Homeಮುಖಪುಟ‘ಕಾಂತರಾಜು ಆಯೋಗದ ವರದಿ ಸ್ವೀಕರಿಸುತ್ತೇನೆ…’; ಶೋಷಿತರ ಜಾಗೃತಿ ಸಮಾವೇಶದಲ್ಲಿ ಸಿಎಂ ಭರವಸೆ

‘ಕಾಂತರಾಜು ಆಯೋಗದ ವರದಿ ಸ್ವೀಕರಿಸುತ್ತೇನೆ…’; ಶೋಷಿತರ ಜಾಗೃತಿ ಸಮಾವೇಶದಲ್ಲಿ ಸಿಎಂ ಭರವಸೆ

- Advertisement -
- Advertisement -

‘ಕಾಂತರಾಜು ಆಯೋಗದ ವರದಿಯನ್ನು ಓದದೆಯೆ ಕೆಲವರು ವಿರೋಧ ಮಾಡುತ್ತಿದ್ದು, ವೈಜ್ಞಾನಿಕವಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನಾನು ವರದಿಯನ್ನು ಸ್ವೀಕಾರ ಮಾಡುತ್ತೇನೆ. ಏನಾದರೂ ಲೋಪಗಳಿದ್ದರೆ ತಜ್ಞರ ಅಭಿಪ್ರಾಯ ಪಡೆದು ಸರಿಪಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಿಸಿದರು.

ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಿ, ಜಾರಿ ಮಾಡಬೇಕು ಎಂದು ಒತ್ತಾಯಿಸಿ ಇಂದು ಚಿತ್ರದುರ್ಗದಲ್ಲಿ ನಡೆದ ‘ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶ’ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಆಯೋಗದ ವರದಿಯನ್ನು ಸ್ವೀಕರಿಸುವುದಾಗಿ ಭರವಸೆ ನೀಡಿದರು.

‘ಹಿಂದುಳಿದ ಜಾತಿಗಳ ಶಾಶ್ವತ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಕಾಂತರಾಜು ಅವರಿಗೆ ರಾಜ್ಯದ ಜನರ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕು ಎಂದು ನಾನು ಮುಖ್ಯಮಂತ್ರಿ ಆಗಿದ್ದಾಗ ಆದೇಶ ನೀಡಿದ್ದೆ. ಆಮೇಲೆ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ, ಬಿಜೆಪಿ ಸರ್ಕಾರದಲ್ಲೂ ಯಾವ ಮುಖ್ಯಮಂತ್ರಿಯೂ ವರದಿಯನ್ನು ಸ್ವೀಕರಿಸಲಿಲ್ಲ. ಈಗ ನೀವು ವರದಿ ಕೊಡಿ ಎಂದು ಆಯೋಗಕ್ಕೆ ಹೇಳಿದ್ದೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಎಲ್ಲ ರಾಜ್ಯಗಳಲ್ಲೂ ಜಾತಿ ಸಮೀಕ್ಷೆ ಮಾಡಿಸುತ್ತೇವೆ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧಿ ಹೇಳಿದ್ದಾರೆ. ನಮ್ಮ ಹೈಕಮಾಂಡ್ ಮಾತಿಗೆ ನಾವು ಒಪ್ಪಿಗೆ ಸೂಚಿಸುತ್ತೇವೆ. ನಾನು ಯಾವಾಗಲೂ ನಿಮ್ಮ ಪರವಾಗಿ ಇರುತ್ತೇನೆ.. ನಾನು ಯಾರ ವಿರೋಧಿಯೂ ಅಲ್ಲ, ಎಲ್ಲ ಮನುಷ್ಯರ ಪರವಾಗಿದ್ದೇನೆ’ ಎಂದು ಹೇಳಿದರು.

‘ಸಮಾಜದಲ್ಲಿ ಶೋಷಿತ ಸಮುದಾಯದ ಜನಸಂಖ್ಯೆ ಸಿಂಹಪಾಲು ಇದೆ. ಈ ಸಿಂಹಪಾಲು ಇರುವ ಜನರು ಶತಶತಮಾನಗಳಿಂದ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ಸಮುದಾಯಗಳ ಮೇಲೆ ಶೋಷಣೆ, ದೌರ್ಜನ್ಯ ನಡೆಯುತ್ತಲೇ ಇದೆ. ಜಾತಿ ವ್ಯವಸ್ಥೆಯ ಪರಿಣಾಮದಿಂದಾಗಿ ಬಹುಸಂಖ್ಯಾತರು ಅಕ್ಷರದಿಂದ ವಂಚಿತರಾಗುತ್ತಿದ್ದಾರೆ. ನಮ್ಮಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಇನ್ನೂ ಇದೆ. ಆ ಅಸಮಾನತೆಯ ಜಾತಿ ವ್ಯವಸ್ಥೆಯಿಂದ ನಿರಂತರವಾಗಿ ಶೋಷಿತ ಸಮುದಾಯಗಳ ಮೇಲೆ ಶೋಷಣೆ, ದೌರ್ಜನ್ಯ ನಡೆದಿದೆ; ಈಗಲೂ ಕೂಡ ನಡೆಯುತ್ತಲೆ ಇದೆ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ಸಂವಿಧಾನ ಕೊಟ್ಟರು. ಆ ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು; ಸರ್ವರಿಗೂ ಸಮಬಾಳು ಎಂದು ಹೇಳಿದೆ. ಎಲ್ಲರಿಗೂ ಸಮಾನ ಅವಕಾಶಗಳಿರಬೇಕು ಎಂದು ಪ್ರತಿಪಾದಿಸುತ್ತದೆ. ಇಲ್ಲಿ ಬುದ್ದ, ಬಸವ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ನಾರಾಯಣ ಗುರು, ಕನಕದಾಸರು, ಶಾಹು ಮಹಾರಾಜರು, ಜ್ಯೋತಿಬಾ ಫುಲೆ ಎಲ್ಲರೂ ಕೂಡ ಸಮಾಜದಲ್ಲಿ ಬದಲಾವಣೆ ತರುವುದಕ್ಕೆ ಪ್ರಯತ್ನ ಮಾಡಿದರು’ ಎಂದರು.

‘ಜಾತಿ ವ್ಯವಸ್ಥೆಯಿಂದ ಶೋಷಣೆ ನಡೆಯುತ್ತಿದೆ; ಇದನ್ನು ತೊಡೆದುಹಾಕಬೇಕು ಎಂದು ಈ ಮಹನೀಯರು ಪ್ರಯತ್ನ ಮಾಡಿದರು. ಅದೇ ಆಶಯವನ್ನು ನಮ್ಮ ಸಂವಿಧಾನ ಕೂಡ ಪ್ರತಿಪಾದಿಸುತ್ತದೆ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಸಮಾನತೆ ಮತ್ತು ಎಲ್ಲರಿಗೂ ಸಮಾನ ಅವಕಾಶ ಸಿಗಬಾರದು ಎಂದು ಬಯಸುತ್ತಾರೆ. ಸಮಾಜ ಬದಲಾದರೆ ಶೋಷಣೆ, ದೌರ್ಜನ್ಯಕ್ಕೆ ಅವಕಾಶ ಇಲ್ಲ ಎಂಬುದು ಅವರ ಆತಂಕ’ ಎಂದು ವಾಗ್ದಾಳಿ ನಡೆಸಿದರು.

‘ಸಮಾನತೆ ತರುವುದಕ್ಕಾಗಿ ಬಸವಣ್ಣನವರ ಕಾಲದಿಂದ, ನಾಲ್ವಡಿ, ಶಾಹು ಮಹಾರಾಜರು ಹೋರಾಡಿ, ಮೀಸಲಾತಿ ಜಾರಿ ಮಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರು ಮಿಲ್ಲರ್ ಆಯೋಗ ರಚನೆ ಮಾಡಿ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಶೇ.85 ಮೀಸಲಾತಿ ಜಾರಿ ಮಾಡಿದರು’ ಎಂದು ವಿವರಿಸಿದರು.

