Homeಕರ್ನಾಟಕಗೌರಿ ಹತ್ಯೆ ವಿಚಾರಣೆ: ಹತ್ಯೆಗೆ ಬಳಸಿದ್ದ ಪ್ಯಾಷನ್ ಪ್ರೊ ಬೈಕ್ ಗುರುತುಹಚ್ಚಿದ ಸಾಕ್ಷಿಗಳು

ಗೌರಿ ಹತ್ಯೆ ವಿಚಾರಣೆ: ಹತ್ಯೆಗೆ ಬಳಸಿದ್ದ ಪ್ಯಾಷನ್ ಪ್ರೊ ಬೈಕ್ ಗುರುತುಹಚ್ಚಿದ ಸಾಕ್ಷಿಗಳು

- Advertisement -
- Advertisement -

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ಆಗಸ್ಟ್ ಎರಡನೇ ವಾರದಲ್ಲಿ ನಿಗದಿಯಾಗಿದ್ದ 5 ದಿನಗಳಲ್ಲಿ ಕಾರಣಾಂತರಗಳಿಂದ ಒಂದೂವರೆ ದಿನವಷ್ಟೇ ನಡೆಯಿತು. ಸದ್ಯಕ್ಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸೆಷನ್ಸ್ ನ್ಯಾಯಾಧೀಶರಾದ ಸಿ.ಎಂ. ಜೋಶಿಯವರು ಹೈಕೋರ್ಟಿಗೆ ಮುಂಬಡ್ತಿ ಪಡೆದಿದ್ದಾರೆ. ಹಾಗಾಗಿ ಮುಂಬರುವ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆಗೆ ಎಷ್ಟು ಸಮಯ ಕೊಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಆಗಸ್ಟ್ ತಿಂಗಳಿನಲ್ಲಿ ನಡೆದ ವಿಚಾರಣೆಯ ಸಂಕ್ಷಿಪ್ತ ವರದಿ ಇಲ್ಲಿದೆ.

ಗೌರಿಯವರನ್ನು ನಕ್ಸಲರು ಕೊಂದಿರಬಹುದು, ಆಸ್ತಿ ವಿವಾದದಿಂದ ಕೊಲೆಯಾಗಿರಬಹುದು ಎಂಬುದು ಕೋರ್ಟ್ ವಿಚಾರಣೆಯ ಮೊದಲ ತಿಂಗಳಿನಲ್ಲಿ ಆರೋಪಿ ಪರ ವಕೀಲರ ಪಾಟಿ ಸವಾಲಿನ ವಾದ ಸರಣಿಯಾಗಿತ್ತು. ಈಗ ಎರಡನೆಯ ತಿಂಗಳಿನಲ್ಲಿ, ಸಾಕ್ಷಿಗಳು ಪೊಲೀಸರು ಹೇಳಿಕೊಟ್ಟಂತೆ ಹೇಳುತ್ತಿದ್ದಾರೆ; ತನಿಖೆಯಲ್ಲಿ ಪೊಲೀಸರು ನಿಯಮಗಳನ್ನು ಪಾಲಿಸಿಲ್ಲ ಎಂಬುದು ಅವರ ವಾದಸರಣಿಯಾಗಿದೆ. ಈ ತಿಂಗಳಿನಲ್ಲಿ ಒಟ್ಟು 8 ಸಾಕ್ಷಿಗಳನ್ನು ಕೋರ್ಟ್ ವಿಚಾರಣೆ ನಡೆಸಿತು. ಆರೋಪಿ ಪರ ವಕೀಲರು ಪಾಟಿ ಸವಾಲು ನಡೆಸಿದರು.

