Homeಮುಖಪುಟಕಡುಖೋಟಾ ಅನ್ನೋ ಡೀಫ್ ಫೇಕು : ದೆಹಲಿಯಲ್ಲಿ ಬಿಜೆಪಿಯ ಮನೋಜ್‌ ತಿವಾರಿ ಮಾಡಿದ ಮೋಡಿ ಗೊತ್ತೆ?

ಕಡುಖೋಟಾ ಅನ್ನೋ ಡೀಫ್ ಫೇಕು : ದೆಹಲಿಯಲ್ಲಿ ಬಿಜೆಪಿಯ ಮನೋಜ್‌ ತಿವಾರಿ ಮಾಡಿದ ಮೋಡಿ ಗೊತ್ತೆ?

- Advertisement -
- Advertisement -

ʻನೀಂ ಕಡು ಕಾಫಿ ಬಲ್ಲೆ, ಕಡು ಖೋಟಾ ಬಲ್ಲೆಯಾ?ʼ

ʻನಿನ್ನೆ ಹುಟ್ಟಿದವನಿಗಿಂತ ಇವತ್ತು ಹುಟ್ಟಿದವ ಶಾಣ್ಯಾʼ ಅಂತ ಒಂದು ಗಾದಿ ಮಾತು ಅದ. ಅದು ಬ್ಯಾರೆ ಎಲ್ಲೆರ ಇದು ಸುಳ್ಳು ಆಗಬಹುದು, ಆದರ ತಂತ್ರಜ್ಞಾನದ ವಿಷಯದಾಗ ಅಗದೀ ಖರೆ.

ನಮ್ಮ ಯುವ ಸಾಫ್ಟವೇರು ತಂತ್ರಜ್ಞರು ಒಂದು ಕಂಪ್ಯೂಟರು, ಒಂದು ಇಂಟರನೆಟ್ಟು ಇಟಗೊಂಡು ಏನೇನೆಲ್ಲಾ ಮಾಡತಾರ ಅಂದರ ಕೇಳಬ್ಯಾಡರಿ. ಅವರ ಮಾಡಿದ ಒಂದೊಂದ ಕೆಲಸದ ಪರಿಣಾಮ ತಿಳಕೊಳ್ಳಿಕ್ಕೆ ನಮಗ ಭಾಳ ಟೈಂ ಬೇಕಾಗತದ. ಒಂದು ತಿಳಕೊಳ್ಳೋದರಾಗ ಇನ್ನೊಂದ ಬಂದಿರತದ.

ಕೆಲವೊಮ್ಮೆ ತಿಳಿಯಂಗೇ ಇಲ್ಲ.

ಈಗ ಅಂಥಾದ್ದೊಂದ ಬಂದದ. ಅದರ ಹೆಸರು ಕಡು ಖೋಟಾ. ಖೋಟಾ ಅನ್ನೋದು ನಮಗ ಎಲ್ಲಾರಿಗೂ ಗೊತ್ತು. ದಿನಾ ಅದನ್ನ ನೋಡತೇವಿ, ಕೇಳತೇವಿ, ನಂಬತೇವಿ. ಈಗ ಇದೇನಪಾ ಕಡು ಖೋಟಾ?

ಕಡು ಖೋಟಾ ಅಥವಾ ಡೀಪ್ ಫೇಕು ಅನ್ನೋ ತಂತ್ರಜ್ಞಾನ ನಮ್ಮ ಎಲ್ಲಾ ನಂಬಿಕೆಗಳನ್ನ, ತಿಳಿವಳಿಕೆಯನ್ನ ಬುಡಮೇಲು ಮಾಡುವಷ್ಟು ಶಕ್ತಿ ಇರುವಂಥಾದ್ದು. ಇದು ಮುಂದೆ ಎಂದೋ ಬರೋದಲ್ಲಾ. ಈಗಾಗಲೇ ಬಂದು ಬಿಟ್ಟದ. ಬರೇ ಇಂಗ್ಲಂಡು- ಅಮೆರಿಕಾದಾಗ ಬಂದಿಲ್ಲಾ, ನಮ್ಮ ಭಾರತ ವರ್ಷದಾಗ ಬಂದು ಬಿಟ್ಟದ.

