Homeಅಂಕಣಗಳುವಿದ್ಯೆ ಕಲಿತು ನಿಧಾನಕ್ಕೆ ಇವರ ಮೊಮ್ಮಕ್ಕಳ ಕಾಲಕ್ಕೆ ಎಲ್ಲ ಸರಿಯಾಗ್ತಾರೆ: ಗಣಪಯ್ಯನವರ ಮಾತುಗಳು

ವಿದ್ಯೆ ಕಲಿತು ನಿಧಾನಕ್ಕೆ ಇವರ ಮೊಮ್ಮಕ್ಕಳ ಕಾಲಕ್ಕೆ ಎಲ್ಲ ಸರಿಯಾಗ್ತಾರೆ: ಗಣಪಯ್ಯನವರ ಮಾತುಗಳು

- Advertisement -
- Advertisement -

ಕಳೆದು ಹೋದ ದಿನಗಳು -19

ಇಷ್ಟೆಲ್ಲ ವ್ಯವಹಾರಗಳನ್ನು ಮಾಡುತ್ತಿದ್ದ ಗಣಪಯ್ಯ ವೈಯಕ್ತಿಕವಾಗಿ ವ್ಯವಹಾರಗಳಲ್ಲಿ ಹೇಗಿದ್ದರು ಎಂಬ ಕುತೂಹಲ ಸಹಜ. ಅವರು ರಾಜಕೀಯಕ್ಕಾಗಲೀ, ಸಾಮಾಜಿಕ ಕೆಲಸಗಳಿಗಾಗಲೀ ಹೆಚ್ಚಾಗಿ ಬಳಸಿದ್ದು ಸ್ವಂತ ಹಣವನ್ನೇ. ಬೇರೆಯವರಿಂದ ಹಣ ಕೇಳಿದ್ದೂ, ತೆಗೆದುಕೊಂಡದ್ದೂ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಗಣಪಯ್ಯನವರಿಗೆ ಸಿಟ್ಟು ತುಂಬ ಇತ್ತು. ಸಿಟ್ಟು ಬಂದಾಗ ಬೈದುಬಿಡುವರು. ಆದರೆ ಅದು ಅಲ್ಲಿಗೆ ಮುಗಿಯಿತು ನಂತರ ಶಿಕ್ಷಿಸಿದವರಲ್ಲ. ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ ಎಂದೂ ಹೊಟ್ಟೆಗೆ ಹೊಡೆದವರಲ್ಲ.

ಕಷ್ಟದಲ್ಲಿ ಇದ್ದವರಿಗೆ ಉದಾರಿಗಳು.

ಒಮ್ಮೆ ಹಾರ್ಲೆ ತೋಟದ ಕಿತ್ತಳೆ ಫಸಲನ್ನು ಬಾಷ ಎಂಬ ಸಕಲೇಶಪುರದ ಸಾಬರೊಬ್ಬರಿಗೆ ಗುತ್ತಿಗೆಗೆ  ಕೊಟ್ಟಿದ್ದರು. ಆ ವರ್ಷದ ಕಿತ್ತಲೆ ಫಸಲು ನಲುವತ್ತು ಸಾವಿರಕ್ಕೆ ಮಾತಾಗಿ ಐದು ಸಾವಿರ ಮುಂಗಡ ಪಡೆದಿದ್ದರು.

ಆ ವರ್ಷ ನಿರಂತರ ಮಳೆಯಾಗಿ ಕಿತ್ತಲೆ ಕಾಯಿಗಳೆಲ್ಲ ಉದುರಿ ಹೋದವು. ಕಿತ್ತಲೆ ಫಸಲಿನವರು ಅಂಥ ಸಂದರ್ಭದಲ್ಲಿ ಕೊಯ್ಯಲು ಬಾರದೆ, ಹಣವನ್ನೂ ಕೊಡದೆ ಕದ್ದು ಹೋಗುವುದೂ ಇದೆ. ಬಾಷ ಹಾಗೆ ಮಾಡಲಿಲ್ಲ ಬಂದು ಅಳಿದುಳಿದ ಕಿತ್ತಲೆಯನ್ನು ಕೊಯ್ದರು. ಕೇವಲ ಎರಡು ಸಾವಿರದಷ್ಟು ಹಣ್ಣು ಸಿಕ್ಕಿತು. ಅದರಲ್ಲಿ ಸ್ವಲ್ಪ ಬಂಗಲೆಗೆ ಕೊಟ್ಟು. “ಸ್ವಾಮಿ ನೀವೆ ನೋಡಿದೀರ ಏನಾದ್ರೂ ರಿಯಾಯ್ತಿ ಮಾಡಿ ಈ ವರ್ಷ ಮಗಳ ಮದುವೆ ಬೇರೆ ಇಟ್ಕಂಡಿದೀನಿ” ಎಂದು ಸಾಬರು ತಲೆಕೆರೆದರು.

