Homeಕರ್ನಾಟಕಇದುವರೆಗಿನ ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಜಾತಿ ಪ್ರಾತಿನಿಧ್ಯ

ಇದುವರೆಗಿನ ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಜಾತಿ ಪ್ರಾತಿನಿಧ್ಯ

- Advertisement -
- Advertisement -

ಪ್ರತಿ ಚುನಾವಣೆಗಳಂತೆ ಈ ಚುನಾವಣೆಯಲ್ಲಿಯೂ ಮುಂದಿನ ಸರ್ಕಾರದ ಬದಲಾವಣೆ ಮತ್ತು ಯಾವ ಸಮುದಾಯದವರು ಮುಂದಿನ ಮುಖ್ಯಮಂತ್ರಿ ಆಗಬೇಕೆನ್ನುವ ಅಂಶ ಪ್ರಮುಖ ಪಾತ್ರವಹಿಸಿತ್ತು. ದೇಶದೆಲ್ಲೆಡೆ ಆಗುವಂತೆಯೇ ಕರ್ನಾಟಕದಲ್ಲಿಯೂ ಚುನಾವಣೆಗಳಲ್ಲಿ ಜಾತಿ ಪ್ರಬಲವಾಗಿ ಕೆಲಸ ಮಾಡುತ್ತದೆ. ಜಾತಿ ಆಧಾರದಲ್ಲಿಯೇ ಕೆಲ ಪಕ್ಷಗಳು ತಮ್ಮ ನೆಲೆ ಹೊಂದಿವೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಯಾವ ಸಮುದಾಯದವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು ಮತ್ತು ಮುಂದಿನ ಸಿಎಂ ರೇಸ್‌ನಲ್ಲಿ ಯಾರಿದ್ದಾರೆ ಎಂಬುದರ ಇಣುಕುನೋಟ ಇಲ್ಲಿದೆ.

ಮೈಸೂರು ಸಂಸ್ಥಾನದಲ್ಲಿ ಒಕ್ಕಲಿಗರ ಆರಂಭಿಕ ಪ್ರಾಬಲ್ಯ

1947ರಲ್ಲಿ ಸ್ವಾತಂತ್ರ್ಯ ಲಭಿಸಿದಾಗ ಮೈಸೂರು ಪ್ರಾಂತ್ಯ ಅಸ್ತಿತ್ವದಲ್ಲಿತ್ತು. ಕೋಲಾರ ಜಿಲ್ಲೆಯವರಾದ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ, ಒಕ್ಕಲಿಗ ಸಮುದಾಯದ ಕೆ.ಸಿ ರೆಡ್ಡಿಯವರು ಮೊದಲ ಮುಖ್ಯಮಂತ್ರಿಯಾದರು. ಆನಂತರ 1952ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿತು. ಆಗ ರಾಮನಗರ ಜಿಲ್ಲೆಯ ಒಕ್ಕಲಿಗ

ಕೆ.ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳು ಮಂಜಪ್ಪ

ಸಮುದಾಯದ ಕೆಂಗಲ್ ಹನುಮಂತಯ್ಯನವರು ಎರಡನೇ ಮುಖ್ಯಮಂತ್ರಿಯಾದರು. ಆನಂತರ ಅಲ್ಪ ಅವಧಿಗೆ (1956ರ ಆಗಸ್ಟ್‌ನಿಂದ 1956ರ ಅಕ್ಟೋಬರ್‌ವರೆಗೆ) ಶಿವಮೊಗ್ಗ ಜಿಲ್ಲೆಯ ಒಕ್ಕಲಿಗ ಸಮುದಾಯದ ಕಡಿದಾಳ್ ಮಂಜಪ್ಪನವರು ಮೂರನೇ ಮುಖ್ಯಮಂತ್ರಿಯಾದರು.

