Homeಅಂತರಾಷ್ಟ್ರೀಯಇರಾನ್: ಮತೀಯ ಸರ್ಕಾರಗಳ ಬಂಧನದಲ್ಲಿ ಮಾನವ ಹಕ್ಕುಗಳು

ಇರಾನ್: ಮತೀಯ ಸರ್ಕಾರಗಳ ಬಂಧನದಲ್ಲಿ ಮಾನವ ಹಕ್ಕುಗಳು

- Advertisement -
- Advertisement -

ಪರ್ಷಿಯಾ, 1848ರ ಜೂನ್ ಅಥವಾ ಜುಲೈ ತಿಂಗಳ ಒಂದು ದಿನ. ಬಾಬಿ ಎಂಬ ಆಧ್ಯಾತ್ಮಿಕ ಆಂದೋಲನದ ಮುಂದಾಳುಗಳು ಬಾದ್ಶತ್ ಎಂಬ ಸ್ಥಳದಲ್ಲಿ ಸಭೆ ಸೇರಿದ್ದರು. ಬಹಾಯಿ ಶ್ರದ್ಧೆಯ ಮುಂದಾಳಾದ ಬಹಾವುಲ್ಲ ಇದನ್ನು ಆಯೋಜಿಸಿದ್ದರು. ಅವರ ಮುಖ್ಯವಾದ ಚರ್ಚೆಯ ವಿಷಯವೆಂದರೆ ತಮ್ಮ ಮೂಲ ಧರ್ಮವಾದ ಇಸ್ಲಾಂನ ಸಂಪ್ರದಾಯದಲ್ಲಿಯೇ ಮುಂದುವರಿಯಬೇಕೋ ಅಥವಾ ಅದರಿಂದ ಮುಂದುವರಿದ ಭಾಗವಾಗಿ ಮತ್ತೊಂದು ವಿಕಾಸದ ಪಥವನ್ನು ಆಯ್ದುಕೊಳ್ಳಬೇಕೋ ಎಂಬುದು. ಇಸ್ಲಾಂ ಕರ್ಮಠರ ಉಸಿರುಗಟ್ಟಿಸುವಿಕೆಯ ಸಾಂಪ್ರದಾಯಿಕ ಸಂಕೋಲೆಯು ಅಲ್ಲಾಹನೊಂದಿಗೆ ಹೊಂದುವ ಮಧುರ ಸಂಬಂಧವನ್ನು ಹೊಸಕಿ ಹಾಕುತ್ತಿದೆ ಎಂಬುದು ಅನೇಕ ಪ್ರಗತಿಪರ ಆಧ್ಯಾತ್ಮಿಕ ಚಿಂತಕರ ಅಭಿಪ್ರಾಯವಾಗಿತ್ತು.

ಅಂದು ಇದರ ಬಗ್ಗೆ ತೀವ್ರವಾದ ಚರ್ಚೆಗಳು ಆಗುತ್ತಿರುವಾಗಲೇ ತಾಹೀರೆ ಎಂಬ ಕವಿಯಿತ್ರಿ ಕರ್ಮಠರ ಒತ್ತಡವನ್ನು ವಿರೋಧಿಸುತ್ತಾ “ಖಂಡಿತವಾಗಿ ಧರ್ಮನಿಷ್ಠರು ತೋಟಗಳಲ್ಲಿ ಹಾಗೂ ಝರಿಗಳಲ್ಲಿ ಇರುವರು” (ಕುರಾನ್ 15.45) ಎನ್ನುತ್ತಾ ಸಾಂಕೇತಿಕವಾಗಿ ತನ್ನ ಮುಸುಕನ್ನು ಬಹಿರಂಗವಾಗಿ ತೆಗೆದೊಗೆದಳು. ಅಲ್ಲೋಲಕಲ್ಲೋಲವಾಗಿಬಿಟ್ಟಿತು. ಭಯಭೀತರಾಗಿ ಕಿರುಚಾಡಿದರು. ಕತ್ತಿಗಳನ್ನು ಹಿರಿದರು. ಗದ್ದಲವೊ ಗದ್ದಲ. ಒಬ್ಬ ಸಂಪ್ರದಾಯವಾದಿಯಂತೂ ತನ್ನ ತಲೆಗವುಸನ್ನು ತೆಗೆದ ಮಹಿಳೆಯನ್ನು ನೋಡಲಾಗದೇ ತನ್ನ ಕುತ್ತಿಗೆಯನ್ನೇ ಕುಯ್ದುಕೊಂಡು ಅಲ್ಲೇ ಸತ್ತುಬಿದ್ದ. ಮಹಿಳೆಯ ಹಕ್ಕನ್ನು ಪ್ರತಿಪಾದಿಸಿದ ತಾಹಿರೆಯನ್ನು ಬಂಧಿಸಲಾಯಿತು. ಬಾಬಿಯ ಹೊಸ ಪಂಥವನ್ನು ಅಂಗೀಕರಿಸಿದಕ್ಕಾಗಿ ಮತ್ತು ಬಹಿರಂಗವಾಗಿ ಹಿಜಾಬನ್ನು ತೆಗೆದುದಕ್ಕಾಗಿ ಅವಳ ಹತ್ಯೆ ಮಾಡಲಾಯಿತು. ಆಗ ಅವಳಿಗೆ ಬರೀ 35 ವರ್ಷ.

