Homeಮುಖಪುಟಅಭಿವೃದ್ಧಿಯಲ್ಲಿ ಮುಂದಿರುವ ಕರ್ನಾಟಕಕ್ಕೇಕೆ ಯುಪಿ ಮಾಡೆಲ್ ಎಂಬ ಟೊಳ್ಳು ಮಾದರಿ?

ಅಭಿವೃದ್ಧಿಯಲ್ಲಿ ಮುಂದಿರುವ ಕರ್ನಾಟಕಕ್ಕೇಕೆ ಯುಪಿ ಮಾಡೆಲ್ ಎಂಬ ಟೊಳ್ಳು ಮಾದರಿ?

- Advertisement -
- Advertisement -

ಒಂದು ಸನ್ನಿವೇಶ ಕಲ್ಪಿಸಿಕೊಳ್ಳಿ. ನಿಮ್ಮ ಮನೆಯ ಮಗು ಶಾಲೆಯ ಕಲಿಕೆ ಮತ್ತಿತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುತ್ತದೆ. ಒಳ್ಳೆಯ ಗ್ರೇಡ್ ಗಳಿಸಿರುತ್ತಾನೆ/ಳೆ. ಶಿಸ್ತಿನಲ್ಲಿ, ನಡವಳಿಕೆಯಲ್ಲಿ ಶಹಬ್ಬಾಸ್ ಎನಿಸಿಕೊಂಡಿರುತ್ತಾನೆ/ಳೆ ಅಂದಿಟ್ಟುಕೊಳ್ಳಿ. ಹೀಗಿದ್ದಾಗ ಆ ಶಾಲೆಯ ಮಾಸ್ತರನೊಬ್ಬ ಬಂದು, ಅದೇ ತರಗತಿಯ ಫೇಲಾಗಿರುವ, ಪುಂಡಾಟಿಕೆಯಲ್ಲಿ ತೊಡಗಿರುವ ಒಬ್ಬ ವಿದ್ಯಾರ್ಥಿಯನ್ನು ತೋರಿಸಿ ’ಇನ್ನು ಮುಂದೆ ನಿಮ್ಮ ಮಗನಿಗೆ ಈ ಫೇಲಾದ ವಿದ್ಯಾರ್ಥಿಯೇ ಮಾದರಿ, ಈ ಶಾಲೆಯಲ್ಲಿ ಆ ಫೇಲಾದ ಪುಂಡಾಟಿಕೆಯ ಹುಡುಗನ ಮಾದರಿಯನ್ನೇ ಜಾರಿಗೆ ತರುತ್ತೇವೆ’ ಅಂತ ಘೋಷಿಸಿದರೆ ನಿಮಗೆ ಹೇಗನ್ನಿಸುತ್ತದೆ? ಆ ಮಾಸ್ತರನ ದುಷ್ಟ ವಿಚಾರದ ಬಗ್ಗೆ ನಿಮಗೆ ಎಲ್ಲಿಲ್ಲದ ಕೋಪ ಬಂದು ಆ ತಲೆಕೆಟ್ಟ ಮಾಸ್ತರನನ್ನು ತರಾಟೆಗೆ ತೆಗೆದುಕೊಳ್ಳಬೇಕು ಅನಿಸುತ್ತದೆ ಅಲ್ಲವೆ?

ಹೌದು, ಇದು ಅತ್ಯಂತ ಸಹಜವಾದ ಪ್ರತಿಕ್ರಿಯೆ

ಈಗ ನಮ್ಮ ಹೆಮ್ಮೆಯ ಕರ್ನಾಟಕದ ವಿಷಯಕ್ಕೆ ಬರೋಣ. ದೇಶದ ಹಲವು ರಾಜ್ಯಗಳಿಗಿಂತಲೂ ನಮ್ಮ ನಾಡು ಹಲವು ಅಂಶಗಳಲ್ಲಿ ಮುಂದಿದೆ. ಶಿಕ್ಷಣದ ವಿಷಯದಲ್ಲಿ, ಆರೋಗ್ಯದ ವಿಷಯದಲ್ಲಿ, ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ, ಉದ್ಯೋಗ ಸೃಷ್ಟಿಯ ವಿಷಯದಲ್ಲಿ ಮುಂಚೂಣಿ ಸಾಲಿನಲ್ಲಿದೆ. ಅಷ್ಟೇ ಏಕೆ? ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ, ಮಹಿಳೆಯರ ಸುರಕ್ಷತೆ ವಿಚಾರದಲ್ಲಿ, ಸಾಮಾಜಿಕ ಸಾಮರಸ್ಯದ ವಿಷಯದಲ್ಲಿ ಉತ್ತರದ ಎಷ್ಟೋ ರಾಜ್ಯಗಳಿಗಿಂತ ನಮ್ಮ ನಾಡು ಮುಂದಿದೆ ಎಂಬುದು ನಮಗೆ ತೃಪ್ತಿದಾಯಕ ವಿಚಾರ. ಸರ್ವಾಂಗೀಣವಾಗಿ ಇನ್ನೂ ಅಭಿವೃದ್ಧಿಯಾಗಬೇಕು ಎನ್ನುವ ವಿಚಾರ ಬೇರೆ.