ಲಿಂಗಾಯಿತ ಮುಖ್ಯಮಂತ್ರಿಗಳ ಪರ್ವ

1956ರಲ್ಲಿ ಕರ್ನಾಟಕ ಏಕೀಕರಣ ಚಳವಳಿಯಿಂದಾಗಿ ಕನ್ನಡ ಭಾಷೆ ಮಾತನಾಡುವ ನಾಲ್ಕು ಪ್ರಾಂತ್ಯಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಲಾಯಿತು. ಆಗ 1956 ನವೆಂಬರ್ 1ರಂದು ಕಾಂಗ್ರೆಸ್ ಪಕ್ಷವು ಮತ್ತೆ ಮುಖ್ಯಮಂತ್ರಿ ಬದಲಾವಣೆ ಮಾಡಿ ಬಳ್ಳಾರಿ ಜಿಲ್ಲೆಯ ಲಿಂಗಾಯಿತ ಸಮುದಾಯದ ಎಸ್. ನಿಜಲಿಂಗಪ್ಪನವರನ್ನು ಮುಖ್ಯಮಂತ್ರಿಯನ್ನಾಗಿಸಿತು. 1958ರಲ್ಲಿ ಬಾಗಲಕೋಟೆ ಜಿಲ್ಲೆಯ ಲಿಂಗಾಯಿತ ಸಮುದಾಯದ ಬಿ.ಡಿ ಜತ್ತಿಯವರು ಐದನೇ ಮುಖ್ಯಮಂತ್ರಿಗಳಾಗಿ 1962ರವರೆಗೂ ಕಾರ್ಯನಿರ್ವಹಿಸಿದರು. ಆನಂತರ ಮೂರು ತಿಂಗಳ ಅವಧಿಗೆ ಆರನೇ ಮುಖ್ಯಮಂತ್ರಿಯಾಗಿ ಬಾಗಲಕೋಟೆ ಜಿಲ್ಲೆಯ ಲಿಂಗಾಯಿತ ಸಮುದಾಯದ ಎಸ್.ಆರ್ ಕಂಠಿಯವರು ಆಯ್ಕೆಯಾಗುತ್ತಾರೆ.

ಎಸ್. ನಿಜಲಿಂಗಪ್ಪ, ಬಿ.ಡಿ ಜತ್ತಿ, ಎಸ್.ಆರ್ ಕಂಠಿ

1962ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ಎಸ್.ನಿಜಲಿಂಗಪ್ಪನವರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆಯುತ್ತದೆ. 1968ರಲ್ಲಿ ಕಲಬುರಗಿ ಜಿಲ್ಲೆಯ ಲಿಂಗಾಯಿತ ಸಮುದಾಯದ ವಿರೇಂದ್ರ ಪಾಟೀಲ್ ರಾಜ್ಯದ 8ನೇ ಮುಖ್ಯಮಂತ್ರಿಯಾಗುತ್ತಾರೆ. ಆದರೆ ಕಾಂಗ್ರೆಸ್‌ನ ವಿ.ವಿ ಗಿರಿ ಮತ್ತು ಸಂಜೀವರೆಡ್ಡಿಯವರ ನಡುವಿನ ಪೈಪೋಟಿಯಲ್ಲಿ ಇಂದಿರಾಗಾಂಧಿ ವಿ.ವಿ ಗಿರಿಯವರನ್ನ ಬೆಂಬಲಿಸಿದ ಕಾರಣವಾಗಿ ಕಾಂಗ್ರೆಸ್ ಇಬ್ಭಾಗವಾಯ್ತು. 1971ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿ ರಾಜ್ಯ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಗುತ್ತದೆ.

ಹಿಂದುಳಿದ ಸಮುದಾಯದ ಮೊದಲ ಮುಖ್ಯಮಂತ್ರಿ

ಅಂದಿನ ಪ್ರಮುಖ ಕಾಂಗ್ರೆಸ್ ರಾಜಕಾರಣಿ ಮೈಸೂರು ಜಿಲ್ಲೆಯ ಹುಣಸೂರಿನ ದೇವರಾಜ ಅರಸುರವರು ಸಂಸ್ಥಾ ಕಾಂಗ್ರೆಸ್‌ಗೆ ಬದಲಾಗಿ ಇಂದಿರಾ ಗಾಂಧಿಯವರ ಕಾಂಗ್ರೆಸ್ (ಆರ್) ಅನ್ನು ಬೆಂಬಲಿಸಿದರು. ಅವರ ನೇತೃತ್ವದಲ್ಲಿ 1972ರ ಚುನಾವಣೆಯಲ್ಲಿ ಕಾಂಗ್ರೆಸ್ (ಆರ್) ಪಕ್ಷ ಜಯಗಳಿಸಿದಾಗ ಹಿಂದುಳಿದ ಅರಸು ಸಮುದಾಯದ ದೇವರಾಜ ಅರಸ್‌ರವರು ಮುಖ್ಯಮಂತ್ರಿಯಾಗುತ್ತಾರೆ. ನೂರಕ್ಕೂ ಅಧಿಕ ಹಿಂದುಳಿದ ಸಮುದಾಯದ ಮಂದಿಗೆ ಟಿಕೆಟ್ ನೀಡಿ ಬಹುತೇಕರನ್ನು ಗೆಲ್ಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯಲಾಗುತ್ತದೆ. ಅಲ್ಲದೇ ಅವರು 1972ರ ಮಾರ್ಚ್ ತಿಂಗಳಿನಿಂದ 1977ರ ಡಿಸೆಂಬರ್‌ವರೆಗೂ ಮುಖ್ಯಮಂತ್ರಿಯಾಗಿದ್ದು ದೀರ್ಘಾವಧಿ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಒಳಗಾಗುತ್ತಾರೆ. ಆಗ ತುರ್ತುಪರಿಸ್ಥಿತಿಯ ಕಾರಣಕ್ಕೆ ಎರಡು ತಿಂಗಳ ಅವಧಿಗೆ ಕರ್ನಾಟಕ ರಾಷ್ಟ್ರಪತಿ ಆಡಳಿತಕ್ಕೆ ಒಳಗಾಗುತ್ತದೆ.

