Homeಮುಖಪುಟಅವರೇ ಹಾಕಿಕೊಂಡ ಟಾರ್ಗೆಟ್ ಮೂಲಕ ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-1

ಅವರೇ ಹಾಕಿಕೊಂಡ ಟಾರ್ಗೆಟ್ ಮೂಲಕ ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-1

- Advertisement -
- Advertisement -

ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷಗಳು ಪೂರ್ಣಗೊಂಡಿವೆ. 2019ರಲ್ಲಿ ಎರಡನೇ ಅವಧಿಗೆ ಚುನಾಯಿತಗೊಂಡ ಬಳಿಕವಂತೂ ಈ ಸರ್ಕಾರ ತನ್ನ ಅಜೆಂಡಾಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಹೊರಟಿದ್ದು, ಸಂಸತ್ತೂ ಸೇರಿದಂತೆ ಎಲ್ಲ ಪ್ರಜಾಸತ್ತಾತ್ಮಕ ವ್ಯವಸ್ಥೆಗಳನ್ನೂ-ಆರೋಗ್ಯಕರ ಚರ್ಚೆಗಳನ್ನೂ ಕಡೆಗಣಿಸಿ, ಕೇವಲ ಸಂಸತ್ತಿನಲ್ಲಿ ಬಹುಮತದ ಆಧಾರದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ.

ಸ್ವತಂತ್ರ ಭಾರತದಲ್ಲಿ, ಈ ರೀತಿ ಬಹುಮತವಿದೆ ಎಂಬ ಏಕೈಕ ಕಾರಣಕ್ಕಾಗಿ ತೀರ್ಮಾನಗಳನ್ನು ಮೂಗಿನ ನೇರಕ್ಕೆ ತೆಗೆದುಕೊಳ್ಳುವುದು ಹೊಸ ಹಾದಿಯಾಗಿರುವ ಕಾರಣ ಎಲ್ಲೆಡೆ ಒಂದು ರೀತಿಯ ಆಶ್ಚರ್ಯಾಘಾತದ ಸ್ಥಿತಿ ಇದೆ. ಹಿಂದಿನ ಬೇರೆ ಸರ್ಕಾರಗಳು ಇದ್ದಾಗ ಮೂಗಿನ ನೇರಕ್ಕೆ ತೀರ್ಮಾನಗಳು ನಡೆಯುವಾಗಲೂ, ಅದಕ್ಕೊಂದು ಸಂಸದೀಯ ಚರ್ಚೆಯ ಮುಖವಾಡ ಇತ್ತು, ಸಾರ್ವಜನಿಕ ಪ್ರತಿಕ್ರಿಯೆಗಳ ಭಯ ಇತ್ತು. ಈಗ ಅದು ಯಾವುದೂ ಕಾಣಿಸುತ್ತಿಲ್ಲ.

ಅದ್ಯಾವುದೂ ಇಲ್ಲದೇ ನಿರರ್ಗಳವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಹಾಲೀ ಒಕ್ಕೂಟ ಸರ್ಕಾರದ ಹಾಲ್‌ಮಾರ್ಕ್. ತನ್ನ ನೇರ ತೀರ್ಮಾನಗಳನ್ನು ಕೂಡ ಅಲ್ಲಲ್ಲಿ ಅರ್ಧಂಬರ್ಧ ಗುಪ್ಪೆ ಹಾಕುತ್ತಾ ಬಂದು, ಅದು ಪೂರ್ಣಪ್ರಮಾಣದ ಚಿತ್ರವಾಗಿ ಕಾಣಿಸಿಕೊಳ್ಳುವ ತನಕ ಸಾರ್ವಜನಿಕರಿಂದಲೂ ಅದನ್ನು ಅಡಗಿಸಿಟ್ಟು ನಿರ್ವಹಿಸುವುದು ಈ ಸರ್ಕಾರ ಅನುಸರಿಸುತ್ತಿರುವ ತಂತ್ರ.

