Homeಕರ್ನಾಟಕಕೈ ಪಾರ್ಟಿಯ ಬಣ ಬಡಿದಾಟದಲ್ಲಿ ಹೈಕಮಾಂಡ್ ಪಾತ್ರವಿದೆಯಾ.....!?

ಕೈ ಪಾರ್ಟಿಯ ಬಣ ಬಡಿದಾಟದಲ್ಲಿ ಹೈಕಮಾಂಡ್ ಪಾತ್ರವಿದೆಯಾ…..!?

- Advertisement -
- Advertisement -

ಇದು ಕಾಂಗ್ರೆಸ್ ಹೈಕಮಾಂಡ್ ಆಡಲೇಬೇಕಿದ್ದ ಆಟ. ಅಷ್ಟೇ ರಿಸ್ಕಿ ಆಟವೂ ಹೌದು. ಸದ್ಯ ರಾಜ್ಯ ಕಾಂಗ್ರೆಸ್‍ನೊಳಗೆ ಭುಗಿಲೆದ್ದಿರುವ ಬಣ ರಾಜಕಾರಣ ತಾರಕ್ಕೇರಿರುವುದೇನೊ ದಿಟ. ಆದರೆ ಈ ಭಿನ್ನಮತದ ಹಿಂದೆ ಸ್ವತಃ ಕಾಂಗ್ರೆಸ್ ಹೈಕಮಾಂಡ್‍ನ ಪಾತ್ರವಿದೆಯಾ ಎಂಬ ಅನುಮಾನಗಳು ಗರಿಗೆದರುತ್ತಿವೆ. ಇಡೀ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಇನ್ನೆಂದೂ ಕಾಣದಂತ ನಿಶ್ಯಕ್ತ ಪರಿಸ್ಥಿತಿಯಲ್ಲಿರುವ ಇಂಥಾ ಸಂದರ್ಭದಲ್ಲಿ ತಾನೇ ಭಿನ್ನಮತಕ್ಕೆ ನೀರೆರೆದು ಪೋಷಿಸುತ್ತಾ? ಎಂಬ ಪ್ರಶ್ನೆಯೂ ಕಾಡದಿರದು.

ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲು ಮುಂದಾದರೆ ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗುತ್ತಾ ಸಾಗುತ್ತೆ. ಸಿದ್ದು ವಿರುದ್ಧ ತಿರುಗಿಬಿದ್ದಿರುವ ನಾಯಕರುಗಳಿಂದಲೇ ಶುರು ಮಾಡುವುದಾದರೆ, ಬಂಡೆದ್ದಿರುವ ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ತರದ ನಾಯಕರುಗಳೇ ಮೂಲ ಕಾಂಗ್ರೆಸ್ಸಿಗರ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅದೆಷ್ಟೇ ಶಿಥಿಲಗೊಂಡಿರಬಹುದು, ಆದರೆ ಆ ಶಿಥಿಲ ನಾಯಕತ್ವದ ಮುಂದೆಯು ಗಟ್ಟಿಯಾಗಿ ದನಿ ಬಿಚ್ಚುವ ಪ್ರಭಾವವ ಉಳಿಸಿಕೊಂಡಿರದ ಇವರೆಲ್ಲ ಬಣ ರಾಜಕಾರಣದ ಮೂಲಕ ಸ್ವತಃ ಹೈಕಮಾಂಡ್‍ಗೇ ಇರಿಸುಮುರಿಸು ತಂದಿಡಬಲ್ಲ ಚಕ್ಯತೆಯನ್ನು ಪ್ರದರ್ಶಿಸಲಾರರು ಎಂಬುದು ವಾಸ್ತವ. ತಮ್ಮತಮ್ಮ ಕ್ಷೇತ್ರಗಳಲ್ಲೇ ಗೆಲ್ಲಲು ಹೆಣಗಾಡಬೇಕಾದ ಪರಿಸ್ಥಿತಿಯಲ್ಲಿ ಇವರಿದ್ದಾರೆ. ತಾನು ಈ ಮೊದಲಿನಂತೆ ಸಿದ್ದು ಪರವಾಗಿ ಏಕಪಕ್ಷೀಯವಾಗಿ ನಿಲ್ಲಲಾರೆವು ಎಂಬ ಸಣ್ಣ ಸುಳಿವು, ಯಾನೆ ಪ್ರಚೋದನೆ ಇವರಿಗೆ ಹೈಕಮಾಂಡಿನಿಂದಲೇ ಪರೋಕ್ಷವಾಗಿ ಸಿಕ್ಕಿರದ ಹೊರತು ಇವರೆಲ್ಲ ಬಂಡಾಯದ ಬಾವುಟ ಬೀಸಾಡುವ ಸಾಧ್ಯತೆ ತೀರಾ ಕಮ್ಮಿ. ಯಾಕೆಂದರೆ ಹಿಂದೆಲ್ಲ ಇದೇ ರೀತಿ ಮೂಲ, ವಲಸಿಗ ಬೇಗುದಿಯೊಂದಿಗೆ ಹೈಕಮಾಂಡ್ ಎಡತಾಕಿದವರೆಲ್ಲ ಯಾವ ಪ್ರಯೋಜನವೂ ಕಾಣದೆ ವಾಪಾಸಾಗಿದ್ದುಂಟು. ಹೈಕಮಾಂಡ್ ಬಲವಾಗಿ ಸಿದ್ದು ಪರ ನಿಂತದ್ದೇ ಇದಕ್ಕೆ ಕಾರಣ. ಈಗಲೂ ಹೈಕಮಾಂಡ್ ಸಿದ್ದು ಪರ ಅಂತದ್ದೇ ಗಟ್ಟಿ ನಿಲುವು ತಾಳಿದ್ದಿದ್ದರೆ ಇವರು ಈ ಮಟ್ಟದ ಬಂಡಾಯವೇಳುವುದು ಕಷ್ಟದ ಮಾತು.

