Homeಅಂಕಣಗಳುಪುಟಕ್ಕಿಟ್ಟ ಪುಟಗಳುಹರಿದಾಸರ 10,000 ಹಾಡುಗಳ ಸಂಪಾದಕ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಹರಿದಾಸರ 10,000 ಹಾಡುಗಳ ಸಂಪಾದಕ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಮೋಹನದಾಸರು “ತುರುಕರಿಲ್ಲದ ಊರೊಳು ಇರಬಾರದು, ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ, ತುರುಕರು ಕರೆದರೆ ಉಣಬಹುದು ಉಡಬಹುದು, ತುರುಕರಿಂದಲಿ ಜಗಕೆ ಪರಮ ಸೌಖ್ಯಾ” ಎಂದು ಬರೆದಿದ್ದಾರೆ.

- Advertisement -
- Advertisement -

“ಕುಲಮದ ವೈಭವಮದ ವಿದ್ಯಾಮದಗಳ | ನುಳಿದು ಹರಿದಾಸರ ಮರೆಹೊಕ್ಕು ಸುಖಿಯಾಗು” ಎಂದು ವಾದಿರಾಜರು ಹೇಳಿದರೆ, “ಕುಲಕುಲ ಕುಲವೆನ್ನುತಿಹರು, ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ” ಎನ್ನುತ್ತಾ ಕನಕದಾಸರು “ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ | ಕುಲದ ನೆಲೆಯನೇನಾದರೂ ಬಲ್ಲಿರಾ?” ಎಂದು ಪ್ರಶ್ನಿಸುತ್ತಾರೆ. “ಧರ್ಮವೇ ಜಯವೆಂಬ ದಿವ್ಯ ಮಂತ್ರ” ಎನ್ನುವ ಪುರಂದರ ದಾಸರು “ವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕು, ದ್ವೇಷ ಮಾಡಿದವನ ಪೋಷಿಸಲು ಬೇಕು, ಪುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು” ಎಂದು ಹರಿಭಕ್ತಿಯ ಮೂಲಕ ನರಪ್ರೀತಿಯನ್ನು ಜಾಗೃತ ಮಾಡವರು. ‘ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯ ತೋರು, ಅಂಗಿಯನ್ನು ಕಿತ್ತುಕೊಂಡರೆ ಒಳ ಅಂಗಿಯನ್ನೂ ನೀಡು’ ಎನ್ನುವ ಕ್ರಿಸ್ತನ ಮಾರ್ದನಿಯಾಗುತ್ತಾರೆ. ‘ಅಶಾಂತಿಯನ್ನು ಶಾಂತಿಯಿಂದ, ದ್ವೇಷವನ್ನು ಪ್ರೀತಿಯಿಂದ ಗೆಲ್ಲು’ ಎನ್ನುವ ಬುದ್ಧನ ಧ್ವನಿಸುತ್ತಾರೆ. ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಸಂಪಾದನೆಯಲ್ಲಿ ಸಂಗ್ರಹವಾಗಿರುವ ಹರಿದಾಸರ ಹತ್ತುಸಾವಿರ ಹಾಡುಗಳು ಕರ್ನಾಟಕದ ಭಕ್ತಿಪರಂಪರೆಯ ಬಹು ಮುಖ್ಯ ಕೊಂಡಿಯಾಗಿರುವ ದಾಸ ಸಾಹಿತ್ಯದ ಅತ್ಯಪೂರ್ವವಾದ ದಾಖಲೆ.