ಇದರ ಫಲ ಏನೆಂದರೆ, ಒಕ್ಕೂಟ ಸರ್ಕಾರ ಜನಸಾಮಾನ್ಯರ ನಡುವೆ ಸಾಮಾನ್ಯವಾಗಿ ಇರುವ ಸರ್ಕಾರ-ನಾಗರಿಕ ಸಂಬಂಧವನ್ನು ಕಳೆದುಕೊಂಡಿದೆ. ಈಗೇನಿದ್ದರೂ, ಪಕ್ಷದ ಕಾರ್ಯಕರ್ತರು ಮತ್ತು ಸಮರ್ಥಕರಿಗೆ ಸೀಮಿತವಾಗಿಬಿಟ್ಟಿರುವ ಸರ್ಕಾರದಲ್ಲಿ ಅದು ಸ್ವತಃ ಹೇಳಿರುವಂತೆ “ಸಬ್ ಕಾ ಸಾತ್” (ಅಥವಾ
ಒಳಗೊಳ್ಳುವಿಕೆ) ಕಾಣಿಸುತ್ತಿಲ್ಲ. ಚುನಾವಣೆ ಗೆಲ್ಲುವ ತಂತ್ರವನ್ನು ಅರೆದು ಕುಡಿದಿರುವ ನಾಯಕತ್ವವನ್ನು ಅವಲಂಬಿಸಿ ಒಕ್ಕೂಟ ಸರ್ಕಾರ ಸಾಗುತ್ತಿದೆ. ಮಾಧ್ಯಮಗಳಲ್ಲಿ ಈ ಸರ್ಕಾರದ ಕಳೆದ ಏಳು ವರ್ಷಗಳ ಕಾರ್ಯವೈಖರಿಯನ್ನು ನಿಕಷಕ್ಕೆ ಒಡ್ಡಿರುವುದು ಈ ತನಕ ನಡೆದಿಲ್ಲ. ಸರ್ಕಾರದ ನಿಯಮಗಳ ನೇರ ಫಲಾನುಭವಿಗಳಾಗಳೂ ಇದನ್ನು ಮಾಡಿಲ್ಲ. ಏನಿದ್ದರೂ ಅಬ್ಬರದ ಪ್ರಚಾರ ಮತ್ತು ತಪ್ಪುಗಳು ಸಂಭವಿಸಿದಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಗಳ ಮೂಲಕವೇ ದಿನ ದೂಡಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡುವುದು ಹೇಗೆ? ಅದಕ್ಕೆ ಮಾನದಂಡಗಳು ಏನಿರಬೇಕು?

ಭಾರತ @75

2018ರಲ್ಲಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುವ ಹೊತ್ತಿಗೆ (2022) ಭಾರತ ಎಲ್ಲಿಗೆ ತಲುಪಿರಬೇಕು ಎಂದು ವಿವರಿಸುವ ವಿಸ್ತೃತವಾದ ದಾಖಲೆಯೊಂದನ್ನು ಕೇಂದ್ರ ಸರ್ಕಾರದ ನೀತಿ ನಿರೂಪಣೆ ಮಾಡುವ ತಂಡ – ನೀತಿ ಆಯೋಗವು, ಸಿದ್ಧಪಡಿಸಿತ್ತು. ದೇಶದ ಸದ್ಯದ ಸ್ಥಿತಿ, ಅಲ್ಲಿರುವ ಸಮಸ್ಯೆಗಳು, ಬದಲಾವಣೆಯ ಹಾದಿ ಮತ್ತು ತಲುಪಬೇಕಾದ ಗುರಿಗಳನ್ನು ವಿವರವಾಗಿ ನೀಡಿರುವ ಈ ದಾಖಲೆಯು ಸರ್ಕಾರದ ಕಾರ್ಯ ಸಾಧನೆಯ ಬಗ್ಗೆ ’ಮೌಲ್ಯಮಾಪನ ಮಾಡಬಲ್ಲ’ ಅಂಶಗಳನ್ನು ಕೊಟ್ಟಿದೆ.

