Homeಕರ್ನಾಟಕಗೌರಿ ಹತ್ಯೆ ವಿಚಾರಣೆ: ಹಿಟ್ ಲಿಸ್ಟ್‌‌ನಲ್ಲಿ 8 ವಿಚಾರವಾದಿಗಳ ಹೆಸರಿತ್ತು; ಐದು ಸಾಕ್ಷಿಗಳು ನುಡಿದಿದ್ದೇನು?

ಗೌರಿ ಹತ್ಯೆ ವಿಚಾರಣೆ: ಹಿಟ್ ಲಿಸ್ಟ್‌‌ನಲ್ಲಿ 8 ವಿಚಾರವಾದಿಗಳ ಹೆಸರಿತ್ತು; ಐದು ಸಾಕ್ಷಿಗಳು ನುಡಿದಿದ್ದೇನು?

ಆರೋಪಿ ನವೀನ್‌ಕುಮಾರ್‌ ವೇಸ್ಟ್‌ ಬುಲೆಟ್‌ಗಳನ್ನು ಖರೀದಿಸಿದ್ದು, ಆರೋಪಿಗಳಾದ ಪರಶುರಾಮ ವಾಘ್ಮೋರೆ ಮತ್ತು ಅಮೋಲ್‌ ಕಾಳೆಯ ಡಿಎನ್‌ಎ ತಾಳೆಯಾಗಿದ್ದರ ಕುರಿತು ಸಾಕ್ಷಿಗಳು ನುಡಿದಿವೆ.

- Advertisement -
- Advertisement -

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿದ್ದು ಡಿಸೆಂಬರ್‌ ತಿಂಗಳಲ್ಲಿ ಐವರು ಸಾಕ್ಷಿ ನುಡಿದಿದ್ದು, ಹಲವು ಮಹತ್ವದ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ.

2022 ಡಿಸೆಂಬರ್ ತಿಂಗಳಲ್ಲಿ ಗೌರಿ ಹತ್ಯಾ ಪ್ರಕರಣದ ವಿಚಾರಣೆಯು ಡಿಸೆಂಬರ್ 12 ರಿಂದ 15ರವೆಗೆ ನಾಲ್ಕು ದಿನಗಳು ನಡೆದವು. ಈ ನಾಲ್ಕು ದಿನಗಳಲ್ಲಿ ಐವರು ಸಾಕ್ಷಿಗಳ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲುಗಳು ಮಾತ್ರ ನಡೆಯಲು ಸಾಧ್ಯವಾಗಿದೆ.

ಹಿಟ್‌ ಲಿಸ್ಟ್‌ನಲ್ಲಿ ಎಂಟು ವಿಚಾರವಾದಿಗಳ ಹೆಸರು ಇದ್ದದ್ದು, ಫೋನ್‌ ಕರೆಗಳ ಮಾಹಿತಿ ಸಂಗ್ರಹಿಸಿದ್ದು, ಆರೋಪಿ ನವೀನ್‌ಕುಮಾರ್‌ ವೇಸ್ಟ್‌ ಬುಲೆಟ್‌ಗಳನ್ನು ಖರೀದಿಸಿದ್ದು, ಆರೋಪಿಗಳಾದ ಪರಶುರಾಮ ವಾಘ್ಮೋರೆ ಮತ್ತು ಅಮುಲ್‌ ಕಾಳೆಯ ಡಿಎನ್‌ಎ ತಾಳೆಯಾಗಿದ್ದರ ಕುರಿತು ಸಾಕ್ಷಿಗಳು ತಿಳಿಸಿವೆ.

***

ಸಾಕ್ಷಿ- ರವಿ ನರೋನ್ಹಾ

ಟಾಟಾ ಡೇಟಾ ಟೆಲಿ ಸರ್ವಿಸಸ್‌ನ ಕರ್ನಾಟಕದ ನೋಡಲ್ ಅಧಿಕಾರಿಯಾಗಿರುವ ರವಿ ನರೋನ್ಹಾ ಎಂಬುವರು ಸಾಕ್ಷ್ಯ ನುಡಿಯುತ್ತಾ ಪೋನ್‌ ಕರೆಗಳ ಜಾಲ ಬಿಚ್ಚಿಟ್ಟರು.

“ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು 21.3.2018 ಮತ್ತು 9.9.2018 ರಂದು ಎರಡು ಕೋರಿಕೆಗಳನ್ನು ಮಾಡಿ ಮೊಬೈಲ್ ಸಂಖ್ಯೆಗಳಾದ 8792143630, 8904755446 ಮತ್ತು 9035377415 ಗಳಿಗೆ ಸಂಬಂಧಪಟ್ಟ ಚಂದಾ ಅರ್ಜಿ, ವಿಳಾಸ ಧೃಢೀಕರಣ ಮತ್ತು ಈ ಮೊಬೈಲ್ ನಂಬರುಗಳಲ್ಲಿ 1.3.2017 ರಿಂದ 18.2.2018 ವರೆಗೆ ನಡೆದ ಕರೆ ವರದಿಗಳನ್ನು ಒದಗಿಸಲು ಕೋರಿದರು” ಎಂದು ಮಾಹಿತಿ ನೀಡಿದರು.

ಇದನ್ನೂ ಓದಿರಿ: ಗೌರಿ ಲಂಕೇಶ್ ಹತ್ಯೆ ವಿಚಾರಣೆ: ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಗುರುತಿಸಿದ ಸಾಕ್ಷಿಗೆ ಜೀವ ಬೆದರಿಕೆ

