Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಸ್ವಾಮಿ ಅಗ್ನಿವೇಶ್ ಮೇಲಿನ ದಾಳಿಯಿಂದ ಭಾರತೀಯರು ಎಚ್ಚೆತ್ತುಕೊಳ್ಳಲಿ...

ಸ್ವಾಮಿ ಅಗ್ನಿವೇಶ್ ಮೇಲಿನ ದಾಳಿಯಿಂದ ಭಾರತೀಯರು ಎಚ್ಚೆತ್ತುಕೊಳ್ಳಲಿ…

- Advertisement -
- Advertisement -

ಯಾವುದೋ ನೆಪದಲ್ಲಿ ಅಸಹಾಯಕ ಒಬ್ಬಂಟಿಗಳ ಮೇಲೆ ಗುಂಪುಗೂಡಿ ಹಲ್ಲೆ ಮಾಡುವ ಘಟನೆಗಳು ನಿತ್ಯದ ಸುದ್ದಿಯಾಗಿಬಿಟ್ಟಿವೆ. ದನದ ಹೆಸರಿನಲ್ಲಿ ಮುಸ್ಲಿಮರು ಮತ್ತು ದಲಿತರನ್ನು, ಮಕ್ಕಳ ಕಳ್ಳರ ಹೆಸರಿನಲ್ಲಿ ಯಾವುದೋ ದಾರಿಹೋಕರನ್ನು ಬಡಿದು ಕೊಲ್ಲುವ ಸುದ್ದಿಗಳು ಮಾಮೂಲಿಯಾಗಿಬಿಟ್ಟಿದೆ. ಬಿಜೆಪಿ ಮಂತ್ರಿಗಳು ಶಾಸಕರೇ ಇಂಥ ಗುಂಪು ಹತ್ಯಾಕೋರರಿಗೆ ಬಹಿರಂಗವಾಗಿ ಹಾರಹಾಕಿ ಸನ್ಮಾನ ಮಾಡುತ್ತಿದ್ದು, ಈ ಗುಂಪುಹತ್ಯೆಗಳಿಗೂ ಬಿಜೆಪಿ ಸರ್ಕಾರಗಳಿಗೂ ಇರುವ ಸಂಬಂಧವನ್ನು ಬಿಚ್ಚಿಡುತ್ತಿವೆ.
ಆದರೆ ಹಿಂದೂ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ಇದೇ ಬಿಜೆಪಿಗೆ ಸೇರಿದ ಪುಂಡರ ಗುಂಪುಗಳು ಕಾವಿಧಾರಿ ಧಾರ್ಮಿಕ ಸಂತ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಹಲ್ಲೆ ಮಾಡಿದ್ದರ ಹಿನ್ನೆಲೆಯಾದರೂ ಏನು? ಅವರ ಮೇಲೆ ಕಳೆದ ಒಂದು ತಿಂಗಳಲ್ಲಿ ಎರಡು ಬಾರಿ ಹಲ್ಲೆ ಮಾಡಲಾಗಿದೆ, ಜುಲೈ 17ರಂದು ಜಾರ್ಖಂಡ್‍ನಲ್ಲಿ ಹಾಗೂ ಆಗಸ್ಟ್ 17ರಂದು ನವದೆಹಲಿಯಲ್ಲಿ, ಅದೂ ವಾಜಪೇಯಿಯವರ ಅಂತಿಮ ದರ್ಶನಕ್ಕೆಂದು ತೆರಳಿದ್ದ ವೇಳೆಯಲ್ಲಿ. ಅಂತ್ಯಸಂಸ್ಕಾರಕ್ಕೆ ತಮ್ಮ ವಿರೋಧಿಗಳೇ ಬಂದರೂ ಅವರನ್ನು ಗೌರವದಿಂದ ಕಾಣುವುದು ನಮ್ಮ ಸಂಸ್ಕøತಿ. ಹೀಗಿರುವಾಗ ಅಂಥಾ ಸಂದರ್ಭದಲ್ಲಿ ಧಾರ್ಮಿಕ ಗುರುವೊಬ್ಬರ ಮೇಲೆ ದಾಳಿ ಮಾಡಿಸಬೇಕೆಂದರೆ ಬಲವಾದ ಕಾರಣಗಳಿರಲೇ ಬೇಕಲ್ಲವೆ?
