‘ದಿ ಕೇರಳ ಸ್ಟೋರಿ-2 ಗೋಸ್ ಬಿಯಾಂಡ್’ ತಂಡ ಕೇರಳ ಹೈಕೋರ್ಟ್ ನ್ಯಾಯಾಧೀಶರಿಗೆ ಸಿನಿಮಾ ತೋರಿಸಲು ಹಿಂದೇಟು ಹಾಕಿದೆ.
ಮಂಗಳವಾರ (ಫೆ.24) ಬೆಳಗ್ಗಿನ ಅವಧಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಬಿಚು ಕುರಿಯನ್ ಥಾಮಸ್ ಅವರು, “ಸಿನಿಮಾದ ವಿರುದ್ದ ಸಲ್ಲಿಕೆಯಾಗಿರುವ ಮೂರು ಅರ್ಜಿಗಳ ಸಂಬಂಧ ಯಾವುದೇ ಆದೇಶ ಕೊಡುವ ಮೊದಲು ನಾನು ಸಿನಿಮಾ ನೋಡಬೇಕು” ಎಂದಿದ್ದರು.
ಇದಕ್ಕೆ ಒಪ್ಪಿದ್ದ ಸಿನಿಮಾ ತಂಡ “ನಾವು ತೋರಿಸಲು ಸಿದ್ದರಿದ್ದೇವೆ” ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಮೂರ್ತಿ, “ನಾನು ನಾಳೆಯೇ ಸಿನಿಮಾ ನೋಡುತ್ತೇನೆ” ಎಂದಿದ್ದರು. ಹಾಗಾಗಿ, ಮಧ್ಯಾಹ್ನದ ನಂತರದ ವಿಚಾರಣೆಯ ವೇಳೆ ನ್ಯಾಯಾಧೀಶರಿಗೆ ಸಿನಿಮಾ ತೋರಿಸುವ ಸಮಯ ನಿರ್ಧಾರವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ, ಮಧ್ಯಾಹ್ನದ ನಂತರ ವಿಚಾರಣೆ ವೇಳೆ ಹೊಸ ವಿಷಯವನ್ನು ಮುಂದೆ ತಂಡ ಸಿನಿಮಾ ತಂಡ, ನ್ಯಾಯಾಧೀಶರಿಗೆ ಸಿನಿಮಾ ತೋರಿಸುವುದಕ್ಕೆ ಹಿಂದೇಟು ಹಾಕಿದೆ.
ಕಾನೂನು ಸುದ್ದಿ ಸಂಸ್ಥೆ ಬಾರ್ & ಬೆಂಚ್ ವರದಿಯ ಪ್ರಕಾರ, ಮಧ್ಯಾಹ್ನ ನಂತರದ ವಿಚಾರಣೆ ಆರಂಭವಾದಾಗ ಸಿನಿಮಾ ನಿರ್ಮಾಪಕರ ಪರವಾಗಿ ಹಾಜರಾದ ಹಿರಿಯ ವಕೀಲ ಎಸ್. ಶ್ರೀಕುಮಾರ್, “ನ್ಯಾಯಾಲಯದ ಮುಂದಿರುವ ಅರ್ಜಿಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಸ್ವರೂಪದಲ್ಲಿವೆಯೇ ಅಥವಾ ಖಾಸಗಿ ಮೊಕದ್ದಮೆಯ ಸ್ವರೂಪದಲ್ಲಿವೆಯೇ ಎಂಬುವುದನ್ನು ನ್ಯಾಯಾಲಯವು ಮೊದಲು ನಿರ್ಧರಿಸಬೇಕು” ಎಂದು ವಾದಿಸಿದ್ದಾರೆ.
ಈ ಬದಲಾವಣೆಯನ್ನು ಗಮನಿಸಿದ ನ್ಯಾಯಮೂರ್ತಿ ಥಾಮಸ್ ಅವರು, “ನಿರ್ಮಾಪಕರು ನ್ಯಾಯಾಲಯ ಸಿನಿಮಾ ವೀಕ್ಷಿಸುವ ವಿಷಯದಲ್ಲಿ ಆಸಕ್ತಿ ಹೊಂದಿಲ್ಲ” ಎಂದು ಮೌಖಿಕವಾಗಿ ಹೇಳಿದ್ದಾರೆ.
“ನ್ಯಾಯಾಲಯ ಸಿನಿಮಾ ನೋಡಬೇಕೆಂದು ನೀವು ಉತ್ಸುಕರಾಗಿಲ್ಲ. ಈ ಅರ್ಜಿಯು ಖಾಸಗಿ ಮೊಕದ್ದಮೆಯೋ ಅಥವಾ ಸಾರ್ವಜನಿಕ ಮೊಕದ್ದಮೆಯೋ ಎಂಬುವುದರ ಮೇಲೆ ನೀವು ಸಮಸ್ಯೆಯನ್ನು ನಿರ್ಧರಿಸಲು ಬಯಸಿದ್ದೀರಿ” ಎಂದು ನ್ಯಾಯಾಧೀಶರು ಟೀಕಿಸಿದ್ದಾಗಿ ಬಾರ್ & ಬೆಂಚ್ ವರದಿ ಉಲ್ಲೇಖಿಸಿದೆ.
