Homeಕರ್ನಾಟಕಗೌರಿ ಹತ್ಯೆಯ ತನಿಖೆಯ ಜಾಡು ಹಿಡಿದು ಹೊರಟಾಗ ಸಿಕ್ಕ ಸತ್ಯಗಳು... ಭಾಗ-2

ಗೌರಿ ಹತ್ಯೆಯ ತನಿಖೆಯ ಜಾಡು ಹಿಡಿದು ಹೊರಟಾಗ ಸಿಕ್ಕ ಸತ್ಯಗಳು… ಭಾಗ-2

- Advertisement -
- Advertisement -

ಭಾಗ-2 ಕೃಪೆ: ದಿ ಕ್ವಿಂಟ್
ನಿರೂಪಣೆ: ನಿಖಿಲ್ ಕೋಲ್ಪೆ

ಭಾಗ 1 ಓದಲು ಇಲ್ಲಿ ಕ್ಲಿಕ್‌ ಮಾಡಿ: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕರ್ನಾಟಕ ವಿಶೇಷ ತನಿಖಾ ದಳ (SIT) ಭೇದಿಸಿದ್ದಾದರೂ ಹೇಗೆ?

3. ಅಮೋಲ್ ಕಾಳೆ- ಸಂಚುಕೋರ

ಬುದ್ಧಿಜೀವಿಗಳನ್ನು ಕೊಲ್ಲಲು ಸಿದ್ಧರಿರುವ ಮಿಕಗಳನ್ನು ಹುಡುಕುವ ಕೆಲಸ ಮಾಡುತ್ತಿದ್ದ ಪ್ರವೀಣನನ್ನು 20 ದಿನಗಳ ಕಾಲ ಹಿಂಬಾಲಿಸಿದ ಎಸ್‌ಐಟಿ, ಆತನ ಚಲನವಲನಗಳ ನಕ್ಷೆ ತಯಾರಿಸಿತು (ಮ್ಯಾಪಿಂಗ್). ಪೊಲೀಸರು ತಮ್ಮ ಸರ್ವರ್ ಬಳಸಿ, ಅದೇ ದಾರಿಯಲ್ಲಿ ಸಾಗುವ ಮೊಬೈಲ್ ಫೋನ್‌ಗಳನ್ನು ಟ್ರ್ಯಾಕ್ ಮಾಡಿದರು. ಕೆಲವೇ ಗಂಟೆಗಳಲ್ಲಿ ಪ್ರವೀಣನ ಮೊಬೈಲ್ ಯಾವ ನಂಬರಿನದು ಎಂದು ಗೊತ್ತಾಯಿತು. ಅದರ ಜಿಯೋ ಲೊಕೇಶನ್ ಅವನ ಜೊತೆಗೇ ಸಾಗುತ್ತಿತ್ತು. ಪ್ರವೀಣ ಒಂದು ಕರೆಯಲ್ಲಿ ಆತ ‘ಭಾಯಿ ಸಾಬ್’ ಎಂದು ಕರೆದ ವ್ಯಕ್ತಿಯನ್ನು ಭೇಟಿಯಾಗಲಿರುವ ಬಗ್ಗೆ ಮಾತನಾಡಿದ. ಈ ಹೆಸರನ್ನು ಭಗವಾನ್ ಹತ್ಯೆ ಸಂಚಿನ ಪ್ರಕರಣದಲ್ಲಿ ಬಂಧಿತರಾಗಿದ್ದ ಕೆಲವರ ವಿಚಾರಣೆಯ ವೇಳೆಯೂ ಪೊಲೀಸರು ಕೇಳಿದ್ದರು.

ಈ ಭೇಟಿಗೆ ಹೋಗಲಿದ್ದ ಪ್ರವೀಣನನ್ನು ಹಿಂಬಾಲಿಸಲು ಪೊಲೀಸರು ನಿರ್ಧರಿಸಿದರು. ಈ ಭೇಟಿ ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿತ್ತು. ಆದರೆ, ಆತ ಆ ಸ್ಥಳವನ್ನು ತಲಪುವ ಮೊದಲೇ ಅವನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ‘ಭಾಯ್ ಸಾಬ್‌’ನನ್ನು ತೋರಿಸಲು ಹೇಳಿದರು. ಆತ ಒಂದು ಕೆಂಪು ವ್ಯಾನನ್ನು ತೋರಿಸಿದ. ಪೋಲೀಸರು ಆ ವ್ಯಾನನ್ನು ಸುತ್ತುವರಿದಾಗ ಅದರಲ್ಲಿ ಇದ್ದವರು ಮೂವರು- ಭಾಯಿ ಸಾಬ್ ಯಾನೆ ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಮತ್ತು ಮನೋಹರ್ ಎಡವೆ.

