Homeಅಂಕಣಗಳುಕಳೆದುಹೋದ ದಿನಗಳು -22: ದಲಿತರಿಗೆ ಭೂಮಿ ಮತ್ತು ರೈತ ಸಂಘದ ಹುಟ್ಟು

ಕಳೆದುಹೋದ ದಿನಗಳು -22: ದಲಿತರಿಗೆ ಭೂಮಿ ಮತ್ತು ರೈತ ಸಂಘದ ಹುಟ್ಟು

- Advertisement -
- Advertisement -

ಈ ಎಲ್ಲ ಮನೆಗಳು ಮೇಲೇಳುತ್ತಿದ್ದಂತೆ ಗಣಪಯ್ಯ ಪ್ರತಿ ಮನೆಗೂ ಎರಡೆರಡರಂತೆ ತೆಂಗಿನ ಗಿಡಗಳನ್ನು ತಂದುಕೊಟ್ಟರು. ಮನೆಯ ಸುತ್ತ ಖಾಲಿ ಇರುವ ಸರ್ಕಾರಿ ಸ್ಥಳ ಎಷ್ಟಿದೆಯೋ ಅಷ್ಟು ಜಾಗಕ್ಕೆ ಬೇಲಿ ಹಾಕಿಕೊಳ್ಳಿ ಸರ್ಕಾರ ಮುಂದೆ ನಿಮಗೇ ಮಂಜೂರು ಮಾಡಬಹುದು. ಗಿಡಗಳನ್ನು ನೆಡಿ, ತರಕಾರಿ ಹಣ್ಣು ಬೆಳೆಯಿರಿ, ಮನೆಯ ಸ್ನಾನದ ಮತ್ತು ಬಟ್ಟೆ ಒಗೆಯುವ ನೀರನ್ನು ಬಳಸಿ ಎಂದೆಲ್ಲ ಹೇಳುತ್ತಿದ್ದರು.

ಜಮೀನು ಮಂಜೂರಾತಿಗೆ ಅರ್ಜಿ ಕೊಡಲು ಹೇಳಿದಾಗ ಕೆಲವು ಕಡೆಗಳಲ್ಲಿ ಯಾರೂ ಅರ್ಜಿಗೆ ರುಜು ಮಾಡಲಿಲ್ಲ. ಅದಕ್ಕೆ ಕಾರಣ ಅಲ್ಲೇ ಕೆಲವರು ಭೂಮಾಲಿಕರು ಇವರಿಗೆ ಜಮೀನು ಸಿಗಬಾರದು ಎಂಬ ಉದ್ದೇಶದಿಂದಲೇ. “ನೀವು ಸೈನ್ ಮಾಡಿ ಕೊಟ್ರೆ ಜಮೀನೆಲ್ಲ ಗಣಪಯ್ಯನ ಪಾಲಾಗುತ್ತೆ ನೋಡಿ” ಎಂದು ಹೆದರಿಸಿದ್ದರು. ಹಿಂದೆ ಇದೇ ರೀತಿ ದಲಿತರ ಹೆಸರಿನಲ್ಲಿ ಬೇರೆಯವರು ಜಮೀನು ಪಡೆದುಕೊಂಡಿರುವುದು ಅನೇಕ ಕಡೆಗಳಲ್ಲಿ ನಡೆದ ಸಂಗತಿಯೇ ಆಗಿದ್ದರಿಂದ ಅವರು ಸಹಜವಾಗಿಯೇ ಅನುಮಾನಕ್ಕೊಳಗಾಗಿದ್ದರು.

ಸ್ವಲ್ಪ ತಿಳುವಳಿಕೆಯಿದ್ದ ಕೆಲವರ ಮಕ್ಕಳು ಇತ್ತೀಚಿನ ವರ್ಷಗಳಲ್ಲಿ ಆ ಜಮೀನಿಗಳಿಗೆ ತಮ್ಮ ಸ್ವಂತ  ಪ್ರಯತ್ನದಿಂದ ಮಂಜೂರಾತಿಯನ್ನು ಪಡೆದುಕೊಂಡಿದ್ದಾರೆ ಮತ್ತು ಕೃಷಿ ಮಾಡಿದ್ದಾರೆ.

