Homeನ್ಯಾಯ ಪಥ'ದೇಶವಿರೋಧಿ' ಪ್ರಕರಣ ಎಂಬ ನಾಚಿಕೆಗೇಡು! : ಡಿ.ಉಮಾಪತಿ

‘ದೇಶವಿರೋಧಿ’ ಪ್ರಕರಣ ಎಂಬ ನಾಚಿಕೆಗೇಡು! : ಡಿ.ಉಮಾಪತಿ

- Advertisement -
- Advertisement -

ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು,
ಬದುಕು ಬೆಳಗುವ ದೀಪದಂತಿರಲಿ ಹೇ ದೇವದೇವ
ಕಳೆದು ಹೋಗಲಿ ಇಳೆಯ ಕತ್ತಲೆ,
ಹೊಳೆದು ಬೆಳಗಲಿ ಎಲ್ಲ ತಾವುಗಳು
ನನ್ನ ಕಾಂತಿಯಿಂದ.
ಸುಮಕುಸುಮಗಳು ಉದ್ಯಾನವ ಸಿಂಗರಿಸಿದಂತೆ
ಸೊಗಸಿಬಿಡಲೇ ನಾನೆನ್ನ ತಾಯ್ನೆಲವ ತಬ್ಬಿ ಹಬ್ಬಿ..
ಎನ್ನ ಜೀವದುಸಿರು ನೀನಾಗು ಎಲೆ ದೇವ,
ತಿಳಿವಿನ ದೀಪಕ್ಕೆಳೆಸುವ ಪತಂಗ ನಾನು
ಎನ್ನ ಇರವಿನ ಧ್ಯೇಯವಾಗಿಸು,
ವೃದ್ಧರು ದುಃಖಿತರು, ದೀನದರಿದ್ರರ ಸೇವೆಯನು.
ಹಿಡಿದೆತ್ತು ಅಂತರ್ಯಾಮಿಯೇ ನನ್ನನು ಜಗದ ಕೇಡಿನಿಂದ
ಉದ್ಧರಿಸು ಮುನ್ನಡೆಸು ಸಚ್ಚಾರಿತ್ರ್ಯದೆಡೆಗೆ

ಈ ಗೀತೆಯನ್ನು ಓದಿ, ಇದರ ಉರ್ದು ಮೂಲದ ಗಾಯನವನ್ನು ಆಲಿಸಿದ ನನಗೆ ಆಚಾರ್ಯ ಬಿ.ಎಂ.ಶ್ರೀ. ಅವರ ಇಂಗ್ಲಿಷ್ ಗೀತಗಳು ಸಂಗ್ರಹದ ಪ್ರಸಿದ್ಧ ಪದ್ಯ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ನೆನಪಾಯಿತು. ಬಿ.ಎಂ.ಶ್ರೀ ಅವರ ಸೊಗಸಿನ ಅನುವಾದದ ಮಹಿಮೆ. ಮೂಲ ಕನ್ನಡದ್ದೇ ಎನ್ನುವಷ್ಟರಮಟ್ಟಿಗೆ ಈ ಗೀತೆ ಕನ್ನಡಿಗರಲ್ಲಿ ಜನಪ್ರಿಯ. ರತ್ನಮಾಲಾ ಪ್ರಕಾಶ್ ಅವರ ಸಿರಿಕಂಠದಲ್ಲಿ ಈ ಗೀತೆಯನ್ನು ಕೇಳಿ ಧ್ಯಾನಸ್ಥ ಸ್ಥಿತಿಗೆ ಜಾರದ ಮನಸುಗಳೇ ಇರಲಾರವು. ಇಂಗ್ಲೆಂಡಿನ ಕ್ರೈಸ್ತ ಸಂತ ಜಾನ್ ಹೆನ್ರಿ ನ್ಯೂಮನ್ 1833ರಲ್ಲಿ ರಚಿಸಿದ್ದ ಪ್ರಾರ್ಥನಾ ಗೀತೆಯಿದು ಎಂಬ ಸಂಗತಿ ಈಗಲೂ ಬಹಳಷ್ಟು ಜನಕ್ಕೆ ತಿಳಿದಿಲ್ಲ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಇಗರ್ಜಿಗಳಲ್ಲಿ ಇಂದಿಗೂ ಈ ಇಂಗ್ಲಿಷ್ ಗೀತೆಯನ್ನು ಹಾಡಲಾಗುತ್ತದೆ.

ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು… ಎಂಬ ಪದ್ಯದ ಉರ್ದು ಮೂಲ ಹೀಗಿದೆ-

‘ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ/ ಝಿಂದಗೀ ಶಂಮಾ ಕೀ ಸೂರತ್ ಹೋ ಖುದಾಯಾ ಮೇರೀ/ ದೂರ್ ದುನಿಯಾ ಕಾ ಮೇರೇ ದಮ್ ಸೇ ಅಂಧೇರಾ ಹೋ ಜಾಯೇ/ ಹರ್ ಜಗಾಹ ಮೇರೀ ಚಮಕನೇ ಸೇ ಉಜಾಲಾ ಹೋ ಜಾಯೇ/ ಹೋ ಮೇರೇ ದಮ್ ಸೇ ಯೂಂ ಹೀ ಮೇರೆ ವತನ್ ಕೀ ಝೀನತ್/ ಜಿಸ್ ತರಾಹ್ ಫೂಲ್ ಸೇ ಹೋತೀ ಹೈ ಚಮನ್ ಕೀ ಝೀನತ್/ ಝಿಂದಗೀ ಹೋ ಮೇರೀ ಪರವಾನೇ ಕೀ ಸೂರತ್ ಯಾರಬ್/ ಇಲ್ಮ್ ಕೀ ಶಂಮಾ ಸೇ ಹೋ ಮುಝಕೋ ಮೊಹೋಬ್ಬತ್ ಯಾರಬ್/ ಹೋ ಮೇರಾ ಕಾಮ್ ಗರೀಬೋಂ ಕೀ ಹಿಮಾಯತ್ ಕರನಾ/ ದರದಮಂದೋ ಸೇ ಝೀಂಫೋ ಸೇ ಮೊಹೊಬ್ಬತ್ ಕರನಾ/ ಮೇರೇ ಅಲ್ಲಾಹ ಬುರಾಯೀ ಸೇ ಬಚಾನಾ ಮುಝಕೋ/ ನೇಕ ಜೋ ರಾಹ ಉಸೀ ಪೆ ಚಲಾನಾ ಮುಝಕೋ/ ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ’

ಈ ಉರ್ದು ಗೀತೆಯನ್ನು ನನ್ನ ತಿಳಿವಳಿಕೆಗೆ ನಿಲುಕಿದ ಕನ್ನಡಕ್ಕೆ ತರ್ಜುಮೆ ಮಾಡಿ ಇಲ್ಲಿ ಓದುಗರ ಮುಂದೆ ಇರಿಸಿದ್ದೇನೆ. ಹೆಚ್ಚು ಬಲ್ಲವರು ಇನ್ನಷ್ಟು ಸೊಗಸಾಗಿ ಅನುವಾದ ಮಾಡಿಕೊಳ್ಳಬಹುದು.

ಈಗಲೂ ದೇಶದ ಲಕ್ಷಾಂತರ ಶಾಲೆಗಳಲ್ಲಿ ದಿನನಿತ್ಯ ಮತ್ತು ಸ್ವಾತಂತ್ರ್ಯೋತ್ಸವ ದಿನ ಹಾಗೂ ಗಣರಾಜ್ಯೋತ್ಸವದಂದು ಮೊಳಗುವ ಇನ್ನೊಂದು ಸುಂದರ ದೇಶಭಕ್ತಿ ಗೀತೆಯಿದೆ. ಅದು ‘ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾನ ಹಮಾರಾ….’

ಈ ಗೀತೆಯ ಬರೆದ ಕವಿಯೇ ‘ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ’ (ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು…’) ಎಂಬ ಗೀತೆಯನ್ನೂ ಬರೆದಿದ್ದಾನೆ.

