Homeಅಂಕಣಗಳುಕಳೆದುಹೋದ ದಿನಗಳು -22: ದಲಿತರಿಗೆ ಭೂಮಿ ಮತ್ತು ರೈತ ಸಂಘದ ಹುಟ್ಟು

ಕಳೆದುಹೋದ ದಿನಗಳು -22: ದಲಿತರಿಗೆ ಭೂಮಿ ಮತ್ತು ರೈತ ಸಂಘದ ಹುಟ್ಟು

- Advertisement -
- Advertisement -

ಈ ಎಲ್ಲ ಮನೆಗಳು ಮೇಲೇಳುತ್ತಿದ್ದಂತೆ ಗಣಪಯ್ಯ ಪ್ರತಿ ಮನೆಗೂ ಎರಡೆರಡರಂತೆ ತೆಂಗಿನ ಗಿಡಗಳನ್ನು ತಂದುಕೊಟ್ಟರು. ಮನೆಯ ಸುತ್ತ ಖಾಲಿ ಇರುವ ಸರ್ಕಾರಿ ಸ್ಥಳ ಎಷ್ಟಿದೆಯೋ ಅಷ್ಟು ಜಾಗಕ್ಕೆ ಬೇಲಿ ಹಾಕಿಕೊಳ್ಳಿ ಸರ್ಕಾರ ಮುಂದೆ ನಿಮಗೇ ಮಂಜೂರು ಮಾಡಬಹುದು. ಗಿಡಗಳನ್ನು ನೆಡಿ, ತರಕಾರಿ ಹಣ್ಣು ಬೆಳೆಯಿರಿ, ಮನೆಯ ಸ್ನಾನದ ಮತ್ತು ಬಟ್ಟೆ ಒಗೆಯುವ ನೀರನ್ನು ಬಳಸಿ ಎಂದೆಲ್ಲ ಹೇಳುತ್ತಿದ್ದರು.

ಜಮೀನು ಮಂಜೂರಾತಿಗೆ ಅರ್ಜಿ ಕೊಡಲು ಹೇಳಿದಾಗ ಕೆಲವು ಕಡೆಗಳಲ್ಲಿ ಯಾರೂ ಅರ್ಜಿಗೆ ರುಜು ಮಾಡಲಿಲ್ಲ. ಅದಕ್ಕೆ ಕಾರಣ ಅಲ್ಲೇ ಕೆಲವರು ಭೂಮಾಲಿಕರು ಇವರಿಗೆ ಜಮೀನು ಸಿಗಬಾರದು ಎಂಬ ಉದ್ದೇಶದಿಂದಲೇ. “ನೀವು ಸೈನ್ ಮಾಡಿ ಕೊಟ್ರೆ ಜಮೀನೆಲ್ಲ ಗಣಪಯ್ಯನ ಪಾಲಾಗುತ್ತೆ ನೋಡಿ” ಎಂದು ಹೆದರಿಸಿದ್ದರು. ಹಿಂದೆ ಇದೇ ರೀತಿ ದಲಿತರ ಹೆಸರಿನಲ್ಲಿ ಬೇರೆಯವರು ಜಮೀನು ಪಡೆದುಕೊಂಡಿರುವುದು ಅನೇಕ ಕಡೆಗಳಲ್ಲಿ ನಡೆದ ಸಂಗತಿಯೇ ಆಗಿದ್ದರಿಂದ ಅವರು ಸಹಜವಾಗಿಯೇ ಅನುಮಾನಕ್ಕೊಳಗಾಗಿದ್ದರು.

ಸ್ವಲ್ಪ ತಿಳುವಳಿಕೆಯಿದ್ದ ಕೆಲವರ ಮಕ್ಕಳು ಇತ್ತೀಚಿನ ವರ್ಷಗಳಲ್ಲಿ ಆ ಜಮೀನಿಗಳಿಗೆ ತಮ್ಮ ಸ್ವಂತ  ಪ್ರಯತ್ನದಿಂದ ಮಂಜೂರಾತಿಯನ್ನು ಪಡೆದುಕೊಂಡಿದ್ದಾರೆ ಮತ್ತು ಕೃಷಿ ಮಾಡಿದ್ದಾರೆ.