ಮುಂದುವರಿದು, “ಇದರಲ್ಲಿ 9035377415 ಸಂಖ್ಯೆಯ ಚಂದಾದಾರರು ಮದ್ದೂರು ವಿಳಾಸವನ್ನು ಹೊಂದಿದ್ದು ಕೋರಲಾದ ಅವಧಿಗೆ ಸಂಬಂಧಪಟ್ಟ ಕರೆಮಾಹಿತಿಯನ್ನು ಒಳಗೊಂಡ 28 ಪುಟಗಳ ದಾಖಲೆಯನ್ನು ನೀಡಲಾಯಿತು. ಈ ಮೊಬೈಲ್‌ನ ಚಂದಾದಾರರು 4.9.2017ರಿಂದ ಮೊದಲುಗೊಂಡು ಬೆಂಗಳೂರಿನ ಯಶವಂತಪುರದ ಪರಿಧಿಯಲ್ಲಿ ಇದ್ದದ್ದು ಕಂಡುಬರುತ್ತದೆ. 8792143630 ಮೊಬೈಲ್ ಸಂಖ್ಯೆಯ ಚಂದಾದಾರರು ಸಿಂಧಗಿಯ ವಿಳಾಸವನ್ನು ಕೊಟ್ಟಿದ್ದು ಕೋರಿದ ಕಾಲಾವಧಿಯಲ್ಲಿ ನಡೆದ ಕರೆ ಮಾಹಿತಿಗಳುಳ್ಳ ಆರು ಪುಟಗಳ ದಾಖಲೆಯನ್ನು ನೀಡಲಾಗಿದೆ. 8904755446 ಮೊಬೈಲಿನ ಚಂದಾದಾರರು ಹುಬ್ಬಳ್ಳಿಯ ವಿಳಾಸವನ್ನು ನೀಡಿದ್ದು ಕೋರಿದ ಕಾಲಾವಧಿಗೆ ಸಂಬಂಧಪಟ್ಟ 112 ಪುಟಗಳ ಕರೆಮಾಹಿತಿಯನ್ನು ನೀಡಲಾಗಿದೆ” ಎಂದು ಸಾಕ್ಷ್ಯ ನುಡಿದರು. ಅವನ್ನು ತೋರಿಸಿದಾಗ ಅದೇ ಮಾಹಿತಿ ಎಂದು ಧೃಢೀಕರಿಸಿದರು.

***

ಸಾಕ್ಷಿ- ಅಯಾಜುಲ್ಲಾ ಷರೀಫ್‌

ಅಯಾಜುಲ್ಲಾ ಷರೀಫ್ ಅವರು ಬೆಂಗಳೂರಿನ ಕಲಾಸಿ ಪಾಳ್ಯದಲ್ಲಿರುವ ‘ಬೆಂಗಳೂರು ಗನ್ ಹೌಸ್’ನ ಮಾಲೀಕರು.

2018ರ ಮಾರ್ಚ್ 1ರಂದು ಪೊಲೀಸರು ಆರೋಪಿ ನವೀನ್ ಕುಮಾರ್ ಅವರನ್ನು ತಮ್ಮ ಅಂಗಡಿಗೆ ಕರೆದುಕೊಂಡು ಬಂದು ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಬ್ಬೀರ್‌‌ನ ಜೊತೆ ನವೀನ್ ಮಾಡಿರುವ ವ್ಯವಹಾರದ ಬಗ್ಗೆ ಶಬ್ಬೀರನನ್ನು ಕೇಳಿರುವುದಾಗಿ ಸಾಕ್ಷಿ ನುಡಿದರು.

ಆರೋಪಿಗಳಾದ ಕೆ.ಟಿ.ನವೀನ್‌ ಕುಮಾರ್‌, ಪರಶುರಾಮ್ ವಾಘ್ಮೋರೆ

ಅದರಂತೆ ಈಗ್ಗೆ 7-8 ವರ್ಷಗಳ ಕೆಳಗೆ ನವೀನ್ ಕುಮಾರ್ ಎಂಬುವರು 3500ರೂ. ಕೊಟ್ಟು ತಮ್ಮ ಅಂಗಡಿಯಿಂದ ಗನ್ ಒಂದನ್ನು ಖರೀದಿ ಮಾಡಿದ್ದರು. ಅದಾದ ಒಂದು ವಾರಕ್ಕೆ ಮತ್ತೆ ತಮ್ಮ ಅಂಗಡಿಗೆ ಬಂದ ನವೀನ್ ಒಂದು ರಿವಾಲ್ವರ್ ಬೇಕೆಂದು ಕೇಳಿದರು. ಆದರೆ ತಾವು ಲೈಸೆನ್ಸ್ ಇಲ್ಲದೆ ರಿವಾಲ್ವರ್‌‌ನಾಗಲಿ, ಬುಲೆಟ್‌ಗಳನ್ನಾಗಲಿ ಮಾರುವುದಿಲ್ಲ ಎಂದು ಹೇಳಿದವೆಂದು ವಿವರಿಸಿದರು.

ಆದರೆ ಆ ನಂತರ ಶಬ್ಬೀರ್ ಅವರು ನವೀನ್ ಕುಮಾರ್‌ನಿಂದ ಮೂರು ಸಾವಿರ ರೂಪಾಯಿ ಪಡೆದುಕೊಂಡು, ಆತನ ಕೋರಿಕೆಯ ಮೇರೆಗೆ ಅಮ್ಜದ್ ಎಂಬ ಮತ್ತೊಬ್ಬ ಮನುಷ್ಯನಿಂದ ಹಲವಾರು ವೇಸ್ಟ್ ಬುಲೆಟನ್ನು ಎರಡು ಸಾವಿರ ರೂ.ಗಳಿಗೆ ಖರೀದಿಸಿ ಅದನ್ನು ನವೀನ್ ಕುಮಾರ್‌ಗೆ ಕೊಟ್ಟಿದ್ದು ತನಗೆ ನಂತರ ತಿಳಿದು ಬಂದ ಬಗ್ಗೆ ಸಾಕ್ಷ್ಯ ನುಡಿದರು.

***

ಸಾಕ್ಷಿ- ಅಮ್ಜದ್‌

ಅಮ್ಜದ್ ಎಂಬವರು ‘ಬೆಂಗಳೂರು ಆರ್ಮರಿ’ ಎಂಬ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ.

ಅವರು ಸಾಕ್ಷ್ಯ ನುಡಿದು ಶಬ್ಬೀರ್ ಕೋರಿಕೆಯ ಮೇರೆಗೆ ತಮ್ಮ ಅಂಗಡಿಯಲ್ಲಿದ್ದ ವೆಸ್ಟ್ ಬುಲೆಟನ್ನು 2000 ರೂ ಪಡೆದುಕೊಂದು ಶಬ್ಬೀರ್‌ಗೆ ಕೊಟ್ಟ ಬಗ್ಗೆ ತಿಳಿಸಿದರು.

