Homeಮುಖಪುಟಹಗೆ ಸಾಧಿಸಿದ ನಿಮ್ಮ ಎದುರು, ಕೇರಳವ ನಾವು ಮತ್ತೆ ಕಟ್ಟುತ್ತೇವೆ

ಹಗೆ ಸಾಧಿಸಿದ ನಿಮ್ಮ ಎದುರು, ಕೇರಳವ ನಾವು ಮತ್ತೆ ಕಟ್ಟುತ್ತೇವೆ

- Advertisement -
- Advertisement -

ಪ್ರತೀ ಸಲ ಅಲ್ಲಿಗೆ ಹೋದಾಗ ನಾನು ಅಳುತ್ತಿದ್ದೆ, ಆಗೆಲ್ಲ ನನ್ನ ಜೊತೆ ಅಳುತ್ತಿದ್ದುದು ಆ ನನ್ನ ನದಿಯೊಂದೇ! ನನ್ನ ಕಣ್ಣೀರಿಗೆ ಕಣ್ಣೀರಾಗುತ್ತಿದ್ದ ಆ ನನ್ನ ನದಿಯೇ ಒಂದು ದಿನ ನನ್ನನ್ನು ಅಳಿಸಲಿದೆ ಎಂಬ ಕಲ್ಪನೆಯೇ ನನಗಿರಲಿಲ್ಲ. ಆದರೆ ಆಗಸ್ಟ್ 17ರ ರಾತ್ರಿ ನದಿ ನನ್ನ ಗೆಳೆಯನೊಬ್ಬನನ್ನು ತನ್ನೊಳಗೆ ಸೆಳೆದುಕೊಂಡಿತು. ನನಗೆ ಫೋನ್ ಮಾಡಿದ ಗೆಳೆಯ `ನದಿಯ ಮಟ್ಟ ಏರುತ್ತಿದೆ. ನಮ್ಮ ಮನೆ ಸುರಕ್ಷಿತವಾಗಿಲ್ಲ, ನಮ್ಮ ದೋಣಿಗಳು ಹೊರಗಿವೆ’ ಎಂದು ಹೇಳಿದ. ನನ್ನನ್ನು ನನ್ನನ್ನಾಗಿಸಿದ ಆ ನದಿಯೇ ನಮ್ಮ ಮನೆಯನ್ನು ಧ್ವಂಸ ಮಾಡಲಿದೆ ಎಂಬುದನ್ನು ನಂಬಲಾಗಲಿಲ್ಲ. ನಾನು ದೇವರನ್ನು ನಂಬೋದಿಲ್ಲ, ಆದರೆ ಬೆಂಗಳೂರಿನಲ್ಲಿ ಕುಳಿತು ನನ್ನ ಗೆಳತಿಯಾದ ನದಿಯಲ್ಲಿ ವಿನಂತಿಸಿಕೊಂಡೆ ‘ನಿನ್ನ ಮಡಿಲಲ್ಲಿ ಬೆಳೆದ ನಮ್ಮ ಜೀವಗಳನ್ನು ನೀನು ತೆಗೆದುಕೊಳ್ಳುವುದಿಲ್ಲ ಅಲ್ಲವೇ’ ಎಂದು.
ನಾವು ಕೇರಳಿಗರು ಯಾವುದೇ ವರ್ಗ ತಾರತಮ್ಯವಿಲ್ಲದೇ ಒಬ್ಬರಿಗೊಬ್ಬರು ಜೊತೆಯಾಗಿ ಬೆಳೆದವರು. ಎಲ್ಲರೂ ಜೊತೆಗೇ ದುಡಿದೆವು. ನಾನು ಬೆಂಗಳೂರಿನಲ್ಲಿ ಕೂತಿರುವಾಗ, ಮನೆ ಮುಳುಗುವ ಮಟ್ಟಕ್ಕೆ ನೀರು ನುಗ್ಗಿದ ನನ್ನ ಮನೆ ಸುತ್ತ ಪಹರೆ ಕಾಯುತ್ತಾ, ನನ್ನ ಅಮ್ಮನನ್ನು ರಕ್ಷಿಸಿದ ಅವನು ಹಿಂದುವೋ, ಮುಸ್ಲಿಮನೋ, ಕಾಂಗ್ರೆಸಿಗನೊ, ಬಿಜೆಪಿಯವನೊ, ಯಾವುದೂ ಆಗಿರಲಿಲ್ಲ, ಅವರೆಲ್ಲ ನನ್ನಂತೆಯೇ ನನ್ನ ತಾಯಿಯ ಮಕ್ಕಳಾಗಿದ್ದರು. ಇಂಥಾ ಮನುಷ್ಯ ಪ್ರೀತಿಯಿಂದಲೇ ಹುಟ್ಟಿಕೊಂಡದ್ದು ನನ್ನ ಕೇರಳ ರಾಜ್ಯ.
