Homeಅಂಕಣಗಳುಗೌರಿ ಕಾರ್ನರ್; ಗಾಂಧಿವಾದಿಯ ಆಶ್ರಮವೂ ಸರ್ಕಾರದ ಸಮರವೂ..

ಗೌರಿ ಕಾರ್ನರ್; ಗಾಂಧಿವಾದಿಯ ಆಶ್ರಮವೂ ಸರ್ಕಾರದ ಸಮರವೂ..

- Advertisement -
- Advertisement -

ಇನ್ನು ಕೆಲವೇ ದಿನಗಳಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 140ನೇ ಜನ್ಮದಿನವನ್ನು ಆಚರಿಸಲಿರುವ ದೇಶದಲ್ಲಿ, ಬರುವ ವಾರ ಭಾರತೀಯರ ವಿರುದ್ಧವೇ ಪ್ರಥಮ ಬಾರಿಗೆ ಯುದ್ಧವನ್ನು ಸರ್ಕಾರ ಸಾರಲಿರುವ ಹಿನ್ನೆಲೆಯಲ್ಲಿ ಹಿಮಾಂಶುಕುಮಾರ್ ಎಂಬುವವರಿಗೆ ಕೆಲ ತಿಂಗಳ ಹಿಂದೆ ಆದದ್ದನ್ನು ನೆನಪು ಮಾಡಿಕೊಳ್ಳುವುದು ಅತ್ಯಗತ್ಯ.

ಹಿಮಾಂಶುಕುಮಾರ್ ಅಪ್ಪಟ ಗಾಂಧಿವಾದಿ. ಗಾಂಧಿಯವರು ಯುವಜನತೆ ಈ ದೇಶದ ಬಡವರೊಂದಿಗೆ ವಾಸಿಸಬೇಕೆಂದೂ, ಅವರ ಏಳಿಗೆಗಾಗಿ ಶ್ರಮಿಸಬೇಕೆಂದೂ ಹೇಳಿದ್ದನ್ನೇ ತನ್ನ ಜೀವನದ ಆದರ್ಶ ಎಂದು ಭಾವಿಸಿದ ಹಿಮಾಂಶು ಅವರು 17 ವರ್ಷಗಳ ಹಿಂದೆ ಛತ್ತೀಸಗಡದ ದಾಂತೆವಾಡಕ್ಕೆ ಹೋದರು. ಅದಕ್ಕೆ ಕಾರಣ ದೇಶದ ಅತಿ ಹಿಂದುಳಿದ ಪ್ರದೇಶ ದಾಂತೆವಾಡವಾಗಿದ್ದು. ಅಲ್ಲಿಯ ಆದಿವಾಸಿಗಳಿಗೆ ಸರ್ಕಾರವು ಮೂಲ ಸೌಲಭ್ಯಗಳನ್ನೂ ನೀಡದಿದ್ದದ್ದು. ಗಾಂಧಿಯಂತೆಯೇ ಸರಳ ಜೀವನ ಅನುಸರಿಸುವ ಹಿಮಾಂಶು ದಾಂತೆವಾಡದಲ್ಲಿ ಆದಿವಾಸಿಗಳ ಅಭಿವೃದ್ಧಿಗೆಂದು ‘ವನವಾಸಿ ಚೇತನ ಆಶ್ರಮ’ ಎಂಬ ಸರ್ಕಾರೇತರ ಸಂಸ್ಥೆಯನ್ನು ಪ್ರಾರಂಭಿಸಿದರು.