4. ನಾಲ್ಕು ಗುಪ್ತ ಡೈರಿಗಳು

ಗೌರಿ ಲಂಕೇಶರನ್ನು ಹತ್ಯೆ ಮಾಡಿದ ಗುಂಪು ಈಗ ಎಸ್ಐಟಿ ವಶದಲ್ಲಿತ್ತು. ಇವರಲ್ಲಿ ಕಾಳೆ- ಹತ್ಯೆಯ ಯೋಜಕ ಅಥವಾ ಸಂಚುಕೋರನಾಗಿದ್ದ. ಅಮಿತ್ ದೇಗ್ವೇಕರ್ ಗೌರಿ ಹತ್ಯೆಗೆ ಹಣಕಾಸು ಒದಗಿಸಿದ್ದ ಆರೋಪಿ ಮತ್ತು ಮನೋಹರ ಎಡವೆ ಕರ್ನಾಟಕರಲ್ಲಿ ತಮ್ಮ ಗುಂಪಿಗಾಗಿ ಕೆಲಸ ಮಾಡಲು ಮಿಕಗಳನ್ನು ಹುಡುಕುತ್ತಿದ್ದ ಇನ್ನೊಬ್ಬ ಅಸಾಮಿ. ಆದರೆ, ಇವರ್ಯಾರೂ ಗುಂಪಿನ ಇತರ ಸದಸ್ಯರನ್ನು ಗುರುತಿಸಲು ಎಸ್‌ಐಟಿ ಜೊತೆ ಸಹಕರಿಸಲಿಲ್ಲ. ಅಂದರೆ, ನಿಜವಾಗಿಯೂ ಗುಂಡುಹಾರಿಸಿ ಕೊಂದ ತಂಡ ಯಾವುದು ಎಂದು ಅವರು ಬಾಯಿ ಬಿಡಲಿಲ್ಲ.

ಅವರು ಬಾಯಿ ಬಿಡಬೇಕಾದ ಅಗತ್ಯವೂ ಇರಲಿಲ್ಲ. ಅವರ ಮನೆಗಳ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ ನಾಲ್ಕು ದಿನಚರಿಗಳು ಸಾಕ್ಷಿಗಳಾಗಿ ಬಾಯಿಬಿಟ್ಟವು! ಅಮೋಲ್ ಕಾಳೆಯ ಮನೆಯಲ್ಲಿ ಎರಡು ಮತ್ತು ಎಡವೆ ಮತ್ತು ಪ್ರವೀಣನ ಮನೆಗಳಲ್ಲಿ ತಲಾ ಒಂದೊಂದು ಡೈರಿಗಳು ಎಸ್‌ಐಟಿಗೆ ಸಿಕ್ಕಿದ್ದವು. ಈ ಡೈರಿಗಳಲ್ಲಿ ಸಂಕೇತ ಭಾಷೆಯಲ್ಲಿ ಬರೆದ ಹಲವಾರು ಹೆಸರುಗಳು ಮತ್ತು ಫೋನ್ ನಂಬರ್‌ಗಳಿದ್ದವು.

ಕಾಳೆಯ ಡೈರಿಯಲ್ಲಿ ಒಂದು ಚೀಟಿ ಎಸ್‌ಐಟಿಗೆ ಸಿಕ್ಕಿತ್ತು. ಅದನ್ನೂ ಸಂಕೇತ ಭಾಷೆಯಲ್ಲಿ ಬರೆಯಲಾಗಿತ್ತು. ಯಾವಯಾವ ದಿನ ಏನನ್ನು ಮಾಡಬೇಕು ಎಂದು ಅದರಲ್ಲಿ ಬರೆಯಲಾಗಿತ್ತು. ಆ ಚೀಟಿಯಲ್ಲಿದ್ದ ಕೊನೆಯ ದಿನಾಂಕ- 5 ಸೆಪ್ಟೆಂಬರ್, 2017. ಅದುವೇ ಗೌರಿ ಹತ್ಯೆಯಾದ ದಿನ. ಈ ಚೀಟಿ ಸಾಮಾನ್ಯವಲ್ಲ; ಅದು ಗೌರಿ ಹತ್ಯೆಯ ನೀಲನಕ್ಷೆ ಎಂದು ಪೊಲೀಸರಿಗೆ ಮನವರಿಕೆಯಾಯಿತು.

