Homeಕರ್ನಾಟಕಕೈ ಪಾರ್ಟಿಯ ಬಣ ಬಡಿದಾಟದಲ್ಲಿ ಹೈಕಮಾಂಡ್ ಪಾತ್ರವಿದೆಯಾ.....!?

ಕೈ ಪಾರ್ಟಿಯ ಬಣ ಬಡಿದಾಟದಲ್ಲಿ ಹೈಕಮಾಂಡ್ ಪಾತ್ರವಿದೆಯಾ…..!?

- Advertisement -
- Advertisement -

ಇದು ಕಾಂಗ್ರೆಸ್ ಹೈಕಮಾಂಡ್ ಆಡಲೇಬೇಕಿದ್ದ ಆಟ. ಅಷ್ಟೇ ರಿಸ್ಕಿ ಆಟವೂ ಹೌದು. ಸದ್ಯ ರಾಜ್ಯ ಕಾಂಗ್ರೆಸ್‍ನೊಳಗೆ ಭುಗಿಲೆದ್ದಿರುವ ಬಣ ರಾಜಕಾರಣ ತಾರಕ್ಕೇರಿರುವುದೇನೊ ದಿಟ. ಆದರೆ ಈ ಭಿನ್ನಮತದ ಹಿಂದೆ ಸ್ವತಃ ಕಾಂಗ್ರೆಸ್ ಹೈಕಮಾಂಡ್‍ನ ಪಾತ್ರವಿದೆಯಾ ಎಂಬ ಅನುಮಾನಗಳು ಗರಿಗೆದರುತ್ತಿವೆ. ಇಡೀ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಇನ್ನೆಂದೂ ಕಾಣದಂತ ನಿಶ್ಯಕ್ತ ಪರಿಸ್ಥಿತಿಯಲ್ಲಿರುವ ಇಂಥಾ ಸಂದರ್ಭದಲ್ಲಿ ತಾನೇ ಭಿನ್ನಮತಕ್ಕೆ ನೀರೆರೆದು ಪೋಷಿಸುತ್ತಾ? ಎಂಬ ಪ್ರಶ್ನೆಯೂ ಕಾಡದಿರದು.

ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲು ಮುಂದಾದರೆ ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗುತ್ತಾ ಸಾಗುತ್ತೆ. ಸಿದ್ದು ವಿರುದ್ಧ ತಿರುಗಿಬಿದ್ದಿರುವ ನಾಯಕರುಗಳಿಂದಲೇ ಶುರು ಮಾಡುವುದಾದರೆ, ಬಂಡೆದ್ದಿರುವ ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ತರದ ನಾಯಕರುಗಳೇ ಮೂಲ ಕಾಂಗ್ರೆಸ್ಸಿಗರ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅದೆಷ್ಟೇ ಶಿಥಿಲಗೊಂಡಿರಬಹುದು, ಆದರೆ ಆ ಶಿಥಿಲ ನಾಯಕತ್ವದ ಮುಂದೆಯು ಗಟ್ಟಿಯಾಗಿ ದನಿ ಬಿಚ್ಚುವ ಪ್ರಭಾವವ ಉಳಿಸಿಕೊಂಡಿರದ ಇವರೆಲ್ಲ ಬಣ ರಾಜಕಾರಣದ ಮೂಲಕ ಸ್ವತಃ ಹೈಕಮಾಂಡ್‍ಗೇ ಇರಿಸುಮುರಿಸು ತಂದಿಡಬಲ್ಲ ಚಕ್ಯತೆಯನ್ನು ಪ್ರದರ್ಶಿಸಲಾರರು ಎಂಬುದು ವಾಸ್ತವ. ತಮ್ಮತಮ್ಮ ಕ್ಷೇತ್ರಗಳಲ್ಲೇ ಗೆಲ್ಲಲು ಹೆಣಗಾಡಬೇಕಾದ ಪರಿಸ್ಥಿತಿಯಲ್ಲಿ ಇವರಿದ್ದಾರೆ. ತಾನು ಈ ಮೊದಲಿನಂತೆ ಸಿದ್ದು ಪರವಾಗಿ ಏಕಪಕ್ಷೀಯವಾಗಿ ನಿಲ್ಲಲಾರೆವು ಎಂಬ ಸಣ್ಣ ಸುಳಿವು, ಯಾನೆ ಪ್ರಚೋದನೆ ಇವರಿಗೆ ಹೈಕಮಾಂಡಿನಿಂದಲೇ ಪರೋಕ್ಷವಾಗಿ ಸಿಕ್ಕಿರದ ಹೊರತು ಇವರೆಲ್ಲ ಬಂಡಾಯದ ಬಾವುಟ ಬೀಸಾಡುವ ಸಾಧ್ಯತೆ ತೀರಾ ಕಮ್ಮಿ. ಯಾಕೆಂದರೆ ಹಿಂದೆಲ್ಲ ಇದೇ ರೀತಿ ಮೂಲ, ವಲಸಿಗ ಬೇಗುದಿಯೊಂದಿಗೆ ಹೈಕಮಾಂಡ್ ಎಡತಾಕಿದವರೆಲ್ಲ ಯಾವ ಪ್ರಯೋಜನವೂ ಕಾಣದೆ ವಾಪಾಸಾಗಿದ್ದುಂಟು. ಹೈಕಮಾಂಡ್ ಬಲವಾಗಿ ಸಿದ್ದು ಪರ ನಿಂತದ್ದೇ ಇದಕ್ಕೆ ಕಾರಣ. ಈಗಲೂ ಹೈಕಮಾಂಡ್ ಸಿದ್ದು ಪರ ಅಂತದ್ದೇ ಗಟ್ಟಿ ನಿಲುವು ತಾಳಿದ್ದಿದ್ದರೆ ಇವರು ಈ ಮಟ್ಟದ ಬಂಡಾಯವೇಳುವುದು ಕಷ್ಟದ ಮಾತು.