***

ಸಾಕ್ಷಿ: ರಾಜ್‌ಕುಮಾರ್‌

ರಾಜ್‌ಕುಮಾರ್ ಎಂಬುವರು ಕಾಟನ್ ಪೇಟೆಯಲ್ಲಿ ವಾಸವಿರುವ ಡ್ರೈವರ್ ವೃತ್ತಿಯವರು. ಅವರು 2018ರ ಮೇ 20ರ ರಾತ್ರಿ ಕಾಟನ್ ಪೇಟೆ ಪೊಲೀಸ್ ಅಧಿಕಾರಿಯವರ ಕೋರಿಕೆಯ ಮೇರೆಗೆ ಠಾಣೆಗೆ ತೆರಳಿದಾಗ ಅಲ್ಲಿ ಆರೋಪಿ ಸುಜಿತ್ ಕುಮಾರ್ ಇದ್ದರು. ಸುಜಿತ್ ಕುಮಾರ್ ಅವರು ಇತರ ಆರೋಪಿಗಳನ್ನು ದಾವಣಗೆರೆಯಲ್ಲಿ ತೋರಿಸಿಕೊಡಲಿರುವುದರಿಂದ ತಮ್ಮ ಜೊತೆ ದಾವಣಗೆರೆಗೆ ಬಂದು ಪಂಚರಾಗಿ ಸಹಕರಿಸಬೇಕೆಂದು ಪೊಲೀಸರು ನೋಟೀಸು ಕೊಟ್ಟರು.

ಅದರಂತೆ ಆ ರಾತ್ರಿ ಖಾಸಗಿ ವಾಹನದಲ್ಲಿ ತಾನು ಎಸಐಟಿ ಅಧಿಕಾರಿ ಕುಮಾರಸ್ವಾಮಿ, ಮತ್ತೊಬ್ಬ ಪೊಲೀಸ್, ಲೋಕೇಶ್ ಎಂಬುವರು ಹಾಗೂ ಡ್ರೈವರ್ ಜೊತೆ ಸೇರಿಕೊಂಡು ದಾವಣೆಗೆರೆಗೆ ಹೋದವೆಂದು ರಾಜ್‌ಕುಮಾರ್‌ ಸಾಕ್ಷಿ ನುಡಿದರು. ತಾವು ಅಲ್ಲಿಂದ ಹೊರಡುವ ವೇಳೆಗೆ ಮತ್ತೆರೆಡು ವಾಹನಗಳು ಅಲ್ಲಿದ್ದವೆಂದು ತಿಳಿಸಿದರು.

ಇದನ್ನೂ ಓದಿರಿ: ಗೌರಿ ಲಂಕೇಶ್ ಹೋರಾಟ ಸ್ಮರಿಸಿದ ರಾಹುಲ್ ಗಾಂಧಿ: ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆಹಾಕಿದ ಕವಿತಾ, ಇಂದಿರಾ ಲಂಕೇಶ್

ದಾವಣಗೆರೆಯನ್ನು ಮೇ 21ರಂದು ಬೆಳಿಗ್ಗೆ 9.30ಕ್ಕೆ ತಲುಪಿ ದಾವಣಗೆರೆ ಖಾಸಗಿ ಬಸ್ ಸ್ಟಾಂಡಿನ ಬಳಿ ಕಾಯುತ್ತಿದ್ದೆವು. ಆಗ ಸುಜಿತ್ ಕುಮಾರ್ ಅವರು ಅಲ್ಲಿಗೆ ನಡೆದುಕೊಂಡು ಬರುತ್ತಿದ್ದ ಆರೋಪಿಗಳಾದ ಅಮೋಲ್ ಕಾಳೆ ಮತ್ತು ಅಮಿತ್ ದೇಗ್ವೆಕರ್ ಅವರುಗಳನ್ನು ತೋರಿಸಿಕೊಟ್ಟರು. ಅವರನ್ನು ಪೊಲೀಸರು ಬಂಧಿಸಿದರು. ನಂತರ ಬಂಧಿತರು ತೋರಿಸಿದಂತೆ ಅನತಿ ದೂರದಲ್ಲಿದ್ದ ಮಹಾರಾಷ್ಟ್ರ ರಿಜಿಸ್ಟ್ರೇಷನ್ ನಂಬರ್ ಹೊಂದಿದ್ದ ಕೆಂಪು ಬಣ್ಣದ ಇಂಡಿಕಾ ಕಾರಿನಲ್ಲಿ ಕೂತಿದ್ದ ಮನೋಹರ್ ಯಡವೆ ಅವರನ್ನೂ ಕೂಡ ಬಂಧಿಸಿದರು. ನಂತರ ಎಲ್ಲರನ್ನು ಕರೆದುಕೊಂಡು ಪಕ್ಕದಲ್ಲೇ ಇದ್ದ ಗೆಸ್ಟ್ ಹೌಸಿಗೆ ಹೋದವೆಂದು ತಿಳಿಸಿದರು.

ಅಲ್ಲಿ ಪೊಲೀಸರು ತನ್ನ ಸಮಕ್ಷಮದಲ್ಲಿ 168 ವಸ್ತುಗಳನ್ನು ಆ ಮೂವರಿಂದ ವಶಪಡಿಸಿಕೊಂಡು, ಸಿಲ್ ಮಾಡಿ ಅದಕ್ಕೆ ತನ್ನ ಸಹಿ ಪಡೆದರು ಎಂದು ಸಾಕ್ಷಿ ನುಡಿದರು. ಆ ವಸ್ತುಗಳನ್ನು ಕೋರ್ಟಿನಲ್ಲಿ ಸೀಲ್ ತೆಗೆದು ಹಾಜರು ಪಡಿಸಿ ಒಂದೊಂದನ್ನೇ ತೋರಿಸಿ ಕೇಳಿದಾಗ ವಶಪಡಿಸಿಕೊಂಡ ವಸ್ತುಗಳು ಅವೇ ಎಂದು ರಾಜ್‌‌ಕುಮಾರ್ ಗುರುತಿಸಿದರು.