ಎನ್-ಘೆಲಾಬ್ ರಸ್ತೆಯ ಹುಡುಗಿಯರು

2017–19 ಅವಧಿಯಲ್ಲಿ ಇರಾನಿನಲ್ಲಿ ಕಡ್ಡಾಯ ಹಿಜಾಬ್ ತೊಡುವುದರ ವಿರುದ್ಧವಾಗಿ ಯುವತಿಯರು ಪ್ರತಿಭಟನೆ ನಡೆಸಿದರು. 27ನೇ ಡಿಸೆಂಬರ್ 2017ರಲ್ಲಿ ಟೆಹ್ರಾನಿನ ಕ್ರಾಂತಿಮಾರ್ಗ ಎಂದೇ ಕರೆಯುವ ಎನ್ ಘೆಲಾಬ್ ರಸ್ತೆಯಲ್ಲಿ ವಿದಾ ಮೊವಹೆದ್ ಎಂಬ ಇರಾನಿ ಮಹಿಳೆ ತನ್ನ ಹಿಜಾಬನ್ನು ತೆಗೆದು ಕೋಲಿಗೆ ಬಾವುಟದಂತೆ ಕಟ್ಟಿ ನಡೆದಾಡುತ್ತಿದ್ದ ಗುಂಪುಗಳ ಕಡೆಗೆ ಬೀಸಿದಳು. ಅವಳನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅವಳನ್ನು ಅನುಸರಿದ ಎಷ್ಟೋ ಹುಡುಗಿಯರು ಬಹುದೊಡ್ಡ ಸಂಖ್ಯೆಯಲ್ಲಿ ಕಡ್ಡಾಯ ಹಿಜಾಬ್ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದರು. ಇದನ್ನು ಬೆಂಬಲಿಸಿ, ಈ ಹುಡುಗಿಯರ ವಕಾಲತ್ತು ವಹಿಸಿದ್ದ ಅನೇಕ ಪ್ರಮುಖರಲ್ಲಿ ನಸ್ರೀನ್ ಸುಟುಡೇ ಕೂಡಾ ಒಬ್ಬರು.