ಸ್ವತಃ ಪ್ರಧಾನಮಂತ್ರಿಗಳ ಮುನ್ನುಡಿ ಹೊಂದಿರುವ ಈ ನೀತಿ ನಿರೂಪಣೆಯು ಬಹುತೇಕ, ಒಕ್ಕೂಟ ಸರ್ಕಾರವನ್ನು ನಡೆಸುತ್ತಿರುವ ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಆಶಯವೂ ಆಗಿರುವ ಹಿನ್ನೆಲೆಯಲ್ಲಿ, ಈ ಮೌಲ್ಯಮಾಪನ ಇನ್ನಷ್ಟು ಮುಖ್ಯವಾದುದಾಗಿದೆ. ಮೇಲಾಗಿ, ಸರ್ಕಾರ ಕೂಡ ಈ ಭಾರತ @75ನ್ನು ತಲುಪುವ ಬಗ್ಗೆ ಆಗಾಗ ಮಾತನಾಡುತ್ತಾ ಬಂದಿದೆ. ಈ ಸುದೀರ್ಘ ಲೇಖನದಲ್ಲಿ ಬಿಜೆಪಿ ಸರ್ಕಾರ ಬರುವ ಮೊದಲು ಯಾವ ಸ್ಥಿತಿ ಇತ್ತು, ಬಂದ ಬಳಿಕ ಎಲ್ಲಿಗೆ ತಲುಪಲಾಗಿದೆ ಮತ್ತು ತಲುಪಬೇಕಾದ ಗುರಿ ಎಷ್ಟಿತ್ತು – ತಲುಪಿದ್ದೆಷ್ಟು ಎಂಬ ಬಗ್ಗೆ ಪ್ರತಿಯೊಂದೂ ಅಂಶವನ್ನು ಚರ್ಚಿಸಲಾಗಿದೆ ಮತ್ತು ಆ ನಿರ್ದಿಷ್ಟ ರಂಗದಲ್ಲಿ ಸರ್ಕಾರದ ಸಾಧನೆಯನ್ನು ಓದುಗರ ಮುಂದಿಡಲು ಪ್ರಯತ್ನಿಸಲಾಗಿದೆ. ಈ ಲೇಖನದಲ್ಲಿ, ವ್ಯಾಖ್ಯಾನಗಳಿಲ್ಲ. ಏಕೆಂದರೆ ಸರ್ಕಾರದ ಚಿಂತನೆಯಂತೆ, ಇವೆಲ್ಲ ಈಗ ಆಗಿ ಮುಗಿದಿರಬೇಕಾದ ಅಥವಾ ತಲುಪಬೇಕಾದ ಗುರಿ ಮತ್ತು ಸನಿಹದಲ್ಲಿರುವ ಯೋಜನೆಗಳು. ಸರ್ಕಾರದ ಪ್ರತಿಯೊಂದೂ ಕ್ಷೇತ್ರದಲ್ಲಿನ ಸಾಧನೆಗಳು, ಅವೇ ಸ್ವತಃ ಮಾತನಾಡಬಲ್ಲವು. ಹಾಗಾಗಿ ಸರ್ಕಾರ ತನ್ನ ಉದ್ದೇಶಿತ ಗುರಿ ಸಾಧನೆಯಲ್ಲಿ ಎಲ್ಲಿಗೆ ತಲುಪಿದೆ ಎಂಬುದನ್ನು ಮೌಲ್ಯಮಾಪನ ಮಾಡುವುದಕ್ಕೆ ಇದು ಸಕಾಲ.

ಬೆಳವಣಿಗೆ

1) ಗುರಿ: GDP ಬೆಳವಣಿಗೆಯ ದರವನ್ನು ಸತತವಾಗಿ ವೇಗಗೊಳಿಸಿ, 8% ಗುರಿಯನ್ನು ತಲುಪಿಸುವುದು
ಸಾಧನೆ:

(ಮಾಹಿತಿ ಮೂಲ: ವಿಶ್ವಬ್ಯಾಂಕಿನ ದಾಖಲೆ)

2) ಗುರಿ: ಹೂಡಿಕೆಯ ದರವನ್ನು GDPಯ ಶೇ.36%ಕ್ಕೆ ಏರಿಸುವುದು
ಸಾಧನೆ:

(ಮಾಹಿತಿಮೂಲ: CEIC ಡೇಟಾ)

3) ಗುರಿ: ತೆರಿಗೆ-ಜಿಡಿಪಿ ಅನುಪಾತವನ್ನು GDPಯ ಶೇ.22%ಕ್ಕೆ ಏರಿಸುವುದು.
ಸಾಧನೆ:

(ಮಾಹಿತಿ ಮೂಲ: ಇಂಡಿಯನ್ ಎಕಾನಮಿ ಡಾಟ್‌ನೆಟ್)

ಉದ್ಯೋಗ ಮತ್ತು ಕಾರ್ಮಿಕ ಸುಧಾರಣೆಗಳು

4) ಗುರಿ: ವ್ಯವಹಾರ ಮಾಡುವುದಕ್ಕೆ ಸುಗಮಗೊಳಿಸಲು (Ease of business) ರಾಜ್ಯಗಳ ಜೊತೆ ಸೇರಿ ಪ್ರಯತ್ನ ಮತ್ತು ಭೂಮಿಕಾರ್ಮಿಕ ಸಂಬಂಧಿ ಕಾನೂನುಗಳಲ್ಲಿ ಸುಧಾರಣೆ.

ಸಾಧನೆ: ಸರ್ಕಾರ Ease of businessನ ರ್‍ಯಾಂಕಿಂಗ್‌ಅನ್ನು ಜಾಗತಿಕವಾಗಿ ಸುಧಾರಿಸಿಕೊಂಡಿದೆ.