ಹಲವರಿಗೆ ಹಾಗೆ ಸಿಕ್ಕಿದ ನೆಲ ಅರ್ಧ ಎಕರೆಯಿಂದ ಎರಡು ಎಕರೆಗಳವರೆಗೆ ಇದೆ. ಇನ್ನು ಕೆಲವರು ಏನೂ ಮಾಡದೆ ಕುಳಿತವರಿಗೆ ಮನೆ, ಹಿತ್ತಿಲು ಮಾತ್ರ ಇದೆ.

ಆದರೆ ಒಂದು ವಿಚಾರವನ್ನು ಇಲ್ಲಿ ಹೇಳಲೇಬೇಕು. ಗಣಪಯ್ಯನವರ ಬೇರೆ ಎಲ್ಲ ಸಾರ್ವಜನಿಕ ಕೆಲಸಗಳನ್ನು ಹಾಡಿ ಹೊಗಳುತ್ತಿದ್ದ ಅನೇಕರು ಅವರು ಈ ರೀತಿ ದಲಿತರಿಗೆ ಭೂಮಿ ಕೊಡಿಸಲು ಪ್ರಾರಂಭಿಸಿದಾಗ ನೇರವಾಗಿ ಅವರನ್ನು ಎದುರಿಸಿ ನಿಲ್ಲದಿದ್ದರೂ ಅವರನ್ನು ಹಿಂದಿನಿಂದ ದೂರತೊಡಗಿದರು. ಆ ಕಾಲದಲ್ಲಿ ಎಷ್ಟೋ ಊರುಗಳಲ್ಲಿ ದಲಿತರಿಗೆ ಕೂಲಿ ಕಾರ್ಮಿಕರಿಗೆ ಕೃಷಿ ಜಮೀನಿರಲಿ, ಮನೆ ಕಟ್ಟಿಕೊಳ್ಳಲು ಎರಡು ಗುಂಟೆ ಜಮೀನೂ ಸಿಗುವುದು ಕಷ್ಟವಿತ್ತು. ಬಡವರಿಗೆ ಮನೆ ಕಟ್ಟಿಕೊಳ್ಳಲು ಎರಡು ಗುಂಟೆ ಭೂಮಿ ಕೊಡಬೇಕೆಂಬ ದೇವರಾಜ ಅರಸು ಸರ್ಕಾರದ ಕಾನೂನು ಇದ್ದರೂ, ಅದನ್ನು ಜಾರಿಗಳಿಗೊಳಿಸಲು ಅಧಿಕಾರಿಗಳೂ ಅಷ್ಟೇನೂ ಉತ್ಸಾಹ ತೋರುತ್ತಿರಲಿಲ್ಲ.

ಕೆಲವರು ಗಣಪಯ್ಯನವರಿಂದ ಪ್ರೇರಣೆ ಪಡೆದೋ ಅಥವಾ ತಮ್ಮ ಸ್ಥಳೀಯ ರಾಜಕಾರಣದ ಬಲವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದಲೋ ಒಂದಷ್ಟು ಜನರಿಗೆ ಸಹಾಯ ಮಾಡಿದ್ದುಂಟು. ಆದರೆ ಗಣಪಯ್ಯನಂತವರ ಈ ರೀತಿ ಕೆಲಸಗಳನ್ನು ಕಂಡು ನೂರಾರು ಜನರು ತಮ್ಮ ಜಮೀನಿನ ಪಕ್ಕದಲ್ಲಿದ್ದ ಖಾಲಿ ಸರ್ಕಾರಿ ಜಾಗಕ್ಕೆ ಬೇಲಿ ಸುತ್ತಿ ಒತ್ತುವರಿ ಮಾಡಿ ಕುಳಿತರು. ಆ ಕಾಲದಲ್ಲಿ ಈ ರೀತಿ ಒತ್ತುವರಿಯಾದ ಜಮೀನು ಸಾವಿರಾರು ಎಕರೆಗಳು. ಈ ರೀತಿಯ ಒತ್ತುವರಿಗೆ ಹಲವು ಕಡೆಗಳಲ್ಲಿ ಅಧಿಕಾರಿಗಳೇ ಬೆಂಬಲವಾಗಿ ನಿಂತದ್ದು ಮತ್ತು ಅವರಲ್ಲಿ ಕೆಲವರು ದಲಿತ ಅಧಿಕಾರಿಗಳೇ ಇದ್ದುದು ವಿಪರ್ಯಾಸದ ಸಂಗತಿ.