ಪ್ರಗತಿ ಎನ್ನುವ ಹೆಸರಿನಲ್ಲೇ ನಾವು ಸಾಕಷ್ಟು ತಪ್ಪು ಮಾಡಿದ್ದೇವೆ. ನಮ್ಮ ನದಿಗಳನ್ನು ಮಾರಬಹುದೆಂಬುದನ್ನು ಕಂಡುಕೊಂಡೆವು, ಆಮೇಲೆ ಮರಳನ್ನೂ ಮಾರಬಹುದೆಂಬುದು ತಿಳಿಯಿತು. ರಮಣೀಯ ಬೆಟ್ಟಗುಡ್ಡದ ತುದಿಗಳು ಲಕ್ಷಾಂತರ ಹಣ ತಂದುಕೊಡಬಲ್ಲವೆಂದು ಅರಿವಾಯಿತು. ಆನಂತರ ನಮ್ಮ ಗುಡ್ಡಗಳು ಬರೀ ಗ್ರಾನೈಟ್‍ನ ತುಣುಕುಗಳಂತೆ ಕಾಣಿಸಲಾರಂಭಿಸಿದವು. ಈ ಹಾದಿಯಲ್ಲಿ ನಮ್ಮ ಗಿರಿಗಳನ್ನು ಪ್ರೀತಿಸುವುದನ್ನೇ ಮರೆತುಬಿಟ್ಟೆವು. ಅಷ್ಟಾದರು ನಾವು ಮನುಷ್ಯರಾಗಿ ಪರಸ್ಪರ ಪ್ರೀತಿಸುವುದನ್ನು ಎಂದಿಗೂ ಮರೆಯಲಿಲ್ಲ.
ನಮ್ಮ ಕಡೆ ಹೀಗೊಂದು ಕಥೆಯಿದೆ. ಸಮುದ್ರವನ್ನೇ ಕಾಣದ ಹಳ್ಳಿಯೊಂದರಿಂದ ಒಬ್ಬನನ್ನು ಸಮುದ್ರ ನೋಡಿಬರಲು ಕಳುಹಿಸಿದರಂತೆ. ವಾಪಾಸಾದಾಗ ಅವನ ಸುತ್ತ ನೆರೆದ ಹಳ್ಳಿಗರು `ಹೇಗಿದೆ ಸಮುದ್ರ?’ ಎಂದು ಕೇಳಿದರಂತೆ. `ಸಮುದ್ರ ಸುಮಾರಾಗಿದೆ. ಆದರೆ ಇನ್ನೂ ಚೆನ್ನಾಗಿರಬಹುದಾಗಿತ್ತು’ ಎಂಬ ಉಪದೇಶ ಹೊಡೆದನಂತೆ. ಈಗ ಕೇರಳದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳ ಬಗ್ಗೆ ರಾಜ್ಯದ ಹೊರಗಿನಿಂದ ಬಂದವರು ಮತ್ತು ಕೇಂದ್ರ ಸರ್ಕಾರದ ಅಭಿಪ್ರಾಯಗಳನ್ನು ಕೇಳಿ ಈ ಕಥೆ ನೆನಪಾಯಿತು.
