ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಾಠವನ್ನು 10ನೇ ತರಗತಿ ಪಠ್ಯದಿಂದ ಕೈ ಬಿಟ್ಟು ಸ್ವಾತಂತ್ರ್ಯ ಚಳುವಳಿಯಿಂದ ದೂರವಿದ್ದ ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ. ಹೆಡಗೇವಾರ್ ಅವರ ಭಾಷಣವನ್ನು ಸೇರಿಸಿರುವುದು, ‘ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಮಾಡಿದ ದೊಡ್ಡ ಅವಮಾನ’ ಎಂದು ಭಾರತ ವಿದ್ಯಾರ್ಥಿ ಪರಿಷತ್ (ಎಸ್ಎಫ್ಐ) ರಾಜ್ಯ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ಬಿಜಿಪಿ ಸರ್ಕಾರ ಸಂಘಪರಿವಾರದ ಸಂಸ್ಥಾಪಕ ಹೆಡಗೇವಾರ್ ಭಾಷಣ ಹಾಗೂ ಮತಾಂಧತೆ, ಮೌಡ್ಯ , ಲಿಂಗ ತಾರತಮ್ಯ ಬಿತ್ತುವ ಪಠ್ಯಗಳನ್ನು ಸೇರ್ಪಡೆ ಮಾಡಿ ನಾಡಿನ ಮಕ್ಕಳು ಓದುವ ಪಠ್ಯ ಪುಸ್ತಕಗಳ ಕೇಸರೀಕರಣಕ್ಕೆ ಮುಂದಾಗಿದೆ ಎಂದು ಎಸ್ಎಫಐ ಆರೋಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಆರೆಸ್ಸೆಸ್ ಬಿಜೆಪಿಯ ಸೈದ್ದಾಂತಿಕ ನಾಯಕ ವಿ.ಡಿ ಯ. ಸಾವರ್ಕರ್ ಸ್ವಾತಂತ್ಯ ಹೋರಾಟದ ವೇಳೆ ಬ್ರಿಟಿಷರಿಗೆ ಕ್ಷಮಾಪನ ಪತ್ರ ಬರೆದು ಭಾರತದ ಸ್ವಾತಂತ್ಯ ಹೋರಾಟಕ್ಕೆ ದ್ರೋಹ ಬಗೆದಿದ್ದರು. ಈಗ ಈ ಸಾವರ್ಕರ್ ಸಂತತಿಯ ಬಿಜೆಪಿ ಸರ್ಕಾರ ಬ್ರಿಟಿಷರ ವಿರುದ್ಧ ರಾಜಿರಹಿತವಾಗಿ ಹೋರಾಡಿ 23 ವರ್ಷಕ್ಕೆ ನೇಣುಗಂಬಕ್ಕೇರಿದ ಅಪ್ಪಟ ದೇಶಪ್ರೇಮಿ ಭಗತ್ ಸಿಂಗ್ ಪಠ್ಯವನ್ನು ತೆಗೆದು ಹಾಕಿ ಮತ್ತೋಮ್ಮೆ ಬ್ರಿಟಿಷರ ಗುಲಾಮರು ತಾವು ಎಂಬುದನ್ನು ಬಿಜೆಪಿ ಸಾಬೀತುಪಡಿಸಿದೆ” ಎಂದು ಎಸ್ಎಫ್ಐ ಹೇಳಿದೆ.
ಇದನ್ನೂ ಓದಿ: ‘ಪಠ್ಯಪುಸ್ತಕಗಳ ಬ್ರಾಹ್ಮಣೀಕರಣ’ ವಿರುದ್ಧ ‘ಮುಂದಿನ ನಡೆ ಬಗ್ಗೆ’ ಶನಿವಾರ ಬೆಂಗಳೂರಿನಲ್ಲಿ ವಿದ್ಯಾರ್ಥಿ ಸಂಘಟನೆಗಳ ಸಭೆ
ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದು ಕರೆಯಲ್ಪಡುವ ರಾಜ್ಯದ ಗೌರಿಬಿದನೂರು ತಾಲ್ಲೂಕಿನಲ್ಲಿರುವ ವಿದುರಾಶ್ವತ್ಥ ಸ್ವಾತಂತ್ರ್ಯ ಹೋರಾಟಗಾರರ ಹುತಾತ್ಮ ಸ್ಮಾರಕದ ಪೋಟೋ ಗ್ಯಾಲರಿಯ ಮೇಲೆ ಬಜರಂಗದಳ, ಆರೆಸ್ಸೆಸ್ ಕಾರ್ಯಕರ್ತರು ದಾಳಿ ಮಾಡಿ ಸ್ವಾತಂತ್ರ್ಯದ ಚರಿತ್ರೆಯನ್ನು ನಾಶಗೊಳಿಸುವ ದೇಶದ್ರೋಹದ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿರುವ ಎಸ್ಎಫ್ಐ ಘಟನೆಯನ್ನು ಖಂಡಿಸಿದೆ.
