Homeಕರ್ನಾಟಕಇಂದಿನ ರಾಜ್ಯ ಬಜೆಟ್ ಕುರಿತು ಅಭಿಪ್ರಾಯಗಳು

ಇಂದಿನ ರಾಜ್ಯ ಬಜೆಟ್ ಕುರಿತು ಅಭಿಪ್ರಾಯಗಳು

ವಾಡಿಕೆಯಂತೆ ಇದೂ ಒಂದು ಬಜೆಟ್ಟು: ನಿರ್ದಿಷ್ಟ ದಿಕ್ಕು-ದಿಶೆಯಿಲ್ಲದ ಬಜೆಟ್ಟು.

- Advertisement -
- Advertisement -

2022-23 ನೇ ಸಾಲಿನ ರಾಜ್ಯ ಬಜೆಟ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿಯವರು ಮಂಡಿಸಿದ್ದಾರೆ. ಈ ಕುರಿತು ಶಿಕ್ಷಣ ತಜ್ಞರ, ವಿದ್ಯಾರ್ಥಿ ಸಂಘಟನೆಗಳ ಅಭಿಪ್ರಾಯಗಳು ಇಲ್ಲಿವೆ.

ನಿರ್ದಿಷ್ಟ ದಿಕ್ಕು-ದಿಶೆಯಿಲ್ಲದ ಕರ್ನಾಟಕ ಬಜೆಟ್: 2022-23

ಕಳೆದ ತಿಂಗಳು ಬಜೆಟ್-ಪೂರ್ವ ಸಮೀಕ್ಷೆ ಮಾಡುವಾಗ ಹಿಜಾಬ್, ಮತಾಂತರ, ಲವ್ ಜಿಹಾದ್, ದೇವಾಲಯಗಳ ಖಾಸಗೀಕರಣ, ಉಳ್ಳವರಿಗೆ ಭೂಮಿ ಮುಂತಾದವುಗಳನ್ನು ಆದ್ಯತೆಗಳನ್ನಾಗಿ ಮಾಡಿಕೊಂಡಿರುವ ಸರ್ಕಾರದಿಂದ ಎಂತಹ ಬಜೆಟ್ಟನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆ ಹಾಕಿದ್ದೆ. ಇದು ನಿಜವಾಗಿದೆ. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಬಜೆಟ್ಟಿನಲ್ಲಿ ರೂ. 100 ಕೋಟಿ ಅನುದಾನ; ರಾಯಚೂರು ವಿಶ್ವವಿದ್ಯಾಲಯಕ್ಕೆ ರೂ 15 ಕೋಟಿ ಅನುದಾನ. ಈ ಸರ್ಕಾರದ ಆದ್ಯತೆಗಳೇನು ಎಂಬುದುಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ! ತಟ್ಟೆಕಾಸಿಗೆ ಉತ್ತೇಜನ: ಮಕ್ಕಳ ವಿದ್ಯಾಭ್ಯಾಸಕ್ಕೆ ನಿರುತ್ತೇಜನ.

ಒಕ್ಕೂಟ ಸರ್ಕಾರದಿಂದ 2019-20ರಲ್ಲಿ ರಾಜ್ಯಕ್ಕೆ ವರ್ಗಾವಣೆಯಾದ ಮೊತ್ತವು ಆ ವರ್ಷದ ಬಜೆಟ್ ವೆಚ್ಚದ ಶೇ. 21.73 ರಷ್ಟಿತ್ತು. ಈ ವರ್ಷ ಇದು ಶೇ. 17.71ಕ್ಕಿಳಿದಿದೆ. ನಮಗೆ ಬರಬೇಕಾಗಿದ್ದ ಜಿ ಎಸ್ ಟಿ ಪರಿಹಾರ 2021-22ರಲ್ಲಿ ರೂ. 18109 ಕೋಟಿಯನ್ನು ನಮಗೆ ಅದು ಸಾಲ ನೀಡುವ ಕ್ರಮದಲ್ಲಿ ಯಾವ ಹೆಚ್ಚುಗಾರಿಕೆಯಿದೆ ಸ್ವಾಮಿ?