ವಿದಾ ಮೊವಹೆದ್

ಮತೀಯವಾದಕ್ಕೆ ರಾಜಕೀಯದ ಅಂಕುಶ

ಭಾರತದ ಇಂದಿನ ಮತೀಯ ವ್ಯವಸ್ಥೆಯು ನಿರ್ಮಿಸಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಇರಾನಿನ ಸ್ಥಿತಿಗತಿಗಳನ್ನು ಅವಲೋಕಿಸಲು ಕಷ್ಟವೇನಾಗದು. ಆನಂದ ತೇಲ್ತುಂಬ್ಡೆ, ತೆಲುಗು ಕವಿ ವರವರರಾವ್, ಸುಧಾ ಭಾರಧ್ವಾಜ್‌ರಂತಹ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಲು ಮಾವೋವಾದಿಗಳ ಕೊಂಡಿಯನ್ನು ಸೃಷ್ಟಿಸಿ, ಭೀಮ್ ಕೋರೆಗಾವ್ ಗಲಭೆಯಲ್ಲಿ ವೃಥಾ ಬಂಧಿಸಿ ಶಿಕ್ಷೆ ನೀಡಲು ಕಾನೂನಿನಲ್ಲಿ ಯಾವ ಆಧಾರದಲ್ಲೂ ಅವರಿಗೆ ಸಡಿಲಿಕೆ ಸಿಗದಂತೆ ವಿಚಾರಣೆಯನ್ನು ಬಿಗಿಗೊಳಿಸಿ ಸರ್ಕಾರದ ವಿರುದ್ಧ ಹೋರಾಡುವವರ ಉಸಿರುಗಟ್ಟಿಸಿ ದೇಶದ್ರೋಹ ಆಪಾದನೆಗಳನ್ನು ಮಾಡುವ ಮಾದರಿಯನ್ನು ಗಮನಿಸಿದರೆ, ಇರಾನಿನಲ್ಲಿ ನಸ್ರೀನ್ ಸುಟುಡೆ, ಅವರಿಗೂ ಮುಂಚೆ ಶಿರಿನ್ ಇಬಾದಿ, ನಟಿ ಜ಼ಹ್ರ ಬಹ್ರಮಿಯವರನ್ನೆಲ್ಲಾ ವಿವಿಧ ಕಾರಣಗಳನ್ನು ಒಡ್ಡಿ ಬಂಧಿಸಿರುವ ರೀತಿ ಅರ್ಥವಾಗುತ್ತದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಬೆನ್ನಲ್ಲೇ ಇರಾನಿನ ಮಾನವ ಹಕ್ಕು ಹೋರಾಟಗಾರ್ತಿ ಮತ್ತು ನ್ಯಾಯವಾದಿ ನಸ್ರೀನ್ ಸುಟುಡೆಯವರಿಗೆ ಇರಾನಿಗೆ ನ್ಯಾಯಾಲಯವು 38 ವರ್ಷಗಳ ಕಾರಾಗೃಹ ಬಂಧನವನ್ನೂ ಮತ್ತು 148 ಛಡಿಯೇಟಿನ ಶಿಕ್ಷೆಯನ್ನು ನೀಡಲಾಗಿದೆ.

ಮುಸಲ್ಮಾನರ ಸಾಂಪ್ರದಾಯಿಕ ಹಿಜಾಬ್ ಹೆಣ್ಣು ಮಕ್ಕಳಿಗೆ ಕಡ್ಡಾಯದ ತಲೆಗವಸು ಆಗಬಾರದೆಂದು ಪ್ರತಿಪಾದಿಸಿದರೆಂದೂ, ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರೆಂದೂ, ಗೂಢಚರ್ಯೆಯಲ್ಲಿ ತೊಡಗಿದ್ದಾರೆಂದೂ, ಇರಾನಿನ ಪರಮೋಚ್ಛ ನಾಯಕನನ್ನು ಅವಮಾನಿಸಿದರೆಂಬ ಆರೋಪಗಳ ಮೇಲೆ ಅವರಿಗೆ ಶಿಕ್ಷೆ ವಿಧಿಸಿದ್ದಾರೆಂದು ಅವರ ವಕೀಲರು ತಿಳಿಸಿದ್ದಾರೆ.