ಸಿದ್ದರಾಮಯ್ಯನವರ ವಿರುದ್ಧವೇ ಈ ಮಟ್ಟದ ಬಂಡಾಯವನ್ನು ಹೈಕಮಾಂಡ್ ಬಯಸುವಂತಹ ಅಗತ್ಯವೇನಾದರು ಏನಿದೆ? ಇದರಿಂದ ಸಿಟ್ಟಿಗೆದ್ದು ಒಂದೊಮ್ಮೆ ಸಿದ್ದು ಹೊರನಡೆದರೆ, ಅವರಿಲ್ಲದೆ ಪಕ್ಷ ಸಂಘಟಿಸುವ ಸಾಮಥ್ರ್ಯ ಕಾಂಗ್ರೆಸ್ಸಿಗಿದೆಯಾ? ಎಂಬ ಇನ್ನೆರಡು ಪ್ರಶ್ನೆಗಳು ಇಲ್ಲಿ ತಲೆ ಎತ್ತುತ್ತವೆ. ಎರಡನೇ ಪ್ರಶ್ನೆಗೆ ಹೈಕಮಾಂಡ್ ತಳೆದಿರಬಹುದಾದ ಲಾಜಿಕ್ ಊಹಿಸಿದರೆ, ಮೊದಲ ಪ್ರಶ್ನೆಗೆ ಉತ್ತರ ಸಿಗೋದು ಕಷ್ಟವೇನಲ್ಲ.

ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್‍ಗೆ ಸಿದ್ದರಾಮಯ್ಯ ಅನಿವಾರ್ಯ ಅನ್ನೋದು ಎಷ್ಟು ಸತ್ಯವೋ, ಸಿದ್ರಾಮಯ್ಯನವರಿಗೂ ಕಾಂಗ್ರೆಸ್ ಅಷ್ಟೇ ಅನಿವಾರ್ಯ ಎಂಬುದೂ ಅಷ್ಟೇ ವಾಸ್ತವ. ಒಂದೊಮ್ಮೆ ಸಿದ್ದು ಈಗಿರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ನಿಂದ ಹೊರನಡೆಯುವ ತೀರ್ಮಾನ ಕೈಗೊಂಡರೂ ಹೋಗುವುದೆಲ್ಲಿಗೆ? ದೇವೇಗೌಡರ ಫ್ಯಾಮಿಲಿ ಪಾರ್ಟಿಯನ್ನು ಸೇರುವ ಮಾತೇ ಇಲ್ಲ. ಬಿಜೆಪಿ ಸೇರುವುದೆಂದರೆ ಅದರು ಸಿದ್ರಾಮಯ್ಯನವರ ಇಷ್ಟು ದಿನದ ರಾಜಕೀಯ ಬದುಕನ್ನು ಅವರೇ ಕತ್ತುಹಿಸುಕಿ ಕೊಂದಂತೆ. ಇದು ಸಿದ್ರಾಮಯ್ಯನವರಿಗೆ ಚೆನ್ನಾಗಿ ಗೊತ್ತು ಅನ್ನೋದು ಹೈಕಮಾಂಡ್‍ಗೂ ತಿಳಿದಿದೆ. ಇನ್ನು ಉಳಿದಿರೋದು ಹೊಸ ಪಾರ್ಟಿ ಕಟ್ಟುವ ಆಯ್ಕೆ. ಸಿದ್ದುಗೆ ಮಾಸ್ ಲೀಡರಿಕೆ ಇದೆಯಾದರು ಒಂದು ಪಾರ್ಟಿ ಕಟ್ಟಿ ನಿಭಾಯಿಸುವಷ್ಟು ಆರ್ಥಿಕ ಸಂಪನ್ಮೂಲ ಹೊಂದಿಲ್ಲ ಅನ್ನೋದು ಅವರ ವಿರೋಧಿಗಳೂ ಒಪ್ಪಿಕೊಳ್ಳುವ ಸತ್ಯ. ಹಾಗಾಗಿ ಸಿದ್ರಾಮಯ್ಯ ರಾಜಕೀಯವಾಗಿ ಸಕ್ರಿಯವಾಗಿ ಉಳಿಯಬೇಕೆಂದರೆ ಅವರಿಗೆ ಕಾಂಗ್ರೆಸ್ ಅನಿವಾರ್ಯ. ಹೈಕಮಾಂಡ್‍ನ ಈ ಲೆಕ್ಕಾಚಾರವೇ ರಿಸ್ಕಿ ಆಟಕ್ಕೆ ಧೈರ್ಯ ಮಾಡುವಂತೆ ಮಾಡಿರೋದು.