ಪ್ರವೀಣ ಮತ್ತು ಎಡವೆಯ ಮನೆಗಳಲ್ಲಿ ಸಿಕ್ಕಿದ ಡೈರಿಗಳಲ್ಲಿ ಜಿಲ್ಲಾವಾರು ಹೆಸರುಗಳು ಮತ್ತು ಫೋನ್ ನಂಬರುಗಳು ಇದ್ದವು. ಆದರೆ, ಹೆಸರುಗಳನ್ನು ಕೂಡಾ ಸಂಕೇತ ಭಾಷೆಯಲ್ಲಿ ಬರೆಯಲಾಗಿತ್ತು. ವಿಚಾರಣೆ ಮತ್ತು ಡೈರಿಗಳಲ್ಲಿ ಇದ್ದ ಮಾಹಿತಿಗಳ ವಿಶ್ಲೇಷಣೆಯಿಂದ ಎಸ್‌ಐಟಿಗೆ ತಿಳಿದಿದ್ದದ್ದೇನೆಂದರೆ, ಇವೆಲ್ಲವೂ ಮುಂದೆ ಇವರ ಗುಂಪನ್ನು ಸೇರುವ ಸಾಧ್ಯತೆ ಇರುವ ವ್ಯಕ್ತಿಗಳ ವಿವರಗಳಾಗಿದ್ದವು. ಇನ್ನೊಂದು ವಿಷಯ ಎಂದರೆ, ಪ್ರವೀಣ ದಕ್ಷಿಣ ಮತ್ತು ಪಶ್ಚಿಮ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿದ್ದರೆ, ಎಡವೆ ಉತ್ತರ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿದ್ದ.

5. ಪರಶುರಾಮ ವಾಘ್‌ಮೋರೆ- ಹತ್ಯೆಯ ಆರೋಪಿ

ಗೌರಿ ಹತ್ಯೆಯ ಸೂತ್ರದಾರರು ಈಗ ಎಸ್ಐಟಿ ವಶದಲ್ಲಿದ್ದರೂ, ನಿಜವಾಗಿಯೂ ಗುಂಡು ಹೊಡೆದು ಕೊಂದವರು ಹೊರಗೆಯೇ ತಿರುಗಾಡುತ್ತಿದ್ದರು. ಎಸ್‌ಐಟಿ ಕಸ್ಟಡಿಯಲ್ಲಿದ್ದ ಆರೋಪಿಗಳು ದಪ್ಪ ಚರ್ಮದ ಗಿರಾಕಿಗಳು ಎಂದು ಎಸ್‌ಐಟಿಗೆ ಮನವರಿಕೆಯಾಗುತ್ತಾ ಬರುತ್ತಿತ್ತು. ಪೋಲೀಸರು ಅನೇಕ ರೀತಿಯ ವಿಚಾರಣಾ ತಂತ್ರಗಳನ್ನು ಬಳಸಿದರು. ಆರೋಪಿಗಳನ್ನು ಪ್ರಚೋದಿಸುವುದು, ಅವರೊಂದಿಗೆ ತಾತ್ವಿಕ ಚರ್ಚೆಗಳಲ್ಲಿ ತೊಡಗುವುದು ಇತ್ಯಾದಿ. (ಸಾಮಾನ್ಯವಾಗಿ ಪೋಲೀಸರು ಕಳ್ಳಕಾಕರೊಂದಿಗೆ ವ್ಯವಹರಿಸುವಂತೆ ಮೂರನೇ ಡಿಗ್ರಿ ಬಳಸುವಂತಿರಲಿಲ್ಲ. ಬಳಸುವಂತಿದ್ದರೆ, ದೊಡ್ಡ ಜಾಲವೇ ಬಯಲಾಗಿ, ದೊಡ್ಡದೊಡ್ಡ ಕುಳಗಳ ಹೆಸರು ಹೊರಗೆ ಬರುತ್ತಿತ್ತೇನೋ!)