ವಾಸ್ತವದಲ್ಲಿ ಮಾನವ ಹಕ್ಕುಗಳ ನ್ಯಾಯವಾದಿಯಾಗಿ ನಸ್ರೀನ್ ಜೂನ್ 2009ರ ಅಧ್ಯಕ್ಷೀಯ ಚುನಾವಣೆಯ ನಂತರ ವಿಚಾರಣೆಗಳನ್ನು ಎದುರಿಸುತ್ತಿದ್ದ ಮಾನವ ಹಕ್ಕು ಹೋರಾಟಗಾರರ ಪರವಾಗಿ ನ್ಯಾಯಾಲಯದಲ್ಲಿ ಹೋರಾಡಿದ್ದರು. ಮಹಿಳೆಯರಿಗೆ ಸಮಾನ ಹಕ್ಕನ್ನು ನೀಡಬೇಕೆಂದೂ, ಅಂತರರಾಷ್ಟ್ರೀಯ ಕಾನೂನು ಕ್ರಮವನ್ನು ಎತ್ತಿ ಹಿಡಿಯುತ್ತಾ ಬಾಲಾಪರಾಧಿಗಳಿಗೆ ಮರಣದಂಡನೆ ನೀಡಬಾರದೆಂಬುದು ಕೂಡಾ ಇವರ ಹೋರಾಟದ ಭಾಗವಾಗಿತ್ತು. ಹೆಣ್ಣು ಮಕ್ಕಳು ಹಿಜಾಬನ್ನು ಧರಿಸಲೇಬೇಕೆಂಬ ಒತ್ತಾಯದ ವಿರುದ್ಧವೂ ಇವರ ಧ್ವನಿಯಿತ್ತು. ಹಿಜಾಬ್ ಧರಿಸುವುದನ್ನು ಹೆಣ್ಣಿನ ಆಯ್ಕೆಯ ಸ್ವಾತಂತ್ರ್ಯಕ್ಕೆ ಬಿಡಬೇಕೆಂಬುದು ಕರ್ಮಠರ ಕೆರಳಿಸಿತ್ತು. ಮತೀಯವಾದಿಗಳಾದ ಅಧಿಕಾರಸ್ಥರು ತಮ್ಮ ರಾಜಕೀಯ ಶತ್ರುಗಳನ್ನು ದಮನ ಮಾಡಲು ಇಸ್ಲಾಂ ಕರ್ಮಠತನವನ್ನು ಬಳಸಿಕೊಂಡರು.

ಇರಾನಿನ ನಿವೃತ್ತ ನ್ಯಾಯಮೂರ್ತಿಯಾಗಿದ್ದ ಮತ್ತು ನೊಬಲ್ ಶಾಂತಿ ಪ್ರಶಸ್ತಿ ವಿಜೇತೆ ಶಿರಿನ್ ಇಬಾದಿಯವರ ಪ್ರಕರಣಗಳಲ್ಲಿಯೂ, ಆಫ್ಘನ್ ನಿರಾಶ್ರಿತೆಯಾಗಿ ಬಂದಿದ್ದು, ನಂತರ ನಟಿಯಾದ ಸಾರಾ (ಜ಼ಹ್ರ) ಬಾಹ್ರಾಮಿಯ ಪ್ರಕರಣದಲ್ಲಿಯೂ ನಸ್ರೀನ್ ನ್ಯಾಯವಾದಿಯಾಗಿದ್ದರು.