ಆದರೆ, ಕೇರಳ ಈ ಪ್ರವಾಹಕ್ಕೆ ಹೇಗೆ ಸ್ಪಂದಿಸಿತು? ಅಲ್ಲಿ ಒಂದು ಸರಕಾರವಿದೆ, ವಿರೋಧಪಕ್ಷಗಳಿವೆ ಮತ್ತು ಆ ನೆಲದ ಜನರಿದ್ದಾರೆ. ಬಿಕ್ಕಟ್ಟು ಬಂದಾಗ ಇವರ್ಯಾರೂ ಭಿನ್ನಾಭಿಪ್ರಾಯ ಹುಡುಕಿ ಕೂರುವುದಿಲ್ಲ. ಪರಿಹಾರ ಕಾರ್ಯದ ನೇತೃತ್ವ ವಹಿಸಿಕೊಂಡ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರ ಬೆನ್ನಿಗೆ ನಿಂತರು. ಬಲಪಂಥೀಯರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಯಾವುದೇ ಬಿಕ್ಕಟ್ಟು ಬಂದಾಗ ಕೇಂದ್ರ ಸರಕಾರದ ಮೇಲೆಯೇ ರಾಜ್ಯಗಳು ಅವಲಂಬಿತವಾಗಬೇಕು, ಮುಖ್ಯವಾಗಿ ಮೋದಿ ನೇತೃತ್ವದದಲ್ಲೇ ರಕ್ಷಣಾ ಕಾರ್ಯಾಚರಣೆ ನಡೆದಂತೆ ಒಂದು ಖೊಟ್ಟಿ ಇಮೇಜು ಸೃಷ್ಟಿಯಾಗಬೇಕೆಂಬ ಅವರ ವಿಕೃತಿ ಅಲ್ಲಿ ಫಲಿಸಲಿಲ್ಲ. ಕೇರಳದ ಜನ ಸಂಕಷ್ಟದಲ್ಲಿರುವ ತಮ್ಮವರಿಗಾಗಿ ಮಿಡಿಯುವ ಕರ್ತವ್ಯದ ನಡುವೆ ಯಾರನ್ನೋ ಹೀರೊ ಮಾಡುವ ಕಾಲಹರಣಕ್ಕೆ ಕೈಹಾಕದೆ ಒಬ್ಬರಿಗೊಬ್ಬರು ಕೈಕೈ ಬೆಸೆದದ್ದನ್ನು ಸಹಿಸಿಕೊಳ್ಳದ ಮಂದಿ ಕೇರಳ ಜನರ ವಿರುದ್ಧ ವಿಷ ಉಗುಳುತ್ತಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಾಗಿ ನೌಕಾಪಡೆ ಮತ್ತು ಸೇನೆಯನ್ನು ಕಳುಹಿಸಿ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪದೇಪದೇ ಕೇಳಿದರು. ಕೇರಳ ದುರಂತದಿಂದ ತಮಗೆ ಅಷ್ಟೇನು ಲಾಭವಿಲ್ಲ ಮತ್ತು ಅದಕ್ಕಿಂತ ಮುಖ್ಯವಾಗಿ ಅಲ್ಲಿನ ಸರ್ಕಾರದ ಮೇಲೆ ಕೆಟ್ಟ ಹೆಸರು ತರಲು ಒಳ್ಳೆ ಅವಕಾಶ ಎಂದು ಬಗೆದ ಬಲಪಂಥೀಯ ಸರಕಾರ ಮತ್ತು ಕೇರಳದ ಸಂಘಪರಿವಾರದವರು ಕೇರಳ ಸಿಎಂರ ಮನವಿಯನ್ನು ತಿರಸ್ಕರಿಸಿದರು.
ತಾವು ನೆರವು ನೀಡದೆಹೋದರೆ ಸಾವುಗಳ ಸಂಖ್ಯೆ ಸಾವಿರಕ್ಕೂ ದಾಟಿ, ಜನ ಆ ಸರ್ಕಾರದ ವಿರುದ್ಧ ದಂಗೆಯೇಳುತ್ತಾರೆ ಎಂಬುದವರ ಲೆಕ್ಕಾಚಾರವಾಗಿತ್ತು. ಆದರೆ ರಾಜ್ಯದ ಮೀನುಗಾರ ಸಮುದಾಯ ಕಾರ್ಯರೂಪಕ್ಕೆ ಬಂತು. ಕೇಂದ್ರದ ವಿಳಂಬ ನಿರೀಕ್ಷೆಯಲ್ಲಿ ಕಾಲ ದೂಡದೆ ತಮ್ಮ ದೋಣಿಗಳನ್ನೇ ಪ್ರವಾಹದ ನೀರಿಗಿಳಿಸಿ ಜನರ ರಕ್ಷಣೆಗೆ ಮುಂದಾದರು. ಇಲ್ಲದೇ ಹೋಗಿದ್ದರೆ ಸಾವಿರದ ಗಡಿಯನ್ನು ದಾಟಬಹುದಾಗಿದ್ದ ಸಾವಿನ ಸಂಖ್ಯೆ ಮುನ್ನೂರ ಆಸುಪಾಸಿಗೇ ಸೀಮಿತವಾಯ್ತು. ಆ ಜೀವಗಳ ಬಗ್ಗೆಯೂ ಅಪಾರ ನೋವಿದೆ.