ಅಮೋಲ್ ಕಾಳೆ, ಅಮಿತ್ ದೇಗ್ವೆಕರ್ ಹಾಗೂ ಯಡವೆ ಅವರುಗಳಿಂದ ವಶಪಡಿಸಿಕೊಂಡ ವಸ್ತುಗಳಲ್ಲಿ- ಅಮೋಲ್ ಕಾಳೆ ಹೆಸರಿನಲ್ಲಿದ್ದ ಕೆಂಪು ಇಂಡಿಕಾ ಕಾರಿನ MH 14 DF 2749 ಸಂಖ್ಯೆಯ RC ಕಾರ್ಡು ,ಬಿಳಿಯ ಬಣ್ಣದ SATCOMM ಮೊಬೈಲ್ ಫೋನ್, ಶ್ರೀರಾಮ ಸೇನೆಯ ವಿಸಿಟಿಂಗ್ಸ್‌‌ ಕಾರ್ಡ್, ಹಲವರ ಹೆಸರುಗಳು ಮತ್ತು ಫೋನ್ ನಂಬರ್‌‌ಗಳು, 8 ಪುಟದ ಸನಾತನ ಪ್ರಭಾತ್ ಪತ್ರಿಕೆ, ಡೈರಿ, 20 ಮೊಬೈಲ್ ಫೋನುಗಳು ಇತ್ಯಾದಿಗಳು ಇದ್ದವು.

ಇದರ ಜೊತೆಗೆ ಎಂಟು ವಿಚಾರವಾದಿಗಳ ಹೆಸರನ್ನು ಪಟ್ಟಿ ಮಾಡಿಕೊಂಡಿದ್ದು ಕಂಡುಬಂತು. ಒಂದು ಪೇಪರಿನಲ್ಲಿ ಇಂಗ್ಲಿಷಿನಲ್ಲಿ, ‘ಗಿರೀಶ್ ಕಾರ್ನಾಡ್, ಗೌರಿ ಲಂಕೇಶ್, ಚಂದ್ರಶೇಖರ ಪಾಟೀಲ್, ಬರಗೂರು ರಾಮಚಂದ್ರಪ್ಪ, ಸಿ.ಎಸ್‌. ದ್ವಾರಕಾನಾಥ್, ಬಂಜಗೆರೆ ಜಯಪ್ರಕಾಶ್, ಬಿ.ಟಿ.ಲಲಿತಾ ನಾಯಕ್, ನಿಡುಮಾಮಿಡಿ ಸ್ವಾಮೀಜಿ’ ಎಂಬ ಹೆಸರುಗಳಿದ್ದವು.

ಇನ್ನೊಂದು ಹಾಳೆಯಲ್ಲಿ ದೇಶದ ಇತರ ರಾಜ್ಯಗಳಲ್ಲಿರುವ ಕೆಲವು ಮುದ್ರಣಾಲಯ ಹಾಗೂ ಪತ್ರಿಕೆಗಳ ಹೆಸರುಗಳಿದ್ದವು.

ಅಮಿತ್ ದೇಗ್ವೆಕರ್ ಬ್ಯಾಗಿನಲ್ಲಿ ಗೋವಾದ ಪೊಂಡಾದ ಯೂನಿಯನ್ ಬ್ಯಾಂಕಿಗೆ ಸಂದಾಯ ಮಾಡಲಾಗಿದ್ದ 35,000 ರೂ. ದುಡ್ಡಿನ ಚೀಟಿಯ ಜೊತೆಗೆ ಪಾನ್ಸರೆ, ದಾಬೋಲ್ಕರ್ ಅವರಿಗೆ ಸಂಬಂಧಪಟ್ಟ ವರದಿಗಳು, ಸ್ಥಳ ಸನಾತನ ಆಶ್ರಮ, ರಾಮನಾಥಿ , ಗೋವಾ ಎಂಬ ಹಿಂದಿ ಭಾಷೆಯ ಪೇಪರ್ ಮತ್ತು ಹಲವಾರು ಬಾಂಕುಗಳ ಬ್ಯಾಗುಗಳು, ಮಹಾರಾಷ್ಟ್ರ ಗ್ರಾಮೀಣ ಬ್ಯಾಂಕ್ ಹೆಸರಿನಲ್ಲಿ ದೇಗ್ವೆಕರ್ ಹೆಸರಿನಲ್ಲಿ ನೀಡಲಾದ ಐಡಿ ಇತ್ಯಾದಿಗಳು ಸಿಕ್ಕವು.

ಇದಲ್ಲದೆ ಅಮಿತ್ ದೇಗ್ವೆಕರ್ ಬ್ಯಾಗಿನಲ್ಲಿ 1,90,000 ರೂ., ಕಾಳೆಯ ಬ್ಯಾಗಿನಲ್ಲಿ 26,000 ರೂ. ನಗದು ಹಾಗೂ ಅವರ ಜೋಬಿನಲ್ಲಿ 4000 ರೂ. ನಗದು ದೊರೆಯಿತು. ತನಿಖಾಧಿಕಾರಿಗಳು ಇಷ್ಟು ಹಣ ಏಕೆಂದು ಪ್ರಶ್ನಿಸಿದಾಗ ದೈವ ಕಾರ್ಯಗಳಿಗೆ ಎಂದು ಉತ್ತರಿಸಿದರು ಎಂದು ರಾಜ್‌ಕುಮಾರ್‌‌ ಸಾಕ್ಷಿ ಹೇಳಿದರು.

ಇದಲ್ಲದೆ ಆರೋಪಿಗಳ ಬಳಿ ಇದ್ದ ಚೈತನ್ಯ ಲಕ್ಷುರಿ ಹೋಮ್ಸ್ ಹಾಸ್ಪಿಟಾಲಿಟಿ ಸರ್ವಿಸಸ್‌ನ ಕಾರ್ಡು, ಹೊಸೂರು ಮತ್ತು ಇತ್ಯಾದಿ ಊರುಗಳ ಹೋಟೆಲ್‌‌ಗಳ ರಸೀದಿ ಮತ್ತು ಕಾರ್ಡ್‌ಗಳನ್ನು ಸಹ ವಶಪಡಿಸಿಕೊಂಡರೆಂದು ಸಾಕ್ಷಿ ತಿಳಿಸಿದರು.

