Homeಮುಖಪುಟಕೊಡಗು ದುರಂತದ ಹೊಣೆ ಮತ್ತು ಪುನರ್ ನಿರ್ಮಾಣದ ಸವಾಲುಗಳು

ಕೊಡಗು ದುರಂತದ ಹೊಣೆ ಮತ್ತು ಪುನರ್ ನಿರ್ಮಾಣದ ಸವಾಲುಗಳು

- Advertisement -
- Advertisement -

ಕೊಡಗಿನ ದುರಂತಕ್ಕೆ ಎಲ್ಲರೂ ಸ್ಪಂದಿಸಿದ್ದಾರೆ. ಕೇರಳದ ದುರಂತದ ಮುಂದುವರಿಕೆಯೋ ಎಂಬಂತೆ ಕೊಡಗಿನ ಭೂಕುಸಿತ ಘಟಿಸಿದೆ. ನೂರಾರು ಜನ ಮನೆ ತೋಟ ಕಳೆದುಕೊಂಡಿದ್ದರೆ, ಸಾವಿರಾರು ಜನ ಪ್ರಕೃತಿಯ ಮುನಿಸಿಗೆ ಹೆದರಿ ಊರು ಬಿಟ್ಟಿದ್ದಾರೆ. ಸಂಪರ್ಕ ರಸ್ತೆಗಳೆನ್ನುವ ರಸ್ತೆಗಳೆಲ್ಲವೂ ಕುಸಿದು ಹೋಗಿವೆ. ಮುಖ್ಯತಃ ಬಯಲು ಸೀಮೆ ಮತ್ತು ಕರಾವಳಿಯನ್ನು ಸಂಪರ್ಕಿಸುವ ಜೀವ ನಾಡಿಯಂತಿರುವ ಮುಖ್ಯ ಹೆದ್ದಾರಿಗಳು ಸಂಪೂರ್ಣ ನಾಶವಾಗಿವೆ. ಒಟ್ಟಾರೆ ನಷ್ಟವನ್ನು ಅಂದಾಜು ಮಾಡಲು ಇನ್ನಷ್ಟು ಸಮಯ ಬೇಕು. ಕೊಡಗಿನ ದುರಂತದ ತುರ್ತು ಪರಿಹಾರಗಳಿಗೆ ಎಲ್ಲರೂ ಸ್ಪಂದಿಸುತ್ತಿರುವುದು ಶ್ಲಾಘನೀಯ. ಅದರಿಂದಾಚೆ, ಈ ವರ್ಷಾಂತ್ಯದ ವರೆಗೆ ಮತ್ತು ದೀರ್ಘಕಾಲೀನ ಪರಿಹಾರಗಳ ಬಗ್ಗೆಯೂ ಯೋಚಿಸಬೇಕಾಗಿದೆ.
ಈ ಭೂಕುಸಿತ ಅರ್ಧಕ್ಕರ್ಧ ಮನುಷ್ಯ ಹಸ್ತಕ್ಷೇಪದಿಂದ ಎಂಬುದು ನಿರ್ವಿವಾದ. ಕೊಡಗಿನ ಸ್ಥಳೀಯ ಸಂಸ್ಕøತಿ ಉಳಿದ ಮಲೆನಾಡಿನ ಹಾಗೆ ಬಯಲು ಸೀಮೆಗಿಂತ ಭಿನ್ನ. ಎಲ್ಲರೂ ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳುತ್ತಾರೆ. ಅದಕ್ಕೆ ರಸ್ತೆಯನ್ನೂ ಮಾಡಿಕೊಳ್ಳುತ್ತಾರೆ. ಇವೆರಡಕ್ಕೂ ಮನೆ ಹಿಂದಿನ ಗುಡ್ಡವನ್ನು ಬಗೆಯಬೇಕು! ಹಾಗೇ ಸರ್ಕಾರೀ ರಸ್ತೆಗಳು ಅಗಲೀಕರಣಗೊಂಡು ನಿರ್ಮಾಣಗೊಂಡಲ್ಲೆಲ್ಲಾ ರಸ್ತೆಗಳನ್ನು ಭೂಮಿ ನುಂಗಿ ಹಾಕಿದೆ. ಜೆಸಿಬಿಯಂಥಾ ಯಂತ್ರಗಳನ್ನು ಬಳಸಿದ ಕಾರಣ ಭೂಮಿ ಒತ್ತಡಕ್ಕೊಳಗಾಗಿದೆ ಎಂಬ ಅಂಶ ಚರ್ಚಿಸಬೇಕಾದ ಸಂಗತಿ.