17ನೇ ತಾರೀಕಿನ ರಾತ್ರಿ ನೀರಿನ ಮಟ್ಟ ಏರುತ್ತಿರುವಾಗ ನನ್ನ ಸ್ನೇಹಿತ ಅರವಿಂದಮ್ ಜೊತೆ ಫೋನಿನಲ್ಲಿ ಮಾತಾಡಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ‘ನಾನು ನಿಮ್ಮ ಮನೆಯೆದುರುಗಡೆಯೇ ಗಸ್ತು ತಿರುಗುತ್ತಿದ್ದೇನೆ. ನೀರಿನ ಮಟ್ಟ ಹೆಚ್ಚಿದಲ್ಲಿ ಅಮ್ಮನನ್ನು (ನನ್ನ ತಾಯಿ) ಸುರಕ್ಷಿತ ಜಾಗಕ್ಕೆ ಕೊಂಡೊಯ್ಯುತ್ತೇನೆ’ ಎಂದಿದ್ದ.
ಮಾರನೇಯ ದಿನ ನನ್ನ ಹಳ್ಳಿಯೊಂದಿಗೆ ಎಲ್ಲಾ ಸಂಪರ್ಕ ಕಡಿದುಬಿತ್ತು. ಗೆಳೆಯರೆಲ್ಲ ಸೇರಿಕೊಂಡು ನನ್ನ ಅಮ್ಮನನ್ನು ಸುರಕ್ಷಿತವಾಗಿರುವ ನನ್ನ ಚಿಕ್ಕಮ್ಮನ ಮನೆಗೆ ಕರೆದೊಯ್ದಿದ್ದಾರೆಂಬುದು ತಿಳಿದದ್ದು ಪೂರ್ತಿ ಒಂದು ದಿನದ ಪರದಾಟದ ನಂರವಷ್ಟೆ.
ಇಂಥಾ ಪರಿಸ್ಥಿತಿಯಲ್ಲಿ ನಾವೆಲ್ಲ ಒಟ್ಟಾಗಿದ್ದೇವೆ ಎಂದ ಮಾತ್ರಕ್ಕೆ ನಮ್ಮಿಂದ ಯಾವ ತಪ್ಪೂ ಆಗಿಲ್ಲ ಅಂತೇನಲ್ಲ. 2010ರಲ್ಲಿ ಆಗಿನ ಪರಿಸರ ಸಚಿವ ಜೈರಾಮ್ ರಮೇಶ್ ತಮಿಳುನಾಡಿನ ಕೊಟ್ಟಗಿರಿಯಲ್ಲಿ ಒಂದು ಸಭೆ ಕರೆದು ಕೇರಳದಿಂದ ಮಹಾರಾಷ್ಟ್ರಕ್ಕೆ ಹೋಗುವ 1500 ಕಿಲೋಮೀಟರ್ ವ್ಯಾಪ್ತಿಯ ಪಶ್ಚಿಮ ಘಟ್ಟಗಳ ಸಮೀಕ್ಷೆ ನಡೆಸಲು ಗಾಡ್ಗಿಳ್ ಸಮಿತಿ ರಚಿಸಿದರು. ಎಗ್ಗಿಲ್ಲದೆ ನಡೆಯುತ್ತಿರುವ ಕ್ವ್ಯಾರಿ ಉದ್ಯಮ ಆರ್ಥಿಕ ಅಸಮಾನತೆ ಸೃಷ್ಟಿಸುತ್ತಿರುವುದಲ್ಲದೆ ಘನಘೋರ ಪರಿಸರ ಬಿಕ್ಕಟ್ಟಿಗೂ ಕಾರಣವಾಗಲಿದೆ ಎಂದು ಆ ವರದಿ ಸಾರಿಹೇಳಿತು. ಅರಣ್ಯಗಳನ್ನು ಕತ್ತರಿಸುತ್ತ ಬೆಳೆಯಿತು ಲಾಭಕೋರ ಪ್ಲಾಂಟೇಷನ್ ಮುಂದೊಂದು ದಿನ ನಮ್ಮ ಗುಡ್ಡಗಾಡು ನೆಲದಲ್ಲು ಪ್ರವಾಹದ ತಂದೊಡ್ಡಬಹುದೆಂಬುದು ನಮಗೆ ಅರಿವಾಗಲೇ ಇಲ್ಲ. ಆಣೆಕಟ್ಟುಗಳೂ ಸೇರಿದಂತೆ ಆಧುನಿಕ ಅಭಿವೃದ್ಧಿ ಅಪಾಯವಾಗಬಹುದು ಎಂದು ಗಾಡ್ಗಿಲ್ ಸಮಿತಿ ಹೇಳಿತ್ತು. ಗುಡ್ಡಗಳು ಕೆಳಗೆ ಬೀಳುತ್ತಿರುವಾಗ ಜನರು ತಮ್ಮ ಮೊಬೈಲ್ ಫೋನ್‍ಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು!