PWD ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ವಿ.ಬಿ.ಕಳಗೇರಿ ಎಂಬುವವರು ಅಪರಾಧ ನಡೆದ ಸ್ಥಳದ ಸ್ಕೆಚ್ ಮಾಡಿಕೊಟ್ಟಿರುವುದಾಗಿ ಹೇಳಿದರು ಮತ್ತು ಅದನ್ನು ಗುರುತಿಸಿದರು. ಪೊಲೀಸರ ಮನವಿ ಮತ್ತು ತಮ್ಮ ಮೇಲಧಿಕಾರಿಗಳ ಆದೇಶದ ಮೇರೆಗೆ ಸ್ಕೆಚ್ ಮಾಡಿಕೊಟ್ಟಿದ್ದೆ ಎಂದು ಸಾಕ್ಷಿ ನುಡಿದರು. ಇದನ್ನು ಆಕ್ಷೇಪಿಸಿದ ಆರೋಪಿ ಪರ ವಕೀಲರು ನೀವು ಅಪರಾಧ ನಡೆದ ಸ್ಥಳಕ್ಕೆ ಹೋಗಿಯೇ ಇಲ್ಲ, ಪೊಲೀಸರೇ ನಿಮ್ಮ ಕಚೇರಿಗೆ ಬಂದು ಸ್ಕೆಚ್ ಬರೆಸಿದ್ದಾರೆ ಎಂದು ವಾದಿಸಿದರು. ಅದನ್ನು ವಿ.ಬಿ ಕಳಗೇರಿಯವರು ನಿರಾಕರಿಸಿದರು.

’ಗೌರಿಯವರಿಗೆ ಗುಂಡು ಹಾರಿಸಿದ ಆರೋಪಿ ಪರಶುರಾಮ್ ವಾಗ್ಮೋರೆಯನ್ನು 2018ರ ಜೂನ್ ತಿಂಗಳಿನಲ್ಲಿ ಬಂಧಿಸಲಾಗಿತ್ತು. ಅದೇ ಜೂನ್ ತಿಂಗಳ 22ರಂದು ಆತನನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದಿದ್ದೆವು. ಕೃತ್ಯ ನಡೆದಾಗ ಆತ ಯಾವ ಬಟ್ಟೆಯನ್ನು ಧರಿಸಿದ್ದನೊ (ಜಾಕೆಟ್ ಮತ್ತು ಶೂ) ಅಂತಹ ಬಟ್ಟೆಯನ್ನು ತೊಡಿಸಿ, ಗೌರಿಯವರು ಬಳಸುತ್ತಿದ್ದ ಕಾರನ್ನು ಹೋಲುವ ಮತ್ತೊಂದು ಕಾರನ್ನು ತರಿಸಿ ಒಟ್ಟು ಅಪರಾಧ ಚಿತ್ರಣವನ್ನು ಮರು ಸೃಷ್ಟಿ ಮಾಡಿ ರೆಕಾರ್ಡ್ ಮಾಡಿಕೊಂಡೆವು’ ಎಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಶಿವಾರೆಡ್ಡಿಯವರು ಸಾಕ್ಷಿ ನುಡಿದರು.

ಆರೋಪಿ ಪರ ವಕೀಲರು ’ಅಪರಾಧ ಚಿತ್ರಣದ ಮರುಸೃಷ್ಟಿಗೆ ಬಳಸಿದ ಬಟ್ಟೆಗಳನ್ನು ಪೊಲೀಸರು ಎಲ್ಲಿಂದ ಖರೀದಿಸಿದ್ದೀರಿ? ಅದಕ್ಕೆ ಹಣ ಪಾವತಿಸಿದ ಬಿಲ್ ಇದೆಯೆ?’ ಎಂದು ಶಿವಾರೆಡ್ಡಿಯವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿವಾರೆಡ್ಡಿಯವರು ’ಮೆಜೆಸ್ಟಿಕ್‌ನ ಬೀದಿ ಬದಿಯಲ್ಲಿ ಬಟ್ಟೆ ಖರೀದಿಸಿದೆವು ಮತ್ತು ಬೀದಿ ಬದಿಯಲ್ಲಿ ರಶೀದಿ ನೀಡುವುದಿಲ್ಲ’ ಎಂದು ಉತ್ತರಿಸಿದರು. ’ರಸ್ತೆ ಬದಿ ಬಿಟ್ಟು ಬೇರೆ ಅಂಗಡಿಗಳಲ್ಲಿ ಏಕೆ ಬಟ್ಟೆ ಖರೀದಿಸಲಿಲ್ಲ’ ಎಂದು ವಕೀಲರು ಮರು ಪ್ರಶ್ನಿಸಿದಾಗ, ’ಆ ರೀತಿಯ ಬಟ್ಟೆ ಬೇರೆ ಅಂಗಡಿಯಲ್ಲಿ ಸಿಗಲಿಲ್ಲ’ ಎಂದು ಶಿವಾರೆಡ್ಡಿಯವರು ಉತ್ತರಿಸಿದರು.