ಹಲವರಿಗೆ ಹಾಗೆ ಸಿಕ್ಕಿದ ನೆಲ ಅರ್ಧ ಎಕರೆಯಿಂದ ಎರಡು ಎಕರೆಗಳವರೆಗೆ ಇದೆ. ಇನ್ನು ಕೆಲವರು ಏನೂ ಮಾಡದೆ ಕುಳಿತವರಿಗೆ ಮನೆ, ಹಿತ್ತಿಲು ಮಾತ್ರ ಇದೆ.

ಆದರೆ ಒಂದು ವಿಚಾರವನ್ನು ಇಲ್ಲಿ ಹೇಳಲೇಬೇಕು. ಗಣಪಯ್ಯನವರ ಬೇರೆ ಎಲ್ಲ ಸಾರ್ವಜನಿಕ ಕೆಲಸಗಳನ್ನು ಹಾಡಿ ಹೊಗಳುತ್ತಿದ್ದ ಅನೇಕರು ಅವರು ಈ ರೀತಿ ದಲಿತರಿಗೆ ಭೂಮಿ ಕೊಡಿಸಲು ಪ್ರಾರಂಭಿಸಿದಾಗ ನೇರವಾಗಿ ಅವರನ್ನು ಎದುರಿಸಿ ನಿಲ್ಲದಿದ್ದರೂ ಅವರನ್ನು ಹಿಂದಿನಿಂದ ದೂರತೊಡಗಿದರು. ಆ ಕಾಲದಲ್ಲಿ ಎಷ್ಟೋ ಊರುಗಳಲ್ಲಿ ದಲಿತರಿಗೆ ಕೂಲಿ ಕಾರ್ಮಿಕರಿಗೆ ಕೃಷಿ ಜಮೀನಿರಲಿ, ಮನೆ ಕಟ್ಟಿಕೊಳ್ಳಲು ಎರಡು ಗುಂಟೆ ಜಮೀನೂ ಸಿಗುವುದು ಕಷ್ಟವಿತ್ತು. ಬಡವರಿಗೆ ಮನೆ ಕಟ್ಟಿಕೊಳ್ಳಲು ಎರಡು ಗುಂಟೆ ಭೂಮಿ ಕೊಡಬೇಕೆಂಬ ದೇವರಾಜ ಅರಸು ಸರ್ಕಾರದ ಕಾನೂನು ಇದ್ದರೂ, ಅದನ್ನು ಜಾರಿಗಳಿಗೊಳಿಸಲು ಅಧಿಕಾರಿಗಳೂ ಅಷ್ಟೇನೂ ಉತ್ಸಾಹ ತೋರುತ್ತಿರಲಿಲ್ಲ.

ಕೆಲವರು ಗಣಪಯ್ಯನವರಿಂದ ಪ್ರೇರಣೆ ಪಡೆದೋ ಅಥವಾ ತಮ್ಮ ಸ್ಥಳೀಯ ರಾಜಕಾರಣದ ಬಲವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದಲೋ ಒಂದಷ್ಟು ಜನರಿಗೆ ಸಹಾಯ ಮಾಡಿದ್ದುಂಟು. ಆದರೆ ಗಣಪಯ್ಯನಂತವರ ಈ ರೀತಿ ಕೆಲಸಗಳನ್ನು ಕಂಡು ನೂರಾರು ಜನರು ತಮ್ಮ ಜಮೀನಿನ ಪಕ್ಕದಲ್ಲಿದ್ದ ಖಾಲಿ ಸರ್ಕಾರಿ ಜಾಗಕ್ಕೆ ಬೇಲಿ ಸುತ್ತಿ ಒತ್ತುವರಿ ಮಾಡಿ ಕುಳಿತರು. ಆ ಕಾಲದಲ್ಲಿ ಈ ರೀತಿ ಒತ್ತುವರಿಯಾದ ಜಮೀನು ಸಾವಿರಾರು ಎಕರೆಗಳು. ಈ ರೀತಿಯ ಒತ್ತುವರಿಗೆ ಹಲವು ಕಡೆಗಳಲ್ಲಿ ಅಧಿಕಾರಿಗಳೇ ಬೆಂಬಲವಾಗಿ ನಿಂತದ್ದು ಮತ್ತು ಅವರಲ್ಲಿ ಕೆಲವರು ದಲಿತ ಅಧಿಕಾರಿಗಳೇ ಇದ್ದುದು ವಿಪರ್ಯಾಸದ ಸಂಗತಿ.

