Homeಅಂಕಣಗಳುಪುಟಕ್ಕಿಟ್ಟ ಪುಟಗಳುಹರಿದಾಸರ 10,000 ಹಾಡುಗಳ ಸಂಪಾದಕ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಹರಿದಾಸರ 10,000 ಹಾಡುಗಳ ಸಂಪಾದಕ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಮೋಹನದಾಸರು “ತುರುಕರಿಲ್ಲದ ಊರೊಳು ಇರಬಾರದು, ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ, ತುರುಕರು ಕರೆದರೆ ಉಣಬಹುದು ಉಡಬಹುದು, ತುರುಕರಿಂದಲಿ ಜಗಕೆ ಪರಮ ಸೌಖ್ಯಾ” ಎಂದು ಬರೆದಿದ್ದಾರೆ.

- Advertisement -
- Advertisement -

“ಕುಲಮದ ವೈಭವಮದ ವಿದ್ಯಾಮದಗಳ | ನುಳಿದು ಹರಿದಾಸರ ಮರೆಹೊಕ್ಕು ಸುಖಿಯಾಗು” ಎಂದು ವಾದಿರಾಜರು ಹೇಳಿದರೆ, “ಕುಲಕುಲ ಕುಲವೆನ್ನುತಿಹರು, ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ” ಎನ್ನುತ್ತಾ ಕನಕದಾಸರು “ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ | ಕುಲದ ನೆಲೆಯನೇನಾದರೂ ಬಲ್ಲಿರಾ?” ಎಂದು ಪ್ರಶ್ನಿಸುತ್ತಾರೆ. “ಧರ್ಮವೇ ಜಯವೆಂಬ ದಿವ್ಯ ಮಂತ್ರ” ಎನ್ನುವ ಪುರಂದರ ದಾಸರು “ವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕು, ದ್ವೇಷ ಮಾಡಿದವನ ಪೋಷಿಸಲು ಬೇಕು, ಪುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು” ಎಂದು ಹರಿಭಕ್ತಿಯ ಮೂಲಕ ನರಪ್ರೀತಿಯನ್ನು ಜಾಗೃತ ಮಾಡವರು. ‘ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯ ತೋರು, ಅಂಗಿಯನ್ನು ಕಿತ್ತುಕೊಂಡರೆ ಒಳ ಅಂಗಿಯನ್ನೂ ನೀಡು’ ಎನ್ನುವ ಕ್ರಿಸ್ತನ ಮಾರ್ದನಿಯಾಗುತ್ತಾರೆ. ‘ಅಶಾಂತಿಯನ್ನು ಶಾಂತಿಯಿಂದ, ದ್ವೇಷವನ್ನು ಪ್ರೀತಿಯಿಂದ ಗೆಲ್ಲು’ ಎನ್ನುವ ಬುದ್ಧನ ಧ್ವನಿಸುತ್ತಾರೆ. ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಸಂಪಾದನೆಯಲ್ಲಿ ಸಂಗ್ರಹವಾಗಿರುವ ಹರಿದಾಸರ ಹತ್ತುಸಾವಿರ ಹಾಡುಗಳು ಕರ್ನಾಟಕದ ಭಕ್ತಿಪರಂಪರೆಯ ಬಹು ಮುಖ್ಯ ಕೊಂಡಿಯಾಗಿರುವ ದಾಸ ಸಾಹಿತ್ಯದ ಅತ್ಯಪೂರ್ವವಾದ ದಾಖಲೆ.