ಪರಶುರಾಮ ವಾಘ್ಮೋರೆ ಪ್ರಮೋದ್‌ ಮುತಾಲಿಕ್‌ನೊಂದಿಗೆ

ಕೊನೆಗೂ ಒಂದು ಸುಳಿವು ಸಿಕ್ಕಿತು. ಅದು ಬಂದದ್ದು ಗೌರಿ ಹತ್ಯೆಗೆ ಹಣಕಾಸು ಒದಗಿಸಿದ್ದ ಆರೋಪಿ ದೇಗ್ವೇಕರ್‌ನಿಂದ. ಒಂದು ದೀರ್ಘ ವಿಚಾರಣೆಯ ವೇಳೆ ಗೌರಿ ಲಂಕೇಶ್ ಅವರನ್ನು ಕೊಂದದ್ದು ಒಬ್ಬ ‘ಬಿಲ್ಡರ್’ ಎಂದು ಆತನ ಬಾಯಿಯಿಂದ ಹೊರಬಂತು. ಎಸ್‌ಐಟಿ ಅಧಿಕಾರಿಗಳು ಡೈರಿಗಳಲ್ಲಿ ಇದ್ದ ಹೆಸರುಗಳನ್ನು ಪರಿಶೀಲಿಸಿ, ಯಾರಾದರೂ ಬಿಲ್ಡರ್‌ಗಳ ಹೆಸರಿದೆಯೇ ಎಂದು ಹುಡುಕುತ್ತಿದ್ದಾಗ ಅಚ್ಚರಿ ಕಾದಿತ್ತು. ಡೈರಿಯಲ್ಲಿ ‘ಬಿಲ್ಡರ್’ ಎಂಬ ಎಂಟ್ರಿ ಇತ್ತು. ಆ ಹೆಸರಿನ ಮುಂದಿದ್ದ ಮೊಬೈಲ್ ನಂಬರ್ ಸ್ವಿಚ್‌ಆಫ್ ಆಗಿತ್ತು. ಆ ಮೊಬೈಲ್ ನಂಬರ್ ಕೊನೆಯ ಬಾರಿಗೆ ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ ಬಳಕೆಯಾಗಿತ್ತು. ಇನ್ನಷ್ಟು ವಿಚಾರಣೆ ನಡೆಸಿದಾಗ ‘ಬಿಲ್ಡರ್’ ಎಂದರೆ ‘ಬಾಡಿ ಬಿಲ್ಡರ್’ ಎಂದು ದೇಗ್ವೇಕರ್ ಬಾಯಿಬಿಟ್ಟ. ಇದಕ್ಕಿಂತ ಮುಂದೆ ಆತ ತನಿಖೆಯಲ್ಲಿ ಸಹಕರಿಸಲಿಲ್ಲ.

ಇದೇ ಹೊತ್ತಿಗೆ ವಿಧಿ ವಿಜ್ಞಾನ (ಫೋರೆನ್ಸಿಕ್) ವರದಿ ಎಸ್‌ಐಟಿಯ ಕೈಯಲ್ಲಿತ್ತು. ಅದು ಸಿಸಿಟಿವಿ ಫೂಟೇಜ್‌ನಿಂದ ಗೌರಿಯವರ ಎತ್ತರ ಬಳಸಿ, ಹಂತಕನ ಅಂದಾಜು ಎತ್ತರವನ್ನು ಲೆಕ್ಕಹಾಕಿತ್ತು. ಆ ವರದಿಯ ಪ್ರಕಾರ ಹಂತಕ ಐದಡಿ ಒಂದಿಂಚಿನ ಕುಳ್ಳಗಿನ ವ್ಯಕ್ತಿ. ಸಿಂಧಗಿಯ ಪೊಲೀಸರನ್ನು ಸಂಪರ್ಕಿಸಿದ ಎಸ್ಐಟಿ, ಆ ಭಾಗದಲ್ಲಿ ಪರಿಚಿತ ಕ್ರಿಮಿನಲ್‌ಗಳು, ವಿಶೇಷವಾಗಿ, ಕೋಮುಗಲಭೆಗಳಲ್ಲಿ ಬಂಧಿತರಾದವರ ಗುರುತು ಹಚ್ಚುವ ಪರೇಡ್ (ಐಡೆಂಟಿಫಿಕೇಷನ್ ಪರೇಡ್) ನಡೆಸುವಂತೆ ಕೇಳಿಕೊಂಡಿತು. ಇದು ಸುಮ್ಮನೇ ಹಳೆ ಆರೋಪಿಗಳ ಯಾದಿಯನ್ನು ನವೀಕರಿಸುವ ಕಾರ್ಯಕ್ರಮದ ಭಾಗವಷ್ಟೇ ಎಂದು ಸಿಂಧಗಿ ಪೊಲೀಸರಿಗೆ ತಿಳಿಸಲಾಯಿತು. (ಪ್ರವೀಣನ ಪ್ರಕರಣದಲ್ಲಿ ನಿಖರ ಮಾಹಿತಿ ಸೋರಿಕೆ ಆದ ಬಳಿಕ ಪೊಲೀಸ್ ಪಡೆಯಲ್ಲೂ ಕೋಮುವಾದಿ ಏಜೆಂಟರು ನುಸುಳಿರುವುದು ಎಸ್‌ಐಟಿಗೆ ಮನವರಿಕೆ ಆಗಿರಬೇಕು. ಅದು ಪೊಲೀಸರನ್ನೂ ನಂಬಲು ಸಿದ್ಧವಿರಲಿಲ್ಲ.)

