ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯದ ಅಧಿಕಾರದ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆಂಬ ಭವಿಷ್ಯ ಇಂದು ನಿರ್ಧಾರವಾಗಲಿದೆ.
ರಾಜ್ಯದ 3.67 ಕೋಟಿ ಮತದಾರರು ನೀಡಿರುವ ನಿರ್ಧಾರ ಇಂದು ಪ್ರಕಟವಾಗುತ್ತಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಈಗಾಗಲೇ ಸರ್ಕಾರ ರಚಿಸುವ ಕಸರತ್ತಿನಲ್ಲಿ ನಿರತವಾಗಿವೆ.
ಅತಂತ್ರ ಸರ್ಕಾರ ರಚನೆಯಾದಲ್ಲಿ ಮೈತ್ರಿಯ ಸೂಚನೆಯನ್ನು ಜೆಡಿಎಸ್ ನೀಡಿದರೆ, ಆಪರೇಷನ್ ಸಂಬಂಧ ಕಮಲ ಮತ್ತು ಕೈ ಪಕ್ಷಗಳೆರಡೂ ಸೂಚನೆ ನೀಡಿವೆ. ಮತದಾನೋತ್ತರ ಸಮೀಕ್ಷೆಗಳು ಹೆಚ್ಚಿನದಾಗಿ ಕಾಂಗ್ರೆಸ್ಗೆ ಒಲವು ತೋರಿಸಿದರೆ, ಕೆಲವು ಸಮೀಕ್ಷೆಗಳು ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಹೇಳಿವೆ. ಹಲವು ಸಮೀಕ್ಷೆಗಳು ಅತಂತ್ರ ಸರ್ಕಾರದ ಸೂಚನೆಯನ್ನೂ ನೀಡಿವೆ.
ವಿಧಾನಸಭೆಯ 224 ಕ್ಷೇತ್ರಗಳ ಶಾಸಕರ ಆಯ್ಕೆಗೆ ಏಪ್ರಿಲ್ 10 ಮತದಾನ ನಡೆದಿತ್ತು. 5.07 ಕೋಟಿ ಮತದಾರರಲ್ಲಿ 3.67 ಕೋಟಿ ಮಂದಿ ಮತಚಲಾಯಿಸಿದ್ದಾರೆ. 2,615 ಅಭ್ಯರ್ಥಿಗಳು ಕಣದಲ್ಲಿದ್ದು, ಜನರ ವಿಶ್ವಾಸಗೆದ್ದು ಯಾರು ವಿಧಾನಸಭೆ ಪ್ರವೇಶಿಸಲಿದ್ದಾರೆ ಎಂಬುದು ಇಂದು ತಿಳಿಯಲಿದೆ.
ಬಿಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಹೊತ್ತಿಗೆ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಸಂಜೆ ವೇಳೆಗೆ ಪೂರ್ಣ ಫಲಿತಾಂಶ ಪ್ರಕಟವಾಗಲಿದೆ.
“ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 34 ಕೇಂದ್ರಗಳಲ್ಲಿ ಏಕಕಾಲಕ್ಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ” ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತ ಯಂತ್ರಗಳನ್ನು ಭದ್ರವಾಗಿ ಇಡಲಾಗಿದ್ದು, ಸ್ಟ್ರಾಂಗ್ ರೂಂಗಳಲ್ಲಿ 3 ಹಂತದ ಭದ್ರತೆಯನ್ನು ಏರ್ಪಡಿಸಲಾಗಿದೆ.
28 ವಿಧಾನಸಭೆ ಕ್ಷೇತ್ರ ಹೊಂದಿರುವ ಬೆಂಗಳೂರು ನಗರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 10 ಡಿಸಿಪಿಗಳು ಮತ್ತು ಇತರ ಶ್ರೇಣಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಪ್ರತಿ ಮತ ಎಣಿಕೆ ಕೇಂದ್ರದಲ್ಲಿ ಅರೆಸೇನಾ ಪಡೆಗಳ ಜೊತೆಗೆ ಎಸಿಪಿಗಳು, ಇನ್ಸ್ಪೆಕ್ಟರ್ಗಳು, ಸಬ್ಇನ್ಸ್ಪೆಕ್ಟರ್ಗಳ ನಂತರ ಇಬ್ಬರು ಡಿಸಿಪಿಗಳು ಹಾಜರಿರುತ್ತಾರೆ. ಮುಂಜಾಗ್ರತೆ ವಹಿಸಿ ಸೆಕ್ಷನ್ 144 ಕೂಡ ಜಾರಿ ಮಾಡಲಾಗಿದೆ. ಮತ ಎಣಿಕೆ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು, ವಿಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜು, ತಿಲಕನಗರದ ಎಸ್ಎಸ್ಎಂಆರ್ವಿ ಕಾಲೇಜು ಮತ್ತು ದೇವನಹಳ್ಳಿಯ ಆಕಾಶ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಮತ ಎಣಿಕೆ ನಡೆಯಲಿದೆ.