ವ್ಯವಸ್ಥೆಯ ವಿರುದ್ಧವಾಗಿ ಹುನ್ನಾರಗಳನ್ನು ಮಾಡುತ್ತಿದ್ದಾರೆಂದು, ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತರುವಂತಹ ವಿಷಯಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದಲ್ಲದೇ ಕಾನೂನು ಬಾಹಿರ ಸಂಸ್ಥೆಯಾದ ‘ಡೆಫೆಂಡರ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್ (ಡಿಹೆಚ್‌ಆರ್‌ಸಿ)’ನ ಸದಸ್ಯತ್ವವನ್ನು ಹೊಂದಿರುವುದಾಗಿ ಆರೋಪಿಸಿ ನ್ಯಾಯವಾದಿಯಾಗಿರುವುದನ್ನೂ ಮತ್ತು ವಿದೇಶ ಪ್ರವಾಸ ಮಾಡುವುದನ್ನೂ ನಿಷೇಧಿಸಿ ನಂತರ 14ನೇ ಸೆಪ್ಟೆಂಬರ್ 2011ರಲ್ಲಿ ಬಂಧಿಸಿತು. ನ್ಯಾಯಾಂಗ ಬಂಧನದ ನೆಪದಲ್ಲಿ ತನಗೂ ಮತ್ತು ತನ್ನ ಮನೆಯವರಿಗೂ ಕೊಡುತ್ತಿರುವ ಕಿರುಕುಳವನ್ನು ವಿರೋಧಿಸಿ ನಸ್ರೀನ್ ಐದು ವಾರಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದರು. ಇದರ ಫಲವಾಗಿ ಕೆಲವು ನಿಮಿಷಗಳ ಕಾಲ ಪೋಲಿಸ್ ಸಮ್ಮುಖದಲ್ಲಿ ಕುಟುಂಬವನ್ನು ನೋಡುವ ಅವಕಾಶ ನೀಡಿದರು. ಆರು ವರ್ಷಗಳ ಕಾಲದ ಬಂಧನದಿಂದ ಬಿಡುಗಡೆಯಾದ ಮೇಲೆ ಅವರ ಹೋರಾಟವನ್ನು ಮತ್ತೆ ಮುಂದುವರಿಸಿದ್ದರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳೆ, ಮಕ್ಕಳ, ರಾಜಕೀಯ ಖೈದಿಗಳ ಹಾಗೂ ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಬಂದರು. ನಿರ್ಭೀತವಾಗಿ ವ್ಯವಸ್ಥೆಯ ವೈಫಲ್ಯ ಮತ್ತು ಶೋಷಣೆಗಳನ್ನು ಗಟ್ಟಿ ದನಿಯಲ್ಲಿ ವಿರೋಧಿಸುತ್ತಲೇ ಬಂದ ಫಲವಾಗಿ ಈಗ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಂತರವೇ ಅವರಿಗೆ 38 ವರ್ಷಗಳ ಸೆರೆವಾಸವನ್ನೂ ಮತ್ತು 148 ಛಡಿಯೇಟಿನ ಶಿಕ್ಷೆಯನ್ನು ವಿಧಿಸಲಾಗಿದೆ.


ಇದನ್ನೂ ಓದಿ: ಇರಾನಿನ ಮೊದಲ ಮಹಿಳಾ ನ್ಯಾಯಮೂರ್ತಿ ಶಿರಿನ್ ಇಬಾದಿಯ ಹೋರಾಟದ ಕಥೆ


ಮಹಿಳೆಯೊಬ್ಬಳ ಶಾಂತಿಪತ್ರ

ಜೈಲಿನಲ್ಲಿರುವ ನಸ್ರೀನ್ ಸುಟುಡೆ ಅಂತರಾಷ್ಟ್ರೀಯ ಮಹಿಳಾ ದಿನದಂದು ಶಾಂತಿಯನ್ನು ಕೋರುತ್ತಾ ಬರೆದ ಪತ್ರ.

ಮಾರ್ಚ್ 6, 2020

2018ನೇ ವರುಷದ ವಸಂತಕಾಲದ ಕೊನೆಯ ದಿನಗಳ ಮಧ್ಯಾಹ್ನದಲ್ಲಿ ಇರಾನಿನ ಕಾನೂನು ವ್ಯವಸ್ಥೆಯ ಮತ್ತು ಇಂಟೆಲಿಜೆನ್ಸಿಯ ಅಧಿಕಾರಿಗಳ ಗುಂಪು ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ ಬಂದು ಬಂಧಿಸಿತು. ನನ್ನನ್ನು ಹಸಿರು ಟ್ಯಾಕ್ಸಿಯಲ್ಲಿ ಇವಿನ್ ಕಾರಾಗೃಹಕ್ಕೆ ಕರೆದೊಯ್ದರು. ಮಹಿಳೆಯರ ಮತ್ತು ಮಕ್ಕಳ ಹಕ್ಕನ್ನು ಪ್ರತಿಪಾದಿಸುವ ನನ್ನ ಕಾಯಕದ ಕಾರಣ ನಾನು ಐದುವರ್ಷಗಳ ಸೆರೆವಾಸಕ್ಕೆ ಒಳಗಾಗಬೇಕಾಯಿತು. ಕೆಲವು ತಿಂಗಳುಗಳ ನಂತರ ಇನ್ನೂ ಏಳು ಪ್ರಕರಣಗಳನ್ನು ನನ್ನ ಮೇಲೆ ದಾಖಲಿಸಲಾಯಿತು. ಈಗ ಒಟ್ಟಾರೆ 33 ವರ್ಷಗಳ ಸೆರೆವಾಸ ಮತ್ತು 148 ಛಡಿಯೇಟಿನ ಶಿಕ್ಷೆಯನ್ನು ವಿಧಿಸಲಾಗಿದೆ. ಈ ಕಠಿಣ ಶಿಕ್ಷೆಗಳು ಏಕೆಂದರೆ ನಾನು ಹನ್ನೆರಡು ವರ್ಷಗಳ ಕಾಲ ನಶ್ವರವಾದುದನ್ನು ಮತ್ತು ಅಗೌರವಯುತವಾದ ವಿಷಯಗಳನ್ನು ಪ್ರಚಾರ ಮಾಡುತ್ತಿದ್ದೆ ಅಂತೆ.