ಆಗ ಹಾರ್ಲೆ ಕೂಡಿಗೆಯಲ್ಲಿ ನಡೆದ ಒಂದು ಪ್ರಸಂಗವಿದು. ಅಲ್ಲಿ ಇಪ್ಪತ್ತನಾಲ್ಕು ಮನೆಗಳನ್ನು ಕಟ್ಟಲಾಯಿತು ಅಲ್ಲಿಯೂ ಹಾಗೆ ಅರ್ಧ ಎಕರೆಯಿಂದ ಎರಡು ಎಕರೆಗಳಷ್ಟು ಜಾಗ ಪ್ರತಿಯೊಂದು ಮನೆಗೂ ಇತ್ತು. ಇದರಿಂದಾಚೆ ಸುಮಾರು ನಲುವತ್ತು ಎಕರೆಗಳಷ್ಟು ಖಾಲಿ ಜಾಗವಿತ್ತು. ಅದು ಸಾಮಾಜಿಕ ಸಿ ಮತ್ತು ಡಿ ವರ್ಗದ ಜಮೀನಾಗಿದ್ದು ಸಾಮಾಜಿಕ ಅರಣ್ಯೀಕರಣಕ್ಕೆಂದು ಮೀಸಲಿಟ್ಟಿದ್ದರು. ಅದರ ಒಂದು ಭಾಗವೇ ನಾನು ಈ ಹಿಂದೆ ಉಲ್ಲೇಖಿಸಿದ ಮೇಲಳ್ಳಿ ಆಟದ ಮೈದಾನವಿತ್ತು. ಅದನ್ನು ಹೇಗೂ ಉಳಿಸಿಕೊಂಡಿದ್ದೆವು.

ಈ ಇಪ್ಪತ್ತ ನಾಲ್ಕು ಮನೆಗಳಲ್ಲಿರುವವರು ತಮಗೆ ಸಿಕ್ಕಿದ ಜಾಗದಲ್ಲಿ ಅನೇಕ ತರದ ಗಿಡಮರಗಳನ್ನು ನೆಟ್ಟಿದ್ದರು.

ಪಕ್ಕದ ಸ್ಥಳದಲ್ಲಿ ಅಕೇಸಿಯಾ ಗಿಡಗಳನ್ನು ನೆಡಲು ಅರಣ್ಯ ಇಲಾಖೆಯವರು ಬಂದರು. ಒಟ್ಟು ಜಮೀನನ್ನು ಅಳತೆ ಮಾಡಿದಾಗ ಈ ಮನೆಗಳನ್ನು ಕಟ್ಟಿಕೊಂಡವರು ನೆಲವನ್ನು ಒತ್ತುವರಿ ಮಾಡಿದ್ದಾರೆಂದು ಕಂಡಿತು. ಕೂಡಲೇ ಅಧಿಕಾರಿಗಳು ಇವರು ಹಾಕಿದ ಬೇಲಿಯನ್ನು ಕಡಿದು ಜಾಗ ತೆರವು ಮಾಡಲು ಹೇಳಿದರು. ಆದರೆ ಯಾರೂ ಕಡಿಯಲು ಮುಂದಾಗಲಿಲ್ಲ ಆಗ ಅರಣ್ಯ ಇಲಾಖೆಯವರು ತಾವೇ ಮುಂದೆ ನಿಂತು ಹೊರಗಿನಿಂದ ಜನರನ್ನು ಕರೆಸಿ ಬೇಲಿಯನ್ನು ಕಡಿಸತೊಡಗಿದರು. ಇದಕ್ಕೆ ಬೇರೆ ಕೆಲವರ ಕುಮ್ಮಕ್ಕಿತ್ತೆಂದು ನಂತರ ತಿಳಿಯಿತು.