ಗೌರಿಯವರನ್ನು ಹತ್ಯೆ ಮಾಡಲು ಬಳಸಿದ್ದ ಹೀರೋ ಕಂಪನಿಯ ಪ್ಯಾಷನ್ ಪ್ರೊ ಬೈಕ್‌ಅನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅದನ್ನು ತುಮಕೂರಿನ ಸಾಕ್ಷಿಯೊಬ್ಬರು ಗುರುತಿಸಿದ್ದರು. ತಾನು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದನು ಪ್ರಸ್ತಾಪಿಸಿದ್ದ ಸಾಕ್ಷಿಯು, “2017ರ ಸೆಪ್ಟಂಬರ್ 5ರಂದು ಟಿವಿ ಚಾನೆಲ್ ಒಂದರಲ್ಲಿ ಇಂಟರ್‌ವ್ಯೂ ಮುಗಿಸಿ ಗೌರಿ ಲಂಕೇಶ್ ಮನೆ ಎದುರಿನ ಖಾಲಿ ಸೈಟ್‌ನಲ್ಲಿದ್ದ ಶೆಡ್‌ನಲ್ಲಿ ಸ್ನೇಹಿತ ತಾಯಪ್ಪ ಎಂಬುವವರ ಜೊತೆ ಉಳಿದುಕೊಂಡಿದ್ದೆ. ಅಡುಗೆ ಮಾಡುತ್ತಿದ್ದಾಗ ಗುಂಡಿನ ಶಬ್ದ ಕೇಳಿ ಮನೆಯಿಂದ ಹೊರಬಂದಾಗ ಕಪ್ಪು ಬಣ್ಣದ ಪ್ಯಾಷನ್ ಪ್ರೊ ಬೈಕ್‌ನಲ್ಲಿ ಇಬ್ಬರು ಗೌರಿ ಲಂಕೇಶ್‌ರವರ ಮನೆಯ ಕಡೆಯಿಂದ ತಾವಿದ್ದ ಕಾಂಪೌಂಡ್ ದಾಟಿಕೊಂಡು ಸುಭಾಷ್ ಪಾರ್ಕಿನ ಕಡೆ ಹೋಗುವುದನ್ನು ನೋಡಿದೆ. ಅವರು ಪೂರ್ತಿ ಮುಖ ಮುಚ್ಚುವ ಹಾಗೆ ಹೆಲ್ಮೆಟ್ ಧರಿಸಿದ್ದರು. ಅದರೊಟ್ಟಿಗೆ ಕಾರು ಒಂದು ಇಂಜಿನ್ ಆನ್ ಆಗಿ ನಿಂತಿತ್ತು. ಅದಾದ ಐದಾರು ಸೆಕೆಂಡ್‌ಗಳಲ್ಲಿ ಮತ್ತೊಂದು ಬೈಕ್‌ನಲ್ಲಿ ಇಬ್ಬರು ಗೌರಿ ಲಂಕೇಶ್‌ರವರ ಮನೆ ಎದುರು ಬಂದು ನಿಂತರು (ಟಿವಿ ಕೇಬಲ್ ಸರಿಪಡಿಸುವವರು). ನಾನು ಮತ್ತು ನನ್ನ ಸ್ನೇಹಿತ ತಾಯಪ್ಪ ಇಬ್ಬರಿಗೂ ಭಯವಾಗಿ ವಾಪಸ್ ಶೆಡ್‌ನ ಒಳಗೆ ಹೋದೆವು” ಎಂದು ಕೋರ್ಟಿನಲ್ಲಿ ಸಾಕ್ಷಿ ನುಡಿದಿದ್ದಾರೆ.