‘ಹರಿ’ ಎಂಬ ವಿಶ್ವದ್ಚೇತನದ ಪ್ರತಿಮೆಗೆ ಶರಣಾಗುವ ಮೂಲಕ ದಾಸರು ಮಾನವ ಮನಸುಗಳ ಕಶ್ಮಲಗಳನ್ನು ಹೋಗಲಾಡಿಸಿ, ಸದ್ಭಕ್ತಿಯನ್ನು ಜಾಗೃತಗೊಳಿಸಿ, ಆ ಮೂಲಕ ಮುಕ್ತರಾಗಲು ತಮ್ಮ ಕೀರ್ತನೆಗಳಲ್ಲಿ ದಾರಿ ತೋರಿದರು. ಹರಿ ಎಂದರೆ ಎಲ್ಲೋ ಮೋಡಗಳಾಚೆಯ ಸರ್ವಾಧಿಕಾರಿಯೊಬ್ಬನಿಗೆ ದಾಸರಾಗಿರುವ ರೀತಿಯಲ್ಲ. ‘ದಾಸ’ ಎನ್ನುವ ಪದದಲ್ಲಿ ಗುಲಾಮಗಿರಿಯ ಧ್ವನಿಯಲ್ಲ. ಬಸವಾದಿ ಶರಣರ ‘ಶರಣ’ ಎನ್ನುವ ಪದದ ವಿನೀತ ಭಾವವೇ ಇದು. ತಲೆಯೆತ್ತುವ ಅಹಂಕಾರವನ್ನು ಮಣಿಸಿ ಸಂಪೂರ್ಣ ಶರಣಾಗತರಾಗುವ ಭಾವದಲ್ಲಿ ದಾಸನಾಗುವುದು. ಶಿಶು, ಸತಿ, ಜನನಿಜನಕ, ರಸಿಕ ಭ್ರಾತರ, ರಾಜ ಹೀಗೆ ವಿವಿಧ ಬಗೆಯ ಮೋಹಗಳು, ಅನ್ನಮದ, ಅರ್ಥಮದ, ಅಖಿಲ ವೈಭವದ ಮದ, ಪ್ರಾಯದ, ರೂಪದ, ಇನ್ನು ತನಗಿದಿರಿಲ್ಲವೆಂತೆAಬ ಮದಗಳೆಲ್ಲಾ ವಿವಿಧ ಬಗೆ ಮಾನಸಿಕ ಕಾಂಪ್ಲೆಕ್ಸ್ಗಳನ್ನು ಸೃಷ್ಟಿಸಿ, ಶುದ್ಧ ಮನಸ್ಸಿನವನಾಗದೇ “ಬಿನ್ನಹಕೆ ಬಾಯಿಲ್ಲವಯ್ಯಾ, ಅನಂತ ಅಪರಾಧ ಎನ್ನಲ್ಲಿ ಇರಲಾಗಿ” ಎನ್ನುತ್ತಾ ಪುರಂದರ ದಾಸರು ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತಾರೆ.

ದಾಸರಿಗೆ ಹರಿಯ ಮೇಲೆ ಕೋಪ ಬಂದರೆ ಸುಮ್ಮನೆ ಬಿಡುವವರಲ್ಲ, “ಯಾರು ಬದುಕಿದರಯ್ಯಾ ಹರಿ ನಿನ್ನ ನಂಬಿ, ತೋರು ಈ ಧರೆಯೊಳಗೆ ಒಬ್ಬರನೂ ಕಾಣೆ” ಎಂದು ಜಗಳವಾಡುತ್ತಾರೆ. ಹರಿಯನ್ನು ಕಾಡುತ್ತಾರೆ, ಬೇಡುತ್ತಾರೆ, ನಿನ್ನ ಹೊರತು ನನಗ್ಯಾರಿಲ್ಲವೋ ಎಂದು ಪ್ರೇಮದಿಂದ ಬಳಲುತ್ತಾರೆ. ಮಗುವಿನಂತೆ ಮಾಡಿ ಅವನ ತೂಗುತ್ತಾ, ಉಣಿಸುತ್ತಾ ತಮ್ಮಲ್ಲಿರುವ ವಾತ್ಸಲ್ಯವನ್ನು ಎಚ್ಚರಿಸಿಕೊಳ್ಳುತ್ತಾರೆ. ಅಚಲವಾದ ಶ್ರದ್ಧೆಯಿಂದ ಅವನ ಬಿಡದೇ ಕೊಂಡಾಡುತ್ತಾರೆ. ಆರಾಧಿಸುತ್ತಾರೆ, ಪೂಜಿಸುತ್ತಾರೆ, ಮುದ್ದಿಸುತ್ತಾರೆ; ಹೀಗೆ ಹರಿ ದಾಸರ ಹಲವು ಭಾವಗಳಿಗೆ ಗುರಿಯಾಗುತ್ತಾನೆ. “ನೀನ್ಯಾಕೋ, ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಎಂದು ಅವನನ್ನೇ ಛೇಡಿಸುವಷ್ಟು ಸಲುಗೆ.

