ಚಂದಯಾನ-2 ಅಭಿಯಾನದ ಯಶಸ್ವಿ ಉಡ್ಡಯನವನ್ನು ಉಲ್ಲೇಖಿಸಿರುವ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಆದು ಬಾಹ್ಯಾಕಾಶದಲ್ಲಿ ತಂತ್ರಜ್ಞಾನವನ್ನು ತೋರಿಸುತ್ತದೆಯಾದರೂ, ಚರಂಡಿಗಳು ಮತ್ತು ಕಕ್ಕಸು ಗುಂಡಿಗಳನ್ನು ಸ್ವಚ್ಛ ಮಾಡುವಾಗ ಸಾಯುತ್ತಿರುವ ಕಾರ್ಮಿಕರ ಜೀವ ಉಳಿಸಬಲ್ಲ ಯಾವುದೇ ತಂತ್ರಜ್ಞಾನ ಏಕಿಲ್ಲ ಎಂದು ಟೀಕಿಸಿದ್ದಾರೆ.
ಮುಂದಿನ ಸ್ವಾತಂತ್ರ್ಯೋತ್ಸವಕ್ಕೆ ಮೊದಲು ಯಾವುದೇ ಒಂದು ಗ್ರಾಮವನ್ನು ‘ಅಸ್ಪೃಶ್ಯತೆ ಮುಕ್ತ ಗ್ರಾಮ”ವೆಂದು ಘೋಷಿಸಿ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೆ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಸವಾಲು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡುತ್ತಾ, ಬಿಜೆಪಿ ಸರಕಾರದ ಮೇಲೆ ಕಟುಟೀಕೆಗಳ ಮಳೆಯನ್ನೇ ಸುರಿಸಿದ ಮೇವಾನಿ, ಗುಜರಾತಿನಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಶ್ನೆಯನ್ನು ಬಲವಾಗಿ ಮಂಡಿಸಿದರು.
ದಲಿತರಿಗೆ ಸಾರ್ವಜನಿಕ ಬಾವಿಗಳಿಂದ ನೀರೆತ್ತಲು ಬಿಡದಿರುವಂತಹ ಅಸ್ಪೃಶ್ಯತೆ ಮತ್ತು ದೌರ್ಜನ್ಯ ನಡೆಯುತ್ತಿರುವ ಗ್ರಾಮಗಳಿಗೆ ಸರಕಾರ ಭೇಟಿ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.
“ಸರಕಾರವು ನಾಗರಿಕ ಹಕ್ಕುಗಳ ರಕ್ಷಣಾ ಕಾಯಿದೆಯಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕಾಗಿತ್ತು. ದುಃಖದ ವಿಷಯವೆಂದರೆ, ಯಾವುದೇ ದೂರನ್ನು ಕೂಡಾ ದಾಖಲಿಸಲಾಗುತ್ತಿಲ್ಲ” ಎಂದು ಅವರು ಹೇಳಿದರು.
ಬನಸ್ಕಾಂತ ಜಿಲ್ಲೆಯ ವಡ್ಗಾಂವ್ ಶಾಸಕರಾಗಿರುವ ಮೇವಾನಿ, ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಇಲಾಖೆಯ ಬಜೆಟ್ ಅನುದಾನ ಬೇಡಿಕೆ ಕುರಿತು ತಾನು ಮಂಡಿಸಿದ ನಿಲುವಳಿ ಸೂಚನೆಯ ಮೇಲೆ ಮಾತನಾಡುತ್ತಿದ್ದರು.
“ಯಾವುದೇ ದೌರ್ಜನ್ಯದ ಪ್ರಕರಣ ನಡೆದಾಗ ಮಾಧ್ಯಮಗಳು ‘ನೀವು ಯಾವಾಗ ಅಲ್ಲಿಗೆ ಹೋಗುತ್ತೀರಿ’ ಎಂದು ನನ್ನನ್ನು ಕೇಳುತ್ತಾರೆ. ಈಗ ‘ಸರ್ವಮಿತ್ರ’ ಎಂದು ಕರೆಯಲ್ಪಡುತ್ತಿರುವ ವಿಜಯ್ ರೂಪಾನಿಯವರಿಗೆ ನನ್ನ ವಿನಮ್ರ ವಿನಂತಿ ಎಂದರೆ, ನೀವು ದಲಿತಮಿತ್ರರಾಗಿ, ಅಂತಹ ಸ್ಥಳಗಳಿಗೆ ಭೇಟಿ ನೀಡಿ ಎಂಬುದಾಗಿದೆ ” ಎಂದು ಮೇವಾನಿ ಹೇಳಿದರು.