ಆಗ ಹಾರ್ಲೆ ಕೂಡಿಗೆಯಲ್ಲಿ ನಡೆದ ಒಂದು ಪ್ರಸಂಗವಿದು. ಅಲ್ಲಿ ಇಪ್ಪತ್ತನಾಲ್ಕು ಮನೆಗಳನ್ನು ಕಟ್ಟಲಾಯಿತು ಅಲ್ಲಿಯೂ ಹಾಗೆ ಅರ್ಧ ಎಕರೆಯಿಂದ ಎರಡು ಎಕರೆಗಳಷ್ಟು ಜಾಗ ಪ್ರತಿಯೊಂದು ಮನೆಗೂ ಇತ್ತು. ಇದರಿಂದಾಚೆ ಸುಮಾರು ನಲುವತ್ತು ಎಕರೆಗಳಷ್ಟು ಖಾಲಿ ಜಾಗವಿತ್ತು. ಅದು ಸಾಮಾಜಿಕ ಸಿ ಮತ್ತು ಡಿ ವರ್ಗದ ಜಮೀನಾಗಿದ್ದು ಸಾಮಾಜಿಕ ಅರಣ್ಯೀಕರಣಕ್ಕೆಂದು ಮೀಸಲಿಟ್ಟಿದ್ದರು. ಅದರ ಒಂದು ಭಾಗವೇ ನಾನು ಈ ಹಿಂದೆ ಉಲ್ಲೇಖಿಸಿದ ಮೇಲಳ್ಳಿ ಆಟದ ಮೈದಾನವಿತ್ತು. ಅದನ್ನು ಹೇಗೂ ಉಳಿಸಿಕೊಂಡಿದ್ದೆವು.

ಈ ಇಪ್ಪತ್ತ ನಾಲ್ಕು ಮನೆಗಳಲ್ಲಿರುವವರು ತಮಗೆ ಸಿಕ್ಕಿದ ಜಾಗದಲ್ಲಿ ಅನೇಕ ತರದ ಗಿಡಮರಗಳನ್ನು ನೆಟ್ಟಿದ್ದರು.

ಪಕ್ಕದ ಸ್ಥಳದಲ್ಲಿ ಅಕೇಸಿಯಾ ಗಿಡಗಳನ್ನು ನೆಡಲು ಅರಣ್ಯ ಇಲಾಖೆಯವರು ಬಂದರು. ಒಟ್ಟು ಜಮೀನನ್ನು ಅಳತೆ ಮಾಡಿದಾಗ ಈ ಮನೆಗಳನ್ನು ಕಟ್ಟಿಕೊಂಡವರು ನೆಲವನ್ನು ಒತ್ತುವರಿ ಮಾಡಿದ್ದಾರೆಂದು ಕಂಡಿತು. ಕೂಡಲೇ ಅಧಿಕಾರಿಗಳು ಇವರು ಹಾಕಿದ ಬೇಲಿಯನ್ನು ಕಡಿದು ಜಾಗ ತೆರವು ಮಾಡಲು ಹೇಳಿದರು. ಆದರೆ ಯಾರೂ ಕಡಿಯಲು ಮುಂದಾಗಲಿಲ್ಲ ಆಗ ಅರಣ್ಯ ಇಲಾಖೆಯವರು ತಾವೇ ಮುಂದೆ ನಿಂತು ಹೊರಗಿನಿಂದ ಜನರನ್ನು ಕರೆಸಿ ಬೇಲಿಯನ್ನು ಕಡಿಸತೊಡಗಿದರು. ಇದಕ್ಕೆ ಬೇರೆ ಕೆಲವರ ಕುಮ್ಮಕ್ಕಿತ್ತೆಂದು ನಂತರ ತಿಳಿಯಿತು.