(ಆಗ ಅಲ್ಲಿಗೆ ಬಂದಿದ್ದ ಎರಡನೇ ಬೈಕ್ ಕೇಬಲ್ ರಿಪೇರಿ ಮಾಡುವವರದ್ದಾಗಿತ್ತು. ತಮ್ಮ ಮನೆಯ ಕೇಬಲ್ ಕೆಲಸ ಮಾಡುತ್ತಿಲ್ಲ ಎಂದು ಗೌರಿ ಲಂಕೇಶ್‌ರವರು ರೀಪೇರಿ ಮಾಡುವವರಿಗೆ ಬರುವಂತೆ ತಿಳಿಸಿದ್ದರು.)

ಸಾಕ್ಷಿಯನ್ನು ಪಾಟಿ ಸವಾಲಿಗೆ ಒಳಪಡಿಸಿದ ಆರೋಪಿ ಪರ ವಕೀಲರು, ’ಪ್ಯಾಷನ್ ಪ್ರೊ ಮಾಡೆಲ್‌ನ ಹಲವಾರು ಬೈಕ್‌ಗಳಿವೆ. ಇದೇ ಬೈಕ್‌ಅನ್ನು ಅಪರಾಧಕ್ಕೆ ಬಳಸಿದ್ದು ಎಂದು ಹೇಗೆ ಹೇಳುತ್ತೀರಿ? ಕತ್ತಲೆಯಲ್ಲಿ ಬಣ್ಣವನ್ನು ಹೇಗೆ ಗುರುತಿಸಿದಿರಿ’ ಎಂದು ಪ್ರಶ್ನಿಸಿದರು. ಅದಕ್ಕೆ ಸಾಕ್ಷಿಯು ಘಟನೆ ನಡೆದ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸಿ ಪ್ಯಾಷನ್ ಪ್ರೊ ಬೈಕ್‌ನಲ್ಲಿ ದಾಟಿ ಹೋಗಿದ್ದನ್ನು ತಾನು ಪ್ರತ್ಯಕ್ಷವಾಗಿ ನೋಡಿದ್ದಾಗಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಇನ್ನು ಗೌರಿ ಹತ್ಯೆಗೆ ಸಂಚು ರೂಪಿಸಿದವರಲ್ಲಿ ಮತ್ತೊಬ್ಬ ಆರೋಪಿ ಮದ್ದೂರಿನ ಕೆ.ಟಿ.ನವೀನ್ ಕುಮಾರ್. ಬೆಂಗಳೂರಿನ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಮಠದ ಎದುರಿನ ಪಾರ್ಕ್‌ನಲ್ಲಿ ಕುಳಿತು ಸಂಚು ರೂಪಿಸಿದ್ದಾಗಿ ಆತ ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದ. ಅದನ್ನು ಪಂಚನಾಮೆ ಮಾಡಲು ಆರೋಪಿಯನ್ನು ಕರೆದುಕೊಂಡು ಹೋದಾಗ ಅವರ ಜೊತೆಯಲ್ಲಿ ಸಿದ್ದೇಶ್ವರ ಎಂಬ ಸರ್ಕಾರಿ ನೌಕರರು ಸಾಕ್ಷಿಯಾಗಿ ಹೋಗಿದ್ದರು. ಆಗ ಆರೋಪಿ ನವೀನ್ ಕುಮಾರ್ ಅದೇ ಜಾಗದಲ್ಲಿ ಕುಳಿತು ಹತ್ಯೆಯ ಸಂಚು ರೂಪಿಸಿದ್ದವೆಂದು ಹೇಳಿದ್ದರು ಎಂದು ಕೋರ್ಟಿನಲ್ಲಿ ಸಿದ್ದೇಶ್ವರ ಸಾಕ್ಷಿ ನುಡಿದರು ಮತ್ತು ಫೋಟೊದಲ್ಲಿ ನವೀನ್ ಕುಮಾರ್ ಯಾರೆಂದು ಗುರುತಿಸಿದರು. ಯಥಾಪ್ರಕಾರ ಪೊಲೀಸರು ಹೇಳಿಕೊಟ್ಟಂತೆ ಹೇಳುತ್ತಿದ್ದಾರೆ ಎಂದು ಆರೋಪಿ ಪರ ವಕೀಲರು ವಾದಿಸಿದರು.