ಈಗ ಸಿದ್ದುವನ್ನು ಇಂಥಾ ಬಂಡಾಯದ ಆಟದ ಮೂಲಕ ನಿಯಂತ್ರಿಸುವ ಅಗತ್ಯ ಹೈಕಮಾಂಡ್‍ಗೆ ಏನಿತ್ತು ಅನ್ನೋ ಪ್ರಶ್ನೆಗೆ ಮರಳೋಣ. ಸಿದ್ದು ಕಾಂಗ್ರೆಸ್ಸಿಗೆ ಬಂದಾಗಿನಿಂದಲೂ ರಾಜ್ಯ ನಾಯಕರು ಅದೆಷ್ಟೇ ಕಾಲೆಳೆಯಲು ಪ್ರಯತ್ನಿಸಿದರು ಹೈಕಮಾಂಡ್ ಮಾತ್ರ ಅವರ ಬೆನ್ನಿಗೆ ನಿಲ್ಲುತ್ತಲೇ ಬಂದಿತ್ತು. ಹೀಗೆ ಸಿದ್ರಾಮಯ್ಯರನ್ನು ಅವಲಂಬಿಸೋದು ಆಗಿದ್ದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ಗೂ ಅನಿವಾರ್ಯವಾಗಿತ್ತು ಅನ್ನೋದು ಬೇರೆ ಮಾತು. 2008ರಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ, 2013ರಲ್ಲಿ ಮುಖ್ಯಮಂತ್ರಿ ಸ್ಥಾನ, 2018ರಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷಗಿರಿ ಇವೆಲ್ಲವೂ ಸಿದ್ರಾಮಯ್ಯನವರಿಗೆ ಸಲೀಸಾಗಿ ಒಲಿದಿದ್ದಲ್ಲ. ವಲಸಿಗರು ಅನ್ನೊ ಅಡ್ಡಗಾಲು `ಮೂಲಿಗ’ರಿಂದ ಇದ್ದೇ ಇತ್ತು. ಆದರೆ ಹೈಕಮಾಂಡ್ ಮಾತ್ರ ಸಿದ್ದು ಪರವಾಗಿ ನಿಲ್ಲುತ್ತಾ ಬಂದಿತ್ತು. ಇಲ್ಲವಾಗಿದ್ದರೆ ಮಧ್ಯಂತರದಲ್ಲಿ ಭುಗಿಲೆದ್ದಿದ್ದ ದಲಿತ ಸಿಎಂ ಎಂಬ ರಾಜಕೀಯ ಚಿತಾವಣೆಯ ಕೂಗನ್ನೂ ಓವರ್‍ಟೇಕ್ ಮಾಡಿ ಸಿದ್ದು ನಿರಾತಂಕವಾಗಿ ಐದು ವರ್ಷ ಮುಖ್ಯಮಂತ್ರಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ. ಸಿದ್ದುಗೆ ಫ್ರೀ ಹ್ಯಾಂಡ್ ಕೊಟ್ಟರಷ್ಟೇ ಪಕ್ಷಕ್ಕೆ ಒಳ್ಳೆಯದ ಎಂಬ ಕಾರಣಕ್ಕೆ ಅವರ ಅವಧಿಯಲ್ಲಿ ಎಷ್ಟೇ ಒತ್ತಡ ಬಂದರು ಉಪಮುಖ್ಯಮಂತ್ರಿ ಹುದ್ದೆಯನ್ನೂ ಹೈಕಮಾಂಡ್ ಸೃಷ್ಟಿ ಮಾಡಲಿಲ್ಲ. ಇತ್ತ ಸಿದ್ದು ಕೂಡಾ ಪಕ್ಷಕ್ಕೆ ಬಲ ತುಂಬುತ್ತಲೇ ಬಂದರು.

ಆದರೆ ಈ ವಿಶ್ವಾಸಗಳೆಲ್ಲ ತಲೆಕೆಳಗಾದದ್ದು ಮೈತ್ರಿ ಸರ್ಕಾರದ ರಚನೆ ತರುವಾಯ. ದೇಶದಲ್ಲಿ ಬಿಜೆಪಿಯ ಆಪೋಷನ ವೇಗ ತಗ್ಗಿಸಬೇಕೆಂಬ ಕಾರಣಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸಿದ್ದ ಜೆಡಿಎಸ್ ಜೊತೆಗಿನ ಮೈತ್ರಿ ಸಂಹಿತೆಗೆ ಸಿದ್ದು ಮನಪೂರ್ವಕವಾಗಿ ಸ್ಪಂದಿಸಲೇ ಇಲ್ಲ. ಅವರದೇ ನಾಯಕತ್ವದಲ್ಲಿ ಎದುರಿಸಿದ ಆ ಚುನಾವಣೆಯಲ್ಲಿ ಸೋತರೂ, ಮತಗಳಿಕೆಯಲ್ಲಾದ ಹಿಗ್ಗುವಿಕೆಗೆ ಸಿದ್ದುವೇ ಕಾರಣ ಎಂಬುದನ್ನು ಮನಗಂಡಿದ್ದ ಹೈಕಮಾಂಡ್ ಅವರನ್ನು ಮೂಲೆಗುಂಪು ಮಾಡದೆ `ಸಮನ್ವಯ ಸಮಿತಿಯ ಅಧ್ಯಕ್ಷ’ನನ್ನಾಗಿ ಮಾಡಿ ಗೌರವಯುತವಾಗಿ ನಡೆಸಿಕೊಂಡಿತ್ತು. ಆದರೆ ಅದ್ಯಾಕೊ ಗೊತ್ತಿಲ್ಲ, ಮೋದಿ-ಶಾ ವಿರುದ್ಧ ಗುಡುಗುತ್ತಾ ಇನ್ನೂ ಎತ್ತರಕ್ಕೆ ಬೆಳೆಯಬಹುದಾಗಿದ್ದ ಸಿದ್ದು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಕಾದಾಡುವ ತಮ್ಮ ಹಳೇ ರಾಜಕೀಯಕ್ಕೇ ಸೀಮಿತಗೊಂಡುಬಿಟ್ಟರು.