ಮೊನ್ನೆ ದೆಹಲಿ ಚುನಾವಣೆಯೊಳಗ ಇದರ ಉಪಯೋಗ ಆಗೇದ ಅಂತ ತಂತ್ರಜ್ಞಾನ ಕಂಪನಿ ವೈಸ್ ವರದಿ ಮಾಡೇದ.

ಕಡು ಖೋಟಾ ಅಂದರ ತುಂಬ ತೀಕ್ಷ್ಣ ತಂತ್ರಜ್ಞಾನ ಉಪಯೋಗಿಸಿ ಸುಳ್ಳು ಸುಳ್ಳು ವಿಡಿಯೋಗಳನ್ನು ತಯಾರು ಮಾಡೋದು. ಯಾವುದು ಅಸಾಧ್ಯವೋ, ಯಾವುದು ಆಗಲಿಕ್ಕೆ ಸಾಧ್ಯವೇ ಇಲ್ಲವೋ ಅದನ್ನ ಆಗೇ ಬಿಟ್ಟದ ಅನ್ನೋಹಂಗ ತೋರಸೋದು. ಇದು ಸಣ್ಣ ಹುಡುಗರ ವಿಡಿಯೋಗೇಮೋ, ಅನಿಮೇಷನ್ ಕಾರ್ಟೂನೋ ಇದ್ದರ ಸಮಸ್ಯೆ ಇರಲಿಲ್ಲ. ಆದರ ಇದು ಆಗತಾ ಇರೋದು ಸುದ್ದಿ ಮಾಧ್ಯಮದಾಗ. ಕಮಲ ಹಾಸನ ಅವರ ಇಂಡಿಯನ್ ಸಿನಿಮಾದಾಗ ನೇತಾಜಿ ಜೊತೆಗೆ ಚಿತ್ರದ ನಾಯಕ ಓಡಾಡಿದಂಗ ಮಾಡಿದ್ದರು. ಆದರ ಅದು ಕೃತಕ ಅಂತ ಗೊತ್ತಾಗತಿತ್ತು. ಕಡು ಖೋಟಾ ಅಂದರ ಗೊತ್ತೇ ಆಗದ ಹಂಗ ಕಲಬೆರಕೆ ಮಾಡೋ ಕಲೆ. ಇದು ಎಷ್ಟು ಅಪಾಯಕಾರಿ ಅಂತ ಸ್ವಲ್ಪ ವಿಚಾರ ಮಾಡಿದರ ತಿಳೀತದ.

ಉದಾಹರಣೆಗೆ ಕಳೆದ ವಾರ ಇಂಗ್ಲಂಡಿನ ಇಂಜಿನಿಯರು ಒಬ್ಬ ಕನ್ಸರ್ವೇಟಿವ್ ಪಕ್ಷದ ಬೋರಿಸ ಜಾನಸನ್ ಅವರು ಲಿಬರಲ್ ಪಕ್ಷದ ಸಭೆಯೊಳಗ ಭಾಷಣ ಮಾಡಿದಂಗ, ಲಿಬರಲ್ ಪಕ್ಷದ ಜಿಮ್ಮಿ ಕಾರ್ಬಿನ್ ಅವರು ವಿರೋಧ ಪಕ್ಷದ ಸಮಾರಂಭದಾಗ ಸನ್ಮಾನ ಸ್ವೀಕರಿಸಿದ ಹಂಗ ವಿಡಿಯೋ ತಯಾರು ಮಾಡಿಬಿಟ್ಟ. ಇದನ್ನ ಭಾಳ ಮಂದಿ ನಂಬಿ ಷೇರು, ಲೈಕು, ಕಾಮೆಂಟು ಮಾಡಿದರು.