“ಆಗಸ್ಟ್ 15ಕ್ಕೆ ಮೊದಲು ಯಾವುದಾದರೂ ಒಂದು ಹಳ್ಳಿಯನ್ನು ಅವರು ಅಸ್ಪೃಶ್ಯತೆ ರಹಿತ ಹಳ್ಳಿ ಎಂದು ಘೋಷಣೆ ಮಾಡಬೇಕು ಎಂಬುದು ನನ್ನ ಬೇಡಿಕೆ” ಎಂದು ಅವರು ಹೇಳಿದರು. ಬಜೆಟ್ ಬೇಡಿಕೆಗಳ ಮೇಲೆ ಮಾತನಾಡಿದ ಅವರು, “ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಇಲಾಖೆಗಳನ್ನು ದಲಿತರು ಮತ್ತು ಬುಡಕಟ್ಟು ಜನರನ್ನು ಅರ್ಥಿಕವಾಗಿ ಮೇಲೆತ್ತಲೆಂದು ರೂಪಿಸಲಾಗಿಲ್ಲ. ಈ ಇಲಾಖೆಯ ಉದ್ದೇಶ ರಾಜ್ಯದಲ್ಲಿ ಇನ್ನೂ ಚಾಲ್ತಿಯಲ್ಲಿರುವ ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳ ನಿವಾರಣೆಯನ್ನು ಖಾತರಿಪಡಿಸುವುದಾಗಿದೆ. ಆದರೂ ಅದಕ್ಕಾಗಿ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಲಾಗಿಲ್ಲ” ಎಂದು ಸರಕಾರವನ್ನು ಟೀಕಿಸಿದರು.
“ನಾವು ಚಂದ್ರಯಾನ-2ರ ಉಡ್ಡಯನವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಆದೇ ಹೊತ್ತಿಗೆ, ಸ್ವಚ್ಛತಾ ಕಾರ್ಮಿಕರು ಚರಂಡಿಗಳ ಒಳಗೆ ಪ್ರವೇಶಿಸಿ, ಅಲ್ಲಿ ಸಾಯುವುದನ್ನು ತಪ್ಪಿಸುವ ತಂತ್ರಜ್ಞಾನ ಮಾತ್ರ ನಮ್ಮಲ್ಲಿಲ್ಲ” ಎಂದು ಮೇವಾನಿ ವಿಷಾದಿಸಿದರು.
ಸ್ವಚ್ಛತಾ ಕಾರ್ಮಿಕರ ಸಾವುಗಳನ್ನು ತಪ್ಪಿಸಲು ಸರಕಾರಕ್ಕೆ ಒಂದು ರೋಬೋಟ್ ಉಡುಗೊರೆ ನೀಡುವ ಪ್ರಸ್ತಾಪವನ್ನು ಅವರು ಮುಂದಿಟ್ಟರು.
“ಇದು ಸರಕಾರಕ್ಕೆ ನನ್ನ ಕೊಡುಗೆ. ಕೇರಳದಲ್ಲಿ ನಿರ್ಮಿಸಲಾಗಿರುವ 11 ಲಕ್ಷ ರೂ. ಬೆಲೆಯ ರೋಬೋಟ್ ಒಂದನ್ನು ನಾನು ನೀಡುತ್ತೇನೆ. ನಾವು ಅದನ್ನು ಬಳಸಿದರೆ ಕಾರ್ಮಿಕರು ಮ್ಯಾನ್ಹೋಲ್ ಒಳಗೆ ಪ್ರವೇಶಿಸಬೇಕಾಗಿಲ್ಲ ನಾನು ಸಿದ್ಧನಿದ್ದೇನೆ. ಆದರೆ, ಅದನ್ನು ಬಳಸುವುದಾಗಿ ಲಿಖಿತವಾಗಿ ಭರವಸೆ ಕೊಡುತ್ತೀರಾ?” ಎಂದು ಮೇವಾನಿ ಪ್ರಶ್ನಿಸಿದರು.
ದಲಿತರು ಪ್ರತ್ಯೇಕ ಸ್ಮಶಾನಗಳನ್ನು ಬಳಸುವಂತೆ ಮಾಡಲಾಗುತ್ತಿದ್ದು, ಸರಕಾರ ಎಲ್ಲಾ ಜಾತಿಗಳ ಜನರು ಒಂದೇ ಸಮಾನ ಸ್ಮಶಾನ ಬಳಸುವುದನ್ನು ಕಡ್ಡಾಯ ಮಾಡುವ ಧೋರಣೆಯನ್ನು ಜಾರಿಗೊಳಿಸಲು ಸರಕಾರವನ್ನು ಅವರು ಒತ್ತಾಯಿಸಿದರು.
Yes its true bro not only gujarath govt, totally govt of india failure the supporting of our comunity
Absulitly true bro