ಸಿದ್ದರಾಮಯ್ಯನವರ ವಿರುದ್ಧವೇ ಈ ಮಟ್ಟದ ಬಂಡಾಯವನ್ನು ಹೈಕಮಾಂಡ್ ಬಯಸುವಂತಹ ಅಗತ್ಯವೇನಾದರು ಏನಿದೆ? ಇದರಿಂದ ಸಿಟ್ಟಿಗೆದ್ದು ಒಂದೊಮ್ಮೆ ಸಿದ್ದು ಹೊರನಡೆದರೆ, ಅವರಿಲ್ಲದೆ ಪಕ್ಷ ಸಂಘಟಿಸುವ ಸಾಮಥ್ರ್ಯ ಕಾಂಗ್ರೆಸ್ಸಿಗಿದೆಯಾ? ಎಂಬ ಇನ್ನೆರಡು ಪ್ರಶ್ನೆಗಳು ಇಲ್ಲಿ ತಲೆ ಎತ್ತುತ್ತವೆ. ಎರಡನೇ ಪ್ರಶ್ನೆಗೆ ಹೈಕಮಾಂಡ್ ತಳೆದಿರಬಹುದಾದ ಲಾಜಿಕ್ ಊಹಿಸಿದರೆ, ಮೊದಲ ಪ್ರಶ್ನೆಗೆ ಉತ್ತರ ಸಿಗೋದು ಕಷ್ಟವೇನಲ್ಲ.

ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್‍ಗೆ ಸಿದ್ದರಾಮಯ್ಯ ಅನಿವಾರ್ಯ ಅನ್ನೋದು ಎಷ್ಟು ಸತ್ಯವೋ, ಸಿದ್ರಾಮಯ್ಯನವರಿಗೂ ಕಾಂಗ್ರೆಸ್ ಅಷ್ಟೇ ಅನಿವಾರ್ಯ ಎಂಬುದೂ ಅಷ್ಟೇ ವಾಸ್ತವ. ಒಂದೊಮ್ಮೆ ಸಿದ್ದು ಈಗಿರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ನಿಂದ ಹೊರನಡೆಯುವ ತೀರ್ಮಾನ ಕೈಗೊಂಡರೂ ಹೋಗುವುದೆಲ್ಲಿಗೆ? ದೇವೇಗೌಡರ ಫ್ಯಾಮಿಲಿ ಪಾರ್ಟಿಯನ್ನು ಸೇರುವ ಮಾತೇ ಇಲ್ಲ. ಬಿಜೆಪಿ ಸೇರುವುದೆಂದರೆ ಅದರು ಸಿದ್ರಾಮಯ್ಯನವರ ಇಷ್ಟು ದಿನದ ರಾಜಕೀಯ ಬದುಕನ್ನು ಅವರೇ ಕತ್ತುಹಿಸುಕಿ ಕೊಂದಂತೆ. ಇದು ಸಿದ್ರಾಮಯ್ಯನವರಿಗೆ ಚೆನ್ನಾಗಿ ಗೊತ್ತು ಅನ್ನೋದು ಹೈಕಮಾಂಡ್‍ಗೂ ತಿಳಿದಿದೆ. ಇನ್ನು ಉಳಿದಿರೋದು ಹೊಸ ಪಾರ್ಟಿ ಕಟ್ಟುವ ಆಯ್ಕೆ. ಸಿದ್ದುಗೆ ಮಾಸ್ ಲೀಡರಿಕೆ ಇದೆಯಾದರು ಒಂದು ಪಾರ್ಟಿ ಕಟ್ಟಿ ನಿಭಾಯಿಸುವಷ್ಟು ಆರ್ಥಿಕ ಸಂಪನ್ಮೂಲ ಹೊಂದಿಲ್ಲ ಅನ್ನೋದು ಅವರ ವಿರೋಧಿಗಳೂ ಒಪ್ಪಿಕೊಳ್ಳುವ ಸತ್ಯ. ಹಾಗಾಗಿ ಸಿದ್ರಾಮಯ್ಯ ರಾಜಕೀಯವಾಗಿ ಸಕ್ರಿಯವಾಗಿ ಉಳಿಯಬೇಕೆಂದರೆ ಅವರಿಗೆ ಕಾಂಗ್ರೆಸ್ ಅನಿವಾರ್ಯ. ಹೈಕಮಾಂಡ್‍ನ ಈ ಲೆಕ್ಕಾಚಾರವೇ ರಿಸ್ಕಿ ಆಟಕ್ಕೆ ಧೈರ್ಯ ಮಾಡುವಂತೆ ಮಾಡಿರೋದು.