ಈಗ ನನ್ನಲ್ಲಿ ಒಂದು ಪ್ರಶ್ನೆ ಹುಟ್ಟುತ್ತಿದೆ, ನನ್ನ ಎಲ್ಲಾ ಗಿರಿಗಳು ನೆಲಸಮವಾಗುವ ದಿನವನ್ನೂ ನಾನು ಕಾಣುವಂತಾಗುವುದೇ?
ಬಲಪಂಥೀಯ ಸರಕಾರಕ್ಕೆ ನಮ್ಮ ಮೇಲೆ ಯಾಕಿಷ್ಟು ಅಸಹನೆ. ನೌಕಾಪಡೆಯ ಪೈಲಟ್ ಆಗಿರುವ ನನ್ನ ಕಸಿನ್ ಒಬ್ಬ ಹೇಳಿದ ಮಾತನ್ನು ಇಲ್ಲಿ ಉಲ್ಲೇಖಿಸುತ್ತೇನೆ. ‘ಅಣ್ಣಾ, ಒಬ್ಬ ಆರ್ಮಿ ಪೈಲಟ್ ಆಗಿರುವುದಕ್ಕೆ ನನ್ನನ್ನು ನಾನು ಶಪಿಸುತ್ತಿದ್ದೇನೆ, ಏಕೆ ಗೊತ್ತಾ? ನಾನು ನನ್ನವರ ನೆರವಿಗೆ ಧಾವಿಸಬೇಕೆಂದು ತುದಿಗಾಲಲ್ಲಿದ್ದರು, ಅಲ್ಲಿಗೆ ಹೋಗುವ ಆದೇಶಕ್ಕಾಗಿ ಕಾಯುತ್ತಾ ಕೂರಬೇಕಾಗಿದೆ’!
ಈ ದೇಶದ ನಾಗರಿಕನಾಗಿ ನನಗೊಂದು ಪ್ರಶ್ನೆ ಕಾಡುತ್ತಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬೆಂಬಲವನ್ನು ನಿರಾಕರಿಸುವಂತಹ ಯಾವ ತಪ್ಪು ನಾವು ಮಾಡಿದ್ದೇವೆ? ಸೇನೆಯ ವಿಮಾನ ಹಾರಿಸಿ, ತನ್ನ ಜನರನ್ನು ರಕ್ಷಿಸುವ ಆಸೆಯಿಂದ ತುದಿಗಾಲಲಲ್ಲಿ ನಿಂತಿರುವ ಅವನಿಗೆ ಕೇಂದ್ರದಿಂದ ಯಾಕಿಲ್ಲ ಬೆಂಬಲ? ನಾವು ಎಂದೂ ಬಿಜೆಪಿ ಸರಕಾರವನ್ನು ಆಯ್ಕೆ ಮಾಡಲಿಲ್ಲ ಎನ್ನುವ ಕಾರಣದಿಂದಲೇ? ನೆನಪಿಡಿ ಇದೊಂದು ಪ್ರವಾಹ, ನಮ್ಮ ಇಂಟರ್‍ನೆಟ್ ಸಂಪರ್ಕ ಬಂದಕೂಡಲೇ ಅದೇ ಪ್ರವಾಹದಂತೇ ನಿಮ್ಮನ್ನು ಕೊಚ್ಚಿಕೊಂಡು ಹೋಗುತ್ತೇವೆ. ಈಗಾಗಲೇ ನಿಮ್ಮ ದುಷ್ಟ ಸಂಚನ್ನು ಟ್ರಾಲ್ ಮಾಡಲು ಶುರುಮಾಡಿದ್ದೇವೆ. ಮಲೆಯಾಲಿಗಳ ನಗುವನ್ನು ಕಿತ್ತುಕೊಳ್ಳಲು ನಿಮಗೆ ಸಾಧ್ಯವಿಲ್ಲ. ಯಾಕೆಂದರೆ ಅದು ಸೋದರತೆಯ ತಳಪಾಯದ ಮೇಲೆ ಹುಟ್ಟಿದ ನಗು.
