ರಮೇಶ್ ಜಾರಕಿಹೊಳಿ ಸಿಡಿ ಹಗರಣದ ವಿಡಿಯೋದಲ್ಲಿ ಇದ್ದವರು ಎನ್ನಲಾಗಿರುವ ಯುವತಿ ಇದೀಗ ತನ್ನ ಹೇಳಿಕೆಯ ಐದನೆ ವಿಡಿಯೋವನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೊದಲ್ಲಿ ಯುವತಿಯು, “ತನ್ನ ತಂದೆ ತಾಯಿಗೆ ಏನೂ ಗೊತ್ತಿಲ್ಲ. ಅವರಿಗೆ ಬ್ಲಾಕ್ಮೇಲ್ ಮಾಡಿ ತಮಗೆ ಬೇಕಾದಂತೆ ಹೇಳಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಶನಿವಾರ ಬೆಳಿಗ್ಗೆ ತನ್ನ ನಾಲ್ಕನೆ ವಿಡಿಯೋದಲ್ಲಿ, “ಕಳೆದ 24 ದಿನದಿಂದ ನನಗೆ ತೀವ್ರ ಕಿರುಕುಳವಾಗುತ್ತಿದೆ. ನನ್ನ ಅಪ್ಪ-ಅಮ್ಮ ಸೇರಿದಂತೆ ನನ್ನನ್ನೂ ಸಾಯಿಸಬಹುದು. ನನಗೆ ನೀಡುತ್ತಿರುವ ಕಿರುಕುಳಕ್ಕೆ ರಮೇಶ್ ಜಾರಕಿಹೊಳಿ ಅವರ ಹೆಸರು ಬರೆದಿಟ್ಟು ನಾನು ಸತ್ತು ಹೋಗಬೇಕು ಎಂದು ಅನಿಸುತ್ತಿದೆ” ಎಂದು ಹೇಳಿದ್ದರು.
ಇದನ್ನೂ ಓದಿ: ‘ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುತ್ತೇನೆ’ – ಸಿಡಿ ಹಗರಣದ ಸಂತ್ರಸ್ತೆ ಯುವತಿ
ಇದರ ನಂತರ ಯುವತಿಯ ಪೋಷಕರು ಪೊಲೀಸರ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ ನಂತರ ಮಾಧ್ಯಮದೊಂದಿಗೆ ಮಾತನಾಡುತ್ತಾ, ಡಿ.ಕೆ. ಶಿವಕುಮಾರ್ ಅವರೇ ಇದಕ್ಕೆಲ್ಲ ಕಾರಣ ಎಂದು ನೇರವಾಗಿ ಆರೋಪ ಹೊರಿಸಿದ್ದರು. ಇದರ ನಂತರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡಾ, ಸಿಡಿ ಪ್ರಕರಣದಲ್ಲಿ ಯುವತಿಯನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಶನಿವಾರ ಸಂಜೆ ಆರೋಪಿಸಿದ್ದರು. ಆದರೆ ಡಿ.ಕೆ. ಶಿವಕುಮಾರ್ ನನಗೂ ಸಿಡಿ ಪ್ರಕರಣಕ್ಕೂ ಸಂಬಂಧವಿಲ್ಲ, ಯುವತಿ ನನ್ನ ಭೇಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೀಗ ಯುವತಿ ತನ್ನ ಹೇಳಿಕೆಯ ಐದನೆ ವಿಡಿಯೊ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಯುವತಿ, “ಬೆಳಿಗ್ಗೆಯಿಂದ ಆಗಿರುವ ಬೆಳವಣಿಗೆ ನೋಡುತ್ತಾ ಇದ್ದರೆ ನನಗೆ ಭಯ ಆಗುತ್ತಿದೆ. ನಮ್ಮ ಅಪ್ಪ- ಅಮ್ಮನಿಗೆ ಏನೂ ಗೊತ್ತೆ ಇಲ್ಲ. ಅವರನ್ನು ಪ್ರಭಾವ ಬೀರಿ, ಅಷ್ಟು ಬ್ಲಾಕ್ಮೇಲ್ ಮಾಡಿ, ಎಲ್ಲೊ ಇರಿಸಿ, ಅವರಿಂದ ಹೇಳಿಕೆ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.