ಯಾರೋ ಹೋಗಿ ಗಣಪಯ್ಯನವರಿಗೆ ಈ ವಿಚಾರವನ್ನು ತಿಳಿಸಿದರು. ಅಲ್ಲಿಗೆ ಗಣಪಯ್ಯ ಬರುವಾಗ ಅರಣ್ಯ ಅಧಿಕಾರಿಯೊಬ್ಬರು ಸ್ಥಳದಲ್ಲಿ ನಿಂತು ಬೇಲಿ ಕಡಿಸುತ್ತಿದ್ದರು. ಗಣಪಯ್ಯ ಅಷ್ಟೊಂದು ಸಿಟ್ಟಿಗೆದ್ದುದನ್ನು ಯಾರೂ ಅದುವರೆಗೆ ಕಂಡಿರಲಿಲ್ಲ.

ಆಟದ ಬಯಲಿನ ಪಕ್ಕದಲ್ಲಿ ಅಕೇಶಿಯ ತೋಪು , ಪಕ್ಕದಲ್ಲಿ ಫಲಾನುಭವಿಗಳ ಮನೆಗಳು,ಕೃಷಿ.ಅರಣ್ಯಾಧಿಕಾರಿಯನ್ನು ಗಣಪಯ್ಯ ತರಾಟೆಗೆ ತೆಗೆದುಕೊಂಡ ಸ್ಥಳ

“ಅವರು ಜಾಗದಲ್ಲಿ ಒಳ್ಳೆಯ ಗಿಡಗಳನ್ನು ನೆಟ್ಟಿದ್ದಾರೆ. ನೀವು ನೆಡುವುದು ಅಕೇಸಿಯ ಗಿಡ. ಅವರ ಬೇಲಿ ಕಡಿಯಲು ನಿನಗೇನು ಅಧಿಕಾರ? ನೆಲದ ಹಕ್ಕು ಕೊಡುವುದೂ ಬಿಡುವುದೂ ಸರ್ಕಾರ, ನೀನು ಯಾರು ? ನಿನ್ನನ್ನು ಈಗಿಂದೀಗಲೇ ಟ್ರಾನ್ಸ್ ಫರ್ ಮಾಡಿಸುತ್ತೇನೆ ನೋಡು” ಎಂದು ಏಕವಚನದಲ್ಲಿಯೇ ಕೂಗಾಡಿದರು. ನಂತರ “ಕಡಿದ ಬೇಲಿಯನ್ನು ನೀನೇ ಹಾಕಿಸಿ ಕೊಡಬೇಕು” ಎಂದರು.

ಇದೇನೋ ವಿಕೋಪಕ್ಕೆ ಹೋಯಿತೆಂದು ಆ ಅಧಿಕಾರಿಗೂ ಅರಿವಾಗಿರಬೇಕು. ಆತ ನಂತರ ಈ ಮನೆಗಳವರ ಬೇಲಿಯ ಒಳಗೆ ಕಾಲಿಡಲಿಲ್ಲ. ಉಳಿದ ಸ್ಥಳ ಮಾತ್ರ ಅಕೇಸಿಯಾ ವನವಾಯಿತು.

ಅಂದು ಗಣಪಯ್ಯನವರು ನಿಂತು ಬೇಲಿ ಹಾಕಿಸಿದ ನೆಲ ಇತ್ತೀಚೆಗೆ ಅಲ್ಲಿ ವಾಸವಿರುವ ಬಡವರಿಗೆ ಮಂಜೂರಾಗಿದೆ.