ಐಡೆಂಟಿಫಿಕೇಷನ್ ಪರೇಡ್ ದಿನ ಅಲ್ಲೊಬ್ಬ ಅಸಾಮಿ ನಿಂತಿದ್ದ. ಅವನ ಎತ್ತರ ಐದಡಿ ಎರಡಿಂಚು ಆಗಿದ್ದು, ದಪ್ಪವಾದ ತೋಳುಗಳನ್ನು ಹೊಂದಿದ್ದ. (ಬಾಡಿ ಬಿಲ್ಡರ್!) ಎಸ್ಐಟಿ ಎಲ್ಲರ ಚಿತ್ರಗಳ ಜೊತೆ ಸಂಶಯಿತ ಹಂತಕನ ಚಿತ್ರವನ್ನೂ ತೆಗೆಯಿತು. ಆತನ ಚಿತ್ರ ಸಿಸಿಟಿವಿ ಫೂಟೇಜ್ ಚಿತ್ರಕ್ಕೆ ತಾಳೆಯಾಗುತ್ತಿತ್ತು. ಮರುದಿನ ಎಸ್‌ಐಟಿ ತಂಡ ಪರಶುರಾಮ ವಾಘ್‌ಮೋರೆಯ ಮನೆಬಾಗಿಲಲ್ಲಿ ನಿಂತಿತ್ತು. ಅಧಿಕಾರಿಗಳು ಹೇಳುವಂತೆ, ಪೊಲೀಸರನ್ನು ಕಂಡು ಆತನಿಗೆ ನಿರಾಳವಾದಂತೆ ಇತ್ತು. ನೀವು ನನ್ನನ್ನು ಹುಡುಕಿಕೊಂಡು ಬಂದೇಬರುತ್ತೀರಿ ಎಂದು ನನಗೆ ಗೊತ್ತಿತ್ತು ಎಂದು ಹೇಳಿದ ಆತ, ಗೌರಿ ಹತ್ಯೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡ. ಎಸ್‌ಐಟಿ ಕಸ್ಟಡಿಯಲ್ಲಿದ್ದ ಆರೋಪಿಯೊಬ್ಬ, ಫೊಟೋ ತೋರಿಸಿದಾಗ ಅದರಲ್ಲಿರುವ ವ್ಯಕ್ತಿ ಪರಶುರಾಮ ವಾಘ್‌ಮೋರೆ ಎಂದು ಒಪ್ಪಿಕೊಂಡ. ಪರಶುರಾಮ ವಾಘ್‌ಮೋರೆ- ಗೌರಿಯವರನ್ನು ಕೊಂದ, ಪಿಸ್ತೂಲಿನ ಟ್ರಿಗರ್ ಎಳೆದ ವ್ಯಕ್ತಿ.