ಯಾರೋ ಹೋಗಿ ಗಣಪಯ್ಯನವರಿಗೆ ಈ ವಿಚಾರವನ್ನು ತಿಳಿಸಿದರು. ಅಲ್ಲಿಗೆ ಗಣಪಯ್ಯ ಬರುವಾಗ ಅರಣ್ಯ ಅಧಿಕಾರಿಯೊಬ್ಬರು ಸ್ಥಳದಲ್ಲಿ ನಿಂತು ಬೇಲಿ ಕಡಿಸುತ್ತಿದ್ದರು. ಗಣಪಯ್ಯ ಅಷ್ಟೊಂದು ಸಿಟ್ಟಿಗೆದ್ದುದನ್ನು ಯಾರೂ ಅದುವರೆಗೆ ಕಂಡಿರಲಿಲ್ಲ.

ಆಟದ ಬಯಲಿನ ಪಕ್ಕದಲ್ಲಿ ಅಕೇಶಿಯ ತೋಪು , ಪಕ್ಕದಲ್ಲಿ ಫಲಾನುಭವಿಗಳ ಮನೆಗಳು,ಕೃಷಿ.ಅರಣ್ಯಾಧಿಕಾರಿಯನ್ನು ಗಣಪಯ್ಯ ತರಾಟೆಗೆ ತೆಗೆದುಕೊಂಡ ಸ್ಥಳ

“ಅವರು ಜಾಗದಲ್ಲಿ ಒಳ್ಳೆಯ ಗಿಡಗಳನ್ನು ನೆಟ್ಟಿದ್ದಾರೆ. ನೀವು ನೆಡುವುದು ಅಕೇಸಿಯ ಗಿಡ. ಅವರ ಬೇಲಿ ಕಡಿಯಲು ನಿನಗೇನು ಅಧಿಕಾರ? ನೆಲದ ಹಕ್ಕು ಕೊಡುವುದೂ ಬಿಡುವುದೂ ಸರ್ಕಾರ, ನೀನು ಯಾರು ? ನಿನ್ನನ್ನು ಈಗಿಂದೀಗಲೇ ಟ್ರಾನ್ಸ್ ಫರ್ ಮಾಡಿಸುತ್ತೇನೆ ನೋಡು” ಎಂದು ಏಕವಚನದಲ್ಲಿಯೇ ಕೂಗಾಡಿದರು. ನಂತರ “ಕಡಿದ ಬೇಲಿಯನ್ನು ನೀನೇ ಹಾಕಿಸಿ ಕೊಡಬೇಕು” ಎಂದರು.

ಇದೇನೋ ವಿಕೋಪಕ್ಕೆ ಹೋಯಿತೆಂದು ಆ ಅಧಿಕಾರಿಗೂ ಅರಿವಾಗಿರಬೇಕು. ಆತ ನಂತರ ಈ ಮನೆಗಳವರ ಬೇಲಿಯ ಒಳಗೆ ಕಾಲಿಡಲಿಲ್ಲ. ಉಳಿದ ಸ್ಥಳ ಮಾತ್ರ ಅಕೇಸಿಯಾ ವನವಾಯಿತು.

ಅಂದು ಗಣಪಯ್ಯನವರು ನಿಂತು ಬೇಲಿ ಹಾಕಿಸಿದ ನೆಲ ಇತ್ತೀಚೆಗೆ ಅಲ್ಲಿ ವಾಸವಿರುವ ಬಡವರಿಗೆ ಮಂಜೂರಾಗಿದೆ.

