಗಿ ಬಂದಿದ್ದು. ಆಹಾರ ಸಂಸ್ಕೃತಿಯಲ್ಲಿರುವ ಶ್ರೇಣೀಕರಣ ಮತ್ತು ತರತಮವನ್ನು ಅಳಿಸಲೆಂದು ಅಲ್ಲ. ಇದನ್ನು ಬಿಕ್ಕಟ್ಟಿನಲ್ಲಿ ಹುಟ್ಟುವ ಬಹುತ್ವಪ್ರಜ್ಞೆ ಎನ್ನಬಹುದು.

ಜಾಗತೀಕರಣದ ಭಾಗವಾಗಿರುವ ಬಂಡವಾಳವಾದವು, ಸಾಮಾನ್ಯವಾಗಿ ತನ್ನ ಏಕರೂಪೀ ಉತ್ಪನ್ನಗಳಿಗೆ ಬೇಕಾದ ಮಾರುಕಟ್ಟೆ ಸೃಷ್ಟಿಸಲು, ಸ್ಥಳೀಯ ವೈವಿಧ್ಯವನ್ನು ನಾಶ ಮಾಡುತ್ತದೆ. ಅಮೆರಿಕನ್ ಪಾನೀಯ ಕಂಪನಿಗಳು ಇದಕ್ಕೆ ನಿದರ್ಶನ. ಆದರೆ ಇದೇ ಮಾರುಕಟ್ಟೆ ಶಕ್ತಿಗಳು ಲಾಭಕ್ಕಾಗಿ ಸ್ಥಳೀಯ ವೈವಿಧ್ಯ ಮತ್ತು ಬಹುತ್ವವನ್ನು ಬಳಸುತ್ತವೆ. ನಮ್ಮ ಆಹಾರ ವೈವಿಧ್ಯ ಮತ್ತು ಬಹುತ್ವದ ಹಿಂದೆ ಆಧುನಿಕ ಬಂಡವಾಳಶಾಹಿ ಉತ್ಪಾದನಾ ಕ್ರಮವು ಹುಟ್ಟಿಸಿದ ಏಕರೂಪೀತನದ ಒತ್ತಡವಿರಬಹುದು; ಆಹಾರದ ಏಕತಾನದಿಂದ ಬದಲಾವಣೆ ಬಯಸುವ ಮಧ್ಯಮವರ್ಗದ ವಿಲಾಸಿ ಬದುಕಿನ ಆಶೋತ್ತರಗಳಿರಬಹುದು. ನಫೆಗಾಗಿ ಏಕಾಕಾರೀ ದ್ವೇಷ ಅಥವಾ ಬಹುತ್ವರೂಪೀ ಸಹನಶೀಲತೆಯನ್ನೂ ಮಾರುವ ವ್ಯಾಪಾರಿ ಜಗತ್ತಿನ ಅವಕಾಶವಾದಿ ಧೋರಣೆಯೂ ಇರಬಹುದು. ಮಹಾನಗರಗಳ ಆಹಾರ ಬಹುತ್ವವು ಕಾಸ್ಮೊಪಾಲಿಟನ್ ನಗರದ ಗ್ರಾಹಕರನ್ನು ಸೆಳೆಯಲು ರೂಪುಗೊಂಡ ವಣಿಕ ತಂತ್ರವೇ ಹೊರತು, ಭಾರತದ ರಾಜಕೀಯ ಸಾಮಾಜಿಕ ಬಹುತ್ವಕ್ಕೆ ಸಂಬಂಧಪಟ್ಟಿದ್ದಲ್ಲ. ಯಾಕೆಂದರೆ ಇದೇ ಮಹಾನಗರಗಳು, ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ಏಕರೂಪೀ ಸಂಸ್ಕೃತಿಯ ಹೇರುವ ಬಲಪಂಥೀಯ ಪಕ್ಷಗಳನ್ನು ಸಾಮಾನ್ಯವಾಗಿ ಚುನಾವಣೆಗಳಲ್ಲಿ ಆರಿಸುವರು.