ನರಗುಂದ ನವಲಗುಂದ ಘಟನೆಯ ನಂತರ ಇಡೀ ರಾಜ್ಯದಲ್ಲಿ ನಂಜುಂಡ ಸ್ವಾಮಿಯವರ ನೇತೃತ್ವದ ಕರ್ನಾಟಕ ರಾಜ್ಯ ರೈತಸಂಘ ಪ್ರಬಲವಾಗಿ ಬೆಳೆಯಿತು. ಹಾಸನಜಿಲ್ಲೆಯಲ್ಲಿ ಹಲವಾರು ಹೋರಾಟಗಾರರು ರೈತಸಂಘದಡಿಯಲ್ಲಿ ಸಂಘಟಿತರಾದರು. ನಮ್ಮ ಕ್ಯಾಮನಹಳ್ಳಿ ಪಂಚಾಯತ್ ಕೇಂದ್ರವಾದ ಬೆಳ್ಳೇಕೆರೆಯನ್ನು ಕೇಂದ್ರವಾಗಿಟ್ಟುಕೊಂಡು ನಾವು ಹಲವರು ಗೆಳೆಯರು ರೈತ ಸಂಘವನ್ನು ಸ್ಥಾಪಿಸಿದೆವು. ನಮ್ಮಲ್ಲಿ ಹಲವರ ಕಾರ್ಯಕ್ಷೇತ್ರ ಗಾಣದ ಹೊಳೆಯಿಂದ ಬೆಳ್ಳೇಕೆರೆಗೆ ವರ್ಗಾವಣೆಯಾಯಿತು.

ರೈತ ಸಂಘಕ್ಕೂ ಮುಂದೆ ಹಲವಾರು ಸಂಘಟನಾತ್ಮಕ ಸಮಸ್ಯೆಗಳು ಎದುರಾದವು. ರೈತಸಂಘವೆಂದರೆ ಭೂಮಿಯನ್ನು ನಂಬಿ ಬದುಕುವವರೆಲ್ಲರೂ ರೈತರೆಂದು ರಾಜ್ಯದ ನಾಯಕರು ಹೇಳುತ್ತಿದ್ದರೆ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಕಾರ್ಮಿಕರು ಮತ್ತು ದಲಿತರು ರೈತ ಸಂಘಗಳಿಂದ ದೂರವೇ ಇದ್ದರು. ನಾವು ಬೆಳ್ಳೇಕೆರೆಯ ಸಂಘಟನೆಯಲ್ಲಿ ಕಾರ್ಮಿಕರನ್ನೂ ಒಳಗೊಂಡು ಅವರ ಸಮಸ್ಯೆಗಳ ಪರಿಹಾರಕ್ಕೂ ಪ್ರಯತ್ನಿಸುತ್ತಿದ್ದರೆ ಪಕ್ಕದಲ್ಲೇ ಇನ್ನೊಂದು ಕಡೆ ರೈತಸಂಘದ ಸದಸ್ಯರು ಏಕಪಕ್ಷೀಯವಾಗಿ ದಿನಗೂಲಿಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದರು. ಕೂಲಿ ಕಾರ್ಮಿಕರಲ್ಲಿ ಮೊದಲೇ ಇದು ಭೂಮಾಲಿಕರ ಸಂಘವೆಂಬ ಭಾವನೆ ಇದ್ದುದರಿಂದ ಇಂತಹ ನಡವಳಿಕೆ ಅವರನ್ನು ರೈತಸಂಘದಿಂದ ಮತ್ತಷ್ಟು ದೂರ ನಿಲ್ಲುವಂತೆ ಮಾಡಿತು.

ರೈತಸಂಘದೊಳಗೇ ನಮ್ಮ ಸಂಘಟನೆಗೂ ಪಕ್ಕದ ಹಳ್ಳಿಗಳ ಸಂಘಟನೆಗಳಿಗೂ ಇಂಥ ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಅದರಿಂದ ಘರ್ಷಣೆಗಳೂ ಆದವು.