ಆಗ ಗಣಪಯ್ಯ, “ನಿನ್ನ ಬಂಡವಾಳ ಏನಿದೆ ಒಂದು ಕುಕ್ಕೆ, ಒಂದು ಕೊಕ್ಕೆ ಬೇರೆ ಏನು? ಬಂಡವಾಳ ಹಾಕಿ ತೋಟ ಮಾಡಿದ್ದು ನಾನು. ಅದೆಲ್ಲ ಆಗದಿಲ್ಲ ಮೊದ್ಲು ಬಾಕಿ ದುಡ್ಡು ತಾ ಆ ಮೇಲೆ ಬೇರೆ ಮಾತು, ಲಾಭ ಆದ್ರೆ ನನಗೆ  ತಂದು ಕೊಡ್ತಿದ್ಯಾ?” ಎಂದು ಬಿಟ್ಟರು.

ಸಾಬರು ಏನೂ ಮಾತಾಡದೆ, ಸುಮ್ಮನೆ ಹೋದರು.

ಎರಡು ದಿನದಲ್ಲಿ ಬಾಷ ಸಾಬರು ಉಳಿದ ಮೂವತ್ತೈದು ಸಾವಿರ ಹಿಡಿದು ಗಣಪಯ್ಯನವರ ಮುಂದೆ ಹಾಜರಾದರು.

“ತಗೊಳ್ಳಿ ಸ್ವಾಮಿ ನಿಮ್ ದುಡ್ಡು” ಎಂದು ಮೇಜಿನ ಮೇಲೆ ಹಣವನ್ನು ಇಟ್ಟರು.

ಹಾರ್ಲೆ ತೋಟ

ಗಣಪಯ್ಯ “ಈಗೆಲ್ಲಿಂದ ಬಂತು ದುಡ್ಡು?, ಬ್ಯಾಂಕಿಂದ ತಂದ್ಯಾ?” ಎಂದರು.

“ನಮ್ಮಂತೋರಿಗೆ ಬ್ಯಾಂಕಲ್ಲಿ ಏನೈತೆ, ದೇವ್ರಾಣೆ ಕೇಳಿ ನೋಡಿ ಮಾರ್ವಾಡಿ ಅಂಗ್ಡೀಲಿ ಸಾಲ ತಂದಿದ್ದೀನಿ.” ಎಂದರು ಸಾಬರು.

ಗಣಪಯ್ಯ ಮಾತಾಡದೆ ಒಂದು ನಿಮಿಷ ಸುಮ್ಮನೆ ಕುಳಿತರು, ನಂತರ “ತಗೊ ಹೋಗು ಮಗಳ ಮದ್ವೆ ಮಾಡು ಮುಂದಿನ ವರ್ಷ ಬಾ” ಎಂದು ಆ ಮೂವತ್ತೈದು ಸಾವಿರವನ್ನೂ ವಾಪಸ್ ಕೊಟ್ಟರು!

“ಇದೇನ್ ಸ್ವಾಮಿ? ಎಂದರು ಸಾಬರು.”

“ನೀನು ಕೊಟ್ಟ ಮುಂಗಡ ಐದು ಸಾವಿರ ಇತ್ತಲ್ಲ ಅದು ಸಾಕು. ನನಗೆ ಮೂವತ್ತೈದು ಸಾವಿರ ಲಾಸು, ನಿನಗೂ ಒಂದ್ ಐದು ಸಾವಿರ ಲಾಸ್ ಇರ್ಲಿ” ಎಂದು ಹೇಳಿ ಸಾಬರನ್ನು ಕಳುಹಿಸಿದರು.