ಬಜೆಟ್ಟಿನ ಶಿಸ್ತು ರೆವಿನ್ಯೂ ಖಾತೆಯಲ್ಲಿ ಆದಿಕ್ಯವನ್ನು ಸಾಧಿಸಿಕೊಳ್ಳುವುದರಲ್ಲಿದೆ. ಇದನ್ನು ಕರ್ನಾಟಕ ಕಳೆದ 15 ವರ್ಷಗಳಿಂದಲೂ ಅನುಸರಿಸಿಕೊಂಡು ಬಂದಿತ್ತು. ಆದರೆ 2022-23ರಲ್ಲಿ ರೆವಿನ್ಯೂ ಕೊರತೆ ರೂ. 14699 ಕೋಟಿ. ನಮ್ಮ ಒಟ್ಟು ಋಣಬಾರ ಇಲ್ಲಿಯವರೆಗೆ ನಮ್ಮ ಜಿ ಎಸ್ ಡಿ ಪಿಯ ಶೇ. 25ಕ್ಕಿಂತ ಕಡಿಮೆಯಿರುತ್ತಿತ್ತು. ಈಗ 2022-23ರಲ್ಲಿ ಇದು ಶೇ. 27.49ಕ್ಕೆರಿದೆ. ಎಲ್ಲಿದೆ ಬಜೆಟ್ ಶಿಸ್ತು? ಮುಂದಿನ 2022-23ರಲ್ಲಿನ ಬಜೆಟ್ ಗಾತ್ರ ರೂ.265702 ಕೋಟಿ. ಇದರಲ್ಲಿ ಸಾಲದ ಪ್ರಮಾಣ ಶೇ. 27.09. ಮುಂದೆ ಇದನ್ನು ಬಡ ನಾಗರಿಕರ ಮೇಲೆ ಹೇರಲಾಗುತ್ತದೆ.

ರಾಜ್ಯದ ಜನಸಂಖ್ಯೆಯ ಶೇ. 24.01 ರಷ್ಟಿರುವ ದಲಿತರು ಮತ್ತು ಆದಿವಾಸಿಗಳ ಉಪಯೋಜನೆಗಳಿಗೆ ನೀಡುತ್ತಿದ್ದ ಅನುದಾನ 2017-18ರಲ್ಲಿ ಬಜೆಟ್ ವೆಚ್ಚದ ಶೇ. 14.98ರಷ್ಟಿತ್ತು. ಇದೀಗ 2022-23ರಲ್ಲಿ ಇದು ಬಜೆಟ್ ವೆಚ್ಚದ ಶೇ. 10.62ಕ್ಕಿಳಿದಿದೆ. ರಾಜ್ಯದ ಜನಸಂಖ್ಯೆಯ ಶೇ. 15 ರಷ್ಟಿರುವ ಅಲ್ಪಸಂಖ್ಯಾತರಿಗೆ ಬಜೆಟ್ಟಿನಲ್ಲಿ ಏನಿದೆ! ರಾಜ್ಯದಲ್ಲಿ ಸರ್ಕಾರಿ ಇಲಾಖೆಗಳಲ್ಲಿ 2.53 ಲಕ್ಷ ಹುದ್ದೆಗಳು ಖಾಲಿಯಿವೆ. ಇದರ ಬಗ್ಗೆ ಬಜೆಟ್ಟಿನಲ್ಲಿ ಪ್ರಸ್ತಾಪವಿಲ್ಲ. ನರೇಗದಂತಹ ಕಾರ್ಯಯೋಜನೆ ನಗರ ಪ್ರದೇಶಗಳಿಗೂ ಬೇಕು ಎಂಬುದು ಜನರ-ತಜ್ಞರ ಅಭಿಪ್ರಾಯ. ಇದರ ಬಗ್ಗೆ ಚರ್ಚೆಯಿಲ್ಲ. ನೀತಿ ಆಯೋಗ್ ಬಹುಮುಖಿ ಬಡತನದ ವರದಿಯು ಕಲ್ಯಾಣ ಕರ್ನಾಟಕದಲ್ಲಿ ಇದು ತೀವ್ರವಾಗಿದೆ ಎಂದು ಹೇಳಿದೆ. ಇದಕ್ಕೆ ಬಜೆಟ್ಟಿನಲ್ಲಿ ಯಾವ ಕಾರ್ಯಕ್ರಮಗಳು ಇಲ್ಲ.

ವಾಡಿಕೆಯಂತೆ ಇದೂ ಒಂದು ಬಜೆಟ್ಟು: ನಿರ್ದಿಷ್ಟ ದಿಕ್ಕು-ದಿಶೆಯಿಲ್ಲದ ಬಜೆಟ್ಟು.