ಮೈತ್ರಿ ಸರ್ಕಾರ ಬಿದ್ದುಹೋಗಲು ಇದೂ ಒಂದು ಕಾರಣವಾಯ್ತು. ಕಳೆದ ಸಂಚಿಕೆಯಲ್ಲಿ ಪತ್ರಿಕೆಗೆ ಸಂದರ್ಶನ ನೀಡಿದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದಂತೆ, `ಸಿದ್ದು ನೇರವಾಗಿ ಯಾರನ್ನೂ ಬಿಜೆಪಿಯತ್ತ ಕಳುಹಿಸದಿದ್ದರು, ಆಪ್ತರ ಮುಂದೆ ಅವರ ವ್ಯಕ್ತಪಡಿಸುತ್ತಿದ್ದ ಬೇಸರದ ಮಾತುಗಳು ಅವರನ್ನು ಮೈತ್ರಿ ಪತನದ ನಿರ್ಧಾರಕ್ಕೆ ಪ್ರಚೋದಿಸಿದ್ದವು’ ಎಂಬುದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಬಿಜೆಪಿಗೆ ಹಾರಿದ ಅನರ್ಹ ಶಾಸಕರಲ್ಲಿ ಸಿದ್ದು ಬಳಗದಲ್ಲಿ ಗುರುತಿಸಿಕೊಂಡಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಇದಕ್ಕೆ ಸಾಕ್ಷಿ.

ಅದಕ್ಕು ಮೊದಲು ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲು ಜೆಡಿಎಸ್ ಜೊತೆಗೆ ಸೀಟು ಹಂಚಿಕೆಯ ವೇಳೆಯಲ್ಲಿ ಆದ ಪ್ರತಿಷ್ಠೆಯ ಮೇಲಾಟಗಳಿಂದಾಗಿ ಒಗ್ಗೂಡಬೇಕಿದ್ದ ಜಾತ್ಯತೀತ ಮತಗಳು ಛಿದ್ರವಾಗಿದ್ದನ್ನೂ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸಿತ್ತು. ಅದರಲ್ಲೂ ಸಿದ್ರಾಮಯ್ಯನವರ ಬಗ್ಗೆ ಹೈಕಮಾಂಡ್ ಬೇಸರಿಸಿಕೊಳ್ಳಲು ಸಾಕಷ್ಟು ಕಾರಣಗಳಿದ್ದವು.

ಇಂಥಾ ಕಾರಣಗಳಿಂದಲೇ, `ಯೆಸ್ ಇಟ್ ಈಸ್ ಟೈಮ್ ಟು ಕಂಟ್ರೋಲ್ ಸಿದ್ದರಾಮಯ್ಯ’ ಅಂತ ಹೈಕಮಾಂಡಿಗೆ ಅನ್ನಿಸಿದ್ದರೆ ಅಚ್ಚರಿಯೇನೂ ಇಲ್ಲ. ಯಾಕೆಂದರೆ ಈಗ ಮೊದಲಿನಂತೆ ಬಂಡಾಯದಿಂದಾಗಿ ಅಧಿಕಾರವನ್ನು ಕಳೆದುಕೊಳ್ಳುವ ಭೀತಿ ಕಾಂಗ್ರೆಸ್ಸಿಗಿಲ್ಲ. ಹಾಗಾಗಿ ಸಿದ್ದು ಮೇಲೆ ಇತ್ತೀಚೆಗೆ ತನಗೂ ಬೇಸರವಿದೆ ಅನ್ನೋ ಸಂದೇಶವನ್ನು ಸಿದ್ದು ವಿರೋಧಿಗಳಿಗೆ ಪರೋಕ್ಷವಾಗಿ ದಾಟಿಸಿದ ಹೈಕಮಾಂಡ್ ಅವರು `ಪ್ರತಿಪಕ್ಷ ನಾಯಕ’ ಸ್ಥಾನದ ಆಸೆಯಲ್ಲಿ ಸಿದ್ದು ವಿರುದ್ಧ ತಿರುಗಿಬೀಳುವಂತೆ ಒಂದು ಸಣ್ಣ ಆಟ ಆಡಿದ್ದರೂ ಅಚ್ಚರಿಯಿಲ್ಲ. ಮೈತ್ರಿ ಸರ್ಕಾರ ಪತನವಾದ ನಂತರ ಸಿದ್ದು ದಿಲ್ಲಿಗೆ ಹೋಗಿಬಂದಷ್ಟೇ, ಹೈಕಮಾಂಡ್ ಪರಮೇಶ್ವರ್‍ರನ್ನೂ ದಿಲ್ಲಿಗೆ ಕರೆಸಿಕೊಂಡಿರೋದು ಇಂಥಾ ಅನುಮಾನವನ್ನು ದಟ್ಟಗೊಳಿಸುತ್ತದೆ.