ಇದನ್ನೂ ಓದಿ: ಆಹಾರ ಶ್ರೇಷ್ಠತೆಯ ರಾಜಕೀಯದ ವಿವಿಧ ಮುಖಗಳು

ಆಹಾರ ಬಹುತ್ವವು ನಾನಾ ಕಾರಣಗಳಿಂದ ಚಳವಳಿಯಾಗಿ ಮೌಲ್ಯವಾಗಿ ಹರಡುತ್ತಿರುವ ಕಾಲಕ್ಕೆ, ಮಾಂಸಾಹಾರವನ್ನು ತಾಮಸವೆಂದು ಹೀಗಳೆವ ಸಂಗತಿಗಳು ಭಾರತದಲ್ಲಿ ಹೆಚ್ಚಾಗುತ್ತಿವೆ. ಇದೊಂದು ವೈರುಧ್ಯ. ಆದರೆ ಈ ವೈರುಧ್ಯದ ಬೇರುಗಳು ನಮ್ಮ ಸಂಪ್ರದಾಯಗಳಲ್ಲಿವೆ. ಕನ್ನಡ ಸಾಹಿತ್ಯದಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಉಣ್ಣುವ ವರ್ಣನೆಗಳು ತೀರ ಕಡಿಮೆ. ಮಾಂಸಾಹಾರವನ್ನು ಅಸಹ್ಯವೆಂದೂ ಹಿಂಸೆಯೆಂದೂ ಬಣ್ಣಿಸುವ ನೂರಾರು ಸನ್ನಿವೇಶಗಳು ಕನ್ನಡ ಸಾಹಿತ್ಯದಲ್ಲಿವೆ. ಜೈನ ಲಿಂಗಾಯತ ಬ್ರಾಹ್ಮಣ ಲೇಖಕರು, ಮಾಂಸಾಹಾರ ಪ್ರಾಣಿಬಲಿಗಳ ಮೇಲೆ ತಳೆದ ಧಾರ್ಮಿಕ ನಿಲುವು ಸಹ ಆಹಾರದ ದುರುಳೀಕರಣವನ್ನು ಸಾಮಾನ್ಯವಾಗಿಸಿತು. ಕನ್ನಡದ ಸಿನಿಮಾಗಳಲ್ಲೂ ಮಾಂಸಾಹಾರ ಅಡುವ-ತಿನ್ನುವ ದೃಶ್ಯ ಕಡಿಮೆ. ನಿಜಜೀವನದಲ್ಲಿ ಮಾಂಸಾಹಾರಿಯಾಗಿದ್ದ ರಾಜಕುಮಾರ್ ಅವರ ಚಿತ್ರಗಳಲ್ಲಿ ಮುದ್ದೆ ಅನ್ನ ರೊಟ್ಟಿ ತಿನ್ನುವ ದೃಶ್ಯಗಳು ಮಾತ್ರ ಇವೆ. ಕನ್ನಡ ಸಿನಿಮಾ ನಿರ್ಮಾಣದಲ್ಲಿ ಬ್ರಾಹ್ಮಣವಾದಿ ಆಲೋಚನೆ ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿದ್ದುದು ಇದಕ್ಕೊಂದು ಕಾರಣ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕೇಡಿಯ ಬಣ್ಣ ಕಪ್ಪು. ಅವನು ಮಾಂಸಾಹಾರಿ ಮತ್ತು ಸೆರೆಗುಡುಕ. ಆಹಾರವೈವಿಧ್ಯಕ್ಕೆ ವಿರುದ್ಧವಾದ ಮನೋಭಾವವನ್ನು ಬ್ರಾಹ್ಮಣವಾದಿ ಸಿನಿಮಾ ಮತ್ತು ಸಾಹಿತ್ಯಗಳು ಉದ್ದಕ್ಕೂ ಉತ್ಪಾದಿಸಿದವು. ವಿದೇಶೀ ಉಡುಗೆ ಭಾಷೆ ಆಧುನಿಕತೆ ತಂತ್ರಜ್ಞಾನ ತರಕಾರಿ ಹಣ್ಣು ಆಹಾರಗಳ ಸ್ವೀಕಾರದಲ್ಲಿ ಉದಾರವಾದಿ ಆಗಿರುವ ಸಮಾಜವು, ಹಿಂಸೆ ಜಾತಿ ಮತೀಯ ಅಸ್ಮಿತೆಗಳಿಗೆ ತಗುಲಿಕೊಂಡು ಮಾಂಸಾಹಾರದ ಬಗ್ಗೆ ನೇತ್ಯಾತ್ಮಕ ಧೋರಣೆ ಬೆಳೆಸಿಕೊಂಡಿದ್ದು ವೈರುಧ್ಯ. ಕುವೆಂಪು ‘ರಾಮಾಯಣ ದರ್ಶನಂ’ ಬರೆದು ಮುಗಿಸುವ ತನಕ ಮಾಂಸಾಹಾರ ತ್ಯಜಿಸಿದ್ದರು ಎಂಬ ಮಾಹಿತಿ ಕೂಡ, ಆಹಾರವು ಆಧ್ಯಾತ್ಮಿಕ ಸಾಧನೆಗೆ ತೊಡಕು ತಾಮಸ ಎಂಬ ನಿಲುವಿನಿಂದ ಹುಟ್ಟಿದ್ದು. ಬೆಂಗಳೂರಿನಲ್ಲಿ ಕಾಫಿ ಚಹಗಳನ್ನು, ವಿದೇಶದಿಂದ ಬಂದವು ಮತ್ತು ತಾಮಸಗುಣ ಹೊಂದಿವೆಯೆಂದು ಹೊರಗಿನ ಗೂಡಿನಲ್ಲಿ ಸರಬರಾಜು ಮಾಡುವ ಹೋಟೆಲುಗಳಿವೆ. ಭಾರತದಲ್ಲಿ ಸಸ್ಯಾಹಾರವಾದವು ವೈಜ್ಞಾನಿಕವಾಗಿ ತಪ್ಪಾಗಿದೆ ಮಾತ್ರವಲ್ಲ, ಸಾಂಸ್ಕೃತಿಕವಾಗಿ ಬಹುರೂಪತೆಯನ್ನು ನಿರಾಕರಿಸುವ ಶುದ್ಧತೆಯ ವ್ಯಸನವಾಗಿದೆ. ಹೆಚ್ಚಿನ ’ಶುದ್ಧ’ ಸಸ್ಯಾಹಾರಿಗಳು ಹಿಂಸೆಯಲ್ಲಿ ನಂಬಿಕೆಯುಳ್ಳ ಸಿದ್ಧಾಂತಗಳಲ್ಲಿ ರಾಜಕೀಯ ಒಲವುಳ್ಳವರಾಗಿರುತ್ತಾರೆ.