ಕಾಲಕ್ರಮೇಣ ಆ ಆಶ್ರಮವು ಸ್ಥಳೀಯ ಆದಿವಾಸಿಗಳಿಗೆ ಆಶಾಕಿರಣವಾಯಿತು. ಕಾಲರಾ, ಮಲೇರಿಯಾದಂತಹ ಕಾಯಿಲೆಗಳಿಂದಾಗಿ ಸಾವನ್ನಪ್ಪುತ್ತಿದ್ದ ಆದಿವಾಸಿಗಳಿಗೆ ಆಶ್ರಮದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೊತೆಗೆ ಪ್ರಾಥಮಿಕ ಶಿಕ್ಷಣ ನೀಡುವುದು, ಶೌಚಾಲಯಗಳನ್ನು ಸ್ಥಾಪಿಸುವುದು, ಕುಡಿಯುವ ನೀರನ್ನು ಸಂಗ್ರಹಿಸುವುದು, ತಮ್ಮ ಹಕ್ಕುಗಳ ಬಗ್ಗೆ ಪ್ರಜ್ಞೆಯನ್ನು ಹೆಚ್ಚಿಸುವುದು, ಇಂತಹ ಸಮಾಜೋದ್ಧಾರ ಕ್ರಿಯೆಗಳಲ್ಲಿ ಹಿಮಾಂಶು ಮತ್ತವರ ಆಶ್ರಮ ಸಕ್ರಿಯವಾಗಿತ್ತು. ಸಾವಿರಾರು ಆದಿವಾಸಿಗಳ ನೆರವಿಗೆ ಬಂದಿದ್ದ ಈ ಆಶ್ರಮ ನಿರ್ಮಲಾ ದೇಶಪಾಂಡೆ ತರಹದ ಹಿರಿಯ ಗಾಂಧಿವಾದಿಗಳ ಮೆಚ್ಚುಗೆಯನ್ನು ಪಡೆದಿತ್ತು; ಖ್ಯಾತ ಲೇಖಕಿ ಮತ್ತು ಜನಪರ ಚಿಂತಕಿ ಅರುಂಧತಿ ರಾಯ್ ತರಹದ ಜನರಿಂದ ಪ್ರೋತ್ಸಾಹದ ಮಾತುಗಳನ್ನು ಗಳಿಸಿತ್ತು.

ಸರ್ಕಾರ ಮಾಡಬೇಕಿದ್ದ ಕೆಲಸಗಳನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದ ಹಿಮಾಂಶು ಅವರ ಆಶ್ರಮವನ್ನು ಛತ್ತೀಸಗಡದ ಸರ್ಕಾರವೂ ಬೆಂಬಲಿಸಬೇಕಿತ್ತು. ಆದರೆ ಕಳೆದ ಮೇ ತಿಂಗಳು ಅಲ್ಲಿನ ರಾಜ್ಯ ಸರ್ಕಾರ ಮಾಡಿದ್ದೇನು ಗೊತ್ತಾ? ಸುಮಾರು ಒಂದು ಸಾವಿರ ಪೊಲೀಸರನ್ನು ಮತ್ತು ಜೆಸಿಬಿ ಯಂತ್ರಗಳನ್ನು ಕಳುಹಿಸಿದ ರಾಜ್ಯ ಸರ್ಕಾರ ಇಡೀ ಆಶ್ರಮವನ್ನೇ ಧ್ವಂಸಗೊಳಿಸಿತು! ಈ ಧ್ವಂಸ ಕಾರ್ಯ ಎಷ್ಟು ವ್ಯವಸ್ಥಿತವಾಗಿ ನಡೆಯಿತೆಂದರೆ ಆಶ್ರಮದ ಅಡುಗೆ ಮನೆ, ಔಷಧಾಲಯ, ಕಚೇರಿ, ಆದಿವಾಸಿಗಳು ತಂಗುತ್ತಿದ್ದ ಮನೆ, ಶೌಚಾಲಯ, ಟೆಲಿಫೋನ್ ಟವರ್ ಎಲ್ಲವನ್ನೂ ನುಚ್ಚುನೂರು ಮಾಡಿತು. ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ಯಾರೂ ಆಶ್ರಮದ ಭಗ್ನಾವಶೇಷಗಳ ನಡುವೆಯೂ ವಾಸಿಸಬಾರದೆಂದು ಅಲ್ಲಿದ್ದ ಒಂದೇ ಒಂದು ಬೋರ್‌ವೆಲ್ ಅನ್ನೂ ಕಿತ್ತು ಹಾಕಿತು.

PC : Youth Ki Awaaz

ಗಾಂಧಿವಾದಿ ಹಿಮಾಂಶು ಅವರಿಗೆ ಗಾಂಧಿ ನಾಡಾದ ಭಾರತದಲ್ಲಿ ನೀಡಲಾದ ಕೊಡುಗೆ ಇದು!