ಈಗ ಸಿದ್ದುವನ್ನು ಇಂಥಾ ಬಂಡಾಯದ ಆಟದ ಮೂಲಕ ನಿಯಂತ್ರಿಸುವ ಅಗತ್ಯ ಹೈಕಮಾಂಡ್‍ಗೆ ಏನಿತ್ತು ಅನ್ನೋ ಪ್ರಶ್ನೆಗೆ ಮರಳೋಣ. ಸಿದ್ದು ಕಾಂಗ್ರೆಸ್ಸಿಗೆ ಬಂದಾಗಿನಿಂದಲೂ ರಾಜ್ಯ ನಾಯಕರು ಅದೆಷ್ಟೇ ಕಾಲೆಳೆಯಲು ಪ್ರಯತ್ನಿಸಿದರು ಹೈಕಮಾಂಡ್ ಮಾತ್ರ ಅವರ ಬೆನ್ನಿಗೆ ನಿಲ್ಲುತ್ತಲೇ ಬಂದಿತ್ತು. ಹೀಗೆ ಸಿದ್ರಾಮಯ್ಯರನ್ನು ಅವಲಂಬಿಸೋದು ಆಗಿದ್ದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ಗೂ ಅನಿವಾರ್ಯವಾಗಿತ್ತು ಅನ್ನೋದು ಬೇರೆ ಮಾತು. 2008ರಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ, 2013ರಲ್ಲಿ ಮುಖ್ಯಮಂತ್ರಿ ಸ್ಥಾನ, 2018ರಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷಗಿರಿ ಇವೆಲ್ಲವೂ ಸಿದ್ರಾಮಯ್ಯನವರಿಗೆ ಸಲೀಸಾಗಿ ಒಲಿದಿದ್ದಲ್ಲ. ವಲಸಿಗರು ಅನ್ನೊ ಅಡ್ಡಗಾಲು `ಮೂಲಿಗ’ರಿಂದ ಇದ್ದೇ ಇತ್ತು. ಆದರೆ ಹೈಕಮಾಂಡ್ ಮಾತ್ರ ಸಿದ್ದು ಪರವಾಗಿ ನಿಲ್ಲುತ್ತಾ ಬಂದಿತ್ತು. ಇಲ್ಲವಾಗಿದ್ದರೆ ಮಧ್ಯಂತರದಲ್ಲಿ ಭುಗಿಲೆದ್ದಿದ್ದ ದಲಿತ ಸಿಎಂ ಎಂಬ ರಾಜಕೀಯ ಚಿತಾವಣೆಯ ಕೂಗನ್ನೂ ಓವರ್‍ಟೇಕ್ ಮಾಡಿ ಸಿದ್ದು ನಿರಾತಂಕವಾಗಿ ಐದು ವರ್ಷ ಮುಖ್ಯಮಂತ್ರಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ. ಸಿದ್ದುಗೆ ಫ್ರೀ ಹ್ಯಾಂಡ್ ಕೊಟ್ಟರಷ್ಟೇ ಪಕ್ಷಕ್ಕೆ ಒಳ್ಳೆಯದ ಎಂಬ ಕಾರಣಕ್ಕೆ ಅವರ ಅವಧಿಯಲ್ಲಿ ಎಷ್ಟೇ ಒತ್ತಡ ಬಂದರು ಉಪಮುಖ್ಯಮಂತ್ರಿ ಹುದ್ದೆಯನ್ನೂ ಹೈಕಮಾಂಡ್ ಸೃಷ್ಟಿ ಮಾಡಲಿಲ್ಲ. ಇತ್ತ ಸಿದ್ದು ಕೂಡಾ ಪಕ್ಷಕ್ಕೆ ಬಲ ತುಂಬುತ್ತಲೇ ಬಂದರು.

ಆದರೆ ಈ ವಿಶ್ವಾಸಗಳೆಲ್ಲ ತಲೆಕೆಳಗಾದದ್ದು ಮೈತ್ರಿ ಸರ್ಕಾರದ ರಚನೆ ತರುವಾಯ. ದೇಶದಲ್ಲಿ ಬಿಜೆಪಿಯ ಆಪೋಷನ ವೇಗ ತಗ್ಗಿಸಬೇಕೆಂಬ ಕಾರಣಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸಿದ್ದ ಜೆಡಿಎಸ್ ಜೊತೆಗಿನ ಮೈತ್ರಿ ಸಂಹಿತೆಗೆ ಸಿದ್ದು ಮನಪೂರ್ವಕವಾಗಿ ಸ್ಪಂದಿಸಲೇ ಇಲ್ಲ. ಅವರದೇ ನಾಯಕತ್ವದಲ್ಲಿ ಎದುರಿಸಿದ ಆ ಚುನಾವಣೆಯಲ್ಲಿ ಸೋತರೂ, ಮತಗಳಿಕೆಯಲ್ಲಾದ ಹಿಗ್ಗುವಿಕೆಗೆ ಸಿದ್ದುವೇ ಕಾರಣ ಎಂಬುದನ್ನು ಮನಗಂಡಿದ್ದ ಹೈಕಮಾಂಡ್ ಅವರನ್ನು ಮೂಲೆಗುಂಪು ಮಾಡದೆ `ಸಮನ್ವಯ ಸಮಿತಿಯ ಅಧ್ಯಕ್ಷ’ನನ್ನಾಗಿ ಮಾಡಿ ಗೌರವಯುತವಾಗಿ ನಡೆಸಿಕೊಂಡಿತ್ತು. ಆದರೆ ಅದ್ಯಾಕೊ ಗೊತ್ತಿಲ್ಲ, ಮೋದಿ-ಶಾ ವಿರುದ್ಧ ಗುಡುಗುತ್ತಾ ಇನ್ನೂ ಎತ್ತರಕ್ಕೆ ಬೆಳೆಯಬಹುದಾಗಿದ್ದ ಸಿದ್ದು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಕಾದಾಡುವ ತಮ್ಮ ಹಳೇ ರಾಜಕೀಯಕ್ಕೇ ಸೀಮಿತಗೊಂಡುಬಿಟ್ಟರು.