ಆತನ ಹೆಸರು ಅಲ್ಲಾಮ ಇಕ್ಬಾಲ್. 1902ರಲ್ಲಿ ಈ ಗೀತೆಯನ್ನು ಆತ ಬರೆದಿದ್ದ. ಸಾರೇ ಜಹಾಂ ಸೇ ಅಚ್ಛಾ ಬರೆದದ್ದು ಎರಡು ವರ್ಷಗಳ ನಂತರ 1904ರಲ್ಲಿ. ಹಿಂದೂಸ್ತಾನಿ ಬಚ್ಚೋಂ ಕಾ ಖೋಮಿ ಗೀತ್ ನ್ನು ಬರೆದದ್ದು 1905ರಲ್ಲಿ. ಈ ಕಾಲಘಟ್ಟದಲ್ಲಿ ಆತ ಅಪ್ಪಟ ಭಾರತೀಯ ರಾಷ್ಟ್ರವಾದಿಯಾಗಿದ್ದ. ಆನಂತರ ಆತ ಪ್ರತ್ಯೇಕ ಪಾಕಿಸ್ತಾನ ಬೇಡಿಕೆಯ ಹೋರಾಟದ ಮುಂಚೂಣಿಯಲ್ಲಿದ್ದ ಮತ್ತು ಪಾಕಿಸ್ತಾನದ ರಾಷ್ಟ್ರಕವಿ ಎನಿಸಿಕೊಂಡದ್ದು ಹೌದು. ಆದರೆ ಲಬ್ ಪೇ ಆತೀ…ಗೀತೆಯಲ್ಲಿ ಬರುವ ‘ವತನ್’ (ಜನ್ಮಭೂಮಿ) ಪದವು ಭಾರತವನ್ನೇ ಉದ್ದೇಶಿಸಿದ್ದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ನಾವು ಇಂದಿಗೂ ಮನದುಂಬಿ ಹಾಡುವ ಸಾರೇ ಜಹಾಂ ಸೇ ಅಚ್ಛಾ ಗೀತೆಯನ್ನು ಆತ ರಚಿಸಿದ್ದು ಲಬ್ ಪೇ ಆತೀ ಬರೆದ ಎರಡು ವರ್ಷಗಳ ನಂತರ ಎಂಬುದನ್ನು ಗಮನಿಸಬೇಕು.

ಯಾವ ಕೋನದಿಂದ ನೋಡಿದರೂ ಲಬ್ ಪೇ ಆತೀ ಹೈ ದುವಾ….ಧಾರ್ಮಿಕ ಗೀತೆ ಅಥವಾ ಮುಸ್ಲಿಂ ಪ್ರಾರ್ಥನೆ ಅಲ್ಲ. ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾನ್ ಹಮಾರಾ…ಮುಸ್ಲಿಂ ಪ್ರಾರ್ಥನೆಯೆಂದು ಹೇಳುವುದು ಎಷ್ಟು ವಿಕೃತವೋ, ಲಬ್ ಪೇ ಆತೀ ಹೈ ದುವಾ…ಕ್ಕೆ ಮುಸ್ಲಿಂ ಪ್ರಾರ್ಥನೆಯ ಬಣ್ಣ ಹಚ್ಚುವುದೂ ಅಷ್ಟೇ ವಿಕೃತ ಆದೀತು.

ಇಷ್ಟೆಲ್ಲವನ್ನೂ ಇಲ್ಲಿ ಪ್ರಸ್ತಾಪಿಸಿದ ಹಿನ್ನೆಲೆ ಉತ್ತರಪ್ರದೇಶದ ಪೀಲೀಭೀತ್ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರ ಅಮಾನತು ಪ್ರಕರಣ. ಮುಖ್ಯೋಪಾಧ್ಯಾಯ ಫುರ್ಖಾನ್ ಅಲಿ ಅವರು ಶಾಲೆಯಲ್ಲಿ ಮದರಸಾದ ಪ್ರಾರ್ಥನೆಯನ್ನು ಮಕ್ಕಳಿಂದ ಹಾಡಿಸುತ್ತಿದ್ದಾರೆ ಎಂಬುದಾಗಿ ವಿಶ್ವಹಿಂದು ಪರಿಷತ್ ಆರೋಪ ಮಾಡಿತ್ತು. ಅಲಿ ಅವರಿಂದ ವಿವರಣೆಯನ್ನೂ ಪಡೆಯದೆ ಜಿಲ್ಲಾಡಳಿತ ಆತನನ್ನು ಅಕ್ಟೋಬರ್ 14ರಂದು ಅಮಾನತಿನಲ್ಲಿ ಇರಿಸಿತು. ಲಬ್ ಪೇ ಆತೀ ಹೈ ದುವಾ ಗೀತೆಯು ಮದರಸಾ ಪ್ರಾರ್ಥನೆ, ಅದನ್ನು ಹಾಡಿಸುವುದು ದೇಶವಿರೋಧದ ಕೃತ್ಯ ಎಂದು ವಿ.ಹಿಂ.ಪ. ದೂರು ನೀಡಿತ್ತು.