  • ಟಿ. ಆರ್. ಚಂದ್ರಶೇಖರ, ವಿಶ್ರಾಂತ ಪ್ರಾಧ್ಯಾಪಕರು

ಸರ್ಕಾರ ಸಂಪೂರ್ಣವಾಗಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ

ಬಜೆಟ್‌ನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಶೇ. 12ರಷ್ಟು ಮಾತ್ರ ಶಿಕ್ಷಣಕ್ಕೆ ಮೀಸಲಿಟ್ಟಿದ್ದಾರೆ. ಆದರೆ ತಜ್ಞರ ಬೇಡಿಕೆ ಕನಿಷ್ಠ ಶೇ.30 ಆಗಿದೆ. ಈ ಅಲ್ಪ ಹಣದಿಂದ ಈಗಿರುವ ಸರ್ಕಾರಿ ಸಂಸ್ಥೆಗಳ ನಿರ್ವಹಣೆ ಆಗಬಹುದೇ ಹೊರತು, ಹೊಸ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಆಗುವುದಿಲ್ಲ. ರಾಜ್ಯದ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಸೀಟನ್ನು ದಕ್ಕಿಸಿಕೊಳ್ಳಲು ಸಾಲಕ್ಕಾಗಿ ನೆರವು ನೀಡುತ್ತೇವೆ ಎಂದು ಸರ್ಕಾರ ಹೇಳಿದೆ. ಇದು ಯಾವ ನೆರವೂ ಅಲ್ಲ. ಬದಲಿಗೆ ಸರ್ಕಾರ ಸಂಪೂರ್ಣವಾಗಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಸರ್ಕಾರವು ಉನ್ನತ ಶಿಕ್ಷಣದ ಶುಲ್ಕವನ್ನು ಕಡಿಮೆ ಮಾಡಬೇಕಿತ್ತು. ಹೆಚ್ಚೆಚ್ಚು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕಿತ್ತು. ಈ ಯೋಜನೆಗಳು ವಿದ್ಯಾರ್ಥಿಗಳಿಗೆ ನೆರವು ಆಗುತ್ತಿತ್ತು. ಆದರೆ, ಸಾಲದ ನೆರವಿನ ನೆಪದಲ್ಲಿ, ಸರ್ಕಾರ ಮತ್ತೊಮ್ಮೆ ವಿದ್ಯಾರ್ಥಿಗಳ ತಲೆಯ ಮೇಲೆ ಶುಲ್ಕದ ಹೊರೆಯನ್ನು ಹೊರಿಸಿದೆ. ರಾಜ್ಯ ಸರ್ಕಾರವು ಈ ಬಾರಿಯ ಬಜೆಟ್ ವಿದ್ಯಾರ್ಥಿ ಪರವಾಗಿರುತ್ತದೆ ಎಂದು ಘೋಷಣೆ ಮಾಡಿತ್ತು. ಆದರೆ, ಅದು ಕೇವಲ ಘೋಷಣೆಯಾಗಿ ಉಳಿದಿರುವುದು ವಿಷಾದನೀಯ.

  • AIDSO ಕರ್ನಾಟಕ ರಾಜ್ಯ ಸಮಿತಿ

ಅರ್ಥ ಕಳೆದಕೊಂಡ ಬಜೆಟ್

ಹೊಸ ಶಿಕ್ಷಣ ನೀತಿ ಜಾರಿಯಾದರೆ ಯಾವೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎಂದು ನಾಲ್ಕು ವರ್ಷಗಳ ಹಿಂದೆಯೇ ಎಚ್ಚರಿಸಿದ್ದೆವೊ ಅವೆಲ್ಲವೂ ಈ ಬಜೆಟ್‌ನಲ್ಲಿ ಗೋಚರಿಸುತ್ತಿವೆ. ಅಂಗನವಾಡಿ ಎಂಬುದು ಅನೌಪಚಾರಿಕ ಶಿಕ್ಷಣವಾಗಿದೆ. ಆದರೆ ಈ ಸರ್ಕಾರ ಅದನ್ನು ಔಪಚಾರಿಕ ಶಿಕ್ಷಣ ಮಾಡಲು ಹಠತೊಟ್ಟಿದೆ. ಇನ್ನು ಉಕ್ರೇನ್‌ನಲ್ಲಿ ವಿದ್ಯಾರ್ಥಿಗಳ ಸಂಕಷ್ಟದ ಹಿನ್ನೆಲೆಯಲ್ಲಿ NEET ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ನೀಟ್ ಮಾತ್ರವಲ್ಲದೇ ಸರ್ಕಾರ ಸಾರ್ವಜನಿಕ ಶಿಕ್ಷಣದಿಂದ ಹೊರನಡೆಯುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಶಿಕ್ಷಣ ಕ್ಷೇತ್ರದಿಂದ ಸರ್ಕಾರ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಆದರೆ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಕಡಿಮೆ ಹಣ ನೀಡಲಾಗುತ್ತದೆ. ಆನಂತರ  ಅಷ್ಟನ್ನು ಖರ್ಚು ಮಾಡದೇ ಬೇರೆ ಕ್ಷೇತ್ರಗಳಿಗೆ ಹಂಚುತ್ತಾರೆ. ಬಜೆಟ್‌ಗಳು ಕೃಷಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರ್ಥ ಕಳೆದುಕೊಂಡಿವೆ. ಈ ಬಜೆಟ್‌ ಕುರಿತು ಟೀಕೆ ಮಾಡಿದರೆ ಪ್ರಯೋಜನವೇನು?