ಕಾಫಿ ತೋಟಗಳ ಎಗ್ಗಿಲ್ಲದ ವಿಸ್ತರಣೆ ಇನ್ನೊಂದು ಕಾರಣ. ಈ ವಿಸ್ತರಣೆಯಲ್ಲಿ ಜಮೀನಿನಲ್ಲಿದ್ದ ಕಾಡುಮರಗಳನ್ನು ಬಹುತೇಕ ಟಿಂಬರ್ ಅಂತ ಮಾರಿಯಾಗಿದೆ. ಅಲ್ಲಿ ಉಳಿದಿರುವುದು ಸಿಲ್ವರ್‍ನಂಥಾ ಮೃದು ಮರಗಳು ಮಾತ್ರಾ. ಕೊಡಗಿನ ಮಣ್ಣು ಕೊಂಚ ಮರಳು ಮಿಶ್ರಿತ. ಅದು ಲ್ಯಾಟರೈಟ್ ಕುಲಕ್ಕೆ ಸೇರಿದ್ದಲ್ಲ. ಕೊಡಗಿನ ಅಂಚಿನ ಭಾಗಗಳು ತಾಂತ್ರಿಕವಾಗಿ ಲ್ಯಾಟರೈಟ್ ಆದರೂ ಅದರಲ್ಲಿ ಕ್ಲೇ ಅಂಶ ಯಥೇಚ್ಛ ಇದೆಯಂತೆ. ಈ ಕಾರಣಕ್ಕೇ ಅದು ಬೇಗ ಸಡಿಲವಾಗುತ್ತದೆ. ಮರಗಳು ದೈತ್ಯಾಕಾರವಾಗಿ ಬೆಳೆಯಲೂ ಇದೇ ಕಾರಣ. ಬೇರು ಇಳಿಸುವುದು ಸುಲಭ. ಇವು ಗ್ರಾಮೀಣ ಪರಿಸರದ ಭೂಕುಸಿತದ ಬಗ್ಗೆ.
ಇನ್ನು ಮಡಿಕೇರಿಯಂಥಾ ಪಟ್ಟಣದಲ್ಲಿ ಹೊಸ ಬಡಾವಣೆಗಳ ಮನೆಗಳನ್ನು ಕಟ್ಟುವಾಗ ಜಲ್ಲಿ ಸಿಮೆಂಟ್ ಕಬ್ಬಿಣದ ಮೇಲೆ ವಿಶ್ವಾಸವಿಟ್ಟೇ ಕಟ್ಟಿದ್ದು ಹೊರತು, ಮಣ್ಣಿನ ಗುಣ ಸ್ವಭಾವದ ಬಗ್ಗೆ ಯಾವ ಎಂಜಿನಿಯರೂ ತಲೆ ಕೆಡಿಸಿಕೊಂಡಿಲ್ಲ. ಬೆಂಕಿ ಪೊಟ್ಟಣ ಇಟ್ಟ ಹಾಗೆ ಗುಡ್ಡದ ಇಳಿಜಾರು ಪೂರ್ತಿ ಮನೆಗಳು ಕಟ್ಟಿದ ರೀತಿ ಅಪಾಯವನ್ನು ಮೈಮೇಲೆ ಎಳೆದುಕೊಂಡ ಪರಿಯನ್ನು ಅನಾವರಣಗೊಳಿಸಿದೆ.
ಕುಶಾಲನಗರದಂಥಾ ಊರುಗಳಲ್ಲಿ ನದೀ ಪಾತ್ರದ ಗದ್ದೆಗಳಲ್ಲಿ ಲೇ ಔಟ್ ಮಾಡುವ ಖಯಾಲಿ ಶುರುವಾಗಿದ್ದೇ, ಈ ಬಾರಿ ಅಲ್ಲೆಲ್ಲಾ ನೀರು ನುಗ್ಗಲು ಕಾರಣವಾಗಿದೆ.
ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮಟ್ಟದ ರಸ್ತೆಗಳನ್ನು ನಿರ್ಮಿಸಿದ ರೀತಿ ಎಷ್ಟು ಅವೈಜ್ಞಾನಿಕ ಎಂಬುದಕ್ಕೆ ಈ ರಸ್ತೆಗಳೆಲ್ಲಾ ಸರ್ವ ನಾಶವಾಗಿರುವುದೇ ಪುರಾವೆ. ಇವನ್ನು ಪೋಸ್ಟ್‍ಮಾರ್ಟಮ್ ಎಂದು ಭಾವಿಸೋಣ.
