ರಾಷ್ಟ್ರಕವಿ ಕುವೆಂಪು ಮತ್ತು ರಾಷ್ಟ್ರಗೀತೆಯನ್ನು ನಿಂದಿಸಿದವರ ಮೇಲೆ ಕಾನೂನು ಕ್ರಮಕೈಗೊಳ್ಳದೆ, ಅವರಿಗೆ ಜವಬ್ದಾರಿಯುತ ಸ್ಥಾನಗಳನ್ನು ನೀಡಿದ ಸರ್ಕಾರದ ನಡೆಯನ್ನು ಪ್ರತಿಭಟಿಸಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸಾಹಿತಿ, ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಸೋಮವಾರ ರಾಜೀನಾಮೆ ಘೋಷಿಸಿದ್ದಾರೆ.
ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಹಂಪನಾ, “ರಾಷ್ಟ್ರಕವಿ ಕುವೆಂಪುರವರನ್ನೂ, ನಮ್ಮ ಪವಿತ್ರ ನಾಡಗೀತೆಯನ್ನೂ ಅಪಮಾನಿಸುತ್ತಿದ್ದರೂ ನೋಡಿಕೊಂಡು ತೆಪ್ಪಗಿರುವುದು ನನಗೆ ಕಷ್ಟವಾಗಿದೆ” ಎಂದು ಹೇಳಿದ್ದು, ಮುಖ್ಯಮಂತ್ರಿ ತನ್ನ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕುವೆಂಪುರವರನ್ನೂ ಅವರು ಹುಟ್ಟಿದ ಗೌರವಾನ್ವಿತ ದೊಡ್ಡ ಜನಾಂಗವನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಮ್ಮ ರಾಷ್ಟ್ರಗೀತಿಯಾದ ನಾಡಗೀತೆಯನ್ನು ಲೇವಡಿ ಮಾಡಿದ ವ್ಯಕ್ತಿಯ ಮೇಲೆ ಕ್ರಮಕೈಗೊಳ್ಳುವ ಬದಲು ಸರ್ಕಾರ ಜವಾಬ್ದಾರಿಯ ಸ್ಥಾನ ನೀಡಿದೆ. ಇದು ಅಪಾಯಕಾರಿಯಾದ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪಠ್ಯಪುಸ್ತಕ ‘ಚಕ್ರತೀರ್ಥ’ದಲ್ಲಿ ಒದ್ದಾಡುತ್ತಾ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ: ನಾಡೋಜ ಹಂಪನಾ
ಇದು, ‘ಪುಣ್ಯಶ್ಲೋಕರ ಮೇಲೆ ಕೆಟ್ಟ ಮಾತುಗಳ ಮಳೆ ಸುರಿಸಿದರೆ ಅಂಥವರಿಗೆ ಸರಕಾರದ ಸಮಿತಿಗಳಲ್ಲಿ ಸದಸ್ಯರಾಗುವ ಸದವಕಾಶಗಳಿವೆ’ ಎಂಬ ಸಂದೇಶ ರವಾನೆ ಮಾಡಿದಂತಾಗಿದೆ. ವ್ಯಕ್ತಿಗಳ ತೇಜೋವಧೆ ಮಾಡುವುದನ್ನು ನಮ್ಮ ಸರಕಾರ ಸಹಿಸುವುದಿಲ್ಲ ಎಂಬ ನಂಬಿಕೆ ಹುಸಿಯಾಗಿದೆ ಎಂದು ಅವರು ಮುಖ್ಯಮಂತ್ರಿಗೆ ತನ್ನ ಪತ್ರದಲ್ಲಿ ಬರೆದಿದ್ದಾರೆ.
“ಮಹಾಕವಿ ಕುವೆಂಪು ಅವರು ತಮ್ಮ ಅಮೂಲ್ಯ ಕೃತಿಗಳಿಂದ ಹೊಸಗನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಸಪ್ರಾಣಿಸಿ ಭಾರತೀಯ ಸಾಹಿತ್ಯದಲ್ಲಿ ಕನ್ನಡಕ್ಕೂ, ಕರ್ನಾಟಕಕ್ಕೂ ಗೌರವ ತಂದರು. ಅವರು ಕನ್ನಡಕ್ಕೆ ಜ್ಞಾನ ಪೀಠ ಪ್ರಶಸ್ತಿ ತಂದ ಮೊದಲಿಗರು. ಇದನ್ನರಿತು ಸರ್ಕಾರ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ವನ್ನು ಪ್ರಾರಂಭಿಸಿತಲ್ಲದೆ ಅತ್ಯುನ್ನತ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನಿತ್ತು ಗೌರವಿಸಿತು” ಎಂದು ಅವರು ತಮ್ಮ ಪತ್ರದಲ್ಲಿ ಸರ್ಕಾರವನ್ನು ನೆನಪಿಸಿದ್ದಾರೆ.