ಸ್ವಾಮಿ ಅಗ್ನಿವೇಶ್ ಅವರೇ ಮಾಧ್ಯಮಗಳಿಗೆ ಪತ್ರ ಬರೆದು ಈ ವಿದ್ಯಮಾನವನ್ನು ವಿವರಿಸಿದ್ದಾರೆ.
“ಪಾಕೂರಿನಲ್ಲಿ ನನ್ನ ಮೇಲೆ ಹಲ್ಲೆಯಾದ ಒಂದು ತಿಂಗಳ ನಂತರ, ಕಳೆದ ಶುಕ್ರವಾರ ನಾನು ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹೋಗಿದ್ದಾಗ, ದೆಹಲಿಯ ಬಿಜೆಪಿ ಮುಖ್ಯ ಕಛೇರಿಯ ಮುಂದೆ ಪಕ್ಷದ ಕಾರ್ಯಕರ್ತರ ಒಂದು ಗುಂಪನ್ನು ನನ್ನ ಮೇಲೆ ಛೂ ಬಿಡಲಾಯಿತು. ನಾನು ಕಛೇರಿಯ ಭವನದತ್ತ ನಡೆದು ಹೋಗುತ್ತಿದ್ದಾಗ ನನ್ನನ್ನು ಸುತ್ತುವರೆದು ನನ್ನ ಶಾಲು ಮತ್ತು ಪೇಟವನ್ನು ಎಳೆದು ಹಾಕಿದರು. ನನ್ನನ್ನು ಒಬ್ಬ ದೇಶದ್ರೋಹಿ ಎಂದು ನಿಂದಿಸುತ್ತಾ ಹಲ್ಲೆ ಮಾಡಿದರು. ಅವರು ವಾಸ್ತವದಲ್ಲಿ ವಾಜಪೇಯಿಯವರ ನೆನಪು ಮತ್ತು ಪರಂಪರೆಗೆ ಅವಮಾನ ಮಾಡಿದ್ದರು.
ಜುಲೈ 17ರಂದು ಪಾಕೂರಿನಲ್ಲಿ ನನ್ನ ಮೇಲೆ ಹಲ್ಲೆಯಾದ ತಕ್ಷಣ, ಜಾರ್ಖಂಡ್‍ನ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿರುವ ಸಿ.ಪಿ.ಸಿಂಗ್ ಅದನ್ನು ಸಮರ್ಥಿಸಿಕೊಳ್ಳುತ್ತಾ ನನ್ನನ್ನು ವಿದೇಶಿ ದುಡ್ಡಿನಿಂದ ಬದುಕುತ್ತಿರುವ ಒಬ್ಬ ‘ಕಪಟ ಸನ್ಯಾಸಿ’ ಎಂದು ಜರೆದಿದ್ದರು. ನನ್ನ ಮೇಲೆ ಹಲ್ಲೆಮಾಡಿದವರ ಜತೆ ತಾವೂ ಶಾಮೀಲಾಗಿದ್ದೇವೆ ಎಂಬುದನ್ನು ತೀರಾ ಎಡವಟ್ಟಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡ ರೀತಿ ಇದು. ಅವರು ಹೀಗೆ ಒಪ್ಪಿಕೊಳ್ಳದಿದ್ದರೂ, ರಾಜಕಾರಣಿಗಳ ಬೆಂಬಲವಿಲ್ಲದೆ ನಾಗರಿಕನೊಬ್ಬನ ಮೇಲೆ ಹೀಗೆ ಹಾಡಹಗಲೇ ಪೂರ್ವನಿಯೋಜಿತ ಹಿಂಸೆ ನಡೆಯಲು ಸಾಧ್ಯವಿಲ್ಲ ಎನ್ನುವುದು