ಮುಂದಿನ ಸರಣಿ ಸಮಸ್ಯೆಗಳೇನು ಎಂಬುದನ್ನು ಗಮನಿಸೋಣ. ಈ ಬಾರಿಯ ಮಳೆಯಿಂದಾಗಿ ಕಾಫಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ನೆಲ ಕಚ್ಚುವ ಸಾಧ್ಯತೆ ನಿಚ್ಚಳವಾಗಿದೆ. ತೋಟಗಳೆಲ್ಲಾ ಅಸ್ತವ್ಯಸ್ತ ಆಗಿರುವ ಕಾರಣ ಇದನ್ನೇ ನಂಬಿರುವ ಸಾವಿರಾರು ಕೂಲಿಕಾರ ಕುಟುಂಬಗಳು ಬೀದಿಗೆ ಬೀಳುತ್ತಾರೆ, ಮುಂದಿನ ಮೂರು ನಾಲ್ಕು ತಿಂಗಳು ಕೂಲಿ ಸೃಷ್ಟಿಯಾಗುವ ಸಾಧ್ಯತೆಗಳೇ ಇಲ್ಲ. ಇದರೊಂದಿಗೆ ಆದಿವಾಸಿಗಳು, ದಲಿತ ಕಾರ್ಮಿಕರ ಗುಡಿಸಲುಗಳೆಲ್ಲಾ ಮೂರಾಬಟ್ಟೆ ಆಗಿರುವ ವರದಿಗಳಿವೆ. ಇವೆಲ್ಲಾ ಫೋಟೋಜೆನಿಕ್ ಅಲ್ಲದ ಕಾರಣ ಟಿವಿ ಚಾನೆಲುಗಳ ಕಣ್ಣಿಗೆ ಬಿದ್ದಿಲ್ಲ.
ಊರಿನ ಸಂಪರ್ಕ ರಸ್ತೆಗಳೆಲ್ಲಾ ನಾಶವಾಗಿರುವ ಕಾರಣ ಹೊರಹೋಗಲೂ ವ್ಯವಸ್ಥೆ ಇಲ್ಲ. ಸ್ಥಳೀಯವಾಗಿ ಸಂಪನ್ಮೂಲಗಳೂ ಇಲ್ಲ. ನೆನಪಿಡಿ, ಮಳೆಗಾಲದ ಅರ್ಧ ಮಾತ್ರಾ ಮುಗಿದಿದೆ. ಸುಮಾರಾಗಿ ಕಾವೇರಿ ಸಂಕ್ರಮಣದವರೆಗೂ ಕೊಡಗಲ್ಲಿ ಮಳೆ ಬರುತ್ತಿರುತ್ತದೆ. ಈ ಒಂದೊಂದು ಮಳೆಯೂ ಹಸಿ ಮಣ್ಣನ್ನು ಇನ್ನಷ್ಟು ತೇವಗೊಳಿಸುವ ಶಕ್ತಿ ಹೊಂದಿದೆ.
ಅರ್ಥಾತ್ ಈ ಕುಟುಂಬಗಳಿಗೆ ಮುಂದಿನ ಕನಿಷ್ಠ ಆರು ತಿಂಗಳು ಸಹಾಯ ಹಸ್ತ ಬೇಕು. ಅಷ್ಟೇ ಅಲ್ಲ, ಮನೆ, ರಸ್ತೆ ನಿರ್ಮಿಸುವುದೆಂದರೆ ಏನಿದ್ದರೂ ಸಂಕ್ರಾಂತಿ ಕಳೆಯಬೇಕು. ಅಂದರೆ ಈ ಬೇಸಿಗೆಯಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಸಹಾಯ ಬೇಕು. ಮಲೆನಾಡಿನಲ್ಲಿ ಮನೆ ಕಟ್ಟಿಸುವುದೆಂದರೆ ಮನೆಯೊಂದಕ್ಕೆ ಕನಿಷ್ಠ ಐದು ಲಕ್ಷ ಬೇಕು. ಇನ್ನು ಭೂಕುಸಿತ ನಿರೋಧಕ ರೀತಿಯಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಮರುಚಿಂತನೆ ನಡೆಯಬೇಕಾಗಿದೆ. ಇದು ಗ್ರಾಮೀಣ ಪರಿಸರದ ಬಡವರ ಬದುಕು ಕಟ್ಟುವ ಬಗ್ಗೆ. ನಾಶವಾದ ತೋಟಗಳ ಮರು ಸೃಷ್ಟಿಗೆ ರ್ದೀಕಾಲೀನ ಹಣಕಾಸಿನ ನೆರವು ಬೇಕು.
