ಬಿಜೆಪಿಗೆ ತನ್ನ ರಾಜಧರ್ಮ (ಕರ್ತವ್ಯ) ಹೇಗಿರಬೇಕು ಎಂಬುದನ್ನು ನೆನಪಿಸಿದ್ದಕ್ಕಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಕಾಂಗ್ರೆಸ್ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ.
ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರನ್ನು ಗುರುವಾರ ಭೇಟಿಯಾದ ಕಾಂಗ್ರೆಸ್ ನಿಯೋಗವು ರಾಜಧರ್ಮದ ಬಗ್ಗೆ ಇತರರಿಗೆ ನೆನಪಿಸಲು ಪ್ರಯತ್ನಿಸುತ್ತಿದೆ, ಆದರೆ ಆ ಪಕ್ಷವು ಹಲವು ಸಮಸ್ಯೆಗಳ ಬಗ್ಗೆ ತನ್ನ ನಿಲುವನ್ನು ಏಕೆ ಬದಲಾಯಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
“ನಾನು ಸೋನಿಯಾ ಗಾಂಧಿಯನ್ನು ಕೇಳುತ್ತೇನೆ, ನಿಮ್ಮ ಹಿರಿಯ ನಾಯಕರು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದವರ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದರು? ಇಂದಿರಾಗಾಂಧಿ ಉಗಾಂಡಾದಿಂದ ಪಲಾಯನ ಮಾಡಿದ ಜನರಿಗೆ ಸಹಾಯ ನೀಡಿದ್ದರು. ರಾಜೀವ್ ಗಾಂಧಿ ಶ್ರೀಲಂಕಾದ ತಮಿಳರಿಗೆ ಸಹಾಯ ಮಾಡಿದ್ದರು. ಪೌರತ್ವ ನೀಡಬೇಕು ಎಂದು ಮನಮೋಹನ್ ಸಿಂಗ್ ಎಲ್.ಕೆ.ಅಡ್ವಾಣಿಯನ್ನು ಒತ್ತಾಯಿಸಿದ್ದರು. ಅಶೋಕ್ ಗೆಹ್ಲೋಟ್ ಯುಪಿಎ ಮತ್ತು ಎನ್ಡಿಎ ಎರಡರ ಗೃಹ ಸಚಿವರಿಗೆ ಪೌರತ್ವಕ್ಕಾಗಿ ಪತ್ರ ಬರೆದಿದ್ದರು … ಹಾಗೆಯೇ ತರುಣ್ ಗೊಗೊಯ್ ಕೂಡ ಇದ್ದಾರೆ … ಹಾಗಾದರೆ ನಿಮ್ಮ ಪಕ್ಷವನ್ನು ಆಚೆಗೆ-ಈಚೆಗೆ ಮಾಡುವ ಈ ರಾಜಧರ್ಮ ಯಾವುದು ಎಂದು ಅವರು ಪ್ರಶ್ನಿಸಿದ್ದಾರೆ.
ಸಿಎಎ ವಿರೋಧಿ ರ್ಯಾಲಿಯಲ್ಲಿ “ನೀವು ನಮ್ಮ ಕಡೆಯೋ ಅಥವಾ ಅವರ ಕಡೆಯೋ” ಎಂಬಂತಹ ಕಾಮೆಂಟ್ಗಳ ಮೂಲಕ ಸೋನಿಯಾ ಗಾಂಧಿ ಜನರನ್ನು ಪ್ರಚೋದಿಸಿದ್ದಾರೆ ಎಂದು ಸಚಿವರು ಆರೋಪಿಸಿದರು.
“ಇಡೀ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಲಾಯಿತು, ಆದರೂ ನೀವು ಜನರನ್ನು ಏಕೆ ಪ್ರಚೋದಿಸುತ್ತಿದ್ದೀರಿ” ಎಂದು ಅವರು ಪ್ರಶ್ನಿಸಿದ್ದಾರೆ.
“ಕಾಂಗ್ರೆಸ್ ಪಕ್ಷದ ದಾಖಲೆಯ ಬಗ್ಗೆ ಸಾಕಷ್ಟು ಹೇಳಬಹುದು. ಗಲಭೆಯನ್ನು ರಾಜಕೀಯಗೊಳಿಸುವ ಕಾಂಗ್ರೆಸ್ ಪ್ರಯತ್ನಗಳನ್ನು ಬಿಜೆಪಿ ಖಂಡಿಸುತ್ತದೆ. ಕಾಂಗ್ರೆಸ್ ಮೊದಲು ಕುಟುಂಬ, ಪಕ್ಷ ಮತ್ತು ನಂತರ ದೇಶಕ್ಕೆ ಆದ್ಯತೆ ನೀಡುತ್ತದೆ,” ಪ್ರಸಾದ್ ಹೇಳಿದರು.
ನಿನ್ನೆ ಕಾಂಗ್ರೆಸ್ ಪಕ್ಷದ ಮುಖಂಡರು “ಗೃಹ ಸಚಿವ ಅಮಿತ್ ಶಾ ತನ್ನ ಕರ್ತವ್ಯವನ್ನು ಮರೆತಿದ್ದಕ್ಕೆ ಅವರನ್ನು ವಜಾಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರವು ಕನಿಷ್ಠ 34 ಜೀವಗಳನ್ನು ಬಲಿ ತೆಗೆದುಕೊಂಡ ಈ ಘರ್ಷಣೆಗೆ ಮೂಕ ಪ್ರೇಕ್ಷಕರಾಗಿದೆ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಿಯೋಗದೊಂದಿಗೆ ರಾಷ್ಟ್ರಪತಿಯನ್ನು ಭೇಟಿಯಾಗಿ ರಾಜಧರ್ಮ ಪಾಲಿಸುವಂತೆ ನೆನಪಿಸಿದ್ದರು.