ಹಿಮಾಂಶು ಅವರ ವಿರುದ್ಧ ಛತ್ತೀಸಗಡದ ಸರ್ಕಾರ ಕೆಂಡಾಮಂಡಲವಾಗುವುದಕ್ಕೆ ಕಾರಣವಿದೆ. ಅದು ಛತ್ತೀಸಗಡದ ಆದಿವಾಸಿಗಳ ಬೆಂಬಲವನ್ನು ಪಡೆದಿರುವ ಮಾವೊವಾದಿಗಳನ್ನು ನಿಗ್ರಹಿಸುವ ನೆಪದಲ್ಲಿ ರಾಜ್ಯ ಪೊಲೀಸರು ಮತ್ತು ಅವರು ಸ್ಥಾಪಿಸಿರುವ ಸಂವಿಧಾನಬಾಹಿರ ಸಲ್ವಾಜುಡುಂ ಎಂಬ ಪಡೆಯ ಹಿಂಸಾಕೃತ್ಯಗಳನ್ನು ಹಿಮಾಂಶು ವಿರೋಧಿಸಿದ್ದು.

ಆ ರಾಜ್ಯದಲ್ಲಿ ಪೊಲೀಸರು ಮತ್ತು ಸಲ್ವಾಜುಡುಂನವರು ಎಂತೆಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂಬುದಕ್ಕೆ ಈ ವರ್ಷ ವ್ರೆಚ್ಚಾಪಾಲ್ ಎಂಬ ಗ್ರಾಮದಲ್ಲಾದ್ದದ್ದನ್ನೇ ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

ಕಾಡಿನ ಮಧ್ಯದಲ್ಲಿರುವ ವ್ರೆಚ್ಚಾಪಾಲ್ ಗ್ರಾಮದಲ್ಲಿ ಸುಮಾರು 140 ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮದ ಹತ್ತಿರವೇ ಕಬ್ಬಿನ ಅದಿರಿಗೆ ಅನ್ವೇಷಣೆ ನಡೆಸಲು ಟಾಟಾ ಮತ್ತು ಎಸ್ಸಾರ್ ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಿದೆ. ಸಹಜವಾಗಿಯೇ ಗ್ರಾಮದ ಜನ ಅದನ್ನು ವಿರೋಧಿಸಿದರು. ಆಗ ಈ ಗ್ರಾಮದ ಮೇಲೆ ಪೊಲೀಸರು ಮತ್ತು ಸಲ್ವಾಜುಡುಂ ಪಡೆಗಳು ಮುಗಿಬಿದ್ದವು. ಕಳೆದ ನಾಲ್ಕು ವರ್ಷಗಳಲ್ಲಿ ಈ ಗ್ರಾಮವನ್ನು ಹಲವಾರು ಬಾರಿ ನೆಲಸಮ ಮಾಡಲಾಗಿದೆ. ಆದರೂ ಧೃತಿಗೆಡದ ಆದಿವಾಸಿಗಳು ಮತ್ತೆಮತ್ತೆ ತಮ್ಮ ಹಳ್ಳಿಗೆ ವಾಪಸ್ ಬಂದು ತಮ್ಮ ಬದುಕನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಟಾಟಾ ಮತ್ತು ಎಸ್ಸಾರ್ ಕಂಪನಿಗಳ ಕೈಗಳಿಗೆ ಈ ಭೂಮಿ ಸಿಗಬೇಕೆಂದರೆ ಆದಿವಾಸಿಗಳು ಆ ಜಾಗವನ್ನು ಬಿಟ್ಟು ತೊಲಗಬೇಕು. ಆದರೆ ಹಠ ಬಿಡದ ಆದಿವಾಸಿಗಳೋ ಕದಲುತ್ತಿಲ್ಲ. ಪೊಲೀಸರು ಮತ್ತಷ್ಟು ಕ್ರೂರಿಗಳಾದರು. ಕಳೆದ ಜೂನ್ ತಿಂಗಳಲ್ಲಿ ಆ ಗ್ರಾಮದ ಮೇಲೆ ಪೊಲೀಸರು ಮತ್ತು ಸಲ್ವಾಜುಡುಂ ಗೂಂಡಾಗಳು ಮತ್ತೆ ದಾಳಿ ಮಾಡಿ ಒಬ್ಬನನ್ನು ಕೊಂದು, ಓರ್ವ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಸುಮಾರು ನಲವತ್ತು ಮನೆಗಳಿಗೆ ಬೆಂಕಿ ಇಟ್ಟು, ಹೊಲಗಳಲ್ಲಿ ಬೆಳೆದುನಿಂತಿದ್ದ ಭತ್ತದ ಬೆಳೆಯನ್ನು ನಾಶ ಮಾಡಿದರು.

