ಭಾರತ-ಮ್ಯಾನ್ಮಾರ್ ಗಡಿಯಲ್ಲಿನ ಪರಿಸ್ಥಿತಿ ಮತ್ತು ಜಮ್ಮು-ಕಾಶ್ಮೀರದ ರಾಜೌರಿ-ಪೂಂಚ್ ಸೆಕ್ಟರ್ನಲ್ಲಿನ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಸೇನಾ ಮುಖ್ಯಸ್ಥ (COAS) ಜನರಲ್ ಮನೋಜ್ ಪಾಂಡೆ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಸೇನಾ ವಾರ್ಷಿಕ ದಿನದ ಪ್ರಯುಕ್ತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಂಡೆ, ಭಾರತದ ಗಡಿಗಳಲ್ಲಿ ಚಾಲ್ತಿಯಲ್ಲಿರುವ ಭದ್ರತಾ ಸನ್ನಿವೇಶಗಳ ಬಗ್ಗೆ ವಿವರಣೆ ನೀಡಿದರು. ಉತ್ತರದ ಗಡಿಯಲ್ಲಿ, ವಿಶೇಷವಾಗಿ ಲಡಾಖ್ನಲ್ಲಿ ಪರಿಸ್ಥಿತಿ ಸ್ಥಿರವಾಗಿದೆ; ಆದರೆ ಸೂಕ್ಷ್ಮವಾಗಿದೆ’ ಎಂದು ಹೇಳಿದರು.
‘ನಾವು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತನಾಡುವುದನ್ನು ಮುಂದುವರಿಸುತ್ತೇವೆ, ಜಾರಿಯಲ್ಲಿರುವ ಪ್ರೋಟೋಕಾಲ್ಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ಉಳಿದಿರುವ ಸಮಸ್ಯೆಗಳಿಗೆ ಸಮತೋಲನ ಪರಿಹಾರವನ್ನು ಕಂಡುಹಿಡಿಯುತ್ತೇವೆ’ ಎಂದು ಅವರು ಹೇಳಿದರು.
ವ್ಯಾಪಕವಾದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ನಂತರವೂ ಚೀನಾ ಮತ್ತು ಭಾರತದ ದೇಶಗಳ ನಡುವೆ ಪೂರ್ವ ಲಡಾಖ್ನಲ್ಲಿ ಕೆಲವು ಘರ್ಷಣೆ ಮುಂದುವರಿದಿದೆ. ‘ಸೇನಾ ಪಡೆಗಳ ದೃಢ, ಸಮತೋಲಿತ ನಿಯೋಜನೆಯೊಂದಿಗೆ ಕಾರ್ಯಾಚರಣೆಯ ಸನ್ನದ್ಧತೆಯು ಉನ್ನತ ಮಟ್ಟದಲ್ಲಿ ಮುಂದುವರಿಯುತ್ತದೆ’ ಎಂದು ಪಾಂಡೆ ಭರವಸೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಜನರಲ್ ಪಾಂಡೆ, ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮ ಉಲ್ಲಂಘೆನಯಾಗುತ್ತಿರುವ ಬಗ್ಗೆ ಗಮನ ಸೆಳೆದರು. ‘ಒಳನುಸುಳುವಿಕೆ ಯತ್ನಗಳ ಹೊರತಾಗಿಯೂ, ಭಾರತೀಯ ಸೇನೆಯು ಅಂತಹ ಪ್ರಯತ್ನಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿದೆ. ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಪ್ರಬಲವಾದ ಡ್ರೋನ್ ಕಾರ್ಯವಿಧಾನವು ಸೇನಾ ಯಶಸ್ಸಿಗೆ ಕಾರಣವಾಗಿದೆ’ ಎಂದು ಹೇಳಿದರು.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟಾರೆ ಹಿಂಸಾಚಾರದ ಘಟನೆಗಳು ಕಡಿಮೆಯಾಗಿವೆ. ಆದರೆ, ರಜೌರಿ-ಪೂಂಚ್ ವಲಯದಲ್ಲಿ ಇಂತಹ ಘಟನೆಗಳು ಹೆಚ್ಚಿವೆ’ ಎಂದು ಜನರಲ್ ಪಾಂಡೆ ಹೇಳಿದರು.
ಕಳೆದ 5-6 ತಿಂಗಳುಗಳಲ್ಲಿ ರಾಜೌರಿ ಮತ್ತು ಪೂಂಚ್ನಲ್ಲಿನ ಪರಿಸ್ಥಿತಿ ಮತ್ತು ಭಯೋತ್ಪಾದಕ ಚಟುವಟಿಕೆಗಳು ನಮಗೆ ಕಳವಳಕಾರಿ ವಿಷಯವಾಗಿದೆ. 2003ರ ಹೊತ್ತಿಗೆ, ಈ ಪ್ರದೇಶದಲ್ಲಿ ಭಯೋತ್ಪಾದನೆ ಸಂಪೂರ್ಣವಾಗಿ ಹರಡಿತು. 2017-18 ರವರೆಗೆ ಅಲ್ಲಿ ಶಾಂತಿ ಸ್ಥಾಪಿಸಲಾಯಿತು. ಕಣಿವೆಯಲ್ಲಿ ಶಾಂತಿ ನೆಲೆಸಿರುವ ಕಾರಣ, ನಮ್ಮ ವಿರೋಧಿಗಳು ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಜನರಲ್ ಪಾಂಡೆ ಹೇಳಿದರು.