‘ಹರಿ’ ಎಂಬ ವಿಶ್ವದ್ಚೇತನದ ಪ್ರತಿಮೆಗೆ ಶರಣಾಗುವ ಮೂಲಕ ದಾಸರು ಮಾನವ ಮನಸುಗಳ ಕಶ್ಮಲಗಳನ್ನು ಹೋಗಲಾಡಿಸಿ, ಸದ್ಭಕ್ತಿಯನ್ನು ಜಾಗೃತಗೊಳಿಸಿ, ಆ ಮೂಲಕ ಮುಕ್ತರಾಗಲು ತಮ್ಮ ಕೀರ್ತನೆಗಳಲ್ಲಿ ದಾರಿ ತೋರಿದರು. ಹರಿ ಎಂದರೆ ಎಲ್ಲೋ ಮೋಡಗಳಾಚೆಯ ಸರ್ವಾಧಿಕಾರಿಯೊಬ್ಬನಿಗೆ ದಾಸರಾಗಿರುವ ರೀತಿಯಲ್ಲ. ‘ದಾಸ’ ಎನ್ನುವ ಪದದಲ್ಲಿ ಗುಲಾಮಗಿರಿಯ ಧ್ವನಿಯಲ್ಲ. ಬಸವಾದಿ ಶರಣರ ‘ಶರಣ’ ಎನ್ನುವ ಪದದ ವಿನೀತ ಭಾವವೇ ಇದು. ತಲೆಯೆತ್ತುವ ಅಹಂಕಾರವನ್ನು ಮಣಿಸಿ ಸಂಪೂರ್ಣ ಶರಣಾಗತರಾಗುವ ಭಾವದಲ್ಲಿ ದಾಸನಾಗುವುದು. ಶಿಶು, ಸತಿ, ಜನನಿಜನಕ, ರಸಿಕ ಭ್ರಾತರ, ರಾಜ ಹೀಗೆ ವಿವಿಧ ಬಗೆಯ ಮೋಹಗಳು, ಅನ್ನಮದ, ಅರ್ಥಮದ, ಅಖಿಲ ವೈಭವದ ಮದ, ಪ್ರಾಯದ, ರೂಪದ, ಇನ್ನು ತನಗಿದಿರಿಲ್ಲವೆಂತೆAಬ ಮದಗಳೆಲ್ಲಾ ವಿವಿಧ ಬಗೆ ಮಾನಸಿಕ ಕಾಂಪ್ಲೆಕ್ಸ್ಗಳನ್ನು ಸೃಷ್ಟಿಸಿ, ಶುದ್ಧ ಮನಸ್ಸಿನವನಾಗದೇ “ಬಿನ್ನಹಕೆ ಬಾಯಿಲ್ಲವಯ್ಯಾ, ಅನಂತ ಅಪರಾಧ ಎನ್ನಲ್ಲಿ ಇರಲಾಗಿ” ಎನ್ನುತ್ತಾ ಪುರಂದರ ದಾಸರು ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತಾರೆ.

ದಾಸರಿಗೆ ಹರಿಯ ಮೇಲೆ ಕೋಪ ಬಂದರೆ ಸುಮ್ಮನೆ ಬಿಡುವವರಲ್ಲ, “ಯಾರು ಬದುಕಿದರಯ್ಯಾ ಹರಿ ನಿನ್ನ ನಂಬಿ, ತೋರು ಈ ಧರೆಯೊಳಗೆ ಒಬ್ಬರನೂ ಕಾಣೆ” ಎಂದು ಜಗಳವಾಡುತ್ತಾರೆ. ಹರಿಯನ್ನು ಕಾಡುತ್ತಾರೆ, ಬೇಡುತ್ತಾರೆ, ನಿನ್ನ ಹೊರತು ನನಗ್ಯಾರಿಲ್ಲವೋ ಎಂದು ಪ್ರೇಮದಿಂದ ಬಳಲುತ್ತಾರೆ. ಮಗುವಿನಂತೆ ಮಾಡಿ ಅವನ ತೂಗುತ್ತಾ, ಉಣಿಸುತ್ತಾ ತಮ್ಮಲ್ಲಿರುವ ವಾತ್ಸಲ್ಯವನ್ನು ಎಚ್ಚರಿಸಿಕೊಳ್ಳುತ್ತಾರೆ. ಅಚಲವಾದ ಶ್ರದ್ಧೆಯಿಂದ ಅವನ ಬಿಡದೇ ಕೊಂಡಾಡುತ್ತಾರೆ. ಆರಾಧಿಸುತ್ತಾರೆ, ಪೂಜಿಸುತ್ತಾರೆ, ಮುದ್ದಿಸುತ್ತಾರೆ; ಹೀಗೆ ಹರಿ ದಾಸರ ಹಲವು ಭಾವಗಳಿಗೆ ಗುರಿಯಾಗುತ್ತಾನೆ. “ನೀನ್ಯಾಕೋ, ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಎಂದು ಅವನನ್ನೇ ಛೇಡಿಸುವಷ್ಟು ಸಲುಗೆ.

