ಉಕ್ರೇನ್ ರಾಜಧಾನಿ ಕೀವ್ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್ ಗುಂಡೇಟಿಗೆ ಒಳಗಾಗಿದ್ದರು. ಪ್ರಸ್ತುತ ಕೀವ್ ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು, ’ನಾನು ಅಧಿಕಾರಿಗಳಿಗೆ ಕರೆ ಮಾಡುತ್ತಲೇ ಇದ್ದೆ, ಯಾರು ಸ್ಪಂದಿಸಲಿಲ್ಲ’ ಎಂದು ಆರೋಪಿಸಿದ್ದಾರೆ.
ಎನ್ಡಿಟಿವಿ ಜೊತೆಗೆ ಮಾತನಾಡಿರುವ ಹರ್ಜೋತ್ ಸಿಂಗ್, “ನನ್ನ ಭುಜಕ್ಕೆ ಗುಂಡೇಟು ಬಿದ್ದಿದೆ. ವೈದ್ಯರು ನನ್ನ ಎದೆಯ ಭಾಗದಿಂದ ಗುಂಡನ್ನು ಹೊರತೆಗೆದಿದ್ದಾರೆ. ನನ್ನ ಕಾಲು ಮುರಿದಿದೆ” ಎಂದು ಹೇಳಿದ್ದಾರೆ.
“ನಾನು ಅಧಿಕಾರಿಗಳಿಗೆ ಕರೆ ಮಾಡುತ್ತಲೇ ಇದ್ದೆ. ನಾನು ಎಲ್ವಿವ್ಗೆ ಹೋಗಲು ನನಗೆ ಕೆಲವು ಸೌಲಭ್ಯಗಳು ಬೇಕಾಗಿದ್ದವು. ಆದರೆ ಯಾರೂ ನನ್ನನ್ನು ಸಂಪರ್ಕಿಸಲಿಲ್ಲ. ಎನ್ಡಿಟಿವಿ ಮಾತ್ರ ನನ್ನ ಬಳಿಗೆ ಬಂದಿದೆ. ಈಗ ಇಲ್ಲಿ ಏನಾಗುತ್ತಿದೆ ಎಂಬುದರ ವಾಸ್ತವತೆ ಇಡೀ ಜಗತ್ತಿಗೆ ತಿಳಿಯುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಆಪದ್ಬಾಂಧವನಾದ ನಟ ಸೋನು ಸೂದ್
ದೆಹಲಿ ಬಳಿಯ ಛತ್ತರ್ಪುರದ ವಿದ್ಯಾರ್ಥಿ ಹರ್ಜೋತ್ ಸಿಂಗ್ ತನ್ನ ಸ್ನೇಹಿತರೊಂದಿಗೆ ಕ್ಯಾಬ್ನಲ್ಲಿ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದರು. ಕೀವ್ನಿಂದ ಹೇಗಾದರೂ ತಪ್ಪಿಸಿಕೊಂಡು ಎಲ್ವಿವ್ ತಲುಪಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಗುಂಡೇಟು ಬಿದ್ದಿತ್ತು.
“ನಾನು ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದೆ.ನನಗೆ ನಡೆಯಲು ಸಾಧ್ಯವಿಲ್ಲದ್ದ ಕಾರಣ, ನನ್ನನ್ನು ಎಲ್ವಿವ್ಗೆ ಕರೆದೊಯ್ಯಲು ಏನಾದರೂ ಸೌಲಭ್ಯವನ್ನು ಒದಗಿಸಬಹುದೇ ಎಂದು ಕೇಳಿದೆ. ಆದರೆ ನನಗೆ ಬರೀ ಸುಳ್ಳು ಹೇಳಿಕೆಗಳು, ಭರವಸೆಗಳು ಸಿಕ್ಕವು. ಇನ್ನೂ ಅನೇಕ ಮಂದಿ ಕೀವ್ನಲ್ಲಿ ಸಿಕ್ಕಿಬಿದ್ದಿದ್ದಾರೆ” ಎಂದಿದ್ದಾರೆ.
“ಅನೇಕರು ತಮ್ಮ ತಮ್ಮ ಮನೆಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ, ಏನಾಗುತ್ತಿದೆ ಎಂದು ಅವರಿಗೆ ತಿಳಿದಿಲ್ಲ. ನಾನು ನಿರಂತರವಾಗಿ ರಾಯಭಾರ ಕಚೇರಿಯೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ. ನಾನು ಹೇಳುವುದೇನೆಂದರೇ, ಏನಾಯಿತು, ಅದರ ಬಗ್ಗೆ ನಾವು ಏನೂ ಮಾಡಲು ಸಾಧ್ಯವಿಲ್ಲ. ನಾವು ಒಳ್ಳೆಯದನ್ನು ಮಾತ್ರ ನಿರೀಕ್ಷಿಸಬಹುದು. ಜನರು ನನ್ನನ್ನು ಟಿವಿ ಮೂಲಕ ನೋಡಿದ್ದಾರೆ. ಈಗ ಜನರಿಗೆ ಇಲ್ಲಿ ಏನಾಗುತ್ತಿದೆ, ವಾಸ್ತವ ಏನೆಂದು ತಿಳಿಯುತ್ತಿದೆ” ಎಂದು ಹೇಳಿದ್ದಾರೆ.
“ಕೀವ್ನಿಂದ ಹೊರಟ ವಿದ್ಯಾರ್ಥಿಗೆ ಗುಂಡು ಹಾರಿಸಲಾಗಿದೆ ಎಂಬ ವರದಿಗಳನ್ನು ನಾವು ಕೇಳಿದ್ದೇವೆ. ಅವರನ್ನು ಮತ್ತೆ ಕೀವ್ಗೆ ಕರೆದೊಯ್ಯಲಾಗಿದೆ. ಯುದ್ಧದಲ್ಲಿ ಈ ಘಟನೆ ಸಂಭವಿಸಿದೆ” ಎಂದು ಬೆಳಗ್ಗೆ ಕೇಂದ್ರ ಸಚಿವ ವಿ.ಕೆ.ಸಿಂಗ್ ತಿಳಿಸಿದ್ದರು.
ಇನ್ನು, ಸರ್ಕಾರದ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ಸುಮಾರು 17,000 ಭಾರತೀಯರು ಉಕ್ರೇನ್ನ ಗಡಿಯನ್ನು ತೊರೆದಿದ್ದಾರೆ. 6,000 ಕ್ಕೂ ಹೆಚ್ಚು ಜನರು ಮನೆಗೆ ಮರಳಿದ್ದಾರೆ. ಸುಮಾರು 1,700 ಜನರು ಉಕ್ರೇನ್ ತೊರೆಯಲು ಕಾಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧ ಪ್ರಾರಂಭವಾಗುವ ಮೊದಲು, ಸುಮಾರು 20,000 ಭಾರತೀಯರು, ಮುಖ್ಯವಾಗಿ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದರು.