ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತವಿರೋಧಿ ಕಾನೂನುಗಳನ್ನು ಖಂಡಿಸಿ ಕರ್ನಾಟಕ ಕಾಂಗ್ರೆಸ್ ಪಕ್ಷದ ವತಿಯಿಂದ ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ರೈತ ಸಮ್ಮೇಳನದಲ್ಲಿ ಸಿದ್ದರಾಮಯ್ಯ ಮಾತನಾಡಿ, “ನಾವು ಅಧಿಕಾರಕ್ಕೆ ಬಂದರೆ ದೇವರಾಜ ಅರಸು ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರುತ್ತೇವೆ” ಎಂದು ವಾಗ್ದಾನ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕೆಪಿಸಿಸಿ ವತಿಯಿಂದ ಮಂಡ್ಯದಲ್ಲಿ ನಿನ್ನೆ ಆಯೋಜಿಸಿದ್ದ ರೈತ ಸಮ್ಮೇಳನದಲ್ಲಿ, ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸರ್ಜೆವಾಲ, ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ನ ಹಲವು ನಾಯಕರು ಭಾಗಿಯಾಗಿದ್ದರು.
ಇದನ್ನೂ ಓದಿ: ರೈತ ವಿರೋಧಿ ಕಾಯ್ದೆ ವಿರುದ್ದ ರಾಜ್ಯದಾದ್ಯಂತ ಪ್ರತಿಭಟನೆ; ಹೋರಾಟದ ಝಲಕ್
ಇದರ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ನಾನು ರೈತ ಕುಟುಂಬದಲ್ಲೇ ಹುಟ್ಟಿದವನು. 1980 ರಿಂದ 83ರವರೆಗೆ ಮೈಸೂರು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಈ ನೆಲದ ರೈತರ ಬದುಕು-ಬವಣೆ, ಕಷ್ಟ-ಸುಖಗಳನ್ನು ಕಣ್ಣಾರೆ ಕಂಡಿದ್ದೇನೆ, ಅನುಭವಿಸಿದ್ದೇನೆ. ಹಾಗಾಗಿ ರೈತರ ಪರ ಸದಾ ನಿಲ್ಲುವ ಬದ್ಧತೆ ನನ್ನಲ್ಲಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕೃಷಿ ಬೆಲೆ ಆಯೋಗ ರಚನೆ ಮತ್ತು ಎಪಿಎಂಸಿ ಮಾರುಕಟ್ಟೆಗಳಲ್ಲಿ ಆನ್ಲೈನ್ ಪದ್ಧತಿ ಜಾರಿಗೊಳಿಸಿದೆ. ಕಬ್ಬು ಬೆಳೆಗಾರರು ನಷ್ಟಕ್ಕೀಡಾದಾಗ ಟನ್ಗೆ ತಲಾ ರೂ.300 ರಂತೆ ಸುಮಾರು ರೂ.1,800 ಕೋಟಿ ಬೆಂಬಲ ಬೆಲೆ ನೀಡಿ ಖರೀದಿಸಿದ್ದು ನಮ್ಮ ಸರ್ಕಾರ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆರ್ಸಿಇಪಿ ಬಿಜೆಪಿ ಸರ್ಕಾರದ ರೈತ ವಿರೋಧಿ ಒಪ್ಪಂದ, ರೈತರಿಗೆ ಮರಣಶಾಸನ: ಸಿದ್ದರಾಮಯ್ಯ
ನಾವು ಅಧಿಕಾರಕ್ಕೆ ಬಂದಮೇಲೆ ದೇವರಾಜ ಅರಸು ಅವರು ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯಿದೆಯನ್ನು ಯಥಾವತ್ತಾಗಿ ಮರಳಿ ಜಾರಿಗೆ ತರುತ್ತೇವೆ, ಎಪಿಎಂಸಿ ಗಳನ್ನು ಇನ್ನಷ್ಟು ರೈತಸ್ನೇಹಿ ಮತ್ತು ಪಾರದರ್ಶಕವಾಗಿಸುತ್ತೇವೆ ಎಂಬ ವಾಗ್ದಾನವನ್ನು ನಾಡಿನ ಎಲ್ಲ ರೈತರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ನೀಡುತ್ತಿದ್ದೇನೆ. 8/8#ರೈತಧ್ವನಿ
— Siddaramaiah (@siddaramaiah) October 10, 2020
