ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು ಅದರ ಪರಿಣಾಮಗಳು ಹಲವಾರು ರೀತಿಯಲ್ಲಿ ನಮ್ಮ ಮೇಲೆ ಆಗುತ್ತಿವೆ. ಕೊರೊನಾ ಸಾಂಕ್ರಾಮಿಕದಿಂದ ಜಾರಿಗೊಳಿಸಲಾದ ಲಾಕ್ಡೌನ್ ಜನರ ಜೀವನವನ್ನು ಮತ್ತಷ್ಟು ಬುಡಮೇಲು ಮಾಡಿದೆ.
ಲಾಖ್ಡೌನ್ನಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ, ಉಪವಾಸದಿಂದ ನರಳಿದವರ ಸಂಖ್ಯೆ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ. ಇದರ ಪರಿಣಾಮ ಕೆಲಸ ಏನೇ ಆಗಿರಲಿ ಸರ್ಕಾರಿ ಹುದ್ದೆ ಬೇಕು ಎನ್ನುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಸದ್ಯಕ್ಕೆ ಪಶ್ಚಿಮ ಬಂಗಾಳದ ಘಟನೆ.
ಇದನ್ನೂ ಓದಿ: ಪ್ರಧಾನಿ ವಿರುದ್ಧ ಹೆಚ್ಚಿದ ಆಕ್ರೋಶ: ಉದ್ಯೋಗಕ್ಕಾಗಿ ತಟ್ಟೆ, ಲೋಟ ಬಡಿಯುತ್ತಿರುವ ಯುವಸಮೂಹ!
ಪಶ್ಚಿಮ ಬಂಗಾಳ ಸರ್ಕಾರವು ವನ್ಯಜೀವಿಗಳನ್ನು ರಕ್ಷಿಸಲು ಮತ್ತು ಮನುಷ್ಯ ಹಾಗೂ ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟಲು 2,000 ಅರಣ್ಯ ಸಹಾಯಕರನ್ನು (Bana Sahayaks) ಒಪ್ಪಂದದ ಆಧಾರದ ಮೇಲೆ ನೇಮಿಸಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ಪಿಎಚ್.ಡಿ ಪದವೀಧರರು, ಸ್ನಾತಕೋತ್ತರ ಪದವೀಧರರು, ಎಂಜಿನಿಯರಿಂಗ್ ಪದವೀಧರರೂ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಲ್ಡಾ ಅರಣ್ಯ ವಿಭಾಗದ ವಲಯ ಅಧಿಕಾರಿ ಸುಭೀರ್ ಕುಮಾರ್ ಗುಹಾ ನಿಯೋಗಿ ತಿಳಿಸಿದರು.
ಈ ಹುದ್ದೆಗೆ ಅರ್ಜಿ ಸಲ್ಲಿಸಿರುವ ಇತಿಹಾಸದಲ್ಲಿ ಸ್ನಾತಕೋತ್ತರ ಪದವೀಧರರಾದ ಸುದೀಪ್ ಮೊಯಿತ್ರಾ ಹೇಳುವಂತೆ ’ಒಪ್ಪಂದದ ಆಧಾರದ ಮೇಲಿನ ಕೆಲಸವಾದರೂ ಸರ್ಕಾರಿ ಉದ್ಯೋಗಕ್ಕೆ ಆದ್ಯತೆ ನೀಡುತ್ತೇನೆ. ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕಡಿಮೆ ವಿದ್ಯಾರ್ಹತೆಯ ಹುದ್ದೆಯಾದರೂ ಪರವಾಗಿಲ್ಲ’ ಎನ್ನುತ್ತಾರೆ.
’ಸದ್ಯ ಮಾರುಕಟ್ಟೆಯಲ್ಲಿ ಉದ್ಯೋಗ ಸಿಗುವುದು ಕಷ್ಟವಾಗಿದೆ. ಸಾಂಕ್ರಾಮಿಕದಿಂದ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಖಾಸಗಿ ಸಂಸ್ಥೆಗಳು ಹೊಸ ನೇಮಕಾತಿಗಳನ್ನು ಮಾಡುತ್ತಿಲ್ಲ. ಹೀಗಾಗಿ ಎಂತಹ ಸರ್ಕಾರಿ ಹುದ್ದೆಯಾದರೂ ನಾನು ಸ್ವೀಕರಿಸುತ್ತೇನೆ’ ಎನ್ನುತ್ತಾರೆ.
ಇದನ್ನೂ ಓದಿ: ಹೆಚ್ಚಿದ ನಿರುದ್ಯೋಗ: ಗುಜರಾತ್ನಲ್ಲಿ ಜವಾನ ಹುದ್ದೆಗೆ ಆಯ್ಕೆಯಾದ ವೈದ್ಯಕೀಯ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವೀಧರರು.!
“ಪ್ರಸ್ತುತ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಏನನ್ನೂ ಮಾಡದೆ ಮನೆಯಲ್ಲಿ ಇರುವುದಕ್ಕಿಂತ ಕೆಲವು ಸಾವಿರ ರೂಪಾಯಿಗಳಿಗೆ ಸಂಬಳದೊಂದಿಗೆ ಉದ್ಯೋಗದಲ್ಲಿರುವುದು ಉತ್ತಮ” ಎಂದು ಅರ್ಥಶಾಸ್ತ್ರದಲ್ಲಿ ಎಂಎಸ್ಸಿ ಮಾಡಿರುವ ರಕ್ತೀಮ್ ಚಂದಾ ತಿಳಿಸುತ್ತಾರೆ.
“ಸಂಶೋಧಕರಂತಹ ಉನ್ನತ ವ್ಯಾಸಂಗ ಮಾಡಿದ ಅರ್ಹ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದರೆ ನಾವು ಏನು ಮಾಡಲು ಸಾಧ್ಯ..? ಈ ಸ್ಥಿತಿಯಲ್ಲಿ ನಾವು ಅವರನ್ನು ತಡೆಯಲು ಸಾಧ್ಯವಿಲ್ಲ” ಎಂದು ಕೋಲ್ಕತ್ತಾದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಜರಾತ್ ಹೈಕೋರ್ಟ್ ಸೇರಿದಂತೆ ಅಧೀನ ನ್ಯಾಯಾಲಯದಲ್ಲಿ ಖಾಲಿ ಇದ್ದ 1,149 ಪಿಯುನ್ (ಜವಾನ) ಬೆಲೀಫ್ ಹಾಗೂ ಬಿಯರರ್ಸ್ ಹುದ್ದೆಗಳಿಗಾಗಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೇಮಕಗೊಂಡವರ ಪೈಕಿ 7 ಜನ ವೈದ್ಯಕೀಯ ಪದವೀಧರರು, 450 ಎಂಜಿನಿಯರ್ಗಳು, 543 ಸ್ನಾತಕೋತ್ತರ ಪದವೀಧರರಿದ್ದಾರೆ.
ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು “ರಾಷ್ಟ್ರೀಯ ನಿರುದ್ಯೋಗ ದಿನ”ವನ್ನಾಗಿ ಯುವಜನತೆ ಆಚರಿಸಿತ್ತು. ನಿರೀಕ್ಷೆಗೂ ಮೀರಿ ನೆಟ್ಟಿಗರು ಈ ಅಭಿಯಾನದಲ್ಲಿ ಪಾಲ್ಗೊಂಡು #NationalUnemploymentDay ಎಂಬ ಹ್ಯಾಶ್ಟ್ಯಾಗ್ ಬಳಸಿ ಲಕ್ಷಾಂತರ ಟ್ವೀಟ್ಗಳನ್ನು ಮಾಡಿದ್ದರು.