ಸ್ವಯಂವೇದ್ಯ. ಈ ಹಿಂಸೆ ಸ್ವಯಂಪ್ರೇರಿತವಾಗಿ ನಡೆಯಿತು ಎಂಬುದು ಅಪ್ಪಟ ಸುಳ್ಳು. ಪ್ರೀತಿ ಮಾತ್ರ ತನ್ನಿಂದತಾನೆ ಮೂಡಬಲ್ಲದು. ಅದಕ್ಕೆ ನೋಡಿ, ‘ಮೊದಲ ನೋಟದ ಪ್ರೇಮ’ ಎಂಬ ಸೊಗಸಾದ ಪರಿಕಲ್ಪನೆ ಇದೆ. ಮೊದಲ ನೋಟದಲ್ಲಿ ಎಂದಿಗೂ ದ್ವೇಷ ಮೂಡಿಬರಲು ಸಾಧ್ಯವಿಲ್ಲ. ಹಿಂಸೆಯು ನಿಸರ್ಗಕ್ಕೆ ವಿರುದ್ಧವಾದುದು. ವೈಚಾರಿಕತೆ, ಕರುಣೆ ಮತ್ತು ಇನ್ನೊಬ್ಬರನ್ನು ಗೌರವಿಸುವ ಮಾನವೀಯತೆಯನ್ನು ತುಳಿದು ಹತ್ತಿಕ್ಕಿದ ನಂತರವೇ ಹಿಂಸೆ ಶುರುವಾಗುತ್ತದೆ. ನಿಶಸ್ತ್ರರಾದ ಮನುಷ್ಯರ ಮೇಲೆ ನಡೆಯುವ ಹಿಂಸೆಯನ್ನು ಮಾನವೀಯತೆಯ ವಿರುದ್ಧದ ಹಿಂಸಾಚಾರ ಎಂದೇ ನಾವು ಭಾವಿಸಬೇಕಾಗುತ್ತದೆ….
ಪಾಕೂರ್ ದಾಳಿ ನಡೆದು ಒಂದು ತಿಂಗಳಾದರೂ ಎಫ್‍ಐಆರ್‍ನಲ್ಲಿ ಉಲ್ಲೇಖಿಸಿರುವ ಎಂಟು ಮಂದಿಯ ಪೈಕಿ ಯಾರೊಬ್ಬರನ್ನೂ ಈವರೆಗೆ ಬಂಧಿಸಿಲ್ಲ.”
ನೆನಪಿಡಿ, ಈ ದಾಳಿ ನಡೆದದ್ದು ಹಾಡಹಗಲಿನಲ್ಲಿ. ಹಲ್ಲೆಯ ಘಟನಾವಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣದ ತುಂಬಾ ಹರಿದಾಡುತ್ತಿವೆ. ಮೇಲಾಗಿ ಹಲ್ಲೆ ಮಾಡಿದವರನ್ನು ಗುರುತಿಸಿ, ಅವರ ಹೆಸರುಗಳನ್ನೂ ಪೊಲೀಸ್ ದೂರಿನಲ್ಲಿ ನಮೂದಿಸಲಾಗಿದೆ. ಸರ್ಕಾರವೇ ಮುಂದೆ ನಿಂತು ಈ ದಾಳಿ ನಡೆಸಿದೆ ಎಂದು ನಂಬಲು ಇಷ್ಟು ಸಾಕು.
ಸ್ವಾಮಿ ಅಗ್ನಿವೇಶ್‍ರನ್ನು ‘ಹಿಂದೂ ವಿರೋಧಿ’ ಎಂದು ಬ್ರಾಂಡ್ ಮಾಡುವ ಕೆಲಸ ಎಗ್ಗಿಲ್ಲದೆ ಸಾಗಿದೆ. ಹಾಗಿದ್ದರೆ ಅಗ್ನಿವೇಶ್ ಅವರು ಬಯಸುವ ಹಿಂದೂ ಧರ್ಮಕ್ಕೂ ಆರೆಸ್ಸೆಸ್-ಬಿಜೆಪಿಗಳು ಬಯಸುತ್ತಿರುವ ಹಿಂದೂ ಧರ್ಮಕ್ಕೂ ಏನು ವ್ಯತ್ಯಾಸ?