ನರಗುಂದ ನವಲಗುಂದ ಘಟನೆಯ ನಂತರ ಇಡೀ ರಾಜ್ಯದಲ್ಲಿ ನಂಜುಂಡ ಸ್ವಾಮಿಯವರ ನೇತೃತ್ವದ ಕರ್ನಾಟಕ ರಾಜ್ಯ ರೈತಸಂಘ ಪ್ರಬಲವಾಗಿ ಬೆಳೆಯಿತು. ಹಾಸನಜಿಲ್ಲೆಯಲ್ಲಿ ಹಲವಾರು ಹೋರಾಟಗಾರರು ರೈತಸಂಘದಡಿಯಲ್ಲಿ ಸಂಘಟಿತರಾದರು. ನಮ್ಮ ಕ್ಯಾಮನಹಳ್ಳಿ ಪಂಚಾಯತ್ ಕೇಂದ್ರವಾದ ಬೆಳ್ಳೇಕೆರೆಯನ್ನು ಕೇಂದ್ರವಾಗಿಟ್ಟುಕೊಂಡು ನಾವು ಹಲವರು ಗೆಳೆಯರು ರೈತ ಸಂಘವನ್ನು ಸ್ಥಾಪಿಸಿದೆವು. ನಮ್ಮಲ್ಲಿ ಹಲವರ ಕಾರ್ಯಕ್ಷೇತ್ರ ಗಾಣದ ಹೊಳೆಯಿಂದ ಬೆಳ್ಳೇಕೆರೆಗೆ ವರ್ಗಾವಣೆಯಾಯಿತು.

ರೈತ ಸಂಘಕ್ಕೂ ಮುಂದೆ ಹಲವಾರು ಸಂಘಟನಾತ್ಮಕ ಸಮಸ್ಯೆಗಳು ಎದುರಾದವು. ರೈತಸಂಘವೆಂದರೆ ಭೂಮಿಯನ್ನು ನಂಬಿ ಬದುಕುವವರೆಲ್ಲರೂ ರೈತರೆಂದು ರಾಜ್ಯದ ನಾಯಕರು ಹೇಳುತ್ತಿದ್ದರೆ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಕಾರ್ಮಿಕರು ಮತ್ತು ದಲಿತರು ರೈತ ಸಂಘಗಳಿಂದ ದೂರವೇ ಇದ್ದರು. ನಾವು ಬೆಳ್ಳೇಕೆರೆಯ ಸಂಘಟನೆಯಲ್ಲಿ ಕಾರ್ಮಿಕರನ್ನೂ ಒಳಗೊಂಡು ಅವರ ಸಮಸ್ಯೆಗಳ ಪರಿಹಾರಕ್ಕೂ ಪ್ರಯತ್ನಿಸುತ್ತಿದ್ದರೆ ಪಕ್ಕದಲ್ಲೇ ಇನ್ನೊಂದು ಕಡೆ ರೈತಸಂಘದ ಸದಸ್ಯರು ಏಕಪಕ್ಷೀಯವಾಗಿ ದಿನಗೂಲಿಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದರು. ಕೂಲಿ ಕಾರ್ಮಿಕರಲ್ಲಿ ಮೊದಲೇ ಇದು ಭೂಮಾಲಿಕರ ಸಂಘವೆಂಬ ಭಾವನೆ ಇದ್ದುದರಿಂದ ಇಂತಹ ನಡವಳಿಕೆ ಅವರನ್ನು ರೈತಸಂಘದಿಂದ ಮತ್ತಷ್ಟು ದೂರ ನಿಲ್ಲುವಂತೆ ಮಾಡಿತು.

ರೈತಸಂಘದೊಳಗೇ ನಮ್ಮ ಸಂಘಟನೆಗೂ ಪಕ್ಕದ ಹಳ್ಳಿಗಳ ಸಂಘಟನೆಗಳಿಗೂ ಇಂಥ ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಅದರಿಂದ ಘರ್ಷಣೆಗಳೂ ಆದವು.