“ಮಂಡೆ ಬೋಳಾದರೆ ಮನ ಬೋಳಾಯಿತೆ” ಎಂದು ಡಂಭಾಚಾರದ ಕಪಟತನಗಳನ್ನು ಪ್ರಶ್ನಿಸುತ್ತಾರೆ. ಸಮಾಜದ ಓರೆಕೋರೆಗಳನ್ನು ಗಮನಿಸುತ್ತಾರೆ, ತಿದ್ದುತ್ತಾರೆ. ಭಕ್ತಿ ವಿರಕ್ತಿಯ ಮನದಲ್ಲಿ ಧರಿಸಿಕೊಂಡು, “ಎನ್ನ ಹೃದಯ ಕಮಲದೊಳು ನಿಂದಿರೋ” ಹೃದಯದಲ್ಲಿ ಹರಿಯನ್ನು ಧರಿಸಿಕೊಂಡು ಶುದ್ಧ ಸಂಕಲ್ಪದ ಮನುಷ್ಯನಾಗಿ ಇಹದಲ್ಲಿಯೂ ಪರದಲ್ಲಿಯೂ ಸದ್ಗತಿಯನ್ನು ಕಾಣುವುದರ ದಾರಿಯಾಗಿ ಸಾವಿರಾರು ದಾಸರ ಪದಗಳು ಪುಟಪುಟಗಳಲ್ಲಿ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತವೆ.

ವ್ಯಾಸರಾಜರು, ವಾದಿರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು, ರಾಘವೇಂದ್ರಸ್ವಾಮಿಗಳೇ ಮೊದಲಾದ ದಾಸರು ನಮಗೆ ಸಾಮಾನ್ಯವಾಗಿ ತಮ್ಮ ಕೀರ್ತನೆಗಳ ಮೂಲಕ ಪರಿಚಿತರು. ಆದರೆ, ಇನ್ನೂ ನೂರಾರು ದಾಸರ ರಚನೆಗಳನ್ನು ಓದುವ ಭಾಗ್ಯ ಈ ಕೃತಿಯಿಂದ. “ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯ” ಎಂಬ ಆನಂದ.

ತತ್ವ, ಆಧ್ಯಾತ್ಮ, ಕುಂಡಲಿನೀ ತಂತ್ರದಿಂದ ಹಿಡಿದು, ಭಕ್ತಿಯ ಪರಮೋಚ್ಚ ಪ್ರಕಟಣೆಗಳನ್ನು ಹೊಂದಿರುವ ಎಲ್ಲಾ ಬಗೆಯ ಹಾಡುಗಳೂ ಇದರಲ್ಲಿವೆ. ಸಾಮಾನ್ಯವಾಗಿ ಸರ್ವಜ್ಞನ ತ್ರಿಪದಿ, ತಿರುವಳ್ಳುವರ್ ದ್ವಿಪದಿ, ಕಬೀರನ ದೋಹೆ ಇತ್ಯಾದಿಗಳಂತೆ ಮೂರೇ ಸಾಲಿನ ಹಾಡುಗಳಿಂದ ಹಿಡಿದು ದೊಡ್ಡದೊಡ್ಡ ಕೀರ್ತನೆಗಳವರೆಗೂ ಈ ಸಂಗ್ರಹದಲ್ಲಿದೆ. ಎಲ್ಲಾ ಹಾಡುಗಳು ಅಕಾರಾದಿಯಲ್ಲಿ ಜೋಡಿಸಲ್ಪಟ್ಟು, ದಾಸರ ಅಂಕಿತ ನಾಮಗಳ ಪಟ್ಟಿಯನ್ನು ಒದಗಿಸಿಕೊಡುವ ಮೂಲಕ ಅತ್ಯಂತ ಸುಸಜ್ಜಿತವಾಗಿದೆ.