ಇಂಡೋ-ಮ್ಯಾನ್ಮಾರ್ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಜನರಲ್ ಪಾಂಡೆ, ಮ್ಯಾನ್ಮಾರ್ ಸೇನೆ ಮತ್ತು ಜನಾಂಗೀಯ ಸಶಸ್ತ್ರ ಸಂಘಟನೆಗಳ ಚಟುವಟಿಕೆಗಳ ಪ್ರಭಾವವನ್ನು ಎತ್ತಿ ತೋರಿಸಿದರು. ಮ್ಯಾನ್ಮಾರ್ ಸೇನೆಯ ಸಿಬ್ಬಂದಿ ಮತ್ತು ಭೂತಾನ್ ನಾಗರಿಕರು ಭಾರತೀಯ ಪ್ರದೇಶಗಳಲ್ಲಿ ಆಶ್ರಯ ಪಡೆಯುವ ನಿದರ್ಶನಗಳನ್ನು ಅವರು ಗುರುತಿಸಿದ್ದಾರೆ.
‘ನಮ್ಮಲ್ಲಿ ಕೆಲವು ಬಂಡುಕೋರ ಗುಂಪುಗಳಿವೆ, ಅವರು ಒತ್ತಡವನ್ನು ಅನುಭವಿಸುತ್ತಿದ್ದಾರೆ ಮತ್ತು ಅವರು ಈಗ ಮಣಿಪುರ ರಾಜ್ಯದ ಗಡಿಯ ನಮ್ಮ ಭಾಗಕ್ಕೆ ಬರಲು ಪ್ರಯತ್ನಿಸಿದ್ದಾರೆ. ಅದು ಮಣಿಪುರದ ಪರಿಸ್ಥಿತಿಯೊಂದಿಗೆ ಸೇರಿಕೊಳ್ಳುವುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಸುಮಾರು 20 ಅಸ್ಸಾಂ ರೈಫಲ್ ಬೆಟಾಲಿಯನ್ಗಳನ್ನು ಹೊಂದಿದ್ದೇವೆ. ಇವುಗಳನ್ನು ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ನಿಯೋಜಿಸಲಾಗಿದೆ. ಗಡಿಯಲ್ಲಿ ನಮ್ಮ ಬೇಲಿಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ’ ಎಂದು ವಿವರಿಸಿದರು.
‘ತುರ್ತು ನಿಬಂಧನೆಗಳ ಭಾಗವಾಗಿ, ನಾವು ಕೆಲವು ಹೊಸ ತಂತ್ರಜ್ಞಾನಗಳನ್ನು ಸೇರಿಸಲು ಮತ್ತು ಯುದ್ಧದ ಡೊಮೇನ್ಗಳನ್ನು ಪರಿಹರಿಸಲು ಸಮರ್ಥರಾಗಿದ್ದೇವೆ. ನಾವು ಉತ್ತಮ ವಾಹನಗಳು, ಡ್ರೋನ್ಗಳು ಮತ್ತು ಕೌಂಟರ್-ಡ್ರೋನ್ ವ್ಯವಸ್ಥೆಗಳನ್ನು ಸಿದ್ದಪಡಿಸಿಕೊಂಡಿದ್ದೇವೆ. ನಾವು ಭೂಪ್ರದೇಶ-ನಿರ್ದಿಷ್ಟ ಎಲೆಕ್ಟ್ರಾನಿಕ್ ವಾರ್ಫೇರ್ ಸಿಸ್ಟಮ್ಗಳನ್ನು ಹೊಂದಿದ್ದೇವೆ’ ಎಂದು ಜನರಲ್ ಪಾಂಡೆ ಹೇಳಿದರು.
‘ನಾವು ನಮ್ಮ ಫಿರಂಗಿ ಘಟಕಗಳನ್ನು ಪುನರ್ ರಚಿಸಿದ್ದೇವೆ. ಎಲೆಕ್ಟ್ರಾನಿಕ್ ವಾರ್ ಫೇರ್ ಮತ್ತು ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ನ್ನು ಪುನರ್ ರಚಿಸಿದ ಘಟಕಗಳನ್ನು ಸಹ ಹೊಂದಿದ್ದೇವೆ. ನಮ್ಮ ಪ್ರಾಣಿ ಘಟಕಗಳಲ್ಲಿ ಪ್ರಾಣಿಗಳನ್ನು ಕಡಿಮೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ; ಅವುಗಳನ್ನು ಡ್ರೋನ್ಗಳಾಗಿ ಬದಲಾಯಿಸಲಾಗುತ್ತಿದೆ. ನಾವು ಹಲವು ಯೋಜನೆಯನ್ನು ಮಾಡಿದ್ದು, ಗಮನಾರ್ಹವಾಗಿ ನಮ್ಮ ಶಕ್ತಿಯನ್ನು ಉತ್ತಮಗೊಳಿಸಿದ್ದೇವೆ. 2027ರ ವೇಳೆಗೆ ನಾವು 1 ಲಕ್ಷ ಸಂಖ್ಯೆಗಳ ಆಪ್ಟಿಮೈಸೇಶನ್ ಅನ್ನು ಸಾಧಿಸುತ್ತೇವೆ. ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ನೀಡಿದ್ದೇವೆ’ ಎಂದರು.
ಇದನ್ನೂ ಓದಿ; ಪ್ರಜಾಪ್ರಭುತ್ವಕ್ಕೆ ‘ಶ್ರದ್ಧಾಂಜಲಿ’ ಸಲ್ಲಿಸಿದ ಶಿವಸೇನೆ ಸಂಸದ ಸಂಜಯ್ ರಾವತ್