ಇನ್ನೊಂದೆಡೆ ಸಂಪರ್ಕ ರಸ್ತೆಗಳನ್ನು ಸರ್ಕಾರ ಮರು ನಿರ್ಮಿಸಲು ಸಮರೋಪಾದಿಯಲ್ಲಿ ತಯಾರಾಗಬೇಕು. ಮಡಿಕೇರಿ-ಸುಳ್ಯ, ಮಡಿಕೇರಿ-ಸೋಮವಾರಪೇಟೆ-ಸಕಲೇಶಪುರ ; ಬಿಸಿಲೆ- ಸುಬ್ರಮಣ್ಯ ರಸ್ತೆಗಳು ಸಂಪೂರ್ಣ ಪಾತಾಳಕ್ಕಿಳಿದಿವೆ. ಇವನ್ನು ನಿರ್ಮಿಸಲು ವೆಚ್ಚ ಮಾಡಿದ್ದಕ್ಕಿಂತ ಹೆಚ್ಚು ರಿಪೇರಿ ಮಾಡಲು ವೆಚ್ಚ ಮಾಡಬೇಕಿದೆ. ಮತ್ತೆ ಅದೇ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಿಸಿದರೆ ಘೋರ ಭವಿಷ್ಯದ ಅಪಾಯಕ್ಕೆ ಮುನ್ನುಡಿ ಬರೆದ ಹಾಗೆಯೇ ಸೈ. ಅಂದರೆ ಇಡೀ ಪುನರ್ನಿರ್ಮಾಣ ಪರಿಸರ ಸಂವೇದೀ ಸೂಕ್ಷ್ಮಗಳನ್ನು ಒಳಗೊಳ್ಳಬೇಕಾಗಿದೆ.
ಪರಿಹಾರ ಕಾಮಗಾರಿಗಳ ಜವಾಬ್ದಾರಿ ಗಮನಿಸಿದರೆ, ಲೋಕೋಪಯೋಗಿ ಇಲಾಖೆ, ಸಮಾಜಕಲ್ಯಾಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಜವಾಬ್ದಾರಿ ಹೆಚ್ಚು. ಅನುದಾನವೂ ಇದೇ ರಿತಿಯಲ್ಲಿ ಹರಿದು ಬರಲಿದೆ. ಈ ಇಲಾಖೆಗಳಿಗೆ ಅನುಕಂಪ ಬಿಡಿ, ದಕ್ಷತೆ ಇರುವ ಪುರಾವೆಯೂ ಇಲ್ಲ. ಇದರೊಂದಿಗೇ ಕೊಕ್ಕೆ ಹಾಕುವ ಮೂಲಕ ಕಾಮಗಾರಿಗಳನ್ನು ತ್ರಿಶಂಕು ಸ್ಥಿತಿಯಲ್ಲಿಡುವ ಸಾಮಥ್ರ್ಯ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳಿಗಿವೆ. ಇವೆರಡೂ ಇಲಾಖೆಗಳ ಆದಾಯ ಮೂಲವೇ ಇದು. ಈ ಇಲಾಖೆಗಳಿಗೆ ಇಡೀ ಕೊಡಗು ಜಿಲ್ಲೆಯೇ ಒಂದು ಊಟದ ತಟ್ಟೆಯ ಹಾಗೆ ಕಂಡರೆ ಅಚ್ಚರಿ ಇಲ್ಲ!
ರೈತರ ಸಾಲಮನ್ನಾ ಮಾಡಿ ಈಗಾಗಲೇ ನಿರ್ಧನ ಯೋಗದಲ್ಲಿರುವ ರಾಜ್ಯ ಸರ್ಕಾರ ಪರಿಹಾರ ಕಾಮಗಾರಿಗಳಿಗೆ ಕನಿಷ್ಠ 2-3 ಸಾವಿರ ಕೋಟಿ ವಿನಿಯೋಗಿಸಬೇಕಿದೆ. ಕೇಂದ್ರದ ಅನುದಾನ ದೊಡ್ಡ ಮಟ್ಟದಲ್ಲಿ ಬಂದರೆ ಪರಿಸ್ಥಿತಿ ಸುಧಾರಿಸೀತು. ಆದರೆ ಪುನರ್ನಿರ್ಮಾಣ ಏನಿದ್ದರೂ ಜನವರಿಯಿಂದಾಚೆ ಎಂಬ ಸತ್ಯದೊಂದಿಗೆ ಲೋಕಸಭಾ ಚುನಾವಣೆಯ ಭರಾಟೆ ನೆನಪಿಸಿಕೊಂಡರೆ ಪರಿಹಾರ ಎಷ್ಟರ ಮಟ್ಟಿಗೆ ಸಕಾಲದಲ್ಲಿ ಪೂರೈಸೀತು ಎಂಬ ಚಿಂತೆ ನಮ್ಮನ್ನು ಕಾಡಬೇಕು.
ಆದ್ದರಿಂದಲೇ ನಾವು ಈ ಆಡಳಿತ ಯಂತ್ರದ ನಡೆಗಳ ಮೇಲೆ ಕಣ್ಣಿಡಲು ಸನ್ನದ್ಧರಾಗಬೇಕಿದೆ.

 

– ಕೆ.ಪಿ.ಸುರೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...