ಶತಶತಮಾನಗಳ ಕಾಲ ಭಕ್ತಜನ ಭಾವುಕರು, ಮುಗ್ಧ ಜಾನಪದ ಹೆಣ್ಣುಮಕ್ಕಳು ಮೌಖಿಕ ಪರಂಪರೆಯಲ್ಲಿ ಉಳಿಸಿಕೊಂಡು ಬಂದಿದ್ದು, ಲಿಖಿತ ಪಾಠಕ್ಕೆ ಬಂದಿರುವ ಈ ಹಾಡುಗಳನ್ನು ಶ್ರದ್ಧೆ, ಭಕ್ತಿ ಮತ್ತು ಪ್ರೀತಿಯಿಂದ ಸಂಪಾದಿಸಿರುವ ಡಾ. ಪಾರ್ಥಸಾರಥಿಯವರು ತಮ್ಮ ಸಂಪಾದಕರ ನುಡಿಯಲ್ಲಿ ಹೀಗೆ ಹೇಳುತ್ತಾರೆ.

“ದಾಸಸಾಹಿತ್ಯದ ಬಗ್ಗೆ ನನಗೆ ಒಲವು ಬಂದಿದ್ದು ಮನೆತನದ ಪ್ರಭಾವದಿಂದ. ಆದರೆ ಅದಕ್ಕೂ ಮಿಗಿಲಾಗಿ ಹರಿದಾಸರು ಶುದ್ಧ ಮನಸ್ಸಿನಿಂದ, ಸದಾಚಾರ ಸದ್ವಿಚಾರಗಳಿಂದ ಹಾಡುಗಳನ್ನು ರಚಿಸಿದರು ಎನ್ನುವ ಪ್ರಮುಖ ಕಾರಣದಿಂದ, ‘ಮಾನವ ಜನ್ಮ ದೊಡ್ಡದು’ ಎಂದು ಮಾನವೀಯ ಮೌಲ್ಯಗಳನ್ನು ಮೆರೆದ ದಾಸಸಾಹಿತ್ಯ, ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಿ, ಜನಮನವನ್ನು ಪಾವನ ಮಾಡಿತು, ಪಾಮರರನ್ನು ಪ್ರಾಜ್ಞರನ್ನಾಗಿ ಮಾಡಿತು.”

ನಿಜ, ಮಾನವನ ಬಹು ಲೌಕಿಕ ಬಲೆಯಿಂದ ಭಗವಂತನ ಮುಕ್ತ ಬಯಲಿಗೆ ಒಯ್ಯುವಂತಹ ಸಾತ್ವಿಕ ಧೋರಣೆಯ ಈ ಹರಿಭಕ್ತಿಯ ಹಾಡುಗಳು ಹಿಂದೂ ಧರ್ಮದ ಭಕ್ತಿ ಚಳವಳಿಯ ಧ್ವನಿಗಳೇ ಆಗಿವೆ. ಜಾತಿಮತಗಳ, ಉಚ್ಚನೀಚಗಳ, ಬಡವ ಬಲ್ಲಿದನೆಂದಿಲ್ಲದೇ ದಾಸನಾಗುವ ಮೂಲಕ ಇಹದಲ್ಲಿ ಉತ್ತಮ ಬಾಳ್ವೆ, ಪರದಲ್ಲಿ ಸದ್ಗತಿ ಎಂದು ಆಸ್ತಿಕರಿಗೆ ದಾರಿದೀಪವಾಗುತ್ತವೆ. ಆದರೆ ಹಿಂದೂ ಧರ್ಮದ ಇಂತಹ ವೈಶಾಲ್ಯದ ಪರಂಪರೆಗಳನ್ನು ಮರೆಮಾಚುತ್ತಾ ಹಿಂದುತ್ವವಾದಿಗಳು ಧರ್ಮವನ್ನು ರಾಜಕೀಯಗೊಳಿಸುತ್ತಾರೆ. ಇದೇ ಸಮಸ್ಯೆ. ಹಿಂದೂ ಧರ್ಮದ ಪಾವಿತ್ರ್ಯತೆ ಇರುವುದು ಹಿಂದುತ್ವವಾದದ ಕಳಂಕವನ್ನು ಹೋಗಲಾಡಿಸಿಕೊಳ್ಳುವುದರಲ್ಲಿ.