‘ಸಮಾಜದಲ್ಲಿ ಅಸಮಾನತೆ ಇದೆ, ಮೇಲ್ವರ್ಗ- ಕೆಳವರ್ಗ ಇದೆ. ಇದು ನಿವಾರಣೆ ಆಗಬೇಕಾದರೆ ಸಮಾನತೆ ಜಾರಿಯಾಗಬೇಕು; ಸಂಪತ್ತಿನ ಸಮಾನ ಹಂಚಿಕೆ ಆಗಬೇಕು. ಮೀಸಲಾತಿ ಯಾರ ಸ್ವತ್ತನ್ನೂ ಕಿತ್ತುಕೊಳ್ಳುವುದಲ್ಲ, ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕೆನ್ನುವುದು ಅದರ ಉದ್ದೇಶ. ಆದರೆ ಮೀಸಲಾತಿಗೆ ಬಿಜೆಪಿ-ಆರ್‌ಎಸ್‌ಎಸ್‌ ಬಿಜೆಪಿ ವಿರೋಧ ಇದೆ. ಇತಿಹಾಸವನ್ನೆ ನೋಡಿ, ಮಂಡಲ್ ಆಯೋಗದ ವರದಿ ಜಾರಿ ಆದಾಗ, ಈಗ ಶ್ರೀರಾಮನ್ನು ರಾಜಕೀಯಕ್ಕ ಬಳಸುತ್ತಿರುವವರು ವಿರೋಧಿಸಿದ್ದರು. ಅವರು ಮಂಡಲ್ ವರದಿಯನ್ನು ಯಾಕೆ ವಿರೋಧಿಸಿದರು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮಂಡಲ್ ವರದಿ ಜಾರಿ ಮಾಡಲು ನಿರ್ಧರಿಸಿದ, ಅಂದಿನ ಪ್ರಧಾನಿ ವಿ.ಪಿ. ಸಿಂಗ್ ವರದಿ ಸ್ವೀಕರಿಸಿದರು, ಅದನ್ನು ನರಸಿಂಹರಾವ್ ಜಾರಿ ಮಾಡಿದರು’ ಎಂದು ನೆನಪಿಸಿದರು.

‘ಅಂದಿನಿಂದಲೂ ಆರ್‌ಎಸ್‌ಎಸ್‌-ಬಿಜೆಪಿ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಿದ್ದಾರೆ. ಶಿಕ್ಷಣ, ಅರೋಗ್ಯ, ಅಧಿಕಾರ ಮತ್ತು ಸಂಪತ್ತಿನಲ್ಲಿ ಪಾಲು ಸಿಗಬೇಕು ಎಂದು ಮಂಡಲ್ ವರದಿ ಹೇಳುತ್ತದೆ’ ಎಂದರು.

ಕುರಿ ಕಾಯುವವನ ಮಗ ಸಿಎಂ ಆದರೆ ವಿರೋಧಿಸುತ್ತಾರೆ:

‘ಬಲಾಡ್ಯರ ಕೈನಲ್ಲಿ ಅಧಿಕಾರ ಇದ್ದರೆ ಶೋಷಿತ ಸಮುದಾಯಗಳಿಗೆ ಮಾರಕ ಎಂದು ಅಂಬೇಡ್ಕರ್ ಹೇಳಿದ್ದರು. ಆದ್ದರಿಂದ, ಕುರಿ ಕಾಯುವವನ ಮಗ ಮುಖ್ಯಮಂತ್ರಿ ಆಗಿದ್ದಾನೆ ಎಂದು ನನ್ನನ್ನು ವಿರೋಧಿಸುತ್ತಾರೆ. 17 ಬಜೆಟ್‌ಗಳನ್ನು ಮಂಡಿಸಿದ ಎಂದು ವಿರೋಧಿಸುತ್ತಾರೆ. ವಿರೋಧಿಸಲು ನಾನು ಏನು ತಪ್ಪು ಮಾಡಿದ್ದೇನೆ? ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದ್ದು ತಪ್ಪಾ, ಹಲವು ಭಾಗ್ಯಗಳನ್ನು ನೀಡಿದ್ದು ಸಿದ್ದರಾಮಯ್ಯ ತಪ್ಪಾ? ಗ್ಯಾರಂಟಿ ಯೋಜನೆಗಳು ದಲಿತರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಕೊಡುತ್ತದೆ. ಆದ್ದರಿಂದ, ಅವರು (ಬಿಜೆಪಿಗರು) ನನ್ನನ್ನು ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯ ಏನೇ ಇರಬಹುದು; ನಾವೆಲ್ಲರೂ ಅಣ್ಣತಮ್ಮಂದಿರು, ಸಮಾನ ದುಃಖಿಗಳು’ ಎಂದರು.