ದೇವರಾಜ್ ಅರಸು, ಆರ್ ಗುಂಡೂರಾವ್‌

1978ರ ಚುನಾವಣೆಯಲ್ಲಿ ತುರ್ತುಪರಿಸ್ಥಿತಿ ಹೇರಿದ್ದ ಕಾರಣಕ್ಕೆ ಇಂದಿರಾ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಧೂಳಿಪಟವಾಗಿದ್ದರೆ, ಕರ್ನಾಟಕದಲ್ಲಿ ಮಾತ್ರ ಮತ್ತೆ ಭರ್ಜರಿ ಬಹುಮತ ಸಾಧಿಸಿ ಅಧಿಕಾರ ಹಿಡಿದಿರುತ್ತದೆ. ದೇವರಾಜ್ ಅರಸುರವರು ಎರಡನೇ ಅವಧಿಗೆ ರಾಜ್ಯದ 10ನೇ ಮುಖ್ಯಮಂತ್ರಿಯಾಗುತ್ತಾರೆ. ಆದರೆ 1980ರಲ್ಲಿ ಅವರನ್ನು ಕೆಳಗಿಳಿಸಿ ಕೊಡಗು ಜಿಲ್ಲೆಯ ಬ್ರಾಹ್ಮಣ ಸಮುದಾಯದ ಆರ್ ಗುಂಡೂರಾವ್‌ರವರನ್ನು ಕಾಂಗ್ರೆಸ್ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ.

1983ರ ಚುನಾವಣೆಯಲ್ಲಿ ಜನತಾ ಪಕ್ಷ 95 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ. ಬಿಜೆಪಿಯ ಬೆಂಬಲದೊಂದಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ 12ನೇ ಮುಖ್ಯಮಂತ್ರಿಯಾಗುತ್ತಾರೆ. 1985ರಲ್ಲಿ ಸರ್ಕಾರ ವಿಸರ್ಜಿಸಿ ಮತ್ತೆ ಚುನಾವಣೆ ಎದುರಿಸಿದ ಅವರು 139 ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ. ಆದರೆ ಅವರು 1988ರಲ್ಲಿ ಜನತಾ ಪಕ್ಷ ತೊರೆದು ಜನತಾದಳ ಸೇರಿದ್ದರಿಂದ ಆ ಒಂದು ವರ್ಷದ ಅವಧಿಗೆ ಹಾವೇರಿ ಜಿಲ್ಲೆಯ ಲಿಂಗಾಯಿತ ಸಮುದಾಯದ ಎಸ್.ಆರ್ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ.

ರಾಮಕೃಷ್ಣ ಹೆಗಡೆ, ಎಸ್.ಆರ್ ಬೊಮ್ಮಾಯಿ, ವಿರೇಂದ್ರ ಪಾಟೀಲ್‌, ವೀರಪ್ಪ ಮೊಯ್ಲಿ

1989ರ ಚುನಾವಣೆಯಲ್ಲಿ ಜನತಾ ಪಕ್ಷ ಸೋತು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಲಿಂಗಾಯಿತ ಸಮುದಾಯದ ವಿರೇಂದ್ರ ಪಾಟೀಲ್‌ರವರು (18 ವರ್ಷದ ನಂತರ) ಮುಖ್ಯಮಂತ್ರಿಯಾಗುತ್ತಾರೆ. ಆದರೆ ಒಂದು ವರ್ಷದಲ್ಲಿ ಅವರನ್ನು ಕೆಳಗಿಳಿಸಲಾಗುತ್ತದೆ. ಶಿವಮೊಗ್ಗದ ಹಿಂದುಳಿದ ವರ್ಗಕ್ಕೆ ಸೇರಿದ ಈಡಿಗ ಸಮುದಾಯದ ಎಸ್. ಬಂಗಾರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಅವರೂ ಅವಧಿಯನ್ನು ಪೂರೈಸದೆ, 1992ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗದ ದೇವಾಡಿಗ ಸಮುದಾಯದ ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗುತ್ತಾರೆ.