ಮಂಡ್ಯದವರಾದ ರವಿಕುಮಾರ್ ಬೆಂಗಳೂರಿಗೆ ಬಂದು ರಾಜರಾಜೇಶ್ವರಿ ನಗರ ಗೇಟಿನ ಬಳಿ ಇದ್ದಾಗ ಪೊಲೀಸರು ಅವರನ್ನು ಸಾಕ್ಷಿಯಾಗಿ ಕರೆದಿದ್ದರು. “ನಾನು ಅವರೊಡನೆ ಪೊಲೀಸ್ ಠಾಣೆಗೆ ಹೋದಾಗ ತಮ್ಮ ಸಮ್ಮುಖದಲ್ಲಿ ಸೀಲ್ ಆದ ಡಿವಿಆರ್‌ಅನ್ನು ತೆಗೆದು ವಿಡಿಯೋ ಪ್ಲೇ ಮಾಡಿದರು. ಅದರಲ್ಲಿ ಗೌರಿ ಲಂಕೇಶ್‌ರವರು ಕಾರಿನಿಂದ ಇಳಿದು ಹೊರಬರುತ್ತಿದ್ದಂತೆ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬರು ಗುಂಡು ಹಾರಿಸಿದರು. ಗೌರಿಯವರು ಹಿಂದೆ ಸರಿಯುತ್ತಾ ಅವರ ಮನೆಯ ಬಾಗಿಲ ಹತ್ತಿರ ಕುಸಿದು ಬಿದ್ದ ದೃಶ್ಯಾವಳಿಗಳು ಆ ಡಿವಿಆರ್‌ನಲ್ಲಿದ್ದವು” ಎಂದು ಕೋರ್ಟ್ ವಿಚಾರಣೆ ವೇಳೆ ಅವರು ಹೇಳಿದರು. ಅದೇ ರೀತಿ ಇನ್‌ಕಾಗ್ನಿಟೊ ಫೊರೆನ್ಷಿಕ್ ಫೌಂಡೇಶನ್‌ನಲ್ಲಿ ಕೆಲಸ ಮಾಡುವ ಸ್ನೇಹ ಎಂಬ ಸೈಬರ್ ಫೊರೆನ್ಸಿಕ್ ತಜ್ಞರು 2017ರ ಸೆಪ್ಟಂಬರ್ 6ರಂದು ಪೊಲೀಸರು ತಮ್ಮ ಕಂಪನಿಗೆ ಸೀಲ್ ಆದ ಕವರ್‌ನಲ್ಲಿದ್ದ ಡಿವಿಆರ್‌ಗಳನ್ನು ವಿಶ್ಲೇಷಣೆಗೆ ತಂದುಕೊಟ್ಟರೆಂದು, ಅದನ್ನು ಪಡೆದು ನಾನು ಸಹಿ ಹಾಕಿಕೊಟ್ಟನೆಂದು ಸಾಕ್ಷಿ ನುಡಿದರು ಮತ್ತು ಕೋರ್ಟಿನಲ್ಲಿ ಅವನ್ನು ಗುರುತಿಸಿದರು.