ಗ್ಯಾಬೋನ್ ದೇಶದ ಅಧ್ಯಕ್ಷ ಅಲಿ ಬೊಂಗೋ ಅವರು ಮಾಡಿದ ಭಾಷಣದ ವಿಡಿಯೋ ತುಣುಕಿನಿಂದ ಅವರ ದೇಶದಾಗ ಒಂದು ಕ್ಷಿಪ್ರಕ್ರಾಂತಿ ಆತು. ಹಿಂಸಾಚಾರ ಆತು. ಆದರ ಆ ಭಾಷಣ ಅವರು ಮಾಡಿರಲೇ ಇಲ್ಲ. ಅವರ ಹಳೇ ವಿಡಿಯೋಗಳ ತುಣುಕುಗಳನ್ನು ಸೇರಿಸಿ, ಅವಕ್ಕೆ ಹೊಸಾ ಅಂಗಿ- ಪ್ಯಾಂಟು ಹಾಕಿ ಖೋಟಾ ವಿಡಿಯೋ ತಯಾರು ಮಾಡಲಾಯಿತು. ಅದು ಇಷ್ಟೆಲ್ಲಾ ಘೋಟಾಲಾ ಮಾಡಿತು.

ಕಡು ಖೋಟಾ ವಿಡಿಯೋ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ಹೇಳಿ ಸ್ಲೋವಾಕಿಯಾದ ಒಬ್ಬ ಪುಣ್ಯಾತ್ಮ ಪ್ರಯತ್ನ ಮಾಡಲಿಕ್ಕೆ ಹತ್ಯಾನ. ಕಂಟ್ರೋಲ್- ಶಿಫ್ಟ್ – ಫೇಸ್ ಅನ್ನೋ ಯೂಟ್ಯೂಬ ವಿಡಿಯೋ ಸರಣಿಯೊಳಗ ಆತ ಇಲ್ಲಿಯವರೆಗೂ 20 ಕಡು ಖೋಟಾ ವಿಡಿಯೋಗಳನ್ನ ಹಾಕ್ಯಾನ. ಅದರಾಗಿನ ಉದಾಹರಣೆ ಅಂದರ 1973 ರಲ್ಲಿ ತೀರಿ ಹೋಗಿರೋ ನಟ ಬ್ರೂಸ್ ಲೀ ಯನ್ನು ಹೀರೋ ಮಾಡಿ 2010 ಸಿನಿಮಾಗಳನ್ನು ಮರು ತಯಾರಿ ಮಾಡೋದು, ಬ್ಯಾಟ ಮ್ಯಾನಿನ ಜೋಕರ ಪಾತ್ರ ತೊಗೊಂಡು ಹೋಗಿ ಇನ್ನಾವುದೋ ಸಂಬಂಧ ಇರಲಾರದ ಸಿನಿಮಾದಾಗ ವಿಲನ್ ಮಾಡೋದು, ಈಗ ಜೀವಂತ ಇರಲಾರದ ಡೇವಿಡ್ ಬೋವಿ ಅವರಂತಹಾ ಪಾಪ್- ರಾಕ್ ಹಾಡುಗಾರರ ಬಾಯಾಗಿಂದಾ ಹೊಸಾ ಹಾಡುಗಳನ್ನು ಹೇಳಿಸೋದು, ಇತ್ಯಾದಿ.

ಉದಾಹರಣೆ ನೋಡಿ:

ನೀವು ಕಲ್ಪನೆ ಮಾಡಿಕೊರಿ. ಇವತ್ತಿನ ಚಲನಚಿತ್ರ ನಟಿಯರು ಕಪ್ಪು- ಬಿಳುಪಿನ ಸಿನಿಮಾದಾಗ ಮಾಡೋದು, ಅಥವಾ ಮೀನಾಕುಮಾರಿ, ಉದಯ ಚಂದ್ರಿಕಾ ಸರ್ವಮಂಗಳಾ ಇವರೆಲ್ಲಾ ಇವನೇ ಶ್ರೀಮನ್ನಾರಾಯಣ, ಕೆಜಿಎಫ್ ನಂತಾ ಸಿನಿಮಾದಾಗ ಮಾಡೋದು ಹೆಂಗಿರತದ?

ಇಂಥದೆಲ್ಲಾ ಮಸ್ತ ಮಜಾ ಇರಬಹದು ಬಿಡ್ರಿ.