ಅಗ್ನಿವೇಶ್ ಬರೆಯುತ್ತಾರೆ: “ಸಾಮಾಜಿಕ ನ್ಯಾಯಕ್ಕಾಗಿ ಬದುಕು ಮುಡಿಪಿಟ್ಟಿರುವ ನಾನು ಆರ್‍ಎಸ್‍ಎಸ್ ಪಾಲಿಗೆ ಬಹುಕಾಲದಿಂದ ಕಣ್ಣುಬೇನೆಯಾಗಿದ್ದೇನೆ. ನ್ಯಾಯಕ್ಕಾಗಿ ದನಿಯೆತ್ತುವ ಆದರ್ಶವು ಆರ್‍ಎಸ್‍ಎಸ್‍ಗೆ ಸದಾ ಇರಿಸುಮುರಿಸು ಉಂಟುಮಾಡುತ್ತದೆ. ಕೆಳಜಾತಿಗಳು ಮತ್ತು ಬುಡಕಟ್ಟು ಜನಾಂಗಗಳನ್ನು ಎರಡನೇ ದರ್ಜೆ ನಾಗರಿಕರು ಎಂದು ಭಾವಿಸುವ ಆರ್‍ಎಸ್‍ಎಸ್‍ನ ಜಾತಿವಾದೀ ಸಿದ್ಧಾಂತವು ಸಾಮಾಜಿಕ ನ್ಯಾಯದ ವಿರುದ್ಧ ಇದೆ. ನ್ಯಾಯದ ಪರಿಕಲ್ಪನೆಯ ಹಿಂದೆ ಸಮಾನತೆಯ ತತ್ವವು ಯಾವಾಗಲೂ ಅಡಕವಾಗಿರುತ್ತದೆ. ತನ್ನ ಹುಟ್ಟಿನಿಂದಲೂ ಜರ್ಮನಿಯ ಹಿಟ್ಲರ್‍ನಿಂದ ಎರವಲು ಪಡೆದ ಸಾಂಸ್ಕೃತಿಕ ರಾಷ್ಟ್ರೀಯತೆಯ ಸಿದ್ಧಾಂತವನ್ನು ಪ್ರತಿಪಾದಿಸುವ ಆರ್‍ಎಸ್‍ಎಸ್ ಸಿದ್ಧಾಂತವು ಅಸಮಾನತೆಯನ್ನೇ ಎತ್ತಿ ಹಿಡಿಯುತ್ತದೆ. ಈ ತತ್ವ ಭಾರತದ ನೆಲಕ್ಕೆ ಒಗ್ಗುವುದಿಲ್ಲ. ಭಾರತದಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಊಳಿಗಮಾನ್ಯ ಪದ್ಧತಿಗೆ ಭಾರತ ಜೋತು ಬೀಳಬೇಕು ಎಂದು ಆರ್‍ಎಸ್‍ಎಸ್ ಬಯಸುತ್ತದೆ. ಮೇಲ್ಜಾತಿಗಳಿಗೆ ಅರ್ಹವೂ ಮತ್ತು ನ್ಯಾಯಸಮ್ಮತವೂ ಅಲ್ಲದ ಅನುಕೂಲ ಮಾಡಿಕೊಡಲು ಸಮಾಜದ ಇತರೆಲ್ಲ ಸಮುದಾಯಗಳನ್ನು ಹೀಗಳೆಯುತ್ತದೆ. ವೈದಿಕ ಪರಂಪರೆ ಮತ್ತು ಭಾರತದ ಮೂಲ ಅಧ್ಯಾತ್ಮಕ್ಕೆ ಆರ್‍ಎಸ್‍ಎಸ್ ಒಂದು ದುಷ್ಟ ವಿಪತ್ತು ಎಂಬ ವಿಚಾರದಲ್ಲಿ ನನಗೆ ಎಂದಿಗೂ ಗೊಂದಲ ಇರಲಿಲ್ಲ. ಆರ್‍ಎಸ್‍ಎಸ್ ಕುರಿತಂತೆ ಇರುವ ನನ್ನ ತಕರಾರು ಅಧ್ಯಾತ್ಮಿಕವಾದುದು.