ನಸ್ರೀನ್ ಸುಟುಡೆ

ಸಧ್ಯಕ್ಕೆ ನಾನು ಮಹಿಳೆಯರಿಗೆ ಮೀಸಲಿರುವ ಬಂಧಿಖಾನೆಯಲ್ಲಿದ್ದೇನೆ. ಮೂರು ಕೊಠಡಿಗಳಿದ್ದು ಇದರಲ್ಲಿ ಒಟ್ಟು ನಲವತ್ತು ಜನ ಖೈದಿಗಳಿದ್ದಾರೆ. ಬಹಳಷ್ಟು ಜನ ಬಂಧಿತರಾಗಿರುವುದು ರಾಜಕೀಯ ಕಾರಣಗಳಿಂದ.

ಎವಿನ್ ಬಂಧಿಖಾನೆಯ ಮಹಿಳಾ ವಿಭಾಗದಲ್ಲಿ ಇರುವವರೆಲ್ಲಾ ಬಹುಪಾಲು ಮಾನವ ಹಕ್ಕುಗಳ ಪ್ರತಿಪಾದಕರು, ಮಹಿಳಾ ಹಕ್ಕುಗಳ ಹೋರಾಟಗಾರರು, ನಾಗರಿಕ ಮತ್ತು ಪರಿಸರ ಹೋರಾಟಗಾರರು, ಧಾರ್ಮಿಕ ಅಲ್ಪಸಂಖ್ಯಾತರು, ದಾರ್ಶನಿಕರು, ಕಾರ್ಮಿಕ ಚಳವಳಿಗಳ ಕಾರ್ಯಕರ್ತರು, ಇವರ ಜೊತೆಗೆ ಬೇಹುಗಾರಿಕೆಯ ಆಪಾದನೆಗಳ ಮೇಲೆ ಎರಡು ಪೌರತ್ವವಿರುವವರು ಕೂಡಾ ಇದ್ದಾರೆ.

ಇಲ್ಲಿ ನನ್ನ ವೈಯಕ್ತಿಕ ಕೆಲಸಗಳನ್ನು ಮಾಡಿಕೊಂಡು ಇತರರೊಂದಿಗೆ ವ್ಯಾಯಾಮ ಮಾಡುತ್ತಾ, ಕರಕುಶಲ ವಸ್ತುಗಳನ್ನು ನಿರ್ಮಿಸುತ್ತಾ, ಪುಸ್ತಕಗಳನ್ನು ಓದುತ್ತಾ, ಗುಂಪು ಚರ್ಚೆಗಳನ್ನು ಮಾಡುತ್ತಾ ನನ್ನ ದಿನಗಳನ್ನು ಕಳೆಯುತ್ತಿದ್ದೇನೆ. ಭಾನುವಾರ ಸಂದರ್ಶಕರ ದಿನ. ಸಂದರ್ಶನದ ವಿಷಯದಲ್ಲಿ ನಾನು ನಿಷೇಧಕ್ಕೊಳಗಾಗದಿದ್ದರೆ ನನ್ನ ಕುಟುಂಬವನ್ನು ನೋಡಬಹುದು.