ಆದರೆ ನಮ್ಮ ದುರಾದೃಷ್ಟ ದುಷ್ಟ ರಾಜಕಾರಣದ ರೂಪದಲ್ಲಿ ಬಂದೆರಗಿದೆ. ಅತ್ಯಂತ ಕೆಟ್ಟ ಮಾದರಿಗಳನ್ನು ತಂದು ಮುಂಚೂಣಿಯಲ್ಲಿರುವ ನಮ್ಮ ಮೇಲೆ ಹೇರುವ ಕುಟಿಲ ರಾಜಕಾರಣ ನಡೀತಾ ಇದೆ. ಕರ್ನಾಟಕದ ಸಿಎಂ ಬೊಮ್ಮಾಯಿ ಆದಿಯಾಗಿ ಬಿಜೆಪಿಯ ಹಲವು ನಾಯಕರು ಅತ್ಯಂತ ಹಿಂದುಳಿದ, ಗೂಂಡಾಗಿರಿ, ನಕಲಿ ಎನ್‌ಕೌಂಟರ್, ಪುಂಡಾಟಿಕೆಗಳಿಗೆ ಕುಖ್ಯಾತವಾದ ಉತ್ತರಪ್ರದೇಶದ ಮಾದರಿಯನ್ನು ಕರ್ನಾಟಕದಲ್ಲಿ ಅಳವಡಿಸುತ್ತೇವೆ ಎಂದು ಬಹಿರಂಗವಾಗಿ ಮಾತಾಡುತ್ತಿದ್ದಾರೆ. ಇದು ಪ್ರಗತಿಯ ಹಾದಿಯಲ್ಲಿರುವ ಕರ್ನಾಟಕದ ಆರು ಕೋಟಿ ಜನರಿಗೆ ಮಾಡಿದ ಘೋರ ಅವಮಾನ. ಮೇಲೆ ಹೇಳಿದಂತೆ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗೆ ಪೇಲಾದ ವಿದ್ಯಾರ್ಥಿಯನ್ನು ಮಾದರಿ ಮಾಡಿದಂತೆ.

ಉತ್ತರಪ್ರದೇಶದ ಕೆಲವು ವಾಸ್ತವಗಳನ್ನು ನೋಡೋಣ

2020ರ ಜುಲೈನಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದ ಒಂದು ಪ್ರಕರಣ ಉತ್ತರಪ್ರದೇಶದಲ್ಲಿ ನಡೆಯಿತು. ವಿಕಾಸ್ ದುಬೆ ಎಂಬ ಲಕ್ನೋ ಮೂಲದ ಗ್ಯಾಂಗ್ಸ್ಟರ್ ಒಬ್ಬ ತನ್ನನ್ನು ವಿಚಾರಣೆ ಮಾಡಲು ಹೋದ ಎಂಟು ಜನ ಪೊಲೀಸರನ್ನು ಹಾಡಹಗಲು ಗುಂಡಿಟ್ಟು ಕೊಂದಿದ್ದ. ಈ ಗ್ಯಾಂಗ್ಸ್ಟರ್ ಮಾಮೂಲಿ ಆಸಾಮಿ ಅಲ್ಲ, ಅಲ್ಲಿನ ಹಲವು ಬಿಜೆಪಿ ನಾಯಕರೊಂದಿಗೆ ಸಖ್ಯದಲ್ಲಿದ್ದವನು. ಆತನ ಮೇಲೆ ಹತ್ತಾರು ಕೊಲೆ, ಸುಲಿಗೆ ಕೇಸುಗಳಿದ್ದವು. ಆತ ಅರೆಸ್ಟ್ ಆದರೂ ಕೂಡ ಶೀಘ್ರದಲ್ಲೇ ಜಾಮೀನು ಸಿಕ್ಕಿ ಹೊರಬರುತ್ತಿದ್ದ. ಹೀಗೆ ಆತನನ್ನು ಬೆಳೆಸಿದ ಪರಿಣಾಮವೇ ಪೊಲೀಸರ ಮಾರಣಹೋಮ. ಇಡೀ ದೇಶ ಈ ಘೋರ ಘಟನೆಯನ್ನು ಖಂಡಿಸಿತು. ಉತ್ತರಪ್ರದೇಶದ ಸರ್ಕಾರ ಜನರ ದೃಷ್ಟಿಯಲ್ಲಿ ಕಟಕಟೆಯಲ್ಲಿ ನಿಂತಿತ್ತು. ಅನಿವಾರ್ಯವಾಗಿ ವಿಕಾಸ್ ದುಬೆಗೆ ಶರಣಾಗುವಂತೆ ಸೂಚಿಸಲಾಯಿತು. ತನ್ನನ್ನು ಬೇಕೆಂದಾಗ ಬಳಸಿಕೊಂಡು ಬೇಡವೆಂದಾಗ ಶರಣಾಗು ಎನ್ನುತ್ತಿರುವ ರಾಜಕಾರಣದ ವಿರುದ್ಧ ದುಬೆ ತಿರುಗಿಬಿದ್ದ. ಆತ ಬಾಯಿಬಿಟ್ಟರೆ ಯಾರೆಲ್ಲರ ಬಂಡವಾಳ ಹೊರಬೀಳುತ್ತಿತ್ತೋ ದೇವರೇ ಬಲ್ಲ. ಕೊನೆಗೆ ಆತನನ್ನು ಎನ್ಕೌಂಟರ್‌ನಲ್ಲಿ ಕೊಲ್ಲಲಾಯ್ತು. ಇದು ಯಾವುದೋ ಓಬಿರಾಯನ ಕಾಲದ ಕತೆಯಲ್ಲ; ಕೇವಲ ಎರಡು ಮೂರು ವರ್ಷಗಳ ಹಿಂದಿನ ಸತ್ಯ ಘಟನೆ.