ನಾನು ಪ್ರತಿಪಾದಿಸುವ ಅಧ್ಯಾತ್ಮ ಚಿಂತನೆಯು ಭಾರತೀಯ ಸಮಾಜದಲ್ಲಿನ ಮೂಢನಂಬಿಕೆ, ಜಾತಿಪದ್ಧತಿ, ಜೀತಗಾರಿಕೆ, ಬಡವರು ಮತ್ತು ನಿರ್ಗತಿಕರ ಶೋಷಣೆಗಳನ್ನು ತೊಲಗಿಸಬೇಕು ಎಂದು ಕರೆ ನೀಡುತ್ತದೆ. ದಲಿತರು ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಹೇಳುತ್ತದೆ. ಜೀತ ಪದ್ದತಿಯಲ್ಲಿ ಬಂಧಿತರಾದವರ ವಿಮೋಚನೆಗಾಗಿ ಮತ್ತು ಪುನರ್‍ವಸತಿಗಾಗಿ ಅದು ಧ್ವನಿ ಎತ್ತುತ್ತದೆ. ಸಾರ್ವಜನಿಕ ಜೀವನದಲ್ಲಿ ವೈದಿಕ ಅಧ್ಯಾತ್ಮದ ಬೆಳಕು ಮೂಡಬೇಕು ಎಂದು ಆಶಿಸುತ್ತದೆ. ನಮ್ಮ ಇಂಥ ಕೆಲಸಗಳಿಗಾಗಿಯೇ ನಾನು ಮತ್ತು ನನ್ನ ಸಹಚರ ಸ್ವಾಮಿ ಇಂದ್ರವೇಶ್ ಅವರು ಮಾಕ್ರ್ಸ್‍ವಾದಿಗಳು, ಮಾವೋವಾದಿಗಳು, ಅಲ್ಪಸಂಖ್ಯಾತರ ನಿಷ್ಠರು, ಡೊಂಗಿಸ್ವಾಮಿಗಳು, ಯಾವುದೋ ವಿದೇಶಿ ಶಕ್ತಿಗಳ ಏಜೆಂಟರು ಎಂಬ ಹಣೆಪಟ್ಟಿ ಹೊತ್ತುಕೊಂಡೆವು.
ಪ್ರಸ್ತುತ ಸಮಾಜದಲ್ಲಿ ಅಧ್ಯಾತ್ಮದ ಜ್ಞಾನ ಮತ್ತು ಸಾಮಾಜಿಕ ಕ್ರಿಯೆಗಳ ನಡುವೆ ದೊಡ್ಡ ಕಂದಕ ಏರ್ಪಟ್ಟಿದೆ. ಹೀಗಾಗಿ ಅಧ್ಮಾತ್ಮದ ಜ್ಞಾನ ಇರುವವರು ಸಾಮಾಜಿಕ ಹೊಣೆಗಾರಿಕೆಗಳಿಗೆ ವಿಮುಖರಾಗಿ ಪರ್ವತ ಶಿಖರಗಳ ಮೇಲೆ ಅಥವಾ ಕಾಡಿನಲ್ಲಿ ಏಕಾಂಗಿಯಾಗಿ ನೆಲೆಸಬೇಕು ಎಂಬ ತಪ್ಪುಕಲ್ಪನೆ ಜನಜನಿತವಾಗಿದೆ.
