Homeಅಂಕಣಗಳುಪುಟಕ್ಕಿಟ್ಟ ಪುಟಗಳುಹರಿದಾಸರ 10,000 ಹಾಡುಗಳ ಸಂಪಾದಕ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಹರಿದಾಸರ 10,000 ಹಾಡುಗಳ ಸಂಪಾದಕ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಮೋಹನದಾಸರು “ತುರುಕರಿಲ್ಲದ ಊರೊಳು ಇರಬಾರದು, ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ, ತುರುಕರು ಕರೆದರೆ ಉಣಬಹುದು ಉಡಬಹುದು, ತುರುಕರಿಂದಲಿ ಜಗಕೆ ಪರಮ ಸೌಖ್ಯಾ” ಎಂದು ಬರೆದಿದ್ದಾರೆ.

- Advertisement -
- Advertisement -

“ಕುಲಮದ ವೈಭವಮದ ವಿದ್ಯಾಮದಗಳ | ನುಳಿದು ಹರಿದಾಸರ ಮರೆಹೊಕ್ಕು ಸುಖಿಯಾಗು” ಎಂದು ವಾದಿರಾಜರು ಹೇಳಿದರೆ, “ಕುಲಕುಲ ಕುಲವೆನ್ನುತಿಹರು, ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ” ಎನ್ನುತ್ತಾ ಕನಕದಾಸರು “ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ | ಕುಲದ ನೆಲೆಯನೇನಾದರೂ ಬಲ್ಲಿರಾ?” ಎಂದು ಪ್ರಶ್ನಿಸುತ್ತಾರೆ. “ಧರ್ಮವೇ ಜಯವೆಂಬ ದಿವ್ಯ ಮಂತ್ರ” ಎನ್ನುವ ಪುರಂದರ ದಾಸರು “ವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕು, ದ್ವೇಷ ಮಾಡಿದವನ ಪೋಷಿಸಲು ಬೇಕು, ಪುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು” ಎಂದು ಹರಿಭಕ್ತಿಯ ಮೂಲಕ ನರಪ್ರೀತಿಯನ್ನು ಜಾಗೃತ ಮಾಡವರು. ‘ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯ ತೋರು, ಅಂಗಿಯನ್ನು ಕಿತ್ತುಕೊಂಡರೆ ಒಳ ಅಂಗಿಯನ್ನೂ ನೀಡು’ ಎನ್ನುವ ಕ್ರಿಸ್ತನ ಮಾರ್ದನಿಯಾಗುತ್ತಾರೆ. ‘ಅಶಾಂತಿಯನ್ನು ಶಾಂತಿಯಿಂದ, ದ್ವೇಷವನ್ನು ಪ್ರೀತಿಯಿಂದ ಗೆಲ್ಲು’ ಎನ್ನುವ ಬುದ್ಧನ ಧ್ವನಿಸುತ್ತಾರೆ. ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಸಂಪಾದನೆಯಲ್ಲಿ ಸಂಗ್ರಹವಾಗಿರುವ ಹರಿದಾಸರ ಹತ್ತುಸಾವಿರ ಹಾಡುಗಳು ಕರ್ನಾಟಕದ ಭಕ್ತಿಪರಂಪರೆಯ ಬಹು ಮುಖ್ಯ ಕೊಂಡಿಯಾಗಿರುವ ದಾಸ ಸಾಹಿತ್ಯದ ಅತ್ಯಪೂರ್ವವಾದ ದಾಖಲೆ.