ಸ್ವಂತಕ್ಕೆ ಮರ ಮುಟ್ಟು ಬೇಕಾದಲ್ಲಿ ರೈತರು ತಮ್ಮ ಜಮೀನಿನಲ್ಲಿ ಮರವನ್ನು ಕೊಯ್ದು ನಾಟಾ ಮಾಡಿಕೊಳ್ಳಬಹುದೆಂದು ಇದಕ್ಕೆ ಯಾರ ಅನುಮತಿಯನ್ನೂ ಪಡೆಯುವ ಅಗತ್ಯ ಇಲ್ಲವೆಂದೂ ರೈತಸಂಘ ಹೇಳಿತ್ತು. ರೈತಸಂಘ ಬಲವಾಗಿದ್ದ ಕಡೆಗಳಲ್ಲಿ ಅರಣ್ಯ ಇಲಾಖೆ  ನಮಗೇಕೆ ತೊಂದರೆ ಎಂದು ಸುಮ್ಮನೇ ಕುಳಿತರು. ಕೆಲವರು ಅತಿ ಬುದ್ಧಿವಂತರು ಅರಣ್ಯ ಇಲಾಖೆಯವರಿಗೂ ಕಾಣಿಕೆ ಒಪ್ಪಿಸಿ, ರೈತ ಸಂಘಕ್ಕೂ ಅರ್ಜಿ ಸಲ್ಲಿಸಿ ಎರಡೂ ಕಡೆ ಒಳ್ಳೆಯವರಾಗಿ ಮರ ಕಡಿದರು. ಇದೇ ಸಂದರ್ಭವೆಂದು ಕಳ್ಳ ನಾಟಾದವರು ಕೂಡಾ ರೈತಸಂಘದ ಹೆಸರಿನಲ್ಲಿ ಕಾಡು ಬೋಳಿಸಿದರು. ಅರಣ್ಯ ಇಲಾಖೆಯವರು ರೈತ ಸಂಘದವರು ನಮ್ಮನ್ನು ಹಳ್ಳಿಗೆ ಕಾಲಿಡಲು ಬಿಡುತ್ತಿಲ್ಲ ಆದ್ದರಿಂದ ಅರಣ್ಯವೆಲ್ಲಾ ನಾಶವಾಯ್ತೆಂದು ಹುಯಿಲೆಬ್ಬಿಸುತ್ತಾ ತಾವೂ ಮರಕಡಿಯುವವರ ಜೊತೆ ಶಾಮೀಲಾಗಿ ಇನ್ನೊಂದಿಷ್ಟು ಮರಗಳ ನಾಶಕ್ಕೆ ಕಾರಣರಾದರು. ಎಲ್ಲಾ ಒಟ್ಟು ಗೊಂದಲವಾಯ್ತು.

ನಾವು ಪಕ್ಕದ ಒಂದು ಗ್ರಾಮದಲ್ಲಿ ಕೆಲವರು ದಲಿತ ಕೂಲಿ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡಲು ಹೊರಟೆವು. ಇದರಿಂದ ಆ ಗ್ರಾಮದ ಕೆಲವರು ನಮ್ಮ ಮೇಲೆ ಸಿಟ್ಟಾಗಿ ಹೊಡೆದಾಟಕ್ಕೆ ಬಂದರು. ನಾವು ಅದಕ್ಕೆ ಬಗ್ಗಲಿಲ್ಲ. ಅವರಿಗೆ ನಮ್ಮ ತಂಡದ ಉಳಿದವರಿಗೆ ಏನೂ ಮಾಡಲಾಗಲಿಲ್ಲ. ಆದರೆ ಇದಕ್ಕೆಲ್ಲ ನಾನು ಕಾರಣವೆಂದೂ ನಾನು ಊರಿನಲ್ಲಿ ರಾಜಕೀಯ ಮಾಡಿಕೊಂಡು ತಿರುಗುತ್ತಿದ್ದೇನೆಂದೂ ನನ್ನನ್ನು ಹದ್ದುಬಸ್ತಿನಲ್ಲಿ ಇಡಬೇಕೆಂದೂ ಗಣಪಯ್ಯನವರಲ್ಲಿ ದೂರು ಕೊಟ್ಟರು.