ಸ್ವಂತಕ್ಕೆ ಮರ ಮುಟ್ಟು ಬೇಕಾದಲ್ಲಿ ರೈತರು ತಮ್ಮ ಜಮೀನಿನಲ್ಲಿ ಮರವನ್ನು ಕೊಯ್ದು ನಾಟಾ ಮಾಡಿಕೊಳ್ಳಬಹುದೆಂದು ಇದಕ್ಕೆ ಯಾರ ಅನುಮತಿಯನ್ನೂ ಪಡೆಯುವ ಅಗತ್ಯ ಇಲ್ಲವೆಂದೂ ರೈತಸಂಘ ಹೇಳಿತ್ತು. ರೈತಸಂಘ ಬಲವಾಗಿದ್ದ ಕಡೆಗಳಲ್ಲಿ ಅರಣ್ಯ ಇಲಾಖೆ  ನಮಗೇಕೆ ತೊಂದರೆ ಎಂದು ಸುಮ್ಮನೇ ಕುಳಿತರು. ಕೆಲವರು ಅತಿ ಬುದ್ಧಿವಂತರು ಅರಣ್ಯ ಇಲಾಖೆಯವರಿಗೂ ಕಾಣಿಕೆ ಒಪ್ಪಿಸಿ, ರೈತ ಸಂಘಕ್ಕೂ ಅರ್ಜಿ ಸಲ್ಲಿಸಿ ಎರಡೂ ಕಡೆ ಒಳ್ಳೆಯವರಾಗಿ ಮರ ಕಡಿದರು. ಇದೇ ಸಂದರ್ಭವೆಂದು ಕಳ್ಳ ನಾಟಾದವರು ಕೂಡಾ ರೈತಸಂಘದ ಹೆಸರಿನಲ್ಲಿ ಕಾಡು ಬೋಳಿಸಿದರು. ಅರಣ್ಯ ಇಲಾಖೆಯವರು ರೈತ ಸಂಘದವರು ನಮ್ಮನ್ನು ಹಳ್ಳಿಗೆ ಕಾಲಿಡಲು ಬಿಡುತ್ತಿಲ್ಲ ಆದ್ದರಿಂದ ಅರಣ್ಯವೆಲ್ಲಾ ನಾಶವಾಯ್ತೆಂದು ಹುಯಿಲೆಬ್ಬಿಸುತ್ತಾ ತಾವೂ ಮರಕಡಿಯುವವರ ಜೊತೆ ಶಾಮೀಲಾಗಿ ಇನ್ನೊಂದಿಷ್ಟು ಮರಗಳ ನಾಶಕ್ಕೆ ಕಾರಣರಾದರು. ಎಲ್ಲಾ ಒಟ್ಟು ಗೊಂದಲವಾಯ್ತು.

ನಾವು ಪಕ್ಕದ ಒಂದು ಗ್ರಾಮದಲ್ಲಿ ಕೆಲವರು ದಲಿತ ಕೂಲಿ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಡಲು ಹೊರಟೆವು. ಇದರಿಂದ ಆ ಗ್ರಾಮದ ಕೆಲವರು ನಮ್ಮ ಮೇಲೆ ಸಿಟ್ಟಾಗಿ ಹೊಡೆದಾಟಕ್ಕೆ ಬಂದರು. ನಾವು ಅದಕ್ಕೆ ಬಗ್ಗಲಿಲ್ಲ. ಅವರಿಗೆ ನಮ್ಮ ತಂಡದ ಉಳಿದವರಿಗೆ ಏನೂ ಮಾಡಲಾಗಲಿಲ್ಲ. ಆದರೆ ಇದಕ್ಕೆಲ್ಲ ನಾನು ಕಾರಣವೆಂದೂ ನಾನು ಊರಿನಲ್ಲಿ ರಾಜಕೀಯ ಮಾಡಿಕೊಂಡು ತಿರುಗುತ್ತಿದ್ದೇನೆಂದೂ ನನ್ನನ್ನು ಹದ್ದುಬಸ್ತಿನಲ್ಲಿ ಇಡಬೇಕೆಂದೂ ಗಣಪಯ್ಯನವರಲ್ಲಿ ದೂರು ಕೊಟ್ಟರು.