ವಿಕಾಸ್ ದುಬೆ

ಉತ್ತರಪ್ರದೇಶದಲ್ಲಿ ಉನ್ನಾವೊ ಎಂಬುದೊಂದು ಪಟ್ಟಣವಿದೆ. ಅದು ಜಿಲ್ಲಾ ಕೇಂದ್ರವೂ ಹೌದು. ಉನ್ನಾವೋ ಕ್ಷೇತ್ರಕ್ಕೆ ಮೂರು ಬಾರಿ ಶಾಸಕನಾಗಿದ್ದ ಆಸಾಮಿ ಕುಲದೀಪ್ ಸಿಂಗ್ ಸೆಂಗರ್ ಅಂತ. ಬಿಜೆಪಿ ಪಕ್ಷದವನೇ. ಮೇಲಾಗಿ ಸಿಎಂ ಯೋಗಿಯ ಠಾಕೂರ್ ಜಾತಿಯ ಬಂಧುಬಾಂಧವ ಬೇರೆ. 2017ರಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ 16 ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಈತನ ಮೇಲೆ ಬಂತು. ಆ ಅಮಾಯಕ ಹುಡುಗಿ ಮತ್ತು ಮನೆಯವರು ಎಷ್ಟೇ ಪ್ರಯತ್ನಿಸಿದರೂ ಆತನ ಮೇಲೆ ಎಫ್‌ಐಆರ್ ದಾಖಲಾಗಲೇ ಇಲ್ಲ. ನಾನಾ ಕಚೇರಿಗಳಿಗೆ, ಉನ್ನತಾಧಿಕಾರಿಗಳ ಬಾಗಿಲಿಗೆ ಅಲೆದರೂ ಮೂರು ಕಾಸಿನ ಪ್ರಯೋಜನ ಆಗಲಿಲ್ಲ. ಕೊನೆಗೆ ಹತಾಶಗೊಂಡ ಯುವತಿ ಸಿಎಂ ಮನೆ ಎದುರು ಬೆಂಕಿ ಹಚ್ಚಿಕೊಂಡು ಅತ್ಮಾಹುತಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾದಳು. ಇದು ಇಡೀ ದೇಶದ ಗಮನ ಸೆಳೆಯಿತು. ಅಂತೂಇಂತೂ ಎಫ್‌ಐಆರ್ ದಾಖಲಾಯ್ತು. ಆದರೆ ತನಿಖೆ? ಉಹೂಂ ಅಂಥಾ ಯಾವುದೇ ಪ್ರಗತಿಯಾಗಲಿಲ್ಲ.