ಮತ್ತೆ ಒಕ್ಕಲಿಗ ಮುಖ್ಯಮಂತ್ರಿ

1994ರ ಚುನಾವಣೆಯಲ್ಲಿ ಜನತಾದಳ ಪಕ್ಷ ಸರಳ ಬಹುಮತ (115) ಸಾಧಿಸುತ್ತದೆ. ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್‌ರಿಗೆ ಕಾಂಗ್ರೆಸ್ ಅವಮಾನ ಮಾಡಿತು ಎಂಬುದು ಒಂದಾದರೆ ಬಂಗಾರಪ್ಪನವರು ಸಹ ಕಾಂಗ್ರೆಸ್‌ನಿಂದ ಬಂಡೆದ್ದು ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) ಕಟ್ಟಿ ಸ್ಪರ್ಧಿಸಿರುತ್ತಾರೆ. ಇದು ಕಾಂಗ್ರೆಸ್‌ನ ಹೀನಾಯ ಸೋಲಿಗೆ ಕಾರಣವಾಗುತ್ತದೆ. ಆಗ ಹಾಸನ ಜಿಲ್ಲೆಯ ಒಕ್ಕಲಿಗ ಸಮುದಾಯದ ಎಚ್.ಡಿ ದೇವೇಗೌಡರು ರಾಜ್ಯದ 17ನೇ ಮುಖ್ಯಮಂತ್ರಿ ಯಾಗುತ್ತಾರೆ. ಆದರೆ 1996ರಲ್ಲಿ ಅವರು ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕಾಗ ಅವರಿಂದ ತೆರವಾದ ಸಿಎಂ ಸ್ಥಾನಕ್ಕೆ ದಾವಣಗೆರೆ ಜಿಲ್ಲೆಯ ಲಿಂಗಾಯತ ಸಮುದಾಯದ ಜೆ.ಎಚ್ ಪಟೇಲ್ ಬಂದು ಕೂರುತ್ತಾರೆ.

ಇದನ್ನೂ ಓದಿ: ಸರ್ವಾಧಿಕಾರ ಧೋರಣೆಯ ಪುರುಷಹಂಕಾರ ಸಾಮಾನ್ಯರಿಗೂ ಸೋಂಕಿದಾಗ..

1999ರ ಚುನಾವಣೆಯಲ್ಲಿ 132 ಸ್ಥಾನ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ರಾಜ್ಯಾದ್ಯಂತ ಪಾಂಚಜನ್ಯ ಯಾತ್ರೆ ಮೂಲಕ ಗಮನ ಸೆಳೆದ ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದ ಎಸ್.ಎಂ ಕೃಷ್ಣರವರು ಮುಖ್ಯಮಂತ್ರಿಯಾಗುತ್ತಾರೆ. 2004ರಲ್ಲಿ ಇನ್ನೂ ಆರು ತಿಂಗಳು ಅಧಿಕಾರಾವಧಿ ಇರುವಾಗಲೇ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುತ್ತಾರೆ. ಆಗ ಅತಂತ್ರ ಫಲಿತಾಂಶ ಬರುತ್ತದೆ. ಬಿಜೆಪಿ 79 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗುತ್ತದೆ. 65 ಸ್ಥಾನ ಗೆದ್ದ ಕಾಂಗ್ರೆಸ್ ಮತ್ತು 58 ಸ್ಥಾನ ಗೆದ್ದ ಜೆಡಿಎಸ್ ಒಟ್ಟುಗೂಡಿ ಮೈತ್ರಿ ಸರ್ಕಾರ ರಚನೆಯಾಗುತ್ತದೆ. ರಜಪೂತ ಸಮುದಾಯದ ಕಲಬುರಗಿ ಜಿಲ್ಲೆಯ ಧರ್ಮಸಿಂಗ್‌ರವರು ಸಿಎಂ ಆಗುತ್ತಾರೆ. 2006ರಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ನೇತೃತ್ವದ ಬಣ ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುತ್ತದೆ. ಹಾಸನ ಜಿಲ್ಲೆಯ ಒಕ್ಕಲಿಗ ಸಮುದಾಯದ ಹೆಚ್.ಡಿ ಕುಮಾರಸ್ವಾಮಿಯವರು ಸಿಎಂ ಆಗುತ್ತಾರೆ. ಆದರೆ ಒಪ್ಪಂದದಂತೆ ಇಪ್ಪತ್ತು ತಿಂಗಳ ನಂತರ 2007ರಲ್ಲಿ ಅವರು ಬಿ.ಎಸ್ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸಲು ಒಪ್ಪದ ಕಾರಣ ಸರ್ಕಾರ ಬಿದ್ದುಹೋಗುತ್ತದೆ. ಆದರೂ 2007ರ ನವೆಂಬರ್ 12 ರಿಂದ 17ರವರೆಗೆ 5 ದಿನಗಳ ಕಾಲ ಲಿಂಗಾಯಿತ ಸಮುದಾಯದ ಯಡಿಯೂರಪ್ಪನವರು ಸಿಎಂ ಆಗಿ ನಂತರ ಕೆಳಗಿಳಿಯುತ್ತಾರೆ. ರಾಷ್ಟ್ರಪತಿ ಆಡಳಿತ ಘೋಷಣೆಯಾಗುತ್ತದೆ.