ಇದರ ಜೊತೆಜೊತೆಗೆ ಅವತಾರಗಳ ಪರಿಕಲ್ಪನೆಯೂ ನಮ್ಮ ಧರ್ಮದಲ್ಲಿ ಇದೆ. ಕಾಲಕಾಲಕ್ಕೆ ಅಧರ್ಮದಿಂದ ನಮ್ಮನ್ನು ಧರ್ಮದ ಮಾರ್ಗಕ್ಕೆ ನಡೆಸಲು ದೇವರು ಭೂಮಿಗೆ ಬರುತ್ತಾನೆ ಎನ್ನುವ ನಂಬಿಕೆ ಅವತಾರದ ಪರಿಕಲ್ಪನೆಯ ಮುಖ್ಯ ಅಂಶ. ಹೀಗಾಗಿಯೇ ಅಧ್ಯಾತ್ಮ ಮತ್ತು ಸಾಮಾಜಿಕ ವಾಸ್ತವಗಳು ಪರಸ್ಪರ ಬೆಸೆದುಕೊಂಡಿವೆ ಮತ್ತು ಇವೆರೆಡೂ ಒಂದಕ್ಕೊಂದು ವಿರುದ್ಧವಾದ ಪರಿಕಲ್ಪನೆಗಳೇನಲ್ಲ ಎಂಬುದು ನಮಗೆಲ್ಲ ತಿಳಿದಿರುವ ಸಂಗತಿಯೇ. ಆದರೆ ಧಾರ್ಮಿಕ ಲೋಕದÀಲ್ಲಿ ಮೇಲ್ಚಾತಿ ಮತ್ತು ಮೇಲ್‍ವರ್ಗಗಳ ಪ್ರಾಬಲ್ಯ ಇರುವುದರಿಂದ ತಮಗೆ ಅನುಕೂಲಕರವಾಗಿರುವ ಯಥಾಸ್ಥಿತಿವಾದಿ ಧಾರ್ಮಿಕತೆಯನ್ನು ಜನತೆಯ ಮೇಲೆ ಹೇರುತ್ತಿದ್ದಾರೆ. ಇದರಿಂದಾಗಿಯೇ ನಮ್ಮ ಅಧ್ಯಾತ್ಮ ದೃಷ್ಟಿಕೋನದಲ್ಲಿ ಭಿನ್ನಮತಗಳು ತಲೆದೋರಿವೆ.
ಉದಾಹರಣೆಗೆ ವೈದಿಕ ಪರಿಕಲ್ಪನೆಯಾದ ‘ವಸುಧೈವ ಕುಟುಂಬಕಂ’ ತೆಗೆದುಕೊಳ್ಳಿ. ಇದು ಭಾರತದ ಅಧ್ಯಾತ್ಮ ದೃಷ್ಟಿಕೋನವನ್ನು ಸಮಗ್ರವಾಗಿ ಹಿಡಿದಿಡುತ್ತದೆ. ಇದನ್ನು ನಮ್ಮ ಆಧ್ಯಾತ್ಮದ ತಿರುಳು ಎಂದರೂ ಸರಿ. ಬ್ರಹ್ಮ ಒಬ್ಬನೇ ಸತ್ಯ ಮತ್ತು ಜಗತ್ತಿನಲ್ಲಿರುವ ಎಲ್ಲ ಜೀವಗಳು ಆ ಸತ್ಯದ ವಿವಿಧ ಅಭಿವ್ಯಕ್ತಿಗಳು ಎನ್ನುವುದನ್ನು ಈ ಪರಿಕಲ್ಪನೆ ಸಾರಿ ಹೇಳುತ್ತದೆ. ಹೀಗಿರುವಾಗ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿರುವ ತಾರತಮ್ಯ ಮತ್ತು ದಮನವನ್ನು ಸಮರ್ಥಿಸಿಕೊಳ್ಳುವುದಾದರೂ ಹೇಗೆ ಸಾಧ್ಯ?