ಈ ವಿಚಾರವನ್ನು ಬಾಷ ಸಾಬರು ನನಗೆ ಹೇಳಿದ್ದು ಗಣಪಯ್ಯನವರು ತೀರಿಕೊಂಡು ಕೆಲವು ವರ್ಷಗಳು ಕಳೆದ ಮೇಲೆ.

ಕೊನೆಯಲ್ಲಿ ಸಾಬರು ನನ್ನಲ್ಲಿ “ನೋಡಿ ಸಾಮಿ ನಮ್ಮಂಥವ್ರಿಗೇ ಅಂತ ದೇವ್ರು ಒಬ್ಬೊಬ್ಬರನ್ನ ಭೂಮಿ ಮ್ಯಾಲೆ ಇಟ್ಟಿರ್ತಾನೆ” ಎಂದರು!

ಇದಕ್ಕೆ ವ್ಯತಿರಿಕ್ತವಾದ ಘಟನೆಗಳೂ ಇದ್ದವು. ಒಬ್ಬ ಮರಿ ಪುಢಾರಿಯೊಬ್ಬ ಗಣಪಯ್ಯನವರಲ್ಲಿಗೆ ಬಂದ, ತನ್ನ ತಂದೆಗೆ ಕಾಯಿಲೆ ಆಗಿದೆ, ಆಸ್ಪತ್ರೆಗೆ ಸೇರಿಸಿದ್ದೇನೆ, ಎಂದು ಹೇಳಿ ಸಹಾಯ ಕೇಳಿದ, ಗಣಪಯ್ಯನವರು ಒಂದಷ್ಟು ಹಣವನ್ನು ಕೊಟ್ಟರು. ಆಗ ಅಲ್ಲೇ ಇದ್ದ ಗಣಪಯ್ಯನವರ ಹತ್ತಿರದ ಸಂಬಂಧಿಯೊಬ್ಬರು ಇದನ್ನು ಗಮನಿಸಿದರು. ಅವರಿಗೂ ಹಣ ಪಡೆದ ವ್ಯಕ್ತಿಯ ಪರಿಚಯ ಚೆನ್ನಾಗಿ ಇತ್ತು. ಸ್ವಲ್ಪ ಹೊತ್ತಿನಲ್ಲೇ ಅವರು ಬಸ್ಸಿನಲ್ಲಿ ಸಕಲೇಶಪುರಕ್ಕೆ ಹೋದರು. ಈ ಪುಢಾರಿಯೂ ಅದೇ ಬಸ್ಸಿನಲ್ಲಿ ಇದ್ದ. ಇವರು ಆತನ ಕ್ರಮಗಳನ್ನು ನೋಡಿ ಅನುಮಾನದಿಂದ ಸಕಲೇಶಪುರದಲ್ಲಿ ಕೂಡಾ ಆತನನ್ನು ಹಿಂಬಾಲಿಸಿದರು. ತಂದೆಯ ಚಿಕಿತ್ಸೆಗೆಂದು ಹಣ ಪಡೆದ ವ್ಯಕ್ತಿ ಹೋದದ್ದು ಸಕಲೇಶಪುರದ ಖ್ಯಾತ ಇಸ್ಪೀಟ್ ಕ್ಲಬ್ಬಿಗೆ!

ಇದಕ್ಕಿಂತ ರೋಚಕವಾದ ಸಂಗತಿಯೊಂದಿದೆ.