ಇದನ್ನೂ ಓದಿ: ಮಂಡ್ಯ: ರೈತ ಮಸೂದೆಗಳನ್ನು ವಿರೋಧಿಸಿ ರಾಜ್ಯ ಮಟ್ಟದ ಬೃಹತ್ ಸಮಾವೇಶ
“ಅಂದು ನಾವು ಕೃಷಿ ಉತ್ಪನ್ನ ಮಾರುಕಟ್ಟೆಗಳ ಆನ್ಲೈನ್ ಪದ್ಧತಿಯನ್ನು ಜಾರಿಗೊಳಿಸಿದಾಗ ಅದನ್ನು ಹೊಗಳಿ, ದೇಶದ ಇತರೆ ರಾಜ್ಯಗಳಿಗೂ ಅಳವಡಿಕೆ ಮಾಡುವಂತೆ ತನ್ನ ಬಜೆಟ್ನಲ್ಲೇ ಸಲಹೆ ನೀಡಿದ್ದ ಕೇಂದ್ರದ ಬಿಜೆಪಿ ಸರ್ಕಾರವೇ ಇಂದು ಎಪಿಎಂಸಿಗಳ ಬಾಗಿಲು ಮುಚ್ಚಲು ಹೊರಟಿರುವುದು ವಿಪರ್ಯಾಸವಲ್ಲವೇ? ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಆದರೆ ರೈತರಿಂದ ಭೂಮಿಯನ್ನು ಕಸಿದು ಯಾರಿಗೆ ಕೊಡಲು ಹೊರಟಿದ್ದೀರಿ ಎಂಬುದನ್ನೂ ಜನರಿಗೆ ಹೇಳಬೇಕಲ್ಲವೇ ಮಿಸ್ಟರ್ ಯಡಿಯೂರಪ್ಪ ಅವರೇ? ಭೂ ಸುಧಾರಣಾ ಕಾಯಿದೆಯ ಉಲ್ಲಂಘನೆ ಮಾಡಿ ಕೃಷಿ ಭೂಮಿ ಖರೀದಿಸಿರುವ 1814 ಪ್ರಕರಣಗಳು ನ್ಯಾಯಾಲಯದಲ್ಲಿವೆ, ಒಟ್ಟು ಭೂಮಿಯ ಮೌಲ್ಯ ಸುಮಾರು ರೂ.50,000 ಕೋಟಿ ಆಗಲಿದೆ. ಕಾಯ್ದೆ ತಿದ್ದುಪಡಿಯಿಂದ ಈ ಎಲ್ಲಾ ಪ್ರಕರಣಗಳು ರದ್ದಾಗುತ್ತದೆ. ಈ ಹಗರಣದಲ್ಲಿ ನಿಮ್ಮ ಪಾಲೆಷ್ಟು ಮಿಸ್ಟರ್ ಯಡಿಯೂರಪ್ಪ ಅವರೇ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸುವ ರೈತರನ್ನು ಭಯೋತ್ಪಾದಕರು ಎಂದ ನಟಿ ಕಂಗನಾ!
“ಧ್ವನಿ ಮತದ ಮೂಲಕ ಸಂಸತ್ತಿನಲ್ಲಿ ಮಸೂದೆ ಪಾಸಾದರೂ, ಅದನ್ನು ಜನರ ಧ್ವನಿ ಎದುರು ಗೆಲ್ಲಲು ಬಿಡಬಾರದು. ಈ ಹೋರಾಟದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗಿಯಾಗಬೇಕು. ನಾವು ಮಣ್ಣಿನ ಮಕ್ಕಳು ಅಂತ ಹೇಳಿ ಮನೆಯಲ್ಲಿ ಕೂತರೆ ಆಗಲ್ಲ. ಬೀದಿಗಿಳಿದರೆ ಮಾತ್ರ ಆಡಿದ ಮಾತಿಗೆ ಬೆಲೆ ಬರುತ್ತೆ. ನಾವು ಅಧಿಕಾರಕ್ಕೆ ಬಂದಮೇಲೆ ದೇವರಾಜ ಅರಸು ಅವರು ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯಿದೆಯನ್ನು ಯಥಾವತ್ತಾಗಿ ಮರಳಿ ಜಾರಿಗೆ ತರುತ್ತೇವೆ. ಎಪಿಎಂಸಿಗಳನ್ನು ಇನ್ನಷ್ಟು ರೈತಸ್ನೇಹಿ ಮತ್ತು ಪಾರದರ್ಶಕವಾಗಿಸುತ್ತೇವೆ ಎಂಬ ವಾಗ್ದಾನವನ್ನು ನಾಡಿನ ಎಲ್ಲ ರೈತರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ನೀಡುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ರಾಹುಲ್ ಗಾಂಧಿಯವರೂ ಕೂಡ ಪಂಜಾಬ್ನಲ್ಲಿ ರೈತವಿರೋಧಿ ಕಾನೂನುಗಳನ್ನು ವಿರೋಧಿಸಿ ಹೋರಾಡುತ್ತಿರುವಾಗ, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಈ ಕರಾಳ ಕಾಯ್ದೆಗಳನ್ನು ನಿಷೇಧಿಸುತ್ತೇವೆ” ಎಂದು ಹೇಳಿದ್ದರು.
ಇದನ್ನೂ ಓದಿ: ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ, ಯಡಿಯೂರಪ್ಪನವರ ಕುರ್ಚಿ ಉಳಿಯುವುದಿಲ್ಲ: ಬಡಗಲಪುರ ನಾಗೇಂದ್ರ