ಪೂರ್ವ ಮತ್ತು ಪಶ್ಚಿಮ ವಿಭಾಗದ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು ಭದ್ರತಾ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. 10 ಡಿಸಿಪಿಗಳು, 15 ಸಹಾಯಕ ಪೊಲೀಸ್ ಆಯುಕ್ತರು, 38 ಪೊಲೀಸ್ ಇನ್ಸ್ಪೆಕ್ಟರ್ಗಳು, 250 ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳು ಮತ್ತು ನಗರ ಪೊಲೀಸ್ನ ಇತರ 1,200 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅರೆಸೇನಾ ಪಡೆಗಳ 12 ಕಂಪನಿಗಳು, 36 ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಮತ್ತು ಸಿಟಿ ಆರ್ಮ್ಡ್ ರಿಸರ್ವ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
ಪ್ರತಿ ಮತ ಎಣಿಕೆ ಕೇಂದ್ರಕ್ಕೆ ಮೂವರು ಎಸಿಪಿಗಳು, ಆರು ಪೊಲೀಸ್ ಇನ್ಸ್ಪೆಕ್ಟರ್ಗಳು ಮತ್ತು 50 ಸಬ್ ಇನ್ಸ್ಪೆಕ್ಟರ್ಗಳ ಜೊತೆಗೆ 300 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಸೆಕ್ಷನ್ 144 ಜಾರಿ ಇರಲಿದೆ.
ನಿಚ್ಚಳ ಬಹುಮತದ ಸಾಧ್ಯತೆಯನ್ನು ಹೆಚ್ಚಿನ ಸಮೀಕ್ಷೆಗಳ ಫಲಿತಾಂಶಗಳು ಅಲ್ಲಗಳೆದಿವೆ. ಹೀಗಾಗಿ 2018ರ ಚುನಾವಣೆಯಂತೆ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದೇ ಎಂಬ ಚರ್ಚೆಯೂ ರಾಜ್ಯದಲ್ಲಿ ಬಿರುಸಾಗಿದೆ.
ಮತ ಎಣಿಕೆಗೂ ಮುನ್ನವೇ ಮೂರು ಪ್ರಮುಖ ಪಕ್ಷಗಳನ್ನು ಪಕ್ಷಾಂತರದ ಭೀತಿ ಆವರಿಸಿಕೊಂಡಿದೆ. ಮತ ಎಣಿಕೆ ಪೂರ್ಣಗೊಳ್ಳುತ್ತಿದ್ದಂತೆಯೇ ಪಕ್ಷದ ಶಾಸಕರನ್ನು ಕರೆದೊಯ್ದು ಸುರಕ್ಷಿತ ಸ್ಥಳದಲ್ಲಿ ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆಯನ್ನು ಆಯಾ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಶುಕ್ರವಾರವೇ ಸಭೆಗಳನ್ನು ನಡೆಸಿದ್ದಾರೆ.
ಚುನಾವಣಾ ಕಣದಲ್ಲಿ ಪ್ರಬಲರಾಗಿರುವ ಪಕ್ಷೇತರರು ಮತ್ತು ಕಡಿಮೆ ಸಂಖ್ಯೆಯ ಸ್ಥಾನ ಗಳಿಸಬಹುದಾದ ಪಕ್ಷಗಳ ಮೇಲೆ ಪ್ರಮುಖ ರಾಜಕೀಯ ಪಕ್ಷಗಳು ಗಮನ ಹರಿಸಿವೆ. ಅತಂತ್ರ ಸ್ಥಿತಿ ನಿರ್ಮಾಣವಾದರೆ ಅಂತಹ ಶಾಸಕರನ್ನು ಸೆಳೆಯುವ ತಂತ್ರ ರೂಪಿಸಲಾಗಿದೆ.