ಭೂಪರಿವರ್ತನೆಗೆ ಸಂಬಂಧಿಸಿದಂತೆ ಒಕ್ಕೂಟ ಸರ್ಕಾರದ ನೀತಿ, ರಾಜ್ಯಗಳು ಭೂಮಿತಿಯನ್ನು ತಗ್ಗಿಸಿ ಹೆಚ್ಚುವರಿ ಕೃಷಿ ಭೂಮಿಯನ್ನು ಭೂರಹಿತ ಕೃಷಿ ಕಾರ್ಮಿಕರಿಗೆ ಹಂಚಬೇಕು ಎನ್ನುತ್ತಿದೆಯಾದರೂ, 11 ರಾಜ್ಯಗಳು ಇದಕ್ಕೆ
ವ್ಯತಿರಿಕ್ತವಾಗಿ ಕಾರ್ಪೊರೆಟ್‌ಗಳು ಮತ್ತು ಕೈಗಾರಿಕೆಗಳ ಪರವಾಗಿರುವ ಸುಧಾರಣೆಗಳನ್ನು ಜಾರಿಗೆ ತಂದಿವೆ. ಕಳೆದ 3 ವರ್ಷಗಳಲ್ಲಿ ಆರು ರಾಜ್ಯಗಳು ಈ ಸುಧಾರಣೆಗಳನ್ನು ಜಾರಿಗೆ ತಂದಿವೆ. ಅವುಗಳಲ್ಲಿ ಎರಡು 2020ರಲ್ಲೆ ಆದವು. ಆ 11 ರಾಜ್ಯಗಳೆಂದರೆ, ಆಂಧ್ರಪ್ರದೇಶ, ಗುಜರಾತ್, ಹರ್ಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ ಮತ್ತು ಪ.ಬಂಗಾಳ. ಇದು ಭೂಸುಧಾರಣೆಯ ಉದ್ದೇಶಿತ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ಚಲನೆ.

ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದಂತೆ ಒಕ್ಕೂಟ ಸರ್ಕಾರ ಸುಮಾರು 44 ಕಾನೂನುಗಳನ್ನು ಸಮಗ್ರಗೊಳಿಸಿ, 1. ಕೈಗಾರಿಕಾ ಸಂಬಂಧಿಗಳು, 2. ವೃತ್ತಿ ಸುರಕ್ಷೆ, 3. ಆರೋಗ್ಯ ಮತ್ತು ಕೆಲಸದ ಸನ್ನಿವೇಶ ಹಾಗೂ 4. ಸಾಮಾಜಿಕ ಭದ್ರತೆ ಎಂಬ ಅಂಶಗಳಡಿ ಕೇವಲ 4 ಕಾನೂನುಗಳನ್ನಾಗಿಸಲು ಉದ್ದೇಶಿಸಿದೆ.
ಇದಕ್ಕೆ ಸಂಬಂಧಿಸಿದಂತೆ wage code bill 2019ನ್ನು ಸಂಸತ್ತು ಅಂಗೀಕರಿಸಿದೆ. ಉಳಿದವುಗಳು ಇನ್ನಷ್ಟೇ ಆಗಬೇಕಿವೆ.

5) ಗುರಿ: ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯನ್ನು ಶೇ.30ಕ್ಕೆ ಏರಿಸುವುದು.
ಸಾಧನೆ:

(ಮಾಹಿತಿ ಮೂಲ: ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇಗಳು)

6) ಗುರಿ: ಕೌಶಲಗಳ ಸುಧಾರಣೆ ಮತ್ತು ಅಪ್ರೆಂಟಿಸ್‌ಶಿಪ್ ಅವಕಾಶಗಳ ಸಂಖ್ಯೆಯನ್ನು ಹೆಚ್ಚಿಸುವುದು.

ಸಾಧನೆ: ಉದ್ಯೋಗಾರ್ಹತೆ ಸಾಮರ್ಥ್ಯದ ದರ (Employability Rate)ದಲ್ಲಿ ಆಗಿರುವ ಬದಲಾವಣೆಗಳು ಈ ಕೆಳಗಿನಂತಿವೆ:

(ಮಾಹಿತಿಮೂಲ: India Skills report 2019)

ಜಾಗತಿಕ ಸ್ಫರ್ಧಾತ್ಮಕತೆ ಇಂಡೆಕ್ಸ್ 2017-18ರ ವರದಿಯ ಪ್ರಕಾರ, 40ನೇ ಸ್ಥಾನದಲ್ಲಿರುವ ಭಾರತ ಕಳೆದ 2 ವರ್ಷಗಳಲ್ಲಿ ಈ ರಂಗದಲ್ಲಿ ಸುಧಾರಣೆ ಕಂಡಿದೆ. ಮೂಲ ಸೌಕರ್ಯಗಳಲ್ಲಿ ಎರಡು ಸ್ಥಾನ ಮೇಲೇರಿ 66ನೇ ರ್‍ಯಾಂಕಿಗೂ, ಉನ್ನತ ಶಿಕ್ಷಣ ಮತ್ತು ತರಬೇತಿಯಲ್ಲಿ 6 ಸ್ಥಾನ ಮೇಲೇರಿ 75ನೇ ರ್‍ಯಾಂಕಿಗೂ, ತಂತ್ರಜ್ಞಾನ ಸನ್ನದ್ಧತೆಯಲ್ಲಿ 3 ಸ್ಥಾನ ಮೇಲೇರಿ 107ನೇ ರ್‍ಯಾಂಕಿಗೂ ತಲುಪಲಾಗಿದೆ.

