ಕಳೆದ ವಾರ ಭಾರಿ ಚರ್ಚೆಗೆ ಗ್ರಾಸವಾಗಿದ್ದ ದಲಿತ ನವ ದಂಪತಿ ದೇಗುಲ ಪ್ರವೇಶ ಹಾಗೂ ದಲಿತ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತುರುವೇಕೆರೆ ತಾಲೂಕು ಗೋಣಿ ತುಮಕೂರು ಗ್ರಾಮದಲ್ಲಿರುವ ಸವರ್ಣೀಯ ಮತ್ತು ದಲಿತ ಜನಾಂಗದ ನಡುವೆ ಇದ್ದ ಕಂದಕಕ್ಕೆ ಅಂತೂ ತೆರಬಿದ್ದಿದೆ. ತರುವೇಕೆರೆ ತಹಶೀಲ್ದಾರ್ ಎಂ ಎನ್ ಕುಂ ಇ ಅಹಮದ್ ಸಮ್ಮುಖದಲ್ಲಿ ನವ ದಂಪತಿ ದೇಗುಲ ಪ್ರವೇಶಿಸಿದ್ದಾರೆ.
ಹೊಸದಾಗಿ ವಿವಾಹವಾದ ನವಜೋಡಿಯ ತಮ್ಮೂರಿನ ಗ್ರಾಮ ದೇವತೆ ಶ್ರೀ ಆದಿಶಕ್ತಿ ಅರಶಮ್ಮ ದೇವಿಯ ದೇವಾಲಯ ಪ್ರವೇಶ ಮತ್ತು ಪೂಜೆಗೆ ಸಂಬಂಧಿಸಿದಂತೆ ಸವರ್ಣೀಯರಿಂದ ಆಗಿದ್ದ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ತಹಸಿಲ್ದಾರ್ ಎಂ ಎನ್ ಕುಂ ಇ ಅಹಮದ್ ರವರ ಜೊತೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ವತಿಯಿಂದ ಗೋಣಿ ತುಮಕೂರು ಗ್ರಾಮದಲ್ಲಿ ಸಭೆ ಏರ್ಪಡಿಸಲಾಗಿತ್ತು.
ಗ್ರಾಮದಲ್ಲಿ ಉಂಟಾಗಿದ್ದ ಅಶಾಂತಿ ಹೋಗಲಾಡಿಸಲು ಎರಡೂ ಸಮುದಾಯದ ಮುಖಂಡರುಗಳನ್ನು ದೇವಾಲಯದ ಮುಂಭಾಗದಲ್ಲಿ ಸೇರಿಸಿ ಕಾನೂನು ಪಾಠ ಮಾಡಿದ ತಹಶೀಲ್ದಾರ್, ಜಾರಿಯಲ್ಲಿರುವ ದೌರ್ಜನ್ಯ ಪ್ರಕರಣಗಳ ವಿರುದ್ಧ ನಡೆಯುವ ಕಾಯಿದೆಗಳನ್ನ ವಿವರಿಸಿ ಹೇಳಿದರು.
21ನೇ ಶತಮಾನದಲ್ಲಿದ್ದರೂ ಜಾತಿಯ ವಿಷ ಬೀಜ ಬೀಜ ಇನ್ನೂ ನಶಿಸಿ ಹೋಗಿಲ್ಲ. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರೇ ಜಾತೀಯತೆ ವಿರುದ್ಧ ಅನುಭವ ಮಂಟಪವನ್ನು ನಿರ್ಮಿಸಿದ್ದರು ಎಂದು ತಹಶೀಲ್ದಾರ್ ಶರಣಪರಂಪರೆಯ ಜಾತ್ಯತೀತ ಪಾಠ ಮಾಡಿದರು.
:ಅರಸಮ್ಮ ದೇವಿ ದೇವಾಲಯವು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದು, ದೇವಾಲಯಕ್ಕೆ ಯಾವುದೇ ಮತ-ಪಂಥವಿಲ್ಲದಂತೆ ಪೂಜೆ ಹಾಗೂ ದರ್ಶನ ಮಾಡಬಹುದು. ಇದಕ್ಕೆ ಯಾರೂ ನಿರ್ಬಂಧ ಮಾಡುವಂತಿಲ್ಲ. ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಅಡಗಿಡದಂತೆ ಎಲ್ಲರೂ ತಮ್ಮ ತಮ್ಮ ಜನಾಂಗೀಯ ದ್ವೇಷಗಳನ್ನು ತಾರತಮ್ಯಗಳನ್ನು ಮರೆತು ಧಾರ್ಮಿಕ ಅಸ್ತಿತ್ವವನ್ನು ಕಂಡುಕೊಳ್ಳಬೇಕು” ಎಂದು ತಹಶೀಲ್ದಾರ್ ಹೇಳಿದರು.
ಸೂಕ್ತ ಪೊಲೀಸ್ ಬಂದೋಬಸ್ತ್ನಲ್ಲಿ ನವಜೋಡಿ ಹಾಗೂ ಪೋಷಕರನ್ನು ಕರೆದುಕೊಂಡು ದೇವಸ್ಥಾನದ ಒಳಗೆ ಪ್ರವೇಶಿಸಿ ಪೂಜೆ ಸಲ್ಲಿಸುವಂತೆ ಹಾಗೂ ದರ್ಶನ ಪಡೆಯುವ ಅವಕಾಶವನ್ನು ಮಾಡಿಕೊಟ್ಟರು. ಇನ್ನು ಮುಂದೆ ಈ ತರಹದ ದೌರ್ಜನ್ಯ ಪ್ರಕರಣಗಳು ತಾಲೂಕಿನ ಯಾವ ಭಾಗದಲ್ಲೂ ನಡೆಯಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು, ಆರಕ್ಷಕ ಉಪನಿರೀಕ್ಷಕ ಟಿ ಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಕಣ್ಮಣಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುರೇಶ್, ಕಂದಾಯ ನಿರೀಕ್ಷಕ ರಂಗಸ್ವಾಮಿ, ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಜಗದೀಶ್, ರಾಜ್ಯ ಗುಪ್ತಚರ ಇಲಾಖೆಯ ರಾಜಕುಮಾರ್, ಅರ್ಚಕ ನಂಜೇಗೌಡ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಧನಂಜಯ, ಕಿರಣ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿ ಮಲ್ಲಿಕ್, ಭೂತೇಶ್, ವಧುವಿನ ಅಣ್ಣ ಜಗದೀಶ್ ಮತ್ತು ಪೋಷಕರು ಸೇರಿದಂತೆ ಗ್ರಾಮಸ್ಥರುಗಳು ಹಾಜರಿದ್ದರು.