‘ಹರಿ’ ಎಂಬ ವಿಶ್ವದ್ಚೇತನದ ಪ್ರತಿಮೆಗೆ ಶರಣಾಗುವ ಮೂಲಕ ದಾಸರು ಮಾನವ ಮನಸುಗಳ ಕಶ್ಮಲಗಳನ್ನು ಹೋಗಲಾಡಿಸಿ, ಸದ್ಭಕ್ತಿಯನ್ನು ಜಾಗೃತಗೊಳಿಸಿ, ಆ ಮೂಲಕ ಮುಕ್ತರಾಗಲು ತಮ್ಮ ಕೀರ್ತನೆಗಳಲ್ಲಿ ದಾರಿ ತೋರಿದರು. ಹರಿ ಎಂದರೆ ಎಲ್ಲೋ ಮೋಡಗಳಾಚೆಯ ಸರ್ವಾಧಿಕಾರಿಯೊಬ್ಬನಿಗೆ ದಾಸರಾಗಿರುವ ರೀತಿಯಲ್ಲ. ‘ದಾಸ’ ಎನ್ನುವ ಪದದಲ್ಲಿ ಗುಲಾಮಗಿರಿಯ ಧ್ವನಿಯಲ್ಲ. ಬಸವಾದಿ ಶರಣರ ‘ಶರಣ’ ಎನ್ನುವ ಪದದ ವಿನೀತ ಭಾವವೇ ಇದು. ತಲೆಯೆತ್ತುವ ಅಹಂಕಾರವನ್ನು ಮಣಿಸಿ ಸಂಪೂರ್ಣ ಶರಣಾಗತರಾಗುವ ಭಾವದಲ್ಲಿ ದಾಸನಾಗುವುದು. ಶಿಶು, ಸತಿ, ಜನನಿಜನಕ, ರಸಿಕ ಭ್ರಾತರ, ರಾಜ ಹೀಗೆ ವಿವಿಧ ಬಗೆಯ ಮೋಹಗಳು, ಅನ್ನಮದ, ಅರ್ಥಮದ, ಅಖಿಲ ವೈಭವದ ಮದ, ಪ್ರಾಯದ, ರೂಪದ, ಇನ್ನು ತನಗಿದಿರಿಲ್ಲವೆಂತೆAಬ ಮದಗಳೆಲ್ಲಾ ವಿವಿಧ ಬಗೆ ಮಾನಸಿಕ ಕಾಂಪ್ಲೆಕ್ಸ್ಗಳನ್ನು ಸೃಷ್ಟಿಸಿ, ಶುದ್ಧ ಮನಸ್ಸಿನವನಾಗದೇ “ಬಿನ್ನಹಕೆ ಬಾಯಿಲ್ಲವಯ್ಯಾ, ಅನಂತ ಅಪರಾಧ ಎನ್ನಲ್ಲಿ ಇರಲಾಗಿ” ಎನ್ನುತ್ತಾ ಪುರಂದರ ದಾಸರು ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತಾರೆ.

ದಾಸರಿಗೆ ಹರಿಯ ಮೇಲೆ ಕೋಪ ಬಂದರೆ ಸುಮ್ಮನೆ ಬಿಡುವವರಲ್ಲ, “ಯಾರು ಬದುಕಿದರಯ್ಯಾ ಹರಿ ನಿನ್ನ ನಂಬಿ, ತೋರು ಈ ಧರೆಯೊಳಗೆ ಒಬ್ಬರನೂ ಕಾಣೆ” ಎಂದು ಜಗಳವಾಡುತ್ತಾರೆ. ಹರಿಯನ್ನು ಕಾಡುತ್ತಾರೆ, ಬೇಡುತ್ತಾರೆ, ನಿನ್ನ ಹೊರತು ನನಗ್ಯಾರಿಲ್ಲವೋ ಎಂದು ಪ್ರೇಮದಿಂದ ಬಳಲುತ್ತಾರೆ. ಮಗುವಿನಂತೆ ಮಾಡಿ ಅವನ ತೂಗುತ್ತಾ, ಉಣಿಸುತ್ತಾ ತಮ್ಮಲ್ಲಿರುವ ವಾತ್ಸಲ್ಯವನ್ನು ಎಚ್ಚರಿಸಿಕೊಳ್ಳುತ್ತಾರೆ. ಅಚಲವಾದ ಶ್ರದ್ಧೆಯಿಂದ ಅವನ ಬಿಡದೇ ಕೊಂಡಾಡುತ್ತಾರೆ. ಆರಾಧಿಸುತ್ತಾರೆ, ಪೂಜಿಸುತ್ತಾರೆ, ಮುದ್ದಿಸುತ್ತಾರೆ; ಹೀಗೆ ಹರಿ ದಾಸರ ಹಲವು ಭಾವಗಳಿಗೆ ಗುರಿಯಾಗುತ್ತಾನೆ. “ನೀನ್ಯಾಕೋ, ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಎಂದು ಅವನನ್ನೇ ಛೇಡಿಸುವಷ್ಟು ಸಲುಗೆ.