ಮೈತ್ರಿ ಸರ್ಕಾರ ಬಿದ್ದುಹೋಗಲು ಇದೂ ಒಂದು ಕಾರಣವಾಯ್ತು. ಕಳೆದ ಸಂಚಿಕೆಯಲ್ಲಿ ಪತ್ರಿಕೆಗೆ ಸಂದರ್ಶನ ನೀಡಿದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದಂತೆ, `ಸಿದ್ದು ನೇರವಾಗಿ ಯಾರನ್ನೂ ಬಿಜೆಪಿಯತ್ತ ಕಳುಹಿಸದಿದ್ದರು, ಆಪ್ತರ ಮುಂದೆ ಅವರ ವ್ಯಕ್ತಪಡಿಸುತ್ತಿದ್ದ ಬೇಸರದ ಮಾತುಗಳು ಅವರನ್ನು ಮೈತ್ರಿ ಪತನದ ನಿರ್ಧಾರಕ್ಕೆ ಪ್ರಚೋದಿಸಿದ್ದವು’ ಎಂಬುದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಬಿಜೆಪಿಗೆ ಹಾರಿದ ಅನರ್ಹ ಶಾಸಕರಲ್ಲಿ ಸಿದ್ದು ಬಳಗದಲ್ಲಿ ಗುರುತಿಸಿಕೊಂಡಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಇದಕ್ಕೆ ಸಾಕ್ಷಿ.

ಅದಕ್ಕು ಮೊದಲು ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲು ಜೆಡಿಎಸ್ ಜೊತೆಗೆ ಸೀಟು ಹಂಚಿಕೆಯ ವೇಳೆಯಲ್ಲಿ ಆದ ಪ್ರತಿಷ್ಠೆಯ ಮೇಲಾಟಗಳಿಂದಾಗಿ ಒಗ್ಗೂಡಬೇಕಿದ್ದ ಜಾತ್ಯತೀತ ಮತಗಳು ಛಿದ್ರವಾಗಿದ್ದನ್ನೂ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸಿತ್ತು. ಅದರಲ್ಲೂ ಸಿದ್ರಾಮಯ್ಯನವರ ಬಗ್ಗೆ ಹೈಕಮಾಂಡ್ ಬೇಸರಿಸಿಕೊಳ್ಳಲು ಸಾಕಷ್ಟು ಕಾರಣಗಳಿದ್ದವು.

ಇಂಥಾ ಕಾರಣಗಳಿಂದಲೇ, `ಯೆಸ್ ಇಟ್ ಈಸ್ ಟೈಮ್ ಟು ಕಂಟ್ರೋಲ್ ಸಿದ್ದರಾಮಯ್ಯ’ ಅಂತ ಹೈಕಮಾಂಡಿಗೆ ಅನ್ನಿಸಿದ್ದರೆ ಅಚ್ಚರಿಯೇನೂ ಇಲ್ಲ. ಯಾಕೆಂದರೆ ಈಗ ಮೊದಲಿನಂತೆ ಬಂಡಾಯದಿಂದಾಗಿ ಅಧಿಕಾರವನ್ನು ಕಳೆದುಕೊಳ್ಳುವ ಭೀತಿ ಕಾಂಗ್ರೆಸ್ಸಿಗಿಲ್ಲ. ಹಾಗಾಗಿ ಸಿದ್ದು ಮೇಲೆ ಇತ್ತೀಚೆಗೆ ತನಗೂ ಬೇಸರವಿದೆ ಅನ್ನೋ ಸಂದೇಶವನ್ನು ಸಿದ್ದು ವಿರೋಧಿಗಳಿಗೆ ಪರೋಕ್ಷವಾಗಿ ದಾಟಿಸಿದ ಹೈಕಮಾಂಡ್ ಅವರು `ಪ್ರತಿಪಕ್ಷ ನಾಯಕ’ ಸ್ಥಾನದ ಆಸೆಯಲ್ಲಿ ಸಿದ್ದು ವಿರುದ್ಧ ತಿರುಗಿಬೀಳುವಂತೆ ಒಂದು ಸಣ್ಣ ಆಟ ಆಡಿದ್ದರೂ ಅಚ್ಚರಿಯಿಲ್ಲ. ಮೈತ್ರಿ ಸರ್ಕಾರ ಪತನವಾದ ನಂತರ ಸಿದ್ದು ದಿಲ್ಲಿಗೆ ಹೋಗಿಬಂದಷ್ಟೇ, ಹೈಕಮಾಂಡ್ ಪರಮೇಶ್ವರ್‍ರನ್ನೂ ದಿಲ್ಲಿಗೆ ಕರೆಸಿಕೊಂಡಿರೋದು ಇಂಥಾ ಅನುಮಾನವನ್ನು ದಟ್ಟಗೊಳಿಸುತ್ತದೆ.