ಸಾರ್ವಜನಿಕ ಹೂಡಿಕೆಗಳು, ಪ್ರತಿ ಬಳಕೆದಾರರಿಗೆ ಇಂಟರ್‌ನೆಟ್ ಬ್ಯಾಂಡ್‌ವಿಡ್ತ್, ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಹೊಂದಿರುವವರ ಸಂಖ್ಯೆ, ಶಾಲೆಗಳಲ್ಲಿ ಅವಕಾಶ, ಸಾರ್ವಜನಿಕ ವೆಚ್ಚಗಳಲ್ಲಿ ಶಿಸ್ತು ಇದನ್ನೆಲ್ಲ ಪರಿಗಣಿಸಿ, ಈ ತೀರ್ಮಾನ ತೆಗೆದುಕೊಳ್ಳಲಾಗಿದೆಯಂತೆ. ಈ ವರದಿಯ ಪ್ರಕಾರ ಸ್ಫರ್ಧಾತ್ಮಕತೆಯಲ್ಲಿ ಅತಿ ದೊಡ್ಡ ತಡೆಗೋಡೆ ಭ್ರಷ್ಟಾಚಾರದ್ದು ಎಂದು ವರದಿ ಉಲ್ಲೇಖಿಸಿದೆ. ಅಂದರೆ, ಜನಸಾಮಾನ್ಯರ ಕಡೆಯಿಂದ ಬದುಕು ಕಟ್ಟಿಕೊಳ್ಳುವ ಪ್ರಯತ್ನಗಳಲ್ಲಿ ಚ್ಯುತಿ ಆಗಿಲ್ಲ, ಅಡ್ಡಿ-ತಡೆಗಳಿರುವುದು ಸರ್ಕಾರದ ವ್ಯವಸ್ಥೆಯಲ್ಲೆ!

7) ಗುರಿ: ಉದ್ಯೋಗ ಸಂಬಂಧಿ ದತ್ತಾಂಶಗಳ ಸಂಗ್ರಹಣೆಯಲ್ಲಿ ಸುಧಾರಣೆ.

ಸಾಧನೆ: ಉದ್ಯೋಗ ಸಂಬಂಧಿ ದತ್ತಾಂಶಗಳ ಸಂಗ್ರಹಣೆ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ತಳಮಟ್ಟದಲ್ಲಿ ಕೆಲಸಗಳು ಇನ್ನಷ್ಟೇ ಆರಂಭ ಆಗಬೇಕಾಗಿದ್ದು, ಅಂಕಿ ಸಂಖ್ಯೆ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯು ತನ್ನ 2020-21ರ ವಾರ್ಷಿಕ ವರದಿಯಲ್ಲಿ ಉದ್ಯೋಗ ಸಂಬಂಧಿ ದತ್ತಾಂಶಗಳ ಸಂಗ್ರಹ ವ್ಯವಸ್ಥೆಯನ್ನು ಸುಧಾರಿಸುವ ಮಾತು ಆಡುತ್ತಿದೆ. ಈ ದತ್ತಾಂಶಗಳು ಸರ್ಕಾರದ ಬಳಿ ಲಭ್ಯವಿಲ್ಲ ಎಂಬುದಕ್ಕೆ ಒಳ್ಳೆಯ ಉದಾಹರಣೆ ಎಂದರೆ, 15-3-2021ರಂದು ಚುಕ್ಕೆ ಗುರುತಿನ ಪ್ರಶ್ನೆ 271ಕ್ಕೆ ಉತ್ತರಿಸಿದ ಒಕ್ಕೂಟ ಸರ್ಕಾರದ ಸಚಿವರು, ಕೋವಿಡ್ ಕಾರಣಕ್ಕೆ ಎಷ್ಟು ಮಂದಿ ಕೆಲಸ ಕಳೆದುಕೊಂಡರು ಎಂಬ ವಿವರ ಕೊಡುವ ಬದಲು, ಸರ್ಕಾರದ ’ಆತ್ಮನಿರ್ಭರ’ ಪ್ಯಾಕೇಜಿನ ಬಗ್ಗೆ, ಅದನ್ನು ಉದ್ಯೋಗ ಕಳೆದುಕೊಂಡವರ ಸಹಾಯಕ್ಕೆ ಒದಗಿಸುವ ಬಗ್ಗೆ ವಿವರಿಸುತ್ತಾರೆ!