ಆದರೆ ಈ ಡಿವಿಆರ್ ದೃಶ್ಯಾವಳಿಗಳನ್ನು ಆರೋಪಿ ಪರ ವಕೀಲರಿಗೆ ಇನ್ನೂ ಕೊಟ್ಟಿಲ್ಲವಾದ್ದರಿಂದ ಪಾಟೀ ಸವಾಲು ನಡೆಸಲಿಲ್ಲ. ಅಲ್ಲದೆ ಡಿವಿಆರ್ ಮತ್ತು ಹಾರ್ಡ್ ಡಿಸ್ಕ್‌ಗಳನ್ನು ವಶಪಡಿಸಿಕೊಳ್ಳುವಾಗ ತನಿಖಾಧಿಕಾರಿಗಳು (ಅನುಚೇತ್) ಸರಿಯಾದ ವಿಧಾನ ಅಳವಡಿಸಿಲ್ಲ ಎಂದು ನ್ಯಾಯಾಧೀಶರು ಸರ್ಕಾರ ವಕೀಲರನ್ನು ಪ್ರಶ್ನಿಸಿದರು. ತನಿಖೆ ಮುಗಿದ ನಂತರ ತಾನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದು, ಈ ಪ್ರಶ್ನೆಗೆ ತನಿಖಾಧಿಕಾರಿಗಳೆ ವಿವರಣೆ ನೀಡಬೇಕೆಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಾಲನ್ ಉತ್ತರಿಸಿದರು. ಹಾಗಾಗಿ ಈ ಸಾಕ್ಷಿಯನ್ನು ಆನಂತರ ವಿಚಾರಣೆ ನಡೆಸಲು ಕೋರ್ಟ್ ಒಪ್ಪಿಕೊಂಡಿದೆ.

ಆರೋಪಿಗಳಲ್ಲಿ ಒಬ್ಬರಾದ ಗಣೇಶ್ ಮಿಸ್ಕಿನ್ ಎಂಬುವವರಿಗೆ ವೆರಿಕೋವೆಯ್ನ್ಸ್ ಎಂಬ ಆರೋಗ್ಯದ ಸಮಸ್ಯೆಯಿರುವುದಾಗಿ ತಿಳಿಸಿ ಚಿಕಿತ್ಸೆಗೆ ಅವಕಾಶ ನೀಡಲು ಮನವಿ ಮಾಡಲಾಯಿತು. ಜೈಲು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ಅಥವಾ ಅಗತ್ಯಬಿದ್ದರೆ ಸ್ವಂತ ಖರ್ಚಿನಲ್ಲಿ ಸೂಕ್ತ ಬಂದೋಬಸ್ತ್‌ನೊಂದಿಗೆ ಖಾಸಗಿ ಆಸ್ಪತ್ರೆಗೆ ಸೇರಿಸಬಹುದೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

ಮುಂದಿನ ತಿಂಗಳು ಸೆಪ್ಟಂಬರ್ 5ರಿಂದ 9ನೇ ತಾರೀಖಿನವರೆಗೆ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ. 2022 ಸೆಪ್ಟಂಬರ್ 5ಕ್ಕೆ ಗೌರಿಯವರು ಕೊಲೆಯಾಗಿ 5 ವರ್ಷಗಳ ತುಂಬುತ್ತಿವೆ. ಆ ಸಂದರ್ಭದಲ್ಲಿ ತನಿಖಾಧಿಕಾರಿಗಳಾದ ಡಿಸಿಪಿ ಅನುಚೇತ್‌ರವರು ವಿಚಾರಣೆಗೆ ಹಾಜರಾಗಲಿದ್ದಾರೆ.


ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ; ಆರೋಪಿಗಳನ್ನು ಗುರುತು ಹಚ್ಚಿದ ಪ್ರಮುಖ ಸಾಕ್ಷಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...