ಹರಿಯಾಣ ರಾಜ್ಯದ ಆಡಳಿತಾರೂಢ ಬಿಜೆಪಿ-ಜನ ನಾಯಕ್ ಜನತಾ ಪಕ್ಷದ ಮೈತ್ರಿ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ ಜೋರಾಗಿದ್ದು, ಗುರುವಾರ ಪ್ರತಿಭಟನೆ ನಡೆಸಿದ 100 ಕ್ಕೂ ಹೆಚ್ಚು ರೈತರ ಮೇಲೆ ದೇಶದ್ರೋಹ ಆರೋಪ ಹೊರಿಸಲಾಗಿದೆ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಡೆಪ್ಯೂಟಿ ಸ್ಪೀಕರ್ ರಣಬೀರ್ ಗಂಗ್ವಾ ಅವರ ವಾಹನದ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಹರಿಯಾಣ ಪೊಲೀಸರು 100 ಕ್ಕೂ ಹೆಚ್ಚು ರೈತರ ಮೇಲೆ ದೇಶದ್ರೋಹ ಆರೋಪ ಹೊರಿಸಿದ್ದಾರೆ.
ಜುಲೈ 11 ರಂದು ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು. ಅದೇ ದಿನ ನೂರಕ್ಕೂ ಹೆಚ್ಚು ರೈತರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ದೇಶದ್ರೋಹದ ಪ್ರಕರಣದ ಜೊತೆಗೆ ಕೊಲೆ ಯತ್ನದ ದೂರನ್ನು ದಾಖಲಿಸಲಾಗಿದೆ. ಮುಖ್ಯವಾಗಿ ಹರಿಯಾಣದಲ್ಲಿ ಚಳವಳಿಯ ರೂವಾರಿಗಳಾದ ರೈತ ನಾಯಕರಾದ ಹರ್ಚರಣ್ ಸಿಂಗ್ ಮತ್ತು ಪ್ರಹ್ಲಾದ್ ಸಿಂಗ್ ಅವರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಹರಿಯಾಣದಲ್ಲಿ ಬಿಜೆಪಿ ನಾಯಕರಿಗೆ ಮತ್ತೆ ಮುಖಭಂಗ: ಮುಂದುವರೆದ ರೈತರ ಪ್ರತಿಭಟನೆ
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಆರೋಪಗಳನ್ನು ಅಲ್ಲಗೆಳೆದಿದ್ದು, ಈ ಆರೋಪಗಳು ಸುಳ್ಳು ಮತ್ತು ಕ್ಷುಲ್ಲಕ ಎಂದು ಹೇಳಿದೆ. ಜೊತೆಗೆ ನ್ಯಾಯಾಲಯದಲ್ಲಿ ತಕ್ಕ ಉತ್ತರ ನೀಡುವುದಾಗಿ ಪ್ರತಿಜ್ಞೆ ಮಾಡಿದೆ.
ಹರಿಯಾನದ ಸಿರ್ಸಾದಲ್ಲಿ ಉಪ ಸ್ಪೀಕರ್ ವಿರುದ್ಧ ಪ್ರತಿಭಟಿಸುತ್ತಿದ್ದ ಕಾರಣಕ್ಕೆ ರೈತ ಮುಖಂಡರಾದ ಹರ್ಚರಣ್ ಸಿಂಗ್ ಮತ್ತು ಪ್ರಹ್ಲಾದ್ ಸಿಂಗ್ ಮತ್ತು ಸುಮಾರು 100 ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ದೇಶದ್ರೋಹದ ಗಂಭೀರ ಆರೋಪ ಮಾಡಲಾಗಿದೆ ಎಂದು ಹೇಳಿದೆ.
“ಹರಿಯಾಣದ ರೈತ ವಿರೋಧಿ ಬಿಜೆಪಿ ಸರ್ಕಾರದ ಸೂಚನೆಯ ಮೇರೆಗೆ ರೈತರು ಮತ್ತು ರೈತ ಮುಖಂಡರ ವಿರುದ್ಧ ಸುಳ್ಳು, ಕ್ಷುಲ್ಲಕ ಮತ್ತು ದೇಶದ್ರೋಹ ಪ್ರಕರಣ ದಾಖಲಿಸಿರುವ ಕ್ರಮವನ್ನು ಎಸ್ಕೆಎಂ ಬಲವಾಗಿ ಖಂಡಿಸುತ್ತದೆ” ಎಂದು ಪ್ರತಿರೋಧ ವ್ಯಕ್ತಪಡಿಸಿದೆ.
ಹರಿಯಾಣದಲ್ಲಿ ಪ್ರತಿಭಟನಾ ನಿರತ ರೈತರು ಕಳೆದ ಕೆಲವು ದಿನಗಳಿಂದ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಫತೇಹಾಬಾದ್, ಜಜ್ಜರ್, ಹಿಸಾರ್, ಸಿರ್ಸಾ ಮತ್ತು ಯಮುನಾನಗರದಲ್ಲಿ ಕಪ್ಪು ಬಾವುಟ ಪ್ರದರ್ಶನಗಳು, ಪ್ರತಿಭಟನೆ ನಡೆದಿದ್ದು, ಪೊಲೀಸರೊಂದಿಗೆ ಘರ್ಷಣೆಗೆ ಕಾರಣವಾಗಿವೆ.
ಇತ್ತ, ದೇಶದ್ರೋಹದ ಕಾನೂನು ಬ್ರಿಟೀಷ್ ಕಾಲದ ಈ ವಶಾಹತುಶಾಹಿ ಕಾನೂನು ಆಗಿದ್ದು, ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರವೂ ಅದರ ಅಗತ್ಯವಿದೆಯೇ? ಎಂದು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ. ದೇಶದ್ರೋಹ ಕಾನೂನಿನ ಸಿಂಧುತ್ವವನ್ನು ಪರಿಶೀಲಿಸುವುದಾಗಿ ಹೇಳಿದ ನ್ಯಾಯಾಲಯ, ಈ ಕುರಿತು ಕೇಂದ್ರದ ಪ್ರತಿಕ್ರಿಯೆ ಕೋರಿದೆ.
ಇದನ್ನೂ ಓದಿ: ಜುಲೈ 19 ರಿಂದ ಮಾನ್ಸುನ್ ಅಧಿವೇಶನ; ಸಂಸತ್ ಬಳಿ ಪ್ರತಿಭಟನೆಗೆ ರೈತರು ಸಜ್ಜು!