ಪೀಲೀಭೀತ್ ಜಿಲ್ಲೆಯ ಈ ಶಾಲೆಯ ಮಕ್ಕಳು ನಿತ್ಯವೂ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ ಮತ್ತು ಸರಸ್ವತಿ ವಂದನಾ ವನ್ನೂ ವಾಚಿಸುತ್ತಿದ್ದಾರೆ, ವೋ ಶಕ್ತಿ ಹಮೇಂ ದೋ ದಯಾನಿಧೀ ಗೀತೆಯನ್ನೂ ಹಾಡುತ್ತಿದ್ದಾರೆ.

ತಮ್ಮ ಮುಖ್ಯೋಪಾಧ್ಯಾಯರನ್ನು ಈ ಶಾಲೆಯ ಮಕ್ಕಳು ಬಹುವಾಗಿ ಪ್ರೀತಿಸುತ್ತಿದ್ದರು. ಯಾಕೆಂದರೆ ಆತನೂ ಮಕ್ಕಳನ್ನು ಅಕ್ಕರೆಯಿಂದ ಕಾಣುತ್ತಿದ್ದರು. ತಮ್ಮ ಸಂಬಳದ ಹಣ ಖರ್ಚು ಮಾಡಿ ಶಾಲೆಯ ಅಭಿವೃದ್ಧಿ ಮಾಡಿದ್ದರು. ಮಧ್ಯಾಹ್ನದ ಬಿಸಿಯೂಟದ ತರಕಾರಿಗೆ ತಾವೇ ಹಣ ನೀಡುತ್ತಿದ್ದರು. ಹೀಗಾಗಿ ತಮ್ಮ ಅಚ್ಚುಮೆಚ್ಚಿನ ಮೇಷ್ಟ್ರನ್ನು ಅಮಾನತಿನಲ್ಲಿ ಇರಿಸಿರುವ ಕ್ರಮವನ್ನು ಮಕ್ಕಳು ಪ್ರತಿಭಟಿಸಿದ್ದಾರೆ. ಕಳೆದ ಶುಕ್ರವಾರ ಶಾಲಾಮೈದಾನದಲ್ಲಿ ಸೇರಿದ್ದ ಮಕ್ಕಳು ಸಾಲುಗಳಲ್ಲಿ ನಿಂತು ಕೂಗಿದ ಘೋಷಣೆ- ದೇಶದ ರಕ್ಷಣೆ ಯಾರು ಮಾಡ್ತಾರೆ? ನಾವು ಮಾಡ್ತೇವೆ. ಹೇಗೆ ಮಾಡ್ತೇವೆ? ತನುವಿನಿಂದ ಮಾಡ್ತೇವೆ, ಮನಸಿನಿಂದ ಮಾಡ್ತೇವೆ, ಧನದಿಂದ ಮಾಡ್ತೇವೆ.

ಹತ್ತು ನಿಮಿಷ ಘೋಷಣೆ ಕೂಗಿ ಮನೆಯತ್ತ ಹೊರಟವು ಮಕ್ಕಳು. ತಮ್ಮ ಮೇಷ್ಟ್ರು ವಾಪಸು ಬರುವವರೆಗೆ ತಾವೂ ಶಾಲೆಗೆ ಬರುವುದಿಲ್ಲ ಎಂದವು. ಲಬ್ ಪೇ ಆತೀ ಹೈ ಗೀತೆಯನ್ನು ಹಾಡುವಂತೆ ಮತ್ತು ಹಾಡಿಸುವಂತೆ ನಾವೇ ಮೇಷ್ಟ್ರನ್ನ ಕೇಳಿಕೊಂಡೆವು. ದಿನ ಬಿಟ್ಟು ದಿನ ಹಾಡಲು ಅವರು ನಮಗೆ ಅನುಮತಿ ಕೊಟ್ಟರು ಎಂದು ಮಕ್ಕಳು ತಿಳಿಸಿವೆ. ಹಾಜರಾತಿ 150ರಿಂದ ಐದು ಹತ್ತಕ್ಕೆ ತಗ್ಗಿದೆ.

ತನ್ನ ತಪ್ಪಿನ ಅರಿವಾದಂತಿರುವ ಸರ್ಕಾರ ಬಿದ್ದರೂ ಮೀಸೆ ಮಣ್ಣಾಗದು ಎಂಬಂತೆ ಅಲಿಯ ಅಮಾನತನ್ನು ಮಾನವೀಯತೆಯ ಆಧಾರದ ಮೇಲೆ ರದ್ದು ಮಾಡಲಾಗಿದೆ ಎಂದಿದೆ. ಆದರೆ ಅವರನ್ನು ಬೇರೆ ಶಾಲೆಗೆ ವರ್ಗ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...