“ಮಂಡೆ ಬೋಳಾದರೆ ಮನ ಬೋಳಾಯಿತೆ” ಎಂದು ಡಂಭಾಚಾರದ ಕಪಟತನಗಳನ್ನು ಪ್ರಶ್ನಿಸುತ್ತಾರೆ. ಸಮಾಜದ ಓರೆಕೋರೆಗಳನ್ನು ಗಮನಿಸುತ್ತಾರೆ, ತಿದ್ದುತ್ತಾರೆ. ಭಕ್ತಿ ವಿರಕ್ತಿಯ ಮನದಲ್ಲಿ ಧರಿಸಿಕೊಂಡು, “ಎನ್ನ ಹೃದಯ ಕಮಲದೊಳು ನಿಂದಿರೋ” ಹೃದಯದಲ್ಲಿ ಹರಿಯನ್ನು ಧರಿಸಿಕೊಂಡು ಶುದ್ಧ ಸಂಕಲ್ಪದ ಮನುಷ್ಯನಾಗಿ ಇಹದಲ್ಲಿಯೂ ಪರದಲ್ಲಿಯೂ ಸದ್ಗತಿಯನ್ನು ಕಾಣುವುದರ ದಾರಿಯಾಗಿ ಸಾವಿರಾರು ದಾಸರ ಪದಗಳು ಪುಟಪುಟಗಳಲ್ಲಿ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತವೆ.

ವ್ಯಾಸರಾಜರು, ವಾದಿರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು, ರಾಘವೇಂದ್ರಸ್ವಾಮಿಗಳೇ ಮೊದಲಾದ ದಾಸರು ನಮಗೆ ಸಾಮಾನ್ಯವಾಗಿ ತಮ್ಮ ಕೀರ್ತನೆಗಳ ಮೂಲಕ ಪರಿಚಿತರು. ಆದರೆ, ಇನ್ನೂ ನೂರಾರು ದಾಸರ ರಚನೆಗಳನ್ನು ಓದುವ ಭಾಗ್ಯ ಈ ಕೃತಿಯಿಂದ. “ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯ” ಎಂಬ ಆನಂದ.

ತತ್ವ, ಆಧ್ಯಾತ್ಮ, ಕುಂಡಲಿನೀ ತಂತ್ರದಿಂದ ಹಿಡಿದು, ಭಕ್ತಿಯ ಪರಮೋಚ್ಚ ಪ್ರಕಟಣೆಗಳನ್ನು ಹೊಂದಿರುವ ಎಲ್ಲಾ ಬಗೆಯ ಹಾಡುಗಳೂ ಇದರಲ್ಲಿವೆ. ಸಾಮಾನ್ಯವಾಗಿ ಸರ್ವಜ್ಞನ ತ್ರಿಪದಿ, ತಿರುವಳ್ಳುವರ್ ದ್ವಿಪದಿ, ಕಬೀರನ ದೋಹೆ ಇತ್ಯಾದಿಗಳಂತೆ ಮೂರೇ ಸಾಲಿನ ಹಾಡುಗಳಿಂದ ಹಿಡಿದು ದೊಡ್ಡದೊಡ್ಡ ಕೀರ್ತನೆಗಳವರೆಗೂ ಈ ಸಂಗ್ರಹದಲ್ಲಿದೆ. ಎಲ್ಲಾ ಹಾಡುಗಳು ಅಕಾರಾದಿಯಲ್ಲಿ ಜೋಡಿಸಲ್ಪಟ್ಟು, ದಾಸರ ಅಂಕಿತ ನಾಮಗಳ ಪಟ್ಟಿಯನ್ನು ಒದಗಿಸಿಕೊಡುವ ಮೂಲಕ ಅತ್ಯಂತ ಸುಸಜ್ಜಿತವಾಗಿದೆ.