8) ಗುರಿ: ಕೈಗಾರಿಕಾ ಸಂಬಂಧಗಳ ಸುಧಾರಣೆ ಮತ್ತು ಉದ್ಯೋಗಗಳ ಫಾರ್ಮಲೈಸೇಶನ್‌ಗೆ ಪ್ರೋತ್ಸಾಹ.
ಸಾಧನೆ: ಕೈಗಾರಿಕಾ ಸಂಬಂಧಗಳ ಕಾಯಿದೆ 2020, ಇದೇ 29-9-2020ರಂದು ರಾಷ್ಟ್ರಪತಿಗಳ ಅಂಕಿತದೊಂದಿಗೆ ಕಾಯಿದೆಯ ಸ್ವರೂಪ ಪಡೆದುಕೊಂಡಿದೆ.

ತಂತ್ರಜ್ಞಾನ ಮತ್ತು ಇನೊವೇಶನ್

9) ಗುರಿ ಜಾಗತಿಕ ಇನ್ನೊವೇಶನ್ ಇಂಡೆಕ್ಸ್‌ನಲ್ಲಿ ಉನ್ನತ 50 ಸ್ಥಾನಗಳೊಳಗೆ ತಲುಪುವುದು.
ಸಾಧನೆ:

(ಇವು ಒಟ್ಟು 131 ದೇಶಗಳಲ್ಲಿ ರ್‍ಯಾಂಕಿಂಗ್ ಆಧರಿಸಿದ ಲೆಕ್ಕಾಚಾರ)

10) ಗುರಿ: ವಿಜ್ಞಾನ ಕ್ಷೇತ್ರದ ಸರ್ವಾಂಗೀಣ ನಿರ್ವಹಣೆಗಾಗಿ ಅಧಿಕಾರದತ್ತ ಸಂಸ್ಥೆಯೊಂದರ ಸ್ಥಾಪನೆ.
ಸಾಧನೆ: ಇನ್ನೂ ಸಂಸ್ಥೆ ಸ್ಥಾಪನೆ ಆಗಿಲ್ಲ ಯೋಜನೆ-ಚರ್ಚೆಗಳ ಹಂತದಲ್ಲಿ ಇದೆ.

11) ಗುರಿ: ಸರ್ಕಾರಿ ಅಧೀನದ ಸಂಸ್ಥೆಗಳಲ್ಲಿ ಲಭ್ಯ ತಂತ್ರಜ್ಞಾನಗಳ ವಾಣಿಜ್ಯ ಬಳಕೆ ಹೆಚ್ಚಳಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವುದು.

ಸಾಧನೆ: ಸರ್ಕಾರಕ್ಕೆ CSIR, DRDO, BARC, KMR, ISRO ಮೊದಲಾದ ದೇಶದ ಪ್ರತಿಷ್ಠಿತ ಸರ್ಕಾರ ಸ್ವಾಮ್ಯದ ತಂತ್ರಜ್ಞಾನ ಸಂಸ್ಥೆಗಳನ್ನು ಶುದ್ಧ ನೀರು, ಶುಚಿತ್ವ, ಇಂಧನ, ಕೈಗೆಟಕುವ ಆರೋಗ್ಯ ಸೇವೆ, ಸಾವಯವ ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ (ಅಂದರೆ ಜನರ ದೈನಂದಿನ ಬಳಕೆಯ ಕ್ಷೇತ್ರಗಳಲ್ಲಿ) ಸಂಶೋಧನೆಗೆ ತೊಡಗಿಸುವ ಉದ್ದೇಶ ಇದೆ. ಆದರೆ ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿರಲಿಲ್ಲ.

12) ಗುರಿ: ಅವಧಿ ತೀರಿ ಹೋಗದಂತಹ ’ಜಿಲ್ಲಾಮಟ್ಟದ ಇನ್ನೊವೇಶನ್ ಫಂಡ್’ ಸ್ಥಾಪನೆ.
ಸಾಧನೆ: ರಾಷ್ಟ್ರೀಯ ಇನ್ನೊವೇಶನ್ ಫಂಡ್ ಈಗಾಗಲೇ ಅಂದರೆ, ಮಾರ್ಚ್ 2000ರಲ್ಲೇ ಸ್ಥಾಪನೆ ಆಗಿದೆ. ಜಿಲ್ಲಾಮಟ್ಟಗಳಲ್ಲಿ ಈ ನಿಧಿಯ ಮತ್ತು ಅದರ ಬಳಕೆಗೆ ಸಂಬಂಧಿಸಿದ ದೊಡ್ಡ ಬೆಳವಣಿಗೆಗಳೇನೂ ಆದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಲಭ್ಯವಿಲ್ಲ.