ಹಾಗಂತ, ಸಿದ್ರಾಮಯ್ಯನನ್ನು ಪಕ್ಕಕ್ಕಿಟ್ಟು ಬೇರೆ ಯಾರನ್ನೋ ಪ್ರತಿಪಕ್ಷ ನಾಯಕನನ್ನಾಗಿ ಮಾಡುವ ಪರಿಸ್ಥಿತಿಯೂ ಕಾಂಗ್ರೆಸ್ಸಿಗಿಲ್ಲ. ಆ ಸಾಮಥ್ರ್ಯವಿದ್ದ ಡೀಕೆ ಈಗ ಗೂಡಿನ ಹಕ್ಕಿಯಾಗಿದ್ದಾರೆ. ಖರ್ಗೆ ರಿಸ್ಕುಗಳನ್ನು ಮೈಮೇಲೆಳೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನುಳಿದವರು ಆ ಹುದ್ದೆಯಿಂದ ಬರುವ ಸವಲತ್ತುಗಳನ್ನು ಅನುಭವಿಸಬಹುದೇ ವಿನಾಃ, ಬೀದಿಗಿಳಿದು ಆಡಳಿತ ಪಕ್ಷದ ವಿರುದ್ಧ ಗುಡುಗಿ ಪಕ್ಷ ಸಂಘಟಿಸಲಾರರು. ಅನಿವಾರ್ಯವಾಗಿ ಸಿದ್ರಾಮಯ್ಯರನ್ನೇ ಆಯ್ಕೆ ಮಾಡಬೇಕಾಗುತ್ತೆ. `ಆದರೆ ಆ ಆಯ್ಕೆ ನಿಮಗೆ ಸುಲಭಕ್ಕೆ ದಕ್ಕಿದ್ದಲ್ಲ, ಮೊದಲಿನಂತೆ ಹೈಕಮಾಂಡ್ ಇನ್ಮುಂದೆ ನಿಮ್ಮ ಪರವಾಗಿ ಗಟ್ಟಿಯಾಗಿ ನಿಲ್ಲಲಾರದು. ನಿಮ್ಮ ವಿರೋಧಿಗಳ ದನಿಗೂ ನಾವು ಕಿವಿಗೊಡಲು ಸಿದ್ಧರಿದ್ದೇವೆ, ಹಾಗಾಗಿ ವೈಪರೀತ್ಯಗಳಿಗೆ ಅವಕಾಶ ಕೊಡದೆ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗಿ’ ಎಂಬ ಸಂದೇಶದ ಮೂಲಕ ಸಣ್ಣ ಎಚ್ಚರಿಕೆಯನ್ನೂ ಸಿದ್ದುಗೆ ರವಾನಿಸಲೆಂದೇ ಈ ಬಂಡಾಯ, ದಿಲ್ಲಿಯಿಂದ ಮಧುಸೂದನ್ ಮಿಸ್ತ್ರಿಯೆಂಬ ವೀಕ್ಷಕರ ಆಗಮನ, ಅಭಿಪ್ರಾಯ ಸಂಗ್ರಹಣೆಗಳಂತ ವಿದ್ಯಮಾನಗಳು ಜರುಗಿರೋದು. ಒಂದಂತು ಖರೆ, ಈ ಬಂಡಾಯದ ಎಪಿಸೋಡನ್ನು ಹೈಕಮಾಂಡೇ ಹೆಣೆದಿರಲಿ, ಅಥವಾ ಹೆಣೆಯದಿರಲಿ ಆದರೆ ಸಿದ್ದುಗೆ ಸಣ್ಣ ಎಚ್ಚರಿಕೆ ರವಾನಿಸಲು ಹೈಕಮಾಂಡ್‍ಗೆ ಇಂತದ್ದೊಂದು ಬೆಳವಣಿಗೆಯ ಅನಿವಾರ್ಯತೆ ಇತ್ತು.