ಶತಶತಮಾನಗಳ ಕಾಲ ಭಕ್ತಜನ ಭಾವುಕರು, ಮುಗ್ಧ ಜಾನಪದ ಹೆಣ್ಣುಮಕ್ಕಳು ಮೌಖಿಕ ಪರಂಪರೆಯಲ್ಲಿ ಉಳಿಸಿಕೊಂಡು ಬಂದಿದ್ದು, ಲಿಖಿತ ಪಾಠಕ್ಕೆ ಬಂದಿರುವ ಈ ಹಾಡುಗಳನ್ನು ಶ್ರದ್ಧೆ, ಭಕ್ತಿ ಮತ್ತು ಪ್ರೀತಿಯಿಂದ ಸಂಪಾದಿಸಿರುವ ಡಾ. ಪಾರ್ಥಸಾರಥಿಯವರು ತಮ್ಮ ಸಂಪಾದಕರ ನುಡಿಯಲ್ಲಿ ಹೀಗೆ ಹೇಳುತ್ತಾರೆ.

“ದಾಸಸಾಹಿತ್ಯದ ಬಗ್ಗೆ ನನಗೆ ಒಲವು ಬಂದಿದ್ದು ಮನೆತನದ ಪ್ರಭಾವದಿಂದ. ಆದರೆ ಅದಕ್ಕೂ ಮಿಗಿಲಾಗಿ ಹರಿದಾಸರು ಶುದ್ಧ ಮನಸ್ಸಿನಿಂದ, ಸದಾಚಾರ ಸದ್ವಿಚಾರಗಳಿಂದ ಹಾಡುಗಳನ್ನು ರಚಿಸಿದರು ಎನ್ನುವ ಪ್ರಮುಖ ಕಾರಣದಿಂದ, ‘ಮಾನವ ಜನ್ಮ ದೊಡ್ಡದು’ ಎಂದು ಮಾನವೀಯ ಮೌಲ್ಯಗಳನ್ನು ಮೆರೆದ ದಾಸಸಾಹಿತ್ಯ, ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಿ, ಜನಮನವನ್ನು ಪಾವನ ಮಾಡಿತು, ಪಾಮರರನ್ನು ಪ್ರಾಜ್ಞರನ್ನಾಗಿ ಮಾಡಿತು.”

ನಿಜ, ಮಾನವನ ಬಹು ಲೌಕಿಕ ಬಲೆಯಿಂದ ಭಗವಂತನ ಮುಕ್ತ ಬಯಲಿಗೆ ಒಯ್ಯುವಂತಹ ಸಾತ್ವಿಕ ಧೋರಣೆಯ ಈ ಹರಿಭಕ್ತಿಯ ಹಾಡುಗಳು ಹಿಂದೂ ಧರ್ಮದ ಭಕ್ತಿ ಚಳವಳಿಯ ಧ್ವನಿಗಳೇ ಆಗಿವೆ. ಜಾತಿಮತಗಳ, ಉಚ್ಚನೀಚಗಳ, ಬಡವ ಬಲ್ಲಿದನೆಂದಿಲ್ಲದೇ ದಾಸನಾಗುವ ಮೂಲಕ ಇಹದಲ್ಲಿ ಉತ್ತಮ ಬಾಳ್ವೆ, ಪರದಲ್ಲಿ ಸದ್ಗತಿ ಎಂದು ಆಸ್ತಿಕರಿಗೆ ದಾರಿದೀಪವಾಗುತ್ತವೆ. ಆದರೆ ಹಿಂದೂ ಧರ್ಮದ ಇಂತಹ ವೈಶಾಲ್ಯದ ಪರಂಪರೆಗಳನ್ನು ಮರೆಮಾಚುತ್ತಾ ಹಿಂದುತ್ವವಾದಿಗಳು ಧರ್ಮವನ್ನು ರಾಜಕೀಯಗೊಳಿಸುತ್ತಾರೆ. ಇದೇ ಸಮಸ್ಯೆ. ಹಿಂದೂ ಧರ್ಮದ ಪಾವಿತ್ರ್ಯತೆ ಇರುವುದು ಹಿಂದುತ್ವವಾದದ ಕಳಂಕವನ್ನು ಹೋಗಲಾಡಿಸಿಕೊಳ್ಳುವುದರಲ್ಲಿ.