ಹೀಗೆ ಸಸ್ಯಾಹಾರವಾದವು ಭಾರತದಲ್ಲಿ ಆಹಾರ ವೈವಿಧ್ಯವನ್ನು ನಿರಾಕರಿಸುವ, ಆಹಾರ ದ್ವೇಷಿಸುವ ಮತ್ತು ಹೇರುವ ಉಪಕರಣವಾಗಿದೆ. ಕನ್ನಡದಲ್ಲಿ ಮಾಂಸಾಹಾರ ಸಸ್ಯಾಹಾರ ಶಬ್ದಗಳು ಆಹಾರ ಸಂಸ್ಕೃತಿಯನ್ನು ಲಂಬವಾಗಿ ವಿಭಜಿಸುವ ತರತಮೀಯ ಪರಿಕಲ್ಪನೆಗಳಾಗಿದ್ದು, ಇವು ಅವಾಸ್ತವಿಕವೂ ಆಗಿವೆ. ನಮ್ಮ ಸಮಾಜದಲ್ಲಿ ಕೇವಲ ಮಾಂಸಾಹಾರಿಗಳಿಲ್ಲ. ಅನ್ನ ಮುದ್ದೆ ರೊಟ್ಟಿಗಳ ಭಾಗವಾಗಿಯೇ ಮಾಂಸ ಮೀನು ಮೊಟ್ಟೆ ಸ್ವೀಕರಿಸುವರು. ಮಾಂಸದ ಸಾರಿನಲ್ಲಿ ತರಕಾರಿ ಹಾಕುವರು. ಸಸ್ಯಾಹಾರವಲ್ಲದ್ದು ಎಂಬ ನೇತ್ಯಾತ್ಮಕ ಪರಿಕಲ್ಪನೆಯಲ್ಲಿ ಹುಟ್ಟಿದ ‘ನಾನ್‌ವೆಜ್’ ಶಬ್ದ ಮತ್ತಷ್ಟು ಬಹುತ್ವವಿರೋಧಿ. ‘ಸಸ್ಯಾಹಾರ’ ‘ಶುದ್ಧಸಸ್ಯಾಹಾರ’ ಪರಿಕಲ್ಪನೆಗಳು ವೈಜ್ಞಾನಿಕವಲ್ಲ. ಹಾಲು ತುಪ್ಪ ಮೊಸರ ಮಜ್ಜಿಗೆಗಳು ಪ್ರಾಣಿಜನ್ಯ ವಸ್ತುಗಳು. ಮೊಸರು ಮಜ್ಜಿಗೆಗಳಲ್ಲಿರುವ ಹುಳಿಯನ್ನು, ದೋಸೆ ಇಡ್ಲಿ ಹಿಟ್ಟಿನಲ್ಲಿರುವ ಬುರುಗನ್ನು ಸೂಕ್ಷ್ಮ ಜೀವಾಣುಗಳು ಸೃಷ್ಟಿಸುತ್ತವೆ. ಜೇನಂತೂ ಕೀಟಗಳ ಎಂಜಲು. ಹಾಲನ್ನು ಕರುವಿನಿಂದ ಜೇನನ್ನು ಕೀಟಗಳಿಂದ ಕಸಿದುಕೊಳ್ಳುವುದು ಹಿಂಸೆಯೇ.