ಜಾತಿ ಶ್ರೇಷ್ಠತೆಯ ಗೀಳಿನಲ್ಲಿ ಅಸ್ಪೃಷ್ಯತೆ ಆಚರಣೆ ಮಾಡುವವರಿಗೆ ಭ್ರಮೆ ಹರಿಯುವಂತೆ ದಾಸರು, “ಹೊಲೆಯ ಪೆದ್ದಯ್ಯಗೆ ಒಲಿದವನ ಆಳಾದಿ, ಕುಲದಿ ಮಾದಿರ‍್ಹರಳಯ್ಯನ ಮನೆಲುಂಡಿ, ಡೊಂಬಿತಿಯ ಗುಡಿಸಿಲಲಿ ಸಂಭ್ರಮದಿ ಮಲಗಿದಿ, ಶಂಭೋ ಕುಣಿದೆಲೋ ಕುಂಬಾರಗೊಲಿದು” ಎಂದು ಹರಿಯನ್ನುದ್ದೇಶಿಸಿ ಹೇಳುತ್ತಾರೆ.

ಮುಸಲ್ಮಾನರನ್ನು ದ್ವೇಷಿಸುವುದೇ ಹಿಂದೂ ಒಬ್ಬನ ಸಾಮಾನ್ಯ ಮನಸ್ಥಿತಿಯಾಗಬೇಕು ಎನ್ನುವಂತೆ ದ್ವೇಷಬೀಜ ಬಿತ್ತುವವರು ದಾಸರು ತುರುಕರ ಬಗ್ಗೆ ಹೇಳಿರುವುದನ್ನು ಗಮನಿಸಬೇಕು.
“ಅಂತಹ ಮೋಹಿಪ ಕಂತುಗೆ ಮೊದಲೆ ಸಂತಿಯ (ಸುನ್ನತಿ) ಮಾಡಬೇಕಲ್ಲಾ, ಸಂತರು ಮಾಡುವ ಸಂತಿಯ ಮುಲ್ಲನ ಸ್ವಂತ ಕರಿಯ ಬೇಕಲ್ಲಾ” ಎಂದು ಕೋಸಿಗಿ ಸ್ವಾಮಿರಾಯಾಚಾರ್ಯರು ಮುಂದುವರಿಯುತ್ತಾ ತಮ್ಮ ಕೀರ್ತನೆಯಲ್ಲಿ ಹೇಳುತ್ತಾರೆ, “ಮನೋಶುದ್ಧೋಪಾಸನಲಕ್ಷಣ ಘನ ನಮಾಜವ ಮಾಡಬೇಕಲ್ಲಾ” “ಮೋರಮು (ಮೊಹರಂ) ಬರಲು ಸೇರಿದ ತಾಮಸ, ಸಾರಿಸಿ ಬಳಿಬೇಕಲ್ಲಾ, ಸಾರಸ್ವತ ಮನೋಚಾರುಮಸೀದಿಯ ನೀರ ಜ್ಞಾನದಿ ತೊಳಿಬೇಕಲ್ಲ.” ಹೀಗೆ ಮುಸಲ್ಮಾನರನ್ನು ತಮ್ಮ ‘ತುರಕರಾದರೀ’ ಕೀರ್ತನೆಯಲ್ಲಿ ನೇರ ಉಲ್ಲೇಖಿಸುತ್ತಾರೆ.