ಗಣಪಯ್ಯನವರು ನನ್ನನ್ನು ಕರೆದು ವಿಚಾರಿಸಿದರು, ನಾನು ವಿಷಯ ವಿವರಿಸಿದೆ. ಆಗ ಅವರು “ನೀವು  ರೈತ ಸಂಘಟನೆ ಮಾಡಿ. ಆದರೆ ನೀವು  ಕೆಲಸ ಮಾಡುತ್ತಿರುವ ರೀತಿ ಸರಿ ಇಲ್ಲ. ಎಲ್ಲ ಕಡೆ ಬೆದರಿಕೆ ಹಾಕುತ್ತ ಅರಾಜಕತೆ ಸೃಷ್ಟಿ ಮಾಡ್ತೀರಿ” ಎಂದರು. ಇದೇ ಮಾತನ್ನು ಬೇರೊಂದು ಸಂದರ್ಭದಲ್ಲಿ ರೈತಸಂಘದ ಬಗ್ಗೆ ಪೂರ್ಣಚಂದ್ರ ತೇಜಸ್ವಿಯವರೂ ಹೇಳಿದ್ದರು. ಪ್ರಾರಂಭದ ಹಂತದಲ್ಲಿ ಗಣಪಯ್ಯ ರೈತಸಂಘಕ್ಕೆ ಸ್ಥಳೀಯವಾಗಿ ಒಂದಷ್ಟು ಹಣ ಸಹಾಯ ಮಾಡಿದರೂ  ನಂತರ ರೈತ ಸಂಘದಿಂದ ದೂರವೇ ಉಳಿದರು.

ರಕ್ಷಿದಿ ದೀಣೆಯಲ್ಲಿ ನಾವು ಬೆಂಬಲಿಸಿ ಮಾಡಿದ ನೆಡುತೋಪು ಈಗ ಸಹಜ ಕಾಡಾಗುವ ಹಾದಿಯಲ್ಲಿ

ಹಿಂದೊಮ್ಮೆ ಗಣಪಯ್ಯನವರು ಗಿಡನೆಡಲು ಉದ್ದೇಶಿಸಿದ್ದ ರಕ್ಷಿದಿ ಬಾರೆಯಲ್ಲೆ ನಾವು ಅರಣ್ಯ ಇಲಾಖೆಯ ಜೊತೆ ಸೇರಿ ಗಿಡನೆಡಲು ಬೆಂಬಲ ನೀಡಿದೆವು. ಆ ಸ್ಥಳ ಎಷ್ಟು ಬೋಳಾಗಿತ್ತೆಂದರೆ ಮಳೆಗಾಲದಲ್ಲಿ ಕೂಡಾ ಹೆಚ್ಚು ಹುಲ್ಲು ಬೆಳೆಯುತ್ತಿರಲಿಲ್ಲ. ಅಲ್ಲಿ ಗಿಡ ನೆಡಲು ಸುತ್ತಲಿನ ಬೇರೆ ಗ್ರಾಮಗಳ ರೈತಸಂಘಗಳು ವಿರೋಧವಿದ್ದರು ಸಹ ನಮಗೆ ಅರಣ್ಯೀಕರಣ ಅಗತ್ಯ ಮನವರಿಕೆಯಾಗಿತ್ತು. ಆಗ ಸಕಲೇಶಪುರದಲ್ಲಿ ಮರಿಗೌಡರು ಎಂಬ ಒಳ್ಳೆಯ ಅರಣ್ಯಾಧಿಕಾರಿ ಇದ್ದರು. ಅವರು ತಾಲ್ಲೂಕಿನಲ್ಲಿ ಯಾರ ಯಾರ ಮೇಲೆ ಕಳ್ಳ ನಾಟಾ ಕಡಿದ ಕೇಸುಗಳಿದ್ದವೋ ಅವರನ್ನು ಕರೆಸಿ  ಗುದ್ದಲಿ ಕೊಟ್ಟು, “ಎಷ್ಟು ಮರ ಕಡಿದಿದ್ದೀರೋ ಏನೋ ಈಗ ಆ ಪಾಪ ಪರಿಹಾರ ಮಾಡಿಕೊಳ್ಳಿ” ಎಂದು ಹೇಳಿ ಅವರ ಕೈಯಲ್ಲೇ  ನೂರಾರು ಗಿಡಗಳನ್ನು ನೆಡಿಸಿದರು!