ಆದರ ಇಂಥಾದೆಲ್ಲಾ ರಾಜಕೀಯದಾಗ ಬಂದರ? ಏನಾದೀತು?

ಉದಾಹರಣೆಗೆ ರಾಹುಲ ಗಾಂಧಿ ನರೇಂದ್ರಮೋದಿ ಚುನಾವಣಾ ಪ್ರಚಾರಕ್ಕ ನಿಂತರ? ದೇವೇಗೌಡರೂ- ಅಮಿತ ಷಾ ಆಲಿಂಗನ ಮಾಡಿಕೊಂಡ ವಿಡಿಯೋ ನಿಮ್ಮ ಫೋನಿನ್ಯಾಗ ಒಡಮೂಡಿದರ? ನೆಹರೂ – ಜಿನ್ನಾ ಇಬ್ಬರೂ ಅಣ್ಣ- ತಮ್ಮಾ ಅಂತ ವಾಟ್ಸಪ್ಪು ಮೆಸೇಜು ಈಗಾಗಲೇ ಬರಲಿಕ್ಕೆ ಹತ್ತೇದ. ಅವರಿಬ್ಬರೂ ನಾವು ಒಂದೇ ತಾಯಿಯ ಮಕ್ಕಳು ಅಂತ ಹೇಳೋ ವಿಡಿಯೋ ಹುಟ್ಟಿಗೊಂಡರ? ನನ್ನನ್ನ ಯಾರೂ ಹತ್ಯೆ ಮಾಡಿಲ್ಲ. ಸುಳ್ಳ ಸುಳ್ಳ ಯರ‍್ಯಾರನ್ನೋ ಬಯ್ಯಬ್ಯಾಡ್ರಿ. ಸಬಕೋ ಸನಮತಿ ದೇ ಭಗವಾನ ಅಂತ ಗಾಂಧಿ ದೇಶವನ್ನು ಸಂಬೋಧಿಸಿ ಮಾತಾಡೋ ವಿಡಿಯೋ ನಾಳೆ ಟೀವಿಯೊಳಗ ಪ್ರಸಾರ ಆದರ? ಇಂಥಾವೆಲ್ಲಾ ಸುರು ಆದರ ಸ್ವರ್ಗಕ್ಕೆ ಕಿಚ್ಚು ಹಚ್ಚೋದು ಅಲ್ಲಾ, ನರಕಕ್ಕೆ ಕಿಚ್ಚು ಹಚ್ಚೋದು ಆಗತೇತಿ.

ಯಾವುದು ಕಡು ಖೋಟಾ, ಯಾವುದು ಅಲ್ಲಾ ಅಂತ ಕಂಡುಹಿಡಿಯೋ ತಂತ್ರಜ್ಞಾನ ಇನ್ನೂ ಬಂದಿಲ್ಲಂತ. ಕೃತಕ ಬುದ್ಧಿಮತ್ತೆ ಕ್ಷೇತ್ರ ಬೆಳದಂಗ ಬರಬಹುದಂತ. ಆದರ ಪೇಪರು- ಫೋನಿನ್ಯಾಗ ಬಂದ ಖೋಟಾ ಸುದ್ದಿಗಳನ್ನು ವರೆಗೆ ಹಚ್ಚಲು ನಮ್ಮ ಜನಾ ತಯಾರಿಲ್ಲಾ ಎಲ್ಲಾನೂ ಹುಯ್ಯ ಅಂತ ನಂಬತಾರ. ಇನ್ನ ಕಡು ಖೋಟಾ ವಿಡಿಯೋ ಪ್ರಸಾರ ಆಗಲಿಕ್ಕೆ ಹತ್ತಿದವಂದರ ಏನಾದೀತ?