ಆಗ ಆ ಗ್ರಾಮದ ಜನರ ನೆರವಿಗೆ ಧಾವಿಸಿದ್ದು ಹಿಮಾಂಶು ಮತ್ತು ಅವರ ತಂಡ. ಗ್ರಾಮದ ಮೇಲಿನ ದಾಳಿ ಮತ್ತು ಅಮಾಯಕನ ಕೊಲೆಯನ್ನು ಖಂಡಿಸಿದ ಹಿಮಾಂಶು ಅಲ್ಲಿನ ಜನರಿಗೆ ಅಕ್ಕಿ ಬೇಳೆ ಕೊಟ್ಟರು. ಇದು ಸರ್ಕಾರವನ್ನು ಮತ್ತಷ್ಟು ಉಗ್ರವಾಗಿಸಿತು. ಆಗಸ್ಟ್ 9ರಂದು ವ್ರೆಚ್ಚಾಪಾಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮೇಲೆ ಮತ್ತೊಂದು ದಾಳಿ ನಡೆಯಿತು. ಆ ದಾಳಿ ಎರಡು ದಿನಗಳ ಕಾಲ ನಡೆದು, ಆರು ಆದಿವಾಸಿಗಳು ಕೊಲ್ಲಲ್ಪಟ್ಟರು. ದಾಂತೆವಾಡದ ಎಸ್‌ಪಿ ಪ್ರಕಾರ ಆ ಆರು ಜನರೂ ನಕ್ಸಲರಾಗಿದ್ದು ಅವರೆಲ್ಲರನ್ನು ’ಎನ್‌ಕೌಂಟರ್’ನಲ್ಲಿ ಪೊಲೀಸರು ಕೊಂದಿದ್ದರು. ಆದರೆ ಪತ್ರಿಕೆಗಳಲ್ಲಿ ಪ್ರಕಟವಾದ ಫೋಟೋಗಳಲ್ಲಿ ಸತ್ತ ಐವರ ಕೈಕಾಲುಗಳನ್ನು ಹಗ್ಗದಲ್ಲಿ ಕಟ್ಟಿ ಹಾಕಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅಂದು ಮಡಿದವರಲ್ಲಿ ಓರ್ವ ಮಹಿಳೆಯೂ ಇದ್ದು ಆಕೆಯ ಕೊರಳಿಗೆ ದೊಡ್ಡ ಕಲ್ಲನ್ನು ಕಟ್ಟಿಹಾಕಿದ್ದೂ ಆನಂತರದ ದಿನಗಳಲ್ಲಿ ಗೊತ್ತಾಯಿತು. “ಸರ್ಕಾರ ಯಾಕೆ ಹೀಗೆ ಅಮಾಯಕರನ್ನು ಕೊಲ್ಲುತ್ತಿದೆ?” ಎಂದು ಹಿಮಾಂಶು ಅವರು ಪ್ರಶ್ನಿಸಿದ್ದು ಸರ್ಕಾರಕ್ಕೆ ಮುಜುಗರದ ವಿಷಯವಾಗಿ ಪರಿಣಮಿಸಿತು.

ಇದು ಛತ್ತೀಸಗಡದ ಒಂದು ಗ್ರಾಮದ ಕತೆಯಷ್ಟೇ. ಇಂತಹದ್ದೇ ದೌರ್ಜನ್ಯ ಇತರೆ ಗ್ರಾಮಗಳಲ್ಲೂ ಪುನರಾವರ್ತನೆಯಾಗುತ್ತಿದೆ.