ಪ್ರಾರಂಭದ ಹಂತದಲ್ಲಿ ಸುತ್ತಲಿನ ಗ್ರಾಮಗಳ ಕೆಲವರು, ಅಲ್ಲಿ ನೆಟ್ಟಿದ್ದ ಗಿಡಗಳನ್ನು ಕಿತ್ತೆಸೆದರೂ, ನಂತರ ನಾವು ಅರಣ್ಯ ಇಲಾಖೆಯ ಪರವಾಗಿ ಗಟ್ಟಿಯಾಗಿ ನಿಂತೆವು. ಒಂದೆರಡು ವರ್ಷಗಳಲ್ಲಿ ಸುಮಾರು ಮೂರು ನಾಲ್ಕು ಗ್ರಾಮಗಳಲ್ಲಿ ನಾಲ್ಕು ನೂರು ಎಕರೆಗೂ ಹೆಚ್ಚು ನೆಲ ಅರಣ್ಯೀಕರಣವಾಯಿತು. ಆಗ ಇವೆಲ್ಲ ಅಕೇಶಿಯಾ ತೋಪುಗಳಾದರೂ ಒಂದು ಸಲ ಕಟಾವು ಆದ ನಂತರ ಮತ್ತೆ ಅಕೇಸಿಯಾ ನೆಡಲು ಬಿಡದೆ ಇದ್ದುದರಿಂದ, ಈಗ ಸಹಜ ಅರಣ್ಯದ ರೀತಿಯಲ್ಲಿ ಪರಿವರ್ತನೆ ಆಗಿವೆ, ಆಗುತ್ತಿವೆ. ಅಂದು ಅಕೇಶಿಯಾ ಮರಗಳ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿರಲಿಲ್ಲ. ಅದರೆ ಅದನ್ನಾದರೂ ನೆಟ್ಟಿದ್ದರಿಂದ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಭೂಮಿ  ಭೂಮಾಲಿಕರಿಂದ ಒತ್ತುವರಿಯಾಗದೆ ಉಳಿಯುವಂತಾಯಿತು. ಈಗ ಅದರಲ್ಲಿ ಕೆಲವು ಭಾಗಗಳಾದರೂ ಸಹಜ ಕಾಡಾಗಿ ಪರಿವರ್ತನೆ ಆಗುತ್ತಿದೆ. ಆದರೆ ಈಗ ಸರ್ಕಾರವೇ ಅದರಲ್ಲಿ ಬಹುಭಾಗವನ್ನು ಹೇಮಾವತಿ ಜಲಾಶಯ ನಿರ್ವಸಿತರಿಗೆ ಮೀಸಲೆಂದು (HRP grant) ಇಟ್ಟು ಕಾಡು ನಾಶ ಮತ್ತ ಭೂ ದಂಧೆಗೆ ಅವಕಾಶ ಮಾಡಿಕೊಡುತ್ತಿದೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಸಕಲೇಶಪುರಕ್ಕೆ ಬ್ರಿಟಿಷ್ ಪ್ಲಾಂಟರ್‌ಗಳ ಕೊಡುಗೆಗಳಿವು: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...