ಹಾಗಂತ, ಸಿದ್ರಾಮಯ್ಯನನ್ನು ಪಕ್ಕಕ್ಕಿಟ್ಟು ಬೇರೆ ಯಾರನ್ನೋ ಪ್ರತಿಪಕ್ಷ ನಾಯಕನನ್ನಾಗಿ ಮಾಡುವ ಪರಿಸ್ಥಿತಿಯೂ ಕಾಂಗ್ರೆಸ್ಸಿಗಿಲ್ಲ. ಆ ಸಾಮಥ್ರ್ಯವಿದ್ದ ಡೀಕೆ ಈಗ ಗೂಡಿನ ಹಕ್ಕಿಯಾಗಿದ್ದಾರೆ. ಖರ್ಗೆ ರಿಸ್ಕುಗಳನ್ನು ಮೈಮೇಲೆಳೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನುಳಿದವರು ಆ ಹುದ್ದೆಯಿಂದ ಬರುವ ಸವಲತ್ತುಗಳನ್ನು ಅನುಭವಿಸಬಹುದೇ ವಿನಾಃ, ಬೀದಿಗಿಳಿದು ಆಡಳಿತ ಪಕ್ಷದ ವಿರುದ್ಧ ಗುಡುಗಿ ಪಕ್ಷ ಸಂಘಟಿಸಲಾರರು. ಅನಿವಾರ್ಯವಾಗಿ ಸಿದ್ರಾಮಯ್ಯರನ್ನೇ ಆಯ್ಕೆ ಮಾಡಬೇಕಾಗುತ್ತೆ. `ಆದರೆ ಆ ಆಯ್ಕೆ ನಿಮಗೆ ಸುಲಭಕ್ಕೆ ದಕ್ಕಿದ್ದಲ್ಲ, ಮೊದಲಿನಂತೆ ಹೈಕಮಾಂಡ್ ಇನ್ಮುಂದೆ ನಿಮ್ಮ ಪರವಾಗಿ ಗಟ್ಟಿಯಾಗಿ ನಿಲ್ಲಲಾರದು. ನಿಮ್ಮ ವಿರೋಧಿಗಳ ದನಿಗೂ ನಾವು ಕಿವಿಗೊಡಲು ಸಿದ್ಧರಿದ್ದೇವೆ, ಹಾಗಾಗಿ ವೈಪರೀತ್ಯಗಳಿಗೆ ಅವಕಾಶ ಕೊಡದೆ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗಿ’ ಎಂಬ ಸಂದೇಶದ ಮೂಲಕ ಸಣ್ಣ ಎಚ್ಚರಿಕೆಯನ್ನೂ ಸಿದ್ದುಗೆ ರವಾನಿಸಲೆಂದೇ ಈ ಬಂಡಾಯ, ದಿಲ್ಲಿಯಿಂದ ಮಧುಸೂದನ್ ಮಿಸ್ತ್ರಿಯೆಂಬ ವೀಕ್ಷಕರ ಆಗಮನ, ಅಭಿಪ್ರಾಯ ಸಂಗ್ರಹಣೆಗಳಂತ ವಿದ್ಯಮಾನಗಳು ಜರುಗಿರೋದು. ಒಂದಂತು ಖರೆ, ಈ ಬಂಡಾಯದ ಎಪಿಸೋಡನ್ನು ಹೈಕಮಾಂಡೇ ಹೆಣೆದಿರಲಿ, ಅಥವಾ ಹೆಣೆಯದಿರಲಿ ಆದರೆ ಸಿದ್ದುಗೆ ಸಣ್ಣ ಎಚ್ಚರಿಕೆ ರವಾನಿಸಲು ಹೈಕಮಾಂಡ್‍ಗೆ ಇಂತದ್ದೊಂದು ಬೆಳವಣಿಗೆಯ ಅನಿವಾರ್ಯತೆ ಇತ್ತು.