ಎಸ್‌ಐಟಿ ಅಧಿಕಾರಿಗಳು ಹೇಳುವ ಪ್ರಕಾರ, ತನ್ನ ಬಂಧನದಿಂದ ವಾಘ್‌ಮೋರೆಗೆ ನಿರಾಳವಾದರೆ, ಅಮೋಲ್ ಕಾಳೆ ಹತಾಶನಾದ. ವಾಘ್‌ಮೋರೆಯನ್ನು ಬಂಧಿಸಿ ತರುತ್ತಿರುವುದನ್ನು ನೋಡಿದ ತಕ್ಷಣ ಆತ ಗೋಡೆಗೆ ತಲೆ ಬಡಿದ ಎಂದು ಅಧಿಕಾರಿಗಳು ಹೇಳುತ್ತಾರೆ. ನಂತರ ನಡೆದ ವಿಚಾರಣೆಯಲ್ಲಿ ವಾಘ್‌ಮೋರೆ, ಎಸ್‌ಐಟಿಗೆ ಯಾವೆಲ್ಲಾ ಮಾಹಿತಿ ಬೇಕಿತ್ತೋ, ಅವೆಲ್ಲವನ್ನೂ ನೀಡಿದ. ತಾನು, ಇನ್ನಿಬ್ಬರು ವ್ಯಕ್ತಿಗಳು- ಒಬ್ಬ ಅಮಿತ್, ಇನ್ನೊಬ್ಬ ಗಣೇಶ ಎಂಬವರ ಜೊತೆಗೆ ತಂಗಿದ್ದಾಗಿ ಆತ ಬಾಯಿಬಿಟ್ಟ. ಇವರಲ್ಲಿ ಗಣೇಶ, ಗೌರಿ ಹತ್ಯೆಯ ಸಂದರ್ಭದಲ್ಲಿದ್ದ ಬೈಕ್ ಸವಾರ ಮತ್ತು ಅಮಿತ್, ವ್ಯಾನ್ ಬಳಿ ಕಾದು ನಿಂತಿದ್ದ ಮತ್ತು ತನಗೆ ಪಿಸ್ತೂಲು ತಂದುಕೊಟ್ಟ ವ್ಯಕ್ತಿ ಎಂದು ವಾಘ್‌ಮೋರೆ ತಿಳಿಸಿದ.

6. ರೈಡರ್, ಬ್ಯಾಕಪ್ ಮತ್ತು ‘ನೂಡಲ್ಸ್ ಕಾಲು’

ಅಮಿತ್ ಮತ್ತು ಗಣೇಶನನ್ನು ಹಿಡಿಯಲು ಎಸ್‌ಐಟಿಯು ಸ್ಕೆಚ್‌ಗಳನ್ನು ಮಾಡಲು ಶುರುಮಾಡಿತು. ಕಲಾವಿದರು ವಾಘ್‌ಮೋರೆ ನೀಡಿದ ವಿವರಗಳ ಆಧಾರದಲ್ಲಿ ಕಂಪ್ಯೂಟರ್ ಚಿತ್ರಗಳನ್ನು ರಚಿಸಿದರು. ಆಗ ವಾಘ್‌ಮೋರೆ ಒಂದು ವಿಲಕ್ಷಣ ವಿವರಣೆ ನೀಡಿದ. ಅದೆಂದರೆ, ಗಣೇಶನ ಕಾಲುಗಳು ನೂಡಲ್ಸ್‌ನಂತಿವೆ. ಇದು ವೆರಿಕೋಸ್ ವೆಯಿನ್ಸ್ ಅಂದರೆ, ನರಗಳು ಉಬ್ಬಿಕೊಂಡು ಸುರುಳಿ ಸುತ್ತಿ, ಚರ್ಮದ ಮೂಲಕ ಕಾಣಿಸುವ ಸ್ಥಿತಿ ಎಂದು ಎಸ್‌ಐಟಿಗೆ ಗೊತ್ತಾಯಿತು.