‘‘ನನ್ನ ತಂದೆ ತಾಯಿಗೆ ಏನಾಗಿದೆ ಎಂದು ಗೊತ್ತಿಲ್ಲ. ಈ ಕೇಸಲ್ಲಿ ಅನ್ಯಾಯ ಆಗಿರುವುದು ನನಗೆ. ಅನ್ಯಾಯ ಮಾಡಿರುವುದು ಅವರಾಗಿವುದಿಂದ ಅವರ ಮನೆಯವರನ್ನು ಕರೆದುಕೊಂಡು ಬಂದು ಯಾರೂ ವಿಚಾರಣೆ ಮಾಡುತ್ತಿಲ್ಲ. ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡಿ, ಏನೇನೋ ಹೆಸರು ಹೇಳಿಸಿ ಬಿಟ್ಟು, ಈ ಕೇಸನ್ನು ಬೇರೆ ರೀತಿ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ನ್ಯಾಯ ಸಿಗಬೇಕಿರುವುದು ನನಗೆ. ಮೊದಲು ನನ್ನ ಬಗ್ಗೆ ಮಾತನಾಡಬೇಕು. ಅದು ಬಿಟ್ಟು ಅವರ ಬಗ್ಗೆ ಇವರ ಬಗ್ಗೆ ನನಗೆ ಬೇಕಿಲ್ಲ. ಅದೆಲ್ಲ ಅವರ ವೈಯಕ್ತಿಕ” ಎಂದು ಯುವತಿ ಹೇಳಿದ್ದಾರೆ.
ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಹೆಸರು; ಸಿಡಿ ಹಗರಣ ಹನಿಟ್ಯ್ರಾಪ್ ಸ್ವರೂಪ ಪಡೆಯುತ್ತಿದೆ – ಜೆಡಿಎಸ್ ಆರೋಪ
“ಈಗ ನನಗೆ ಅಲ್ಲಿಗೆ ಬಂದು ಹೇಳಿಕೆ ನೀಡಲು ಭಯವಾಗ್ತಾ ಇದೆ. ಇಷ್ಟು ಪ್ರಭಾವ ಬೀರಿ, ನಮ್ಮ ಅಪ್ಪ-ಅಮ್ಮನಿಗೆ ಏನೇನೋ ಹೇಳಿಸಿ, ಪ್ರಕರಣ ಬದಲಾಯಿಸಲು ಪ್ರಯತ್ನಿಸುತ್ತಾ ಇರುವವರು, ನಾಳೆ ನಾನು ಅಲ್ಲಿಗೆ ಬಂದು ಹೇಳಿಕೆ ನೀಡುವಾಗ ಏನಾಗುತ್ತೋ ಗೊತ್ತಿಲ್ಲ” ಎಂದು ಯುವತಿ ಆತಂಕ ವ್ಯಕ್ತಪಡಿಸಿದ್ದಾರೆ.
“ಹಾಗಾಗಿ, ನಾನು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ, ಗೃಹ ಸಚಿವ ಬೊಮ್ಮಾಯಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಅವರಿಗೆ ಇವರೆಲ್ಲರಿಗೂ, ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ನನ್ನ ಏನೇನು ಹೇಳಿಕೆ ಇದೆಯೋ ಪ್ರತಿಯೊಂದನ್ನು ನೀಡುತ್ತೇನೆ. ಇವರು ನನಗೆ ಏನೇನು ಅನ್ಯಾಯ ಮಾಡಿದ್ದಾರೆ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಡುತ್ತೇನೆ. ನಾನು ನ್ಯಾಯಾಧೀಶರ ಮುಂದೆಯೇ ಬಂದು ಹೇಳಿಕೆ ನೀಡಬೇಕು ಎಂದುಕೊಂಡಿದ್ದೇನೆ. ಇದಕ್ಕಾಗಿ ನನಗೆ ಎಲ್ಲರೂ ಸಹಾಯ ಮಾಡಬೇಕು” ಎಂದು ಸಂತ್ರಸ್ತ ಯುವತಿಯು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸಂತ್ರಸ್ತೆಗೆ ಭಯ ಹುಟ್ಟಿಸುತ್ತಿರುವ ರಮೇಶ್ ಜಾರಕಿಹೊಳಿ ಬಂಧಿಸಿ