ಈ ಕೇಸು ವಿಚಾರಣೆಯ ನೆಪದಲ್ಲಿ ಕುಂಟುತ್ತಿರುವಾಗಲೇ ಸಂತ್ರಸ್ತೆಗೆ ಸಹಾಯ ಮಾಡಿದ ಆಕೆಯ ಚಿಕ್ಕಪ್ಪ ಲಾಕಪ್‌ನಲ್ಲಿ ಶವವಾದ. ಆತನ ಬಂಧುಗಳ ಕೊಲೆಯಾಯಿತು. ಅಷ್ಟೇ ಏಕೆ? ಇವರ ಸಹಾಯಕ್ಕೆ ನಿಂತಿದ್ದ ವಕೀಲರ ಕಾರು ಭೀಕರ ಅಪಘಾತಕ್ಕೆ ತುತ್ತಾಯಿತು. ವಕೀಲ ತೀವ್ರವಾಗಿ ಗಾಯಗೊಂಡರು. ಇದೆಲ್ಲಾ ಏನೇ ನಡೆದರೂ ಉತ್ತರಪ್ರದೇಶದ ಪೊಲೀಸರು ಜಪ್ಪೆನ್ನಲಿಲ್ಲ. ಕಾರಣ ಆತ ಬಿಜೆಪಿ ಎಂಎಲ್‌ಎ, ಮೇಲಾಗಿ ಸಿಎಂ ಯೋಗಿಯ ಜಾತಿ ಬಂಧು. ಅಲ್ಲಿ ಠಾಕೂರ್‌ಗಳದ್ದೇ ಕಾರುಬಾರು. ಕೊನೆಗೆ ಈ ಪ್ರಕರಣ ಸುಪ್ರೀಂಕೋರ್ಟ್ ತಲುಪಿತು. ಸುಪ್ರೀಂ ಸೂಚನೆಯ ಮೇರೆಗೆ ಆತನ ಬಂಧನವಾಯ್ತು. ಅಂತಿಮವಾಗಿ ಅಲಹಾಬಾದ್ ಹೈಕೋರ್ಟ್ ಈ ಪಾತಕಿಯನ್ನು ಅಪರಾಧಿ ಎಂದು ಘೋಷಿಸಿ ಈಗ ಜೈಲಿಗಟ್ಟಿದೆ. ಈತನನ್ನು ಇನ್ನು ಕಾಪಾಡೋದು ಸಾಧ್ಯವಿಲ್ಲ; ಆತ ಜೈಲಿಗೆ ಹೋಗೋದು ಗ್ಯಾರಂಟಿ ಅನ್ನೋದು ಖಚಿತವಾಗುತ್ತಿದ್ದಂತೆ ಅಲ್ಲಿನ ಬಿಜೆಪಿ ಆತನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಹಾಲಿ ಈತ ಜೈಲಿನಲ್ಲಿದ್ದಾನೆ.

ಕುಲದೀಪ್ ಸಿಂಗ್ ಸೆಂಗರ್

ಇಡೀ ದೇಶ ತಲೆತಗ್ಗಿಸಿದ ಹತ್ರಾಸ್ ಪ್ರಕರಣವನ್ನೇ ನೋಡಿ. ಹತ್ರಾಸ್ ಜಿಲ್ಲೆಯ ಒಂದು ಹಳ್ಳಿಯಲ್ಲಿ 19 ವರ್ಷದ ದಲಿತ ಯುವತಿಯೊಬ್ಬಳು ತಮ್ಮ ಹೊಲದ ಕೆಲಸದಲ್ಲಿ ತೊಡಗಿದ್ದಾಗ ನಾಲ್ಕು ಮಂದಿ ಕಾಮುಕರ ಗುಂಪು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿತು. ಪ್ರತಿರೋಧ ತೋರಿದ ಆಕೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಯಿತು. ಆಕೆಯ ತಾಯಿ ಪೊಲೀಸ್ ಠಾಣೆ ಅಲೆದರೂ ಕೇಸು ರಿಜಿಸ್ಟರ್ ಆಗಲಿಲ್ಲ. ಕೊನೆಗೆ ಯಾರದೋ ಸಹಾಯದಿಂದ ದೆಹಲಿ ತಲುಪಿ ಅಲ್ಲಿ ಚಿಕಿತ್ಸೆ ಫಲಿಸದೆ ನತದೃಷ್ಟ ದಲಿತ ಯುವತಿ ಸಾವಿಗೀಡಾದಳು. ಇಷ್ಟರಲ್ಲಾಗಲೇ ಈ ಸುದ್ದಿ ಹರಡಿ ದಲಿತ ಸಮುದಾಯದ ಆಕ್ರೋಶ ಮಡುಗಟ್ಟಿತ್ತು. ಪೊಲೀಸರು ಚುರುಕಾದರು. ರಾತ್ರೋರಾತ್ರಿ ಆ ಯುವತಿಯ ಶವವನ್ನು ಪೆಟ್ರೋಲು ಸುರಿದು ಪೊಲೀಸರೇ ಸುಟ್ಟುಹಾಕಿಬಿಟ್ಟರು! ತಮ್ಮ ಮಗಳ ಮುಖದ ಅಂತಿಮ ದರ್ಶನಕ್ಕೆ ಆಕೆಯ ಪೋಷಕರಿಗೂ ಅವಕಾಶ ಕೊಡಲಿಲ್ಲ.