ಜಾತಿ ಶ್ರೇಷ್ಠತೆಯ ಗೀಳಿನಲ್ಲಿ ಅಸ್ಪೃಷ್ಯತೆ ಆಚರಣೆ ಮಾಡುವವರಿಗೆ ಭ್ರಮೆ ಹರಿಯುವಂತೆ ದಾಸರು, “ಹೊಲೆಯ ಪೆದ್ದಯ್ಯಗೆ ಒಲಿದವನ ಆಳಾದಿ, ಕುಲದಿ ಮಾದಿರ‍್ಹರಳಯ್ಯನ ಮನೆಲುಂಡಿ, ಡೊಂಬಿತಿಯ ಗುಡಿಸಿಲಲಿ ಸಂಭ್ರಮದಿ ಮಲಗಿದಿ, ಶಂಭೋ ಕುಣಿದೆಲೋ ಕುಂಬಾರಗೊಲಿದು” ಎಂದು ಹರಿಯನ್ನುದ್ದೇಶಿಸಿ ಹೇಳುತ್ತಾರೆ.

ಮುಸಲ್ಮಾನರನ್ನು ದ್ವೇಷಿಸುವುದೇ ಹಿಂದೂ ಒಬ್ಬನ ಸಾಮಾನ್ಯ ಮನಸ್ಥಿತಿಯಾಗಬೇಕು ಎನ್ನುವಂತೆ ದ್ವೇಷಬೀಜ ಬಿತ್ತುವವರು ದಾಸರು ತುರುಕರ ಬಗ್ಗೆ ಹೇಳಿರುವುದನ್ನು ಗಮನಿಸಬೇಕು.
“ಅಂತಹ ಮೋಹಿಪ ಕಂತುಗೆ ಮೊದಲೆ ಸಂತಿಯ (ಸುನ್ನತಿ) ಮಾಡಬೇಕಲ್ಲಾ, ಸಂತರು ಮಾಡುವ ಸಂತಿಯ ಮುಲ್ಲನ ಸ್ವಂತ ಕರಿಯ ಬೇಕಲ್ಲಾ” ಎಂದು ಕೋಸಿಗಿ ಸ್ವಾಮಿರಾಯಾಚಾರ್ಯರು ಮುಂದುವರಿಯುತ್ತಾ ತಮ್ಮ ಕೀರ್ತನೆಯಲ್ಲಿ ಹೇಳುತ್ತಾರೆ, “ಮನೋಶುದ್ಧೋಪಾಸನಲಕ್ಷಣ ಘನ ನಮಾಜವ ಮಾಡಬೇಕಲ್ಲಾ” “ಮೋರಮು (ಮೊಹರಂ) ಬರಲು ಸೇರಿದ ತಾಮಸ, ಸಾರಿಸಿ ಬಳಿಬೇಕಲ್ಲಾ, ಸಾರಸ್ವತ ಮನೋಚಾರುಮಸೀದಿಯ ನೀರ ಜ್ಞಾನದಿ ತೊಳಿಬೇಕಲ್ಲ.” ಹೀಗೆ ಮುಸಲ್ಮಾನರನ್ನು ತಮ್ಮ ‘ತುರಕರಾದರೀ’ ಕೀರ್ತನೆಯಲ್ಲಿ ನೇರ ಉಲ್ಲೇಖಿಸುತ್ತಾರೆ.