ಹೆಚ್.ಡಿ ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ, ಡಿ.ವಿ ಸದಾನಂದಾಗೌಡ, ಜಗದೀಶ್ ಶೆಟ್ಟರ್

2008ರ ಚುನಾವಣೆಯಲ್ಲಿ ಯಡಿಯೂರಪ್ಪನವರಿಗೆ ಸಿಎಂ ಸ್ಥಾನ ಸಿಗದ ಅನುಕಂಪದ ಅಲೆಯಲ್ಲಿ ಬಿಜೆಪಿ 110 ಸ್ಥಾನಗಳನ್ನು ಗೆಲ್ಲುತ್ತದೆ. ಆಪರೇಷನ್ ಕಮಲದ ಮೂಲಕ ಒಂದಷ್ಟು ಸ್ಥಾನಗಳನ್ನು ಕೊಂಡುಕೊಂಡು ಸರ್ಕಾರ ರಚಿಸಿದ ಮಂಡ್ಯ ಜಿಲ್ಲೆಯ, ಆದರೆ ಶಿಕಾರಿಪುರದಿಂದ ಗೆಲುವು ಕಂಡಿದ್ದ ಲಿಂಗಾಯಿತ ಸಮುದಾಯದ ಬಿ.ಎಸ್ ಯಡಿಯೂರಪ್ಪನವರು ರಾಜ್ಯದ ಸಿಎಂ ಆಗುತ್ತಾರೆ.

ಆದರೆ ಅವರ ಮೇಲೆ ಅಕ್ರಮ ಭೂ ಪರಭಾರೆ, ಡಿನೋಟಿಫೀಕೇಷನ್ ಆರೋಪಗಳು ಬಂದು ಅವರನ್ನು 2011ರಲ್ಲಿ ಬಂಧಿಸಲಾಗುತ್ತದೆ. ಆಗ ದಕ್ಷಿಣ ಕನ್ನಡ ಜಿಲ್ಲೆಯ ಒಕ್ಕಲಿಗ ಸಮುದಾಯದ ಡಿ.ವಿ ಸದಾನಂದಾಗೌಡರು ಮುಖ್ಯಮಂತ್ರಿಯಾಗುತ್ತಾರೆ. 2012ರಲ್ಲಿ ಅವರನ್ನು ಕೆಳಗಿಳಿಸಿ ಹುಬ್ಬಳ್ಳಿಯ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುತ್ತಾರೆ.

ಮತ್ತೆ ಹಿಂದುಳಿದ ವರ್ಗದ ಸಿಎಂ

2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 122 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಸಾಧಿಸುತ್ತದೆ. ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿದ್ದ ಮೈಸೂರು ಜಿಲ್ಲೆಯ ಕುರುಬ ಸಮುದಾಯದ ಸಿದ್ದರಾಮಯ್ಯನವರು ರಾಜ್ಯದ 26ನೇ ಮುಖ್ಯಮಂತ್ರಿಯಾಗುತ್ತಾರೆ. ಅವರು ಮೇ 13, 2013ರಿಂದ ಮೇ 15, 2018ರವರೆಗೆ ಅಧಿಕಾರದಲ್ಲಿದ್ದು ಅರಸು ನಂತರ ಪೂರ್ಣಾವಧಿಗೆ ಸಿಎಂ ಆದವರು ಎಂಬ ಖ್ಯಾತಿ ಪಡೆಯುತ್ತಾರೆ.