ಅದೇ ಊರಿನ ದಿಟ್ಟ ಯುವ ಪತ್ರಕರ್ತೆಯೊಬ್ಬಳು ಈ ಕ್ರೌರ್ಯವನ್ನು ವರದಿ ಮಾಡದೇ ಹೋಗಿದ್ದರೆ ಹೊರಜಗತ್ತಿಗೆ ಇದು ತಿಳಿಯುತ್ತಲೇ ಇರಲಿಲ್ಲ. ಇಡೀ ದೇಶದಲ್ಲಿ ಈ ಬಗ್ಗೆ ಪ್ರತಿಭಟನೆಗಳು ನಡೆದವು. ಜನರು ಪಕ್ಷ ಭೇದ ಮರೆತು ಈ ಸರ್ಕಾರ ಹಾಗೂ ಪೊಲೀಸರಿಗೆ ಛೀಮಾರಿ ಹಾಕಿದರು. ಪೊಲೀಸರು ಕೈಗೊಂಡ ಕ್ರಮ ಏನು ಗೊತ್ತೆ? ಹತ್ರಾಸ್ ದುರಂತವನ್ನು ವರದಿ ಮಾಡಲು ಹೋದ ಪತ್ರಕರ್ತರನ್ನು ಬಂಧಿಸಿ, ದೇಶದ್ರೋಹದ ಆರೋಪದಡಿ ಜೈಲಿಗಟ್ಟಿದ್ದು, ವಿರೋಧ ಪಕ್ಷಗಳ ನಾಯಕರು ಹತ್ರಾಸ್ ಭೇಟಿ ಮಾಡದಂತೆ ನಿರ್ಬಂಧಿಸಿದ್ದು, ಆ ದಲಿತ ಕುಟುಂಬವನ್ನು ಬೆದರಿಸಿ ಮಣಿಸಲು ಪ್ರಯತ್ನಿಸಿದ್ದು ಇತ್ಯಾದಿ. ಪೊಲೀಸರು ಇಷ್ಟೆಲ್ಲಾ ಪ್ರಯಾಸ ಪಟ್ಟಿದ್ದು ಯಾಕೆ ಗೊತ್ತಾ? ಈ ಅತ್ಯಾಚಾರ ಆರೋಪಿಗಳ ಹೆಸರುಗಳನ್ನು ಕೇಳಿದರೆ ನಿಮಗೆ ಅರ್ಥವಾಗಬಹುದು. ಸಂದೀಪ್ ಠಾಕೂರ್, ರಾಮು ಠಾಕೂರ್, ಲವಕುಶ ಠಾಕೂರ್ ಮತ್ತು ರವಿ ಠಾಕೂರ್. ಇನ್ನೂ ಏನಾದರೂ ಗೊಂದಲ ಇದೆಯೆ?

ಇದನ್ನೂ ಓದಿ: ಬೊಮ್ಮಾಯಿಯವರು ಬಯಸುವ ಯುಪಿ ಮಾದರಿಯ ಆಳ-ಅಗಲ ಬಲ್ಲಿರೇನು!?

ಕೇಂದ್ರ ಸರ್ಕಾರ ತಂದಿದ್ದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಶಾಂತಿಯುತವಾದ ಪ್ರತಿಭಟನೆ ನಡೆಸಿದ್ದರು. ಶಾಂತಿಯುತವಾದ ಪ್ರತಿಭಟನೆಯ ಮೇಲೆ ಜೀಪ್ ಹತ್ತಿಸಿ ನಾಲ್ಕು ಮಂದಿ ರೈತರನ್ನು ಕೊಂದು, ಹತ್ತಾರು ಮಂದಿ ರೈತರನ್ನು ಗಂಭೀರವಾಗಿ ಗಾಯಗೊಳಿಸಿದ ಪಾಖಂಡಿಯ ಹೆಸರು ಆಶಿಶ್ ಮಿಶ್ರಾ ಠೇಣಿ. ದುರ್ಘಟನೆಗೆ ಹತ್ತಾರು ವಿಡಿಯೋ ಸಾಕ್ಷಿಗಳಿದ್ದಾಗಿಯೂ ನೂರಾರು ಪ್ರತ್ಯಕ್ಷ ಸಾಕ್ಷಿಗಳಿದ್ದಾಗಿಯೂ ಇಡೀ ಜಗತ್ತು ಟಿ.ವಿ ಪರದೆಯ ಮೇಲೆ ಈ ದುರ್ಘಟನೆಯ ನೇರಪ್ರಸಾರ ನೋಡಿದ್ದಾಗಿಯೂ, ಆ ಆರೋಪಿಯನ್ನು ಪೊಲೀಸರು ಮುಟ್ಟಲೇ ಇಲ್ಲ. ಕಾರಣ, ಆತ ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಠೇಣಿಯ ಸುಪುತ್ರ.