ಕೈಗಾರಿಕೆಗಳು

13) ಗುರಿ: ಉತ್ಪಾದನಾ ಕ್ಷೇತ್ರದ ಬೆಳವಣಿಗೆಯ ದರವನ್ನು ದುಪ್ಪಟ್ಟು ಮಾಡುವುದು.
ಸಾಧನೆ:

(ಮಾಹಿತಿಮೂಲ: Statista)

14) ಗುರಿ: ಆತ್ಮ ನಿರ್ಭರವಾದ ಉತ್ಪಾದನಾ ಕ್ಲಸ್ಟರ್‌ಗಳ ಅಭಿವೃದ್ಧಿ ಮತ್ತು MSMEಗಳಿಗೆ ಪ್ಲಗ್ ಅಂಡ್ ಪ್ಲೇ ಪಾರ್ಕ್‌ಗಳು.

ಸಾಧನೆ: ಉತ್ಪಾದನಾ ಕ್ಲಸ್ಟರ್‌ಗಳು ಮತ್ತು MSMEಗಳಿಗೆ ಮೆಗಾಪಾರ್ಕ್‌ಗಳು ಅಲ್ಲಲ್ಲಿ ಆರಂಭಗೊಂಡಿವೆ. ನಿಖರವಾದ ಅಂಕಿ ಸಂಖ್ಯೆಗಳು ಸಾರ್ವಜನಿಕ ಡೊಮೈನ್‌ನಲ್ಲಿ ಸಿಕ್ಕಿಲ್ಲ.

15) ಗುರಿ: ಇಂಡಸ್ಟ್ರಿ 4.0 ಆರಂಭಕ್ಕೆ ಮಹತ್ವದ ಕ್ರಮಗಳನ್ನು ಕೈಗೆತ್ತಿಕೊಳ್ಳುವುದು.
ಸಾಧನೆ: ಸಮರ್ಥ್ ಉದ್ಯೋಗ್ ಭಾರತ್ 4.0 ಹೆಸರಿನಲ್ಲಿ ಇದು 2018ರಲ್ಲಿ ಆರಂಭಗೊಂಡಿದ್ದು, ಈಗ ಕೆಲವು ಪೈಲಟ್ ಯೋಜನೆಗಳು (ಉದಾ: ರೈಲ್ವೇ) ನಡೆದಿವೆ. ಈ ಗುರಿಸಾಧನೆಯ ಗೋಲ್ ಪೋಸ್ಟನ್ನು 2025ಕ್ಕೆ ಮುಂದೂಡಲಾಗಿದೆ.

16) ಗುರಿ: ಹೂಡಿಕೆದಾರರು ಮತ್ತು ಸರ್ಕಾರದ ನಡವೆ ಒಂದೇ ಸಂಪರ್ಕ ಬಿಂದು ಇರುವಂತಹ ’ಸಿಂಗಲ್ ವಿಂಡೊ’ ವ್ಯವಸ್ಥೆಯನ್ನು ರಾಜ್ಯಗಳಲ್ಲಿ ಆರಂಭಿಸುವುದು.

ಸಾಧನೆ: ’ಮಾಧ್ಯಮ್’ ಎಂಬ ರಾಷ್ಟ್ರೀಯ ಸಿಂಗಲ್ ವಿಂಡೊ ಪ್ಲಾಟ್‌ಫಾರಂ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ; ಆರಂಭ ಆಗಿಲ್ಲ. ರಾಜ್ಯಗಳಲ್ಲಿ ಈ ಬಗ್ಗೆ ಇನ್ನೂ ಸ್ಪಷ್ಟವಾಗಿ ಯೋಜನೆಗಳು ರೂಪುಗೊಂಡಂತಿಲ್ಲ.

ರೈತರ ಆದಾಯ ದುಪ್ಪಟ್ಟು

17) ಗುರಿ: ತಂತ್ರಜ್ಞಾನ ಆಧುನೀಕರಣ, ಉತ್ಪಾದಕತೆಯಲ್ಲಿ ಹೆಚ್ಚಳ ಮತ್ತು ಕೃಷಿ ಸಂಸ್ಕರಣೆಯನ್ನು ವೈವಿಧ್ಯಮಯ ಬೆಳೆಗಳಿಗೆ ವಿಸ್ತರಿಸುವುದು.

ಸಾಧನೆ: ಒಟ್ಟು ಆರ್ಥಿಕ ಸನ್ನಿವೇಶದಲ್ಲಿ ಕೃಷಿ ಕ್ಷೇತ್ರದಿಂದ ಒಟ್ಟು ಮೌಲ್ಯ ಸೇರ್ಪಡೆಯ (GVA) ಲೆಕ್ಕಾಚಾರ ಇಲ್ಲಿದೆ:

18) ಗುರಿ: ಹನಿ ನೀರಾವರಿಗೆ ಒಳಪಡಬೇಕಾದ ಪ್ರದೇಶಗಳ ಗಾತ್ರದಲ್ಲಿ ಹೆಚ್ಚಳ ಮತ್ತು ಹೈಬ್ರಿಡ್ ತಳಿಗಳಿಗೆ ಪ್ರೋತ್ಸಾಹ