“ಮಂಡೆ ಬೋಳಾದರೆ ಮನ ಬೋಳಾಯಿತೆ” ಎಂದು ಡಂಭಾಚಾರದ ಕಪಟತನಗಳನ್ನು ಪ್ರಶ್ನಿಸುತ್ತಾರೆ. ಸಮಾಜದ ಓರೆಕೋರೆಗಳನ್ನು ಗಮನಿಸುತ್ತಾರೆ, ತಿದ್ದುತ್ತಾರೆ. ಭಕ್ತಿ ವಿರಕ್ತಿಯ ಮನದಲ್ಲಿ ಧರಿಸಿಕೊಂಡು, “ಎನ್ನ ಹೃದಯ ಕಮಲದೊಳು ನಿಂದಿರೋ” ಹೃದಯದಲ್ಲಿ ಹರಿಯನ್ನು ಧರಿಸಿಕೊಂಡು ಶುದ್ಧ ಸಂಕಲ್ಪದ ಮನುಷ್ಯನಾಗಿ ಇಹದಲ್ಲಿಯೂ ಪರದಲ್ಲಿಯೂ ಸದ್ಗತಿಯನ್ನು ಕಾಣುವುದರ ದಾರಿಯಾಗಿ ಸಾವಿರಾರು ದಾಸರ ಪದಗಳು ಪುಟಪುಟಗಳಲ್ಲಿ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತವೆ.

ವ್ಯಾಸರಾಜರು, ವಾದಿರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು, ರಾಘವೇಂದ್ರಸ್ವಾಮಿಗಳೇ ಮೊದಲಾದ ದಾಸರು ನಮಗೆ ಸಾಮಾನ್ಯವಾಗಿ ತಮ್ಮ ಕೀರ್ತನೆಗಳ ಮೂಲಕ ಪರಿಚಿತರು. ಆದರೆ, ಇನ್ನೂ ನೂರಾರು ದಾಸರ ರಚನೆಗಳನ್ನು ಓದುವ ಭಾಗ್ಯ ಈ ಕೃತಿಯಿಂದ. “ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯ” ಎಂಬ ಆನಂದ.

ತತ್ವ, ಆಧ್ಯಾತ್ಮ, ಕುಂಡಲಿನೀ ತಂತ್ರದಿಂದ ಹಿಡಿದು, ಭಕ್ತಿಯ ಪರಮೋಚ್ಚ ಪ್ರಕಟಣೆಗಳನ್ನು ಹೊಂದಿರುವ ಎಲ್ಲಾ ಬಗೆಯ ಹಾಡುಗಳೂ ಇದರಲ್ಲಿವೆ. ಸಾಮಾನ್ಯವಾಗಿ ಸರ್ವಜ್ಞನ ತ್ರಿಪದಿ, ತಿರುವಳ್ಳುವರ್ ದ್ವಿಪದಿ, ಕಬೀರನ ದೋಹೆ ಇತ್ಯಾದಿಗಳಂತೆ ಮೂರೇ ಸಾಲಿನ ಹಾಡುಗಳಿಂದ ಹಿಡಿದು ದೊಡ್ಡದೊಡ್ಡ ಕೀರ್ತನೆಗಳವರೆಗೂ ಈ ಸಂಗ್ರಹದಲ್ಲಿದೆ. ಎಲ್ಲಾ ಹಾಡುಗಳು ಅಕಾರಾದಿಯಲ್ಲಿ ಜೋಡಿಸಲ್ಪಟ್ಟು, ದಾಸರ ಅಂಕಿತ ನಾಮಗಳ ಪಟ್ಟಿಯನ್ನು ಒದಗಿಸಿಕೊಡುವ ಮೂಲಕ ಅತ್ಯಂತ ಸುಸಜ್ಜಿತವಾಗಿದೆ.