ಇಡೀ ದೇಶದ ತುಂಬಾ ಆಕ್ರೋಶ ಭುಗಿಲೆದ್ದು, ಮಂತ್ರಿಯ ಮಗನನ್ನು ಬಂಧಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸುವವರೆಗೆ ಆತ ಜಾಲಿ ಟ್ರಿಪ್‌ನಲ್ಲಿದ್ದ. ಇತ್ತೀಚೆಗೆ, ಆತ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದಾನೆ. ಇನ್ನು ಪ್ರಕರಣ ಪೂರ್ತಿ ಹಳ್ಳ ಹಿಡಿಯುವುದೊಂದು ಬಾಕಿ ಇದೆ.

ವರ್ತಮಾನದ ಭೀಕರ ವಿದ್ಯಮಾನವೊಂದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ದೆಹಲಿಯ ಜಂತರ್‌ಮಂತರ್‌ನಲ್ಲಿ ನಮ್ಮ ದೇಶದ ಪುತ್ರಿಯರು ನ್ಯಾಯಕ್ಕಾಗಿ ಅಂಗಲಾಚುತ್ತಾ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಅವರು ಸಾಮಾನ್ಯ ಹೆಣ್ಣು ಮಕ್ಕಳಲ್ಲ, ದೇಶಕ್ಕಾಗಿ ಹೋರಾಡಿ ಚಿನ್ನದ ಪದಕ ಗೆದ್ದುಕೊಟ್ಟಂತಹ ಖ್ಯಾತ ಕ್ರೀಡಾಪಟುಗಳು.

ಇವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ’ಭಾರತ ಕುಸ್ತಿ ಫೆಡರೇಷನ್’ನ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಎಂಬ ಕಾಮುಕನ ವಿರುದ್ಧ ಸಿಡಿದೆದ್ದು, ಆತನನ್ನು ಹುದ್ದೆಯಿಂದ ವಜಾ ಮಾಡಿ, ಬಂಧಿಸಬೇಕೆಂದು ಆಗ್ರಹಿಸಿ ನೂರಾರು ಕ್ರೀಡಾಪಟುಗಳು ಬೀದಿಗಿಳಿದಿದ್ದಾರೆ.

ಆತನ ಮೇಲೆ ಪೊಲೀಸರು ಕೇಸು ದಾಖಲಿಸಿಕೊಳ್ಳಲು ತಯಾರಿರಲಿಲ್ಲ. ಈ ವಿಷಯ ಸುಪ್ರೀಂ ಮೆಟ್ಟಿಲು ಹತ್ತಿದ ಮೇಲೆಯೇ ಕೇಸು ದಾಖಲಾಗಿದೆ. ಅದರೆ, ಆತನನ್ನು ಮುಟ್ಟುವ ಸಾಹಸಕ್ಕೆ ಪೊಲೀಸರು ಕೈಹಾಕಿಲ್ಲ. ಯಾಕೆಂದರೆ, ಆತ ಉತ್ತರ ಪ್ರದೇಶ ಬಿಜೆಪಿಯ ಪ್ರಭಾವಿ ಸಂಸದ. ಮೇಲಾಗಿ, ಸಿಎಂ ಯೋಗಿ ಅವರ ಠಾಕೂರ್ ಜಾತಿಬಂಧು. ಹೀಗಾಗಿಯೇ, ಪ್ರಧಾನಿ ಮೋದಿಗೆ ನೇರವಾಗಿ ಅಹವಾಲು ಸಲ್ಲಿಸಿದರೂ ಕೂಡ, ಆ ಪಾತಕಿಯ ಗೋಜಿಗೆ ಪೊಲೀಸರು ಹೋಗಿಲ್ಲ.