***

ಸಾಕ್ಷಿ- ಪುರುಷೋತ್ತಮ್

ಪುರುಷೋತ್ತಮ್ ಅವರು ಬೆಂಗಳೂರಿನ ವಿಧಿ ವಿಜ್ಞಾನ ಇಲಾಖೆ (FSL- ಫೋರೆನ್ಸಿಕ್ ಸೈನ್ಸ್ ಲಾಬರೋಟರಿ)ಯಲ್ಲಿ DNA ವಿಜ್ಞಾನಿಯಾಗಿ 2004ರಿಂದ ಕೆಲಸ ಮಾಡುತ್ತಿದ್ದಾರೆ.

ಅವರು ಈವರೆಗೆ 3500 ಪ್ರಕರಣಗಳ DNA profiling ಮಾಡಿದ್ದಾರೆ, ಹಲವಾರು ಕ್ರಿಮಿನಲ್ ಕೋರ್ಟುಗಳಲ್ಲಿ ಸಾಕ್ಷ್ಯ ನುಡಿದಿದ್ದಾರೆ.

ಅವರು ಸಾಕ್ಷ್ಯ ನುಡಿದು, “ಈ ಪ್ರಕರಣದ ಮುಖ್ಯ ತನಿಖಾಧಿಕಾರಿಗಳ ಕೋರಿಕೆಯಂತೆ 2017ರ ಸೆಪ್ಟೆಂಬರ್ 9 ರಂದು ಕಳಿಸಲಾದ swab sample, ರಕ್ತ ಸಿಕ್ತ ಬಟ್ಟೆ , ಬುಲೆಟ್‌‌ಗಳು ಇತ್ಯಾದಿಗಳ ಸ್ಯಾಂಪಲ್‌ಗಳನ್ನೂ ರಾಸಾಯನಿಕ ಪರೀಕ್ಷೆ ಮತ್ತು ಆ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತವಾಗಿರುವ ಪ್ರಕ್ರಿಯೆಗಳ ಮೂಲಕ ಡಿಎನ್‌ಎ ಪರೀಕ್ಷೆ ಒಳಪಡಿಸಲಾಯಿತು. ಗುಂಡಿಗೆ ಹತ್ತಿರುವ ರಕ್ತ ಮತ್ತು ಬಟ್ಟೆಗೆ ಹತ್ತಿರುವ ರಕ್ತ ಹಾಗೂ ಡಿಎನ್‌ಎ ಒಬ್ಬರದೇ ಆಗಿದ್ದು, ಅದು ವಯಸ್ಕ ಹೆಂಗಸಿನದ್ದು ಎಂಬ ಫಲಿತಾಂಶವನ್ನು ತನಿಖಾಧಿಕಾರಿಗೆ ತಿಳಿಸಲಾಯಿತು. ಆ ನಂತರ ತಮಿಖಾಧಿಕಾರಿಗಳು 14.6.2018ರಂದು ಆರು ಕವರ್‌ಗಳಲ್ಲಿ ಆರು ಕೂದಲುಗಳಿರುವ ಸ್ಯಾಂಪಲ್‌ಅನ್ನು ಡಿಎನ್‌ಎ ವಿಭಾಗಕ್ಕೆ ಕಳಿಸಿದರು. ಮತ್ತೊಂದು ಕವರಿನಲ್ಲಿದ್ದ ವ್ಯಾಕ್ಯೂಟೈನರ್‌ನಲ್ಲಿ ಅಮೋಲ್ ಕಾಳೆಯವರ ರಕ್ತದ ಸ್ಯಾಂಪಲ್‌ ಇತ್ತು. ಮತ್ತೆ 18.6.2018ರಂದು ಮತ್ತೊಂದು ವ್ಯಾಕ್ಯೂಟೈನರ್‌ನಲ್ಲಿ ಪರಶುರಾಮ್ ವಾಘಮೋರೆ ಎಂಬುವರ ರಕ್ತದ ಸ್ಯಾಂಪಲ್‌ಅನ್ನು ಡಿಎನ್‌ಎ ತಾಳೆಗೆ ಕಳಿಸಲಾಯಿತು” ಎಂದು ವಿವರಿಸಿದರು.

“ತಾನು ಆ ಕೂದಲುಗಳ ಡಿಎನ್‌ಎ ಪರೀಕ್ಷೆ ಮಾಡಲಾಗಿ ಅವು ವಯಸ್ಕ ಪುರುಷರದ್ದು ಎಂದು ಗೊತ್ತಾಯಿತು. ಆ ಕೂದಲಿನ ಡಿಎನ್‌ಎ ಮತ್ತು ಅಮೋಲ್ ಕಾಳೆಯ ಡಿಎನ್‌ಎ ತಾಳೆಯಾಯಿತು. ಆದರೆ ಆ ಕೂದಲಿನ ಡಿಎನ್‌ಎ ವಾಘ್ಮೋರೆಯ ಡಿಎನ್‌ಎ ಜೊತೆ ತಾಳೆಯಾಗಲಿಲ್ಲ. ಹೀಗಾಗಿ ಆ ವರದಿಯನ್ನು ಹಾಗೂ ಡಿಎನ್‌ಎ ತಾಳೆ ಪರೀಕ್ಷೆಯ ವಿವರಗಳನ್ನು ತನಿಖಾಧಿಕಾರಿಗಳಿಗೆ ಕಳಿಸಿದೆ” ಎಂದು ಹೇಳಿದ ಸಾಕ್ಷಿಯು ಆ ವರದಿಯನ್ನು ಮತ್ತು ಸಹಿಯನ್ನು ಕೋರ್ಟಿನಲ್ಲಿ ಗುರುತಿಸಿದರು.