ಇದನ್ನೂ ಓದಿ: ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟನೆ
ಅವರು ಮುಖ್ಯಮಂತ್ರಿಗೆ ಬರೆದ ಪತ್ರದ ಪೂರ್ಣ ಪಠ್ಯ ಹೀಗಿದೆ
ಶ್ರೀ. ಬಸವರಾಜ ಬೊಮ್ಮಾಯಿ ಅವರು
ಸನ್ಮಾನ್ಯ ಮುಖ್ಯಮಂತ್ರಿಗಳು,
ವಿಧಾನಸೌಧ, ಬೆಂಗಳೂರು.
ಮಾನ್ಯರೇ,
ವಿಷಯ: ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ತಮ್ಮ ಅಮೂಲ್ಯ ಕೃತಿಗಳಿಂದ ಹೊಸಗನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಸಪ್ರಾಣಿಸಿ ಭಾರತೀಯ ಸಾಹಿತ್ಯದಲ್ಲಿ ಕನ್ನಡಕ್ಕೂ, ಕರ್ನಾಟಕಕ್ಕೂ ಮಹಾಕವಿ ಕುವೆಂಪುರವರು ಗೌರವ ತಂದರು. ಅವರು ಕನ್ನಡಕ್ಕೆ ಜ್ಞಾನ ಪೀಠ ಪ್ರಶಸ್ತಿ ತಂದ ಮೊದಲಿಗರು. ಇದನ್ನರಿತು ಸರ್ಕಾರ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ವನ್ನು ಪ್ರಾರಂಭಿಸಿತಲ್ಲದೆ ಅತ್ಯುನ್ನತ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನಿತ್ತು ಗೌರವಿಸಿತು.
ಆದರೆ ಇಂದು ಕುವೆಂಪುರವರನ್ನೂ, ಅವರು ಹುಟ್ಟಿದ ಗೌರವಾನ್ವಿತ ದೊಡ್ಡ ಜನಾಂಗವನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಮ್ಮ ರಾಷ್ಟ್ರಗೀತೆಯಾದ ನಾಡಗೀತೆಯನ್ನು ಲೇವಡಿ ಮಾಡಿದ ವ್ಯಕ್ತಿಯ ಮೇಲೆ ಕ್ರಮಕೈಗೊಳ್ಳುವ ಬದಲು ಸರ್ಕಾರ ಜವಾಬ್ದಾರಿಯ ಸ್ಥಾನ ನೀಡಿದೆ. ಇದು ಅಪಾಯಕಾರಿಯಾದ ಬೆಳವಣಿಗೆ.
ಇದರಿಂದ “ಪುಣ್ಯಶ್ಲೋಕರ ಮೇಲೆ ಕೆಟ್ಟ ಮಾತುಗಳ ಮಳೆ ಸುರಿಸಿದರೆ ಅಂಥವರಿಗೆ ಸರಕಾರದ ಸಮಿತಿಗಳಲ್ಲಿ ಸದಸ್ಯರಾಗುವ ಸದವಕಾಶಗಳಿವೆ” ಎಂಬ ಸಂದೇಶ ರವಾನೆ ಮಾಡಿದಂತಾಗಿದೆ. ವ್ಯಕ್ಜತಿಗಳ ತೇಜೋವಧೆ ಮಾಡುವುದನ್ನು ನಮ್ಮ ಸರಕಾರ ಸಹಿಸುವುದಿಲ್ಲ ಎಂಬ ನಂಬಿಕೆ ಹುಸಿಯಾಗಿದೆ.
ರಾಷ್ಟ್ರಕವಿ ಕುವೆಂಪುರವರನ್ನೂ, ನಮ್ಮ ಪವಿತ್ರ ನಾಡಗೀತೆಯನ್ನೂ ಅಪಮಾನಿಸುತ್ತಿದ್ದರೂ ನೋಡಿಕೊಂಡು ತೆಪ್ಪಗಿರುವುದು ನನಗೆ ಕಷ್ಟವಾಗಿದೆ. ಸರ್ಕಾರ ಸ್ಥಾಪಿಸಿರುವ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೂ ಸದಸ್ಯತ್ವಕ್ಕೂ ನನ್ನ ರಾಜೀನಾಮೆಯನ್ನು ಮಾನ್ಯ ಮುಖ್ಯಮಂತ್ರಿಗಳು ಅಂಗೀಕರಿಸಬೇಕೆಂದು ಪ್ರಾರ್ಥಿಸುತ್ತೇನೆ.
ತಮ್ಮ ವಿಶ್ವಾಸಿ
ಹಂಪನಾ
ಹಂಪನಾ. ನಾಗರಾಜಯ್ಯ
30.05.2022
ಬೆಂಗಳೂರು



ಹಂಪನಾ ಅವರ ಈ ರಾಜೀನಾಮೆ ಸ್ವಾಗತಾರ್ಹ.