ಗಣಪಯ್ಯನವರು ನನ್ನನ್ನು ಕರೆದು ವಿಚಾರಿಸಿದರು, ನಾನು ವಿಷಯ ವಿವರಿಸಿದೆ. ಆಗ ಅವರು “ನೀವು  ರೈತ ಸಂಘಟನೆ ಮಾಡಿ. ಆದರೆ ನೀವು  ಕೆಲಸ ಮಾಡುತ್ತಿರುವ ರೀತಿ ಸರಿ ಇಲ್ಲ. ಎಲ್ಲ ಕಡೆ ಬೆದರಿಕೆ ಹಾಕುತ್ತ ಅರಾಜಕತೆ ಸೃಷ್ಟಿ ಮಾಡ್ತೀರಿ” ಎಂದರು. ಇದೇ ಮಾತನ್ನು ಬೇರೊಂದು ಸಂದರ್ಭದಲ್ಲಿ ರೈತಸಂಘದ ಬಗ್ಗೆ ಪೂರ್ಣಚಂದ್ರ ತೇಜಸ್ವಿಯವರೂ ಹೇಳಿದ್ದರು. ಪ್ರಾರಂಭದ ಹಂತದಲ್ಲಿ ಗಣಪಯ್ಯ ರೈತಸಂಘಕ್ಕೆ ಸ್ಥಳೀಯವಾಗಿ ಒಂದಷ್ಟು ಹಣ ಸಹಾಯ ಮಾಡಿದರೂ  ನಂತರ ರೈತ ಸಂಘದಿಂದ ದೂರವೇ ಉಳಿದರು.

ರಕ್ಷಿದಿ ದೀಣೆಯಲ್ಲಿ ನಾವು ಬೆಂಬಲಿಸಿ ಮಾಡಿದ ನೆಡುತೋಪು ಈಗ ಸಹಜ ಕಾಡಾಗುವ ಹಾದಿಯಲ್ಲಿ

ಹಿಂದೊಮ್ಮೆ ಗಣಪಯ್ಯನವರು ಗಿಡನೆಡಲು ಉದ್ದೇಶಿಸಿದ್ದ ರಕ್ಷಿದಿ ಬಾರೆಯಲ್ಲೆ ನಾವು ಅರಣ್ಯ ಇಲಾಖೆಯ ಜೊತೆ ಸೇರಿ ಗಿಡನೆಡಲು ಬೆಂಬಲ ನೀಡಿದೆವು. ಆ ಸ್ಥಳ ಎಷ್ಟು ಬೋಳಾಗಿತ್ತೆಂದರೆ ಮಳೆಗಾಲದಲ್ಲಿ ಕೂಡಾ ಹೆಚ್ಚು ಹುಲ್ಲು ಬೆಳೆಯುತ್ತಿರಲಿಲ್ಲ. ಅಲ್ಲಿ ಗಿಡ ನೆಡಲು ಸುತ್ತಲಿನ ಬೇರೆ ಗ್ರಾಮಗಳ ರೈತಸಂಘಗಳು ವಿರೋಧವಿದ್ದರು ಸಹ ನಮಗೆ ಅರಣ್ಯೀಕರಣ ಅಗತ್ಯ ಮನವರಿಕೆಯಾಗಿತ್ತು. ಆಗ ಸಕಲೇಶಪುರದಲ್ಲಿ ಮರಿಗೌಡರು ಎಂಬ ಒಳ್ಳೆಯ ಅರಣ್ಯಾಧಿಕಾರಿ ಇದ್ದರು. ಅವರು ತಾಲ್ಲೂಕಿನಲ್ಲಿ ಯಾರ ಯಾರ ಮೇಲೆ ಕಳ್ಳ ನಾಟಾ ಕಡಿದ ಕೇಸುಗಳಿದ್ದವೋ ಅವರನ್ನು ಕರೆಸಿ  ಗುದ್ದಲಿ ಕೊಟ್ಟು, “ಎಷ್ಟು ಮರ ಕಡಿದಿದ್ದೀರೋ ಏನೋ ಈಗ ಆ ಪಾಪ ಪರಿಹಾರ ಮಾಡಿಕೊಳ್ಳಿ” ಎಂದು ಹೇಳಿ ಅವರ ಕೈಯಲ್ಲೇ  ನೂರಾರು ಗಿಡಗಳನ್ನು ನೆಡಿಸಿದರು!