ಶತಶತಮಾನಗಳ ಕಾಲ ಭಕ್ತಜನ ಭಾವುಕರು, ಮುಗ್ಧ ಜಾನಪದ ಹೆಣ್ಣುಮಕ್ಕಳು ಮೌಖಿಕ ಪರಂಪರೆಯಲ್ಲಿ ಉಳಿಸಿಕೊಂಡು ಬಂದಿದ್ದು, ಲಿಖಿತ ಪಾಠಕ್ಕೆ ಬಂದಿರುವ ಈ ಹಾಡುಗಳನ್ನು ಶ್ರದ್ಧೆ, ಭಕ್ತಿ ಮತ್ತು ಪ್ರೀತಿಯಿಂದ ಸಂಪಾದಿಸಿರುವ ಡಾ. ಪಾರ್ಥಸಾರಥಿಯವರು ತಮ್ಮ ಸಂಪಾದಕರ ನುಡಿಯಲ್ಲಿ ಹೀಗೆ ಹೇಳುತ್ತಾರೆ.

“ದಾಸಸಾಹಿತ್ಯದ ಬಗ್ಗೆ ನನಗೆ ಒಲವು ಬಂದಿದ್ದು ಮನೆತನದ ಪ್ರಭಾವದಿಂದ. ಆದರೆ ಅದಕ್ಕೂ ಮಿಗಿಲಾಗಿ ಹರಿದಾಸರು ಶುದ್ಧ ಮನಸ್ಸಿನಿಂದ, ಸದಾಚಾರ ಸದ್ವಿಚಾರಗಳಿಂದ ಹಾಡುಗಳನ್ನು ರಚಿಸಿದರು ಎನ್ನುವ ಪ್ರಮುಖ ಕಾರಣದಿಂದ, ‘ಮಾನವ ಜನ್ಮ ದೊಡ್ಡದು’ ಎಂದು ಮಾನವೀಯ ಮೌಲ್ಯಗಳನ್ನು ಮೆರೆದ ದಾಸಸಾಹಿತ್ಯ, ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಿ, ಜನಮನವನ್ನು ಪಾವನ ಮಾಡಿತು, ಪಾಮರರನ್ನು ಪ್ರಾಜ್ಞರನ್ನಾಗಿ ಮಾಡಿತು.”

ನಿಜ, ಮಾನವನ ಬಹು ಲೌಕಿಕ ಬಲೆಯಿಂದ ಭಗವಂತನ ಮುಕ್ತ ಬಯಲಿಗೆ ಒಯ್ಯುವಂತಹ ಸಾತ್ವಿಕ ಧೋರಣೆಯ ಈ ಹರಿಭಕ್ತಿಯ ಹಾಡುಗಳು ಹಿಂದೂ ಧರ್ಮದ ಭಕ್ತಿ ಚಳವಳಿಯ ಧ್ವನಿಗಳೇ ಆಗಿವೆ. ಜಾತಿಮತಗಳ, ಉಚ್ಚನೀಚಗಳ, ಬಡವ ಬಲ್ಲಿದನೆಂದಿಲ್ಲದೇ ದಾಸನಾಗುವ ಮೂಲಕ ಇಹದಲ್ಲಿ ಉತ್ತಮ ಬಾಳ್ವೆ, ಪರದಲ್ಲಿ ಸದ್ಗತಿ ಎಂದು ಆಸ್ತಿಕರಿಗೆ ದಾರಿದೀಪವಾಗುತ್ತವೆ. ಆದರೆ ಹಿಂದೂ ಧರ್ಮದ ಇಂತಹ ವೈಶಾಲ್ಯದ ಪರಂಪರೆಗಳನ್ನು ಮರೆಮಾಚುತ್ತಾ ಹಿಂದುತ್ವವಾದಿಗಳು ಧರ್ಮವನ್ನು ರಾಜಕೀಯಗೊಳಿಸುತ್ತಾರೆ. ಇದೇ ಸಮಸ್ಯೆ. ಹಿಂದೂ ಧರ್ಮದ ಪಾವಿತ್ರ್ಯತೆ ಇರುವುದು ಹಿಂದುತ್ವವಾದದ ಕಳಂಕವನ್ನು ಹೋಗಲಾಡಿಸಿಕೊಳ್ಳುವುದರಲ್ಲಿ.