ಪ್ರಸ್ತಾವಿತ ಸಿನಿಮಾ ಪ್ರದರ್ಶನದ ಕುರಿತು ಸಿಬಿಎಫ್ಸಿ ಮತ್ತು ನಿರ್ಮಾಪಕರಿಗೆ ಯಾವುದೇ ಸೂಚನೆಗಳು ಸಿಗದ ಕಾರಣ, ಅರ್ಜಿಗಳ ನಿರ್ವಹಣೆಗೆ ಸಂಬಂಧಿಸಿದ ಪ್ರಾಥಮಿಕ ಸಮಸ್ಯೆಯನ್ನು ಮೊದಲು ಪರಿಗಣಿಸುವುದಾಗಿ ತಿಳಿಸಿದ್ದಾರೆ.
‘ಕೇರಳ ಸ್ಟೋರಿ-2 ಗೋಸ್ ಬಿಯಾಂಡ್’ ಸಿನಿಮಾದ ವಿರುದ್ದ ಕೇರಳ ಹೈಕೋರ್ಟ್ಗೆ ಮೂರು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ.
1. ಮೊದಲ ಅರ್ಜಿಯನ್ನು ಕಣ್ಣೂರು ಜಿಲ್ಲೆಯ ಚಿತ್ತಾರಿಪರಂಬದ ನಿವಾಸಿ 26 ವರ್ಷದ ಜೀವವಿಜ್ಞಾನಿ ಶ್ರೀದೇವ್ ನಂಬೂದಿರಿ ಅವರು ಸಲ್ಲಿಸಿದ್ದಾರೆ.
ಇವರು ತನ್ನ ಅರ್ಜಿಯಲ್ಲಿ, ” ಸಿನಿಮಾದ ಟ್ರೈಲರ್ನಲ್ಲಿ ವಿವಿಧ ರಾಜ್ಯಗಳ ಮಹಿಳೆಯರ ಕಥೆಗಳಿದ್ದರೂ, ಶೀರ್ಷಿಕೆಯಲ್ಲಿ ‘ಕೇರಳ’ ಎಂದು ಬಳಸಿರುವುದು ಇಡೀ ರಾಜ್ಯದ ಜನರನ್ನು ಅಪರಾಧಿಗಳಂತೆ ಬಿಂಬಿಸುತ್ತದೆ ಮತ್ತು ಕೇರಳವನ್ನು ಭಯೋತ್ಪಾದನೆಯ ಕೇಂದ್ರವೆಂದು ತಪ್ಪಾಗಿ ತೋರಿಸುತ್ತದೆ” ಎಂದು ಹೇಳಿದ್ದಾರೆ.
ಟೀಸರ್ನ ಕೊನೆಯಲ್ಲಿರುವ “ಅಬ್ ಸಹೆಂಗೆ ನಹೀ… ಲಡೆಂಗೆ” (ಇನ್ನು ಸಹಿಸುವುದಿಲ್ಲ… ಹೋರಾಡುತ್ತೇವೆ) ಎಂಬ ಸಂಭಾಷಣೆಯು ಸಾರ್ವಜನಿಕರಲ್ಲಿ ದ್ವೇಷ ಮೂಡಿಸುವ ಮತ್ತು ಹಿಂಸೆಗೆ ಪ್ರಚೋದನೆ ನೀಡುವಂತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್ಸಿ) ಸಿನಿಮಾದಿಂದ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯ ಮೇಲೆ ಉಂಟಾಗುವ ಪರಿಣಾಮಗಳನ್ನು ಸರಿಯಾಗಿ ಪರಿಶೀಲಿಸದೆ ಪ್ರಮಾಣಪತ್ರ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.
ಸಿನಿಮಾವು ನೈಜ ಘಟನೆಗಳ ಆಧಾರಿತ ಎಂದು ಹೇಳಿಕೊಳ್ಳುತ್ತಾ, ಕಾಲ್ಪನಿಕ ಭಯವನ್ನು ಕೇರಳ ರಾಜ್ಯದ ಮೇಲೆ ಹೊರಿಸುತ್ತಿದೆ. ಇದು ಕೇರಳದ ಜನರನ್ನು ದೇಶದ ಇತರ ಭಾಗದವರಿಂದ ಪ್ರತ್ಯೇಕಿಸುವ ಪ್ರಯತ್ನ ಎಂದು ಶ್ರೀದೇವ್ ನಂಬೂದಿರಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
2.ಫ್ರೆಡ್ಡಿ ವಿ. ಫ್ರಾನ್ಸಿಸ್ ಎಂಬವರು ಎರಡನೇ ಅರ್ಜಿ ಸಲ್ಲಿಸಿದ್ದು, ಇವರು ಸಿನಿಮಾದ ಬಿಡುಗಡೆಗೆ ತಡೆ ಕೋರಿದ್ದಾರೆ.