ಬಂಧಿಖಾನೆಯಲ್ಲಿ ಕೆಲವು ಸಲ ಮಿತಿಗೊಳಿಸಿರುವ ಸಮಯದಲ್ಲಿ ಆಸಕ್ತರಿಗೆ ಮಾನವ ಹಕ್ಕುಗಳ ವಿಷಯವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ. ಮುಖ್ಯವಾಗಿ ಇತರರೊಂದಿಗೆ ವಿವಿಧ ದೇಶಗಳಲ್ಲಿನ ಸತ್ಯಾಸತ್ಯತೆಗಳ ಮತ್ತು ಸಾಮರಸ್ಯದ ಆಯೋಗಗಳ ಬಗ್ಗೆ ತಿಳಿಸುತ್ತಾ, ತಿಳಿದುಕೊಳ್ಳುತ್ತಾ ನನ್ನನ್ನು ತೊಡಗಿಸಿಕೊಂಡಿರುತ್ತೇನೆ.

ಕಡ್ಡಾಯ ಹಿಜಾಬ್ ಧರಿಸಬೇಕು ಎಂಬ ಇರಾನಿನ ಕಾನೂನನ್ನು ಪ್ರತಿಭಟಿಸಿ ಎಂಗೆಲಾಬ್ ಬೀದಿಯಲ್ಲಿ ತಮ್ಮ ತಲೆಗವುಸುಗಳನ್ನು ಸಾರ್ವಜನಿಕವಾಗಿ ತೆಗೆದು ಅವನ್ನು ಕೋಲಿಗೆ ಸಿಕ್ಕಿಸಿ ಆಡಿಸಿಕೊಂಡು ಪ್ರತಿಭಟನೆ ಮಾಡಿದ ಹುಡುಗಿಯರಾಗಲಿ, ಹೆಂಗಸರಾಗಲಿ ಇಲ್ಲಿ ಇಲ್ಲ. ಆದರೆ ನನ್ನ ಕೊಠಡಿಯಲ್ಲಿರುವ ಕೆಲವು ಯುವತಿಯರು ಕಳೆದ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಟೆಹ್ರಾನಿನ ಸಾರ್ವಜನಿಕ ಸುರಂಗ ಮಾರ್ಗದಲ್ಲಿ ಪ್ರಯಾಣಿಕರಿಗೆ ಹೂಗಳನ್ನು ಕೊಟ್ಟು ಮಾತನಾಡಿಸಿದವರು. ಮತ್ತೊಂದು ಸಲ ಈ ಗುಂಪಿನವರು ನನ್ನ ಚಿತ್ರಗಳನ್ನು ಹಿಡಿದು ನನ್ನ ಬೆಂಬಲಿಸಿದವರು. ಆ ಕಾರಣದಿಂದಾಗಿ ಕಠಿಣ ಶಿಕ್ಷೆಗಳಿಗೆ ಅವರು ಒಳಗಾಗಿದ್ದಾರೆ. ಇದು ನನ್ನ ಜವಾಬ್ದಾರಿಯ ಪ್ರಜ್ಞಾವಂತಿಕೆಯನ್ನು ಮತ್ತಷ್ಟು ಗಾಢಗೊಳಿಸಿದೆ.

ಮಹಿಳೆಯರ ಹಕ್ಕುಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವಂತಹ ದೇಶ ಇರಾನ್. ಆದ್ದರಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗೌರವಿಸುವ ಮತ್ತು ಸ್ಮರಿಸಿಕೊಳ್ಳುವ ಪ್ರಾಮುಖ್ಯತೆ ಇಲ್ಲಿದೆ.