ಪ್ರಾರಂಭದ ಹಂತದಲ್ಲಿ ಸುತ್ತಲಿನ ಗ್ರಾಮಗಳ ಕೆಲವರು, ಅಲ್ಲಿ ನೆಟ್ಟಿದ್ದ ಗಿಡಗಳನ್ನು ಕಿತ್ತೆಸೆದರೂ, ನಂತರ ನಾವು ಅರಣ್ಯ ಇಲಾಖೆಯ ಪರವಾಗಿ ಗಟ್ಟಿಯಾಗಿ ನಿಂತೆವು. ಒಂದೆರಡು ವರ್ಷಗಳಲ್ಲಿ ಸುಮಾರು ಮೂರು ನಾಲ್ಕು ಗ್ರಾಮಗಳಲ್ಲಿ ನಾಲ್ಕು ನೂರು ಎಕರೆಗೂ ಹೆಚ್ಚು ನೆಲ ಅರಣ್ಯೀಕರಣವಾಯಿತು. ಆಗ ಇವೆಲ್ಲ ಅಕೇಶಿಯಾ ತೋಪುಗಳಾದರೂ ಒಂದು ಸಲ ಕಟಾವು ಆದ ನಂತರ ಮತ್ತೆ ಅಕೇಸಿಯಾ ನೆಡಲು ಬಿಡದೆ ಇದ್ದುದರಿಂದ, ಈಗ ಸಹಜ ಅರಣ್ಯದ ರೀತಿಯಲ್ಲಿ ಪರಿವರ್ತನೆ ಆಗಿವೆ, ಆಗುತ್ತಿವೆ. ಅಂದು ಅಕೇಶಿಯಾ ಮರಗಳ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿರಲಿಲ್ಲ. ಅದರೆ ಅದನ್ನಾದರೂ ನೆಟ್ಟಿದ್ದರಿಂದ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಭೂಮಿ  ಭೂಮಾಲಿಕರಿಂದ ಒತ್ತುವರಿಯಾಗದೆ ಉಳಿಯುವಂತಾಯಿತು. ಈಗ ಅದರಲ್ಲಿ ಕೆಲವು ಭಾಗಗಳಾದರೂ ಸಹಜ ಕಾಡಾಗಿ ಪರಿವರ್ತನೆ ಆಗುತ್ತಿದೆ. ಆದರೆ ಈಗ ಸರ್ಕಾರವೇ ಅದರಲ್ಲಿ ಬಹುಭಾಗವನ್ನು ಹೇಮಾವತಿ ಜಲಾಶಯ ನಿರ್ವಸಿತರಿಗೆ ಮೀಸಲೆಂದು (HRP grant) ಇಟ್ಟು ಕಾಡು ನಾಶ ಮತ್ತ ಭೂ ದಂಧೆಗೆ ಅವಕಾಶ ಮಾಡಿಕೊಡುತ್ತಿದೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಸಕಲೇಶಪುರಕ್ಕೆ ಬ್ರಿಟಿಷ್ ಪ್ಲಾಂಟರ್‌ಗಳ ಕೊಡುಗೆಗಳಿವು: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...