ಸೋಮವಾರ ಪೇಟೆ ಕಡೆಯಿಂದ ಗಣಪಯ್ಯನವರ ನೆಂಟನೊಬ್ಬ ಹಾರ್ಲೆಗೆ ಬಂದು ಗಣಪಯ್ಯನವರ ಮನೆಯಲ್ಲಿ ಉಳಿದುಕೊಂಡ. ತಾನು ಅನೇಕ ಕಡೆ ನೆಲವನ್ನು ಗುತ್ತಿಗೆಗೆ ಪಡೆದು ಏಲಕ್ಕಿ ತೋಟ ಮಾಡುತ್ತಿದ್ದೇನೆ, ಅದಕ್ಕಾಗಿ ಏಲಕ್ಕಿ ಗಿಡಗಳನ್ನು ಸಂಗ್ರಹಿಸಲು ಬಂದಿದ್ದೇನೆಂದು ಹೇಳಿದ. ಸುತ್ತ ಹಲವು ಗ್ರಾಮಗಳಲ್ಲಿ ಏಲಕ್ಕಿ ಗಿಡಗಳನ್ನು ಸಾವಿರ ಸಾವಿರ ಲೆಕ್ಕದಲ್ಲಿ ಕೊಂಡು ಮುಂಗಡ ಕೊಟ್ಟ. ಬೇರೆಯವರಿಗಿಂತ ಹೆಚ್ಚಿಗೆ ಬೆಲೆಯನ್ನೂ ಕೊಟ್ಟ. ಗಣಪಯ್ಯನವರ ನೆಂಟರು ಎಂದ ಮೇಲೆ ಕೇಳಬೇಕೆ ರೈತರು ಮೇಲೆ ಬಿದ್ದು ಗಿಡಗಳನ್ನು ಕೊಟ್ಟರು. ಒಂದು ಸಲ ಲಾರಿಯ ತುಂಬ ಗಿಡಗಳನ್ನು ತುಂಬಿಕೊಂಡು ಹೋದ, ಎರಡನೆಯ ಸಲ ಬಂದಾಗ ಒಂದಷ್ಟು ಹಣವನ್ನು ರೈತರಿಗೆ ಬಾಕಿ ಮಾಡಿ ಮುಂದಿನ ಸಲ ಬಂದಾಗ ಕೊಡುತ್ತೇನೆ ಎಂದ. ಮುಂದಿನ ಸಲ ಪ್ರಾಮಾಣಿಕವಾಗಿ ಹಣ ತಂದು ಕೊಟ್ಟ. ಆಗ ಬರುವಾಗ ದೊಡ್ಡ ಲಾರಿಯನ್ನೇ ತಂದಿದ್ದ, ಅನುಮಾನಕ್ಕೆ ಕಾರಣವಿಲ್ಲದೆ ಒಂದು ಪೈಸೆ ಹಣ ಕೊಡದೆ ಲಾರಿ ಗಿಡಗಳಿಂದ ತುಂಬಿತು. ಎರಡೇ ದಿನದಲ್ಲಿ ಮತ್ತೆ ಬರುತ್ತೇನೆಂದ, ತಮ್ಮಲ್ಲಿ ಗಿಡಗಳು ಖಾಲಿಯಾದವರು ಬೇರೆಯವರಲ್ಲಿ ಸ್ವಲ್ವ ಕಮ್ಮಿಗೆ ಗಿಡ ಖರೀದಿ ಮಾಡಿಟ್ಟುಕೊಂಡು, ಲಾಭ ಮಾಡುವ ಆಸೆಯಿಂದ ಕಾದು ಕೂತರು, ಹೋದ ನೆಂಟ ಬರಲೇ ಇಲ್ಲ!

ಸ್ವಲ್ಪ ದಿನಗಳ ನಂತರ ಗಿಡ ಕೊಟ್ಟವರೆಲ್ಲ ಒಬ್ಬೊಬ್ಬರಾಗಿ ಹಾರ್ಲೆಗೆ ಬಂದು ವಿಚಾರಿಸ ತೊಡಗಿದರು. ದಿನಕಳೆದಂತೆ ಗಣಪಯ್ಯನವರಿಗೂ ಮುಜುಗರವಾಗತೊಡಗಿತು. ಒಂದು ದಿನ ಎಲ್ಲರನ್ನೂ ಬರಹೇಳಿ ಲೆಕ್ಕ ಚುಕ್ತಾ ಮಾಡಿ ಹಣ ಕೊಟ್ಟು ಕಳುಹಿಸಿದರು. ಆ ಕಾಲದಲ್ಲೇ ಅದು ಸುಮಾರು ಆರೇಳು ಸಾವಿರ ರೂಪಾಯಿಗಳಷ್ಟಿತ್ತು.