ಸಿದ್ದರಾಮಯ್ಯ

2018ರ ಚುನಾವಣೆಯಲ್ಲಿ ಮತ್ತೆ ಅತಂತ್ರ ಫಲಿತಾಂಶ ಬರುತ್ತದೆ. 104 ಸ್ಥಾನ ಗೆದ್ದ ಬಿಜೆಪಿ ದೊಡ್ಡ ಪಕ್ಷವಾದ ಕಾರಣಕ್ಕೆ ಸರ್ಕಾರ ರಚಿಸಲು ಮುಂದಾಗುತ್ತದೆ. 17 ಮೇ 2018ರಿಂದ 22 ಮೇ 2018ರವರೆಗೆ 5 ದಿನಗಳ ಅವಧಿಗೆ ಯಡಿಯೂರಪ್ಪ ಮೂರನೇ ಬಾರಿಗೆ ಸಿಎಂ ಆದರು. ಆದರೆ ಬಹುಮತ ಇಲ್ಲದ ಕಾರಣ ಕೆಳಗಿಳಿದರು. 80 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಮತ್ತು 37 ಸ್ಥಾನ ಗೆದ್ದಿದ್ದ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಒಕ್ಕಲಿಗ ಸಮುದಾಯದ ಹೆಚ್.ಡಿ ಕುಮಾರಸ್ವಾಮಿಯವರು ಮತ್ತೆ ಸಿಎಂ ಆದರು. ಆದರೆ 2019ರಲ್ಲಿ ಕಾಂಗ್ರೆಸ್-ಜೆಡಿಎಸ್‌ನ 17 ಶಾಸಕರನ್ನು ರಾಜೀನಾಮೆ ಕೊಡಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿದ ಯಡಿಯೂರಪ್ಪನವರು ನಾಲ್ಕನೇ ಬಾರಿಗೆ ಸಿಎಂ ಆದರು. ಆದರೆ ಎರಡು ವರ್ಷದ ನಂತರ ಕೆಳಗಿಳಿಯಬೇಕಾಯಿತು. ಆಗ 2021ರಲ್ಲಿ ಬಹುತೇಕರು ಊಹಿಸಿರದ ಹಾವೇರಿ ಜಿಲ್ಲೆಯ ಬಸವರಾಜ ಬೊಮ್ಮಾಯಿಯವರು ರಾಜ್ಯದ 30ನೇ ಸಿಎಂ ಆದರು. ಲಿಂಗಾಯಿತ ಸಿಎಂ ಇಳಿಸಿದ್ದಕ್ಕೆ ಉಂಟಾಗುವ ಆಕ್ರೋಶ ತಡೆಯಲು ಮತ್ತೆ ಲಿಂಗಾಯಿತ ವ್ಯಕ್ತಿಯನ್ನೇ ಸಿಎಂ ಸ್ಥಾನದಲ್ಲಿ ಕೂರಿಸಲಾಯಿತು. ಆನಂತರ ಹಲವಾರು ಬಾರಿ ಸಿಎಂ ಬದಲಾವಣೆ ಚರ್ಚೆ ಬಂದರೂ ಸಹ ಬಿಜೆಪಿ ಆ ಪ್ರಯೋಗ ಮಾಡಲು ಹಿಂದೇಟು ಹಾಕಿತು. ಇಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಎಸ್.ಆರ್ ಬೊಮ್ಮಾಯಿ ಮತ್ತು ಬಸವರಾಜ ಬೊಮ್ಮಾಯಿ (ಸಾದರ ಲಿಂಗಾಯಿತರು) ಅವರುಗಳನ್ನು ಹೊರತುಪಡಿಸಿ ಲಿಂಗಾಯಿತ ಸಮುದಾಯದಲ್ಲಿ ಮುಖ್ಯಮಂತ್ರಿಯಾಗಿದ್ದವರೆಲ್ಲ ಬಣಜಿಗ ಲಿಂಗಾಯಿತರು ಎಂಬುದು.