ಇವು ಕೆಲವೇಕೆಲವು ಉದಾಹರಣೆಗಳಷ್ಟೇ. ಉತ್ತರ ಪ್ರದೇಶದ ಅಪರಾಧಿ ಜಗತ್ತನ್ನು, ಪೊಲೀಸ್ ಮತ್ತು ಸರ್ಕಾರದ ಭಾಗಿದಾರಿಕೆಯನ್ನು ಬರೆಯುತ್ತಾ ಹೋದರೆ, ದೊಡ್ಡ ಗ್ರಂಥವೇ ಆಗುತ್ತದೆ. ಈಗ ನಮ್ಮ ಕರ್ನಾಟಕದ ವಿಚಾರಕ್ಕೆ ಬರೋಣ. ಮೇಲೆ ಹೆಸರಿಸಲಾದ ಯಾವೊಂದು ಪಾತಕ ಕೃತ್ಯಕ್ಕೆ ಹೋಲಿಸಬಹುದಾದ ಘಟನೆ ನಮ್ಮ ನಾಡಿನಲ್ಲಿ ನಡೆಯಲು ಸಾಧ್ಯವಿದೆಯೇ? ಕನ್ನಡ ನಾಡಿನ ಪ್ರಜ್ಞಾವಂತ ಜನರು ಇಂಥದ್ದಕ್ಕೆ ಅವಕಾಶ ಕೊಡುತ್ತಾರೆಯೇ? ಖಂಡಿತಾ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಇಂಥ ಘೋರ ಘಟನೆಗಳನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಒಂದು ಪಕ್ಷ ಘೋರ ಘಟನೆಗಳು ನಡೆದಾಗ ಸರ್ಕಾರವನ್ನು ಕಟಕಟೆಗೆ ನಿಲ್ಲಿಸುವ ಶಕ್ತಿಯಂತೂ ಒಂದು ಮಟ್ಟಕ್ಕೆ ಕರ್ನಾಟಕ ಜನಕ್ಕಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್

ಗೂಂಡಾ ರಾಜ್ಯವನ್ನು ಮಟ್ಟಹಾಕುತ್ತೇನೆಂದು ಘೋಷಿಸಿರುವ ಯೋಗಿಯ ಪೊಲೀಸರು ನಕಲಿ ಎನ್ಕೌಂಟರ್‌ಗಳಲ್ಲಿ ಕೊಂದುಹಾಕುತ್ತಿರುವುದು ಮುಸ್ಲಿಂ ಹಿನ್ನೆಲೆಯ ಕ್ರಿಮಿನಲ್‌ಗಳನ್ನು ಮಾತ್ರ. ವಾಸ್ತವದಲ್ಲಿ ಠಾಕೂರ್ ಜಾತಿ ಹಿನ್ನೆಲೆಯ ಡಾನ್‌ಗಳು ಹುಲುಸಾಗಿ ಬೆಳೆಯುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಯೋಗಿ ಎದುರಿಸುತ್ತಿದ್ದಾರೆ. ಇನ್ನೊಂದು ಕಡೆ, ಬುಲ್ಡೋಜರ್‌ಗಳನ್ನು ಬಳಸಿ, ಮನೆಗಳನ್ನು ಕೆಡವುತ್ತಿರುವ ಕಾನೂನುಬಾಹಿರ ಸರ್ಕಾರಿ ಅಪರಾಧ ಗುರಿ ಮಾಡಿರುವುದು ಕೂಡ ಬಡ ಮುಸ್ಲಿಮರ ಮನೆಗಳನ್ನೇ. ಒಂದು ಕಾನೂನು ಆಡಳಿತವಿರುವ ರಾಜ್ಯದಲ್ಲಿ ಇಂಥ ಗೂಂಡಾ ನಡವಳಿಕೆ ಸಾಧ್ಯವೇ?

ಇನ್ನು, ಶಿಕ್ಷಣ ಕ್ಷೇತ್ರದಲ್ಲಿ, ಆರೋಗ್ಯ ವ್ಯವಸ್ಥೆಯಲ್ಲಿ ಉತ್ತರ ಪ್ರದೇಶದೊಂದಿಗೆ ಕರ್ನಾಟಕವನ್ನು ಹೋಲಿಸುವುದು ನಮಗೆ ನಾವು ಅವಮಾನ ಮಾಡಿಕೊಂಡಂತೆ. ಉದ್ಯೋಗದ ವಿಷಯದಲ್ಲಂತೂ ಕೇಳುವುದೇ ಬೇಡ. ಉತ್ತರ ಪ್ರದೇಶದ ನಿರುದ್ಯೋಗಿ ಯುವಕರು ಬದುಕು ಹುಡುಕಿಕೊಂಡು ಲಕ್ಷಾಂತರ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ. ನಮ್ಮ ನಾಡಿನ ಉದ್ದಗಲಕ್ಕೂ ಇಂಥ ಬಡಪಾಯಿ ಉತ್ತರ ಪ್ರದೇಶಿಗರನ್ನು ನಾವು ನಿತ್ಯವೂ ಕಾಣುತ್ತೇವೆ.