ಸಾಧನೆ: ದೇಶದಲ್ಲಿ ಒಟ್ಟು 5.89 ಕೋಟಿ ಹೆಕ್ಟೇರ್ ನೀರಾವರಿ ಯೋಗ್ಯ ಭೂಮಿ ಇದ್ದು, ಇಲ್ಲಿ ಹನಿ ನೀರಾವರಿಗೆ ಪ್ರೋತ್ಸಾಹ ನೀಡುವ ಮೂಲಕ ಕೃಷಿ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶ ಸರ್ಕಾರದ್ದು. ಅದರ ಗುರಿಸಾಧನೆಯ ಹಾದಿ ಹೀಗಿದೆ: 2015-16ರಿಂದ 2020-21ರ ನಡುವೆ ಒಟ್ಟು 57.3 ಲಕ್ಷ ಹೆಕ್ಟೇರ್ ಭೂಮಿಯನ್ನು ಹನಿನೀರಾವರಿ ಮೂಲಕ ಕೃಷಿಯೋಗ್ಯಗೊಳಿಸಲಾಗಿದೆ ಎಂದು 3-8-21ರಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ (ಚುಕ್ಕಿ ಗುರುತಿನ ಪ್ರಶ್ನೆ 211) ಸರ್ಕಾರ ಉತ್ತರಿಸಿದೆ. ಸರ್ಕಾರದ ವಾರ್ಷಿಕ ಸಾಧನೆ ಈ ಕೆಳಗಿನಂತಿದೆ:

(ಮಾಹಿತಿ ಮೂಲ: pmksy.gov.in)

ರಾಷ್ಟ್ರೀಯ ಬೀಜ ನಿಗಮವು (NSC) 2007-08 ಮತ್ತು 2011-12ರ ನಡುವೆ ಐದು ವರ್ಷಗಳಲ್ಲಿ 174.77 ಲಕ್ಷ ಕ್ವಿಂಟಾಲ್ ಅಕ್ಕಿ, ಗೋಧಿ, ಧಾನ್ಯಗಳು ಮತ್ತು ಬೇಳೆಕಾಳುಗಳ ಹೈಬ್ರಿಡ್ ಬೀಜಗಳನ್ನು ರೈತರಿಗೆ ವಿತರಿಸಿದರೆ, 2019-20ನೇ ಸಾಲಿನಲ್ಲಿ 10.91 ಲಕ್ಷ ಕ್ವಿಂಟಾಲ್ ಅಕ್ಕಿ, ಗೋಧಿ, ಧಾನ್ಯಗಳು ಮತ್ತು ಬೇಳೆಕಾಳುಗಳ ಹೈಬ್ರಿಡ್ ಬೀಜಗಳನ್ನು ರೈತರಿಗೆ ವಿತರಿಸಿದೆ (ಮಾಹಿತಿ ಮೂಲ: 2013-14 ಮತ್ತು 2020-21ರ ಕೇಂದ್ರ ಕೃಷಿ ಇಲಾಖೆ ವಾರ್ಷಿಕ ವರದಿ)

20) ಗುರಿ:ATMAಯನ್ನು (Agricultural Technology Marketing Agency) ಸ್ಟ್ರಾಟಜಿಕ್ ಸಂಶೋಧನಾ ವಿಸ್ತರಣೆ ಯೋಜನೆಗಳಲ್ಲಿ ಎಲ್ಲರನ್ನು ಒಳಗೊಳ್ಳಬಲ್ಲ ಯೋಜನೆಗಳಿಗೆ ಸೂಕ್ತವೆನ್ನಿಸುವಂತೆ ಮಾರ್ಪಡಿಸುವುದು.

ಸಾಧನೆ: ATMA ಮೂಲಕ ತಂತ್ರಜ್ಞಾನವನ್ನು ತಳಮಟ್ಟಕ್ಕೆ ತಲುಪಿಸುವ ಕೆಲಸ ಇನ್ನೂ ಯೋಜನಾ ಹಂತದಲ್ಲೇ ಬಾಕಿ ಇದೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ


ಇದನ್ನೂ ಓದಿ: ಗುಜರಾತ್‌ ಚುನಾವಣೆ: ಅಚ್ಛೇದಿನ್‌ ಬದಿಗೆ ಸರಿದು, ಮುನ್ನಲೆಗೆ ಬರಲಿದೆ ಹಿಂದುತ್ವ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೀಸಲಾತಿ ಹೇಳಿಕೆ: ಆಧಾರ ಸಹಿತ ಸಾಬೀತುಪಡಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲು

0
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂಬ ಹೇಳಿಕೆಯನ್ನು ಆಧಾರ ಸಹಿತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ...