Homeದಲಿತ್ ಫೈಲ್ಸ್ಕರ್ನಾಟಕ: ದಲಿತರನ್ನು ಪ್ರಭಾವಿಸಲು ಭಾರತ್‌ ಜೋಡೋ ಯಾತ್ರೆ ಯತ್ನಿಸಿದ್ದು ಹೀಗೆ...

ಕರ್ನಾಟಕ: ದಲಿತರನ್ನು ಪ್ರಭಾವಿಸಲು ಭಾರತ್‌ ಜೋಡೋ ಯಾತ್ರೆ ಯತ್ನಿಸಿದ್ದು ಹೀಗೆ…

- Advertisement -
- Advertisement -

“ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಕುರಿತು ವರದಿ ಸಲ್ಲಿಸಲು ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಸಮಿತಿ ನೇಮಿಸಿದ್ದು ಕಾಂಗ್ರೆಸ್ ಸರ್ಕಾರ, ಯಾವುದೇ ನೆಪ ಹೇಳದೆ ಬಿಜೆಪಿ ಸರ್ಕಾರ ಈ ವರದಿಯನ್ನು ಕೂಡಲೇ ಜಾರಿಗೆ ತರಬೇಕು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಳ್ಳಾರಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಆಗ್ರಹಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತಗಳು ನಿರ್ಣಾಯಕವಾಗಿರುವುದರಿಂದ ಬಿಜೆಪಿ ಈಗ ಮೀಸಲಾತಿ ಹೆಚ್ಚಳದ ಚರ್ಚೆಯನ್ನು ಚುನಾವಣೆ ಹೊಸ್ತಿಲಲ್ಲಿ ಹುಟ್ಟುಹಾಕಿದೆ. ಒಳಮೀಸಲಾತಿಯ ಜಾರಿಯ ಮಾತುಗಳನ್ನು ಆಡುತ್ತಿದ್ದಾರೆ. ಜಸ್ಟೀಸ್ ನಾಗಮೋಹನ ದಾಸ್ ಅವರ ವರದಿ ಬಹಿರಂಗಗೊಂಡು ಮುಕ್ತ ಚರ್ಚೆಯೂ ಆಗಿಲ್ಲ. ಹಾಗೆಯೇ ಒಳಮೀಸಲಾತಿಯನ್ನು ಶಿಪಾರಸ್ಸು ಮಾಡಿರುವ ಜಸ್ಟೀಸ್‌ ಎ.ಜೆ.ಸದಾಶಿವ ಆಯೋಗದ ವರದಿ ಕೂಡ ಸಾರ್ವಜನಿಕವಾಗಿ ಬಿಡುಗಡೆಯಾಗಿಲ್ಲ. ಬಿಜೆಪಿ ನಾಯಕರು ದಲಿತರ ಮತಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಸರತ್ತುಗಳನ್ನು ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ಕೂಡ ಹಿಂದೆ ಬೀಳದೆ ದಲಿತ ಸಂಬಂಧಿತ ಸಂಗತಿಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ. ರಾಹುಲ್‌ ಗಾಂಧಿಯವರು ಕೈಗೊಂಡಿರುವ ‘ಭಾರತ್‌ ಜೋಡೋ ಯಾತ್ರೆ’ಯಲ್ಲಿಯೂ ದಲಿತ ಕೇಂದ್ರಿತ ವಿಚಾರಗಳು ಕೊಂಚ ಮುನ್ನೆಲೆಗೆ ಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್‌ 30ರಂದು ಕರ್ನಾಟಕವನ್ನು ಪ್ರವೇಶಿಸಿತು. ಅಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಸಂವಿಧಾನ ಪ್ರಸ್ತಾವನೆಯ ಚಿತ್ರವನ್ನು ರಾಹುಲ್‌ ಗಾಂಧಿಯವರ ಜೊತೆಯಲ್ಲಿ ನಿಂತು ಪ್ರದರ್ಶಿಸಿದರು. ಭಾರತ್‌ ಜೋಡೋಕ್ಕೆ ದೇವನೂರರ ಬೆಂಬಲ ವ್ಯಕ್ತವಾಗುತ್ತಿದ್ದಂತೆ ‘ಕಾಂಗ್ರೆಸ್‌ ಪಕ್ಷವು ದಲಿತರಿಗೆ ಏನು ಮಾಡಿದೆ? ದಲಿತರು ಕಾಂಗ್ರೆಸ್‌ಅನ್ನು ಬೆಂಬಲಿಸಬೇಕೆ?’ ಎಂಬ ಚರ್ಚೆಗಳು ಬಿರುಸು ಪಡೆದವು. (ಕಾಂಗ್ರೆಸ್, ಕಾಂಗ್ರೆಸ್ಸೇತರ ಪಕ್ಷಗಳು ಹಾಗೂ ದಲಿತ ರಾಜಕಾರಣವನ್ನು ಮುಖ್ಯವಾಗಿಟ್ಟುಕೊಂಡು ‘ಭಾರತ್ ಜೋಡೋ ಜೊತೆಗೆ ದಲಿತರನ್ನೂ ಬೆಸೆಯಬಹುದೇ ಕಾಂಗ್ರೆಸ್?’ ಎಂಬ ವರದಿಯನ್ನು ‘ನಾನುಗೌರಿ.ಕಾಂ’ ಹಾಗೂ ‘ನ್ಯಾಯಪಥ’ ವಾರಪತ್ರಿಕೆ ಮಾಡಿರುವುದನ್ನು ಆವಲೋಕಿಸಬಹುದು).

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಹಿರಿಯ ದಲಿತ ಚಿಂತಕರಾದ ಇಂಧೂದರ ಹೊನ್ನಾಪುರ, “ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿ ಸರ್ವಾಧಿಕಾರಿಯಂತೆ ವರ್ತಿಸಿದರು. ಆದರೆ ಅದಕ್ಕೆ ಆಡಳಿತಾತ್ಮಕ ಒಪ್ಪಿಗೆ ಪಡೆದಿದ್ದರು. ಆದರೆ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಎಲ್ಲಾ ಕ್ಷೇತ್ರಗಳಲ್ಲೂ ನರಮಂಡಲವನ್ನೇ ನಿಯಂತ್ರಿಸುವ ಕೆಲಸ ನಡೆಯುತ್ತಿದೆ. ಇಂದಿನ ಕಾಂಗ್ರೆಸ್ ನಡೆ ಜನಪರವಾಗಿರುವಂತೆ ತೋರುತ್ತಿದೆ. ಅಧಿಕಾರ ಮರಳಿ ಪಡೆಯುವ ಆಸೆ ಕಾಂಗ್ರೆಸ್‌ಗೆ ಇರಬಹುದು. ಅಷ್ಟಕ್ಕೆ ಸರಿ ತಪ್ಪುಗಳ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ. ದೇಶದ ಉಳಿವಿಗಾಗಿ, ಅಲ್ಪಸ್ವಲ್ಪವಾದರೂ ಪ್ರಜಾಸತ್ತಾತ್ವಕ ಮೌಲ್ಯಗಳನ್ನು ಕಾಪಾಡುವುದಕ್ಕಾಗಿ ಕಾಂಗ್ರೆಸ್ ಅನಿವಾರ್ಯವಾಗಿದೆ” ಎಂದು ತಿಳಿಸಿದ್ದರು.

ದಸಂಸ ಮುಖಂಡರಾದ ಗುರುಪ್ರಸಾದ್ ಕೆರೆಗೋಡು ಮಾತನಾಡಿ, “ನಾವು ಕಾಂಗ್ರೆಸ್ ಪಕ್ಷಕ್ಕಾಗಿ ಈ ಯಾತ್ರೆಗೆ ಬೆಂಬಲ ಸೂಚಿಸುತ್ತಿಲ್ಲ. ನಮ್ಮ ಬೆಂಬಲ ಜಾತಿ, ಧರ್ಮ, ದೇವರು, ಗಡಿ, ಭಾಷೆ ಮೊದಲಾದ ಭಾವನಾತ್ಮಕ ವಿಷಯಗಳಿಂದ ಭಾವೈಕ್ಯ ಭಾರತವನ್ನು ಒಡೆದು ಛಿದ್ರಗೊಳಿಸಿರುವ ಭಾರತವನ್ನು ಜೋಡಿಸುವುದಷ್ಟೆ. ಇಂತಹ ಕಾರ್ಯ ಯಾರೂ ಮಾಡಿದರೂ ನಮ್ಮ ಬೆಂಬಲವಿದೆ” ಎಂದು ಸ್ಪಷ್ಟಪಡಿಸಿದ್ದರು. ದಲಿತ ಚಳವಳಿಯ ಮುಂಚೂಣಿಯಲ್ಲಿದ್ದ ಅನೇಕ ಹಿರಿಯ ನಾಯಕರು ‘ಭಾರತ್‌ ಜೋಡೋ’ವನ್ನು ಬೆಂಬಿಲಿಸಿದ್ದಾರೆ. ಪಾದಯಾತ್ರೆಯಲ್ಲಿ ಹೆಜ್ಜೆಯನ್ನೂ ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ಬಿಜೆಪಿಯೂ ಕೂಡ ದಲಿತ ಮತಗಳ ಬುಟ್ಟಿಗೆ ಕೈ ಹಾಕಿದೆ. (ವಿವರಗಳಿಗೆ ‘ರಾಜ್ಯ ರಾಜಕಾರಣದಲ್ಲಿ ದಲಿತರನ್ನು ಒಡೆದು ಆಳುವುದು ಸುಲಭವೇ?’ ಲೇಖನ ಓದಬಹುದು)

ರಾಹುಲ್‌ ಅವರು ಗಾಂಧಿ ಜಯಂತಿಯಂದು ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮಕ್ಕೆ ಭೇಟಿ ನೀಡಿದರು. ಮಹಾತ್ಮ ಗಾಂಧೀಜಿಯವರು ಈ ಗ್ರಾಮಕ್ಕೆ ಭೇಟಿ ನೀಡಿದ್ದ ಇತಿಹಾಸ ಒಂದು ಕಡೆ ಇದ್ದರೆ, 1993ರಲ್ಲಿ ಹತ್ಯೆಗಳಿಗೂ ಸಾಕ್ಷಿಯಾದ ಕರಾಳ ಇತಿಹಾಸ ಈ ಗ್ರಾಮಕ್ಕಿದೆ. ಬದನವಾಳು ಗ್ರಾಮದಲ್ಲಿನ ಸಿದ್ದೇಶ್ವರ ದೇವಸ್ಥಾನ ನವೀಕರಣಗೊಂಡ ನಂತರ ಉದ್ಘಾಟನೆಗೆ ದಲಿತರನ್ನು ಆಹ್ವಾನಿಸಿರಲಿಲ್ಲ. ಅಂತಿಮವಾಗಿ ಈ ವಿಚಾರ ಗಂಭೀರ ತಿರುವು ಪಡೆದುಕೊಂಡು ದೇವಸ್ಥಾನಕ್ಕೆ ಬೀಗ ಮುದ್ರೆ ಹಾಕಲಾಗಿತ್ತು. 1993ರ ಜನವರಿ 30ರಂದು ಶಾಂತಿ ಸಮಿತಿ ರಚಿಸಲಾಗಿತ್ತು. ಅದರಂತೆ 1993 ಫೆಬ್ರವರಿ 2ರಂದು ದಲಿತರು ಪೊಲೀಸರ ಸಹಕಾರದಿಂದ ದೇವಸ್ಥಾನದ ಬೀಗ ಒಡೆದು ಒಳಪ್ರವೇಶಿಸಿದ್ದರು. ಈ ಘಟನೆಯ ಬಳಿಕ 1993ರ ಮಾರ್ಚ್ 26ರಂದು ದೇವಸ್ಥಾನದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಸಲುವಾಗಿ ದೇವಸ್ಥಾನದಿಂದ ಒಂದು ಕಿ.ಮೀ. ದೂರದಲ್ಲಿ ಪ್ರಾಣಿ ಬಲಿ ಕೊಡಲು ದಲಿತ ಸಮುದಾಯ ನಿರ್ಧರಿಸಿತು. ಇದಕ್ಕೆ ಸಂಬಂಧಿಸಿದಂತೆ ಅನುಮತಿ ನೀಡುವಂತೆ ಪೊಲೀಸರಲ್ಲಿ ಮನವಿ ಸಲ್ಲಿಸಿದ್ದರು.

ಇದರಿಂದ ರೊಚ್ಚಿಗೆದ್ದ ವೀರಶೈವ ಸಮುದಾಯದ ಜನರು 1993 ಮಾರ್ಚ್ 25ರಂದು ಹಣಿಯಂಬಳ್ಳಿ ಹಾಗೂ ಬದನವಾಳುವಿನ 1.5 ಕಿ.ಮೀ ಉದ್ದದ ರಸ್ತೆ ಮಾರ್ಗದಲ್ಲಿ ಪ್ರಭುಸ್ವಾಮಿ ಎಂಬುವವರ ಜಮೀನಿನ ಹತ್ತಿರ ದಲಿತರ ಮೇಲೆ ಹಲ್ಲೆ ನಡೆಸಿದರು. ಅಂದು ಕ್ರಿಕೆಟ್ ಪಂದ್ಯ ಮುಗಿಸಿ ವಾಪಸ್ ಆಗುತ್ತಿದ್ದ ದಲಿತ ವರ್ಗದವರ ಮೇಲೆ ಮೇಲ್ವರ್ಗದ ಜನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಈ ಘಟನೆಯಲ್ಲಿ ಮಧುಕರ್, ನಟರಾಜ್ ಮತ್ತು ನಾರಾಯಣಸ್ವಾಮಿ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪ್ರಕರಣದ ಸಂಬಂಧ ಹೈಕೋರ್ಟ್ ಅಂತಿಮವಾಗಿ 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಈ ಕರಾಳ ಇತಿಹಾಸದ ನೋವನ್ನು ಮರೆತು ಸಾಮರಸ್ಯ ಸಾರುವ ಕೆಲಸಕ್ಕೆ ರಾಹುಲ್‌ ಹೆಜ್ಜೆ ಇಟ್ಟಿದ್ದರು. ಮೂರು ದಶಕಗಳ ನಂತರ ಎರಡೂ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಸೌಹಾರ್ದ ಕೂಟ ನಡೆಸಿದರು. ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಹಲವಾರು ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜೊತೆಗೆ ಬಂದ್ ಆಗಿದ್ದ ರಸ್ತೆಗೆ ‘ಭಾರತ್ ಜೋಡೋ ರಸ್ತೆ’ ಎಂದು ಹೆಸರಿಸಲಾಯಿತು.

ದಲಿತ ಬಾಲಕನೊಬ್ಬ ದೇವರ ಗುಜ್ಜುಗೋಲು ಮುಟ್ಟಿದ ಕಾರಣಕ್ಕೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ದಲಿತ ಕುಟುಂಬಕ್ಕೆ ಸವರ್ಣೀಯರು ಬಹಿಷ್ಕಾರ ಹಾಕಿದ್ದರು. 60 ಸಾವಿರ ರೂ. ದಂಡ ಕಟ್ಟಬೇಕು ಎಂದು ತಾಕೀತು ಮಾಡಿದ್ದರು. ರಾಷ್ಟ್ರಮಟ್ಟದಲ್ಲಿಯೂ ಈ ಘಟನೆ ವರದಿಯಾಯಿತು. ಉಳ್ಳೇರಹಳ್ಳಿ ಚಲೋವನ್ನು ದಲಿತರು ಹಮ್ಮಿಕೊಂಡಿದ್ದರು. ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ವಹಿಸಿದರು. ಇದರ ಹಿನ್ನೆಲೆಯಲ್ಲಿ ಬಹಿಷ್ಕಾರಕ್ಕೆ ಒಳಗಾದ ಕುಟುಂಬವನ್ನು ಭಾರತ್‌ ಜೋಡೋಗೆ ಕರೆತಂದ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿಸಿದರು. ದಲಿತ ಕುಟುಂಬವು ರಾಹುಲ್ ಗಾಂಧಿಯವರ ಜೊತೆಗಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಉಳ್ಳೇರಹಳ್ಳಿಯ ದಲಿತ ಬಾಲಕ ಹಾಗೂ ತಾಯಿಯೊಂದಿಗೆ ರಾಹುಲ್ ಗಾಂಧಿ.

 

ಬಾಲಕನ ಪೋಷಕರಿಗೆ ಧೈರ್ಯ ತುಂಬಿದ ರಾಹುಲ್, “ಕಾಂಗ್ರೆಸ್ ಪಕ್ಷ ನಿಮ್ಮ ಕುಟುಂಬಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ; ದೇಶದ ಜಾತ್ಯಾತೀತತೆಯ ಭದ್ರಕೋಟೆಯಾಗಿರುವ ಸಂವಿಧಾನವೇ ನಮ್ಮ ಏಕೈಕ ರಕ್ಷಕ” ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. “ಕಾಂಗ್ರೆಸ್ ಪಕ್ಷವು ತನ್ನ ಪಾದಯಾತ್ರೆಯ ಮೂಲಕ ಈ ದೇಶದ ಜಾತಿವಾದದ ವಿರುದ್ಧ ಹೋರಾಡುತ್ತಿದೆ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ಜನರನ್ನು ಒಗ್ಗೂಡಿಸುತ್ತದೆ” ಎಂದು ಕುಟುಂಬಕ್ಕೆ ತಿಳಿಸಿದ್ದಾರೆ.

ತುರುವೇಕೆರೆಗೆ ಭಾರತ್‌ ಜೋಡೋ ಯಾತ್ರೆ ಪ್ರವೇಶಿಸಿದಾಗ ದಲಿತ ಮುಖಂಡ ದಂಡಿನಶಿವರ ಕುಮಾರ್ ಅವರು ಬುದ್ಧನ ಮೂರ್ತಿಯನ್ನು ರಾಹುಲ್‌ ಗಾಂಧಿಯವರಿಗೆ ನೀಡಿದರು.

ಎಲ್ಲ ಜಾತಿ, ಧರ್ಮದ ಜನರನ್ನು ಬೆಸೆಯಬೇಕೆಂದು ರಾಹುಲ್ ಗಾಂಧಿಯವರು ಹೇಳುತ್ತಿದ್ದಾರೆ. ಮತ್ತೊಂದೆಡೆ ಆಡಳಿತರೂಢ ಬಿಜೆಪಿಯವರು ಮೀಸಲಾತಿಯ ಅಸ್ತ್ರವನ್ನು ಬಿಟ್ಟಿದ್ದಾರೆ. ಹೀಗಾಗಿ ‘ಮೀಸಲಾತಿ ಹೆಚ್ಚಳಕ್ಕೆ ನಾಂದಿಯಾಡಿದ್ದು ಕಾಂಗ್ರೆಸ್‌’ ಎಂಬ ಹೇಳಿಕೆಯನ್ನು ರಾಹುಲ್‌ ನೀಡಿದ್ದಾರೆ.

ಇದನ್ನೂಓದಿರಿ: ದೇಶದ ಯಾವುದೇ ಮುಖ್ಯವಾಹಿನಿ ಮಾಧ್ಯಮದಲ್ಲಿ ದಲಿತ, ಆದಿವಾಸಿ, ಒಬಿಸಿ ಮುಖ್ಯಸ್ಥರಿಲ್ಲ: ವರದಿ

2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಯ ಜನರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಣನೀಯವಾಗಿ ಹೆಚ್ಚಿದ್ದಾರೆ. ಕೋಲಾರ 30.32 %, ಚಾಮರಾಜನಗರ 25.42 %, ಕಲಬುರಗಿ 25.28 %, ಚಿಕ್ಕಬಳ್ಳಾಪುರ 24.90 %, ಬೀದರ್‌ 23.47 %, ಚಿತ್ರದುರ್ಗ 23.45 %, ಯಾದಗಿರಿ 23.28 %, ಚಿಕ್ಕಮಗಳೂರು 22.29 %, ಬೆಂಗಳೂರು ರೂರಲ್‌ 21.57%, ಬಳ್ಳಾರಿ 21.10%, ರಾಯಚೂರು 20.79 %, ಬಿಜಾಪುರ 20.34 %, ದಾವಣಗೆರೆ 20.18% ಪರಿಶಿಷ್ಟರು ಇದ್ದರೆ, ಪರಿಶಿಷ್ಟ ಪಂಗಡಗಳು ಹಲವು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಯಚೂರು 19.03 %, ಬಳ್ಳಾರಿ 18.41 %, ಚಿತ್ರದುರ್ಗ 18.23 %, ಬೀದರ್‌ 13.85 %, ಯಾದಗಿರಿ 12.51 %, ಚಿಕ್ಕಬಳ್ಳಾಪುರ 12.47 %, ದಾವಣಗೆರೆ 11.98 %, ಕೊಪ್ಪಳ 11.82 %, ಚಾಮರಾಜನಗರ 11.78 %, ಮೈಸೂರು 11.15 %, ಕೊಡಗು 10.47 % ಪರಿಶಿಷ್ಟ ಪಂಗಡಗಳನ್ನು ಹೊಂದಿವೆ.

ಭಾರತ್ ಜೋಡೋ ಯಾತ್ರೆಯು ಎಸ್‌ಸಿ, ಎಸ್‌ಟಿಗಳು ಹೆಚ್ಚಿರುವ ಹಲವು ಜಿಲ್ಲೆಗಳಲ್ಲಿ ಸಾಗಿ ಹೋಗುತ್ತಿದೆ. ಬಳ್ಳಾರಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮೀಸಲಾತಿಯ ಕುರಿತು ರಾಹುಲ್ ಮಾತನಾಡಿರುವುದರ ಹಿಂದೆಯೂ ಈ ಸಮುದಾಯಗಳ ಲೆಕ್ಕಾಚಾರ ಇದೆ. ಆದರೆ ಬಿಜೆಪಿ ಹೆಣೆಯುತ್ತಿರುವ ಜಾತಿ ಸಮೀಕರಣದ ತಂತ್ರಗಾರಿಕೆಯನ್ನು ಕಾಂಗ್ರೆಸ್ ಯಾವ ನೆಲೆಯಲ್ಲಿ ಎದುರಿಸುತ್ತದೆ ಎಂಬುದು ಸ್ಪಷ್ಟವಾಗುತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...