`ಕೈ’ ಚೆಲ್ಲಿದ ಅವಕಾಶ!

ಹಳ್ಳಿಗಳ ಕಡೆ ಒಂದು ಲೇವಡಿ ಮಾತಿದೆ. ‘ಕತ್ತೆಗೆ ಕೊಂಬು ಬಂದರು ಬರಹುದು, ಆದರೆ ಕಾಂಗ್ರೆಸ್ಸಿಗರಿಗೆ ಬುದ್ದಿ ಬರಲ್ಲ’ ಅಂತ. ಕಾಂಗ್ರೆಸ್ಸಿಗರ ಬಣ ರಾಜಕಾರಣ ಅದನ್ನು ದಿಟ ಮಾಡುತ್ತಿದೆ. ಶಾಸಕರ ಖರೀದಿ ಮೂಲಕ ಅಧಿಕಾರಕ್ಕೇರಿರುವ ಬಿಜೆಪಿಯ ಬಗ್ಗೆ ಜನರಲ್ಲಿ ಅಷ್ಟೇನು ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅದೇ ಸಂದರ್ಭದಲ್ಲಿ ಉಕ್ಕಿ ಹರಿದ ನೆರೆ ನಿರ್ವಹಣೆ ಮತ್ತು ಪರಿಹಾರ ನೀಡಿಕೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೋರಿದ ಅಸಡ್ಡೆಗಳು ಜನರನ್ನು ಮತ್ತಷ್ಟು ಸಿಟ್ಟಿಗೇಳಿಸಿದ್ದವು. ಇಂಥಾ ಸಂದರ್ಭದಲ್ಲಿ ಬೀದಿಗಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿ ಜನರ ವಿಶ್ವಾಸ ಗಳಿಸುವ ಅವಕಾಶ ಕಾಂಗ್ರೆಸ್ ನಾಯಕರ ಮುಂದಿತ್ತು. ಆದರೆ ಯಕಶ್ಚಿತ್ ಪ್ರತಿಪಕ್ಷ ನಾಯಕನ ಸ್ಥಾನದ ಕಿತ್ತಾಟದಲ್ಲಿ ಅಂತಹ ಅವಕಾಶ ಕೈಚೆಲ್ಲಿ ಕೂತಿದ್ದಾರೆ. ಕೇಂದ್ರದ ವಿರುದ್ಧ ಬಿಜೆಪಿಯವರೇ ಬಂಡಾಯವೆದ್ದು, ಪ್ರತಿಹೇಳಿಕೆ ಕೊಟ್ಟು, ಪರಸ್ಪರ ಕಾಲೆಳೆದುಕೊಳ್ಳುವಷ್ಟು ವೈಪರೀತ್ಯ ತಲುಪಿದರೂ ಕಾಂಗ್ರೆಸ್ ನಾಯಕರು ಟ್ವೀಟ್ ಮತ್ತು ಮೀಡಿಯಾ ಸ್ಟೇಟ್‍ಮೆಂಟ್ ಹೊರತಾಗಿ ಬೇರಾವ ಸಾಹಸಕ್ಕೂ ಕೈಹಾಕಲಿಲ್ಲ. ಇನ್ನು ಎನ್‍ಆರ್‍ಸಿ ವಿಚಾರದಲ್ಲೂ ಕಾಂಗ್ರೆಸ್ ನಾಯಕರದ್ದು ಇದೇ ನಿರ್ಲಕ್ಷ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...