ಈ ದಿನ ಕಳೆದು ಹೋದ ವರ್ಷಗಳ ಕುರಿತು ಆಲೋಚಿಸುತ್ತಿದ್ದೇನೆ. ಅವು ನಮ್ಮ ಸದ್ದಡಗಿಸಿದ ಮತ್ತು ಬಂಧಿಸಿದ ವರ್ಷಗಳು; ಪ್ರತಿಭಟಿಸಿದ, ಬಂಧಿಸಿದ, ಗೋಡೆಗಳ ಹಿಂದೆ ನಮ್ಮನ್ನು ಜಾಲಕ್ಕೆ ಸಿಕ್ಕಿಸಿದ ವರ್ಷಗಳು. ಹಾಗೆಯೇ, ಈ ವರ್ಷದ ಕುರಿತೂ ನಾನು ಆಲೋಚಿಸುತ್ತಿದ್ದೇನೆ. ಇದು ಇರಾನಿ ಪ್ರಜೆಗಳ ದುರಂತ ಮತ್ತು ರೋಗಗಳ ವರ್ಷ. ಹಗೆತನ ಮತ್ತು ಶತ್ರುತ್ವಗಳ ಪರಿಣಾಮವು ಬೆನ್ನತ್ತಿ ನಮ್ಮನ್ನು ಸುತ್ತುವರಿಯುತ್ತಿರುವುದು.

ನಾವು ತೆಗೆದುಕೊಂಡಿರುವ ದಾರಿಯನ್ನು ಅವಲೋಕಿಸುತ್ತಾ ವಿಮರ್ಶೆ ಮಾಡಿಕೊಳ್ಳುತ್ತಿದ್ದೇನೆ. ನಾವೆಲ್ಲಿ ತಪ್ಪಿದ್ದೇವೆ? ನಾವೇಕೆ ಯಶಸ್ಸನ್ನು ಕಾಣುತ್ತಿಲ್ಲ? ನಮ್ಮ ಸರ್ಕಾರಕ್ಕೆ ಸರಿಯಾಗಿ ಆಡಳಿತವನ್ನೇಕೆ ನಡೆಸಲಾಗುತ್ತಿಲ್ಲ? ಏಕೆ ನಮಗೆ ಪರಿಣಾಮಕಾರಿಯಾಗಿ ಮತ್ತು ಶಾಂತಿಯುತವಾಗಿ ವಿರೋಧಿಸಲಾಗುತ್ತಿಲ್ಲ?

ಈಗ ಮುಂದೇನು? ಗೊತ್ತಿಲ್ಲ. ನಸ್ರೀನ್ ತಮ್ಮನ್ನು ಕೇಳಿಕೊಂಡಿರುವ ಪ್ರಶ್ನೆಗಳು ಭಾರತದಲ್ಲಿರುವ ಹೋರಾಟಗಾರಲ್ಲೂ ಮೂಡಿದ್ದರೆ ಆಶ್ಚರ್ಯವೇನಿಲ್ಲ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ವಿಶ್ವಸಂಸ್ಥೆಯೂ ಕೂಡಾ ಇರಾನಿನ ಆಂತರಿಕ ಕಾನೂನು ವ್ಯವಸ್ಥೆಯಲ್ಲಿ ಮಧ್ಯೆ ಪ್ರವೇಶಿಸಲಾಗುವುದಿಲ್ಲ. ಒಟ್ಟಾರೆ ಸಂಪ್ರದಾಯವಾದಿ ಕರ್ಮಠರ ಕೈಯಲ್ಲಿ ಒಪ್ಪಿಸಿರುವ ಕಾನೂನು ವ್ಯವಸ್ಥೆ ಮತ್ತು ರಾಜಕೀಯ ವ್ಯವಸ್ಥೆಯು ಪ್ರಜಾಪ್ರಭುತ್ವಕ್ಕೆ ಮತ್ತು ಮಾನವಹಕ್ಕುಗಳಿಗೆ ಎರವೇ. ವಿಶ್ವಸಂಸ್ಥೆಯಾಗಲಿ, ಇತರ ಪ್ರಗತಿಪರ ಸಮೂಹಗಳಾಗಲಿ ಮಹಿಳೆಯ ಹಕ್ಕನ್ನು ಮತ್ತು ಮಾನವಹಕ್ಕುಗಳನ್ನು ಪ್ರತಿಬಂಧಿಸುವ ಇಂತಹ ಸಂದರ್ಭಗಳಲ್ಲಿ ಸಾಮರಸ್ಯವನ್ನೂ ಕಾಪಾಡಿಕೊಂಡು ಹೇಗೆ ಪ್ರತಿಕ್ರಿಯಿಸಬೇಕು? ಇನ್ನೂ ಗೊತ್ತಾಗಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...