ಚಿತ್ರನಟ ರಾಜಕುಮಾರ್ ಅವರು ಮಾಂಸಾಹಾರ ಸವಿಯುತ್ತಿರುವ ಪಟವೊಂದು ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಅದನ್ನು ಮಾಂಸಾಹಾರ ಪ್ರಿಯರು ತಮ್ಮ ಆಹಾರದ ಜನಪ್ರಿಯತೆಗೂ ಅದರ ನ್ಯಾಯಬದ್ಧತೆಗೂ ನಿದರ್ಶನವಾಗಿ ಬಳಸುವರು. ಇದು ಆಹಾರವು ತನ್ನ ಸಹಜ ಅಸ್ತಿತ್ವಕ್ಕೆ ಮಾಡುವ ಹೋರಾಟದ ಸಂಕೇತದಂತಿದೆ. ಮಾಂಸಾಹಾರವನ್ನು ತಾಮಸ ಆಹಾರವೆಂದು ಹೀಗಳೆವ ಸಂಗತಿಗಳು ಸಮಾಜದಲ್ಲಿ ಹೆಚ್ಚಾಗುತ್ತಿವೆ. ಶಾಲೆಯ ಮಕ್ಕಳಿಗೆ ಮೊಟ್ಟೆ ಕೊಡುವ ನಿರ್ಧಾರಕ್ಕೆ ಧಾರ್ಮಿಕ ವಲಯಗಳಿಂದ ಬಂದ ಪ್ರತಿರೋಧವನ್ನು ನೆನೆಯಬೇಕು. ಆಹಾರದಲ್ಲಿ ಬಹುತ್ವ ಹೊಂದಿರುವ ಸಮಾಜವೇ ಜಾತಿಪದ್ಧತಿ ಧರ್ಮದ್ವೇಷ, ಪುರುಷವಾದಂತಹ ಬಹುತ್ವವಿರೋಧಿ ಆಲೋಚನಾಕ್ರಮಗಳಿಗೂ ಅವಕಾಶ ಕೊಟ್ಟಿದೆ. ಇದು ದೇವರೊಬ್ಬ ನಾಮಹಲವು, ಎಲ್ಲದರಲ್ಲೂ ಬ್ರಹ್ಮನಿದ್ದಾನೆ ಎಂಬ ದಾರ್ಶನಿಕತೆ ಇರುವ ದೇಶದಲ್ಲೇ ದೇವರ ಹೆಸರಲ್ಲಿ ಹೆಚ್ಚು ಕ್ರೌರ್ಯಗಳು ನಡೆಯುವಂತೆ. ಈ ಹಿನ್ನೆಲೆಯಲ್ಲಿ ಅಸಹ್ಯಬಾರದಂತೆ ಪ್ರಾಣಿಬಲಿ ಮಾಂಸಾಹಾರದ ಅಡುಗೆ ತಿನ್ನಾಟವನ್ನು ಬಣ್ಣಿಸುವ ‘ಬದುಕು’ ಕಾದಂಬರಿ, ಮಾಂಸಾಹಾರಿ ಆಹಾರ ತಯಾರಿಸುವ ಯೂಟ್ಯೂಬರುಗಳು ಆಹಾರ ಬಹುತ್ವವನ್ನು ಎತ್ತಿಹಿಡಿಯುವುದು ಮುಖ್ಯ ಸಂಗತಿಯಾಗಿದೆ.

ಪ್ರೊ. ರಹಮತ್ ತರೀಕೆರೆ

ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು- ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...