ಇದನ್ನೂ ಓದಿರಿ: ಗೌರಿ ಹತ್ಯೆ ವಿಚಾರಣೆ: ಹತ್ಯೆಗೆ ಬಳಸಿದ್ದ ಪ್ಯಾಷನ್ ಪ್ರೊ ಬೈಕ್ ಗುರುತುಹಚ್ಚಿದ ಸಾಕ್ಷಿಗಳು

ಇದಾದ ನಂತರ 6.8.2018ರಂದು ತನಿಖಾಧಿಕಾರಿಗಳು ಅಮಿತ್ ಬಡ್ಡಿ, ಗಣೇಶ್ ಮಿಸ್ಕಿನ್ ಮತ್ತು ಎಚ್.ಎಲ್.ಸುರೇಶ್ ಎಂಬವರ ರಕ್ತದ ಸ್ಯಾಂಪಲ್‌ ಕಳಿಸಿ ಡಿಎನ್‌ಎ ಪ್ರೊಫೈಲಿಂಗ್ ಮಾಡಲು ಕೋರಿದರು. ಅದಾದ ನಂತರ 10.8.2018ರಂದು ಐದು ವಸ್ತುಗಳನ್ನು – ಟೂತ್ ಬ್ರಶ್ – ಕಳಿಸಿ ಇದರಲ್ಲಿ ದೊರಕುವ ಎಪಿತೀಲಿಯಲ್ ಸೆಲ್‌‌ಗಳ ಡಿಎನ್‌ಎಗೂ ಈ ಮೂವರ ಡಿಎನ್‌ಎಗೂ ತಾಳೆಯಾಗುವುದೇ ಎಂದು ಪತ್ತೆ ಹಚ್ಚಲು ಕೋರಿದರು. ಹಾಗೆಯೇ ಮಾಡಲಾಗಿ ಅವು ತಾಳೆಯಾಗಲಿಲ್ಲ. ಅದಕ್ಕೆ ಸಂಬಂಧಪಟ್ಟ ವರದಿಯನ್ನು ನೀಡಲಾಗಿದೆ. ಅದನ್ನು ಕೋರ್ಟು ಮುಂದೆ ತೆರೆದು ತೋರಿಸಿದಾಗ ಸಾಕ್ಷಿಯು ಅದೇ ವರದಿ ಎಂದು ಗುರುತಿಸಿದರು.

ಆ ನಂತರ 16.11.2018ರಂದು ನನಗೆ DNA comparitive profiling ವರದಿ ದೊರೆಯಿತು. ಅದರ ಪ್ರಕಾರ 10.8.2018ರಂದು ಕಳಿಸಲಾದ tooth brushನಲ್ಲಿ ಸಿಕ್ಕ ಎಪಿತೀಲಿಯಲ್ ಸೆಲ್ಲಿನ ಡಿಎನ್‌ಎ ಮತ್ತು ಪರಶುರಾಮ್ ವಾಘಮೋರೆಯ ಡಿಎನ್‌ಎ ತಾಳೆಯಾಯಿತು ಎಂದರು.

ಇದಕ್ಕೆ ಸಂಬಂಧಪಟ್ಟಂತೆ ಕೊಟ್ಟ ವರದಿಯನ್ನು ಕೋರ್ಟಿನಲ್ಲಿ ಸಾಕ್ಷಿಯು ಗುರುತಿಸಿದರು.

ಪಾಟಿ ಸವಾಲಿನಲ್ಲಿ ನಡೆದದ್ದೇನು?

ಆರೋಪಿ ಪರ ವಕೀಲರುಗಳು ಸಾಕ್ಷಿದಾರರಾದ ರಾಜ್ ಕುಮಾರ್ ಅವರ ಪಾಟಿ ಸವಾಲನ್ನು ಇನ್ನು ಮುಗಿಸಿಲ್ಲ.

ಈವರೆಗೆ ನಡೆದಿರುವ ಪಾಟಿ ಸವಾಲಿನಲ್ಲಿ ರಾಜ್ ಕುಮಾರ್ ಅವರ ವೃತ್ತಿಯ ಸ್ವರೂಪ, ದಾವಣಗೆರೆಗೆ ಈ ಹಿಂದೆ ಭೇಟಿ ಕೊಟ್ಟಿದ್ದರ, ಬೆಂಗಳೂರಿಂದ ದಾವಣಗೆರೆಗೆ ಹೋಗುವಾಗ ಯಾವ ವಾಹನ, ಯಾವ ಮಾರ್ಗ, ಪ್ರಯಾಣದ ರೀತಿ, ಜೊತೆಗಿದ್ದವರ ವಿವರ, ದಾವಣಗೆರೆಯಲ್ಲಿ ವಾಹನವನ್ನು ನಿಲ್ಲಿಸಿದ ರೀತಿ, ಆರೋಪಿಗಳನ್ನು ಪೊಲೀಸರು ಬಂಧಿಸಿದಾಗ ಅವರ ಹಾಕಿದ್ದ ಧಿರಿಸಿನ ವಿವರ, ವಶಪಡಿಸಿಕೊಳ್ಳಲಾದ ಕರೆನ್ಸಿಯ ಮೇಲಿದ್ದ ಸಂಖ್ಯೆಗಳನ್ನು ಬರೆದುಕೊಂಡರೆ ಇನ್ನಿತ್ಯಾದಿ ಸವಾಲುಗಳನ್ನು ಕೇಳಿದ್ದಾರೆ. ಈ ಸಾಕ್ಷಿಯ ಪಾಟಿ ಸವಾಲು ಮುಂದುವರೆಯಬೇಕಿದೆ.

ಸಾಕ್ಷಿದಾರರಾದ ಪುರುಷೋತ್ತಮ್ ಅವರನ್ನು ಕೇಳಬೇಕಿರುವ ಪ್ರಶ್ನೆಗಳು ಮುಂದೆ ಬರಲಿರುವ ಸಾಕ್ಷಿಗಳಿಗೂ ಸಂಬಂಧಪಟ್ಟಿರುತ್ತದೆ. ಈಗಲೇ ನಾವು ಆ ಪ್ರಶ್ನೆಗಳನ್ನು ಕೇಳಿ ಬಿಟ್ಟರೆ ಉಳಿದ ಸಾಕ್ಷ್ಯಗಳು ಎಚ್ಚೆತ್ತುಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಆ ನಿರ್ದಿಷ್ಟ ಸಾಕ್ಷಿಗಳ ವಿಚಾರಣೆಯಾದ ನಂತರವೇ ಪುರುಷೋತ್ತಮ್ ಅವರನ್ನು ಪ್ರಶ್ನಿಸಲು ಅವಕಾಶ ಮಾಡಿಕೊಡಬೇಕೆಂದು ಆರೋಪಿ ಪರ ವಕೀಲರಾದ ಕೃಷ್ಣಮೂರ್ತಿಯವರು ನ್ಯಾಯಾಲಯವನ್ನು ಕೋರಿದರು.