ಇನ್ನು ಅತ್ಯಾಚಾರಕ್ಕೊಳಗಾಗಿರುವ ಅಲ್ಲಿನ ಮಹಿಳೆಯರ ಪರಿಸ್ಥಿತಿಯಂತೂ ಕೇಳಲಸಾಧ್ಯ. ಪೊಲೀಸ್ ಮತ್ತು ಸಲ್ವಾಜುಡುಂನ ಗೂಂಡಾಗಳಿಂದ ಅತ್ಯಾಚಾರಕ್ಕೊಳಗಾಗಿದ್ದ ಆರು ಮಹಿಳೆಯರು ಹಿಮಾಂಶು ಅವರ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. ಹಿಮಾಂಶು ಅವರ ನೆರವಿನಿಂದ ಆ ಮಹಿಳೆಯರು ತಮ್ಮ ಮೇಲೆ ಅತ್ಯಾಚಾರವೆಸಗಿದ್ದವರ ವಿರುದ್ಧ ದೂರು ಕೊಡಲು ಯತ್ನಿಸಿದರು. ಕಾನೂನಿನ ಪ್ರಕಾರ ಮಹಿಳೆಯೊಬ್ಬಳು ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದರೂ ಸಾಕು ಕೇಸನ್ನು ದಾಖಲಿಸಿಕೊಳ್ಳಲು. ಆದರೆ ದಾಂತೆವಾಡದ ಎಸ್‌ಪಿ ಅವರ ದೂರನ್ನು ದಾಖಲಿಸಿಕೊಳ್ಳಲಿಲ್ಲ. ಅಷ್ಟೇ ಅಲ್ಲ, ಅಲ್ಲಿನ ಮ್ಯಾಜಿಸ್ಟ್ರೇಟ್, ಜಿಲ್ಲಾ ಜಡ್ಜ್ ಮತ್ತು ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗಳು ಕೂಡ ಅವರ ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು.

ಹಿಮಾಂಶು ಇದನ್ನು ಪ್ರಶ್ನಿಸಿ ಸರ್ಕಾರಕ್ಕೆ ಇನ್ನಷ್ಟು ಮುಜುಗರ ಆಗುವಂತೆ ಮಾಡಿದರು.

ಆದ್ದರಿಂದ ಅವರನ್ನು ಒದ್ದೋಡಿಸಲು ಅವರ ಆಶ್ರಮವನ್ನೇ ನಾಶಗೊಳಿಸಲಾಯಿತು. ಅಷ್ಟೇ ಅಲ್ಲ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬ ಅವರಿಗೆ ಉಚಿತ ಸಲಹೆಯನ್ನು ನೀಡಿದ. “ನೀನು ಈ ಆಶ್ರಮವನ್ನು ಮಾತ್ರವಲ್ಲ, ಈ ಜಿಲ್ಲೆಯನ್ನೇ ತೊರೆದರೆ ನಿನಗೆ ಕ್ಷೇಮ” ಎಂದ ಆ ಪೊಲೀಸ್.

PC : Human Rights Watch

ಆದರೆ ಹಿಮಾಂಶು ಅಲ್ಲಿಂದ ಹೊರಟಿಲ್ಲ. “ನಾನು ಆದಿವಾಸಿ ಅಲ್ಲ. ಆದರೆ ಮಹಾತ್ಮಾ ಗಾಂಧಿ ಹೇಳಿದ್ದಂತೆ ಆದಿವಾಸಿಗಳೊಂದಿಗೆ ಬದುಕಲು ಇಲ್ಲಿಗೆ ಬಂದಿದ್ದೇನೆ. ಇಲ್ಲಿನ ಜನ ಹೇಗೆ ಇಲ್ಲೇ ಮಣ್ಣಾಗುತ್ತಾರೋ, ನಾನೂ ಅವರಂತೆಯೇ ಇಲ್ಲೇ ಸಾಯುತ್ತೇನೆ, ಅಷ್ಟೇ ಅಲ್ಲ, ನಾನು ಬದುಕಿರುವವರೆಗೂ ನಿರಾಯುಧ ಆದಿವಾಸಿಗಳ ಮೇಲೆ ಸರ್ಕಾರ ನಡೆಸುತ್ತಿರುವ ಈ ಅಮಾನುಷ ಯುದ್ಧವನ್ನು ವಿರೋಧಿಸುತ್ತಲೇ ಇರುತ್ತೇನೆ” ಎಂದು ಅವರು ಹೇಳುತ್ತಾರೆ.