ಫ್ರೆಡ್ಡಿ ಅವರು ಈ ಸಿನಿಮಾದ ಶೀರ್ಷಿಕೆ ಮತ್ತು ಪ್ರಚಾರದ ವಿಧಾನವನ್ನು “ದ್ವೇಷದ ಮಾರ್ಕೆಟಿಂಗ್” ಎಂದು ಬಣ್ಣಿಸಿದ್ದಾರೆ. ಮೊದಲ ಭಾಗದ ಬಿಡುಗಡೆಯ ನಂತರ ಜಾಗತಿಕವಾಗಿ ಮಲಯಾಳಿಗಳ ಬಗ್ಗೆ ಉಂಟಾಗಿರುವ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ಈ ಸಿನಿಮಾ ಮತ್ತಷ್ಟು ಕೆರಳಿಸುತ್ತದೆ ಎಂದು ಅವರು ವಾದಿಸಿದ್ದಾರೆ.
ಸಿನಿಮಾದ ಟ್ರೈಲರ್ನಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಮಹಿಳೆಯರ ಕಥೆಗಳಿದ್ದರೂ, ಕೇವಲ ‘ಕೇರಳ’ದ ಹೆಸರನ್ನು ಬಳಸಿರುವುದು ಭಯೋತ್ಪಾದನೆಯನ್ನು ಕೇವಲ ಒಂದು ರಾಜ್ಯಕ್ಕೆ ಸೀಮಿತಗೊಳಿಸಿ ತೋರಿಸುವ ಪ್ರಯತ್ನವಾಗಿದೆ. ಇದು ರಾಜ್ಯದ ಜಾತ್ಯತೀತ ಅಸ್ಮಿತೆಗೆ ದಕ್ಕೆ ತರುವಂತಿದೆ ಎಂದು ಆಕ್ಷೇಪಿಸಿದ್ದಾರೆ.
ಸೆನ್ಸಾರ್ ಮಂಡಳಿಯು 1952ರ ‘ಸಿನಿಮ್ಯಾಟೋಗ್ರಾಫ್ ಆಕ್ಟ್’ ಅಡಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆ ಮತ್ತು ನೈತಿಕತೆಯನ್ನು ಸರಿಯಾಗಿ ಪರಿಶೀಲಿಸದೆ ಸಿನಿಮಾಕ್ಕೆ ಅನುಮತಿ ನೀಡಿದೆ ಎಂದು ಫ್ರೆಡ್ಡಿ ಹೇಳಿದ್ದಾರೆ.
ಈ ಸಿನಿಮಾ ಕೇರಳದ ಜನರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವ ಮೂಲಕ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 21 (ಜೀವಿಸುವ ಹಕ್ಕು) ಅನ್ನು ಉಲ್ಲಂಘಿಸುತ್ತದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
3.ಮೂರನೇ ಅರ್ಜಿಯನ್ನು ವಕೀಲ ಅತುಲ್ ರಾಯ್ ಸಲ್ಲಿಸಿದ್ದಾರೆ. ಈ ಅರ್ಜಿ ಮೊದಲ ಎರಡು ಅರ್ಜಿಗಳೊಂದಿಗೆ ವಿಚಾರಣೆಗೆ ಬಂದಿದೆ.
ಸಿನಿಮಾದ ಶೀರ್ಷಿಕೆಯಲ್ಲಿ ‘ಕೇರಳ’ ಎಂಬ ಪದವನ್ನು ಬಳಸಿರುವುದಕ್ಕೆ ರಾಯ್ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಕಥೆಯು ಇಡೀ ರಾಜ್ಯಕ್ಕೆ ಸಂಬಂಧಿಸಿಲ್ಲದಿದ್ದರೂ, ಈ ಹೆಸರನ್ನು ಬಳಸುವ ಮೂಲಕ ರಾಜ್ಯದ ಘನತೆಗೆ ಧಕ್ಕೆ ತರಲಾಗುತ್ತಿದೆ ಎಂದು ವಾದಿಸಿದ್ದಾರೆ.
ಸೆನ್ಸಾರ್ ಮಂಡಳಿ ಸಿನಿಮಾಕ್ಕೆ ನೀಡಿರುವ ಪ್ರಮಾಣಪತ್ರವನ್ನು ಅವರು ಪ್ರಶ್ನಿಸಿದ್ದಾರೆ. ಸಾರ್ವಜನಿಕ ಸುವ್ಯವಸ್ಥೆ ಮತ್ತು ನೈತಿಕತೆಯ ಮೇಲೆ ಈ ಸಿನಿಮಾ ಬೀರಬಹುದಾದ ಪರಿಣಾಮಗಳನ್ನು ಪರಿಶೀಲಿಸುವಲ್ಲಿ ಮಂಡಳಿಯು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಸಂವಿಧಾನದ ಅಡಿಯಲ್ಲಿ ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿರುವ ಸಮರ್ಥನೀಯ ನಿರ್ಬಂಧಗಳನ್ನು ಈ ಚಿತ್ರವು ಮೀರುತ್ತದೆ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ಅರ್ಜಿಗಳ ವಿಚಾರಣೆ ಇಂದು (ಫೆ.25, ಬುಧವಾರ) ಮುಂದುವರಿಯಲಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.