ಜಾತಿ ಶ್ರೇಷ್ಠತೆಯ ಗೀಳಿನಲ್ಲಿ ಅಸ್ಪೃಷ್ಯತೆ ಆಚರಣೆ ಮಾಡುವವರಿಗೆ ಭ್ರಮೆ ಹರಿಯುವಂತೆ ದಾಸರು, “ಹೊಲೆಯ ಪೆದ್ದಯ್ಯಗೆ ಒಲಿದವನ ಆಳಾದಿ, ಕುಲದಿ ಮಾದಿರ‍್ಹರಳಯ್ಯನ ಮನೆಲುಂಡಿ, ಡೊಂಬಿತಿಯ ಗುಡಿಸಿಲಲಿ ಸಂಭ್ರಮದಿ ಮಲಗಿದಿ, ಶಂಭೋ ಕುಣಿದೆಲೋ ಕುಂಬಾರಗೊಲಿದು” ಎಂದು ಹರಿಯನ್ನುದ್ದೇಶಿಸಿ ಹೇಳುತ್ತಾರೆ.

ಮುಸಲ್ಮಾನರನ್ನು ದ್ವೇಷಿಸುವುದೇ ಹಿಂದೂ ಒಬ್ಬನ ಸಾಮಾನ್ಯ ಮನಸ್ಥಿತಿಯಾಗಬೇಕು ಎನ್ನುವಂತೆ ದ್ವೇಷಬೀಜ ಬಿತ್ತುವವರು ದಾಸರು ತುರುಕರ ಬಗ್ಗೆ ಹೇಳಿರುವುದನ್ನು ಗಮನಿಸಬೇಕು.
“ಅಂತಹ ಮೋಹಿಪ ಕಂತುಗೆ ಮೊದಲೆ ಸಂತಿಯ (ಸುನ್ನತಿ) ಮಾಡಬೇಕಲ್ಲಾ, ಸಂತರು ಮಾಡುವ ಸಂತಿಯ ಮುಲ್ಲನ ಸ್ವಂತ ಕರಿಯ ಬೇಕಲ್ಲಾ” ಎಂದು ಕೋಸಿಗಿ ಸ್ವಾಮಿರಾಯಾಚಾರ್ಯರು ಮುಂದುವರಿಯುತ್ತಾ ತಮ್ಮ ಕೀರ್ತನೆಯಲ್ಲಿ ಹೇಳುತ್ತಾರೆ, “ಮನೋಶುದ್ಧೋಪಾಸನಲಕ್ಷಣ ಘನ ನಮಾಜವ ಮಾಡಬೇಕಲ್ಲಾ” “ಮೋರಮು (ಮೊಹರಂ) ಬರಲು ಸೇರಿದ ತಾಮಸ, ಸಾರಿಸಿ ಬಳಿಬೇಕಲ್ಲಾ, ಸಾರಸ್ವತ ಮನೋಚಾರುಮಸೀದಿಯ ನೀರ ಜ್ಞಾನದಿ ತೊಳಿಬೇಕಲ್ಲ.” ಹೀಗೆ ಮುಸಲ್ಮಾನರನ್ನು ತಮ್ಮ ‘ತುರಕರಾದರೀ’ ಕೀರ್ತನೆಯಲ್ಲಿ ನೇರ ಉಲ್ಲೇಖಿಸುತ್ತಾರೆ.

