ನನಗೂ ಸಿಡಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಸಂತ್ರಸ್ತ ಯುವತಿ ನನ್ನನ್ನು ಭೇಟಿ ಮಾಡಿಲ್ಲ ಕಾನೂನು ಪ್ರಕಾರ ತನಿಖೆ ಮಾಡಲಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶನಿವಾರ ಹೊಸೂರಿನಲ್ಲಿ ತಿಳಿಸಿದ್ದಾರೆ.
ಸಿಡಿ ಪ್ರಕರಣದಲ್ಲಿ ಯುವತಿಯನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶನಿವಾರ ಸಂಜೆ ಆರೋಪಿಸಿದ್ದರು. ಅಲ್ಲದೆ ಸಂತ್ರಸ್ತ ಯುವತಿಯ ಪೋಷಕರು ಡಿ.ಕೆ. ಶಿವಕುಮಾರ್ ಅವರೇ ಇದಕ್ಕೆಲ್ಲ ಕಾರಣ ಎಂದು ನೇರವಾಗಿ ಆರೋಪ ಹೊರಿಸಿದ್ದರು.
ಇದನ್ನೂ ಓದಿ: ‘ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುತ್ತೇನೆ’ – ಸಿಡಿ ಹಗರಣದ ಸಂತ್ರಸ್ತೆ ಯುವತಿ
ಈ ಬಗ್ಗೆ ಹೊಸೂರಿನಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ಪಾಪ, ಅವರು ಹತಾಶರಾಗಿದ್ದಾರೆ, ಬೇಸರದಲ್ಲಿದ್ದಾರೆ. ಅವರಿಗೆ ಅವರ ಸಮಸ್ಯೆ ಇದೆ. ಹೀಗಾಗಿ ಮಾತನಾಡುತ್ತಾರೆ. ಅವರಿಗೆ ಉತ್ತರ ಕೊಡಲು ಹೋಗುವುದಿಲ್ಲ. ಕಾನೂನಿದೆ, ಪೊಲೀಸ್ ಅಧಿಕಾರಿಗಳಿದ್ದಾರೆ. ತನಿಖೆ ನಡೆಯುತ್ತಿದೆ. ಎಲ್ಲ ವಿಚಾರಣೆ ಮುಗಿಯಲಿ” ಎಂದು ಹೇಳಿದ್ದಾರೆ.
“ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಅವರ ವೈಯಕ್ತಿಕ ಸಮಸ್ಯೆ. ಅವರೇ ಇದನ್ನು ಬಗೆಹರಿಸಿಕೊಳ್ಳಬೇಕು. ರಮೇಶ್ ಜಾರಕಿಹೊಳಿ ಅವರು ಇವತ್ತೊಂದು ಮಾತನಾಡುತ್ತಾರೆ, ನಾಳೆ ಒಂದು ಮಾತನಾಡುತ್ತಾರೆ, ನಾಡಿದ್ದು ಒಂದು ಮಾತನಾಡುತ್ತಾರೆ” ಎಂದು ಹೇಳಿದ್ದಾರೆ.
“ಅವಕ್ಕೆಲ್ಲ ಉತ್ತರ ಕೊಟ್ಟುಕೊಂಡು ಕೂರಲು ನಾನು ತಯಾರಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಅವರದೇ ಸರ್ಕಾರ ಇದೆ. ಕಾನೂನು ಪ್ರಕಾರ ತನಿಖೆ ಮಾಡಲಿ. ತಪ್ಪು ಮಾಡಿರುವವರಿಗೆ ಶಿಕ್ಷೆ ನೀಡಲಿ. ನಾನು ಸಂತ್ರಸ್ತ ಯುವತಿಯನ್ನು ಭೇಟಿ ಮಾಡಿಲ್ಲ. ನನ್ನ ಬಳಿ ಯಾರೂ ಬಂದಿಲ್ಲ” ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಹೆಸರು; ಸಿಡಿ ಹಗರಣ ಹನಿಟ್ಯ್ರಾಪ್ ಸ್ವರೂಪ ಪಡೆಯುತ್ತಿದೆ – ಜೆಡಿಎಸ್ ಆರೋಪ