ಸ್ನೇಹಿತರೇ, ಹೀಗೆ ಯಾವ ರೀತಿಯಿಂದಲೂ ನಮ್ಮ ಹೆಮ್ಮೆಯ ಕರುನಾಡಿಗೆ ಸರಿಸಾಟಿಯಲ್ಲದ ಹಿಂದುಳಿದ, ಗೂಂಡಾ ರಾಜ್ಯ ಕುಖ್ಯಾತಿಯ ಉತ್ತರ ಪ್ರದೇಶದ ಮಾದರಿಯನ್ನು ಅನುಸರಿಸುತ್ತೇವೆ ಎನ್ನುವ ಈ ರಾಜಕಾರಣಿಗಳಿಗೆ ಏನು ಹೇಳೋಣ? ತಮ್ಮ ರಾಜಕೀಯ ದುರ್ಲಾಭಕ್ಕೋಸ್ಕರ ನಮ್ಮ ಸಮೃದ್ಧ ನಾಡಿನ ಹಿತವನ್ನು ಬಲಿಕೊಡಲು ಹವಣಿಸುತ್ತಿದ್ದಾರೆ ಅಂತ ತಾನೇ ಇದರರ್ಥ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿ ತನಿಖೆ ಪಕ್ಷಪಾತದಿಂದ ಕೂಡಿದೆ ಎಂಬ ವಿಪಕ್ಷಗಳ ಆರೋಪ ತಿರಸ್ಕರಿಸಿದ ಕೇರಳ ಹೈಕೋರ್ಟ್

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆಯು ಪಕ್ಷಪಾತದಿಂದ ಕೂಡಿದೆ ಅಥವಾ ಸರ್ಕಾರದ ಒತ್ತಡದಲ್ಲಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿರುವ ಕೇರಳ ಹೈಕೋರ್ಟ್, ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ...

ಆರ್‌ಎಸ್‌ಎಸ್ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ನಲಪಾಡ್‌ಗೆ ಕೋರ್ಟ್ ನೋಟಿಸ್

ಬೆಂಗಳೂರು: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಸದ/ಶಾಸಕರ...

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...

ಉತ್ತರ ಪ್ರದೇಶ SIR : ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರು ಡಿಲೀಟ್

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐರ್‌) ಬಳಿಕ ಸುಮಾರು 2.89 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್ ರಿನ್ವಾ...

ಕರೂರ್ ಕಾಲ್ತುಳಿತ ಪ್ರಕರಣ: ಟಿವಿಕೆ ನಾಯಕ ವಿಜಯ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್

ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಟಿವಿಕೆ ನಾಯಕ ವಿಜಯ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ. ಸೆಪ್ಟೆಂಬರ್ 27 ರಂದು ನಟ-ರಾಜಕಾರಣಿ ವಿಜಯ್ ಅವರ ತಮಿಳಗ...

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿ ಉದ್ಘಾಟನೆ : ‘ಐತಿಹಾಸಿಕ ಕ್ಷಣ’ ಎಂದ ರಾಯಭಾರಿ ಹುಸಾಮ್ ಝೊಮ್ಲೋಟ್

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ದೇಶದ ರಾಯಭಾರಿ ಕಚೇರಿ ಅಧಿಕೃತವಾಗಿ ಉದ್ಘಾಟನೆಯಾಗಿದ್ದು, ಯುಕೆಯ ಪ್ಯಾಲೆಸ್ತೀನ್‌ ರಾಯಭಾರಿ ಇದನ್ನು 'ಐತಿಹಾಸಿಕ ಕ್ಷಣ' ಎಂದು ಬಣ್ಣಿಸಿದ್ದಾರೆ. ಸೋಮವಾರ (ಜ.5) ಪಶ್ಚಿಮ ಲಂಡನ್‌ನ ಹ್ಯಾಮರ್‌ಸ್ಮಿತ್‌ನಲ್ಲಿ ನಡೆದ ರಾಯಭಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ...

ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಮತ್ತು ಪತ್ರಕರ್ತನಾಗಿದ್ದ ರಾಣಾ ಪ್ರತಾಪ್ ಬೈರಾಗಿ ತಲೆಗೆ ಗುಂಡಿಕ್ಕಿ ಹತ್ಯೆ 

ಬಾಂಗ್ಲಾದೇಶದ ಜೆಸ್ಸೋರ್ ಜಿಲ್ಲೆಯಲ್ಲಿ ಸೋಮವಾರ 38 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರ ತಲೆಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.  ಬೈರಾಗಿ ಒಬ್ಬ ಹಿಂದೂ ಉದ್ಯಮಿ ಮತ್ತು...

ತಿರುಪರನ್‌ಕುಂದ್ರಂ ಬೆಟ್ಟದ ಮೇಲೆ ದೀಪ ಬೆಳಗಿಸುವ ಆದೇಶ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ಮಧುರೈನ ತಿರುಪರನ್‌ಕುಂದ್ರಂ ಬೆಟ್ಟದ ಮೇಲಿರುವ ಕಲ್ಲಿನ ಕಂಬದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದ ಏಕ ಸದಸ್ಯ ನ್ಯಾಯಾಧೀಶರು ನೀಡಿದ ಆದೇಶವನ್ನು ವಿಭಾಗೀಯ ಪೀಠ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಜಿ. ಜಯಚಂದ್ರನ್...