  • ಬಿ.ಶ್ರೀಪಾದ್ ಭಟ್, ಶಿಕ್ಷಣ ತಜ್ಞರು, ಹೋರಾಟಗಾರರು- ಬೆಂಗಳೂರು

ಮಧ್ಯ ಕರ್ನಾಟಕದ ಜಿಲ್ಲೆಗಳ ಕಡೆಗಣನೆ

ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಗರಗಳ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ ಕೊಡಲಾಗಿದೆ. ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೇ ಸ್ಥಾಪಿಸುವ ಪ್ರಯತ್ನದಲ್ಲಿ ಸರ್ಕಾರ ಪ್ರಸ್ತಾವನೆಗಳನ್ನು ಕೊಡುತ್ತಾ ಬಂದಿದೆಯೇ ಹೊರತು, ನಿರ್ಧಿಷ್ಟವಾಗಿ ಹಣಕಾಸು ಇಟ್ಟಿಲ್ಲ. ಜನರಲ್ಲಿ ಅನುಮಾನಗಳು ಮೂಡುವಂತಾಗಿದೆ.

ಕರ್ನಾಟಕದ ಬಜೆಟ್ ಎಲ್ಲಾ ಜನವರ್ಗದವರನ್ನು ಮುಂದಿನ ರಾಜ್ಯ ಚುನಾವಣೆಯತ್ತ ಸೆಳೆಯುವ ಪ್ರಯತ್ನವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಇದೆ ಛಾಯೆ ಕಂಡುಬರುತ್ತಿದೆ. ನೀರಾವರಿಗೆ ಒತ್ತು, ಕೃಷಿಗೆ ಸಂಬಂಧಿಸಿ ಘೋಷಿಸಿರುವ ಅಭಿವೃದ್ದಿ ಕಾರ್ಯಕ್ರಮಗಳು ಸ್ವಾಗತಾರ್ಹ. ಆದರೆ ಡಬಲ್ ಇಂಜಿನ್ ಸರ್ಕಾರಗಳು ಇದ್ದಲ್ಲಿ ಅಭಿವೃದ್ದಿ ಉತ್ತೇಜನ ಪಡೆಯುತ್ತದೆ ಎನ್ನುವ ಭಾವನೆ ಕರ್ನಾಟಕ ದೃಷ್ಟಿಯಿಂದ ನಿಜಕ್ಕೂ ಸೋತಿದೆ.

  • ಮಲ್ಲಿಕಾರ್ಜುನಪ್ಪ, ವಿಶ್ರಾಂತ ಪ್ರಾಂಶುಪಾಲರು, ಆರ್ಥಿಕ ಮತ್ತು ಶೈಕ್ಷಣಿಕ ಚಿಂತಕರು, ಚಿತ್ರದುರ್ಗ

ಇದನ್ನೂ ಓದಿ: ’ನಾನು ಅಧಿಕಾರಿಗಳಿಗೆ ಕರೆ ಮಾಡುತ್ತಲೇ ಇದ್ದೆ, ಯಾರು ಸ್ಪಂದಿಸಲಿಲ್ಲ’: ಗುಂಡೇಟಿಗೆ ಒಳಗಾಗಿರುವ ಭಾರತೀಯ ವಿದ್ಯಾರ್ಥಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...