ಆದರೆ ಅದಕ್ಕೆ ಸರ್ಕಾರಿ ವಕೀಲರಾದ ಬಾಲನ್ ಅವರು ಆಕ್ಷೇಪಣೆ ಎತ್ತಿದರು. ಈ ಸಾಕ್ಷಿಯು ಕೇವಲ ಡಿಎನ್‌ಎ ಬಗೆಗಿನ ಪರಿಣಿತ ಸಾಕ್ಷಿ. ಅವರಿಗೂ ಇತರ ಸಾಕ್ಷಿಗಳಿಗೂ ಯಾವುದೇ ಸಂಬಂಧವಿಲ್ಲ. ಸಾಕ್ಷಿಯು ತನಿಖಾಧಿಕಾರಿಯಾಗಿದ್ದರೆ ಈ ಬಗೆಯ ಕೋರಿಕೆಯು ಮನ್ನಾ. ಆದರೆ ಪರಿಣಿತ ಸಾಕ್ಷಿಯ ವಿಚಾರಣೆಗೆ ಈ ರೀತಿಯ ಕೋರಿಕೆ ಮಾನ್ಯ ಅಲ್ಲ ಎಂದು ವಾದಿಸಿದರು.

ಆದರೆ ಕೋರ್ಟು ಆರೋಪಿ ಪರ ವಕೀಲರ ಮನಸ್ಸಿನಲ್ಲಿ ಬೇರೆ ಯಾವುದೋ ಪ್ರಶ್ನೆಗಳಿರುತ್ತವೆ. ಅದನ್ನು ಆಧರಿಸಿ ಅವರು ತಮ್ಮ ವಾದವನ್ನು ರೂಪಿಸಿಕೊಳ್ಳಬೇಕಿರುತ್ತದೆ. ಹೀಗಾಗಿ ಆರೋಪಿ ಪರ ವಕೀಲರಿಗೆ ಈ ಸಾಕ್ಷಿಯನ್ನು ನಂತರ ಪ್ರಶ್ನಿಸಲು ಅವಕಾಶ ಕೊಡುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದರು. ಅದರಂತೆ ಸಾಕ್ಷಿಗೆ ನಂತರ ಕರೆ ಬಂದಾಗ ಪಾಟಿ ಸವಾಲಿಗೆ ಹಾಜರಾಗಲು ತಿಳಿಸಿದರು.

ಆರೋಪಿ ಪರ ವಕೀಲರು ರವಿ ನೊರೊನ್ಹಾ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರ ಕೊಡುತ್ತಾ ರವಿ ನರೋನ್ಹಾ, ಟಾಟಾ ಟೆಲಿ ಸರ್ವಿಸಸ್‌ ಕಂಪನಿಯು ತನ್ನ ಎಲ್ಲಾ ಕರೆ ಮಾಹಿತಿಗಳನ್ನು ಹೈದರಾಬಾದಿನಲ್ಲಿರುವ ಸರ್ವರ್‌ನಲ್ಲಿ ದಾಖಲಿಸಿಡುತ್ತದೆಂದು, ಕರೆ ಮಾಹಿತಿಯನ್ನು ಅಲ್ಲಿಂದಲೇ ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆಂದೂ, ನೋಡಲ್ ಆಫೀಸರ್ ಆದ ತನಗೆ ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಮೇಲಧಿಕಾರಿಗಳ ಅನುಮತಿ ಅಗತ್ಯವಿಲ್ಲವೆಂದೂ ತಿಳಿಸಿದರು. ಹಾಗೆಯೇ ಜಿಎಸ್‌ಎಂ ತಂತ್ರಜ್ಞಾನದ ಮೊಬೈಲ್ ಟವರ್ ಒಂದರ ತಲುಪುವ ವಿಸ್ತೀರ್ಣ 700-1000 ಮೀಟರ್ ಇರುತ್ತದೆ” ಎಂದು ತಿಳಿಸಿದರು.

ಅತ್ಯಂತ ಮುಖ್ಯವಾಗಿ ಕಾಲ್ ರೆಕಾರ್ಡ್ ಮಾಹಿತಿಯು 1.3.2017ರಿಂದ 18.2.2018 ವರೆಗೆ ಮಾತ್ರವಲ್ಲದೆ 28-3-2018ರ ವರೆಗೆ ಇರುವುದು. ಒಂದು ವರ್ಷದ ಅವಧಿಯ ಕಾಲ್ ರೆಕಾರ್ಡ್ ಮಾಹಿತಿಯನ್ನು ಸಂಗ್ರಹಿಸಡಬೇಕು ಎಂಬ ಕಾನೂನಿನ ಉಲ್ಲಂಘನೆಯಲ್ಲವೇ ಎಂದು ಆರೋಪಿ ಪರ ವಕೀಲ ಕೃಷ್ಮಮೂರ್ತಿಯವರು ಪ್ರಶ್ನಿಸಿದರು.

ಅದಕ್ಕೆ ನರೋನ್ಹಾ ಅವರು ತಮಗೆ ನೀಡಲಾಗಿರುವ ಲೈಸೆನ್ಸ್ ಷರತ್ತಿನ ಪ್ರಕಾರ ಪೋಲಿಸ್ ಅಧಿಕಾರಿಗಳು ಕೋರಿಕೊಂಡರೆ ಅವರು ಕೇಳುವ ಮಾಹಿತಿಯನ್ನು ಕೊಡಬೇಕಾಗುತ್ತದೆ ಎಂದು ಉತ್ತರಿಸಿದರು. ಆ ರೀತಿ ನಿರ್ದಿಷ್ಟ ಕೋರಿಕೆಯನ್ನು ತನಿಖಾಧಿಕಾರಿಗೆ ಯಾವಾಗ ಮತ್ತು ಹೇಗೆ ಮಾಡಿದರು ಎಂದು ಕೇಳಿದಾಗ ಅದರ ಬಗ್ಗೆ ತಮಗೆ ನೆನಪಿಲ್ಲ ಎಂದು ಉತ್ತರಿಸಿದರು.