ಹಾಗೆ ಮೋಹನದಾಸರು “ತುರುಕರಿಲ್ಲದ ಊರೊಳು ಇರಬಾರದು, ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ, ತುರುಕರು ಕರೆದರೆ ಉಣಬಹುದು ಉಡಬಹುದು, ತುರುಕರಿಂದಲಿ ಜಗಕೆ ಪರಮ ಸೌಖ್ಯಾ” ಎಂದು ಬರೆದಿರುವುದನ್ನು ನೋಡಿ, ಇದೇನು ದಾಸರು ಹೀಗೆ ಮುಸಲ್ಮಾನರ ಬಗ್ಗೆ ಬರೆದಿದ್ದಾರೆ ಎಂದು ನನ್ನ ಸ್ನೇಹಿತರೊಬ್ಬರು ಗಮನ ಸೆಳೆದಿದ್ದರು. ಆದರೆ ಅದು ತುರು-ಕರು. ಹಸುವಿನ ಕರು. ಇನ್ನೂ ಕೆಲವು ಕಡೆ ಗೋಪಾಲಕರನ್ನು ತುರುಕಾರ ಎನ್ನುವುದೂ ಉಂಟು. ಕಿಟ್ಟೆಲ್ ನಿಘಂಟಿನಲ್ಲಿ ಇದರ ಬಗ್ಗೆ ಸ್ಪಷ್ಟತೆ ಇದೆ. ಹಿಂದೆ ಕನ್ನಡದಲ್ಲಿಯೇ ಎರಡು ಬಗೆಯ ರ-ಕಾರಗಳನ್ನು ಬಳಸುತ್ತಿದ್ದರು. ಮೊದಲನೆಯ ‘ರ’ ತುರುಕ ಎಂದರೆ ಟರ್ಕಿಯಿಂದ ಬಂದವನು, ಮುಸಲ್ಮಾನ, ಯವನ, ತುರುಷ್ಕ. ಇನ್ನೊಂದು ತುರುಕಾರದಲ್ಲಿ ಈಗ ಬಿಟ್ಟುಹೋಗಿರುವ ರ-ಕಾರದ ಬಳಕೆ. ಗೋಪಾಲ, ವಲ್ಲವ, ಗೋಮತ್; ಈ ಅರ್ಥದಲ್ಲಿ. ತುರು-ಕರ ಎಂದರೆ ಬಹುಶಃ ಕರು ಇರಬಹುದು.

ಹರಿದಾಸರ ಹತ್ತು ಸಾವಿರ ಹಾಡುಗಳು ಅಧ್ಯಯನಕ್ಕೂ, ಭಕ್ತಿಯ ಪಾರಾಯಣಕ್ಕೂ, ಸಾಹಿತ್ಯೋಪಾಸನೆಗೂ ದಕ್ಕುವುದು. ಭಕ್ತ ಮತ್ತು ಭಗವಂತನ ನಡುವಿನ ಮಾರ್ಗದರ್ಶಿಯಾಗಿ ತೆರೆದುಕೊಳ್ಳುವ ದಾಸ ಸಾಹಿತ್ಯವೂ ಕೂಡಾ ಶರಣರ ವಚನಗಳಂತೆ, ತತ್ವಪದಕಾರರ ರಚನೆಗಳಂತೆ ಕನ್ನಡದ ಸಾಹಿತ್ಯಕ ಮತ್ತು ಆಧ್ಯಾತ್ಮಿಕ ಕೊಡುಗೆ.
“ಮನವು ಬಿಲ್ಲನೆ ಮಾಡಿ | ತನುವು ಹೆದಿಯನೆ ಕಟ್ಟಿ | ಅನುಭವದ ಅಂಬಿನಲಿ | ಜನನ ಮರಣದ ಗುರಿಯ ಕೆಡಹಿದಾ | ಜ್ಞಾನಸಾಗರ ಗುರುನಾಥನೆಂದು | ಸ್ತುತಿಸಿದಾ ಮಹಿಪತಿಯು |”

ಸಂಪಾದಕ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ
ಪ್ರಕಟಣೆ: ಶ್ರೀ ಹರಿದಾಸ ಸಂಘ, ಬೆಂಗಳೂರು
ಪುಟಗಳು: ೧೮೮೬ ಬೆಲೆ: ರೂ. ೭೯೫/-
(೦೮೦-೨೫೬೧೬೩೨೮, ೯೪೪೮೫೫೨೩೨೮).


ಇದನ್ನೂ ಓದಿ: ನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...