‘ಆದರೆ, ಸುಖ ಅನುಭವಿಸುತ್ತಿರುವವರು ನಮಗೆ ಅವಕಾಶ ಸಿಗ್ತಾ ಇಲ್ಲ ಎನ್ನುತ್ತಿದ್ದಾರೆ. ಕೆಲವರಿಗೆ ಜಾತಿ ವ್ಯವಸ್ಥೆಯೆ ಮೀಸಲಾತಿ. ಅದರಿಂದ ಅವರು ಸಂಪತ್ತು, ಉದ್ಯೋಗ, ವಿದ್ಯೆ ಸೇರಿದಂತೆ ಎಲ್ಲ ಅವಕಾಶ ಪಡೆದುಕೊಂಡಿದ್ದಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸುವವರೆಗೆ ಇಂಥ ಸಮಾವೇಶಗಳು ಅಗತ್ಯ. ಮುಂದುವರಿದ ಜಾತಿಗಳು ಸಮಾವೇಶ ಮಾಡಿದರೆ ಜಾತಿ ಸಮಾವೇಶ ಆಗುತ್ತದೆ. ಅನ್ಯಾಯಕ್ಕೆ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾದ ಜನ ಸಂಘಟನೆಗೋಸ್ಕರ ಸಮಾವೇಶ ಮಾಡಿದರೆ, ಅದು ಇಂದಿನ ಅತ್ಯಗತ್ಯ, ಅನಿವಾರ್ಯ. ಜಾತಿ ವ್ಯವಸ್ಥೆ ಚಾಲ್ತಿಯಲ್ಲಿರುವವರೆಗೆ ಇಂಥ ಸಮಾವೇಶಗಳು ಅನಿವಾರ್ಯ, ಇದನ್ನು ಮುಂದುವರಿಸುವ ಕೆಲಸ ನಾವು ಮಾಡಬೇಕಾಗುತ್ತದೆ’ ಎಂದು ಹೇಳಿದರು.

ನೀವೆ ದೇವಸ್ಥಾನ ಕಟ್ಟಿಕೊಳ್ಳಿ:

ಅಸ್ಪೃಶ್ಯತೆ ಆಚರಣೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಯಾವ ದೇವಸ್ಥಾನಗಳಿಗೆ ನಿಮಗೆ ಪ್ರವೇಶ ಇಲ್ಲವೋ, ಅಲ್ಲಿಗೆ ನೀವು ಹೋಗಲೇಬೇಡಿ. ನೀವೆ ಒಂದು ದೇವಸ್ಥಾನ ಕಟ್ಟಿಕೊಂಡು, ನೀವೇ ಪೂಜಾರಿಗಳಾಗಿ. ದೇವರು ಬೇಡ ಅನ್ನಲ್ಲ, ಇಂಥ ಜಾತಿಗಳೆ ಪೂಜೆ ಮಾಡಿ ಅಂತ ದೇವರು ಎಲ್ಲೂ ಹೇಳಿಲ್ಲ. ಏಕೆಂದರೆ, ದೇವರು ಸರ್ವಾಂತರ್ಯಾಮಿ. ಆದರೆ, ಈ ಬಿಜೆಪಿ-ಆರ್‌ಎಸ್‌ಎಸ್‌ನವರು ಜಾತಿ, ದೇವರು ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಛಿದ್ರ ಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ವಾಗ್ದಾಳಿ ನಡೆಸಿದರು.