“2022-23ರ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಎಂಬ ಭಾಷಣದಲ್ಲಿ ಆರೆಸ್ಸೆಸ್ ಶಾಖೆಯ ಕಾರ್ಯವಿಧಾನ, ಭಗವಾಧ್ವಜ ಗೌರವಿಸಬೇಕು ಎಂದೆಲ್ಲಾ ಹೇಳಲಾಗಿದೆ. ಇದು ರಾಷ್ಟ್ರ ಧ್ವಜ ಮತ್ತು ಸಂವಿಧಾನಕ್ಕೆ ವಿರುದ್ದವಾದದ್ದು. ಇತ್ತೀಚೆಗೆ ಬಿಜೆಪಿ ಈಶ್ವರಪ್ಪ ಹೇಳಿದ ಮಾತಿನಂತೆ ಬಿಜೆಪಿ ಕೇಸರಿ ಧ್ವಜವೇ ದೇಶದ ಧ್ವಜ ಎಂದು ಬಿಂಬಿಸುವ ರೀತಿಯಿದೆ” ಎಂದು ಎಸ್ಎಫ್ಐ ಹೇಳಿದೆ.
ದೇಶಕ್ಕೆ ಆದರ್ಶರಾದ ಭಗತ್ ಸಿಂಗ್, ಮಹಾತ್ಮ ಗಾಂಧಿ, ಅಂಬೇಡ್ಕರ್, ಬಸವಣ್ಣ, ನಾರಾಯಣಗುರು, ಪೆರಿಯಾರ್, ಕುವೆಂಪು ಮುಂತಾದವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಓದದಂತೆ ಮಾಡುವ ಹುನ್ನಾರ ನಡೆದಿದ್ದು, ಇದು ದೇಶದ ಸಮಗ್ರತೆ, ಐಕ್ಯತೆಗೆ ದೊಡ್ಡ ಅಪಾಯಕಾರಿ ಎಂದು ಎಸ್ಎಫ್ಐ ಎಚ್ಚರಿಸಿದೆ.
ಇದನ್ನೂ ಓದಿ: ‘ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು’: ನೂತನ ಪಠ್ಯದಲ್ಲಿ ಹೆಣ್ಣನ್ನು ಕೀಳಾಗಿ ಬಿಂಬಿಸಿರುವ ಬನ್ನಂಜೆ ಗೋವಿಂದಾಚಾರ್ಯ
ನೂತನ ಶಿಕ್ಷಣ ನೀತಿಯ ಗುರಿಯೇ ಶಿಕ್ಷಣದ ಕೋಮುವಾದೀಕರಣ ಆಗಿರುವುದರಿಂದ ಎನ್ಇಪಿ ಜಾರಿ ಅಂದರೆ ರಾಜ್ಯದ ವಿದ್ಯಾರ್ಥಿಗಳು ಓದುವ ಪಠ್ಯಪುಸ್ತಕಗಳಲ್ಲಿ ಬಿಜೆಪಿ ಆರೆಸ್ಸೆಸ್ ಕೋಮುವಾದಿ ವಿಚಾರಗಳನ್ನು ತುಂಬುವುದಾಗಿದೆ ಎಂದು ಎಸ್ಎಫ್ಐ ಹೇಳಿದೆ.
ಹೆಡ್ಗೆವಾರ್ ಅವರ ‘ಯಾರಾಗಬೇಕು ಆದರ್ಶ ಪುರುಷ’ ಭಾಷಣವು ಸಂಘ ಪರಿವಾರಕ್ಕೆ ಆದರ್ಶ ಎನಿಸಬಹುದೇ ಹೊರತು ಈ ನಾಡಿನ ವಿದ್ಯಾರ್ಥಿಗಳಿಗಲ್ಲಾ ಎಂದು ಎಸ್ಎಫ್ಐ ಹೇಳಿದ್ದು, ತಕ್ಷಣವೇ ಪಠ್ಯವನ್ನು ಮೊದಲಿನಂತೆ ಯಥಾವತ್ತಾಗಿ ಜಾರಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.