ಸದ್ಯದಲ್ಲೇ ಪ್ರಾರಂಭವಾಗಲಿರುವ ’ಆಪರೇಷನ್ ಗ್ರೀನ್ ಹಂಟ್’ ಬಗ್ಗೆ ಹಿಮಾಂಶು ಹೀಗೆ ಹೇಳುತ್ತಾರೆ: “ನಕ್ಸಲಿಸಂ ಒಂದು ಸಮಸ್ಯೆ ಎಂಬುದರ ಬಗ್ಗೆ ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಆದರೆ ಸಾವಿನಲ್ಲಿ ಅಂತ್ಯಗೊಳ್ಳುವ ಅವರ ರಾಜಕೀಯದತ್ತ ಈ ಬಡಜನತೆ ಯಾಕೆ ಆಕರ್ಷಿತರಾಗುತ್ತಿದ್ದಾರೆ? ನಮ್ಮ ವ್ಯವಸ್ಥೆಯಿಂದಾಗುವ ಅವಮಾನ ಮತ್ತು ಅನ್ಯಾಯಗಳನ್ನು ಸಹಿಸುವುದಕ್ಕಿಂತ ಮರಣವೇ ಆಕರ್ಷಿಕವಾಗಿ ಕಾಣಿಸುವಂತಹ ಘೋರ ವ್ಯವಸ್ಥೆಯನ್ನು ಸೃಷ್ಟಿಸಿದ್ದೇವೆಯೇ? ಹಾಗಿದ್ದರೆ ಅಂತಹ ವ್ಯವಸ್ಥೆಯನ್ನು ಹೇಗೆ ಸಮರ್ಥಿಸಿಕೊಳ್ಳುವುದು? ಇಲ್ಲಿನ ಜನರಿಗೆ ಬೇಕಿರುವುದು ಆಹಾರ, ಆರೋಗ್ಯ ವ್ಯವಸ್ಥೆ, ಶಾಲೆ, ಬಟ್ಟೆ ಮತ್ತು ತಮ್ಮ ಭೂಮಿಯ ಮೇಲಿನ ನ್ಯಾಯಬದ್ಧವಾದ ಹಕ್ಕು ಮಾತ್ರ. ಅದನ್ನು ನೀಡಿ ಅವರನ್ನೆಲ್ಲ ಮುಖ್ಯವಾಹಿನಿಗೆ ತರುವ ಬದಲು, ಬಂದೂಕುಗಳ ಮೂಲಕವೇ ಪ್ರಜಾಪ್ರಭುತ್ವವನ್ನು ನಡೆಸುತ್ತೇವೆ ಎಂದು ಭಾವಿಸಿದರೆ, ನಾವು ಭಯಾನಕ ಮತ್ತು ರಿಪೇರಿ ಮಾಡಲಾಗದಂತಹ ಸ್ಥಿತಿಯನ್ನು ಪ್ರವೇಶಿಸುತ್ತೇವೆ”.

ಅವರ ಈ ಮಾತುಗಳು ಯಾರ ಕಿವಿಗೂ ಬೀಳುತ್ತಿಲ್ಲ.

ಗಾಂಧಿವಾದಿ ಹಿಮಾಂಶು ಅವರ ಆಶ್ರಮವನ್ನು ಕೆಡವಿದ ನಂತರದ ಒಂದು ವಿಡಿಯೋಅನ್ನು ಇಂಟರ್‌ನೆಟ್‌ನಲ್ಲಿ ನೋಡಿದೆ. ಅದರಲ್ಲಿನ ಒಂದು ದೃಶ್ಯ ನನ್ನ ಕಣ್ಣಿಗೆ ಈಗಲೂ ಕಟ್ಟಿದಂತಿದೆ. ಅದು ಪಾಳುಬಿದ್ದಿರುವ ಔಷಧಾಲಯ. ಔಷಧಿಗಳು, ಕಾಗದ ಪತ್ರಗಳು ನೆಲದ ಮೇಲೆ ಹರಡಿ ಬಿದ್ದಿವೆ. ಮಳೆ ಬಿದ್ದಿದ್ದರಿಂದ ಆ ಹಾಳೆಗಳಿಗೆ ಕೆಸರು ಅಂಟಿದೆ.

ಆ ಹಾಳೆಗಳ ನಡುವೆ ಕೆಸರು ಮೆತ್ತಿಕೊಂಡು ಬಿದ್ದಿತ್ತು ನಗುಮುಖದ ಬಾಪುವಿನ ಚಿತ್ರ॒

(ಅಕ್ಟೋಬರ್ 14, 2009ರಂದು ಗೌರಿಯವರು ಬರೆದಿದ್ದ ’ಕಂಡಹಾಗೆ’ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್; ರೇವತಿ ಎಂಬ ತಂಗಿಯ ಆತ್ಮಕಥನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...