ಸ್ವಾಭಿಮಾನ ಬೆಳೆಸಿಕೊಳ್ಳಿ:

‘ಶಿಕ್ಷಣ, ಸಂಘಟನೆ, ಹೋರಾಟ’ ಈ ಮೂರು ಮಂತ್ರಗಳನ್ನು ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ಹೇಳಿದ್ದಾರೆ. ನಮಗೆ ನ್ಯಾಯ ಸಿಗಬೇಕಾದರೆ ಎಲ್ಲರೂ ಶಿಕ್ಷಿತರಾಗಬೇಕು; ಇವತ್ತಿಗೂ ಈ ಶೋಷಿತ ಸಮುದಾಯಗಳಲ್ಲಿ ನೂರಕ್ಕೆ ನೂರು ಶಿಕ್ಷಣ ಸಿಕ್ಕಿಲ್ಲ. ಇನ್ನೂ ಶೇ.28ರಷ್ಟು ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಿಕ್ಷಣ ಪಡೆದುಕೊಂಡು ಸ್ವಾಭಿಮಾನ ಬೆಳೆಸಿಕೊಳ್ಳಿ.. ಧೈರ್ಯವಾಗಿರಿ, ನಿಮಗೆ ಸಂವಿಧಾನ ರಕ್ಷಣೆಯನ್ನು ನೀಡುತ್ತದೆ. ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ’ ಎಂದು ಸಿಎಂ ಶೋಷಿತ ಸಮುದಾಯಗಳಿಗೆ ಕಿವಿಮಾತು ಹೇಳಿದರು.

‘ಅಂಬೇಡ್ಕರ್ ಅವರ ಸಂವಿಧಾನದಿಂದ ನಾನು ಎರಡನೆ ಅವಧಿಗೆ ಮುಖ್ಯಮಂತ್ರಿ ಆಗಿದ್ದೇನೆ. ನಾವು ನಮ್ಮ ಕಾರ್ಯಕ್ರಮಗಳನ್ನು ಜಾತಿ-ಧರ್ಮದ ಮೇಲೆ ವಿಂಗಡಿಸಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮೀಸಲಾತಿ ವಿರೋಧಿಸುವವರು ನಮ್ಮ ವೈರಿಗಳು.. ಇದನ್ನು ನಾವು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ನಮಗೆ ಮಿತ್ರರು ಯಾರು? ಶತೃಗಳು ಯಾರು? ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇವರ ಪರವಾಗಿ ನಾವು ಯಾವ ಕಾರಣಕ್ಕೂ ನಿಲ್ಲಬಾರದು. ಸಂವಿಧಾನ, ಪ್ರಜಾಪ್ರಭುತ್ವದ ಪರವಾಗಿರುವರ ಜೊತೆ ನಾವು ನಿಲ್ಲಬೇಕು’ ಎಂದರು.

‘ಈ ಸಮಾವೇಶವನ್ನು ಸಂಘಟಿಸಿದ ಕೆ.ಎಂ. ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಎಂಆರ್ ಸೀತಾರಾಮ್, ನಜೀರ್ ಅಹಮದ್ ಸೇರಿದಂತೆ ಇನ್ನೂ ಅನೇಕ ಮುಖಂಡರು ದೊಡ್ಡ ಸಮಾವೇಶಕ್ಕೆ ಜನರನ್ನು ಸೇರಿಸಿದ್ದಾರೆ. ಅದಕ್ಕಾಗಿ ಈ ಸಮಾವೇಶವನ್ನು ಸಂಘಟಿಸಿದ ಎಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇದು ರಾಜಕೀಯ ಪಕ್ಷದ ಸಮಾವೇಶ ಅಲ್ಲ; ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳು ಏರ್ಪಡಿಸಿರುವ ಸಮಾವೇಶ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇದನ್ನೂ ಓದಿ; ಬಸವಲಿಂಗಪ್ಪ-ಪ್ರೊ. ಬಿ. ಕೃಷ್ಣಪ್ಪ ಅವರನ್ನು ‘ಕರ್ನಾಟಕ ರತ್ನ’ ಎಂದು ಘೋಷಿಸಿ: ಮಾವಳ್ಳಿ ಶಂಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...