20,000 ಕೋಟಿಗೂ ಹೆಚ್ಚು ಲುಕ್ಸಾನಾಗಿದ್ದರು ನಾವು ಕೇಂದ್ರಕ್ಕೆ ಕೇಳಿದ್ದು 2600 ಕೋಟಿ ರೂಪಾಯಿಗಳ ನೆರವನ್ನಷ್ಟೆ. ಆದರೆ ನೀವು ಘೋಷಿಸಿದ್ದು ಕೇವಲ 100 ಕೋಟಿ. ಟೀಕೆಗಳು ಹೆಚ್ಚಾದ ನಂತರ, ಸ್ವತಃ ಪ್ರಧಾನಿ ಮೋದಿಯ ಭೇಟಿ ನಷ್ಟವನ್ನು ಕಂಡ ನಂತರವೂ ಆ ಪರಿಹಾರವನ್ನು ಹೆಚ್ಚಿಸಿದ್ದು 500 ಕೋಟಿಗಷ್ಟೇ! ಇಂಥಾ ಬಿಕ್ಕಟ್ಟಿನಲ್ಲೂ ತಾನು ನೀಡಿದ ಅಕ್ಕಿಗೆ ಅದರ ಬೆಲೆ ಕೊಟ್ಟೇ ತೀರಬೇಕೆಂದು ಆದೇಶ ಹೊರಡಿಸಿದಿರಿ. ಯು.ಎ.ಇ ನಮಗೆ 700 ಕೋಟಿಗಳ ಸಹಾಯಧನ ನೀಡುವುದಾಗಿ ಘೋಷಿಸಿತು. ಆದರೆ ಹೊರದೇಶದಿಂದ ಬರುವ ಸಹಾಯಧನದ ಪ್ರತೀ ರೂಪಾಯಿಗೂ ಅತ್ಯಂತ ಹೆಚ್ಚಿನ ತೆರಿಗೆ ವಿಧಿಸುವ ಹುನ್ನಾರ ಹೆಣೆದಿರಿ. ರಾಜಕೀಯ ಕಾರಣಕ್ಕಾಗಿ ನಮ್ಮನ್ನು ಒಂಟಿಯಾಗಿಸಲು ಯತ್ನಿಸಿದಿರಿ. ನಾವು ಒಬ್ಬಂಟಿಗರಾಗಲು ಸಾಧ್ಯವಿಲ್ಲ ಸ್ವಾಮಿ. ಏಕೆಂದರೆ ಒಗ್ಗಟ್ಟಿನ ಅಡಿಪಾಯದ ಮೇಲೆಯೇ ಒಂದು ಸಮುದಾಯವಾಗಿ ರೂಪುಗೊಂಡವರು ನಾವು. ತನ್ನನ್ನು ತಾನೇ ಮತ್ತೆ ಕಟ್ಟಿಕೊಳ್ಳಲಿದೆ ನನ್ನ ಸುಂದರ ನಾಡು….

– ಪ್ರದೀಪ್.ಕೆ.ಪಿ
ಪೆಡೆಸ್ಟ್ರಿಯನ್ ಪಿಕ್ಚರ್ಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...