ಎಷ್ಟೋ ಸಲ ಗಣಪಯ್ಯ ಜನರಿಗೆ ಸಹಾಯ ಮಾಡಿ ಹಣ ಕೊಡುತ್ತಿದ್ದುದು ಬೇರೆ ಯಾರಿಗೂ ತಿಳಿಯುತ್ತಲೇ ಇರಲಿಲ್ಲ.

ತೋಟದ ಕಾರ್ಮಿಕರಿಗೆ ಅದರಲ್ಲೂ ಮುಖ್ಯವಾಗಿ ಹೆಂಗಸರಿಗೆ ಅವರು ಬೆಂಗಳೂರಿನಿಂದ ಕೈಮಗ್ಗದ ವಸ್ತ್ರಗಳನ್ನು ತಂದು ಕೊಡುತ್ತಿದ್ದರು. ಅವರು ದೊಡ್ಡ ಸಂಖ್ಯೆಯಲ್ಲಿ ಖರೀದಿಸುತ್ತಿದ್ದರಿಂದ ಕಡಿಮೆ ಬೆಲೆಗೆ ಸಿಗುತ್ತಿತ್ತು, ಸಾಮಾನ್ಯವಾಗಿ ವರ್ಷಕ್ಕೆರಡು ಸಲ ಸೀರೆ ಪಂಚೆಗಳನ್ನು ತರುತ್ತಿದ್ದರು. ಕೆಲಸಗಾರರು, ಅದರ ಅಸಲು ಹಣವನ್ನು ಕಂತುಗಳಲ್ಲಿ ತೀರಿಸಬೇಕು. ವಯಸ್ಸಾದವರಿಗೆ ಉಚಿತ.

ಆ ಕಾಲದಲ್ಲಿ ಎಷ್ಟೋ ಮನೆಗಳಲ್ಲಿ ಗಂಡಸರು ಕುಡುಕರಾದರೆ ಹೆಂಗಸರಿಗೆ ಬಟ್ಟೆಯೇ ಇರುತ್ತಿರಲಿಲ್ಲ.

ಏಲಕ್ಕಿ ಗಿಡಗಳು

ಪ್ರತಿವರ್ಷ ದೀಪಾವಳಿ ಸಮಯದಲ್ಲಿ ಎಲ್ಲ ಮಕ್ಕಳಿಗೂ ಉಚಿತವಾಗಿ ಬಟ್ಟೆ ಹೊಲಿಸಿ ಹಂಚುತ್ತಿದ್ದರು.

ಹಾರ್ಲೆಯ ಪಕ್ಕದ ದಲಿತರ ಕಾಲೊನಿಗಳಿಗೆ ಗಣಪಯ್ಯ ದಂಪತಿಗಳಿಗೆ ಜೀಪಿನಲ್ಲಿ ಬೆಳಗಿನ ಹನ್ನೊಂದು ಘಂಟೆಯ ವೇಳೆಗೆ ಹೋಗುತ್ತಿದ್ದರು. ಆ ಹೊತ್ತಿನಲ್ಲಿ ಮನೆಯವರು ಕೆಲಸಕ್ಕೆ ಹೋಗಿರುತ್ತಿದ್ದರು ಆದರೆ ವಯಸ್ಸಾದವರು ಮಾತ್ರ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಸಿಗುತ್ತಿದ್ದರು. ಆಗ ಅವರನ್ನು ಕರೆದು ಗುಟ್ಟಾಗಿ ಅವರಿಗೆ ಸೀರೆ, ಪಂಚೆ ಕೊಡುವರು. ನಂತರ ಇದು ನೀನೇ ಇಟ್ಕೋ ಮಕ್ಕಳಿಗೆ ಕೊಡಬೇಡ ಎನ್ನುವರು. ಯಾಕೆಂದರೆ ಅದನ್ನೂ ಮಾರಿ ಹೆಂಡ ಕುಡಿಯುವವರೂ ಇದ್ದರು. ಕೆಲವರ ಮಕ್ಕಳು ಅದನ್ನೂ ಮಾರಿಕೊಂಡದ್ದು ತಿಳಿದಾಗ “ಇವರೆಲ್ಲ ಈಗ ಸರಿಯಾಗಕಿಲ್ಲ, ವಿದ್ಯೆ ಕಲಿತು ನಿಧಾನಕ್ಕೆ ಇವರ ಮೊಮ್ಮಕ್ಕಳ ಕಾಲಕ್ಕೆ ಎಲ್ಲ ಸರಿಯಾಗ್ತಾರೆ” ಎನ್ನುತ್ತಿದ್ದರು.

ಇಂದು ಸಣ್ಣದೊಂದು ವಸ್ತುವನ್ನು “ದಾನ ಮಾಡಿ” ಪೋಟೋ ತೆಗೆಸಿಕೊಂಡು ಪತ್ರಿಕೆಗಳಲ್ಲೋ ಸಾಮಾಜಿಕ ಜಾಲತಾಣಗಳಲ್ಲೋ ಸ್ವಯಂ ಪ್ರಚಾರ ಮಾಡಿಕೊಳ್ಳುವವರನ್ನು ಕಂಡಾಗ ಇದೆಲ್ಲ ನೆನಪಾಯಿತು.

ಗಣಪಯ್ಯ ಇನ್ನೂ ಸಣ್ಣ ಕೆಲಸದಿಂದ ತಮ್ಮ ವೃತ್ತಿಯನ್ನು ಪ್ರಾರಂಭಿಸಿ, ನಂತರ ರಾಜಕಾರಣಿ, ಸಮಾಜ ಸೇವಕರಾಗಿ, ಪ್ರಗತಿಪರ ಕೃಷಿಕರಾಗಿ ಏರಿದ ಎತ್ತರಕ್ಕೆ ಅವರು ದೆಹಲಿಯಲ್ಲಿ ಮೊರಾರ್ಜಿ ಸರ್ಕಾರ ಬಂದಾಗ, ಕೇಂದ್ರದಲ್ಲಿ ಸಚಿವರೋ, ಇಲ್ಲವೇ ರಾಜ್ಯಪಾಲರೋ ಆಗಬಹುದಿತ್ತು. ಆದರೆ ಅವರು ನಿರ್ಲಿಪ್ತರಾಗಿ ದೂರ ಉಳಿದರೇ ಹೊರತು “ರಾಜಕೀಯ” ಮಾಡಲಿಲ್ಲ.

ಹಾರ್ಲೆ ಪಕ್ಕದ ಹಳ್ಳಿಗಳು ಇಂದು

ಆದರೆ ರಾಜಕಾರಣಿಗಳಿಂತ ಹೆಚ್ಚು ಜನಮಾನಸದಲ್ಲಿ‌ ಉಳಿಯುವಂತಹ ಕೆಲಸಗಳಲ್ಲಿ ತೊಡಗಿದರು.

ಆ ಕಾಲದ ಮುದುಕರಲ್ಲಿ ಅನೇಕರು ಗಣಪಯ್ಯನವರು ತೀರಿಕೊಂಡ ನಂತರವೂ ಒಮ್ಮೊಮ್ಮೆ ಹಾರ್ಲೆ ಬಂಗಲೆಗೆ ಬಂದು ದೇವಮ್ಮನವರನ್ನು ಮಾತಾಡಿಸಿ ಹೋಗುತ್ತಿದ್ದರು. ಯಾರು ಹಣ ಕೊಟ್ಟಿದ್ದರೂ ಸರಿ ಚುನಾವಣೆಯ ಹಿಂದಿನ ದಿನ ಹಾರ್ಲೆಗೆ ಬಂದು ದೇವಮ್ಮನವರಲ್ಲಿ ಈಗ ನಾವು ಯಾವ ಕಡೆ ಎನ್ನುವರು.

ಆಗ ದೇವಮ್ಮ ನನ್ನ ಗಂಡ ಕಟ್ಟಿ ಬೆಳೆಸಿದ ಪಕ್ಷ ಉಂಟು ನನಗೆ ಕಡೇವರೆಗೂ ಅದೇ ಪಕ್ಷ, ನೀವೂ ಹಾಗೇ ಮಾಡಿ ಎನ್ನುವರು. ದೇವಮ್ಮನವರು ಇರುವ ತನಕ ಹೀಗೆ ಕೆಲವರು ಬರುತ್ತಿದ್ದರು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಮೊದಲ ಕೆಲಸಕ್ಕೆ ಸೇರಿದ್ದು ಹೀಗೆ: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...