ಹಾಗೆಯೇ ಅವರು ಕೊಟ್ಟಿರುವ ದಾಖಲೆಗಳಲ್ಲಿ ಪುಟದ ಕೊನೆಯಲ್ಲಿ ಪುಟ ಸಂಖ್ಯೆಯು 169/518 ಎಂದಿದೆ. ಎಂದರೆ ನೀವು 518 ಪುಟಗಳಷ್ಟು ಮಾಹಿತಿ ಕೊಟ್ಟಿದ್ದರೂ ಬರಿ 28 ಪುಟಗಳ ಮಾಹಿತಿ ಎಂದು ಹೇಳುತ್ತಿರುವುದು ಸುಳ್ಳಲ್ಲವೆ ಎಂದು ಪ್ರಶ್ನಿಸಿದರು. ಆದ್ದರಿಂದ ನೀವು ಪೊಲೀಸರಿಗೆ ಅನುಕೂಲವಾಗುವ ಮಾಹಿತಿಯನ್ನು ಮಾತ್ರ ಸೃಷ್ಟಿಸಿ ಕೊಟ್ಟಿದ್ದೀರಿ ಎಂದು ಆರೋಪಿಸಿದರು.

ರವಿ ನರೋನ್ಹಾ ಅವರು ಪುಟದ ಕೊನೆಯಲ್ಲಿ ಆ ರೀತಿ ಸಂಖ್ಯೆಗಳು ಇರುವುದು ನಿಜವಾದರೂ ಅದರ ಅರ್ಥ ತಾನು ಪೊಲೀಸರಿಗೆ ಬೇಕಿರುವಷ್ಟು ಮಾಹಿತಿಯನ್ನು ಸೃಷ್ಟಿಸಿ ಕೊಟ್ಟಿದ್ದೇನೆಂದು ಎಂದಾಗುವುದಿಲ್ಲ ಎಂದು ಉತ್ತರಿಸಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ ಕರೆ ಮಾಹಿತಿ ದಾಖಲೆಗಳಲ್ಲಿ ಮೊಬೈಲ್ ಸ್ವಿಚ್ ಆಫ್ ಆದ ಮಾಹಿತಿ ಇರುವುದಿಲ್ಲವೆಂದು ಹೇಳಿದರು.

ಇದನ್ನೂ ಓದಿರಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ; ಆರೋಪಿಗಳನ್ನು ಗುರುತು ಹಚ್ಚಿದ ಪ್ರಮುಖ ಸಾಕ್ಷಿ

ಆರೋಪಿ ಪರ ವಕೀಲರು ಸಾಕ್ಷಿಗಳಾದ ಅಯಾಜುಲ್ಲಾ ಷರೀಫ್ ಮತ್ತು ಅಮ್ಜದ್ ಅವರಿಗೆ ಪ್ರಧಾನವಾಗಿ ವೆಸ್ಟ್ ಬುಲೆಟಗಳನ್ನು ಕೊಟ್ಟಿರುವ ಬಗ್ಗೆ ಹಾಗೂ ಗನ್ ರಿಪೇರಿ ಮಾರಾಟದ ಬಗ್ಗೆ ಕಡ್ಡಾಯವಾಗಿ ಇಟ್ಟುಕೊಳ್ಳಬೇಕಾದ ರಿಜಿಸ್ಟ್ರಿಯನ್ನು ಅಂಗಡಿಯಲ್ಲಿ ಇಟ್ಟುಕೊಳ್ಳಲಾಗಿದೆಯೇ ಮತ್ತು ನವೀನ್‌ಕುಮಾರ್‌ಗೆ ಕೊಟ್ಟ ವೆಸ್ಟ್ ಬುಲೆಟ್ಗಳು ರಿಜಿಸ್ಟ್ರಿಯಲ್ಲಿ ಯಾಕೆ ನಮೂದಾಗಿಲ್ಲ ಎಂಬ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.

ಅಯಾಜುಲಾ ಅವರು ರಿಜಿಸ್ಟ್ರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಉತ್ತರಿಸಿದರು. ನವೀನ್ ಕುಮಾರ್ ಜೊತೆ ನಡೆದ ವ್ಯವಹಾರದ ದಾಖಲೆಗಳನ್ನು ಪೊಲೀಸರಿಗೆ ಒದಗಿಸಿಲ್ಲವೆಂದು ಉತ್ತರಿಸಿದರು. ಅಮ್ಜದ್ ಅವರು ತಾನು ಕೊಟ್ಟಿದ್ದು ಕೆಲವೇ ವೆಸ್ಟ್ ಬುಲೆಟ್‌‌ಗಳಾದ್ದರಿಂದ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಕೊಟ್ಟೆನೆಂದು ಉತ್ತರಿಸಿದರು. ವೆಸ್ಟ್ ಬುಲೆಟ್‌ಗಳನ್ನೂ ಫೈರ್ ಮಾಡಲೂ ಆಗುವುದಿಲ್ಲ, ಗುಜರಿಯಲ್ಲೂ ಅದಕ್ಕೆ ಬೆಲೆ ಇರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಪೊಲೀಸರೊಂದಿಗೆ ಒಳ್ಳೆ ಸಂಬಂಧ ಇಟ್ಟುಕೊಳ್ಳುವ ಸಲುವಾಗಿ ಸುಳ್ಳು ಸಾಕ್ಷಿ ನುಡಿಯುತ್ತಿದ್ದೀರೆಂದು ಆರೋಪಿ ಪರ ವಕೀಲರು ಆರೋಪಿಸಿದರು. ಅದನ್ನು ಸಾಕ್ಷಿಗಳು ನಿರಾಕರಿಸಿದರು.

(ಮುಂದಿನ ವಿಚಾರಣೆ 2023ರ ಜನವರಿ 16 ರಿಂದ 21 ರವರೆಗೆ ನಡೆಯಲಿದೆ.)

ವರದಿ: ಶಿವಸುಂದರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...