ಆದ್ದರಿಂದ ಕಟ್ಟಳೆಗಳಿಂದ ಕೂಡಿದ ಧಾರ್ಮಿಕತೆಗೂ ಮತ್ತು ಅಧ್ಯಾತ್ಮ ಚಿಂತನೆಗೂ ನಡುವೆ ಒಂದು ಧಾರ್ಮಿಕ ನಿಯಂತ್ರಣ ರೇಖೆ ಎಳೆಯುವ ಅನಿವಾರ್ಯತೆ ಉಂಟಾಗುತ್ತದೆ. ವೇದದ ಪಠ್ಯಗಳನ್ನು ಸರಿಯಾಗಿ ಗ್ರಹಿಸಿ, ಅದರ ಆಶಯಗಳನ್ನು ಅರಿತುಕೊಂಡವರು ಪ್ರೀತಿ, ನ್ಯಾಯ, ಸತ್ಯ ಮತ್ತು ಕರುಣೆಯೇ ನಮ್ಮ ಆಧ್ಯಾತ್ಮದ ಸಾರ ಎಂದು ವೇದಗಳು ಸಾರಿ ಹೇಳುತ್ತವೆ ಎಂಬುದನ್ನೂ, ಇದೇ ಅಧ್ಮಾತ್ಮದ ಮೂಲ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ. ದುರಂತವೆಂದರೆ ಜಾತಿವಾದ, ಮೂಢನಂಬಿಕೆಗಳಿಂದ ತುಂಬಿ ತುಳುಕುತ್ತಿರುವ, ಮಾನವೀಯ ಮೌಲ್ಯಗಳ ಬಗೆಗೆ ಕಿವುಡು ಮತ್ತು ಕುರುಡಾಗಿರುವ ಡಾಂಭಿಕ ಧಾರ್ಮಿಕತೆ ಈ ಸತ್ಯವನ್ನು ಮುಚ್ಚಿಹಾಕಿಬಿಟ್ಟಿದೆ.
ಈ ನೆಲದ ಆದಿವಾಸಿಗಳು ನಡೆಸುತ್ತಿರುವ ಸಂಘರ್ಷಗಳನ್ನು ಬೆಂಬಲಿಸುವ ನನ್ನ ನಿರ್ಧಾರಕ್ಕೆ ಅಧ್ಯಾತ್ಮದ ಹಿನ್ನೆಲೆ ಇದೆ. ಅದು ರಾಜಕಾರಣ ಅಲ್ಲ. ರಾಜಕಾರಣ ಅಧ್ಯಾತ್ಮವಲ್ಲ ಎಂಬ ನನ್ನ ನಿಲುವಿನ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ರಾಜಕಾರಣಕ್ಕೆ ಅಧ್ಯಾತ್ಮದ ತಳಹದಿ ಇರಬೇಕು ಎಂದು ನಾನು ಪ್ರತಿಪಾದಿಸುತ್ತೇನೆ. ಭಾರತೀಯ ಸಮಾಜದಲ್ಲಿ ಅಧ್ಯಾತ್ಮವನ್ನು ಮತ್ತೆ ಪುನಶ್ಚೇತಗೊಳಿಸಬೇಕೆಂಬುದೇ ನನ್ನ ಉದ್ದೇಶ. ಧರ್ಮಗಳ ಆಧಾರದ ಮೇಲೆ ಕಿತ್ತಾಡುತ್ತಾ ನಾವು ಭಾರತದ ಅಧ್ಯಾತ್ಮಕ್ಕೆ ಅವಮಾನ ಮಾಡುತ್ತಿದ್ದೇವೆ. ಒಂದು ಉನ್ನತ ಸಮಾಜ ಮತ್ತು ಪ್ರಬಲ ರಾಷ್ಟ್ರವನ್ನು ರೂಪಿಸಲು ಧರ್ಮಗಳು ಪ್ರೇರಣೆ ನೀಡಬೇಕು. ಮಹಾತ್ಮಗಾಂಧಿ ಅವರು ಪ್ರತಿಪಾದಿಸಿದ ರಾಮರಾಜ್ಯ ಪರಿಕಲ್ಪನೆಯ ಸಮಾಜದಲ್ಲಿ ಮಾತ್ರ ಹೀಗೆ ನಾಗರಿಕರು ಅಧ್ಯಾತ್ಮದ ಅತ್ಯುನ್ನತ ಸ್ಥಿತಿಯಲ್ಲಿ ಯೋಚಿಸಲು ಸಾಧ್ಯ. ಭಾರತದಲ್ಲಿ ಅನ್ಯಾಯ, ಹಿಂಸೆ, ಅಮಾನವೀಯತೆ, ಜಾತಿ ಆಧರಿತ ತಾರತಮ್ಯ ಇರುವವರೆಗೂ ನಮ್ಮ ನಿಜವಾದ ಸಾಮಥ್ರ್ಯವನ್ನು ನಾವು ಸದ್ಬಳಕೆ ಮಾಡಿಕೊಳ್ಳುವುದು ಸಾಧ್ಯವಿಲ್ಲ.