ಹಾಗೆ ಮೋಹನದಾಸರು “ತುರುಕರಿಲ್ಲದ ಊರೊಳು ಇರಬಾರದು, ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ, ತುರುಕರು ಕರೆದರೆ ಉಣಬಹುದು ಉಡಬಹುದು, ತುರುಕರಿಂದಲಿ ಜಗಕೆ ಪರಮ ಸೌಖ್ಯಾ” ಎಂದು ಬರೆದಿರುವುದನ್ನು ನೋಡಿ, ಇದೇನು ದಾಸರು ಹೀಗೆ ಮುಸಲ್ಮಾನರ ಬಗ್ಗೆ ಬರೆದಿದ್ದಾರೆ ಎಂದು ನನ್ನ ಸ್ನೇಹಿತರೊಬ್ಬರು ಗಮನ ಸೆಳೆದಿದ್ದರು. ಆದರೆ ಅದು ತುರು-ಕರು. ಹಸುವಿನ ಕರು. ಇನ್ನೂ ಕೆಲವು ಕಡೆ ಗೋಪಾಲಕರನ್ನು ತುರುಕಾರ ಎನ್ನುವುದೂ ಉಂಟು. ಕಿಟ್ಟೆಲ್ ನಿಘಂಟಿನಲ್ಲಿ ಇದರ ಬಗ್ಗೆ ಸ್ಪಷ್ಟತೆ ಇದೆ. ಹಿಂದೆ ಕನ್ನಡದಲ್ಲಿಯೇ ಎರಡು ಬಗೆಯ ರ-ಕಾರಗಳನ್ನು ಬಳಸುತ್ತಿದ್ದರು. ಮೊದಲನೆಯ ‘ರ’ ತುರುಕ ಎಂದರೆ ಟರ್ಕಿಯಿಂದ ಬಂದವನು, ಮುಸಲ್ಮಾನ, ಯವನ, ತುರುಷ್ಕ. ಇನ್ನೊಂದು ತುರುಕಾರದಲ್ಲಿ ಈಗ ಬಿಟ್ಟುಹೋಗಿರುವ ರ-ಕಾರದ ಬಳಕೆ. ಗೋಪಾಲ, ವಲ್ಲವ, ಗೋಮತ್; ಈ ಅರ್ಥದಲ್ಲಿ. ತುರು-ಕರ ಎಂದರೆ ಬಹುಶಃ ಕರು ಇರಬಹುದು.

ಹರಿದಾಸರ ಹತ್ತು ಸಾವಿರ ಹಾಡುಗಳು ಅಧ್ಯಯನಕ್ಕೂ, ಭಕ್ತಿಯ ಪಾರಾಯಣಕ್ಕೂ, ಸಾಹಿತ್ಯೋಪಾಸನೆಗೂ ದಕ್ಕುವುದು. ಭಕ್ತ ಮತ್ತು ಭಗವಂತನ ನಡುವಿನ ಮಾರ್ಗದರ್ಶಿಯಾಗಿ ತೆರೆದುಕೊಳ್ಳುವ ದಾಸ ಸಾಹಿತ್ಯವೂ ಕೂಡಾ ಶರಣರ ವಚನಗಳಂತೆ, ತತ್ವಪದಕಾರರ ರಚನೆಗಳಂತೆ ಕನ್ನಡದ ಸಾಹಿತ್ಯಕ ಮತ್ತು ಆಧ್ಯಾತ್ಮಿಕ ಕೊಡುಗೆ.
“ಮನವು ಬಿಲ್ಲನೆ ಮಾಡಿ | ತನುವು ಹೆದಿಯನೆ ಕಟ್ಟಿ | ಅನುಭವದ ಅಂಬಿನಲಿ | ಜನನ ಮರಣದ ಗುರಿಯ ಕೆಡಹಿದಾ | ಜ್ಞಾನಸಾಗರ ಗುರುನಾಥನೆಂದು | ಸ್ತುತಿಸಿದಾ ಮಹಿಪತಿಯು |”

ಸಂಪಾದಕ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ
ಪ್ರಕಟಣೆ: ಶ್ರೀ ಹರಿದಾಸ ಸಂಘ, ಬೆಂಗಳೂರು
ಪುಟಗಳು: ೧೮೮೬ ಬೆಲೆ: ರೂ. ೭೯೫/-
(೦೮೦-೨೫೬೧೬೩೨೮, ೯೪೪೮೫೫೨೩೨೮).


ಇದನ್ನೂ ಓದಿ: ನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...