`ಕೈ’ ಚೆಲ್ಲಿದ ಅವಕಾಶ!

ಹಳ್ಳಿಗಳ ಕಡೆ ಒಂದು ಲೇವಡಿ ಮಾತಿದೆ. ‘ಕತ್ತೆಗೆ ಕೊಂಬು ಬಂದರು ಬರಹುದು, ಆದರೆ ಕಾಂಗ್ರೆಸ್ಸಿಗರಿಗೆ ಬುದ್ದಿ ಬರಲ್ಲ’ ಅಂತ. ಕಾಂಗ್ರೆಸ್ಸಿಗರ ಬಣ ರಾಜಕಾರಣ ಅದನ್ನು ದಿಟ ಮಾಡುತ್ತಿದೆ. ಶಾಸಕರ ಖರೀದಿ ಮೂಲಕ ಅಧಿಕಾರಕ್ಕೇರಿರುವ ಬಿಜೆಪಿಯ ಬಗ್ಗೆ ಜನರಲ್ಲಿ ಅಷ್ಟೇನು ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅದೇ ಸಂದರ್ಭದಲ್ಲಿ ಉಕ್ಕಿ ಹರಿದ ನೆರೆ ನಿರ್ವಹಣೆ ಮತ್ತು ಪರಿಹಾರ ನೀಡಿಕೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೋರಿದ ಅಸಡ್ಡೆಗಳು ಜನರನ್ನು ಮತ್ತಷ್ಟು ಸಿಟ್ಟಿಗೇಳಿಸಿದ್ದವು. ಇಂಥಾ ಸಂದರ್ಭದಲ್ಲಿ ಬೀದಿಗಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿ ಜನರ ವಿಶ್ವಾಸ ಗಳಿಸುವ ಅವಕಾಶ ಕಾಂಗ್ರೆಸ್ ನಾಯಕರ ಮುಂದಿತ್ತು. ಆದರೆ ಯಕಶ್ಚಿತ್ ಪ್ರತಿಪಕ್ಷ ನಾಯಕನ ಸ್ಥಾನದ ಕಿತ್ತಾಟದಲ್ಲಿ ಅಂತಹ ಅವಕಾಶ ಕೈಚೆಲ್ಲಿ ಕೂತಿದ್ದಾರೆ. ಕೇಂದ್ರದ ವಿರುದ್ಧ ಬಿಜೆಪಿಯವರೇ ಬಂಡಾಯವೆದ್ದು, ಪ್ರತಿಹೇಳಿಕೆ ಕೊಟ್ಟು, ಪರಸ್ಪರ ಕಾಲೆಳೆದುಕೊಳ್ಳುವಷ್ಟು ವೈಪರೀತ್ಯ ತಲುಪಿದರೂ ಕಾಂಗ್ರೆಸ್ ನಾಯಕರು ಟ್ವೀಟ್ ಮತ್ತು ಮೀಡಿಯಾ ಸ್ಟೇಟ್‍ಮೆಂಟ್ ಹೊರತಾಗಿ ಬೇರಾವ ಸಾಹಸಕ್ಕೂ ಕೈಹಾಕಲಿಲ್ಲ. ಇನ್ನು ಎನ್‍ಆರ್‍ಸಿ ವಿಚಾರದಲ್ಲೂ ಕಾಂಗ್ರೆಸ್ ನಾಯಕರದ್ದು ಇದೇ ನಿರ್ಲಕ್ಷ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...