ಇದೇ ಹೊತ್ತಿಗೆ ಇನ್ನೊಂದು ತಂಡ ವಶಪಡಿಸಿಕೊಂಡ ನಾಲ್ಕು ಡೈರಿಗಳನ್ನು ಪರಿಶೀಲಿಸುತ್ತಿತ್ತು. ಅವುಗಳಲ್ಲಿ ಗಣೇಶ ಮತ್ತು ಅಮಿತ್ ಎಂಬ ಹೆಸರುಗಳು ಇದ್ದವು. ಇವು ನಿಜ ಹೆಸರುಗಳು ಎಂದು ಪೊಲೀಸರು ನಂಬಲಿಲ್ಲವಾದರೂ, ಅವುಗಳಲ್ಲಿ ಇದ್ದ ಮೊಬೈಲ್ ನಂಬರ್‌ಗಳು  ಹುಬ್ಬಳ್ಳಿ ಜಿಲ್ಲೆಯವು ಎಂದು ತಿಳಿಯಿತು. ಕೂಡಲೇ ಹುಬ್ಬಳ್ಳಿಯ ಪರಿಚಿತ ಕ್ರಿಮಿನಲ್‌ಗಳ ಯಾದಿಯನ್ನು ತರಿಸಿ ಪರಿಶೀಲಿಸಲಾಯಿತು. ಅವುಗಳಲ್ಲಿ ಎರಡು ಹೆಸರುಗಳು ಇದ್ದವು. ಅವೆಂದರೆ, ಗಣೇಶ ಮಿಸ್ಕಿನ್ ಮತ್ತು ಅಮಿತ್ ಬಡ್ಡಿ. ಇವರಿಬ್ಬರೂ 2012ರಲ್ಲಿ ನಡೆದಿದ್ದ ಕೋಮುಗಲಭೆಯೊಂದರಲ್ಲಿ ಬಂಧಿತರಾಗಿದ್ದರು.

ಇವರಿಬ್ಬರನ್ನು ಬಂಧಿಸಲು ತಡವಾಗಲಿಲ್ಲ. ಪೊಲೀಸರು ಗಣೇಶನ ಕಾಲುಗಳನ್ನು ಪರಿಶೀಲಿಸಿದಾಗ, ನೂಡಲ್ಸ್ ಕಾಲುಗಳ ವಿಷಯ ನಿಜವಾಗಿತ್ತು. ಕೆಲವು ದಿನಗಳ ವಿಚಾರಣೆಯ ನಂತರ ಇವರಿಬ್ಬರೂ ಗೌರಿ ಲಂಕೇಶ್ ಹತ್ಯೆಯಲ್ಲಿ ತಮ್ಮ ಶಾಮೀಲಾತಿಯನ್ನು ಒಪ್ಪಿಕೊಂಡರು. ಮಾತ್ರವಲ್ಲ; ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡುವ ಮೊದಲು, 2015ರಲ್ಲಿ ಕಲಬುರ್ಗಿಯವರ ಮನೆಯ ಸುತ್ತ ತಾವು ಪೂರ್ವಭಾವಿ ಪರಿಶೀಲನೆ ನಡೆಸಿದ್ದಾಗಿ ಒಪ್ಪಿಕೊಂಡರು. ವಿಚಾರವಾದಿಗಳಾದ ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ ಮತ್ತು ಗೌರಿ ಹತ್ಯೆಗಳು ಒಂದೇ ರೀತಿಯಲ್ಲಿ ನಡೆದಿದ್ದುದರಿಂದ, ಆ ಹತ್ಯೆಗಳನ್ನು ಕೂಡ ಇದೇ ತಂಡ ಮಾಡಿರಬಹುದು ಎಂಬ ಸಂಶಯವು ಇವರಿಬ್ಬರು ಆರೋಪಿಗಳ ಕೊನೆಯ ಹೇಳಿಕೆಯಿಂದ ಬಹುತೇಕ ಖಚಿತವಾಯಿತು.

ಆದರೆ, ಎಸ್‌ಐಟಿಯ ಕೆಲಸ ಮುಗಿದಿರಲಿಲ್ಲ. ಈ ಬಹುದೊಡ್ಡ ಸಂಚಿನಲ್ಲಿ ಸಹಕರಿಸಿ, ಭಾಗವಹಿಸಿದ್ದ ಬಹಳಷ್ಟು ಮಂದಿಯನ್ನು ಇನ್ನಷ್ಟೇ ಗುರುತಿಸಿ ಬಂಧಿಸುವ ಕೆಲಸ ಬಾಕಿ ಇತ್ತು.

(ಮುಂದುವರಿಯುವುದು)

ಕೊನೆಯ ಭಾಗ ಓದಿ: ಗೌರಿ ಹತ್ಯೆಯ ತನಿಖೆ ನಡೆದದ್ದು ಹೇಗೆ? ಈಗ ಎಲ್ಲಿಯವರೆಗೂ ಬಂದಿದೆ? ಕೊನೆಯ ಭಾಗ ಓದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...