ಅಂದಂಗ ಬಿಜೆಪಿ ದೆಹಲಿ ಅಧ್ಯಕ್ಷ ಮನೋಜ ತಿವಾರಿ ಅವರು ಬೇರೆ ಬೇರೆ ಪೋಷಾಕು ಧರಿಸಿ ನಾಲ್ಕು -ಐದು ಭಾಷೆಯೊಳಗ ಮತದಾರರಿಗೆ ಮತ ಕೇಳೋ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರಂತ. ಅವರಿಗೆ ಅಷ್ಟು ಭಾಷಾನ ಬರಂಗಿಲ್ಲ, ಬಂದರೂ ಅಷ್ಟು ಸುಲಲಿತವಾಗಿ ಮಾತಾಡಲಿಕ್ಕೆ ಆಗಂಗಿಲ್ಲ ಅಂತ ಅವರನ್ನ ಬಲ್ಲವರಿಗೆ ಖಾತ್ರಿ ಆತಂತ. ಹಿಂಗಾಗಿ ಅವು ಕಡು ಖೋಟಾ ಅಂತ ಎಲ್ಲಾರಿಗೂ ಗುಮಾನಿ ಬಂತಂತ. ಆ ನಂತರ ವೈಸ್ ಸಂಸ್ಥೆಯ ವರದಿ ಬಂತು, ಅದು ಬ್ಯಾರೆ ವಿಷಯ. ಇದು ಅಂತ್ಯ ಅಲ್ಲ, ಆರಂಭ ಅನ್ನೋದನ್ನ ನಾವು ತಿಳಕೋಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಛತ್ತೀಸ್‌ಗಢ| ಕ್ರಿಶ್ಚಿಯನ್ ಯುವಕನ ಮೇಲೆ ಹಿಂದುತ್ವವಾದಿ ಗುಂಪಿನಿಂದ ಹಲ್ಲೆ; ‘ಜೈ ಶ್ರೀ ರಾಮ್’ ಕೂಗುವಂತೆ ಒತ್ತಾಯ

ಛತ್ತೀಸ್‌ಗಢದ ಜಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಯುವಕನ ಮೇಲೆ ಹಿಂದುತ್ವವಾದಿಗಳ ಗುಂಪೊಂದು ಹಲ್ಲೆ ನಡೆಸಿ, ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದೆ ಎಂಬ ಆರೋಪ ಕೇಳಿಬಂದಿದೆ. ಇಂದು (ಮಾ.18) ನಡೆದಿದೆ ಎನ್ನಲಾದ ಈ ಘಟನೆಯ...

ಯುಪಿಎಸ್‌ಸಿ 440 ನೇ ರ‍್ಯಾಂಕ್ ಎಂದು ಸುಳ್ಳು ಹೇಳಿ ಸಂಭ್ರಮಾಚರಣೆ ಮಾಡಿದ್ದ ಬಿಹಾರದ ಯುವಕನ ಬಂಧನ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ) 2025 ರಲ್ಲಿ ಅಖಿಲ ಭಾರತ ರ‍್ಯಾಂಕ್ (ಎಐಆರ್) 440 ಗಳಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡ ಕೆಲವು ದಿನಗಳ ನಂತರ, ಬಿಹಾರದ ಶೇಖ್‌ಪುರ...

‘ಜೈ ಬಾಂಗ್ಲಾ’ ಘೋಷಣೆ ಕೂಗಿದ ಆರೋಪ: ಮಹಿಳೆಗೆ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರಿನ ಹೆಬ್ಬಗೂಡಿಯಲ್ಲಿ ಅಕ್ರಮ ಎನ್ನಲಾದ ಶೆಡ್‌ಗಳ ತೆರವು ಕಾರ್ಯಾಚರಣೆ ವೇಳೆ 'ಜೈ ಬಾಂಗ್ಲಾ' ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾದ ಪಶ್ಚಿಮ ಬಂಗಾಳದ ಮಹಿಳೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಎಸ್.ರಾಚಯ್ಯ...

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡಿಜೆ, ಐಟಂ ಹಾಡು ನಿಷೇಧಿಸಲು ಕರ್ನಾಟಕ ಯೋಜನೆ; ವಿಧಾನಸಭೆಯಲ್ಲಿ ಸಂತೋಷ್ ಲಾಡ್ ಪ್ರಸ್ತಾಪ

ಬೆಂಗಳೂರು: ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಮೆರವಣಿಗೆಗಳಲ್ಲಿ ಅಬ್ಬರದ ಸಂಗೀತ ಮತ್ತು "ಐಟಂ ಹಾಡುಗಳನ್ನು" ನುಡಿಸುವ ಡಿಸ್ಕ್ ಜಾಕಿಗಳನ್ನು (ಡಿಜೆ) ನಿಷೇಧಿಸುವ ಪರವಾಗಿ ಕರ್ನಾಟಕ ಸರ್ಕಾರವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ...