ಬಸವರಾಜ ಬೊಮ್ಮಾಯಿ

2023ರ ಈ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಬಿಜೆಪಿ ಪ್ರಯೋಗ ಮಾಡಲು ಮುಂದಾಗಿದೆ. ಯಾವುದೇ ರಾಜ್ಯದಲ್ಲಿ ಮಾಸ್ ಲೀಡರ್ ಆಗಿರುವವರು ಸಿಎಂ ಆಗುವುದು ಬಿಜೆಪಿಗೆ ಬೇಕಾಗಿಲ್ಲ. ಬದಲಿಗೆ ಹೈಕಮಾಂಡ್ ಹೇಳಿದಂತೆ ಕೇಳುವವರು ಬೇಕು. ಇದನ್ನು ಯಡಿಯೂರಪ್ಪನವರನ್ನು ಇಳಿಸಿದ ಪ್ರಕರಣ ಸೇರಿದಂತೆ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳ ಸರ್ಕಾರ ರಚನೆಯಲ್ಲಿಯೂ ಕಾಣಬಹುದು. ಹೈಕಮಾಂಡ್ ಹಂಗಿನಲ್ಲಿರುವವರು ಸಿಎಂ ಇರಬೇಕೆಂದು ಮೋದಿ, ಶಾ ಬಯಸುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಮೂಲಕ ಕೇಂದ್ರ ಬಿಜೆಪಿ ನಾಯಕರ ವರ್ಚಸ್ಸು ಮತ್ತು ಹಿಂದುತ್ವದ ಮೂಲಕ ಚುನಾವಣೆಗಳನ್ನು ಗೆಲ್ಲಬೇಕೆಂದು ಬಿಜೆಪಿ ಬಯಸಿ ಸೋತಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಅದನ್ನು ಸಾಧಿಸಲಾಗಿದ್ದು, ಕರ್ನಾಟಕದಲ್ಲಿಯೂ ಲಿಂಗಾಯತ ಸಮುದಾಯವೊಂದನ್ನೇ ಅವಲಂಬಿಸುವುದನ್ನು ಬಿಟ್ಟು ಹಿಂದುತ್ವದ ಮೂಲಕ ಅಧಿಕಾರಕ್ಕೇರಲು ಹೋಗಿ ಮುಖಭಂಗ ಅನುಭವಿಸಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯಂತಹ ಹಿರಿಯ ಬಿಜೆಪಿ ನಾಯಕರಿಗೆ ಟಿಕೆಟ್ ತಪ್ಪಿಸಿ, ಅವರು ಕಾಂಗ್ರೆಸ್ ಸೇರಿದರೂ ಬಿಜೆಪಿ ಅಷ್ಟು ತಲೆ ಕೆಡಿಸಿಕೊಂಡಿಲ್ಲ. ವಿ.ಸೋಮಣ್ಣನವರಿಗೆ ಸ್ವಕ್ಷೇತ್ರ ಗೋವಿಂದರಾಜ ನಗರದಲ್ಲಿ ಟಿಕೆಟ್ ತಪ್ಪಿಸಿ, ಕಠಿಣವಾದ ವರುಣ, ಚಾಮರಾಜನಗರದಿಂದ ಕಣಕ್ಕಿಳಿಸಿ ಸೋಲಿಸಲಾಯಿತು.

ಬಹುಮತ ಪಡೆದ ಕಾಂಗ್ರೆಸ್: ಸಿಎಂ ಯಾರು?

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ದಲಿತ ಸಿಎಂ ಕೂಗು ಕೇಳಿಬರುತ್ತದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಏಕೆಂದರೆ ಇದುವರೆಗಿನ ಚುನಾವಣೆಗಳಲ್ಲಿ ಬಹುತೇಕ ದಲಿತರು ಕಾಂಗ್ರೆಸ್ ಪಕ್ಷ ಜೊತೆಗೆ ನಿಂತು ಮತ ನೀಡಿದ್ದಾರೆ. ಅಲ್ಲದೆ ಹಿಂದುಳಿದ ಸಮುದಾಯಗಳಿಗೆ ಅತಿ ಹೆಚ್ಚು ಬಾರಿ ಸಿಎಂ ಆಗುವ ಅವಕಾಶ ನೀಡಿದ್ದು ಕಾಂಗ್ರೆಸ್ ಪಕ್ಷವೇ ಆಗಿದೆ. ಇದುವರೆಗೂ ಕಾಂಗ್ರೆಸ್‌ನಿಂದ 14 ಮಂದಿ 17 ಬಾರಿ ಸಿಎಂ ಆಗಿದ್ದಾರೆ. ಆ 14 ಮಂದಿಯಲ್ಲಿ 4 ಜನ ಒಕ್ಕಲಿಗ ಸಮುದಾಯದವರು, (ಕೆ.ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಮತ್ತು ಎಸ್.ಎಂ ಕೃಷ್ಣ) 4 ಜನ ಲಿಂಗಾಯಿತ ಸಮುದಾಯದವರು, (ನಿಜಲಿಂಗಪ್ಪ, ಬಿ.ಡಿ ಜತ್ತಿ, ಎಸ್.ಆರ್ ಕಂಠಿ ಮತ್ತು ವೀರೇಂದ್ರ ಪಾಟೀಲ್), 4 ಜನ ಹಿಂದುಳಿದ ಒಬಿಸಿ ಸಮುದಾಯದವರು (ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಸಿದ್ದರಾಮಯ್ಯ) ಮತ್ತು ಒಬ್ಬ ಬ್ರಾಹ್ಮಣ (ಆರ್ ಗುಂಡೂರಾವ್) ಮತ್ತು ಒಬ್ಬರು ರಜಪೂತ (ಎನ್ ಧರ್ಮಸಿಂಗ್) ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ

ಈ ಬಾರಿ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರು ಸಿದ್ದರಾಮಯ್ಯ. ಅವರನ್ನು ಬಿಟ್ಟರೆ ಒಕ್ಕಲಿಗ ಸಮುದಾಯದ ಡಿ.ಕೆ ಶಿವಕುಮಾರ್ ಪೈಪೋಟಿ ನಡೆಸುತ್ತಿದ್ದಾರೆ.

ಜನತಾ ಪರಿವಾರ ಮತ್ತು ಜೆಡಿಎಸ್

ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಎರಡು ಬಾರಿ ಮತ್ತು ಲಿಂಗಾಯಿತ ಎಸ್.ಆರ್ ಬೊಮ್ಮಾಯಿ ಸಿಎಂ ಆಗಿದ್ದರು. ಜನತಾ ದಳದಲ್ಲಿ ಒಕ್ಕಲಿಗ ಸಮುದಾಯದ ಎಚ್.ಡಿ ದೇವೇಗೌಡ ಮತ್ತು ಲಿಂಗಾಯಿತ ಸಮುದಾಯದ ಜೆ.ಎಚ್ ಪಟೇಲ್ ಸಿಎಂ ಆಗಿದ್ದರು. ಜೆಡಿಎಸ್ ಆದ ನಂತರ ಎರಡು ಬಾರಿ ಒಕ್ಕಲಿಗ ಸಮುದಾಯದ ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾರೆ.

ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ತೀರಾ ಹಿಂದುಳಿದ ಸಮುದಾಯಗಳಿಗೆ ದಕ್ಕದ ಸಿಎಂ ಸ್ಥಾನ

ಕರ್ನಾಟಕ ಇದುವರೆಗೂ 30 ಬಾರಿ ಸಿಎಂಗಳನ್ನು ಕಂಡಿದೆ. ಲಿಂಗಾಯಿತ ಸಮುದಾಯದವರು 14 ಬಾರಿ, ಒಕ್ಕಲಿಗ ಸಮುದಾಯದವರು 8 ಬಾರಿ, ಒಬಿಸಿ ಸಮುದಾಯದವರು 5 ಬಾರಿ, ಬ್ರಾಹ್ಮಣ ಸಮುದಾಯದವರು 2 ಬಾರಿ ಮತ್ತು ರಜಪೂತ ಸಮುದಾಯದವರು ಒಂದು ಬಾರಿ ಸಿಎಂ ಆಗಿದ್ದಾರೆ. ಆದರೆ ಅದರಲ್ಲಿ ಒಬ್ಬರೂ ಮಹಿಳೆಯರಿಲ್ಲ. ಇನ್ನು ರಾಜ್ಯದಲ್ಲಿ ಅರ್ಧದಷ್ಟು ಮತದಾರರಿದ್ದರೂ ಮಹಿಳಾ ಶಾಸಕರ ಸಂಖ್ಯೆ ಶೇ.10ರಷ್ಟು ದಾಟದಿರುವುದು ದುರಂತದ ಸಂಗತಿ. ಇತ್ತೀಚಿನ ಕರ್ನಾಟಕದ ಸೋರಿಕೆಯ ಜಾತಿಗಣತಿಯ ಪ್ರಕಾರ ಹೆಚ್ಚಿನ ಜನಸಂಖ್ಯೆಯಿದ್ದರೂ ದಲಿತರು, ಅಲ್ಪಸಂಖ್ಯಾತರು ಸಹ ಸಿಎಂ ಆಗಲು ಸಾಧ್ಯವಾಗಿಲ್ಲ. ಇನ್ನು ನೂರಾರು ಸಣ್ಣಸಣ್ಣ ಸಂಖ್ಯೆಯಲ್ಲಿರುವ ಹಿಂದುಳಿದ ಸಮುದಾಯಗಳ ಜನರು ಶಾಸಕರಾಗಲೂ ಸಾಧ್ಯವಾಗಿಲ್ಲ. ಈ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವುದು ಸವಾಲಿನ ಕೆಲಸವಾದರೂ ಪ್ರಜಾಪ್ರಭುತ್ವದಲ್ಲಿ ತುರ್ತು ಮಾಡಲೇಬೇಕಾದ ಕೆಲಸವಂತೂ ಹೌದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...