ಕೊಲ್ಕತ್ತ: ಇಂದು ಮುಂಜಾನೆ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಮನೆಯತ್ತ ಮೂರು ಬಾಂಬ್ಗಳು ಎಸೆಯಲ್ಪಟ್ಟಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಮನೆಯ ಗೇಟಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಬಿಜೆಪಿ ನಾಯಕ ದಿಲೀಪ್ ಘೋಷ್ ಪ್ರತಿಕ್ರಿಯಿಸಿ, ಬಹುಶಃ ಈ ಘಟನೆಗೆ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಕಾರಣವಾಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಕೊಲ್ಕತ್ತದಿಂದ ಸುಮಾರು ನೂರು ಕಿ.ಮೀ. ದೂರದಲ್ಲಿರುವ ಜಾಗಟ್ದಳ್ ನಲ್ಲಿ ಅರ್ಜುನ್ ಸಿಂಗ್ ಅವರ ಮನೆ ಇದ್ದು, ಮೂವರು ದುಷ್ಕರ್ಮಿಗಳು ಮುಂಜಾನೆ 6.30ರ ಸಮಯದಲ್ಲಿ ಮನೆಯ ಬಳಿ ಬಂದು ಬಾಂಬ್ ಎಸೆದಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ.
ಅರ್ಜುನ್ ಸಿಂಗ್ ಅವರು ದೆಹಲಿಯಲ್ಲಿದ್ದು, ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೊಲ್ಕತ್ತಕ್ಕೆ ಇಂದು ವಾಪಸ್ ಆಗಲಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಖರ್ ಟ್ಟೀಟ್ ಮಾಡಿದ್ದು, “ಪಶ್ಚಿಮ ಬಂಗಾಳದಲ್ಲಿ ತಡೆರಹಿತ ಹಿಂಸೆ ನಡೆಯುತ್ತಿದೆ” ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ ಸೇರಿದ ಮತ್ತೊಬ್ಬ ಬಿಜೆಪಿ ಶಾಸಕ
ಘಟನೆಯನ್ನು ಟಿಎಂಸಿಗೆ ತಳುಕು ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್, “ಬಿಜೆಪಿಯೊಳಗಿನ ಆಂತರಿಕ ಕಲಹದಿಂದಾಗಿ, ಬಿಜೆಪಿಯೊಳಗಿನವರೇ ಈ ಕೃತ್ಯ ಎಸಗಿದ್ದಾರೆ” ಎಂದು ಹೇಳಿದೆ.