ಒಂದಾಗಿ ಸಾಗಿದಾಗ ಮಾತ್ರ ನಾವು ಪ್ರಗತಿಹೊಂದಲು ಸಾಧ್ಯ. ಇದಕ್ಕೆ ವ್ಯತಿರಿಕ್ತವೆಂದರೆ, ಒಟ್ಟಾಗಿಯೇ ನಾಶವಾಗುವುದು ಮಾತ್ರ. ಆಯ್ಕೆ ಯಾವುದಾದರೂ ನಮಗೆ ಸಮಾನ ಭವಿಷ್ಯ ಮಾತ್ರ ಇದೆ ಎನ್ನುವುದು ವಾಸ್ತವ ಸಂಗತಿ. ಹೀಗಾಗಿ ನನ್ನ ದೃಷ್ಟಿಕೋನ ಆರ್‍ಎಸ್‍ಎಸ್‍ಗೆ ಕೆಟ್ಟದಾಗಿ ಕಾಣುತ್ತÀ್ತದೆ. ಹಿಟ್ಲರ್ ಕಾಲದಲ್ಲಿ ಕ್ರೂರ ಜರ್ಮನ್ ಅಧಿಕಾರಿಗಳು ಜನರ ಮೇಲೆ ಹೇರಲು ಯತ್ನಿಸಿದ ಸಿದ್ಧಾಂತವನ್ನು ಆರ್‍ಎಸ್‍ಎಸ್ ನಮ್ಮ ದೇಶದಲ್ಲಿ ಇದೀಗ ಸಾಕಾರಗೊಳಿಸಲು ಯತ್ನಿಸುತ್ತಿರುವುದು ವಿಪರ್ಯಾಸ. ಆರ್‍ಎಸ್‍ಎಸ್‍ನ ಈ ಸಿದ್ಧಾಂತಕ್ಕೆ ಹಿಂದೂಧರ್ಮದ ಜೊತೆಗೆ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆಯೇ ನನಗೆ ಅನುಮಾನವಿದೆ. ಹಾಗೆಯೇ ನಾನು ಪ್ರತಿಪಾದಿಸುತ್ತಿರುವ ವಿಚಾರಗಳ ಕಾರಣಕ್ಕಾಗಿಯೇ ನನ್ನ ಮೇಲೆ ಹಲ್ಲೆ ನಡೆಯಿತು ಎಂದು ಆರ್‍ಎಸ್‍ಎಸ್ ಕೂಡ ನಂಬುವುದಿಲ್ಲ ಎಂಬ ಬಗ್ಗೆ ನನಗೆ ಖಾತ್ರಿಯಿದೆ.
ನನ್ನ ಮೇಲೆ ಎರಡನೇ ಬಾರಿ ಹಲ್ಲೆ ನಡೆದಿದೆ. ಈ ಹಲ್ಲೆಗಳು ನನಗೆ ತೀವ್ರ ನೋವನ್ನುಂಟುಮಾಡಿವೆ. ನಾನು ಅನುಭವಿಸಿದ ನೋವು ಮತ್ತು ಹಿಂಸೆಗಳು, ನಮ್ಮ ಸಮಾಜ ಎದುರಿಸುತ್ತಿರುವ ಇಂದಿನ ದುರಂತದ ಬಗ್ಗೆ ಸಹ-ಭಾರತೀಯರನ್ನು ಎಚ್ಚರಿಸುವಂತಾದರೆ ಮಾತ್ರ ನನ್ನ ನೋವು ಶಮನವಾಗುತ್ತದೆ.”
ಆರೆಸ್ಸೆಸ್-ಬಿಜೆಪಿಗಳು ಸತ್ಯ, ನ್ಯಾಯಗಳಿಗೆ ವಿರುದ್ಧವಾಗಿ ಪ್ರತಿಪಾದಿಸುತ್ತಿರುವ ಡೋಂಗಿ ಧರ್ಮದ ಒಳಮರ್ಮವನ್ನು ಅರಿಯದೇ ಹೋದರೆ ಈ ದೇಶಕ್ಕೆ ಭವಿಷ್ಯವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...