ದೆಹಲಿಯ ಪಾಲಂನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ಮೂವರು ಮಕ್ಕಳು ಸೇರಿ ಏಳು ಮಂದಿ ಸಾವು

ರಾಷ್ಟ್ರ ರಾಜಧಾನಿಯ ಪಾಲಂ ಪ್ರದೇಶದ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ...

ವಾರಣಾಸಿ: ಗಂಗಾ ನದಿಯ ದೋಣಿಯಲ್ಲಿ ‘ಇಫ್ತಾರ್’ ಕೂಟ ಆಯೋಜಿಸಿದ್ದಕ್ಕಾಗಿ 14 ಜನರ ಬಂಧನ 

ವಾರಣಾಸಿಯಲ್ಲಿ ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ 'ಇಫ್ತಾರ್' (ರಂಜಾನ್ ಸಮಯದಲ್ಲಿ ಸೂರ್ಯಾಸ್ತದ ನಂತರ ತಿನ್ನುವ ಊಟ) ಕೂಟವನ್ನು ಆಯೋಜಿಸಿದ್ದಕ್ಕಾಗಿ ಹದಿನಾಲ್ಕು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ.  ದೈನಂದಿನ ಮುಸ್ಲಿಂ ಜೀವನವನ್ನು ಅಪರಾಧೀಕರಿಸುವ ಮತ್ತೊಂದು ಪ್ರಕರಣ ಇದಾಗಿದ್ದು,...

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ರಾಜೀನಾಮೆ

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ತಮ್ಮ ಸ್ಥಾನಗಳಿಗೆ ಮಂಗಳವಾರ (ಮಾ.17) ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಹಾಗೂ ನೌಗಾಂಗ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರದ್ಯುತ್ ಬೋರ್ಡೊಲೊಯ್...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಮೂವರು ಶಾಸಕರನ್ನು ಅಮಾನತುಗೊಳಿಸಿದ ಒಡಿಶಾ ಕಾಂಗ್ರೆಸ್

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಒಡಿಶಾ ಕಾಂಗ್ರೆಸ್ ಮೂವರು ಶಾಸಕರಾದ ಸೋಫಿಯಾ ಫಿರ್ದೌಸ್, ರಮೇಶ್ ಜೆನಾ ಮತ್ತು ದಾಸರಥಿ ಗೊಮಾಂಗೊ ಅವರನ್ನು ಅಮಾನತುಗೊಳಿಸಿದೆ. ಒಡಿಶಾ ವಿಧಾನಸಭೆಯಲ್ಲಿ ಕಾಂಗ್ರೆಸ್ 14 ಶಾಸಕರನ್ನು ಹೊಂದಿದ್ದು, ನಾಲ್ಕನೇ...

ಅಮೆರಿಕ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಳದ ನಿರ್ದೇಶಕ ಜೋ ಕೆಂಟ್‌ ರಾಜೀನಾಮೆ

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎನ್‌ಸಿಟಿಸಿ) ನಿರ್ದೇಶಕ ಜೋ ಕೆಂಟ್ ಅವರು ಇರಾನ್ ಜೊತೆಗಿನ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ಇರಾನ್‌ನಿಂದ ಅಮೆರಿಕಕ್ಕೆ ಯಾವುದೇ ತಕ್ಷಣದ ಅಪಾಯವಿರಲಿಲ್ಲ. ಇಸ್ರೇಲ್‌ನ ಒತ್ತಡದಿಂದಾಗಿ...

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ಇಸ್ರೇಲ್ 

ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಆದರೆ ಟೆಹ್ರಾನ್‌ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಕಾಟ್ಜ್ ಪ್ರಕಾರ, ಜನರಲ್ ಘೋಲಮ್...