ಹಾಗೆ ಮೋಹನದಾಸರು “ತುರುಕರಿಲ್ಲದ ಊರೊಳು ಇರಬಾರದು, ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ, ತುರುಕರು ಕರೆದರೆ ಉಣಬಹುದು ಉಡಬಹುದು, ತುರುಕರಿಂದಲಿ ಜಗಕೆ ಪರಮ ಸೌಖ್ಯಾ” ಎಂದು ಬರೆದಿರುವುದನ್ನು ನೋಡಿ, ಇದೇನು ದಾಸರು ಹೀಗೆ ಮುಸಲ್ಮಾನರ ಬಗ್ಗೆ ಬರೆದಿದ್ದಾರೆ ಎಂದು ನನ್ನ ಸ್ನೇಹಿತರೊಬ್ಬರು ಗಮನ ಸೆಳೆದಿದ್ದರು. ಆದರೆ ಅದು ತುರು-ಕರು. ಹಸುವಿನ ಕರು. ಇನ್ನೂ ಕೆಲವು ಕಡೆ ಗೋಪಾಲಕರನ್ನು ತುರುಕಾರ ಎನ್ನುವುದೂ ಉಂಟು. ಕಿಟ್ಟೆಲ್ ನಿಘಂಟಿನಲ್ಲಿ ಇದರ ಬಗ್ಗೆ ಸ್ಪಷ್ಟತೆ ಇದೆ. ಹಿಂದೆ ಕನ್ನಡದಲ್ಲಿಯೇ ಎರಡು ಬಗೆಯ ರ-ಕಾರಗಳನ್ನು ಬಳಸುತ್ತಿದ್ದರು. ಮೊದಲನೆಯ ‘ರ’ ತುರುಕ ಎಂದರೆ ಟರ್ಕಿಯಿಂದ ಬಂದವನು, ಮುಸಲ್ಮಾನ, ಯವನ, ತುರುಷ್ಕ. ಇನ್ನೊಂದು ತುರುಕಾರದಲ್ಲಿ ಈಗ ಬಿಟ್ಟುಹೋಗಿರುವ ರ-ಕಾರದ ಬಳಕೆ. ಗೋಪಾಲ, ವಲ್ಲವ, ಗೋಮತ್; ಈ ಅರ್ಥದಲ್ಲಿ. ತುರು-ಕರ ಎಂದರೆ ಬಹುಶಃ ಕರು ಇರಬಹುದು.

ಹರಿದಾಸರ ಹತ್ತು ಸಾವಿರ ಹಾಡುಗಳು ಅಧ್ಯಯನಕ್ಕೂ, ಭಕ್ತಿಯ ಪಾರಾಯಣಕ್ಕೂ, ಸಾಹಿತ್ಯೋಪಾಸನೆಗೂ ದಕ್ಕುವುದು. ಭಕ್ತ ಮತ್ತು ಭಗವಂತನ ನಡುವಿನ ಮಾರ್ಗದರ್ಶಿಯಾಗಿ ತೆರೆದುಕೊಳ್ಳುವ ದಾಸ ಸಾಹಿತ್ಯವೂ ಕೂಡಾ ಶರಣರ ವಚನಗಳಂತೆ, ತತ್ವಪದಕಾರರ ರಚನೆಗಳಂತೆ ಕನ್ನಡದ ಸಾಹಿತ್ಯಕ ಮತ್ತು ಆಧ್ಯಾತ್ಮಿಕ ಕೊಡುಗೆ.
“ಮನವು ಬಿಲ್ಲನೆ ಮಾಡಿ | ತನುವು ಹೆದಿಯನೆ ಕಟ್ಟಿ | ಅನುಭವದ ಅಂಬಿನಲಿ | ಜನನ ಮರಣದ ಗುರಿಯ ಕೆಡಹಿದಾ | ಜ್ಞಾನಸಾಗರ ಗುರುನಾಥನೆಂದು | ಸ್ತುತಿಸಿದಾ ಮಹಿಪತಿಯು |”

ಸಂಪಾದಕ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ
ಪ್ರಕಟಣೆ: ಶ್ರೀ ಹರಿದಾಸ ಸಂಘ, ಬೆಂಗಳೂರು
ಪುಟಗಳು: ೧೮೮೬ ಬೆಲೆ: ರೂ. ೭೯೫/-
(೦೮೦-೨೫೬೧೬೩೨೮, ೯೪೪೮೫೫೨೩೨೮).


ಇದನ್ನೂ ಓದಿ: ನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...